Tuesday, September 5, 2017

ನಮ್ಮದಲ್ಲದ ಸಂಕಟಗಳಿಗೆ ಅವಮಾನದ ತೆರಿಗೆ.. 
(ಮೇಲ್ನೋಟಕ್ಕೆ ಗಂಡಸರ ಜೀವನ ಭಾಳ ಆರಾಮ. ಆದರೆ ಬದುಕಿನ ಜಂಜಾಟದಲ್ಲಿ ಸಾಂಸಾರಿಕ ಅವಮಾನ ಅವರಿಗೆ ಹೊಸದೇನಲ್ಲ. ಅಂತಹ ಸಮಕಾಲೀನ ಸಂಕಟ, ತಲ್ಲಣಗಳಿಗೆ ಈಡಾಗಿ ಗಂಡಸರ ಜೀವ ದಡ್ಡಬಿದ್ದು ಹೋಗಿರ್ತದ. ಅಷ್ಟಾಗಿಯೂ ನಮ್ಮ ಮಕ್ಕಳು ನಮ್ಮವರಲ್ಲ ಅನ್ನೋದು ಗೊತ್ತಾಗುವಾಗ ತಡಾ ಆಗಿರ್ತದ.)

ವೆಂಕಟರಮಣ ನಾಯ್ಕ ಅವರ ಪೂರ್ತಿ ಹೆಸರು. ನಾನು ಅವರನ್ನು ಭೇಟಿಯಾಗುವ ವೇಳೆಗಾಗಲೇ ಅವರ ಮುಕ್ಕಾಲು ಜೀವನ ಕಳೆದು ವೆಂಕು ಮಾಸ್ತರರೆಂದೇ ಗುರುತಿಸಲ್ಪಟ್ಟಿದ್ದರು. ಅದ್ಯಾಕೋ ಅವರೊಂದಿಗೆ ತೀರ ಕಡಿಮೆ ಸಮಯದಲ್ಲೇ ಒಂದು ರೀತಿಯ ಬಾಂಧವ್ಯ ಬೆಳೆದು ನನಗೆ ಮಾಸ್ತರಕಾಕಾ ಆಗಿದ್ದರು. ಒಮ್ಮೆ ಶಿರಸಿಯಿಂದ ಬರುತ್ತಿದ್ದವನು ಕುಮ್ಟೆಯ ಗಡಿ ದಾಟುತ್ತಿದ್ದಂತೆ ಹದವಾದ ಉಪ್ಪು ಮಿಶ್ರಿತ ಮೀನು ವಾಸನೆಗೆ ಈಡಾಗುತ್ತಾ, ಗಂಗಾವಳಿಯ ದಡದಲ್ಲಿಂದ ಗೋಕರ್ಣ ಕ್ರಾಸಿನೊಳಕ್ಕೆ ತೂರಿ ಹೋಗಿದ್ದೆ. ಮೊದಲೆ ನಿಕ್ಕಿ ಮಾಡಿಕೊಂಡಿದ್ದಂತೆ ಅವರು `ಮನೆ ಬಿಟ್ಟು ಬೇರೆಡೆಗೆ ಇದ್ದೀನಿ' ಎಂದಿದ್ದ ಗುರುತಿನ ಮೇರೆಗೆ ಗದ್ದೆ ಬದುವಿನ ಮೇಲೆ ನಡೆದುಹೋಗಿದ್ದೆ. ಹರವಾದ ಬಿಸಿಲಿಗೆ ಮೈಯೊಡ್ಡಿ ನಿಂತ ತೀರ ಚಿಕ್ಕ ಜೋಪಡಿಯಂತಹದ್ದು. ಎದುರಿಗೆ ದೊಡ್ಡ ಮರ. ಪಕ್ಕದಲ್ಲಿ ಬಾವಿ ಅದರ ಕೆಳಗೆ ಅರ್ಧ ಕಾಲು ಮುರಿದು ಜೋಡಿಸಿದ್ದ ಮಂಚ. ಅದೆಲ್ಲವೂ ಸೇರಿದರೆ ಅಂಗಳ. ಅದರಲ್ಲೇ ಮರದ ಕೆಳಗೊಂದು ಬೆತ್ತದ ಕುರ್ಚಿ. ಮನೆಗೆ ತಗುಲಿಯೇ ಬಿದಿರು ಬಿಗಿದು ಅರ್ಧ ತಡಿಕೆ ಹಾಕಿದ್ದ ಬಚ್ಚಲು ಮನೆ. ಆಸರೆಗಾಗಿ ಮಾಡಿಕೊಂಡ ಮಾಳ ಎಂದರೂ ಸರಿನೆ.
ಒಂದಿಷ್ಟು ಬಾಳೆ ಹಣ್ಣು, ಸಕ್ಕರೆ, ಒಂದು ಪ್ಲಾಸ್ಕಿನಲ್ಲಿ ಬಿಸಿ ಚಹ. ಸಾಮಾನ್ಯವಾಗಿ ಸಮಯದ ಪರಿಧಿ ಮೀರದ ನಾನು ಆವತ್ತು ಅಧ್ವಾನ್ನದ ರಸ್ತೆಯ ಕಾರಣ ಮುಟ್ಟಿದ್ದು ನಿಗಿನಿಗಿ ಮಧ್ಯಾನ್ಹ ಬಿಸಿಲಿನ ಕಾಲಕ್ಕೆ. `ಮಾಸ್ತರಕಾಕಾ ತಡ ಆಯ್ತು..'ಎನ್ನುತ್ತಿದ್ದಂತೆ, `ಇರ್ಲಿಬಿಡೊ ನಾನೇನು ನೌಕರಿಗ ಹೋಗ್ಬೇಕೇನು..?ನೀ ಅರ್ಜೆಂಟಿಗ್ ಬಿದ್ದ ಕಾರು ಒಡಿಸಬ್ಯಾಡ ಮಾರಾಯ. ಎರಡೆ ತಾಸು ಅಂದ್ರೆ ಜೋರು ಬಂದಿರ್ತಿ.' ಎಂದು ಗದರಿದ್ದರು. ನಾನು ಹುಲ್ಲಿನ ಮಾಡಿನ ನೆರಳು ಹುಡುಕಿಕೊಂಡು ಅಲ್ಲೇ ಇದ್ದ ತಗಡೀನ ಡಬ್ಬದ ಮೇಲೆ ಕೂತೆ. ತುಂಬಾ ಚೆಂದದ ಮನೆ ಮಠ ಇದ್ದ ಮಾಸ್ತರಕಾಕಾ, ಇಳಿ ವಯಸ್ಸಿನಲ್ಲಿ ಊರು ಕೇರಿ ಬಿಟ್ಟು ಗದ್ದೆ ಬದುವಿನ ಜೋಪಡಿಯಲ್ಲಿ ಉಳಿದಿದ್ದರು ಒಂಟಿಯಾಗಿ. ಇತಿಹಾಸ ಭವಿಶ್ಯಕ್ಕಲ್ಲ...
ನಾನು ಹೈಸ್ಕೂಲು ಕೊನೆಯ ವರ್ಷ ಕಳೆಯುವಾಗ ಕುಮ್ಟೆಯಿಂದ ವರ್ಗವಾಗಿ ಊರಿಗೆ ಬಂದಿದ್ದವರು ಮಾಸ್ತರರು. ಸುಮ್ಮನೆ ಒಂದು ಹಂತದಲ್ಲಿ ಪರಿಚಯವಾಗಿದ್ದವರು, ಅಂಕಣಗಾರನಾದಾಗ ಕರೆಮಾಡಿ ಮಾತಾಡಿಸಿದ್ದರು. ನಂತರ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದೇ ಇದ್ದರು. ಅವರೊಂದಿಗಿನ ಒಡನಾಟದಲ್ಲಿ ಕ್ರಮೇಣ ಅವರ ವೈಯಕ್ತಿಕ ವಿಚಾರಗಳು ನುಸುಳತೊಡಗಿ ನಿವೃತ್ತಿ ಮತ್ತು ವೃದ್ದಾಪ್ಯ ಶಾಪವಾ ಎನ್ನಿಸತೊಡಗಿದ್ದು ಹೌದು. ಹಾಗಾಗೇ ಅವರು ನಿವೃತ್ತಿಯ ನಂತರವೂ ಒಮ್ಮೆ ಅವರೂರಿಗೆ ಹೋಗಿದ್ದೆ. 
ಆವತ್ತು ವಯಸ್ಕ ದಂಪತಿಗಳಿಬ್ಬರೂ ಸಂಭ್ರಮಿಸಿದರೂ ನನ್ನನ್ನು ಮನಪೂರ್ವಕ ಬರಮಾಡಿಕೊಳ್ಳುವ ಸ್ವಾತಂತ್ರ ಅವರಿಗಿಲ್ಲದ್ದು ಎದ್ದು ಕಾಣುತ್ತಿತ್ತು. ಮನೆಯಲ್ಲಿದ್ದ ಮಗ, ಸೊಸೆಯ ದರಬಾರಿಗೆ ಅಧಿಕಾರ ಹಸ್ತಾಂತರವಾಗಿದ್ದು ಖಚಿತ. ಮಾಸ್ತರ ಪಿಂಚಣಿ ಇದ್ದುದಕ್ಕೆ ಬಹುಶ: ಮನೆಯಲ್ಲಿ ಉಳಿಯಲು ಅವಕಾಶ ಇತ್ತೇನೋ. ಮಾತಾಡ್ತಾ ಹಾಗೇ ನಗುವಿನಲ್ಲೇ ನನ್ನನ್ನು ಆ ಮುಜುಗರದಿಂದ ಮರೆಮಾಚಲು ಯತ್ನಿಸುತ್ತಿದ್ದುದು ಗೊತ್ತಾಗುತ್ತಲೇ ಇತ್ತು. ಕಾಕಿಗೆ ಎದ್ದು ಓಡಾಡುವಷ್ಟೂ ಸುಲಭದ ಪರಿಸ್ಥಿತಿ ಇರಲಿಲ್ಲ. ಮೊಳಕಾಲು ಕಳಚಿ ಬೀಳುತ್ತಿತ್ತು. ವೈದ್ಯಕೀಯ ಚಿಕಿತ್ಸೆ ದೂರದ ಮಾತಾಗಿತ್ತು. ಒಮ್ಮೊಮ್ಮೆ ಮೊಳಕಾಲು ಕಳಚಿದಾಗಲೂ ವಾರಗಟ್ಟಲೇ ಹಾಸಿಗೆ ಹಿಡಿಯುತ್ತಿದ್ದರು. 
ನನಗೆ ಯಾವ ರೀತಿಯಲ್ಲೂ ಪ್ರತಿಕ್ರಿಯಿಸಲು ಆಗಿರಲಿಲ್ಲ. ತೀರ ವೃದ್ಧ ಜೀವಗಳಿಗೆ ಸಾಂತ್ವನ ಹೇಳುವ ವಯಸ್ಸು, ಧೈರ್ಯ ಎರಡೂ ನನ್ನವಲ್ಲವಾಗಿದ್ದವು. ಆದರೂ ಮಾಸ್ತರ ಸಲಿಗೆಯಿಂದಾಗಿ ಎನೋ ಒಂದಷ್ಟು ಮಾತಾಡಿದ್ದೆ. ಕಾಕು`ಚಾ.. ಚಾ.. ಮಾಡ್ರಿ'ಎನ್ನುತ್ತಿದ್ದರೂ ಮಾಸ್ತರರು ಮುಲಾಜಿಗೆ ಬಿದ್ದಂತೆ ವರ್ತಿಸುತ್ತಿದ್ದು ಕಾಣಿಸುತ್ತಿತ್ತು. ನಾನೇ ಎದ್ದು ಅಂಗಳಕ್ಕಿಳಿದು ಬರುವಾಗ ಮಾಸ್ತರ ಕೈ ಹಿಡಿದು `ಇರ್ಲಿ ಬಿಡ್ರಿ ಇಂಥವೆಲ್ಲಾ ಮಜಬೂರಿಗಳು ಇರ್ತಾವೆ. ನನಗೇನು ನೀವು ಹೊಸಬರಾ. ಚಹ ಕುಡಿದಿದ್ರೇನು. ನಿಮಗಿಂತ ದೊಡ್ಡದು ಯಾವುದದೆ..? ಬೇರೆ ಸಹಾಯ ಬೇಕಿತ್ತೇನು..?' ಎಂದಿದ್ದೆ. 
`ಏನೂ ಇಲ್ಲಪಾ. ಆದರ ನಿನ್ನ ಕಾಲಂ ಓದಲಿಕ್ಕೆ ಆಗೂದಿಲ್ಲ. ಮನೀಗೆ ಪೇಪರ್ ಬರೂದಿಲ್ಲ. ಇಲ್ಲಿಂದ ರಸ್ತೆ ಕಡೀಗ್ ಹೋಗಿ ಓದೊದು ಅಂದರ ಭಾಳ ದೂರ ಆಗ್ತದ. ಈಕಿಗೇನಾದರೂ ಬೇಕಾದರ ತ್ರಾಸ ನೋಡ. ಅದಕ್ಕ ಯಾವತ್ತರ ಒಮ್ಮೆ ಹೋಗಿ ನೋಡಿಬರ್ತೇನಿ. ಅದಕ್ಕ ಏನೂ ಅಂದ್ಕೊಬ್ಯಾಡ. ಬಾಕಿ ಇನ್ನೇನು ವಯಸ್ಸಾಯ್ತು ನೋಡು..’ ಎಂದಿದ್ದರು. 
`ಕಾಕಾ. ನಾಳೆಯಿಂದ ಒಂದು ಪೇಪರ್ ಮನೀಗೇ ಹಾಕ್ಲಿಕ್ಕೆ ಹೇಳ್ತಿನಿ.' ಎಂದು ಕೈ ಸವರಿ ಕೊಸರಿಕೊಳ್ಳುತ್ತಿದ್ದರೂ ಒಂದಿಷ್ಟು ಪುಡಿಕೆ ನೋಟು ಕೈಗಿಟ್ಟುಬಂದಿದ್ದೆ. ನಂತರದಲ್ಲಿ ಸಂಪರ್ಕಕ್ಕೆತ್ನಿಸಿದಾಗೆಲ್ಲ ಸಿಕ್ಕುತ್ತಿದ್ದರಾದರೂ ಹೆಚ್ಚಾಗಿ, ಅವರ ಮಗನೇ ಫೆÇೀನು ತೆಗೆಯುವುದು, ಮಾಸ್ತರರು ಸಿಗದಿರುವುದೂ ನಡೆದೇ ಇತ್ತು. ಆಮೇಲೆನಾಯಿತೋ ಗೊತ್ತಿಲ್ಲ. ಮಾಸ್ತರರು ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಲಭ್ಯವಾಗಲೇ ಇಲ್ಲ. ನಾನೂ ಎರಡ್ಮೂರು ವರ್ಷ ರಾಜ್ಯದಿಂದ ಹೊರಗಿದ್ದುದೂ ಸೇರಿ ಸಂಪರ್ಕ ಕಳೆದೇ ಹೋಗಿತ್ತು. ಇತ್ತಿಚೆಗೊಮ್ಮೆ ಕರೆ ಮಾಡಿ ನೆನಪಿಸಿದ್ದರಿಂದ, ಗಂಗಾವಳಿ ದಂಡೆಯ ಗದ್ದೆ ಬದುವಿನ ಸಣ್ಣ ಜೋಪಡಿಯಲ್ಲಿದ್ದ ಮಾಸ್ತರೆದುರಿಗೆ ಕೂತಿದ್ದೆ. ಕಾಕು ಹೋಗಿದ್ದು ಪಕ್ಕಾ. ಅದಕ್ಕಿಂತಲೂ ಖೇದವೆಂದರೆ ಅವರ ಅರ್ಧ ಮುರಿದ ಕನ್ನಡಕ ಬದಲಿಸುವವರಿಲ್ಲದೆ, ಅದರಲ್ಲೇ ಓದುವುದಕ್ಕೂ ಒದ್ದಾಡುತ್ತಿದ್ದುದು ಕಾಣಿಸುತ್ತಿತ್ತು.
`ಬಿಸಲಾಗೇ ಬಂದಿದಿ. ಗಡಿಗಿಗೆ ನಿನ್ನೆನ ನೀರು ಹಾಕಿಟ್ಟಿದ್ದೆ. ತಣ್ಣಗಾಗಲಿ ಅಂತ.' ಎನ್ನುತ್ತ ಇದ್ದ ಒಂದೇ ಸ್ಟೀಲಿನ ಚೊಂಬಿನಲ್ಲಿ ನೀರು ಕೊಟ್ಟಿದ್ದರು. ನಾನು ಬಾಯಿ ಬಿಡುವ ಮೊದಲೇ,
`ಅರಾಮಿದಿನಿ ಏನೂ ತಲಿ ಕೆಡಿಸ್ಕೊಬ್ಯಾಡ. ಮಕ್ಕಳೆಲ್ಲ ಎಂತಾ ಮಾಡ್ತವೆ..?' ಎಂದು ವಿಷಯ ತಿರುಗಿಸುವ ಪ್ರಯತ್ನಕ್ಕಿಳಿದರು. ಸುಮ್ಮನೆ ಅವರ ಮುಖವನ್ನೆ ದಿಟ್ಟಿಸುತ್ತ ಕುಳಿತೆ. ಮಾಸ್ತರರು ಮುಖ ಕೆಳಗಿಕ್ಕಿ ಒಮ್ಮೆ ಸೂರು ನೋಡಿ, ನಿಟ್ಟುಸಿರಿಟ್ಟರು. ಪಿಂಚಣಿಯ ಅಧಾರವಿದ್ದುದರಿಂದ ಮಾಸ್ತರರು ಮಗನ ಹಂಗಿನಿಂದ ಹೊರಬಂದಿದಾರೆ.
`ಆಕೀ ಇದ್ದಾಗ ಏನೂ ಮಾಡೊ ಹಂಗಿರಲಿಲ್ಲ. ಹೆಂಗಸರಿಗೆ ಮನೀ ಮಕ್ಕಳು ಅನ್ನೋ ವ್ಯಾಮೋಹನಾ ಬೇರೆ ನೋಡು. ಅಕೀಗೆ ನಾನು ಸರಿ ಬರ್ತಿರಲಿಲ್ಲ ಅನ್ನೋದು ಯಾವತ್ತೋ ಗೊತ್ತಿದ್ರೂ, ಇಷ್ಟ ವರ್ಷ ಸಂಸಾರ ಮಾಡಿದ್ದೇನು ಸುಳ್ಳಾ..? ಕಾಲಿಗೆ ಅಪರೇಶನ್ ಬೇಕಿತ್ತು ಮಾಡಿಸವ್ರು ಯಾರು..? ನಮಗ ಕೆಲವೊಂದು ಸೂಕ್ಷ್ಮ ಗೊತ್ತಾಗೋದಿಲ್ಲ. ಅದಕ್ಕ ಏನೂ ಮಾತಾಡದ ಎಳೆಂಟು ವರ್ಷದಿಂದ, ಮನ್ಯಾಗೆ ಅವಳು ಮಡ್ಬೇಕಾದ ಕೆಲಸಾನೂ ನಾನ ಮಡ್ಕೊಂಡು ಆಕೀ ಹಿಂದ ಸುಮ್ನೆ ಇರ್ತಿದ್ದೆ. ಅರಿಬಿ ಒಣಗಸೋದು, ಮನೀ ಕಸ ಹೊಡೆಯೋದು, ಆದಷ್ಟು ನೀರು ತುಂಬಿಸಿಡೊದು, ಮಕ್ಕಳ ಹರವಿದಾಗ ಮನೀ ನೀಟ ಮಾಡೊದು.. ಇವೆಲ್ಲಾ ಆಗದಿದ್ದರ ಆಕೀ ಮ್ಯಾಲ ಸೊಸಿ ಕೂಗಾಡ್ತಾಳ. ಸೊಸಿ ಮಾತು ಕೇಳಿ ಮಗಾ ನಮಗ ಮನಿಯಿಂದ ಹೊರಗ ಹಾಕಲಿಕ್ಕೆ ಕಾಲ ಮ್ಯಾಲೆ ನಿಂತಿದ್ದ.
ಆದರೆ ಇವಳಿಗೆ ಮನಿ, ಗಂಡ ಮಗಾ, ಮೊಮ್ಮಕ್ಕಳು ಅಂದರೆ ಅವಮಾನದಾಗೂ ಅದೇನೋ ಕಕ್ಕುಲಾತಿ ಮಾರಾಯ. ಕಾಲು ಬ್ಯಾನಿ ಬೇರೆ ಆಗಿತ್ತಲ್ಲ. ಇನ್ನೆಷ್ಟು ವರ್ಷ ಬದುಕೋ ಗೊತ್ತಿಲ್ಲ. ಯಾರ ಮನಸ್ಸಿಗೆ ಯಾಕ ಬೇಜಾರು ಮಾಡೊದು ಅಂತ ನಾನೇ ಸುಮ್ಮನಾಗಿ ಬಿಟ್ಟಿದ್ದೆ. ಹೆಂಗಾರ ಸರಿ ಇರೋ ಅಷ್ಟು ದಿನಾ ಅರಾಮಿರಲಿ. ಮಾಸ್ತರಿಕಿ ನೌಕರಿಯೊಳಗ ಇದಕ್ಕಿಂತ ದೊಡ್ಡದು ಏನೂ ಮಾಡ್ಲಿಕ್ಕೂ ಆಗೋದಿಲ್ಲ ನೋಡು. ಅದಕ್ಕ ಸುಮ್ಮನಾಗಿ ಬಿಟ್ಟಿದ್ನಿ. ಅದರೂ ಏನಾದರೊಂದು ಕಟಿಪಿಟಿ ಆಗತಿತ್ತು. ನೀ ಕಳಿಸ್ತಿದ್ದ ಪೇಪರ್‍ಗೂ ತಕರಾರು. ಏನು ಮಾಡ್ಲಿ. ಕಡಿಕಡಿಗೆ ಎಲ್ಲಾ ಹಾಸಿಗೆ ಮ್ಯಾಲೆ ನಡಿವಾಗ ಮನ್ಯಾಗೆ ಭಾಳ ತ್ರಾಸ ಆತು. ದೇವ್ರ ದೊಡ್ಡಾಂವ. ತಿಂಗಳೊಪ್ಪತಿನ್ಯಾಗ ಆಟ ಮುಗೀತು. ಇಲ್ಲಂದರ ಬರ್ತ ಬರ್ತ ಒಂದ ಗಂಜಿ ಕಾಯಿಸಿಕೊಡವ್ರೂ ಇರಲಿಲ್ಲ. ನಾ ಬಾಜುಗಿಂದ ಎದ್ರ ಆಕಿ ಚಿಟಿಚಿಟಿ ಚೀರತಿದ್ಲು. ಸೊಸಿ ಮಾತು ಮೈಮ್ಯಾಗೆ ಬರೀ ಎಳದಂಗ ಬರತಿದ್ವು. 
ಎನ ಮಾಡೊದಪಾ ಸಂತೋಶಾ.. ಬದುಕಿನ ಜಂಜಾಟದಾಗ ಇಂಥಾ ಅವಮಾನ, ಅವಮರ್ಯಾದಿ ಎಲ್ಲಾ ಅನುಭವಿಸಿ ಗಂಡಸರ ಜೀವ ದಡ್ಡ ಬಿದ್ದು ಹೋಗಿರ್ತದ. ಅದನ್ನ ವಾದಿಸಿಕೋತ ಕೂಡೊದ್ರಾಗ ಅರ್ಥ ಇಲ್ಲ ಅನ್ನಿಸಿ ಅಕೀಗೆ ಎನೂ ಅನ್ಸೋದ ಬ್ಯಾಡ ಅಂತ ಕಡಿಕಡಿಗೆ ಆಕೀಗ ಹೆಂಗ ಬೇಕೋ ಹಂಗ ಇದ್ದ ಬಿಟ್ಟಿದ್ದೆ. ಆಕೀ ಹೋದ ಮ್ಯಾಲೆ ಮನ್ಯಾಗ ಇರಾಕ ಯಾವ ಕಾರಣಾನೂ ಇರ್ಲಿಲ್ಲ. ಆದರೂ ಮೂವತ್ತೈದು ವರ್ಷಗಟ್ಟಲೆ, ಸಾವಿರಾರ ಮಕ್ಕಳಿಗೆ ಅಕ್ಷರ,ಬುದ್ಧಿ ಕಲಿಸಿದ ನಾನು ನಮ್ಮ ಮಕ್ಕಳಿಗೆ ಬುದ್ಧಿ ಕಲಿಸೋದಾಗಲಿಲ್ಲ ಅನ್ಸಿದಾಗ ಆಕಿ ಮುಂದ ನನ್ನ ಮುಖಾ ಸಣ್ಣದಾಗತಿತ್ತೋ ಮಾರಾಯಾ. ಯಾಕ ಹಿಂಗಾತೋ ಗೊತ್ತಿಲ್ಲ. ಹೆಣಮಕ್ಳಿಗೆ ಮನೀ, ಮಕ್ಳು ಅಂದರ ಜೀವಾ. ಆದರ ನಮ್ಮ ಮಕ್ಕಳು ನಾವಂದುಕೊಂಡಂಗ ಇರೋದಿಲ್ಲ ಅನ್ನೊದು ತಿಳಿಯೋ ಹೊತ್ತಿಗೆ ತಡಾ ಅಗಿಬಿಟ್ಟಿತ್ತೋ..'ಮಾತನಾಡಲಾರದೆ ವೃದ್ಧಜೀವ ಸುಮ್ಮನೆ ಬಿಕ್ಕಳಿಸಿದರೆ, ಅವರನ್ನು ಬಳಸಿ ಕೂತಿದ್ದ ನನಗೆ ರಣಬಿಸಿಲಿನಲ್ಲೂ ಆಗಸ ಮಬ್ಬುಮಬ್ಬು. 

Saturday, August 5, 2017

ಅಪನಂಬಿಕೆ ಎಂಬ ಅಪರಿಚಿತ ಅತಿಥಿ...
(ಇರುವ ಎರಡು ದಿನದಲ್ಲಿ ಏನೆ ಆದರೂ ಕಳೆದುಕೊಳ್ಳುವುದು ಎಂದು ಏನೂ ಇಲ್ಲ. ಎಲ್ಲಾ ಆಯಾ ಸಮಯದ ಕರ್ಮವಷ್ಟೆ. ಸಮಯಕ್ಕೆ ತಕ್ಕಂತೆ ಬದಲಾಗದಿದ್ದರೆ ನೀವು ಅಲ್ಲೆ ಇರುತ್ತಿರಿ)

ನಮಗೆ ಬೇಕಿದ್ದೋ ಬೇಡದೆಯೋ ಒಂದು ಘಟನೆ ನಡೆದು ಹೋಗುತ್ತದೆ. ಇದ್ದಕ್ಕಿದ್ದಂತೆ ಇಬ್ಬರ ಮಧ್ಯೆ ಒಂದು ಅಂತರ ಹುಟ್ಟಿಬಿಡುತ್ತದೆ ಅಪರಾತ್ರಿಯಲ್ಲಿ ಸರಕ್ಕನೆ ಹುಟ್ಟಿ ಅಲ್ಲೆ ಸತ್ತು ಹೋಗುವ ಅಪಸವ್ಯದ ಕಾಮದಂತೆ. ಅದಿಬ್ಬರಿಗೂ ಬೇಕಿರಲಿಲ್ಲ ಅದರೆ ಮನಸ್ಸು ಬಹಳ ಸೂಕ್ಷ ಎನ್ನುವ ಸತ್ಯ ನಮಗೆ ಗೊತ್ತಿರಬೇಕು ಮತ್ತು ಗಂಡಸು ಅಂಡು ಒದರಿಕೊಂಡು ಹೋಗುತ್ತಾನೆಂದ ಮಾತ್ರಕ್ಕೆ ಅವನಿಗೆ ಭಾವನೆಗಳಿಲ್ಲ ಅಥವಾ ಹೆಂಗಸರಿಗಾಗುವ ಮತ್ತು ಅವರ ಸೆಂಟಿಮೆಂಟಿಗಾಗುವ ಫೀಲಿಂಗು ಮಾತ್ರವೇ ಕಿಮ್ಮತ್ತಿನದು ಅಂತಲ್ಲ. ಗಂಡಸು ಪ್ರಿಯಾರಿಟಿಗೆ ಮತ್ತು ಪ್ರಾಕ್ಟಿಕಾಲಿಟಿಗೆ ಒತ್ತು ಕೊಡುವುದರಿಂದ ಸ್ವಲ್ಪ ಈಜಿ ಗೋಯಿಂಗ್ ಅಂತನ್ನಿಸಿ ಬಿಡುತ್ತಾನೆ. ಅದಕ್ಕಿಂತಲೂ ಪ್ರತಿಘಳಿಗೆ ಮತ್ತು ಕಾಲದಲ್ಲೂ ಅವನಿಗೆ ಬದುಕು 360 ಕೋನದಿಂದಲೂ ಆವರಿಸಿಕೊಂಡು ಹಣಿಯುತ್ತಿರುತ್ತದೆ ಎನ್ನುವುದು ಸಂಬಂಧದಲ್ಲಿ (ಎಂದರೆ ಬರೀ ಅಫೇರ್ ಅಂತಲ್ಲ. ಅದು ಯಾವುದೇ ರೀತಿಯದ್ದು ಅಣ್ಣ/ತಮ್ಮ ತಂಗಿ ಮಾವ ಹೀಗೆ) ನಂಬಿಕೆ ಇರಿಸಿಕೊಂಡವರ ಅರಿವಿಗೆ ಬರುವವರೆಗೆ ತೀರ ತಡವಾಗಿರುತ್ತದೆ. ಕಾರಣ ಇವತ್ತು ಸ್ವಂತ ಗಂಡ ಹೆಂಡತಿಯರಿಗೇ ಎಷ್ಟೊ ಸರ್ತಿ ದಿನಕೊಮ್ಮೆ ಮುಖ ಕೊಟ್ಟು ಮಾತಾಡುವ ವ್ಯವಧಾನ ಉಳಿದಿಲ್ಲ. ಅಷ್ಟರ ಮಟ್ಟಿಗೆ ಅವರಿಬ್ಬರ ಪ್ರಿಯಾರಿಟಿ ಮತ್ತು ಸಣ್ಣಮಟ್ಟಿಗಿನ ಇಗೋ ಅವರ ಸಮಯ ಮತ್ತು ಬದುಕು ಎರಡನ್ನೂ ತಿಂದುಹಾಕುತ್ತಿರುತ್ತದೆ. ಅಂತಹದರಲ್ಲಿ ಹೆಂಗೋ ಚೆಂದವಾಗಿ ಬದುಕಿ ಬಿಡೋಣ ಎನ್ನುವ ಸಣ್ಣಸಣ್ಣ ಸಂಬಂಧಗಳಲ್ಲಿ ತಲೆ ಮೇಲೆ ಹತ್ತಿ ಕೂರುವಂತಹ ಮನಸ್ಥಿತಿ ಒಕ್ಕರಿಸಿಬಿಟ್ಟರೆ ದೇವರಾಣೆ ಅವರಲ್ಲಿ ಬದುಕು ತೇಪೆ ಹಾಕಿದ ಕೌದಿಯಾಗುತದೆ ಹೊರತಾಗಿ ಯಾವತ್ತೂ ಹರವಾದ ದುಪ್ಪಟಿಯಾಗಿ ಮಚ್ಚಟೆಗೀಡು ಮಾಡುವುದು ಕಷ್ಟಕಷ್ಟ.
ಅದಾಗಿದ್ದು ಹಾಗೆಯೇ ಅವಳಿಗೂ ಅವನಿಗೂ ಅದ್ಯಾಕೋ ಸ್ವಲ್ಪ ಅಪನಂಬಿಕೆ ಹುಟ್ಟಿಬಿಟ್ಟಿದೆ. ಅದಲ್ಲಿಗಲ್ಲಿಗೆ ಸರಿ ಹೋಗುವ ಮೊದಲೇ ಒಬ್ಬರಿಗೊಬ್ಬರು ಶರಂಪರ ಕಿತ್ತುಕೊಂಡಿದ್ದಾರೆ. ಅದರಲೂ ಯಾವಾಗ ಯಾರಿಗೆ ಅವನ/ಳ ಮಾತು ಮತ್ತು ಮೆಸೇಜು ಇನ್ನಾವುದೇ ರೀತಿಯ ಸಂವಹನ ಬೇಕಿರುವುದಿಲ್ಲವೋ ಆಗ ಮೇಲೆ ಬಿದ್ದಷ್ಟೂ ಒಂದು ರೀತಿಯ ಹೇವರಿಕೆ ಹುಟ್ಟುತ್ತದೆಯೇ ಹೊರತಾಗಿ ಅಪ್ತತೆ ಬೆಳೆಯುವುದೇ ಇಲ್ಲ. ಅದು ಮೀರಿ ನಾನು ಮಾತಾಡಿಸಿಕೊಂಡೆ ತೀರುತ್ತೇನೆ, ಅವನನ್ನು/ಳನ್ನು ಮತ್ತೆ ಒಲಿಸಿಕೊಳ್ಳುತ್ತೇನೆ ಎಂದು ದಿನವಿಡೀ ಅದರಲ್ಲೇ ಮುಳುಗೆದ್ದು ಹಿಂಬಾಲಿಸಿ ವರಾತಕ್ಕಿಟ್ಟುಕೊಳ್ಳುವುದಿದೆಯಲ್ಲ ಅದು ಸರಿಪಡಿಸಿಕೊಳ್ಳುವ ಸ್ಥಿತಿಯಲ್ಲ. ಅದೊಂದು ರೀತಿಯಲ್ಲಿ ಇಗೋಗೆ ಸಿಕ್ಕ ಮನಸ್ಸಿನ ಮತ್ತು ಅಯ್ಯೋ ಎಂಬ ಸ್ವಯಂ ಸಹಾನುಭೂತಿಯ, ತಾನು ಅಪ್ಪಟ ಚಿನ್ನದ ಮನಸ್ಥಿತಿಯ ಸುಪಿರಿಯಾರಿಟಿ ಕಾಂಪ್ಲೆಕ್ಸಿನ ಡೆಸ್ಪರೇಷನ್ನು.
ಅಯ್ಯೋ ನನ್ನ ಬದುಕು, ನನ್ನ ಪಾಲಿಸಿ, ನನ್ನ ನೈತಿಕತೆ, ನನ್ನ ಬದುಕಿನ ರೀತಿ, ನಾನು ಯಾವತ್ತು ತಪ್ಪೇ ಮಾಡಿಲ್ಲ, ನನ್ನ ಬದುಕಿನ ಸಂಸ್ಕಾರವೇ ಹಿಂಗಿತ್ತು, ಇನ್ನೆಂಗೆ ನನ್ನ ಗಂಡ/ಹೆಂಡತಿನ್ನ ಎದುರಿಸಲಿ, ನನ್ನ ಪ್ರಿನ್ಸಿಪಲ್ಲೇ ಕಿತ್ತುಹೋಯ್ತು, ಇನ್ನು ನನ್ನ ಬದುಕಿಡೀ ನರಕವೇ ಎಂದು ಅಲವತ್ತುಕೊಳ್ಳುವ ವ್ಯಕ್ತಿತ್ವಕ್ಕೆ ಬೇಕಿರುವುದು ಸಾಂತ್ವನ ಅಥವಾ ಪ್ರೀತಿ ಅಥವಾ ಬೆಂಬಲ ಅಥವಾ ಒತ್ತಾಸೆ ಅಲ್ಲವೇ ಅಲ್ಲ. ಅವರಿಗೆ ಆಗಿದ್ದಿದ್ದು ಮೊದಲೇ ಹೇಳಿದಂತೆ ಡೆಸ್ಪರೇಶನ್ನಿನ ಕಾಂಪ್ಲೆಕ್ಸು. ಅದರಿಂದ ಹೊರಗೆ ಬರಲು ಅವರಿಗೆ ತೋಚುವುದೊಂದೇ ಮಾರ್ಗ ಮೊದಲು ಆಗಿರುವ ಸಂಕಟವನ್ನು ಸರಿಪಡಿಸಿಕೊಂಡು ತನ್ನ ಮನಸ್ಸಿಗೆ ತಾನು ನಂಬಿದ್ದಕ್ಕೆ ಸರಿ ಎನ್ನಿಸುವ ಮನಸ್ಥಿತಿಗೆ ಒಂದು ಶಭಾಶಗಿರಿ ಕೊಟ್ಟುಕೊಂಡು ಅಯ್ಯಪ್ಪಾ ಎಲ್ಲಾ ಸರಿಯಾಗಿಬಿಟ್ಟಿತು ಅದಕ್ಕೆ ತಕ್ಕಂತೆ ನಾನೂ ಸರಿ, ನನ್ನ ಬದುಕು ಸರಿಯಾಯಿತು ಎನ್ನುವ ಮನಸ್ಸಿನ ಕಾಂಪ್ಲೆಕ್ಸಿಗೆ ಹಾಯೆನ್ನಿಸುವ ಅವಶ್ಯಕತೆಯ ತರಾತುರಿಗೆ ಬಿದ್ದಿರುತ್ತಾರೆ ಹೊರತಾಗಿ ಅದರಿಂದ ಯಾವತ್ತೂ ಶಾಶ್ವತ ಪರಿಹಾರವಾಗಿರುವುದೇ ಇಲ್ಲ ಎನ್ನುವುದು ಅವರ ಮೆದುಳಿಗಿಳಿಯುವುದೇ ಇಲ್ಲ. ಕಾರಣ ಅವರಿಗೆ ತತಕ್ಷಣಕ್ಕೆ ಮನಸ್ಸಿನ ಭರವಸೆಗೆ ತಾನು ಸರಿ ಇದ್ದೇನೆ ಎನ್ನುವ ಒಳಗುದಿಗೆ ಅರ್ಜೆಂಟಾಗಿ ಒಂದು ಪ್ರಾಮಿಸ್ಸು ಬೇಕಿರುತ್ತದೆ. ಅದಾಗಿಬಿಟ್ಟರೆ ಅಲ್ಲಿಗೆ ಅಯ್ಯಪ್ಪಾ ಎಂದು ಹೊರಟು ಬಿಡುತ್ತಾರೆ. ಮುಂದೊಮ್ಮೆ ಇನ್ನೇನೋ ತಲೆ ಕೆದರಿಕೊಳ್ಳುವವರೆಗೂ ಯಾವ ಉಸಾಬರಿಯೂ ಇರುವುದಿಲ್ಲ. 
ನೆನಪಿರಲಿ ಹೀಗೆ ಮಾಡುವವರ ಬದುಕಿನಲ್ಲಿ ಯಾವತ್ತೂ ಖುಶಿಯೆನ್ನುವುದು ಅಡರುವುದು ಕಷ್ಟ. ಕಾರಣ ಪ್ರತಿ ಬಾರಿಯೂ ಅವರ ಮನಸ್ಸು ಒಳಗೊಳಗೆ ಯುದ್ಧಮಾಡುತ್ತಲೇ ಇರುತ್ತದೆ. ಅವರಿಗೇ ಗೊತ್ತಿಲ್ಲದಂತೆ ತಾನಂದುಕೊಂಡಂತೆ ಬದುಕುತ್ತಿರುವ ಸರಿ ತಪ್ಪಿಗೆ ತಿಕ್ಕಾಟದಲ್ಲೇ ಇರುತ್ತಾರೆ. ಎಲ್ಲರನ್ನೂ ಖುಶಿಯಾಗಿಡುವ ಹ್ಯಾಂವಕ್ಕೆ ಹೆಣಗಾಡುತ್ತಿರುತ್ತಾರೆ. ಆದರೆ ಯಾವತ್ತೂ ಜತೆಗಿರುವವರಾಗಲಿ ಇತರರಾಗಲಿ ಮೇಲೆ ನೀ ಮಾಡಿದ್ದು ಸರಿ ಎನ್ನುವಂತೆ ವರ್ತಿಸಬಹುದಾದರೂ ಮನಸ್ಸು ಪೂರ್ವಕವಾಗಿ ಜತೆಯಾಗಲಾರರು.
ಕಾರಣ ಇಂತಹ ಸಂಬಂಧಗಳಲ್ಲಿ ಅಯ್ಯೋ ಅದೇ ಕಿರಿಕಿರಿ ಹೋಗಲಿ ಹೂಂ..ಅಂದು ಸುಮ್ನಾಗೋಣ ಎಂದಿರುತ್ತದೆಯೇ ಹೊರತಾಗಿ ಯಾವತ್ತೂ ಅವರೊಂದಿಗೆ ಒಂದು ನಂಬಿಗಸ್ಥ ವ್ಯವಸ್ಥೆ ಪುನರ್‍ಸ್ಥಾಪನೆ ಬಲು ಕಷ್ಟ. ಕಾರಣ ಅವರ ಡೆಸ್ಪರೇಶನ್ನು ಮತ್ತು ಸರಿ ಮಾಡಿಕೊಳ್ಳುವ ಅತಿ ಎನ್ನುವ ಕಾಂಪ್ಲೆಕ್ಸು ಎದುರಿನವರಿಗೆ ಹೇವರಿಕೆಯಾಗಿಬಿಟ್ಟಿರುತ್ತದೆ. ಅದಕ್ಕೂ ಮಿಗಿಲು ದಿಗಿಲು ಹುಟ್ಟಿಸುತ್ತದೆ. ಯಾವಾಗ ಯಾವ ಹೊತ್ತಿನಲ್ಲಿ ತಲೆ ಏರುತ್ತಾರೋ ಯಾರಿಗೆ ಗೊತ್ತು..? ಅಂತಹ ಭರವಸೆ ಮತ್ತು ನಂಬಿಕೆಯ ಜೊತೆ ಹುಟ್ಟಿಸುವಲ್ಲಿ ವಿಫಲವಾಗಿರುವ ಮನಸ್ಥಿತಿಯಿಂದಾಗಿ ಇದ್ದಬದ್ದ ಚೆಂದದ ಘಳಿಗೆಗಳನ್ನೂ ಹಾಳುಮಾಡಿಕೊಳ್ಳುತ್ತಿರುತ್ತಾರೆ.
ಬದುಕು ಬಂದಂತೆ ಸ್ವೀಕರಿಸಿ ಚೆಂದವಾಗಿಸಿಕೊಳ್ಳುವ ಹೊಂದಾಣಿಕೆ ಎನ್ನುವ ಸ್ವಭಾವ ಅರ್ಥವೇ ಆಗಿರುವುದಿಲ್ಲ. ಅಕಸ್ಮಾತ ಇದನ್ನು ವಿವರಿಸಲು ಹೋಗಿ ತಾನು ಇದ್ದಬದ್ದವರೊಂದಿಗೆ ಹೇಗೆಲ್ಲಾ ಸಾವರಿಸಿಕೊಂಡು ಹೋಗುತ್ತಿದ್ದೇನೆ ಎನ್ನುವುದಕ್ಕೆ ಅಂಟಿಕೊಳ್ಳುತ್ತಾರೆ ಹೊರತಾಗಿ ವಾಸ್ತವ ಅರಿವಿಗೆ ತಂದುಕೊಳ್ಳುವುದಿಲ್ಲ. ಬರೀ ಹೆಣ್ಣು ಗಂಡಿನ ಮಧ್ಯೆ ಅಂತಲ್ಲ ಇದು ಇಬ್ಬರಲ್ಲೂ ಅಷ್ಟೆ. ಯಾವುದೇ ಸ್ನೇಹ, ಅವಳೊಂದಿಗಿನ ಗೆಳೆತನ, ಚಿಕ್ಕಪ್ಪನೊಂದಿಗಿನ ಮುಯ್ಯಿ, ಸ್ವಂತ ಹೆಂಡತಿಯೊಂದಿಗಿನ ಅರೆಮುನಿಸು, ಕಚೇರಿ ಸಹೋದ್ಯೋಗಿಯೊಂದಿಗೆ ಒಂದು ದಿವ್ಯವಾದ ಮುಖಸಿಂಡರಿಸುವ ಪಢಪೆÇೀಶಿತನ, ಕೆಲಸದಾಳಿನ ಜೊತೆಗಿನ ಒಣಉಸಾಬರಿ, ಪಕ್ಕದ ಮನೆಯಾತನ ಹಲ್ಕಟಗಿರಿ, ನಿಮ್ಮ ಫೇಸ್‍ಬುಕ್ ವಾಲ್ ಮೇಲೆ ಬಂದು ಕ್ಯಾತೆ ತೆಗೆಯುವ ನಿಮ್ಮ ಕಮೆಂಟಿಗೆ ಆಕೆ/ಅವನು ಲೈಕ್ ಒತ್ತಿದ್ದಾನೆ ಎಂದು ನೋಡುವ ಸಣ್ಣತನ, ಎದೆಯುದ್ದ ಮಗನ ಸರಿಬರದ ನಡವಳಿಕೆ, ನಮ್ಮ ನಮ್ಮ ಸ್ನೇಹದವರೊಂದಿಗಿನ ಲೈಕು ಕಮೆಂಟಿಗೆ ಸಂಕಟ ಪಟ್ಟುಕೊಂಡು ಇನ್ನೊಬ್ಬರ ಇನ್‍ಬಾಕ್ಸಿಗೆ ಹೋಗಿ ತಿಪ್ಪೆ ಸಾರಿಸುವವರು, ತಮ್ಮತಮ್ಮ ಬದುಕೇ ಕಿತ್ತು ಹೋಗಿದ್ದರೂ ಅಕೆಯ ಸಂಕಟಕ್ಕೆ ಕೈಯೊಡ್ಡುವ ಸಹಾನುಭೂತಿಗಳಿಸುವ ಹೀಗೆ ಯಾರಿದ್ದಾರೆ ಯಾರಿಲ್ಲ ಇದರಲ್ಲಿ. ಎಲ್ಲರದ್ದೂ ವರಾತ ಒಂದೇ ತಾವು ಸರಿ ಎನ್ನಿಸಿಕೊಳ್ಳುವ ಮತ್ತು ಮೊದಲಿನಂತೆ ಎಲ್ಲಾ ಚೆಂದವಾಗಿ ನಡೆದುಬಿಡಲಿ ಎನ್ನುವ ಧಾವಂತ.
ಅರೇ ಸುಮನೆ ಬಿದ್ದ ನೀರೂ ಆರಲು ಅದರದ್ದೇ ಸಮಯ ತೆಗೆದುಕೊಳ್ಳುವಾಗ ಪ್ರತಿಯೊಂದೂ ಸರಿ ಹೋಗಲು ಅಥವಾ ಹೋದಂತೆ ಅನ್ನಿಸಲು ಅದರದ್ದೇ ಸಮಯಗಳಿರುತ್ತವೆ. ಹಾಗಾದಲ್ಲಿ ಮಾತ್ರ ಅಂತಹದ್ದು ತಣಿದು ಸೂಕ್ತವಾದ ಸಮಯಕ್ಕೆ ಮಾಯ್ದು ಏನೂ ಆಗಿಲ್ಲವೆಂಬಂತೆ ನೆಟ್ಟಗಾಗುವುದು. ಇದು ಪ್ರಕೃತಿಯೇ ಕೊಟ್ಟ ಸುಲಭದ ಸಲೀಸು ವಿಧಾನ. ಇದರಿಂದ ನೀವು ಯಾರನ್ನು ಸಂತೈಸಲು ಸರಿ ಮಾಡಲು ಹೊರಡುತ್ತಿರೋ ಅವಳೆ/ನೇ ಕೊನೆಗೊಮ್ಮೆ ಅಯ್ಯೋ ಸುಖಾ ಸುಮ್ಮನೆ ಸಮಯ ವ್ಯರ್ಥ ಮಾಡಿಕೊಂಡೆ ಎನ್ನುವ ಹಂತಕ್ಕೆ ಬಂದಿರುವ ಉದಾ. ಸಾವಿರ. ನನ್ನ ಕೌನ್ಸೆಲಿಂಗ್ ಹಲವು ವಿಧಾನದಲ್ಲಿ ಸುಮ್ಮನಿರಿಸಿಬಿಡುವುದು ಅತ್ಯಂತ ಉಪಯುಕ್ತ ವಿಧಾನವಾಗಿ ಯಶಸ್ಸಾಗಿದ್ದಿದೆ. ಕಾರಣ ಎದುರಿನವರ ಮೌನ ಕೆಲವೊಮೆ ನಿಮ್ಮ ಅಹಂನ್ನು ಹಣಿದರೆ ಕೆಲವೊಮ್ಮೆ ಅಯ್ಯೋ ಪಾಪ ಎನ್ನುವ ಮನಸ್ಥಿತಿಯನ್ನು ಕ್ರಮೇಣ ತಯಾರು ಮಾಡುತ್ತದೆ. ಇದನ್ನು ಬಿಟ್ಟು ನನಗೆ ಹಿಂಗೇ ನನಗೇ ಹಂಗೇ ಬದುಕು ಎಂದು ನಿಲ್ಲಲು ಹೋದಲ್ಲಿ ಅದು ಬದುಕಾಗುವುದಿಲ್ಲ. ಇದ್ದ ಬದ್ದ ಎಲ್ಲರ ಜೀವ ತಿನ್ನುವ ಸರಕಾಗುತ್ತದೆ. ಕಾರಣ ಇರುವ ಎರಡು ದಿನದಲ್ಲಿ ಏನೆ ಆದರೂ ಕಳೆದುಕೊಳ್ಳುವುದು ಎಂದು ಏನೂ ಇಲ್ಲ. ಎಲ್ಲಾ ಆಯಾ ಸಮಯದ ಕರ್ಮವಷ್ಟೆ. ಸಮಯಕ್ಕೆ ತಕ್ಕಂತೆ ಬದಲಾಗದಿದ್ದರೆ ನೀವು ಅಲ್ಲೆ ಇರುತ್ತಿರಿ. ಕಾಲ
ಅಪಾಯಕಾರಿ ಒಳ್ಳೆಯತನಗಳು
(ಮೆಸೆಂಜರು, ವಾಟ್ಸಾಪುಗಳ ಹಾವಳಿಯಿಂದಾಗಿ ಕುಲ ಗೋತ್ರ ಗೊತ್ತಿಲ್ಲದವರೂ ಅಡ್ವೈಸರುಗಳಾಗಿ ಅವತರಿಸುತ್ತಿರುವ ಸಂದರ್ಭದಲ್ಲಿ ಯಾವಾಗ ಯಾರ ಮುಖವಾಡ ಬಿಚ್ಚಿಕೊಳ್ಳುತ್ತದೆ, ಯಾರೆಲ್ಲಾ ಹರಾಜಾಗುತ್ತಾರೆ ಹೇಳಲಾಗುವುದಿಲ್ಲ. ಆಗ ಇಂಥವರನ್ನು ನಂಬಿ ಕತೆ ಕೊಟ್ಟು ಕೂತವರ ಪರಿಸ್ಥಿತಿ..?)

ಇಂಥವರು ಯಾರದೇ ಬದುಕಿನಲ್ಲೂ ತೀರ ಅಪಾಯಕಾರಿ. ಸ್ವಂತದ ಬದುಕಂತೂ ನಿಸ್ಸಂಶಯ ಗಬ್ಬೆಬ್ಬಿಸಿಕೊಂಡಿರುತ್ತಾರೆ ಆದರೆ ಹೊರಗೆ ಬರುತ್ತಿದ್ದಂತೆ ಅದೆಲ್ಲಿರುತ್ತದೋ ಬ್ರಹ್ಮಕಳೆ ಮುಖದಲ್ಲಿಟ್ಟುಕೊಂಡು, ಒಳಗಿನ ವೃಣದ ಮೇಲೆ ಸ್ಪ್ರೇ ಹೊಡೆದುಕೊಂಡೆ ರಸ್ತೆಗಿಳಿದಿರುತ್ತಾರೆ. ನೋಡಿದವರು ಮಾತಾಡಿದವರು ಯಾರೂ ಇವರನ್ನು ನಾಲಾಯಕ್ ಎಂದಾಗಲಿ, ಅಪಾಯಕಾರಿ ಎಂದಾಗಲಿ ಅವಗಾಹನೆಗೆ ತಂದುಕೊಳ್ಳುವುದು ಸಾಧ್ಯವೇ ಇರುವುದಿಲ್ಲ. ಯಾವಾಗ ಬೇಕಾದರೂ ಸಹಾನುಭೂತಿಗೆ ಒಳಗಾಗಲು, ಕೈ ಕಾಲು ಹಿಡಿಯಲು ತನ್ನ ತಪ್ಪೇನು ಇಲ್ಲ ಎಂದು ಚೆಂದವಾಗಿ ವಾದಿಸಲು, ಎದುರಿನವರೂ ಎಲ್ಲೂ ಅನಾವಶ್ಯಕ ತೊಂದರೆಗೀಡಾಗಬಾರದು ಎನ್ನುವ ಕಾಳಜಿಯುತ ಮಾತುಕತೆಯೊಂದಿಗೆ, ಹಾಗೆ ಸೆಂಟಿಮೆಂಟಾಗಿ ಅವರನ್ನು ನಂಬಿಸಿ, ಮಾತುಕತೆಗೆಳೆಯುವುದು ಬೇಡದ ಅವರ ಸಂಸಾರದ ಕತೆ ವಿಚಾರಿಕೊಳ್ಳುತ್ತಾ ಬಳಸಿಕೊಳ್ಳುವುದರಲ್ಲಿ ಇವರದು ಎತ್ತಿದ ಕೈ. ಇಂಥವರು ತೀರ ಮನೆ ಹೊರಗೆ ದೂರದಲ್ಲಿ ಎಲ್ಲೋ ಇರುತ್ತಾರೆಂದಲ್ಲ. ಮನೆಯಲ್ಲೇ, ತೀರ ಸಂಬಂಧಿಗಳಲ್ಲಿ, ಆಪ್ತೇಷ್ಟರಲ್ಲಿ, ಬಂಧುವಾಗಿಯೂ ಇರುತ್ತಾರೆ.
ಅಗತ್ಯ ಬಿದ್ದಾಗ "...ನೋಡು ನಾನು ಆವತ್ತೇ ಹೇಳಿರಲಿಲ್ವಾ.." ಎಂದು ಸಾಧಿಸಿಕೊಂಡು ತನ್ನ ನಂಬುಗೆ ಮತ್ತು ತನಗನ್ನಿಸಿದ್ದೇ ಸರಿ ಎಂಬುವುದನ್ನು ಸಾಧಿಸಲು ಕಾಯುತ್ತಾ ಅದಕ್ಕಾಗಿ ಏನೂ ಮಾಡಲು ಹಿಂದೆ ಮುಂದೆ ನೋಡದ, ಯಾರ ಸಂಸಾರದ ವಿಷಯದಲ್ಲೂ ತಲೆ ಹಾಕಲು ಹೇಸದ, ಇನ್ಯಾರದ್ದೋ ಗಂಡ ಹೆಂಡತಿಯನ್ನು ಸರಿಪಡಿಸುತ್ತೇನೆಂದು ಹೊರಟು ನಿಲ್ಲುವ, ಇಂತಹ ನಿರಪಾಯಕಾರಿಯಂತೆ ಕಾಣಿಸುವ ಸಮೀಪ ಸಂಬಂಧಿಗಳು ನಿಜಕ್ಕೂ ಅಪಾಯಕಾರಿ. ವಿಚಿತ್ರ ಎಂದರೆ ಕಿತ್ತು ಹೋಗುತ್ತಿದ್ದ ಸ್ವತ: ಹೆಂಡತಿಯೊಂದಿಗಿನ ಸಂಬಂಧ ಪುನರ್ ಸ್ಥಾಪಿಸಿಕೊಳ್ಳಲು ಮತ್ತೆ ಇನ್ಯಾರದ್ದೋ ಸಹಾಯ ಇವರಿಗೇ ಬೇಕಿರುತ್ತದೆ. ಸ್ವಂತದ ಮನೆಯಲ್ಲಿ ಅದೆಂಥಾ ಶರಂಪರ ಕಿತ್ತಾಟಗಳಿರುತ್ತವೆಂದರೆ ಗಂಡ/ಹೆಂಡತಿ ಒಬ್ಬರನ್ನೊಬ್ಬರು ತಿರುಗಿಯೂ ನೋಡದೆ ವಾರಗಟ್ಟಲೆ ಬದ್ಧ ದ್ವೇಷಿಗಳಾಗುತ್ತಿರುತ್ತಾರೆ. (ಈಗಿನ ಕಾಲವಾದ್ದರಿಂದ ಫೇಸ್‍ಬುಕ್ಕು/ವಾಟ್ಸಾಪುಗಳಲ್ಲೆಲ್ಲಾ ಬ್ಲಾಕು ಮಾಡಿಕೊಂಡು ರೇಜಿಗೆ ಹುಟ್ಟಿಸುವಂತಹ ದಂಪತಿಗಳಿದ್ದಾರೆ ಎಂದರೆ ನೀವು ನಂಬಲೇಬೇಕು. ಅದರ ಸ್ಕ್ರೀನ್‍ಶಾಟ್‍ಗಳನ್ನೂ ಗ್ಯಾರಂಟಿಗಾಗಿ ಕಳುಹಿಸಿಕೊಳ್ಳುವ ಇವರು ಅದಿನ್ನೆಂಥಾ ನಂಬಿಕೆ ಸ್ವಂತದರಲ್ಲಿ ಉಳಿಸಿಕೊಂಡಿದ್ದಾರು..? ಮೊದಲಾದರೆ ಬರೀ ಮಾತು ನಿಂತುಹೋಗಿ ಅವಕಾಶ ಸಿಕ್ಕಿದಾಗೆಲ್ಲಾ ಅಪರೋಕ್ಷ ಹರಿಹಾಯುವುದು ನಡೆಯುತ್ತಿತ್ತು. ಈಗೀಗ ಇಬ್ಬರೂ ನೌಕರಿಯಲ್ಲೂ ಇರುವುದರಿಂದ ಮುಲಾಜಿಲ್ಲದೆ ಬ್ಲಾಕ್ ಮಾಡಿ ಬಿಸಾಡಿ ಜತೆಗೆ ಇತರರೊಂದಿಗೆ ಚಾಟ್‍ನಲ್ಲಿದ್ದು ಸಮಯ/ಸಂಕಟ ಕಳೆದುಕೊಂಡು ಹಗುರಾಗುವವರಿದ್ದಾರೆ. ಹೊರಗೆ ಕೆಲಸ ಮಾಡುವ ಅಡ್ವಾಂಟೇಜೂ / ಡಿಸ್ ಅಡ್ವಾಂಟೆಜೂ ಎರಡೂ ಇದು ಹೌದಾದರೂ ಒಳಗೊಳಗೆ ಬೇರೆಯವರ ವಿಷಯದಲ್ಲಿ ತಮಾಷೆ ನೋಡುವ ಮೊದಲು ತಮಗೇ ಆದಾಗ ಏನಾಗುತ್ತದೆನ್ನುವ ಅರಿವಿರಬೇಕು. ಅದರೆ ಇಂಥವರಿಗೆ ಇದೆಲ್ಲಾ ತಾಗುವುದೂ ಇಲ್ಲ.)
ಕಾರಣ ಬೇಕಿದೆಯೋ ಬೇಡವೋ ಅವರಿಗೊಂದಿಷ್ಟು ನಮ್ಮ ನಮ್ಮ ಸಂಸಾರದ ರಗಳೆಗಳು ಗೊತ್ತಿರುತ್ತವೆ. ಅದನ್ನೆ ಹಿಡಿದುಕೊಂಡು ಇಂಟರ್‍ಫೀಯರು ಮಾಡುತ್ತಾ, ಇಬ್ಬರಿಗೂ ಆಪ್ತವಾಗಿ ಮಾತಾಡುತ್ತ ಹೇಗೋ ಅವರಿಗೂ ಒಬ್ಬ ಆಪ್ತನ ಮಧ್ಯಸ್ಥಿಕೆ ಬೇಕಾಗುತ್ತಿರುತ್ತದೆ ಅಂತ ಅನ್ನಿಸಿರುತ್ತದೆಯೇ ವಿನ: ಪ್ರಾಕ್ಟಿಕಲೀ ಹಾಗೆ ಬೇಕಿರುವುದೇ ಇಲ್ಲ. ಆದರೂ ಆ ಹೊತ್ತಿಗಿನ ಸಂಕಟಕ್ಕೆ ಹೌದೆಂದು ಬಿಡುತ್ತಾರೆ. ಇಂಥವರು ಬರದಿದ್ದರೂ ಅವರೇನೂ ಮರ್ಡರ್ ಮಾಡಿಕೊಳ್ಳುವುದಿಲ್ಲ. ಅದರೆ ಇಬ್ಬರಲ್ಲೂ ಅವನೇ/ಳೇ ಮೊದಲು ಮಾತಾಡಿಸಲಿ ಸರಿಪಡಿಸಲಿ ಎಂಬೆಲ್ಲ ಪುರಾತನ ಇಗೋಗಳು ಒಂದಿಷ್ಟು ಇರುತ್ತವಲ್ಲ. ಅದಕ್ಕೆ ಸರಿಯಾಗಿ ಇಂಥವನೊಬ್ಬ ಎಟುಕಿ ಸರಿ ಹೋಗಿದ್ದು ಅ ಸಂಸಾರದ ಕತೆ ಸುಖಾಂತ್ಯವಾಗುತ್ತದೆ. ಅದರೆ ಅವನ ಕತೆ ಅಲ್ಲಿಂದ ಶುರುವಾಗುತ್ತದೆ. ಅವಕಾಶ ಇದ್ದಾಗಲೆಲ್ಲ " ಅವರಿಬ್ಬರನ್ನೂ ಸರಿ ಮಾಡಿದ್ದು ನಾನೇಯಾ. ಇಲ್ದಿದ್ರೆ ಇಷ್ಟೊತ್ತಿಗೆ ಡೈವೋರ್ಸೆ.." ಎಂದು ಕತೆ ಶುರುವಿಟ್ಟು ಬಿಟ್ಟಿರುತ್ತಾರೆ. ಅದನ್ನೆ ಕೇಳಿದ ತಲೆಮಾಸಿದ ಇನ್ಯಾವನೋ/ಳೋ " ಅಯ್ಯೋ ನಮ್ಮವಳೂ ಹಂಗೇ ಮಾರಾಯ.." ಎಂದು ಬಾಯ್ ತಪ್ಪಿ ಅಂದು ಬಿಟ್ಟರೆ ಅಷ್ಟೆ ಅಲ್ಲಿ ಅಡರಿಕೊಂಡುಬಿಡುತ್ತಾರೆ.
ಇವತ್ತು ವಾಟ್ಸಾಪಿನ ಒಳಕೋಣೆಗಳಲ್ಲಿ ಬಹಳಷ್ಟು ಗಂಡಸರು ತಂತಮ್ಮ ಸಂಸಾರದ ಗುಟ್ಟುಗಳನ್ನೇ ಬಿಚ್ಚಿಟ್ಟು ಬಿಡುತ್ತಿರುತ್ತಾರೆ ಅದರಲ್ಲೂ ಎದುರಿಗೆ ಹೆಂಗಸಿದ್ದರಂತೂ ಮುಗಿದೇ ಹೋಯಿತು.
" ಅಯ್ಯೋ ಇಲ್ಲ ಮಾರಾಯ್ತಿ ಅವಳು ಸ್ವಲ್ಪ ಹಂಗೇ...ಇತ್ಯಾದಿ.." ಕತೆ ಹೊಡೆಯುತ್ತಾ "..ನೋಡು ನಾನು ಏನು ಬೇಕಿದ್ದರೂ ಹೇಳುತ್ತಿದ್ದೇನೆ ಅಂದರೆ ನಿನ್ನ ಮೇಲೆಷ್ಟು ವಿಶ್ವಾಸ ಇಡುತ್ತಿದ್ದೇನೆ.."ಎಂದೇ ಪ್ರತಿಧ್ವನಿಸುತ್ತಿರುತ್ತಾರೆ. ವಿಪರ್ಯಾಸ ಎಂದರೆ ಮುಖಮೂತಿ ಪರಿಚಯ ಇಲ್ಲದ ಕೇವಲ ಚಾಟು/ಫೇಸ್‍ಬುಕ್ಕಿನ ಪರಿಚಯದವರೆದುರಿಗೆ ಸಂಸಾರದ ವಿಷಯ ಬಿಚ್ಚಿ ಕೂಡುವ ಗಂಡಸು/ಹೆಂಗಸರ ಮೇಲೆ ಅದಿನ್ನೆಂಥಾ ಭರವಸೆ ಹುಟ್ಟೀತು. ಇವತ್ತು ಇದನ್ನೆಲ್ಲಾ ಹೇಳುವ ಆತ/ಆಕೆ ತನ್ನ ವಿಷಯವನೂ ಬೇರೆಡೆ ಬಾಯ್ಬಿಡುವುದಿಲ್ಲ ಎಂದು ಯಾರಿಗೆ ಗೊತ್ತು..?
ಅಸಲಿಗೆ ಇಲ್ಲಿ ತನ್ನ ಹೆಂಡತಿ ಸರಿ ಇಲ್ಲ ಎನ್ನುವುದನ್ನು ಬಾಯಿ ತಪ್ಪಿ ಮಾತಾಡುವ ಗಂಡಸು ಇನ್ನೇನಾದರೂ ಕೂಡಾ ಮಾತಾಡಬಹುದೆನ್ನುವ ಒಂದು ಅವಗಾಹನೆ ಒಳಗೊಳಗೇ ಹುಟ್ಟಬೇಕು. ಇಂಥಾ ಹರಕು ಬಾಯಿಯವರಿಗೆ ಎದುರಿನವರನ್ನು ತಪ್ಪಿತಸ್ಥ ಅಥವಾ ತಾನು ಹೇಳಿದ್ದು ನಂಬಿದ್ದೇ ಸರಿ ಎನ್ನುವ ಹುಕಿಯಿರುತ್ತದಲ್ಲ ಅದಕ್ಕಾಗಿ ಎಂಥಾ ಸನ್ನಿವೇಶ ನಿರ್ಮಾಣಕ್ಕೂ ಅದಕ್ಕಾಗಿ ಭಯಾನಕ ಡೆಡಿಕೇಶನ್ನಿನಲ್ಲಿ ನಿಂತುಬಿಟ್ಟಿರುತ್ತಾರೆ. ಕಾರಣ ಇಂಥವರು ಎಂಥಾ ಮುಖವಾಡದ ಹಿಂದಿರುತ್ತಾರೆಂದರೆ ಭಯಾನಕ ಅಸಂತೃಪ್ತಿಯೊಂದು ಮನಸ್ಸಿನಲ್ಲಿ ಮನೆಮಾಡಿರುತ್ತದೆ. ಬದುಕು ಒಳಗೊಳಗೇ ನಾಲ್ಕು ದಿನ ಚೆಂದವಿದ್ದರೆ ಇನ್ನೂ ನಾಲ್ಕು ತಿಂಗಳು ಕೈಕೊಡುತ್ತಿರುತ್ತದೆ. ತೀರ ಖಾಸಗಿ ಬದುಕು ಯಾವತ್ತೊ ಕೈಬಿಟ್ಟಿರುತ್ತದೆ. ಸೆಕ್ಸು ಎನ್ನುವ ಫ್ಯಾಂಟಸ್ಸಿ ಮನದ ಮೂಲೆಯಲ್ಲಿ ವಿಷವಾಗಿ ಕೂತುಬಿಟ್ಟಿರುತ್ತದೆ. ಎದುರಿಗೆ ಇರುವ ಸ್ನೇಹಿತರು ಸಂಬಂಧಿ ಏನಾದರೂ ಮಾಡುತ್ತಾ ಸಾಧಿಸುತ್ತ ಎದ್ದು ನಿಲ್ಲುತ್ತಿದ್ದರೆ ಅದಕ್ಕೆ ಕಾಂಪಿಟೇಶನ್ನು ಕೊಡಲಾಗದ ತಮ್ಮ ಕೀಳರಿಮೆಯ ಹಿಂಜರಿತನ ಒಳಗೊಳಗೇ ಕಾಡುತ್ತಿರುತ್ತದೆ.
ಇಂಥವರ ವಿರುದ್ಧ ಮಾಡಲು ನಿಮ್ಮಲ್ಲಿ ಯಾವುದೇ ಗಹನವಾದ ಆದರೆ ಹೌದೆನ್ನಿಸುವ ಆರೋಪಗಳು ಸಾಕ್ಷಿ ಸಮೇತ ಲಭ್ಯವಿರುವುದಿಲ್ಲ. ಆದರೆ ಹಿಂದಿನಿಂದ ಆಡಿಸುವ ಕಡ್ಡಿಗೆ ಎದುರಿನವರ ಬದುಕು ಬರಬಾದಾಗುತ್ತಿರುತ್ತದೆ. ಇವರು ಮಾತ್ರ ಯಾರಿಗೋ ಎನೋ ಉಪಕಾರ ಮಾಡಿದ್ದೇನೆ ಅಥವಾ ಮಾಡುತ್ತಿದ್ದೇನೆ ಎನ್ನುವ ಭ್ರಮೆಯಲ್ಲಿ ತಮ್ಮದೆನ್ನುವ ಬದುಕು ಎಕ್ಕುಟ್ಟಿ ಹೋಗುತ್ತಿದ್ದರೂ ಅನಾಯಾಸವಾಗಿರುತ್ತಾರೆ. ಇಂಥವರಿಗೆ ಈಗೀಗ ಸಾಮಾಜಿಕ ಜಾಲತಾಣದಲ್ಲಿ ಸುಲಭಕ್ಕೆ ಪಾಪದ ಮಾತಿಗೆ ಬೀಳುವ ಹೆಣ್ಣುಮಕ್ಕಳೂ ಕಡಿಮೆ ಇಲ್ಲ. ಬಾಕಿ ಏನೂ ಮಾಡಲಾಗದಿದ್ದರೂ ಅವರವರ ಕತೆಗೆ ಪಾಪ ಎನ್ನುತ್ತಾ ಬೆರಳು ಕಚ್ಚುತ್ತಾ ಸರಿ ಪಡಿಸಬೇಕಾದ ಜಾಗದಲ್ಲಿ ನಿಧಾನಕ್ಕೆ ತುಪ್ಪ ಸುರಿಯುತ್ತಿರುತ್ತಾರೆ. ಎಲ್ಲೋ ಎನೋ ನಡೆಯುವ ಅತೃಪ್ತಿ ಇವರನ್ನು ಸಂಕಟಕ್ಕೀಡು ಮಾಡುತ್ತಿರುತ್ತದೆ.
ಒಟ್ಟಾರೆ ಒಳ್ಳೆಯತನದ ಮುಖವಾಡದ ಹಿಂದೆ ತೀರ ಒಂದು ಕುತ್ಸಿತ ಮನಸ್ಥಿತಿ ಇರುವುದು ಗೊತ್ತಾಗುವ ಹೊತ್ತಿಗೆ ತಡವಾಗಿರುತ್ತದೆ. ತೀರ ಅತ್ತು ನಂಬಿಸಲು ಹಿಂದೆ ಮುಂದೇ ನೋಡದ ಇಂಥವರ ಒಳ್ಳೆಯತನದ ಬದಲಿಗೆ ನಮ್ಮ ನಮ್ಮ ಸಂಕಟಗಳನ್ನು ನಾವೇ ಅರಗಿಸಿಕೊಳ್ಳುವುದು ಗೊತ್ತಿರಬೇಕು. ಆದರೆ ಮೆಸೆಂಜರು, ವಾಟ್ಸಾಪುಗಳ ಹಾವಳಿಯಿಂದಾಗಿ ಕುಲ ಗೋತ್ರ ಗೊತ್ತಿಲ್ಲದವರೂ ಅಡ್ವೈಸರುಗಳಾಗಿ ಅವತರಿಸುತ್ತಿರುವ ಸಂದರ್ಭದಲ್ಲಿ ಯಾವಾಗ ಯಾರ ಮುಖವಾಡ ಬಿಚ್ಚಿಕೊಳ್ಳುತ್ತದೆ, ಯಾರೆಲ್ಲಾ ಹರಾಜಾಗುತ್ತಾರೆ ಹೇಳಲಾಗುವುದಿಲ್ಲ. ಆಗ ಇಂಥವರನ್ನು ನಂಬಿ ಕತೆ ಕೊಟ್ಟು ಕೂತವರ ಪರಿಸ್ಥಿತಿ..?

Saturday, July 29, 2017


ಉತ್ಸಾಹವನ್ನೆಲ್ಲಿಂದ ಆಕೆ ಕಡ ತರುತ್ತಾಳೆ...?

ಸರಹೊತ್ತಿನಲ್ಲಿ ಹೆಂಡತಿ ಸತ್ತು ಹೋಗುವ ಗಂಡಸಿನ ಕತೆ ಮತ್ತೆರಡ್ಮೂರು ವರ್ಷದಲ್ಲೇ ಮುಗಿದು ಹೋಗುತ್ತದೆ. ಅದರಲ್ಲೂ ವಯಸ್ಸು ಮಾಗುತ್ತಿದ್ದರಂತೂ ಮಾರ್ಜಿನಲ್ ಬದುಕು ಅವನದು. ಅದೇ ಗಂಡ ನೆಗೆದು ಬಿದ್ದಾಗ ಸ್ವರ್ಗ ಕಿತ್ತು ಹೋಗುವಂತೆ ಭೋರಾಡುವ ಹೆಣ್ಣು ಅದರ ನಂತರವೂ ದಶಕಗಳ ಕಾಲ ಅದೇ ಸ್ವಾಸ್ಥ್ಯದಿಂದ ಬದುಕು ಕಟ್ಟಲು ಎದ್ದು ನಿಲ್ಲುತ್ತಾಳೆ. ಅದಕ್ಕೆ ವಯಸ್ಸಿನ ಹಂಗೇ ಇರುವುದಿಲ್ಲ. ಮತ್ತೂ ದಶಕಗಳ ಕಾಲ ಓಟ ಸಾಗುತ್ತಿರುತ್ತದೆ...ಅದ್ಯಾಕೆ ಗಂಡಸಿಗೆ ಬದುಕುವ ಛಲ ಅಥವಾ ಸ್ವಾಸ್ಥ್ಯ ಸತ್ತೇ ಹೋಗುತ್ತದೆ..? ಆಕೆ ಅದೆಲ್ಲಿಂದ ಬದುಕುವ ಉತ್ಸಾಹ ಕಡ ತರುತ್ತಾಳೆ..? ಗೊತ್ತಿಲ್ಲ. ಅದನ್ನಾಕೇಯೆ ಉತ್ತರಿಸಿಬೇಕು.. ಆದರೆ ಅದರ ನಂತರವೂ ಬದುಕಿಗೆ ಆಗತ್ಯದ ಅಹಾರ, ಮೈಥುನ ನಿದ್ರೆ ಎಂದು ಬೇಸಿಕ್ಕುಗಳನ್ನು ಪಾಂಗಿತವಾಗಿ ಪೂರೈಸಿಕೊಳ್ಳುವುದಿದೆಯಲ್ಲ ಅದು ಮಾತ್ರ ನಿಜಕ್ಕೂ ಜೀವವನ್ನು ಬದುಕಿಸಿಕೊಳ್ಳುವ ಪರಿಯಾ...? ನನಗೆ ಗೊತ್ತಿಲ್ಲ. ಅದರೆ ತೀರ ತಾನು ಹೆಣ್ಣು ಎಂದು ಬಯಸುವ ರಿಸರ್ವೇಶನ್ನಿಗೂ, ಅಗತ್ಯ ಬಿದ್ದಾಗ ಆ ಬೌಂಡರಿಯಾಚೆ ಬದುಕುವ ಹೆಣ್ಣಿಗೂ ಮಧ್ಯೆ ಒಂದು ಢಾಳಾದ ವ್ಯತ್ಯಾಸ ಇದ್ದೆ ಇದೆ ಮತ್ತು ಆ ಮುಖವಾಡದ ಅಗತ್ಯ ಇವತ್ತಿನ ದಿನಗಳಿಗಿಲ್ಲ ಎನ್ನುವುದೇ ಒಳಗೊಳಗೇ ಒಪ್ಪಿಕೊಳ್ಳುತ್ತಿರುವ ಪರಮ ಸತ್ಯವೂ ಹೌದಾ ಎನ್ನಿಸಿತ್ತು ಆಕೆಯ ಮಾತು ಕೇಳುತ್ತಿದ್ದರೆ.
ಕಾರಣ ನೈತಿಕತೆ ಎನ್ನುವುದನ್ನು ಕೇವಲ ಏಕಪಕ್ಷೀಯವಾಗಿಸುವ ಪುರುಷ, ಸಮಾಜ ಮತ್ತು ಅಗತ್ಯ ಬಿದ್ದಾಗ ಅದಕ್ಕೆ ತನ್ನ ಪರಮಶೀಲತೆಯನ್ನು ಢಾಳಾಗಿಸುವ ಆಕೆ ಇಬ್ಬರೂ ಪುರಸ್ಕರಿಸಿದಾಗಲೇ ಒಂದು ಸಮಾಗಮ ನಡೆದು ಹೋಗುತ್ತದೆ ಎನ್ನುವುದನ್ನು ಏಕೆ ಮರೆತುಬಿಡುತ್ತಾರೋ...? ನೆನಪಿರಲೇಬೇಕಲ್ಲವಾ ಎರಡೂ ಕೈ ಸೇರಿದಾಗಲೇ ಚಪ್ಪಾಳೆ ಎಂದು. ಅಗುವುದೆಲ್ಲಾ ಆದ ನಂತರ ನನ್ನ ಶೀಲ ಹೋಯಿತು, ನಾನು ಕಳೆದುಕೊಂಡದ್ದು ಯಾರು ಕೊಡುತ್ತಾರೆ..? ಅಯ್ಯೋ.. ಹುಂಯ್ಯೋ.. ನಾನು ನಂಬಿದ್ದು ಮೋಸವಾಗ್ತಿದೆ ಎಂದು ರಣಾರಂಪ ಮಾಡುತ್ತಿದ್ದರೆ, ಸಿಕ್ಕಿದಾಗೆಲ್ಲಾ ಅಲವತ್ತುಕೊಳ್ಳುತ್ತಿದ್ದರೆ ಅದಕ್ಕಿಂತ ದೊಡ್ಡ ಅಪಹಾಸ್ಯ ಇನ್ನೊಂದಿಲ್ಲ. ಅಂತಹದ್ದೊಂದು ಸಂಬಂಧ ಬೆಳೆದಿತಾದರೂ ಹೇಗೆ..? ಹಾಗೆ ನೋಡಿದರೆ ಅದು ಪುರುಷರಿಗೂ ಅಷ್ಟೆ ಅಪ್ಲಿಕೇಬಲ್ ಆಗುತ್ತೆ ಆದರೆ ಜನ್ಮತ: ತನಗೇನೂ ಆಗಿಲ್ಲ ಎಂಬಂತೆ ಬದುಕುವುದೇ ಪುರುಷತ್ವ ಎಂಬಂತಿರುವ ಗಂಡು ಪ್ರಾಣಿ(ಅನಿವಾರ್ಯ ಮತ್ತು ಅವಿಷ್ಕಾರ ರೂಪಿಯಾ.?)ಅದರಿಂದ ಸುಲಭಕ್ಕೆ ಹೊರಬಂದಿದ್ದಾನೆ ಎನ್ನಿಸಿದರೂ ಯಾವೊಂದು ಸೂತ್ರ ಇಬ್ಬರಿಗೂ ಅಪ್ಲಿಕೇಬಲ್ಲೇ ಅಲ್ವಾ..?
ನಾನು ಮಾತಾಡಲಿಲ್ಲ ಮಧ್ಯದಲ್ಲಿ. ಕಾರಣ ಇರುವುದನ್ನು ಇರುವಂತೆ ಅದರಲ್ಲೂ ಮರುತ್ತರಕ್ಕೆ ಅವಕಾಶ ಇಲ್ಲದಂತೆ ಸ್ಪಷ್ಟೀಕರಿಸುವ ಸ್ತ್ರೀಯರ ಎದುರಿಗೆ ವಿತಂಡವಾದಕ್ಕೆ ಇಳಿಯುವ ಅಗತ್ಯತೆ ಅವಶ್ಯಕತೆ ಎರಡೂ ಇರಿಸಿಕೊಳ್ಳಬಾರದು.
ಕಾರಣ ಮದುವೆ ಎನ್ನುವ ಸಂಭ್ರಮವೇ ಇವತ್ತು ಮೊದಲ ಮೂರು ವರ್ಷದಲ್ಲೇ ತನ್ನ ನಂಬಿಕೆ ಮತ್ತು ತಾನು ಅನ್ನಿಸಿಕೊಂಡ ಕನಸಿನ ಪ್ರಪಂಪಚವಲ್ಲ ಅಥವಾ ಮದುವೆಯ ನಂತರದ ಬದುಕು ಹೀಗೀಗಿರುತ್ತೆ ಎಂದುಕೊಂಡಂತಿಲ್ಲ ಎನ್ನುವ ನಗ್ನಸತ್ಯ ಅರಿವಾಗುತ್ತಿದ್ದರೆ ಅಯ್ಯೋ ನನಗೆ ಮೋಸ ಆಯಿತು ಎನ್ನುವ ಅವಕಾಶ ಅಥವಾ ಅಲ್ಲೂ ನನ್ನ ಶೀಲ ಹಾಳಾಯಿತು ಎಂದು ಬೊಬ್ಬೆ ಹೊಡೆವ, ಹೊಡೆದ ಹೆಂಗಸರಿದ್ದಾರಾ..? (ಹೆಚ್ಚಿನವು ಆರ್ಥಿಕ,ಕೌಟುಂಬಿಕ ಬೆಂಬಲ ಇರುವಲ್ಲಿ ಡೈವರ್ಸಿಗೆ ಹೋಗುತ್ತವೆ. ಅಲ್ಲೆಲ್ಲಾ ನನ್ನ ಶೀಲ ವಾಪಸ್ಸು ಕೊಡು ಎಂದು ಕಾಲುಚಾಚಿ ಕೂತ್ತಿದ್ದಿದೆಯಾ..?) ಬಾಯಿ ಮುಚ್ಚಿಕೊಂಡೊ, ಜಗಳ ಮಾಡಿಕೊಂಡೋ ಕೊನೆಗೆ ಯಾವುದೋ ಒಂದು ಪಾಯಿಂಟ್‍ನಲ್ಲಿ ಕಾಂಪ್ರಮೈಸಿಗೆ ಬದುಕು ಬಂದು ನಿಲ್ಲೋದಿಲ್ವಾ..? ಹಾಗಿದ್ದಾಗ ಹೀಗೊಂದು ನಂಬಿಕೆ ಮೂಡಿ ಒಂದು ಸಂಬಂಧ ಬೆಳೆದು ಇಬ್ಬರಲ್ಲೂ ಇಂಟಿಮಸಿ ಎನ್ನುವ ಬೌಂಡರಿ ಸಿPಕ್ಸರಿಗೇರಿದಾಗ ನಿಜಕ್ಕೂ ಆತ್ಮಸಾಂಗತ್ಯ ಒಡಮೂಡತೊಡಗುತ್ತಿರುತ್ತದೆ. ಹೇಗೆ ಇದ್ದರೂ ಎಲ್ಲೇ ಇದ್ದರೂ ಒಬ್ರಿಗೊಬ್ಬರು ಹತ್ತಾರು ದಿನದ ನಂತರವೂ ಸಂಪರ್ಕ ಇಟ್ಟುಕೊಂಡೆ ಬದುಕುವ ಹುಮ್ಮಸ್ಸು ಗುಪ್ತವಾಗಿ ಹನಿಯುತ್ತಿರುತ್ತದೆ. ಆದರೆ ಹೀಗೊಂದು ಸಂಬಂಧದಲ್ಲೆ ಚೆಂದವಾಗಿ ಬದುಕುತ್ತೇನೆ ಎಂದು ಹೊರಟುನಿಲ್ಲುವ, ಒಬ್ಬರ ತಲೆಯ ಮೇಲೊಬ್ಬರು ಹತ್ತಿ ಕೂರುವ ಸಂದರ್ಭ ಉಂಟಾಗಿಬಿಟ್ಟರೆ ದೇವರಾಣೆ ಮತ್ತಲ್ಲಿ ಚಿಗುರು ಕೊನರುವುದು ಕಡಿಮೆಯೇ. ಕಾರಣ ಸಂಬಂಧ ಎನ್ನೋದು ಇಂತಹ ನಂಬಿಕೆಯಲ್ಲಿ ಒಳಗೊಳಗೇ ಹನಿಸುವ ಚಿಗುರಾಗುತ್ತದೆಯೇ ವಿನ: ಅದಕ್ಕೊಂದು ಅಧಿಕೃತ ಅಥವಾ ತನಗೆ ಬೇಕಾದಂತೆ ಬದುಕುವ ಹೊರಾಂಗಣ ಲಭ್ಯವಿರುವುದೇ ಇಲ್ಲ. ಅದೇನಿದ್ದರೂ ಅವರವರ ಮಟ್ಟಿಗೆ ತುಂಬ ಪ್ರಿಯ ಸಂಗತಿ. ಆದರೆ ಎಷ್ಟೆ ಆತ್ಮೀಯರಿಗೆ ಅದೊಂದು ಸರಿಯಲ್ಲ ಎನ್ನುವ ವಿಷಯವೇ ಆಗುತ್ತದೆ ಹೊರತಾಗಿ ಅದರಿಂದ ಇನ್ನಾವ ಉತ್ಪನ್ನಗಳೂ ಹುಟ್ಟುವುದೇ ಇಲ್ಲ.
ಅಂತಹದರಲ್ಲಿ ನೀನು ಅದನ್ನು ಸಂಬಂಧ ಎನ್ನುತ್ತಿಯೋ, ಪ್ರೀತಿನೋ ಏನೋ ಒಂದಿರಲಿ. ಆದರೆ ಮದುವೆ ಅಂತಾಗಿ ಏನೆಲ್ಲಾ ಕನಸಿಸುವ ಮೊದಲೇ ಪ್ರತಿ ಪೈಸೆಗೂ, ಕೊನೆಗೆ ಪೇಪರ್ ಓದುವುದಕ್ಕೂ, ಎಲ್ಲಿಯಾದರೂ ಹೋಗುವುದಕ್ಕೂ, ಸ್ನೇಹಿತೆಯೊಂದಿಗೆ ಮಾತಾಡುವುದಕ್ಕೂ, ಯಾರದ್ದೋ ಮಿಸ್‍ಕಾಲ್ ಅಂದರೆ ಯಾರದ್ದು ಎನ್ನುವದಕ್ಕೆ ಜವಾಬು ಕೊಡುವ ಹೊತ್ತಿನಲ್ಲಾಗುವ ಸಣ್ಣ ಎಂಬ್ರಾಸಿಂಗು, ನನ್ನದೇ ಸ್ವಾತಂತ್ರ್ಯ ಇರಿಸಿಕೊಳ್ಳಲಾಗದ ದಾಂಪತ್ಯಗಳು, ಇಷ್ಟೆಲ್ಲಾ ಓದಿನ, ಜಗತ್ತು ಉದ್ಧಾರ ಮಾಡುತ್ತಿರುವ ಹೊಸ ಆಧುನಿಕ ಬದುಕಿನಲ್ಲೂ ನಡೆಯುತ್ತಿರುವಾಗ ನಾನು ಮತ್ತೊಮ್ಮೆ ಮದುವೆ ಎನ್ನುವ ಬಾಣಲೆಗೆ ಬೀಳಬೇಕಿತ್ತಾ..? ಇದ್ದಾರು ಅಂತಹ ಸೆಂಟಿಮೆಂಟುಗಳು. ಆದರೆ ಗೊತ್ತಿದ್ದೂ ಗೊತ್ತಿದ್ದೂ ಮತ್ತೆ ಅದನ್ನೇ ಮಾಡಿಕೊಳ್ಳುವವಳು ನಾನಲ್ಲ. ಇನ್ನು ಪುರುಷರು ಏನು ಬೇಕಾದರೂ ಮಾಡಿಕೊಂಡಿರುವಾಗ, ಅಂತಹದ್ದೊಂದಕ್ಕೆ ಯಾವ ಅಬ್ಜಕ್ಷನ್ನೂ ಇಲ್ಲದಿರುವಾಗ ನನ್ನ ವೈಯಕ್ತಿಕ ಸುಖ ದುಖ:ಗಳ ಪರಿಚಾರಿಕೆಯ ಉಸಾಬರಿ ಬೇಕಾ..? ಹೌದು ಅವನೊಂದಿಗೆ ನನಗೆ ಸ್ನೇಹವಿದೆ ವಿಶ್ವಾಸ ಇದೆ. ಆದರೆ ನನ್ನನ್ನು ಮಾತ್ರ ಕುಲಟೆ ಎಂಬಂತೆ ನೋಡುವ ಜನರಿಗೆ ಸಿಕ್ಕಿದರೆ ಒಂದು ಕೈ ನನಗೂ ಎನ್ನುವವರಿಗೇನೂ ಬರವಿಲ್ಲ ಮಾರಾಯ. ಅಲ್ಟಿಮೇಟ್ಲಿ ಹೆಚ್ಚಿನ ಮಾತಾಡುವ ಗಂಡಸು/ಹೆಂಗಸರ ಇಬ್ಬರದೂ ಅಂತರಾಳದ ವರ್ಷನ್ನು ಒಂದೇ. ಏನೆಂದರೆ ತಾವು ಬದುಕಲಾಗದ ಸ್ವಂತಂತ್ರ ಬದುಕಿನ ಫ್ಯಾಂಟಸ್ಸಿ ಬದುಕು ಆಕೆ ಕಟ್ಟಿಕೊಳ್ಳುತ್ತಿದ್ದಾಳೆ, ಬದುಕುತ್ತಿದ್ದಾಳೆ ಎನ್ನುವುದೆ ಇವರೆಲ್ಲರಿಗೆ ಪರಮಘಾತಕ ಅಷ್ಟೆ ಹೊರತಾಗಿ ಯಾರಿಗೂ ಮನಸ್ಸಿನಲ್ಲಿ ಆಸೆ ಗೂಡು ಕಟ್ಟಿಕೊಂಡಿಲ್ಲವೆಂದಲ್ಲ. ಅಷ್ಟೆ.."
ಆಕೆಯ ಬದುಕಿಗೆ ಆಕೆಯೇ ಜವಾಬುದಾರಳು. ತೀರ ಸ್ಪಷ್ಟ ನಡೆಯ ಶೋಭಳ ಸ್ಥಿತಿಗೆ ಡಿಬೇಟ್ ಮಾಡುವಂತಹದ್ದೇನೂ ಇರಲಿಲ್ಲ. ಆಕೆ ಮಾನಸಿಕವಾಗಿ ಅನುಭವಿಸಿರಬಹುದಾದ ಹಿಂಸೆ ಆಕೆಯ ಹೊರತು ಇನ್ನಾರಿಗೂ ಗೊತ್ತಾಗಲಿಕ್ಕೆ ಸಾಧ್ಯವಿಲ್ಲ. ಅವಕಾಶ ಸಿಕ್ಕಿದಾಗ ಸ್ವತಂತ್ರವಾಗಿ ಚೆಂದದ ಬದುಕು ಕಟ್ಟಿಕೊಳ್ಳುತ್ತಿರುವಾಗ ಅದನ್ನು ಆಡಿಕೊಳ್ಳುವ, ಕಮೆಂಟು ಮಾಡುವ ಹಕ್ಕಾದರೂ ನಮಗೆ ಎಲ್ಲಿರುತ್ತದೆ..? ಬೀದಿಗೆ ಬಂದ ಬದುಕಿಗೊ ಈಗ ಆಕೆ ಕಾಲೂರಿ ನಿಂತಿರುವ ಬದುಕಿಗೆ ಸ್ವತ: ರಿಸ್ಕು ತೆಗೆದುಕೊಂಡವಳನ್ನು ನಾವು ಯಾಕಾದರೂ ಆಡಿಕೊಳ್ಳಬೇಕು.
ಕಾರಣ ಶೋಭಾ ಅಂತಹದ್ದೊಂದು ಗಂಡನ ಮರಣದ ಆಕಸ್ಮಿಕದ ಪ್ರಪಾತದಿಂದೆದ್ದು ನಿಂತ ಪರಿಯಿದೆಯಲ್ಲ ಅದರ ಕತೆಯೇ ಬೇರೆ. ಸರಹೊತ್ತಿಗೆ ನೆಗೆದುಬಿದ್ದ ಗಂಡ, ಪೂರ್ತಿ ಸಾಲ ಮತ್ತು ಎದುರಿಗೆ ಮೈ ಚೆಲ್ಲಿಕೊಂಡು ಮಲಗಿದ್ದ ಖಾಲಿ ಬದುಕು ಎರಡನ್ನೂ ಪುಷ್ಕಳವಾಗಿಯೇ ಬಿಟ್ಟು ಹೋಗಿದ್ದ. ಆದರೆ ಅದಾವುದಕ್ಕೂ ಜಗ್ಗದೆ ಗೃಹಕೈಗಾರಿಯ ಅಂಗವಾಗಿ ಹಪ್ಪಳ ಸಂಡಿಗೆ ಪೂರೈಸುವುದಕ್ಕೆ ಕೈ ಹಾಕಿ ಗೆದ್ದಿದ್ದಳು. ಕೆಲಸಕ್ಕೂ ಪ್ರೀತಿಗೂ ಬಿದ್ದರೆ ಹೆಣ್ಣನ್ನು ಸಂಭಾಳಿಸುವುದು ಕಷ್ಟ ಎನ್ನುವುದಕ್ಕೆ ಆಕೆ ಉದಾ.ಯಾಗಿದ್ದಳು. ಬದುಕನ್ನು ನೋಡುನೋಡುವಷ್ಟರಲ್ಲಿ ಕಟ್ಟಿಕೊಂಡಿದ್ದ ಆಕೆ ಈಗ ಯಾರೊಂದಿಗೋ ಇದ್ದಾಳೆನ್ನುವುದನ್ನು ಆಕೆಯ ಸ್ಥಿತಿಗೆ ಜೊತೆಯಾಗದ ನಾವು ಆಡಿಕೊಳ್ಳಲು ಯೋಗ್ಯರಾ..?
ಅಸಲಿಗೆ ಇವತ್ತು ಅಫೇರು ಎನ್ನುವುದೋ ಅಥವಾ ಒಂದು ಸಾಂಗತ್ಯ ಎನ್ನುವುದನ್ನು ಹೆಚ್ಚಿನಂಶ ಪ್ರತಿಯೊಬ್ಬರು ಒಳಗೊಳಗೇ ಅಂಗಿಕರಿಸುವ ಆದರೆ ಎದುರಾ ಎದುರು ಬಂದಾಗ ಮಾತ್ರ ಮುಖವಾಡ ತೊಟ್ಟು ತಾವು ಸಭ್ಯಸ್ಥರಂತೆ ನಿಲ್ಲುವ ಮನಸ್ಥಿತಿಯವರಾಗಿರುವುದೇ ಪ್ರಸ್ತುತ ಸಮಾಜದ ಅತಿ ದೊಡ್ಡ ಹಾದರತನ. ಕಾರಣ ಬದಲಾಗುವ ಮತ್ತು ಬದಲಾಗಿದ್ದ ಪರಿಸ್ಥಿತ್ಯಲಿ ಆಕೆಯ ಜಾಗದಲ್ಲಿ ಇನ್ಯಾರಾದರೂ ಗಂಡಸಿದ್ದಿದ್ದರೆ ಇದ್ದ ಸಂಸಾರ ಆಚೆಗಿಟ್ಟು ಮೊದಲು ಇನ್ನೊಬ್ಬಳನ್ನು ಮದುವೆ ಅಗುವುದೋ ಇನ್ನೊಂದೊ ಮಾಡಿಕೊಳ್ಳುತ್ತಿದ್ದ ಮತ್ತು ಯಾರು ಹೇಗೆಲ್ಲಾ ಸಂಸಾರ ಸುಧಾರಿಸುತ್ತಾರೆ ಎನ್ನುವುದು ನಮ್ಮ ಕಣ್ಣುಗಳೆದುರಿಗೆ ಸಾವಿರ ಇದ್ದರೂ ತನಗೆ ತನ್ನ ಬದುಕಿಗೆ ಏನು ಬೇಕೋ ಅದನ್ನು ಮಾಡಿಕೊಂಡು ಮಕ್ಕಳನ್ನು, ಪರಿಸ್ಥಿಯನ್ನು ಸುಧಾರಿಸಿದ ಆಕೆಗೆ ಕಮೆಂಟು ಮಾಡಲು ನಾವ್ಯಾರು...? ಎಲ್ಲಾ ಅವರವರಿಗೆ ಹಾಸಿ ಹೊದೆಯುವಷ್ಟಿದ್ದರೂ ಪರರ ಚಾದರಿನೊಳಾಗೆ ಇಣುಕುವುದನ್ನು ಬಿಡದ ಕಾರಣವೆ ಬದುಕು ಕಾಲೊರೆಸುವ ಬಟ್ಟೆಯಾಗುತ್ತಿರುವುದು. ಇಲ್ಲದಿದ್ದರೆ ಇದನ್ನೆಲಾ ನಾನು ಪಿಸುನುಡಿಯುವ ಅಗತ್ಯವಾದರೂ ಏನಿರುತ್ತೆ..?

Sunday, July 16, 2017

ಸಾಂಗತ್ಯವಿಲ್ಲದ ಬದುಕಿಗೆ ಬಣ್ಣಗಳೆಲ್ಲಿಂದ ಬರಬೇಕು...?


 ಸರಿಯಾಗಿ ಮೂರೇ ವರ್ಷದ ಹಿಂದೆ ಗಂಡನೆಂಬ ಬಾಟಲಿಬಾಯ್‍ನನ್ನು ಕಳೆದುಕೊಂಡು ಕುರ್ಚಿ ತುದಿಗೆ ಪಿಳಿಪಿಳಿ ಮಾಡುತ್ತಾ ಕೂತಿದ್ದವಳು ಇವಳೇನಾ ಎನ್ನುವಂತೆ ಮಾತಾಡುತ್ತಿದ್ದಾಳೆ ಶೋಭಾ. ಆವತ್ತು ಗಂಡನೆಂಬ ಮನುಷ್ಯಾಕೃತಿಯಲ್ಲಿದ್ದ ಜೀವಂತ ಕೃತಿ ನೆಗೆದು ಬಿದ್ದಾಗ ಜಗತ್ತೇ ಆಕೆಯ ತಲೆ ಮೇಲೆ ಬಿದ್ದಿತ್ತು. ಇವತ್ತು ಆಕೆ ಒಂದು ಕಾಲು ಮೇಲೆತ್ತಿ ಯಾರ ತಲೆ ಮೇಲಿಡಲಿ ಎನ್ನುವಷ್ಟು ಗಟ್ಟಿಯಾಗಿದ್ದಾಳೆ. ಹೌದು ಇವತ್ತಿಗೂ ಮದುವೆ ಅಂತಾಗಿಬಿಟ್ಟರೆ ಆ ಗಂಡನೆಂಬುವನು ಹೇಗಿದ್ದರೂ ಅವನಿಗೆ ಗಂಡ ಎಂಬ ಪಟ್ಟದೊಂದಿಗೆ ಸಾವರಿಸಿಕೊಂಡು ಹೋಗುವ ಸಂಸಾರಗಳು ನಮ್ಮಲ್ಲಿ ಲೆಕ್ಕದ ಹೊರಗಿವೆ.

ಅದೇನೆ ಇರಲಿ ಮದುವೆ ಆಗಿದೆ ಮಕ್ಕಳೂ ಆಗಿವೆ ಅಂತಾದ ಮೇಲೆ ಸುಮ್ನೆ ತಿಂದಾದರೂ ಬಿದ್ದಿರಲಿ ಬಿಡು ಎನ್ನುವದಿದ್ದರೂ ಕೈಲಾಗದಂತೆ ಎನೇ ಮಾಡದೆ ಸುಮ್ಮನಿದ್ದರೂ, ಅಪೂಟು ಸೋಮಾರಿ ಎಲ್ಲವನ್ನೂ ಕೈಗೆ ಹಿಡಿಸಿಯೂ ಬುಡ ಮಾತ್ರ ಸ್ವಂತ ತೊಳೆದುಕೊಳ್ಳುವ ಕ್ಷಮತೆಯ, ಆಗೀಗ ಕುಡಿದು ಗಲಾಟೆ ಮಾಡುವವನಿದ್ದರೂ, ಸುಖಾಸುಮ್ಮನೆ ಬಡಿದೆದ್ದು ಹೋಗುವವನಿದ್ದರೂ, ಕೆಲವೊಮ್ಮೆ ನಾಪತ್ತೆ ಆಗಿ ಇನ್ಯಾವಾಗಲೋ ಪ್ರತ್ಯಕ್ಷನಾಗುವವನಿದ್ದರೂ, ಏಷ್ಟೊ ಸರಿ ಮನೆಯದೆ ದುಡ್ಡು ಕದ್ದು ಕೆಲವೊಮ್ಮೆ ಹೆಂಡತಿಯ ಹೆಸರು ಹೇಳಿ ಇದ್ದಬದ್ದವರಿಂದ ದುಡ್ಡು ದುಗ್ಗಾಣಿ ಎತ್ತಿಕೊಂಡು, ಸಂಬಂಧಿಕರ ಸ್ನೇಹಿತರ ಹತ್ತಿರ ಸಾಲ ಸೋಲ ಮಾಡಿಕೊಂಡು, ಯಾವ ದಂಧೆಯೂ ಬರಕತ್ತಾಗದೆ, ಮಾತೆತ್ತಿದ್ದರೆ ಅಟೋದವನು ಇವತ್ತು ಐದು ರೂಪಾಯ್ ಕಡಿಮೆ ಅಂದರೆ ಬರಲ್ಲ, ನಾನು ಯಾವ ಲೆಕ್ಕದಲ್ಲಿ ಕಮ್ಮಿ ಎಂಬ ಧಿಮಾಕಿಗೇನೂ ಕಮ್ಮಿ ಇರದ, ಅದರೆ ಎಂಟಾಣಿ ದುಡಿಯಲೊಲ್ಲದ ಅಪೂಟು ಸೋಮಾರಿ ಅದರೆ ಊರಿಗೆಲ್ಲಾ ಹಂಚುವಷ್ಟು ಸೊಕ್ಕಿನ ಮಾತುಗಳ ಮತ್ತು ಜಂಭದ ಹೀಗೆ ಹಲವು ತಗಾದೆಗಳ ಅಪಕ್ವ ಗಂಡಸು, ಗಂಡ ಅಂತಾದ ಮೇಲೆ ಇರಬಹುದಾದ ಎಲ್ಲಾ ರೂಪದಾಚೆಗೊ ಅವನು ಗಂಡನಾಗೆ ಇರುತ್ತಾನೆ.

ಅದರೆ ಅದೆಲ್ಲಾ ಉಸಾಬರಿ, ಜಗಳ, ಮುನಿಸು, ಕೋಪ, ಸರಸ, ಕುಡಿತ, ಬಡಿತ, ಇವಳದ್ದೂ ಇದ್ದೇ ಇರುವ ಕಿರಿಕ್ರಿರಿತನದ ಮಾತುಗಳು, ಅದಕ್ಕವನ ಮತ್ತೆ ಪಿಸಣಾರಿತನ, ಊರಿಗಿಲ್ಲದ ಬಿಂಕಕ್ಕೇನೂ ಕಡಿಮೆ ಇಲ್ಲದ, ಏನೂ ಮಾಡಲೊಲ್ಲನಾದರೂ ಯಾರಾದರೂ ಬಂದಾಗ ಅತ್ಯಂತ ಸುಭಗನಂತೆ ಮಾತಾಡಿ ಅಯ್ಯೋ ಇವರ ಯಜಮಾನ ಎಷ್ಟು ಆದರ ಸದರ ಮಾಡುತ್ತಾರೆ ಎನ್ನಿಸಿಕೊಳ್ಳುವ, ಮನೇಲಿ ಕಾಫಿ ಪುಡಿ ಇದಿಯಾ ಇಲ್ವಾ ನೋಡದೆ " ಏಯ್ ಇವಳೆ ನೆಸ್ ಕಫೆ ಮಾಡೆ " ಎಂದು ಕೂಗಿಕೊಂಡು ಆರ್ಡರ್ ಮಾಡುವ, ಅವರೊಂದಿಗೆ ತಾನೂ ಲಯಬದ್ಧವಾಗಿ ಕೂತು ವರಚ್ಚಾಗಿ ಕಾಫಿ ಹೀರುವ ಬಂದ ಅಭ್ಯಾಗತರು ಅದೇನು ಒಳ್ಳೆಯವರು ಎನ್ನಬೇಕು ಹಾಗೆ ನಾಜೂಕಿನ ಮಾತಾಡುವ, (ಈ ಯಜಮಾನ ಎನ್ನುವ ಪದ ಬಳಕೆಗೆ ನನ್ನ ವಿರೋಧವಿದೆ. ಗಂಡ ಗಂಡ ಅಷ್ಟೇ.. ಹೆಂಡತಿ ಕೂಡಾ ಹೆಂಡತಿ ಅಷ್ಟೆ. ಅದ್ಯಾಕೆ ಯಜಮಾನ ಯಜಮಾನತಿ ಆಗುತ್ತಾರೋ ಅದೇನು ಒಬ್ಬರಿಗೊಬ್ಬರು ದುಡ್ಡು ದುಗ್ಗಾಣಿ ಪೇಮೆಂಟು ಮಾಡುತ್ತಾರಾ..? ಇದು ನನ್ನ ವೈಯಕ್ತಿಕ ಮತ್ತು ನನಗೀಗಲೂ ಅರ್ಥವಾಗದ ವಿಷಯ) ಎಷ್ಟೂ ದುಡಿದರೂ ಒಯ್ದು ಗಡಂಗಿಗೂ ತನ್ನ ಸಿನೇಮಾಕ್ಕೂ ಖರ್ಚು ಮಾಡಿಕೊಂಡು ಉಳಿದದ್ದು ಮಾತ್ರ ದಾಕ್ಷಿಣ್ಯಕ್ಕೆ ಮನೆಗೆ ಖರ್ಚು ಮಾಡುವ ಹೀಗೆ ತರಹೇವಾರಿ ಗಂಡಸರು ಗಂಡ ಅಂತಾದ ಮೇಲೆ ಗಂಡನೇ ಆಗಿ ಹೋಗಿರುತ್ತಾನೆ ಹೊರತಾಗಿ ಬೇರಾವ ರೀತಿಯಲ್ಲೂ ಬದುಕಿನ ಅಂಗಳದಲ್ಲಿ ಬದಲಾಗುವುದೇ ಇಲ್ಲ. ಅದು ನಮ್ಮ ಅನುಭವದ ಜೀವನ ರೀತಿಯೋ ಇನ್ನೇನೋ ಒಟ್ಟಾರೆ ಹೆಣ್ಣು ಮಕ್ಕಳೂ ಅದನ್ನೂ ಹೆಚ್ಚು ಕಡಿಮೆ ಹಾಗೆಯೇ ಸ್ವೀಕರಿಸಿ ಬಿಟ್ಟಿರುತ್ತಾರೆ.

ಈಗಿನ ಹುಡುಗಿಯರನ್ನು ಈ ಕೆಟಗರಿಗೆ ನಾನು ಸೇರಿಸಿಲ್ಲ. ಕಾರಣ ಮದುವೆ ಆದ ಮೂರೇ ತಿಂಗಳಿಗೆ ಕಡ್ಡಿಹಿಡಿ ಎತ್ತಿಕೊಂಡು ನಿಲ್ಲುವ ಹುಡುಗಿಯರೂ ಈಗ ಸಹಜವಾಗಿದ್ದಾರೆ ಮತ್ತು ಬದುಕಿಗೆ ಅನುಭವಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವವರೂ ಇದ್ದಾರೆ. ಅದರೆ ಕೆಲವರು ಮಾತ್ರ ಈಗಲೂ ಮನಸ್ಸಿನ ಕೈಗೆ ವಾಸ್ತವವನ್ನು ಕೊಟ್ಟು, ಬಂದಂತೆ ಸ್ವೀಕರಿಸದೆ ಬದುಕು ತಾವಾಗೇ ಹಾಳು ಮಾಡಿಕೊಳ್ಳುವುದೂ ಇದೆ. ಹಾಗಾಗಿ ಶೋಭಾಳ ಎನ್ನುವ ಮಿಡ್ಲಕ್ಲಾಸ್ ಬದುಕಿನ ಗಂಡ ಗಂಡನಾಗಿದ್ದೂ ಹೊಸದೇನಿರಲಿಲ್ಲ. ಅದರೆ ಏನೆಲ್ಲಾ ಅಗದಿದ್ದವನು ಸತ್ತಾಗ ಮಾತ್ರ ಅಯ್ಯಯ್ಯೋ ಎನ್ನುವುದಿದೆಯಲ್ಲ ಅದು ಆ ಬಾಂಧವ್ಯವನ್ನು ತೋರಿಸುತ್ತಿತ್ತೇನೋ. ಆದರೆ ಆಕೆ ಅಷ್ಟೇ ಬೇಗ ಚೇತರಿಸಿಕೊಂಡು ಬದುಕು ಕಟ್ಟಿಕೊಂಡಿದ್ದಳು. ಜೊತೆಗೆ ಮಗಳು ಅಮ್ಮನ ಬಾಲಂಗೋಚಿ ಅಧ್ಬುತವಾಗಿ ಓದುತ್ತಾ, ದಿನದ ಉಳಿದ ಹೊತ್ತಲ್ಲಿ ಹಪ್ಪಳ ಒತ್ತುತ್ತಾಳೆ ಸಾಲುಸಾಲಾಗಿ. (ಅಂದಹಾಗೆ ಕೆಲವರು ನನ್ನೊಂದಿಗೆ ಇಂತಹ ಮನೆಯ ಕೆಲಸಗಳು ಈಗಲೂ ನಡೆಯುತ್ತವಾ ಎಂದು ಕೇಳಿದ್ದಿದೆ. ನಿಜ ಹೇಳ ಬೇಕೆಂದರೆ ಹೀಗೆ ಮನೆಯ ಹಪ್ಪಳ,ಉಪ್ಪಿನಕಾಯಿ, ಚಟ್ನಿಪುಡಿ ಮಾಡಲು ಎಷ್ಟು ಜನರಿದ್ದರೂ ಇವತ್ತು ಕಮ್ಮಿ ಎನ್ನುವ ಕನಿಷ್ಟ ಆರೆಂಟು ಸಂಸ್ಥೆಗಳು ನನಗೇ ಗೊತ್ತು. ಆದರೆ ಜನರಿಗೆ ಸುಲಭದ ದುಡ್ಡು ಮಾಡಬೇಕಿರುವುದರಿಂದ ಮತ್ತು ಸರಕಾರದ ಪುಕ್ಸಟ್ಟೆ ಅಕ್ಕಿ, ಎಣ್ಣೆ ಎಂದು ಸೋಮಾರಿಗಳಾಗಿಸಿದ ಫಲವಾಗಿ ಯಾವುದಕ್ಕೂ ಮೈಮುರಿಯಲು ಜನರಿವತ್ತು ತಯಾರಿಲ್ಲ. ಹೊರತಾಗಿ ಇಂತಹ ಹೋಮ್‍ಮೇಡ್‍ಗಳಿಗೆ ಅದ್ಯಾವ ಪರಿಯಲ್ಲಿ ಬೇಡಿಕೆ ಇದೆಯೆಂದರೆ ಸರಾಸರಿ ಸಾವಿರ ಕೂಲಿಗಳು ಪ್ರತಿ ದಿನದ ಉತ್ಪನ್ನಕ್ಕೆ ಇದ್ದರೂ ಸಾಕಾಗಲಿಕ್ಕಿಲ್ಲ)

ತೀವ್ರವಾಗಿ ಸಾಮಾಜಿಕ ಬದುಕಿನ ಶ್ರೀಮಂತಿಕೆ ಮತ್ತು ಬಡತನ ರೇಖೆ ದಪ್ಪವಾಗುತ್ತಲೆ ಸುಲಭಕ್ಕೆ ಜೀವನದಲ್ಲಿ ದುಡ್ಡು ಕೈಗೆ ಹತ್ತುವುದಿಲ್ಲ. ಅದೇನಿದ್ದರೂ ಇದ್ದಲ್ಲೇ ಬೆಳೆಯುವ ಸಂಭ್ರಮವೇ ಜಾಸ್ತಿ. ಹೀಗಿದ್ದಾಗ ಬಂದಿದ್ದರಲ್ಲಿ ಅರ್ಧ ಕುಡಿದೇ ಹಾಳು ಮಾಡುತ್ತೇನೆ ಎಂದು ನಿಂತ ಮನೆಯ ಯಜಮಾನನನ್ನು ನಂಬಿ ಉದ್ಧಾರವಾದ ಕುಟುಂಬಗಳಿಲ್ಲವೇ ಇಲ್ಲ ಎಂದರೂ ಸರಿನೇ. ಆವತ್ತು ಆಗಿದ್ದು ಕೂಡಾ ಹಾಗೇನೆ. ಕರೆಂಟು ಕಂಪೆನಿಯಲ್ಲಿ ಕೆಲಸಕ್ಕಿದ್ದಾನೆ ಎಂದು ಬಂದ ಸಂಬಂಧಕ್ಕೆ ಹುಡುಗಿಯನ್ನು ಕೊಡದಿರಲು ಯಾವ ಕಾರಣವೂ ಇರಲಿಲ್ಲ. ದುಡ್ಡು ಬರುತ್ತದಂತಾದರೆ ಕೋತಿಯೊಂದಿಗೂ ಮದುವೆ ಆಗೋಕೆ ರೆಡಿ ಇರುವ ಹುಡುಗಿಯರೂ, ದುಡ್ಡಿದ್ದರೆ ಸಾಕು ಸಂಸಾರ ಸಂಭ್ರಮದಲ್ಲಿರುತ್ತದೆ ಎಂದುಕೊಳ್ಳುವ ಪಾಲಕರದ್ದು ಈಗಲೂ ಕಮ್ಮಿ ಇಲ್ಲ. ಆಗಲೂ ಇರಲಿಲ್ಲ. ಹಾಗಾಗಿ ಶೋಭಾ ಏನೆಲ್ಲಾ ಘಟಿಸುವ ಹೊತ್ತಿಗೆ ಒಮ್ಮೆ ಕುಸಿದುಹೋಗಿದ್ದಳಾದರೂ ಗಂಡನೆನ್ನುವ ಪ್ರಾಣಿ ನೆಗೆದು ಬಿದ್ದ ಮೂರ್ನಾಲ್ಕು ವರ್ಷದಲ್ಲೇ ಎಲ್ಲಾ ವ್ಯವಸ್ಥಿತ ಮಾಡಿಕೊಳ್ಳುವ ಹೊತ್ತಿಗೆ ಹೊಸತೊಂದು ಸಂಬಂಧಕ್ಕೂ ಈಡಾಗಿದ್ದಳು. ಬದುಕು ಹೊಸ ದಾರಿ ಹೊಸ ತಿರುವು ತೆಗೆದುಕೊಂಡಿತ್ತು.

"...ಅಯ್ಯೋ ಹೀಗಾಯ್ತಲ್ಲ ಎನ್ನುವುದಕ್ಕಿಂತ ಬದುಕು ಒಂಥರಾ ಬದಲಾಗಿದೆ, ನಾನೂ ಹೊಸದಾಗಿ ಎಲ್ಲವನ್ನೂ ಅರಂಭಿಸಿದರೂ ಚಾಲೆಂಜಿಂಗ್ ಆಗಿ ಎದುರಿಸಿದ್ದೇನೆ.. ಹಾಗೆ ಅವನೊಂದಿಗೇ ಇದ್ದರೆ ಯಾವತ್ತೂ ಯಾವ ಬದುಕಿಗೂ ಹೊಸ ಧಡಾಪಡಿಗೂ ತೆರೆದುಕೊಳ್ತಾನೆ ಇರಲಿಲ್ವೇನೋ. ಅದೊಂಥರಾ ಗೊತ್ತಿದ್ದೂ ಉಸಿರು ಗಟ್ಟಿದಂಗಿರ್ತದೆ. ಜನ  ಎನಂದುಕೊಳ್ತಾರೆ ಬಿಟ್ಟಾಕು. ಆದರೆ ನಾನು ಯಾರ ಜೊತೆಗೋ ರಿಲೇಶನ್‍ನಲ್ಲಿದ್ದೇನೆ ಅನ್ನೋದು ಉಳಿದವರಿಗೆ ಏನೋ ಅನ್ನಿಸಬಹುದು ಅದರೆ.." ಎಂದು ಮಾತು ನಿಲ್ಲಿಸಿದವಳ ಕತೆ ಮುಂದಿನ ವಾರಕ್ಕಿರಲಿ. ಶೋಭಾ ಹೇಳಿದುದರಲ್ಲಿ ಎರಡು ಮಾತಿರಲಿಲ್ಲ. ಅಷ್ಟಕ್ಕೂ ಸಾಂಗತ್ಯವಿಲ್ಲದ ಬದುಕಿನಲ್ಲಿ ಬಣ್ಣಗಳ ವಿಜೃಂಭಣೆಯಾದರೂ ಎಲ್ಲಿಂದ ಬಂದೀತು..? ಬದುಕಿಗೆ ಒಲವಿಲ್ಲದೆ, ಪ್ರೇಮ, ಕಾಮವಿಲ್ಲದೆರಂಗಿನ ಹರವು ರೂಪ ಪಡೆಯುವುದಾದರೂ ಹೇಗೆ..? ಉಳಿದದ್ದು ಮುಂದಿನ ವಾರಕ್ಕೆ..

Monday, July 10, 2017


ಬಹಿರಂಗವಾಗಿ ಬೆತ್ತಲಾಗುವುದೂ ಒಂದು ಸಂಭ್ರಮವಾ..?

ನಾನು ಸೂರ್ಯ.. ಹಗಲೇನೂ ರಾತ್ರಿನೂ ಬೆಳಕು ಬೀರುವವನೇ ಬೇಕಿದ್ರೆ ಇರಿ ಇಲ್ಲಾ ರೈಟ್ ಹೇಳಿ ಎಂದು ಆ ಸೂರ್ಯ ಉರಿಯುತ್ತ ನಿಲ್ಲತೊಡಗಿದರೆ ಏನು ಮಾಡಲಾದೀತು...? ಆದರೆ ಯಾವಾಗ ಕತ್ತಲಾಗಬೇಕು ಮತ್ತು ಯಾವ ಬೆತ್ತಲಾಗಬೇಕು ಎನ್ನುವುದು ಅರಿವು ನಮಗಿರದಿದ್ದರೆ ಬದುಕಿನ ಸಂಭ್ರಮದ ಸ್ವಾರಸ್ಯ ಬಹಿರಂಗವಾಗುತ್ತಾ ಕೆಲವೇ ಸಮಯದಲ್ಲಿ ನಾವು ರಸಹೀನ ಬದುಕಿನ ಪಳಯುಳಿಕೆಗಳಾಗಿಬಿಡುತ್ತೇವೆ. ನೋಡಿ ಬೇಕಿದ್ರೆ ನೀವು ಸೂರ್ಯ ಇಲ್ಲದಿದ್ದರೂ ಇನ್ನೊಂದು ದೀಪ ಉರಿಸಿ ಅಥವಾ ಇನ್ನೇನೋ ಮಾಡಿ ಒಂದಷ್ಟು ಬೆಳಕು ಪ್ರಜ್ವಲಿಸಬಹುದು ಆದರೆ ನೆನಪಿರಲಿ ಅಪೂಟು ಕತ್ತಲೆಯನ್ನು ನಾವು ಸೃಷ್ಠಿಸಲಾರೆವು. ಈಗಾಗಲೇ ಅತಿ ಹೆಚ್ಚು ಆಕರ್ಷಣೆ ಮತ್ತು ಆಸಕ್ತಿ ಕಳೆದುಕೊಳ್ಳುತ್ತಿರುವ, ಕಳೆದುಕೊಂಡಿರುವ ಹೊಸ ಹೊಸತಿನ ಬದುಕುಗಳಿಗೆ ಕಾರಣ ಬೀಡುಬೀಸಾಗಿ ಪ್ರತಿಯೊಂದನ್ನು ಬಹಿರಂಗ ಬದುಕಿಗೆ ತೆರೆದುಕೊಂಡಿದ್ದೇ ಕಾರಣ ಎನ್ನುತಾರೆ ತಜ್ಞರು.
ಇತ್ತಿಚೆಗೆ ಅತಿ ಹೆಚ್ಚು ಪ್ರದರ್ಶನವೇ ತಮ್ಮ ಕ್ವಾಲಿಟಿ ಎಂದುಕೊಂಡಿರುವ ಹೆಣ್ಣುಮಕ್ಕಳನ್ನು ಒಂದು ಕೇಳಬೇಕೆನ್ನಿಸುತ್ತದೆ. ಹೀಗೆ ಬಿಚ್ಚುತ್ತಾ ಖಾಸಗಿತನವನ್ನು ಪ್ರದರ್ಶನಕ್ಕಿಡುವುದರಿಂದ ನಿಮ್ಮನ್ನು ನೋಡಿ ಅಹಾ... ಎನ್ನುವವರಿಗೇನೂ ಕಡಿಮೆ ಇರದಿರಬಹುದು. ಅದರೆ ಯಾವುದನ್ನು ಬೆತ್ತಲುಗೊಳಿಸಬೇಕು, ಬಾರದು ಎನ್ನುವ ಅವಗಾಹನೆ ಮತ್ತು ಎಷ್ಟು ಎನ್ನುವುದರ ಮಟ್ಟ ನಮ್ಮ ಕೈಲಿರಬೇಕು. ಇದನ್ನು ಹೇಳಲು ಕಾರಣ, ಒಂದು ಕಾಲದಲ್ಲಿ ದೇಹದ ಯಾವ ಭಾಗವನ್ನೂ ಸ್ವಂತ ಗಂಡನೆದುರಿಗೇ ಬೆತ್ತಲಾಗೋಕೆ ನಾಚಿಕೊಳ್ಳುತ್ತಿದ್ದ, ಆ ನಾಚಿಕೆಯ ಮೂಲಕವೇ ಒಂದು ಸುಮಧುರ ಬಾಂಧವ್ಯಕ್ಕೆ ಸರಸದ ತಿರುಗಣಿಗೆ ಹೊರಳಿಕೊಳ್ಳುತ್ತಿದ್ದ ಸಹ್ಯ ದೇಹ ಭಾಷೆಯ ಬಳಕೆಯ ಬದಲಿಗೆ, ಆಕೆ ಇವತ್ತು ತೊಡೆ ಸಂದಿನ ಮೇಲೆ, ಎದೆಯ ತಿರುವಿನಲ್ಲಿ, ಹೊಕ್ಕಳ ಗುಳಿಯೊಳಗೆ, ಹಿಂಭಾಗದ ಉಬ್ಬಿನ ಇಳಿಜಾರನ್ನು ಒಡ್ಡಿ ಅಪರಿಚಿತನಿಂದ ತೀಡಿ ತಿದ್ದಿ ಟ್ಯಾಟು ಬರೆಸಿಕೊಂಡು, ಫೇಸ್‍ಬುಕ್‍ಗೆ ಅಪೆÇ್ಲೀಡು ಮಾಡುತ್ತಾಳೆ. ಇದ್ಯಾವ ಪರಿಯ ಮೆರವಣಿಗೆ ನನಗರ್ಥವಾಗುತ್ತಿಲ್ಲ. (ನಾವೆಲ್ಲಿ ಬರೆಸಿಕೊಂಡ್ರೆ ನಿಮಗೇನು ಎನ್ನಬಹುದು. ಪ್ಲೀಸ್ ಸ್ವಲ್ಪ ನಾರ್ಮಲ್ ಆಗಿ ಮಾತಾಡೊಣ) ಇದಿವತ್ತು ನಮ್ಮದೆಲ್ಲವನ್ನೂ ಬಹಿರಂಗಗೊಳಿಸಿ ಬದುಕನ್ನು ರಂಗಾಗಿಸಿಕೊಳುತ್ತಿದ್ದೇವೆ ಎನ್ನುವ ಭ್ರಮಾಧೀನ ಬದುಕಿನ ಪರಮಾವಧಿಗೆ ಬಸಿರಾದವಳು ಸಲೀಸಾಗಿ ಹೊಟ್ಟೆ ಬಿತ್ತರಿಸುತ್ತಿರುವುದು ಹೊಸ ಸೇರ್ಪಡೆ.
ಮೊದಮೊದಲಿಗೆ ಯಾವುದೇ ಸೆಲೆಬ್ರಿಟಿ(ಹೀಗಂದರೇನು ಎಂದು ನನಗೀಗಲೂ ಅರ್ಥವಾಗಿಲ್ಲ. ಹೇಳಿಸಿಕೊಂಡಿದ್ದರೂ ಅದರ ಭಾವಾರ್ಥ ತಿಳಿದಿಲ್ಲ.) ತಾನು ಮದುವೆಯಾದೆ ಬಸಿರಾದೆ ಎನ್ನುವುದನ್ನು ಬಚ್ಚಿಟ್ಟುಕೊಂಡು ಬದುಕಿ ಇದ್ದಕ್ಕಿದ್ದಂತೆ ಮುದ್ದಾದ ಮಗುವಿನೊಂದಿಗೆ ಮತ್ತೆ ತನ್ನ ಅಭಿಮಾನಿಗಳೆದುರಿಗೆ ಬಂದಾಗ, ಅದಕ್ಕೊಂದು ಅಧ್ಬುತ ಸ್ವಾಗತ ದಕ್ಕುತ್ತಿದ್ದುದಕ್ಕೆ ಉದಾ. ಆದರೀಗ ಏನಾಗಿದೆ ನೋಡಿ.
ಮೊನ್ನೆ ಮೊನ್ನೆ ತಾನೀಗ ಬಸುರಿ ಎಂದು ಹೊಟ್ಟೆ ಚಿತ್ರ ತೋರಿಸುತ್ತಾ, ಅದಕ್ಕೆ ಕಲಾಕಾರನೊಬ್ಬನಿಂದ ಒಂದು ರೌಂಡು ಚಿತ್ರವನ್ನೂ ಬರೆಸಿಕೊಂಡು ಅಪ್ ಲೋಡುಮಾಡಿದ ಕನ್ನಡದ ನಟಿ ಮತ್ತು ಹೀಗೆ ನಾನೂ ಬಸುರಿ ಎಂದು ಇದೇ ಅವಕಾಶ ಎಂದು ಸಂಪೂರ್ಣ ಬೆತ್ತಲಾಗಿ ನಿಂತ ಸೇರೆನಾ ತೊಡೆ ಸಂದಿ ಮುಚ್ಚಲು ತೊಡೆ ಅಡ್ಡ ಇರಿಸಿಯೂ, ಎದೆ ಮುಚ್ಚಿಕೊಂಡಿದ್ದೇನೆ ನಾನು ನಗ್ನಳಾಗಿಲ್ಲ ಎನ್ನುವ ಪೆÇೀಸಿಗೋಸ್ಕರ ಎದೆಗೆ ಕೈ ಅಡ್ಡ ಅರಿಸಿಯೂ, ಪತ್ರಿಕೆಯೊಂದರ ಮುಖ ಪುಟಕ್ಕೆ ತನ್ನನ್ನು ಮಾರಿಕೊಂಡಿದ್ದಾಳೆ. ಲಕ್ಷಾಂತರ ಡಾಲರೂ ಪೀಕಿರಬಹುದು ವ್ಯವಹಾರದ ಮಾತು ಆಚೆಗಿರಲಿ. ಮೇಲೆ ಹೇಳಿದಂತೆ ಕನ್ನಡದ ನಟಿಯ ಚಿತ್ರ ಸರಾಸರಿ ಮೂರು ತಿಂಗಳ ಬಸಿರಿನಿಂದಲೂ ಸಾಲಾಗಿ ಹರಿದಾಡುತ್ತಿದೆ.
ಎಲ್ಲೆ ಹೋದರೂ ಅದಕ್ಕೊಂದು ಸೆಲ್ಫಿ, ಕಂಡಲ್ಲೊಂದು ಫೆÇೀಟೊ ಕ್ಲಿಕ್ಕಿಸಿ ಇನ್ಸ್ಟಾಗ್ರಾಂಗೂ, ಫೇಸ್‍ಬುಕ್ಕಿನ ಗೋಡೆಗೆ ಒಗಾಯಿಸಿ ಬದುಕೋದು ನಮಗೀಗ ಅನಿವಾರ್ಯದ ಅಭ್ಯಾಸವಾಗಿಬಿಟ್ಟಿದೆ ಸರಿನೆ. ಸ್ನೇಹಿತರು, ಸಂಬಂಧಿಕರ ಮದುವೆ, ಮನೆ ಕಟ್ಟಿಸಿದಿರಿ, ನೌಕರಿ ಬಂತು, ಮಕ್ಕಳು ಸೆಟ್ಲ್ ಆದರು, ಅವಕ್ಕೂ ಮದುವೆ ನಿಶ್ಚಯದ ಕರೆ ಕೊಡಬೇಕಿದೆ, ಪುಸ್ತಕ ಬಿಡುಗಡೆ, ಬಹುಮಾನ, ಮಕ್ಕಳ ಶಾಲಾ ಫಲಿತಾಂಶದ ಖುಶಿಯ ಶೇಕಡಾವಾರು, ಕಾರು ಖರೀದಿ ಒಂದಾ ಎರಡಾ..? ಬದುಕಿನ ಬಣ್ಣಗಳ ಸಂಭ್ರಮ ಹಂಚಿಕೊಳ್ಳೊಕೆ ಸಾವಿರ ಕಾರಣಗಳು ಕಾಲುಚಾಚಿ ಬಿದ್ದಿರುತ್ತವೆ. ಇಂಥವಕ್ಕೆ ಯಾರು ಬೇಡ ಎನ್ನುವುದೂ ಅಥವಾ ಅಬ್ಜೆಕ್ಷನ್ನು ಎರಡನ್ನೂ ಮಾಡಲಾರರು ಬದಲಿಗೆ ಖುಶಿಪಡುವ ನೂರಾರು ಜನ ಸಿಕುತ್ತಾರೆ. ಕರಬುವವರನ್ನು ಅಲ್ಲೇ ಬಿಟ್ಟು ಬಿಡೋಣ.
ಆದರೆ ಇದೇನಿದು ಬಸಿರಾದೆನೆಂದು ಒಬ್ಬಳು ಹೊಟ್ಟೆ ಬಿಟ್ಟುಕೊಂಡು ಫೆÇೀಟೊ ಹಾಕಿದರೆ, ಇನ್ನೊಬ್ಬಳು ಹಿಂಗೆ ಬಸಿರಾಗಿದ್ದೇನೆ ಎಂದು ಪೂರ್ತಿಬಿಚ್ಚಿ ನಿಲ್ಲುತ್ತಿದ್ದಾಳೆ. ನಾಳೆ ಬಸಿರಿಗೆ ಮೊದಲು ಹೀಗಿಂದ್ವಿ ಎಂದು ಚಿತ್ರ ಹಾಕಲೂ ಹಿಂಜರಿಯಲಿಕ್ಕಿಲ್ಲ. ಆಫ್‍ಕೋರ್ಸ್ ಅವರವರ ಚಿತ್ರ ಅವರವರ ಮೈ ಅವರವರ ಗೋಡೆ ಅದನ್ನು ಕೇಳಲು ಅಥವಾ ಬರೆಯಲು ನಾನ್ಯಾರು..? ಒಪ್ಪಿದೆ.
ಆದರೆ ನಂದು ನಾನೇನು ಬೇಕಾದರೂ ಮಾಡ್ತೀನಿ ಎಂದು ಟಾಯ್ಲೆಟ್ಟಿನಲ್ಲಿ ಕೂತು ಹೋಳಿಗೆ ತುಪ್ಪ ಸುತ್ತಿಕೊಂಡು ತಿನ್ನಲು ಆದೀತೆ..? ಹಾಗೆ ಕೂತೆ ಅದರ ಪಾಡೀಗೆ ಅದು ನನ್ನ ಪಾಡೀಗೆ ನಾನು ಎಂದು ಕೂತಲ್ಲೆ ಮೇಲಿನಿಂದ ಸ್ನಾನನೂ ಮಾಡ್ತಿನಿ ಎನ್ನಲಾದೀತೆ..? ಕೇಸರಿಭಾತಿಗೆ ಬೆಂಡೆಹುಳಿ ಹಾಕಿ ಉಣ್ಣುತ್ತೇನೆ ಎಂದರೆ..? ನಾನು ವಿಭಿನ್ನ ಎನ್ನುವುದು ಪ್ರತಿಯೊಬ್ಬರಿಗೂ ಬೇಕೆ ಬೇಕು ಎನ್ನುವುದನ್ನು ನಾನೂ ಒಪ್ಪುತ್ತೇನೆ. ಆದರೆ ಅದರ ಸಭ್ಯತೆಯ ಎಲ್ಲೆ ಮೀರಿ ವಿಭಿನ್ನತೆ ಎಂದು ಬಿಚ್ಚುವುದೇ ವಿಭಿನ್ನತೆ ಅಂದರೆ. ಅದರ ಅಲ್ಟಿಮೇಟ್ ಫಲಿತಾಂಶ ಇನ್ಯಾವುದೋ ಮುಗ್ಧಳೂ, ನಮ್ಮ ನಿಮ್ಮ ಹೆಣ್ಣು ಮಕ್ಕಳು ಅನುಭವಿಸುತ್ತಾರಲ್ಲ ಅದನ್ನು ಯಾರು ಭರಿಸುತ್ತಾರೆ. ಹೀಗಿನ ಪರಿಣಾಮವೇ ಯಾವುದೋ ಕಾರಣಕ್ಕೆ ಯಾರೊ ರೇಪಿಗೀಡಾಗುತ್ತಿರಬಹುದು. ನೆನಪಿರಲಿ ಚಿತ್ರ ಮತ್ತು ಜಾಹಿರಾತುಗಳಲ್ಲಿ ಅವ್ಯಾಹತವಾಗಿ ಬಿಚ್ಚುವ ಪ್ರಕ್ರಿಯೆ ಇವತ್ತು ಬಲಾತ್ಕಾರದ ಪ್ರಮುಖ ಕಾರಣಗಳಲ್ಲಿ ಒಂದು ಎನ್ನುತ್ತದೆ ಸಮೀಕ್ಷೆ. (ಹೀಗೆ ಬರೆಯುವು ಅಥವಾ ನಾನು ಹೇಳುವುದರಿಂದ ಒಂದು ಹಂತ ಹೆಣ್ಣುಮಕ್ಕಳು ಎಗರಿ ಬೀಳುತ್ತಾರೆ. ಗಂಡಸರಿಗೆ ಬುದ್ದಿ ಬೇಡವೆ, ನಾವೇನು ರೇಪು ಮಾಡು ಅಂತಾ ಬಟ್ಟೆ ಧರಿಸಿದ್ವಾ..? ನೋಡುವವರ ದೃಷ್ಠಿ ಸರಿ ಇರಬೇಕು ಇತ್ಯಾದಿ ಪ್ರಶ್ನೆಗಳೊಂದಿಗೆ ಪ್ರಗತಿಪರತೆಯ ಮುಸುಗಿನಲ್ಲಿ ಗುದುಮುರಿಗೆ ಹೊಡೆಯುವುದಿದ್ದೇ ಇದೆ. ಅದರೆ ಒಂದು ಗೊತ್ತಿರಲಿ. ಹಾಗೆ ಎಗರುವ ಮೊದಲು ಇಂತಹ ಸಂದರ್ಭದಲ್ಲಿ ಅದನ್ನು ನಾವು ಎದುರಿಸಲಿಕ್ಕೂ ಶಕ್ಯ ಇದ್ದೇವಾ ಎಂದು ನಮಗರಿವಿರಬೇಕು. ಎನೇ ಸಮಾನತೆ ಎಂದುಕೊಂಡರೂ ಹೆಣ್ಣು ಮಕ್ಕಳ ಅನುಕೂಲಕಾರಿ ಸಮಾನತೆಯ ಬಗ್ಗೆ ತಿಳಿಯದ್ದೇನೇಲ್ಲ. ಕಾರಣ ಗಡಿಯಾರ ಅದೇ ಅರ್ಧ ಗಂಟೆ ಹಿಂದಕ್ಕೆ ಜರುಗಿಸಲಾಗುವುದಿಲ್ಲ ನೆನಪಿರಲಿ.)
ನಾನು ನನ್ನ ಬಸಿರು, ನಾನು ನನ್ನ ದೇಹ, ನಾನು ನನ್ನ ಬಟ್ಟೆ, ನಾನು ನನ್ನ ಪಿರಿಯೆಡ್ಡು " ಐ ಯಾಮ್ ಹ್ಯಾಪಿ ಟು ಬ್ಲೀಡ್.." ಎಂದೆಲ್ಲಾ ಬರೆದುಕೊಳ್ಳುವುದೇ ಬದಲಾವಣೆಯ ಸಂಕೇತ ಎಂದು ಭಾವಿಸುವುದಾದರೆ ನಿಜಕ್ಕೂ ಮನಸ್ಸುಗಳಿಗೆ ಪಾಠ ಬೇಕಾಗಿದೆ ಎಂದೇ ಅರ್ಥ. ಸ್ರಾವ ಎನ್ನುವುದೂ ನನ್ನ ಪ್ರದರ್ಶನದ ಸಂಕೇತ ಅದಕ್ಕೊಂದು ಹ್ಯಾಪಿಯನ್ನು ಪ್ರಿಫಿಕ್ಸು ಮಾಡುವುದರಿಂದ ಗಂಡಸಿನ/ಹೆಂಗಸಿನ( ಬೇರೊಬ್ಬ ಹೆಣ್ಣಿಗೆ ಅನ್ಯಾಯವಾದಾಗ, ಆಘಾತವಾದಾಗ ಆಕೆಯೆ ಮೇಲೆ ವೈಮನಸ್ಸಿದ್ದರೆ " ಆಕೆಗೆ ಹಾಗೆಯೇ ಆಗಬೇಕಿತ್ತು ಎನ್ನುವ ಹೆಣ್ಣು ಮಕ್ಕಳಿಗೇನೂ ಕಡಿಮೆ ಇಲ್ಲವಲ್ಲ". ಜೊತೆಗೆ ಹೆಚ್ಚಿನ ಹೆಂಗಸರು ಹೇಳುವುದೂ ಅದನ್ನೆ ಅಲ್ಲವೇ..? ಇದ್ಯಾವ ಸೀಮೆಯ ಮನಸ್ಥಿತಿಯೋ  ನನಗೆ ಗೊತ್ತಿಲ್ಲ) ಅಥವಾ ಸಮಾಜ ದೃಷ್ಠಿಕೋನ ಬದಲಾಗುತ್ತದೆ ಅಥವಾ ಏನಾದರೂ ಧನಾತ್ಮಕ ಪರಿಣಾಮ ಇದೆಯೆಂದು ನನಗನ್ನಿಸುವುದಿಲ್ಲ. ಅದರೆ ತೀರ ತೆರೆದು ತೋರುವುದೇ ಬದಲಾವಣೆ, ನಾನು ಡಿಫರೆಂಟು ಅನ್ನೋದಿದೆಯಲ್ಲ ಅದು ಸಜ್ಜನಿಕೆಯ ಗಡಿಯನ್ನು ಮೀರುವಂತಿರಬಾರದು. ಅಷ್ಟೆ. ಕಾರಣ ನಾನೂ ಟ್ಯಾಟೂ ಹಾಕಿಕೊಳ್ಳುತ್ತೇನೆ ಎಂದು ಗಂಡಸೂ ಅರ್ಧ ಬನೀನು, ಲಂಡ ಪ್ಯಾಂಟು, ತೆರೆದೆದೆಯ ಕೋಟು, ಅಂಡಿನ ಸೀಳು ಕಾಣುವ ಇಜಾರ, ಭಯಾನಕ ಕೂದಲು ಬಿಟ್ಟ ಬಗಲು ತೋರಿಸುವ ಅರೆಬರೆ ತೋಳಿನ ಅಂಗಿ, ಬರಗೆಟ್ಟ ಬೆನ್ನಿನ ಬಕ್ಕ ಬಾರಲ ಬೆನ್ನಿನ ಅವಸ್ಥೆ ಕಾಣಿಸುವಂತೆ ಬಟ್ಟೆಗೆ ಫ್ಯಾಶನ್ ಎಂದು ಕೂತರೆ ಆದೀತಾ..? ಹೆಸರು ಮಾಡಿದ ತಕ್ಷಣ ಏನೂ ಮಾಡಿದರೂ ಕೆಲವರು ಜೈಕಾರ ಹಾಕಬಹುದು ಆದರೆ ಒಪ್ಪಿತವಲ್ಲದ ಕ್ರಿಯೆ ಋಣಾತ್ಮಾಕ ಪ್ರಕ್ರಿಯೆಗೆ ನಾಂದಿಹಾಡುತ್ತದೆ ಮತ್ತದಕ್ಕೆ ಎಲ್ಲೋ ನಮ್ಮದೇ ವ್ಯಕ್ತಿ ಬಲಿಯಾದಲ್ಲಿ ಏನಾದೀತು..? ಚರ್ಚೆ ನಿಮಗೆ ಬಿಟ್ಟಿದ್ದು. ಇಲ್ಲದಿದ್ದರೆ ನಾನ್ಯಾಕೆ ಇದನ್ನೆಲ್ಲಾ ಪಿಸುನುಡಿದೇನು..?

Saturday, July 1, 2017

ಆಕೆಗೆ ಪ್ರೀತಿ...ನೇ ಬೇಕು ಎಂದೇಕೆ ಹೇಳುತ್ತಿದ್ದೇನೆಂದರೆ...?

ಈ ಜೀವಗಳು ಇಂದಿಗೆ ಸರಿಯಾಗಿ ಐವತ್ತು ಸಾವಿರ ವರ್ಷಗಳ ಹಿಂದೆ ಜನಿಸಿದವು ಎಂದು ಇರಿಸಿಕೊಂಡರೂ ಸರಿಯಾಗಿ ನಾವು ಮನುಷ್ಯರಾಗಿ ಬದುಕಲಾರಂಭಿಸಿದ್ದೇ ಐದಾರು ಸಾವಿರ ವರ್ಷಗಳಿಂದೀಚೆಗೆ. ಅಷ್ಟಕ್ಕೂ ಇತ್ತಿಚಿನ ಐದುನೂರು ವರ್ಷಗಳಲ್ಲಿ ಬಾಂಧವ್ಯ.. ಮನಸ್ಥಿತಿ, ಫೆಮಿನಿಸಮ್ಮು, ಮೇಯಿಲ್ ಡಾಮಿನೇಶನ್ನು ಇತ್ಯಾದಿಗಳಲ್ಲಿ ಏರುಗತಿಯಲ್ಲಿ ಬದಲಾಗಿದ್ದು ಹೆಣ್ಣಿನ ಮನಸ್ಥಿತಿ ಮತ್ತು ಆಕೆಯ ನ್ಯೂರಾನ್ಸ್‍ಗಳು. ಆದರೆ ಪುರುಷನ ನೈಸರ್ಗಿಕವಾಗಿ ವಿನ್ಯಾಸದೋಷ ಸರಿಪಡಿಸಲಾಗದ ದುರಂತವೇ.. ಇನ್ನಷ್ಟೆ ನಮ್ಮ ಒಳಗನ್ನು ನಾವೇ ನೋಡಿಕೊಳ್ಳಬೇಕಿದೆ.
ಆಕೆಯ ಮನಸ್ಸಿನಲ್ಲೊಂದು ಪ್ರೀತಿಯ ಕೋಟೆಯಿದೆ. ಅದು ಹದಿನಾರರ ತುದಿಮೊಗ್ಗರಳುವ ನವಿರುತನವಿರಲಿ, ನಲ್ವತೈದರ ಮುಟ್ಟು ನಿಲ್ಲುವ ಮೆಟ್ಟಿಲೇ ಇರಲಿ. ಯಾವನೊಬ್ಬನೂ ಗಂಡಸೆನ್ನುವ ಕಾರಣಕ್ಕೆ ಕೋಟೆಯನ್ನು ಗೆಲ್ಲುವ ಹುಮ್ಮಸಿನಲ್ಲಿ ಅಖಾಡಕ್ಕಿಳಿದು ಆಕೆ ಜಗಮರೆಯುವಂತೆ ಮನಸಾರೆ ಗೆದ್ದು, ಕಾಲೂರಿದ್ದು ತುಂಬ ಕಡಿಮೆ. ಅಕಸ್ಮಾತ ಹಾಗೆ ನಿಜಾಯಿತಿಯಿಂದ ಕಾಲೂರಿದ್ದೇ ಆದರೆ, ಎಂಥದ್ದೇ ಸ್ವರ್ಗವನ್ನೂ ಎಡಗಾಲಲ್ಲಿ ಸರಿಸುವಷ್ಟು ಸುಖವನ್ನು ಇದೇ ಭೂಮಿಯ ಮೇಲೆ ಆಕೆಯಿಂದಲೇ ಸೂರೆ ಹೊಡೆದನೆನ್ನುವುದನ್ನು ದೇವರೇ ದೃಢೀಕರಿಸಿದ್ದಾನೆ.
ಅದಕ್ಕೆ ಕಾರಣ ಆಕೆಯ ಮನಸ್ಸು. ಅದೊಂದು ಯಾರಿಗೂ ತೆರೆಯದ ದಿಡ್ಡಿಬಾಗಿಲಿನಂತಹದ್ದು. ಅಲ್ಲಿ ಪತಾಕೆ ಹಾರಿಸಬೇಕೆಂದರೆ ಆಕೆಯನ್ನು ನಿಷ್ಕಳಂಕವಾಗಿ ಪ್ರೀತಿಸುವ, ಅವನ ನೆನಪಾಗುತ್ತಿದ್ದಂತೆ ಆಕೆಯ ಮೈಮೇಲೆ ಜಾಜಿಯ ಮಳೆಗೆರೆದಂತೆ ಅನುಭೂತಿಯನ್ನು ಉಂಟುಮಾಡಿದ್ದೇ ಆದರೆ ನಿಜಕ್ಕೂ ಅವನು ಆಕೆಯ ಮನಸ್ಸಿನ ಎಲ್ಲ ಕೋಣೆಗಳ ಕದಗಳನ್ನು ಸಮುದ್ರದ ಹೆದ್ದೆರೆಯ ವೇಗದಲ್ಲಿ ಆಕ್ರಮಿಸಿ ತೆರೆದುಬಿಟ್ಟಿದ್ದಾನೆಂದೇ ಅರ್ಥ. ಹಾಗೆ ಅವನು ಒಳಬಂದ ಕೂಡಲೇ.... ದಿಡ್ಡಿ ಬಾಗಿಲೀಗೀಗ ಒಳಗಿನಿಂದ ಅಗುಳಿ.
ಪ್ರತಿ ಹೆಣ್ಣಿನ ಮನಸ್ಸಿನ ಒಂದು ಮೂಲೆಯಲ್ಲೂ ಯಾವನೂ ತಡುವಲಾಗದ, ಒಂದು ಬಂಧದ ವರ್ತುಳ ಸುಮ್ಮನೆ ಕವಚಿಕೊಂಡು ಕೂತು ಬಿಟ್ಟಿರುತ್ತದೆ. ಆ ಮನಸ್ಸಿನ ಭಾವತಂತುವಿಗೆ ಸರಿಸಮಾನವಾಗಿ ತಂತಿಯನ್ನು ಮೀಟುವವನೊಬ್ಬ ಸಿಗುವವರೆಗೂ ಅದೂ ನಿಸ್ಸಂದೇಹ ಹಾಗೆಯೇ ಕವಚಿಕೊಂಡೆ ಇರುತ್ತದೆ. ದುರಂತವೆಂದರೆ ಹೆಚ್ಚಿನ ಹೆಣ್ಣುಮಕ್ಕಳ ಅಂತಹ ದಿಡ್ಡಿ ಬಾಗಿಲು ಜೀವನ ಪೂರ್ತಿ ತೆರೆಯದೇ ಉಳಿದುಬಿಡುವುದೂ ತುಂಬಾ ಕಾಮನ್. ಹಾಗಾದಲ್ಲಿ ನಿಜಕ್ಕೂ ಈ ಭೂ ತೆಕ್ಕೆಗೆ ಬಂದೂ, ಸ್ವರ್ಗವನ್ನು ಇಲ್ಲೇ ಅನುಭವಿಸುವ ಅವಕಾಶದಿಂದ ಯಾವುದೋ ಒಂದು ಗಂಡು ಪ್ರಾಣಿ ವಂಚಿತವಾಗಿದೆ ಎಂದರ್ಥ.
ಹಾಗಾಗಿ ಜಗತ್ತು, ತಾಂತ್ರಿಕತೆ, ವಿಜ್ಞಾನ, ಅತೀಂದ್ರೀಯ ಶಕ್ತಿ, ಲಸ್ಟು, ಟೆಲಿಪತಿ, ಯೋಗ, ಆಲೆಮನೆ, ಮನೆಗಿಬ್ಬರು ನೌಕರಿ, ಮೂರು ಜನಕ್ಕೆ ನಾಲ್ಕು ಗಾಡಿಗಳು, ಇಬ್ಬರಿಗೂ ಪ್ರತ್ಯೇಕ ಬೆಡ್‍ರೂಮು, ಮನೆಗೆರಡು ಟಾಯ್ಲೆಟ್ಟು, ಆಕಾಶದಲ್ಲೂ ತರಕಾರಿ, ಸೂರ್ಯಂಗೆ ಸ್ವಿಚ್ಚು, ಮನೆ ಮನೆಗೂ ಬೋರ್ ವೆಲ್ಲು, ಕಳೆದು ಹೋಗುತ್ತಿರುವ ವೆಲ್‍ಫೇರು, ವಯಸ್ಸನ್ನು ಯಾಮಾರಿಸುವ ದಿರಿಸುಗಳು, ಬಯಸಿ ಬಯಸಿ ಬದಲಾಗುತ್ತಿರುವ ಮೂರನೆಯ ಲಿಂಗಿ, ಸರಕ್ಕನೆ ಅವನ ನೆನಪೇ ಆಕೆಯನ್ನು ಒದ್ದೆಗೀಡುಮಾಡುವ ಫೀಲು.. ಹೀಗೆ ಯಾವ್ಯಾವುದೋ ಸಂಬಂಧವೇ ಇಲ್ಲದ ವಿಷಯದಲ್ಲೂ ಆಕೆ ಬೆಳೆದು ಸರಸರನೇ ಎದ್ದುನಿಂತು ಬಿಡುತ್ತಿದ್ದಾಳೆ.
ಇತ್ತಿಚಿನ ಎರಡು ನೂರು ಚಿಲ್ರೆ ವರ್ಷಗಳಲ್ಲಿ ಹೆಣ್ಣು ತನ್ನನ್ನು ತೆರೆದುಕೊಂಡ ವೇಗಕ್ಕೆ ಗಂಡು ತೆರೆದುಕೊಂಡಿಲ್ಲದ್ದು ಸೂಕ್ಷ್ಮವಾಗಿ ಅವಲೋಕಿಸಿದರೆ ಗೊತ್ತಾಗುತ್ತದೆ. ಕಾರಣ ವೈಜ್ಞಾನಿಕವಾಗಿ ಗಂಡು- ಹೆಣ್ಣಿನ ಮನಸ್ಥಿತಿಯನ್ನು ನಿರ್ಧರಿಸುವ ಮೆದುಳಿನ ಅಂತರ ಮತ್ತು ಅದನ್ನು ಜೋಡಿಸುವ ಭಾಗದಲ್ಲಿರುವ ಮೂಲ ವ್ಯತ್ಯಾಸದಲ್ಲೇ ಪ್ರಮಾದಭರಿತ ಜುಗಾಡಿದೆ. ಹಾಗಾಗಿ ಗಂಡು ಪ್ರಾಣಿಯನ್ನು ಪಳಗಿಸುವ ಹೊತ್ತಿಗೆ ಹೆಣ್ಣು ತನ್ನ ಬದುಕಿನ ಅರ್ಧ ಚಾಪೆ ಸುತ್ತಿರುತ್ತಾಳೆ.
ಅಸಲಿಗೆ ಆಕೆಗೆ ಜೀವನದಲ್ಲಿ ಬೇರೇನೂ ಬೇಕೆ ಆಗಿಲ್ಲ. ಹಾಗಂತ ಉಪವಾಸ ಇಡು.. ನಾನು ನಿನ್ನ ಪ್ರೀತೀಲಿ ಹಂಗೆ ಇದ್ದು ಸಾಯ್ತಿನಿ ಅಂತಾನೂ ಯಾವ ಹೆಣ್ಣೂ ಫಿಲ್ಮಿ ಡೈಲಾಗು ಹೇಳಲಾರಳು. ಆದರೆ ಯಾವತ್ತೂ ತನ್ನ ಹುಡುಗ ತನ್ನನ್ನು ಮಾತ್ರ ಪ್ರೀತಿಸಲಿ, ತನ್ನೊಬಳನ್ನೇ ಪ್ರಾಮಾಣಿಕವಾಗಿ ಪ್ರೀತಿಸಲಿ ಎನ್ನುವುದಿದೆಯಲ್ಲ ಅದನ್ನು ಯಾವತ್ತೂ ಬದಲಿಸಲಾರಳು. ಆದರೆ ಅದು ಗೊತ್ತಾಗುವ ಹೊತ್ತಿಗೆ ಆಕೆಯಲ್ಲಿ ಪ್ರೀತಿ ಸತ್ತು ಹೋಗಿರುತ್ತದೆ. ಇವನಲ್ಲಿ ಹೊಸದಾಗಿ ಚಿಗರೊಡೆಯಲು ಕಾದಾರಿದ ಮೇಲೆ ತೇವವೇ ಇರುವುದಿಲ್ಲ. ಬದುಕು ಅಲ್ಲಲ್ಲೆ ಪಾಚಿಯಂತೆ ಜಾರತೊಡಗುತ್ತದೆ. ಅದ್ಯಾಕೆ ಪುರುಷನೊಬ್ಬ ಹೆಣ್ಣಿನಷ್ಟೆ ವೇಗವಾಗಿ ಬದುಕನ್ನು ನಿರಂತರತೆಯ ದಾರಿಯ ಮೇಲೆ ಹಳಿ ಇಟ್ಟು ಓಡಿಸುತ್ತಿಲ್ಲ..? ಉತ್ತರ ಹೀಗೇ ಎಂದು ಯಾವೊಬ್ಬನೂ ಕೊಡುತ್ತಿಲ್ಲ. ಅಘಾತವೆಂದರೆ ತನ್ನೊಬ್ಬಳನ್ನೆ ಪ್ರೀತಿಸಲಿ ಎಂದಷ್ಟೆ ಆಪ್ತವಾಗಿ ಅವನನ್ನು ಪ್ರೀತಿಸಿ ಕಾಯ್ದಿರಿಸಿಕೊಳ್ಳಬೇಕಿರುವ ಹೆಣ್ಣೂ ಆ ವಿಷಯದಲ್ಲಿ ಬೆಳೆದೇ ಇಲ್ಲವಾ..? ಅವನನ್ನು ಹಾಗಿರಿಸಿಕೊಳ್ಳುತ್ತಿಲ್ಲವೇಕೆ..? ಸುಮ್ಮನೆ ಒಬ್ಬರನ್ನೇ ದೂಷಿಸಬೇಕೆ...? 
ಗಂಡಿಗೆ ಪರಮ ಆಕರ್ಷಣೆಯಾಗಿ ಸೆಕ್ಸೂ, ಹೆಣ್ಣಿಗೆ ಅದು ಕೊನೆಯದಾಗಿ ಸಂದಾಯವಾಗೋ ಕಂತಾಗಿಯೂ  ಬದಲಾಗುವಾಗ, ಗಂಡು ಪುನುಗು ಬೆಕ್ಕಿನಂತೆ ಎದ್ದು ನಿಲ್ಲುವುದಕ್ಕೂ, ಹೆಣ್ಣು ಕೇವಲ ಕಣ್ಣಿನ ನೋಟದಲ್ಲೇ, ಕೂತಲ್ಲೇ, ಮಾತೇ ಆಡದೆ ಒದ್ದೆಯಾಗಿ ಬಿಡುತ್ತಾಳಾದರೆ ಅದಕ್ಕೆ ಕಾರಣ ವೈಯಕ್ತಿಕವಾಗಿ ನೈಸರ್ಗಿಕವಾಗಿ ಇಬ್ಬರ ರಚನೆಂiÀಲ್ಲಿರುವ ವ್ಯತ್ಯಾಸವೇ ಕಾರಣ ಹೊರತಾಗಿ ಉದ್ದೇಶ ಪೂರ್ವಕವಾಗಿ ಪ್ರಕ್ರಿಯೆಯ ಮೂಲಕ ನಮಗೆ ಬೇಕಾದಂತೆ ಆಕೆಯ/ಅವನ ಯಾವ ಕ್ರಿಯೆಯನ್ನು ನಾವು ನಮಗೆ ಬೇಕಾದಂತೆ ನಿಯಂತ್ರಿಸಲಾರೆವು. 
ಇದಕ್ಕೆಲ್ಲಾ ಕಾರಣವಾಗಿರುವ ಮನಸ್ಸನ್ನು ನಾವು ನಿಯಮಿತವಾಗಿ,ಮನಸ್ಸನ್ನು ಆವರಿಸಿಕೊಳ್ಳುವ ಅನುಭೂತಿಯನ್ನು ಅನುಭವಿಸಲು ಅದನ್ನು ಸಿದ್ಧವಾಗುವಂತೆ ಹದಹೊಡೆಯದಿರುವುದೇ ನಮ್ಮ ಪ್ರಮುಖ ಸೋಲು. ಆಕೆಗೆ ಬೇಕಿರುವುದೇ ಪ್ರೇಮವಾದರೆ, ಅವನದ್ದು ಶುದ್ಧ ಕಾಮ ಎಂದುಕೊಂಡಿರೋದು ದೋಷವಲ್ಲ. ಅದರೆ ಅದನ್ನು ಹೆಣ್ಣಿಗೆ ತಿಳಿಸುವ ವಿಧಾನ ಯಾವುದು..? ಕಾರಣ ಉನ್ಮಾದಕ್ಕೆ ಬೀಳುವ ಹೆಣ್ಣು ಪುರುಷನಿಗಿಂತಲೂ ಮೇಲೆ. ಇದನ್ಯಾಕೆ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಇಬ್ಬರೂ ಹಂಚ ಹೊರಟಿದ್ದು ಬರೀ ಹಸಿಹಸಿ ಕಾಮ. ಆಳಕ್ಕಿಳಿದು ಹುಡುಕಿ ನೋಡಿದರೆ ಪ್ರೇಮವೆಲ್ಲಿದೆ..? ಎರಡಕ್ಕೂ ಮ್ಯಾಚೇ ಇಲ್ಲ. ಪ್ರೇಮವಿಲ್ಲದೇ ಕಾಮವಿಲ್ಲ...ಬಾಕಿ ಎಲ್ಲ ಬರೀ ಲಸ್ಟು ಎಂದರೂ ಅದು ಹುಟ್ಟುವುದೂ ಪ್ರೀತಿಯಲ್ಲೆ.
ಒದ್ದೆಯಾದ ಬಾವಿಯೊಂದೆ ಅಂತಿಮವಲ್ಲ. ಹಾಗಂತ ಪುರುಷ ಕಾಮದಿಂದ ಪ್ರೇಮಿಸುತ್ತೇನೆಂದು ಹೊರಟು ನಿಂತು ಆಕೆಯನ್ನು ಗೆದ್ದ ಅಥವಾ ತಾನು ಸೋತಾದರೂ ಗೆದ್ದ ಉದಾಹರಣೆಗಳಿಲ್ಲ. ಆಕೆ ಬರೀ ಪ್ರೀತಿಸುತ್ತೇನೆಂದು ತನ್ನ ಕೋಟೆ ಕಾಯ್ದುಕೊಂಡ ಉದಾ.ಗಳೂ ಇಲ್ಲ.
ಅದೇ ಆಕೆಯಲ್ಲೊಂದು ಪ್ರೀತಿಯ ದೀಪವಿಟ್ಟು ಅಗೀಗಿಷ್ಟು ಅದಕ್ಕೆ ಸರಿಯಾಗಿ ಪ್ರಾಣವಾಯುವೆಂಬ ಮನಸ್ಸಿನ ಎಣ್ಣೆಯನ್ನು ಹದವಾಗಿ ಹರಿಸಿ ನೋಡಿ. ಕಾಮನೆಗಳು ಪ್ರೀತಿಯಿಂದ ಕೆರಳಿದ್ದೇ ಆದಲ್ಲಿ, ಆಕೆಯ ಮನಸ್ಸು ಪ್ರೀತಿಯಿಂದ ಹದ ಹೊಡೆದು ಮಂಚಕ್ಕೆ ಬಂದಿದ್ದೇ ಆದಲ್ಲಿ ಗಂಡಸಿನ ತಾಕತ್ತು ಬಸವಳಿದು ಹೋಗುತ್ತದೆ. ಇದನ್ನು ಅದೇ ಪ್ರೀತಿಯಿಂದ ಸಾಧಿಸುವ ಗಂಡಸು ಎಲ್ಲದರಲ್ಲೂ ಗೆದ್ದು ಬೀಗುತ್ತಾನೆ. ಹಾಗೆ ಗೆಲ್ಲಲು ಸೋಲುವ ಹೆಣ್ಣು ಸೋತು ಗೆಲ್ಲುತ್ತಾಳೆ. ಅಂತಿಮವಾಗಿ ಗೆಲ್ಲುವ ಮುನ್ನಿನ ಸೋಲಿನಲ್ಲೂ ಹಿತವಾದ ಸೊಬಗು ಅವರ ಮೈಮನದಲ್ಲಿ ಅರಳುತ್ತದೆ. ಯಾರಿಗೆ ಬೇಕಿಲ್ಲ ಇಂತಹ ಜೊತೆ. ಪ್ರೀತಿ..ಉಮೇದಿ... ಆ ನಿರಂತರತೆ.. ಆ ಮುದ.. ಆ ಹೊಸ ಹೊನಲು..? ಆದರೆ ಇದ್ದ ಬಾಂಧವ್ಯದಲ್ಲೇ ಅದನ್ನೆಲ್ಲಾ ಅರಳಿಸಿಕೊಳ್ಳೊದು ಹೇಗೆ..? 
ನೀವು ಅವಳಿಗೆ ಹೇಳಲಾರದೆ ಉಳಿಸಿಕೊಂಡ ಅಹಂನ ಉಸಿರುಗಳಿವೆಯಲ್ಲ, ಹುಡುಗಿ ಅವನಿಗೆ ಹೇಳದೆ ತಡವರಿಸುವ ತುಮಲಗಳಿವೆಯಲ್ಲ ಅವನ್ನೆಲ್ಲಾ ಕೊಸರಾಡುತ್ತಾ ಉಸಿರ್ಗರೆದು ಸಮಜಾಯಿಸುವ ಬದಲಿಗೆ ಪ್ರೀತಿಸಿ ಬಿಡಿ. ಏನಾಗಿದ್ದರೂ ಎಲ್ಲಾ ಮರೆತು. ಅದೊಂದು ಚೆಂದದ ಮುಂಜಾನೆಯ ಇಬ್ಬನಿಯಲ್ಲಿ ತೊಯ್ದ ಚೆಂಗುಲಾಬಿಯ.. ಪಕಳೆಯಂತಹದ್ದು. ಹನಿ ಸಿಂಪಡಿಸಿಕೊಳ್ಳಬೇಕಿರುವ ನಾವು ಯೋಚಿಸಬೇಕಿದೆ.. ಅಂತಹ ಹನಿಯ ಮೂಲ ಯಾವುದು..? ಅದು ಪ್ರೀತಿನೇ ಅಲ್ವಾ.. 
ನಾನು ಹೇಳಹೊರಟಿದ್ದೂ ಅದನ್ನೆ.. ಮೊನ್ನೆಯಷ್ಟೆ ವರ್ಷ ತುಂಬಿದ ಈ ಪುಸ್ತಕಕ್ಕೀಗ ನಾಲ್ಕನೆಯ ಮುದ್ರಣದ ಸಂಭ್ರಮ ಇದೇನಿದ್ದರೂ ಬರೀ ಮುನ್ನುಡಿ. ಉಳಿದಂತೆ "ಯಾವ ಪ್ರೀತಿಯೂ ಅನೈತಿಕವಲ್ಲ.." ಅಂತಾ ನಾನು ಪಿಸುನುಡಿಯುವ ಅಗತ್ಯ ಇದೆಯೇ..

Monday, June 26, 2017

ಯಾರೂ ಯಾವತ್ತೂ ನಿಕೃಷ್ಟರಲ್ಲ... ಕಾಲ ಬದಲಿಸುತ್ತದೆ.
ನಾವು ನಾಳೆ ಯಾರು ಏನಾಗುತ್ತೇವೆಯೋ ಯಾರಿಗೂ ಗೊತ್ತಿಲ್ಲ. ಅದರೆ ಪ್ರತಿಯೊಬ್ಬರೂ ನನಗೆ ಮಾತ್ರ ಏನೂ ಆಗುವುದಿಲ್ಲ ಎನ್ನುವ ಗ್ಯಾರಂಟಿಯೊಂದಿಗೆ ಬದುಕುತ್ತಿರುತ್ತೇವೆ. ಪಕ್ಕದಲ್ಲೇ ಮಾರಣಾಂತಿಕ ಆಕ್ಸಿಡೆಂಟ್ ಆಗಿದ್ದರೂ ನಮ್ಮ ಕಾನ್ಫಿಡೆನ್ಸು ಹೇಗಿರುತ್ತದೆಂದರೆ, ಮರುಕ್ಷಣದಲ್ಲೇ ಎಂಭತ್ತರ ವೇಗಕ್ಕೆ ಪೆಡಲು ಒತ್ತುತ್ತಿರುತ್ತೇವೆ. ಅದು ಆಗಿನ ಕ್ಷಣಿಕ ದಿಗಿಲು. ಕಾರಣ ನಮ್ಮ ಬದುಕಿಗೆ ಸಮ್ಮತವಲ್ಲದ ಸಂಬಂಧಿಸಿಲ್ಲದ ಕ್ರಿಯೆಯಿಂದಾಗಿ ನಾವು ನಿರಾಳ. ಆದರೆ ದಶಕಗಳ ಕಾಲಾವಧಿಯಲ್ಲಿ ನಾವು ಏನಾಗಲಿಕ್ಕಿಲ್ಲ ಎಂದು ನಿರ್ಧರಿಸಿರುತ್ತೇವೆಯೋ ಅದು ತಿರುಗುಮುರಾಗಾಗಿ ಎದುರು ನಿಂತಾಗಿ ಬದುಕು, ಮನಸ್ಸು ಎಲ್ಲಾ ಕಕ್ಕಾಬಿಕ್ಕಿ ಎನ್ನುವುದಕ್ಕಿಂತಾ ಅಂತಹ ಪರಿಸ್ಥಿತಿಯಲ್ಲಿ ಮುಖ ಮತ್ತು ಮನಸ್ಸು ಎದ್ದು ನಿಲ್ಲಲೆತ್ನಿಸಿದರೂ ಏನೂ ಇರುವುದಿಲ್ಲ.ಸುಮಾರು ವರ್ಷಗಳ ಹಿಂದೆ ನಾನು ಏನೂ ಅಲ್ಲದಿದ್ದಾಗ, ನನಗೊಂದು ದಿಕ್ಕು ದೆಸೆ ಅಂತಲೇ ಇಲ್ಲದಿದ್ದಾಗ ಇದ್ದ ಚಿಕ್ಕ ಆಸರೆಯಂತಹ ನೌಕರಿಯ ಭಾಗವಾಗಿ ದಿನಾ ಬೆಳಿಗೆದ್ದು ಕಾರಿಡಾರನಲ್ಲಿ ನಡೆದುಕೊಂಡು ಹೋಗುವಾಗ ಮೊದ ಮೊದಲು ಅರ್ಥವಾಗದ ಮಾತಿಗೆ ಕಿವಿಗೊಡುತ್ತಿರಲಿಲ್ಲ. ಅಮೇಲಾಮೇಲೆ ಅದು ನಮ್ಮನ್ನೆ ಗೇಲಿ ಮಾಡಿಕೊಂಡು ಆಡಿಕೊಳ್ಳುತ್ತಿದ್ದಾರೆ ಎಂದರಿವಾಗಿತ್ತು. ಬೇರೇನೂ ಸಿಗದಿದ್ದರೂ ನಮ್ಮ ಬಟ್ಟೆ ಬರೆಗಳೂ ಗೇಲಿಗೀಡಾಗುತ್ತಿದ್ದವು. ಉಳಿದ ವಿಷಯಗಳೇನೆ ಇರಲಿ ಮೊದಲಿನಿಂದಲೂ ನಾನು ಡ್ರೆಸ್ಸು ಮತ್ತು ಆಯಾ ಹೊತ್ತಿಗಿನ ಕೆಲಸದ ವಿಷಯದಲ್ಲಿ ಅಚ್ಚುಕಟ್ಟು. ಅಂತಹ ಶಿಸ್ತು ನಮಗೆ ಇನ್ನಿಲ್ಲದ ವಿಶ್ವಾಸ ಕೊಡುತ್ತಿರುತ್ತದೆ. ಇದು ಆಗಲೂ ಈಗಲೂ ಹಲವರ ಕಿರಿಕಿರಿಗೂ, ಕಹಿಗೂ ಕಾರಣವಾಗಿದೆ. ಆಗಿನ ಕಾಲದಲ್ಲಿ ಹಾಗೆ ಗೇಲಿ ಮಾಡುತ್ತಿದ್ದವರಲ್ಲಿ ಅವನೊಬ್ಬನಿದ್ದ. ಅವನೇನು ಕೆಲಸ ಮಾಡುತ್ತಿದ್ದ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಆದರೆ ಕಂಡೊರ ಮೇಲೆಲ್ಲಾ ಸುಖಾಸುಮ್ಮನೆ ಏರಿ ಹೋಗುವುದೂ, ನಾಲ್ಕಾರು ಹುಡುಗರನ್ನು ಕಟ್ಟಿಕೊಂಡು ಧುಮಡಿ ಮಾಡುವುದು ಮಾಮೂಲಿಯಾಗಿತ್ತು. ಸಣ್ಣಸಣ್ಣ ಕಾರಣಕ್ಕೂ, ನಮಸ್ಕಾರ ಎಂದರೂ ಮೇಮೇಲೆ ಏರಿಬರುತ್ತಿದ್ದ. ಅವನಿಗೆ ಇಂತಹದ್ದಕ್ಕೆಲ್ಲಾ ಕೇವಲ ಅವಕಾಶ ಬೇಕಿತ್ತು ತನ್ನ ರುಬಾಬು ತೋರಿಸಲು ಅಷ್ಟೆ. ಯಾರೂ ಮಾತಾಡದಷ್ಟು ಕೆಟ್ಟಾ ಕೊಳಕಾಗಿಯೂ, ತಲೆ ಬುಡವಿಲ್ಲದ ಗೇಲಿ ಮಾಡುವುದರಿಂದಲೂ ಅವನು ಸುತ್ತಮುತ್ತಲಿಗೆ ಯಾರೂ ತಡುವಿಕೊಳ್ಳಲಾಗದಷ್ಟು ಅಸಹ್ಯದ ಪರಮಾವಧಿಯಲ್ಲಿದ್ದ.ಆಗಲೇ ನಾನು ಒಂದಿಷ್ಟು ಅವನ ಬಗ್ಗೆ ಮಾಹಿತಿ ಕಲೆ ಹಾಕಿದೆ. ಅವನೊಬ್ಬ ಆಫೀಸ್‍ಬಾಯ್. ನೀರು ಟೀ ತಂದು, ಟೇಬಲ್ ಒರೆಸಿ ಸಾಹೇಬರಿಗೆ ಊಟಕ್ಕಿಟ್ಟು, ಅವರ ತಟ್ಟೆ ಎತ್ತುತ್ತಿದ್ದ. ಅದರೆ ರೋಪು ಮಾತ್ರ ಆ ಅಧಿಕಾರಿಗಿಂತಲೂ ದೊಡ್ಡದಿತ್ತು. ಕಲಿತು ಬಿಟ್ಟಿದ್ದು ಏಳನೆಯ ತರಗತಿ. ಅದಕ್ಕಿಂತ ದೊಡ್ಡ ಕೆಲಸ ದೊರಕುವುದೂ ಸಾಧ್ಯವಿರಲಿಲ್ಲ. ಅದವನ ಕೀಳರಿಮೆಯೋ, ಸಂಕಟವೋ ನಮ್ಮ ಮೇಲೆಲ್ಲಾ ಎಗರುತ್ತಾ ಪಬ್ಲಿಕ್ಕಾಗಿ ಬೈದು ಮರ್ಯಾದೆಗೀಡು ಮಾಡುತ್ತಿದ್ದ.ನಾನೂ ಅಲ್ಲಿಂದ ಹೊರಬಿದ್ದೆ. ದಶಕಗಳೇ ಉರುಳಿದವು. ಊರು ರಾಜ್ಯ ಮತ್ತೆ ನಗರ ಎಲ್ಲಾ ಬದಲಾದವು. ಆದರೂ ಮನುಶ್ಯ ಅವನ ಚಹರೆ ಬದಲಾಗುತ್ತದೆಯೇ..? ಮೊನ್ನೆ ಮೊನ್ನೆ ಒಂದು ಖಾಸಗಿ ಕಾರ್ಯಕ್ರಮಕ್ಕೆ ಫಾರ್ಮ್‍ಹೌಸಿಗೆ ಹೋಗಿದ್ದೆ. ಅಲ್ಲೊಂದು ಚಿಕ್ಕ ಸಮಾರಂಭವಿತ್ತು. ಸುಮ್ಮನೆ ಒಂದಿಪ್ಪತ್ತು ಸ್ನೇಹಿತರು ಸೇರಿದ್ದೆವು. ಮಾತುಕತೆ, ಮೊಗೆಯ ಗೋಷ್ಠಿ. ನನಗೂ ಹೆಚ್ಚಿನ ಹಳೆಯ ಸ್ನೇಹಿತರು ಸಿಕ್ಕ ಖುಶಿಯಲ್ಲಿ ಲೋಕಾಭಿರಾಮವಾಗಿ ಹರಟಿ ಎದ್ದು ಬರುವಾಗ ಬೇಡ ಎಂದರೂ ಹಿಂದಿರುಗಿ ನೋಡಿದ್ದೆ.ನನ್ನ ಸಂಶಯ ನಿಜವಾಗಿತ್ತು. ಟೇಬಲ್ಲು ಒರೆಸಿ ನೆಲಕ್ಕೆ ಬಿದ್ದಿದ್ದ ತಿನಿಸಿನ ತುಣುಕುಗಳನ್ನು ಬಗ್ಗಿ ಎತ್ತಿಟ್ಟು, ಹಳೆಯ ಬಟ್ಟೆಯಿಂದ ನೆಲ ಒರೆಸುತ್ತ, ಕುಡಿದ ಗ್ಲಾಸುಗಳನ್ನು ಎತ್ತುತ್ತಾ ಅವನು ನೋಡುತ್ತಿದ್ದಾನೆ. ಅದು ಎದುರಿನವರು ನನ್ನ ಗುರುತು ಹಿಡಿದರಾ..? ನಾನು ಯಾರೆಂದು ಗೊತ್ತಾಗಿ ಹೋಯಿತಾ..? ಎನ್ನುವ ಅನುಮಾನ ಮತ್ತು ಅವಮಾನ ಭರಿತದ ದೃಷ್ಟಿ. ಆ ನೋಟದಲ್ಲಿ ತಾನೀಗಲೂ ತಟ್ಟೆ ಲೋಟ ಎತ್ತುತ್ತಿದ್ದೇನೆ, ನೆಲ ಒರೆಸುತ್ತಿದ್ದೇನೆ, ಹಿಂದ್ಯಾವತ್ತೋ ತಾನು ಎಗರುತ್ತಿದ್ದಾಗ "ನಿನ್ನ ಹಣೆ ಬರಹ ಇಷ್ಟೆ" ಎಂದು ಸುಮ್ಮನೆ ತಡುವಿಕೊಳ್ಳದೆ ಹೋಗುತ್ತಿದ್ದವನ ಮುಖದಲ್ಲಿ, ತನ್ನ ಬಗ್ಗೆ ಅವಹೇಳನ ಇದೆಯಾ ಎಂದು ಮುಖದ ಗೆರೆಗಳಲ್ಲಿ, ತನ್ನ ಬಗೆಗಿನ ಭಾವವನ್ನು ಹುಡುಕುವ ಅಪಸವ್ಯ ಭರಿತ, ಅವಮಾನಿತ ನೋಟ ಅದು. ಬೇರೇನೂ ಮಾಡಲಾಗದ ಆದರೆ ಹಿಂದಿನ ಕತೆ, ಈಗಿನ ಅವಮಾನಕರ ಸ್ಥಿತಿ ಎರಡಕ್ಕೂ ಏಗಲಾಗದ ಎಂಬ್ರಾಸಿಂಗ್ ನೋಟ ಅದು. ಕೆಲವೇ ಸೆಕೆಂಡು...ಬಿಟ್ಟು ಬಿಟ್ಟೆ. ಮತ್ತೆ ನಾನು ಅವನನ್ನು ದೃಷ್ಟಿಸಲಿಲ್ಲ.ಕಾರಣ ಈಗ ಅವನಿಗೆ ಏನಾದರೂ ಹೇಳಿ ಅಥವಾ ಮತ್ತೆ ನೋಡು ಈಗ ಹೆಂಗೆ...? ಎಂದು ಅವನನ್ನು ದೃಷ್ಟಿಸಿ ಆಗಬೇಕಾದುದೇನೂ ಇರಲಿಲ್ಲ. ಅಸಲಿಗೆ ಹಾಗೆ ಅವನ ಸ್ಥಿತಿಯನ್ನು ನಾನು ಮತ್ತೊಮ್ಮೆ ಅವನಿಗೆ ನೆನಪಿಸುವ ಅಗತ್ಯವೂ ಇರಲಿಲ್ಲ. ಅವನಿಗೆ ತನ್ನೆರಡೂ ಪರಿಸ್ಥಿತಿಗಳೂ ಅರಿವಿಗೆ ತಾನಾಗೇ ಬಂದಿರುತ್ತದೆ. ಅವಕಾಶ ಅಗತ್ಯ ಮತ್ತು ತಾಕತ್ತು ಇದ್ದಾಗ ಹಾರಾಡುವ ಮನುಶ್ಯ ನೆಲಕಚ್ಚಿದಾಗ ಮುಖದ ಮೇಲೆ ಚದರುವ ಅಂತಹ ಅವಮಾನಿತ ಖದರಿನ ಸತ್ತು ಹೋಗುವಷ್ಟು ಸಂಕಟದ ಲಕ್ಷಣಗಳನ್ನು ನಾನು ಸುಲಭವಾಗಿ ಗುರುತಿಸಬಲ್ಲೆ ಮತ್ತು ಹಾಗೆ ನನಗೆ ಗೊತ್ತಾಗುತ್ತಿದೆ ಎನ್ನುವುದನ್ನೂ ಎದುರಿನ ಅಪಮಾನಿತ ಸುಲಭಕ್ಕೆ ಅರಿತುಬಿಡುತ್ತಾನೆ ಸುಮ್ಮನೆ ಒಂದು ನೋಟಕ್ಕೆ. ಅದನ್ನು ಉದ್ದೇಶ ಪೂರ್ವಕವಾಗಿ ಮಾಡಲೇಬೇಕಿರುವುದಿಲ್ಲ. ಆದರೆ ಆ ಒಂದೆರಡು ಕ್ಷಣದಲ್ಲಿ ನಮಗರಿವಿಲ್ಲದೆ ಕೆಲವೊಂದು ಭಾವವನ್ನು ಹೊಮ್ಮಿಸುವ ಮನಸ್ಸು ಮತ್ತು ಮುಖ ಹಾಗು ನೆನಪು ಮತ್ತು ಎಲ್ಲಾ ಘಟನೆಗಳ ಇತಿಹಾಸ ಕ್ಷಣಾರ್ಧದಲ್ಲಿ ಮುಖಕ್ಕೆ ನುಗ್ಗಿ ಎಲ್ಲವನ್ನು ಮೇಳೈಸಿಬಿಡುತ್ತದೆ. ಕಾರಣ ಅದನ್ನು ಮರೆತಿರದ ಮನಸ್ಸು ನಿಮ್ಮ ಪ್ರತಿಕ್ರಿಯೆಗೂ ಮೊದಲೇ ಪ್ರತಿಬಿಂಬಿಸಿ ಬಿಟ್ಟಿರುತ್ತದೆ. ಅಷ್ಟೆ..ನೆಲಕ್ಕೆ ಕೂತೇ ಇದ್ದ ಅವನ ಭಂಗಿ, ಕೈಯ್ಯಲ್ಲಿದ್ದ ಮಾಪಿಂಗ್ ಬಟ್ಟೆ, ಎತ್ತಿದ್ದ ತಟ್ಟೆ ಜೊತೆ ತಲೆ ತಗ್ಗಿಸಿದ್ದ ಹುಳ್ಳಗಿನ ಮುಖ ಎಲ್ಲ ಒಂದೆರಡು ಸೆಕೆಂಡಿನಲ್ಲಿ ಗಮನಿಸಿದವನು ಸುಮ್ಮನೆ ನಡೆದು ಬಂದಿದ್ದೆ. ಅವನಿಗೆ ನೆನಪಿಸಿ ಆಗಬೇಕಾದುದೇನೂ ಇರಲಿಲ್ಲ. ಅವನೆದುರಿಗೆ ಈಗ ಹೆಂಗೆ..? ಎಂದು ನಾನು ಎದೆಯುಬ್ಬಿಸುವುದರ ಅವಶ್ಯಕತೆಯೂ ನನಗಿರಲಿಲ್ಲ. ಕೊಂಚವಾದರೂ ಮನುಶ್ಯ ಆಂತರಿಕವಾಗಿ ಬೆಳೆದಿದ್ದರೆ ಬದುಕು ಕಾಲಾನುಕ್ರಮದಲ್ಲಿ ಗಮ್ಯಗಳನ್ನು ಹೇಗೆ ತೋರಿಸಿತ್ತು ಎನ್ನುವುದವನ ಅರಿವಿಗೆ ಬಂದಿರುತ್ತೆ. ಆದರೆ ಇಂತಹ ಹಲವು ಘಟನೆಗಳಿಂದ ಪದೆ ಪದೆ ನನ್ನನ್ನು ನಾನು ಅಳೆದುಕೊಳ್ಳಲು ಅನುಕೂಲವಾಗುತ್ತಲೇ ಇರುತ್ತದೆ. ಪ್ರತಿ ದಿನ, ಘಟನೆಗಳು ನಮಗೆ ಸುತ್ತಿ ಹೊಡೆದಂತಹ ಪಾಠ. ಹಾಗೆ ಅವಕಾಶ ಇದ್ದಾಗ ಕಲಿತಷ್ಟೂ ಒಳ್ಳೆಯ ವಿದ್ಯಾರ್ಥಿಯಾಗುತ್ತೇನೆ. ಕಲಿಯುವ ಹಂಬಲ, ಅರ್ಜಿಸುವ ಮನಸ್ಸು ಹುಡುಕುತ್ತಲೇ ಇರುತ್ತದೆ. ಕಾಲ ಎಲ್ಲರಿಗೂ ಎಲ್ಲವನ್ನೂ ಕಲಿಸುತ್ತಲೇ ಇರುತ್ತದೆ. ಕೆಲವರಿಗೆ ಅರಿವಿಗೆ ಬರುತ್ತದೆ.. ಕೆಲವರಿಗೆ ಅರಿವಾಗುವ ಹೊತ್ತಿಗೆ ಜೀವನವೇ ಮುಗಿದಿರುತ್ತದೆ.ಲೈಫು ಇಷ್ಟೆ ಕಣ್ರಿ...

Monday, June 19, 2017

ಅಸಹಾಯಕತೆಯ ಕವಲುದಾರಿಗಳು...


ಕೆಲವೊಮ್ಮೆ ತೀರ ನಮ್ಮ ನಂಬಿಕೆ ಮತ್ತು ವಿಶ್ವಾಸಕ್ಕೆ ಪಾತ್ರರಾದವರೇ ಕೈ ಎತ್ತಿ ಬದುಕಿಗೆ ಬೀಗವಿಕ್ಕಿ ಬಿಡುತ್ತಾರೆ. ಅದರಲ್ಲೂ ಅಂತಹ ಮಾಹಿತಿ ಮತ್ತು ಘಟನೆಯ ಕೊನೆಯ ಕಂತು ಪೂರೈಸಿದಾಗಲೇ ತಿಳಿಯಬೇಕಾದವರ ಗಮನಕ್ಕೆ ಬರುವ ಹೊತ್ತಿಗೆ ನಿಜಕ್ಕೂ ಸಮಯ ಮೀರಿ ಹೋಗಿರುತ್ತದೆ. ಆಗಿದ್ದನ್ನು ಅರಗಿಸಿಕೊಂಡು ಮುಂದಡಿ ಇಡುವ ಹೊತ್ತಿಗೆ ಸುತ್ತಲಿನ ಜಗತ್ತು ನಮ್ಮ ಕೈಬಿಟ್ಟು ಬಹುದೂರ ನಡೆದುಹೋಗಿರುತ್ತದೆ.
ತೀರ ಮಧ್ಯವಯಸ್ಸಿಗೆ ಬರುವ ಹೊತ್ತಿಗೆ ಬಾಬಣ್ಣ ಮಗಳಿಗಿಷ್ಟು ಮಗನಿಗಿಷ್ಟು ಎಂದು ಎತ್ತಿಟ್ಟು ಬದುಕು ಕಟ್ಟಿಕೊಂಡಿದ್ದನಾದರೂ ಮಗ ಹೆಂಗೂ ಕೈಗೆ ಬರೋದು ತಡ ಅದೆ... ನಡೀತದೆ.. ಎಂದುಕೊಂಡು ಚೆನ್ನಾಗಿ ಓದುತ್ತಿದ್ದ ಮಗಳ ಮೇಲೆ ಅಪೂಟು ಪ್ರೀತಿ ಇಟ್ಟುಕೊಂಡು, ಎಲ್ಲವೂ ಅರಾಮಾಗಿ ನಡೆಯುತ್ತಿದೆ ಎಂದು ನಿಶ್ಚಿಂತೆಯಾಗೂ ಇದ್ದ.
ಚೆನ್ನಾಗೇ ಓದಿಕೊಂಡಿದ್ದ ಮಗಳು ಇಂಜಿನಿಯರ್ ಆದಳು. ಒಂದು ಕೆಲಸವೂ ಸಿಕ್ಕಿತು. "ಮಗಳು ಸೆಟ್ಲ್ ಆದಳು ಇನ್ನೇನು ಮದುವೆ ಮಾಡಿದರಾಯಿತು. ಎಲ್ಲಾರಗೂ ಜೀವನಾ ಹಿಂಗಿದ್ದರ ಭಾಳ ಅರಾಮ ನೋಡು.." ಎಂದು ಇತರರ ಒಳ್ಳೆಯತನಕ್ಕೂ ಮನದುಂಬಿ ಹಾರೈಸುತ್ತಿದ್ದ ಬಾಬಣ್ಣ ಆವತ್ತು ಕರೆ ಮಾಡಿದಾಗ ನನಗೂ ಒಂದಷ್ಟು ಹೊತ್ತು ಮನಸ್ಸು ಅಲ್ಲಾಡಿ ಹೋಗಿತ್ತು. ಕಾರಣ ಆ ದನಿಯಲ್ಲಿ ಜೀವವೇ ಇರಲಿಲ್ಲ. ಶಕ್ತಿಯಂತೂ ಅದಕ್ಕೂ ಮೊದಲೇ ಸತ್ತು ಹೋಗಿತ್ತು. ಚೆಂದವಾಗಿ ಮದುವೆ ಮತ್ತು ಬೀಗರು ಎಂದೆಲ್ಲಾ ಕನಸ್ಸು ಕಾಣುತ್ತಾ ಸಂಜೆಗಳಲ್ಲಿ ವಿಹರಿಸುತ್ತಿದ್ದ ಅವನ ಕನಸಿಗೂ, ಮನಸ್ಸಿಗೂ ಬೆಂಕಿ ಇಟ್ಟ ಮಗಳು ಎಲ್ಲಾ ಇದ್ದೂ ಏನೂ ಇಲ್ಲದವನೊಡನೆ ಓಡಿ ಹೋಗಿದ್ದಳು.
(ಈ ಓಡಿ ಹೋಗುವ ಹುಡುಗಿಯರ ಲಾಜಿಕ್ಕು ಅಧ್ಬುತವೂ ವಿಚಿತ್ರ ಆಗಿರುತ್ತವೆ. ಅದೆಷ್ಟು ಬಾಲಿಷ ಮತ್ತು ಚೈಲ್ಡಿಷ್ ಆಗಿರುತ್ತಾರೆಂದರೆ ಸ್ವಂತ ದುಡ್ಡು ದುಗ್ಗಾಣಿ ಚೆನ್ನಾಗಿದ್ದರೂ ಗೆಳೆಯನಾದವ ಆಗೀಗ ಗಿಫ್ಟು ಕೊಡುತ್ತಾನೆ ಎಂಬ ಕಾರಣಕ್ಕೆ ಓಡಿ ಹೋಗುವ ಹುಡುಗಿಯರಿದ್ದಾರೆ. ಅದರಲ್ಲೂ ಮೊಬೈಲ್ ಮತ್ತು ಅದರ ಚಾರ್ಜ್‍ಗಾಗಿ ಮುಲಾಜಿಲ್ಲದೆ ಖರ್ಚು ಮಾಡುತ್ತಾರೆ ಎನ್ನುವ ಕಾರಣಕ್ಕೇನೆ ಓಡಿ ಹೋಗುವ, ಸಂಬಂಧ ಹೊಂದಿದ ಹುಡುಗಿಯರ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಅದರ ಬಗ್ಗೆ ಮತ್ತೆ ಬರೆಯುತ್ತೇನೆ)
ಬಾಬಣ್ಣ ಕುಸಿದು ಕುಳಿತುಬಿಟ್ಟಿದ್ದ. ತಲೆ ಮೇಲೆ ಚಪ್ಪಡಿ ಎಳೆದ ಮಗಳು ಸಲೀಸಾಗಿ ಇನ್ಯಾವುದೋ ಜಾತಿಯವನನ್ನು ಮತ್ತು ಸರಿಯಾಗಿ ಕೆಲಸವೂ ಇಲ್ಲದವನೊಡನೆ ರೈಟ್ ಹೇಳಿದ್ದಳು. ಕಾಲ ಎಲ್ಲವನ್ನೂ ಮಾಯಿಸುತ್ತದಲ್ಲ ಹಾಗೆ ಬಾಬಣ್ಣ ಕೂಡಾ ಕ್ರಮೇಣ ಚೇತರಿಸಿಕೊಂಡ. ಇದ್ದೊಬ್ಬ ಮಗನಾದರೂ ಚೆನ್ನಾಗಿದ್ದರೆ ಸಾಕೆಂದು ಮುತುವರ್ಜಿಯಿಂದ ಓದಿಸಿದ. ಮಗಳ್ಯಾವಾಗಲೋ ತಪ್ಪಾಯಿತು ಎಂದು ಕಾಲಿಗೆ ಬೀಳ ಬಂದವಳನ್ನು ತಲೆ ನೇವರಿಸಿ ನಡೀ ಎಂದಿದ್ದ. ಆದರೆ ಮನಸ್ಸಿಗೆ ಅದ ಗಾಯ ಕೆರೆಯುತ್ತಾ ಉಳಿದಿದ್ದು ಮಾಯುವುದಾದರೂ ಹೇಗೆ..? ಒಟ್ಟಾರೆ ಬಾಬಣ್ಣ ಮತ್ತೆ ಎದ್ದು ನಿಂತಿದ್ದ. ನನಗೂ ಕ್ರಮೇಣ ಅವನೊಂದಿಗಿನ ಸಂಪರ್ಕವೂ ಕಡಿಮೆiÀiÁಗಿ ಮೊಬೈಲ್ ಹಾವಳಿಯಲ್ಲಿ ಬದುಕು ದ್ವೀಪದಂತಾಗತೊಡಗಿ ಬಾಬಣ್ಣ ಒಂದು ದಶಕದ ಅವಧಿಯಲ್ಲಿ ಹೆಚ್ಚು ಕಡಿಮೆ ಮರೆಯಾಗೇ ಹೋಗಿದ್ದ.
ಆವತ್ತು ಕಚೇರಿಯೊಂದಕ್ಕೆ ಹೋದವನು ಹೊರ ಬರುವಾಗ ಅಷ್ಟು ದೂರದಲ್ಲಿ ರಿಜಿಸ್ಟರ್ ಮಾಡುತ್ತಾ ಎನೋ ಬರೆಯುತ್ತ ಕುಳಿತಿದ್ದ ವ್ಯಕ್ತಿಯೊಬ್ಬರು ಕಾಣಿಸಿದ್ದರು. ವಯಸ್ಸು, ದೇಹ ಎರಡೂ ನಿವಾಳಿಸಿದಂತಿತ್ತು. ಆದರೂ ಬದುಕಿಗೆ ಅಧಾರವಾಗಿ ಕೆಲಸ ಮಾಡುವ ಅವರ ತನ್ಮತಯಿಂದಲೇ ಶರೀರ ಮತ್ತು ಮನಸ್ಸು ಎರಡೂ ಬಸವಳಿದದ್ದು ಕಾಣಿಸುತ್ತಿತ್ತು. ಹೌದೋ ಅಲ್ಲವೋ ಎನ್ನುತ್ತಲೇ "..ಬಾಬಣ್ಣಾ.." ಎಂದೆ. ಕನ್ನಡಕ ಏರಿಸುತ್ತಾ ನೋಡಿದವರು ಎದ್ದು ನಿಧಾನಕ್ಕೆ ಬಂದು ಸುಮ್ಮನೆ ಹೆಗಲಿಗೆ ಕೈ ಹಾಕಿ ನಿಂತು "..ನಡೀ ಚಾ ಕುಡಿಯೋಣ.." ಎನ್ನುತ್ತಾ ಬಂದರು. ನನಗೆ ಮಾತಾಡಿ ಏನಾಯಿತು ಎನ್ನುವುದೆಲ್ಲಾ ವಿಚಾರಿಸುವ ಅಗತ್ಯ ಇಲ್ಲದಂತೆ ಅವರ ಪರಿಸ್ಥಿತಿ ವಿವರಿಸುತ್ತಿತ್ತು.
ಮಗಳು ಇದ್ದಕ್ಕಿದ್ದಂತೆ ಬದುಕಿನಿಂದ ಕೈಯೆತ್ತಿದವಳು ಮಗ್ಗುಲನ್ನು ಒಮ್ಮೆ ಮುರಿದಿದ್ದಳು. ಆದರೂ ಅದೆಂಗೊ ಚೇತರಿಸಿಕೊಂಡ ಬಾಬಣ್ಣ ಮಗನ ಬದುಕಾದರೂ ಸುಗಮವಾಗಲಿ ಎಂದು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದ್ದ. ಮಗ ಚೆನ್ನಾಗೂ ಓದಿದ, ವಿದೇಶಿ ರೀತಿನೀತಿ ಎಲ್ಲಾ ಕಟ್ಟಿಕೊಂಡ ಅವನ ಇಚ್ಚೆಯಂತೆ ಬಾಬಣ್ಣ ಮದುವೆನೂ ಮಾಡಿದ. ಇದ್ದಬದ್ದ ಹಣವೆಲ್ಲಾ ತೀರಿ ಹೋದರೂ ಬಾಬಣ್ಣ ಮಗ ಹೆಂಗಿದ್ರೂ ಜೊತೆಗಿರುವವ ಎಂದು ಎಲ್ಲಾ ಕೇಳಿದಂತೆ ಮಾಡಿಬಿಟ್ಟ. ಕೊನೆಗೆ ಬೆಂಗಳೂರಿನಲ್ಲಿ ಪ್ರತ್ಯೇಕ ಮನೆಗಾಗಿ ಇದ್ದ ಸ್ವಂತ ಮನೆಯ ಮೇಲೆ ಸಾಲಕ್ಕೂ ಯೋಚಿಸಲಿಲ್ಲ. ಹೆಂಗಿದ್ದರೂ ಮಗ ಜೊತೆಗಿರುವವ ನನ್ನದಾದರೇನು ಅವನದಾದರೇನು ಎಂದು ಲಕ್ಷಗಟ್ಟಲೇ ಸಾಲಕ್ಕೆ ಮುದ್ರೆ ಒತ್ತಿ ಬಿಟ್ಟಿದ್ದ. ಎಲ್ಲಾ ಮುಗಿದು ಹೊಸ ಮನೆ ಗೃಹಪ್ರವೇಶವಾಗಿ ಮಗ ಮನೆಗೆ ಬಾರದಿದ್ದಾಗಲೇ ಗೊತ್ತಾಗಿತ್ತು ಮಗ ಕೈ ಬಿಟ್ಟ ವಿಷಯ.
ಹೊಸ ಫ್ಲಾಟು ತೆಗೆದುಕೊಂಡು ತನ್ನಿಷ್ಟದಂತೆ ಸಂಸಾರ ಆರಂಭಿಸಿದ್ದ ಮಗ ಬಾಬಣ್ಣ ಇದ್ದಾನಾ ಇಲ್ವಾ ಎಂದು ವಿಚಾರಿಸಲು ಈಗ ಬರುತ್ತಿಲ್ಲ. ಕಟ್ಟಬೇಕಿದ್ದ ಸಾಲದ ಬಾಕಿಯನ್ನೂ ನಿಲ್ಲಿಸಿಬಿಟ್ಟಿದ್ದಾನೆ. ಸಂಪೂರ್ಣ ದಿವಾಳಿ ಎಂದು ಘೋಶಿಸುವುದೊಂದೆ ಬಾಕಿ ಇದ್ದಾಗ ಸ್ನೇಹಿತರೊಬ್ಬರು ಅದೇ ಮನೆಯನ್ನು ಕೊಂಡು ಸಾಲ ತೀರಿಸಿ ಅವನಿಗೆ ಉಳಿಯಲೊಂದು ಚಿಕ್ಕ ರೂಮು ಬಿಟ್ಟುಕೊಟ್ಟಿದ್ದಾರೆ. ಬಾಕಿ ಜಾಗವನ್ನು ಬಾಡಿಗೆಗೆ ಮಾಡಿಕೊಂಡಿದ್ದಾರೆ. ಸ್ವಂತ ಮನೆಯಲ್ಲೇ ಬಾಡಿಗೆಯವನಂತೆ ಬದುಕುತ್ತಿರುವ ಕರ್ಮಕ್ಕೆ ಬಾಬಣ್ಣನ ಕೈ ಮತ್ತು ಮನಸ್ಸು ಪೂರ್ತಿಯಾಗಿ  ಖಾಲಿಯಾಗಿದ್ದವು.
ಜಗತ್ತು ಎರಡೂ ಕಡೆಯಿಂದಲೂ ಬಡಿದು ನಿಲ್ಲಿಸಿತ್ತು. ಜೊತೆಗೆ ಇದ್ದ ಹೆಂಡತಿಯೊಂದಿಗೆ ಬದುಕಲೇಬೇಕಲ್ಲ. ಸಾಲವೇನೂ ಇಲ್ಲ. ಆದರೆ ದುಡಿದ ಕೂಡಿಟ್ಟಿದ್ದ ಎಲ್ಲಾ ಸಂಪತ್ತೂ ಮಕ್ಕಳು ಸಲೀಸಾಗಿ ಖಾಲಿ ಮಾಡಿದ್ದರು. ಸೆಟ್ಲ್ ಆಗೋದೆ ಎಂದುಕೊಂಡಿದ್ದ ಬದುಕು ಬೀದಿಗೆ ಬಂದಿತ್ತು. ಯಾವ ರೀತಿಯಲ್ಲೂ ಬದುಕು ಸ್ಥಿರಗೊಳ್ಳುವ ಮೊದಲಿನ ಹಳಿಗೆ ಬರುವ ಲಕ್ಷಣವೇ ಇರಲಿಲ್ಲ. ದಿನವಹಿ ಊಟಕ್ಕೆ, ಖರ್ಚಿಗೆ ಎಲ್ಲಿಂದ ತಂದಾನು. ರಿಟೈರ್ ಆದ ಮೇಲಿನ ದುಡ್ಡು ಕೂಡಾ ಮಗನ ಮನೆಗೂ ಅದಕ್ಕೂ ಮೊದಲೂ ಓದಿಗೂ ಮದುವೆಗೂ ಇವನ ಕೈಯಿಂದಾನೆ ಖರ್ಚಾಗಿ ಹೋಗಿದೆ. ಎಲ್ಲಾ ಮಾಡಿಸಿಕೊಂಡ ಮಗ ಮಗಳು ಇಬ್ಬರೂ ಈಗ ಇದ್ದರೂ ಇಲ್ಲದಂತಾಗಿ, ಅವಮಾನವಾಗಿ ಹಿಂದಿರುಗಿದ್ದಾನೆ. ಕೊನೆಯ ಕಾಲದಲ್ಲಿ ಬದುಕು ದೇಹ ಎರಡರೊಂದಿಗೂ ಬಡಿದಾಡುತ್ತಾ ಮತ್ತೆ ಸಣ್ಣ ಕೆಲಸ ಹುಡುಕಿಕೊಂಡಿದ್ದಾನೆ ಬಾಬಣ್ಣ.
ಹೊರಡುವ ಮೊದಲು ಬಾಬಣ್ಣನನ್ನು ಬಲವಂತವಾಗಿ ನನ್ನೊಂದಿಗೆ ಕರೆದೊಯ್ದೆ. ಅವನ ಮೊಗೆ ಮೊಗೆ ಬಿಯರ್‍ನ ಋಣ ನಾನು ಮರೆಯಲಾದರೂ ಹೇಗೆ ಸಾಧ್ಯ...? ಸಣ್ಣ ಸಂಕೋಚ ಮತ್ತು ಹಳೆಯ ಅನುಭವದ ಚಳಕುಗಳೊಂದಿಗೆ ಮುದುರಿ ಎದುರಿಗೆ ಕುಳಿತಿದ್ದ ಬಾಬಣ್ಣನ ಕೈಯ್ಯಲ್ಲಿ ಈಗ ತುಂಬು ಮೊಗೆ ಎತ್ತಿಕೊಳ್ಳಲೂ ಶಕ್ತಿ ಇಲ್ಲದಂತಿದ್ದ. ಶರೀರ ನಿಧಾನಕ್ಕೆ ನಡಗುತ್ತಿತ್ತು. ದಶಕಗಳ ಹಿಂದೆ ಇದೇ ಖುರ್ಚಿಯಲ್ಲಿ ಮರ್ಯಾದೆಯುತವಾಗಿ ತಲೆ ಎತ್ತಿ ಕೂಡುತ್ತಿದ್ದ ದೇಹ ಇವತ್ತು ಹಿಡಿಯಾಗಿಸಿ ಕೂತುಕೊಂಡಿತ್ತು. ಕಣ್ಣಿನಲ್ಲಿ ಆತ್ಮವಿಶ್ವಾಸ ಸಾಯಲಿ ಬದುಕು ಯಾವಾಗ ಮುಗಿದೀತು ಎನ್ನುವ ನಿರೀಕ್ಷೆಯ ತಪನೆಯಲ್ಲಿತ್ತು. ಏನಾಗಿ ಹೋಯಿತು ಎನ್ನುವ ದುಗುಡದೊದಿಗೆ ಹೇಗೊ ಒಂದಷ್ಟು ಹೊತ್ತು ಕೂತಿದ್ದ ಬಾಬಣ್ಣ ಊಟ ಮಾತ್ರ ಬಿಲ್ ಕುಲ್ ಒಲ್ಲೆ ಎಂದ.
" ಬೇಜಾರಾಗಬೇಡ. ನಾನು ಇಲ್ಲಿ ಊಟ ಮಾಡ್ತಾ ಇದ್ರ ಮನೆಯಲ್ಲಿ ಅವಳು ಒಬ್ಳೆ ಕಾಯ್ತಿರ್ತಾಳೆ. ಸರಿಯಾಗೋದಿಲ್ಲ. .." ಎನ್ನುತ್ತಿದ್ದರೆ ಸುಮ್ಮನೆ ಅವರ ಭುಜ ಬಳಸಿ ಎಬ್ಬಿಸಿಕೊಂಡು ಬಂದೆ. ಎರಡೂ ಊಟದ ಪಾರ್ಸೆಲ್ ಕೈಗಿತ್ತು ಒಮ್ಮೆ ಮೌನವಾಗಿ ನಿಂತು ತಬ್ಬಿಕೊಂಡು ನಡೆದುಬಿಟ್ಟೆ. ನಿಂತಿದ್ದರೆ ಇಬ್ಬರನ್ನೂ ಸುಧಾರಿಸಲು ಇನ್ನೊಬ್ಬರು ಬೇಕಾಗುತ್ತಿದ್ದರಾ ಗೊತ್ತಿಲ್ಲ. ಆದರೆ ವಾಸ್ತವದ ಭೀಕರತೆಯ ಎದುರು ನಾನೂ ಅಕ್ಷರಶ: ನಡುಗಿದ್ದೆ. ಬಾಬಣ್ಣನ ಮಾತು ಕಿವಿಯಲ್ಲೇ ಗುಂಯ್ ಗುಡುತ್ತಿತ್ತು..
" ಹಿಂಗಾಗುತ್ತೆ ಅನ್ನೋದಾದರೆ ಮಕ್ಕಳ ಸುಖಾನೂ ಬೇಡ. ಈ ವೃದ್ಯಾಪ್ಯ ಅನ್ನೋದು ಮೊದಲೇ ಬೇಡ ನೋಡು..ಉಫ್.." ಉಳಿದದ್ದೇನೆ ಇರಲಿ, ಹೀಗಾಗುವುದಾದರೆ ನನ್ನ ಆಯುಸ್ಸು ಅದಕ್ಕೂ ಮೊದಲೇ ಮುಗಿದು ಹೋಗಲಿ.." ಎನ್ನಿಸಿದ್ದೂ ಸುಳ್ಳಲ್ಲ.

Monday, May 29, 2017

ಸ್ವತ: ಮಾಡಿಕೊಳ್ಳುವ ಸಿಹಿವಂಚನೆ ಅದು...

(ಎಲ್ಲಾ ಗೊತ್ತಾದರೂ "ಅಯ್ಯೋ.." ಎನ್ನುವ ಅವನ ಮಾತಿಗೆ ಆಕೆ ಒಳಗೊಳಗೆ ನಕ್ಕು ಸುಮ್ಮನಾಗುತ್ತಾಳೆ. ಕಾರಣ ಆಕೆಗೊಂದು ಆಪ್ತ ಸ್ನೇಹದ ಮನಸ್ಸು ಬೇಕಿರುತ್ತದೆ. ಮಾತಾಡಿಕೊಳ್ಳಲು ಇಂಥ "ಕಡಿಮೆ ಡೆಂಜರ್"ಎನ್ನಿಸುವವನು ಬೇಕಿರುತ್ತಾನೆ.)
"..ಎಷ್ಟು ಸರ್ತಿ ಹೇಳಿದೀನಿ ನಿನ್ಗೆ ಟೈಂಗೆ ಸರಿಯಾಗಿ ಇರ್ಬೇಕು ಅಂತಾ. ಕಾಲ್ ಬೇರೆ ಹೋಗ್ತಿಲ್ಲ ನಿನಗೆ.." ಎನ್ನುತ್ತಾ ಆಕೆ ಸ್ನೇಹದಿಂದಲೂ ಅವನ ಜೊತೆಗೆ ಇರುವ ಸಲುಗೆಯಿಂದಲೂ ಕಾರ್ಯಕ್ರಮಕ್ಕೆ ತಡವಾಗಿ ಬಂದವನನ್ನು ಗದರುತ್ತಿದ್ದರೆ, ಆತ ಪ್ಯಾಲಿ ನಗೆ ನಗುತ್ತಾ, ಅರೆ ಚಿಗುರಿದ ಗಡ್ಡ ಕೆರೆದು, 
" ನಿನ್ನಂಗೆ ಎಲ್ಲಾ ಅಪ್‍ಡೆಟ್ ಇರಲ್ಲಮ್ಮಾ ನಾವು.. ಎಲ್ಲಾ ಕಡೆನೂ ಗಮನ ಕೊಡೊದ್ರಲ್ಲಿ ಮೊಬೈಲ್ ಅಪ್ಡೆಟ್ ಮಾಡ್ಕೊಳ್ಳಕೂ ದುಡ್ಡು ಉಳ್ದಿರಲ್ಲ.." ಇತ್ಯಾದಿಯಾಗಿ ಮಾತಲ್ಲೇ ಅಡ್ವಾಂಟೇಜ್ ಹುಟ್ಟಿಸಿಕೊಳ್ಳುತ್ತಾ, ತನ್ನ ಕತೆಯನ್ನು ಅನುಕಂಪ ಭರಿತವಾಗಿ ನುಡಿಯುತ್ತಿದ್ದರೆ, ನಂತರ ನಡೆಯುತ್ತಿದ್ದ ಕಾರ್ಯಕ್ರಮಕ್ಕಿಂತಲೂ ಸ್ನೇಹಿತನ ಮೇಲೆ ಅನುಕಂಪ ಆಕೆಯನ್ನು ಹೆಚ್ಚು ಹಿಂಡಿ ಹಾಕುತ್ತಿತ್ತು. ಅವನು ಬೇಡ ಬೇಡ ಎಂದು ಹಲ್ಲು ಕಿರಿಯುತ್ತಿದ್ದರೂ ಬಿಡದೆ ಅವನಿಗೊಂದು ಒಳ್ಳೆ ಊಟ ಹಾಕಿಸಿ, ಹಾಗೆ ಬಿಲ್ಲು ಕೊಡುವಾಗ ತಾನು, ಮಕ್ಕಳು ಮರಿ ಐಸ್‍ಕ್ರೀಂ ಎಂದೆಲ್ಲಾ ಖರ್ಚು ಮಾಡುವಾಗ ಮಾಡುತ್ತಿದ್ದ ಲೆಕ್ಕಾಚಾರದ ಬದುಕಿಗಿಂತಲೂ ಕೊಂಚ ಹೆಚ್ಚಾಗಿದೆ ಎನ್ನಿಸುವುದು ಅರಿವಿಗೆ ಬಾರದಂತೆ ಮಾಡುವ ಅವನ, ಹದಭರಿತ ಊಟ, ತಮಾಷೆಯ ಪ್ರೀತಿ ಪೂರ್ವಕ ಮಾತಿನ ಭರದಲ್ಲಿ ತುಸು ಹೆಚ್ಚೆ ಖರ್ಚಾಗಿದೆ ಎನ್ನಿಸಿದರೂ ಅದೊಂದು ದುಗುಡ ಎನ್ನಿಸದೆ, ಹೆಂಗೋ ಬದುಕುತ್ತಿದ್ದಾನೆ ಎಂಬ ಸ್ನೇಹ ಪೂರ್ವಕ ಪ್ರೀತಿಯ ಒಲುಮೆಯಲ್ಲಿ ಮರೆತು ಹೋಗುತ್ತಾ ಕಡೆಗೆ ಆಟೊದಲ್ಲಿ ಕೂತಾಗ ಹೀಗೆ ಆಗಾಗ ಅವನಿಗೆ ಕೊಡುವ ಮತ್ತು ಖರ್ಚು ಮಾಡುತ್ತಿರುವದರ ಹಿಂದಿನ ತನ್ನ ಆಪ್ತತೆಯ ಬಗೆಗೆ ಆಕೆಗೆ ಹೆಮ್ಮೆಯಾಗುತ್ತ ಗುನುಗಿಕೊಂಡೆ ಮನೆಯತ್ತ ನಡೆಯುತ್ತಾಳೆ.
ಆದರೆ ಹಾಗೆ ವಿಶ್ವಾಸಗಳಿಸಿಕೊಂಡು ಅವಳಿಂದ ಕೈ ಸಾಲ ಎತ್ತುತ್ತಿರುವ ಆತ, ಅದಾದ ಅರ್ಧ ಗಂಟೆಯಲ್ಲೇ ಇನ್ನೇಲ್ಲೋ ಚಾಟ್‍ನಲ್ಲಿ ಮತ್ತದೇ ಗೋಳು ಹೇಳಿಕೊಳ್ಳುತ್ತಾ ಇನ್ನೊಬ್ಬಳು ಸ್ನೇಹಿತೆಯಿಂದಲೂ ಇನ್ನೊಂದೆರಡು ಸಾವಿರ ಎತ್ತುವಳಿಯ ಉಳುಮೆ ಮಾಡುತ್ತಿದ್ದನೆ ಎಂದು ಗೊತ್ತೇ ಆಗುವುದಿಲ್ಲ. 
ತನ್ನ ಕೈ ನಡೆಯುವಾಗ ಇನ್ನಿಲ್ಲದ ಆರ್ಭಟಕ್ಕಿಳಿಯುವ ಇಂಥವರು, ಅಷ್ಟೆ ನಾಜೂಕಾಗಿ ಕೈ ಸಾಲ ಎನ್ನುತ್ತಿವಲ್ಲ ಅದನ್ನು ಎತ್ತುವುದರಲ್ಲಿ ಪ್ರವೀಣರು. ತೀರ ಹತ್ತಾರು ಸಾವಿರವನ್ನು ಯಾವ ಸ್ನೇಹಿತೆಯೂ ಸುಲಭಕ್ಕೆ ಕೊಡಲಾರಳು. ಅಷ್ಟೊಂದು ಹಣವನ್ನು ಇಟ್ಟುಕೊಂಡು ಓಡಾಡಲಾರರು ಕೂಡ. ಹಾಗೆ ಅಷ್ಟೆಲ್ಲಾ ಕೇಳಿದರೆ ಅದು ವರ್ಕೌಟೂ ಆಗುವುದಿಲ್ಲ. ಆದರೆ ಒಂದೆರಡು ಸಾವಿರ, ನೂರಿನ್ನೂರು ಚಿಲ್ರೆ ಹಣವಾದರೆ ಆಕೆ ವಾಪಸ್ಸು, ಕೇಳದಂತೆನೂ ಇರಬೇಕು. ಕೇಳಿದರೂ ಯಾರೋ ಒಬ್ಬರಿಗೆ ಹಿಂದಿರುಗಿಸಲು ಅನಾನುಕೂಲವೂ ಇರಬಾರದು. ಹೆಚ್ಚಿನ ಇವೆಲ್ಲಾ ಗಾಡಿಗೆ ಪೆಟ್ರೊಲ್ ರೂಪದಲ್ಲೂ, ಎಷ್ಟೊ ಸರ್ತಿ ಸಣ್ಣ ಮೊತ್ತದ ಮೊಬೈಲ್ ಕರೆನ್ಸಿ ರೂಪದಲ್ಲೂ, ಕೆಲವೊಮ್ಮೆ ಆವತ್ತಿನ ಪುಷ್ಕಳ ಚಿಕನ್ ಊಟದ ರೂಪದಲ್ಲೂ(ಬಹುಶ: ತುಂಬ ಜನರಿಗೆ ಈ ಅನುಭವಾಗಿರುತ್ತದೆ. ತಮ್ಮ ಊಟಕ್ಕೆ ಲೆಕ್ಕಾಚಾರವಿರುತ್ತದೆ. ಅದೇ ಬೇರೆಯವರು ಬಿಲ್ಲೆತ್ತುವ ದಿನ ಅದ್ಯಾವುದೂ ಇರುವುದೂ ಇಲ್ಲ ಮತ್ತು ಆವತ್ತು ಕಂಡು ಕೇಳರಿಯದ ಮೆನು ಎಲ್ಲಾ ಟೇಬಲ್ಲಿಗೆ ದಾಖಲಾಗುತ್ತಿರುತ್ತವೆ ಆವತ್ತೇ ಅವರಿಗೆ ಹಸಿವೂ ಕೂಡಾ), ಈ ತಿಂಗಳ ಅಮ್ಮನ ಮೆಡಿಸಿನ್ ಮುಗಿದು ಹೋಗಿದೆ ಎನ್ನುವ ಅನುಕಂಪದ ಅಧಾರದ ಮೇಲೆ, ತಮ್ಮ/ತಂಗಿ ಹಾಸ್ಪಿಟಲ್ ಎನ್ನುವ ಕಾಮನ್ ಆದರೆ ಎಫೆಕ್ಟೀವ್ ರೀಸನ್ನು, ಗಾಡಿಗೇನೋ ಪ್ರಾಬ್ಲಂ ನಡ್ಕೊಂಡೆ ಓಡಾಡ್ತೀದಿನಿ ಎನ್ನುವ ಪಾಪದ ನೆಪ, ಹೀಗೆ ಹತ್ತಿರವಾದ ಸ್ನೇಹಿತೆಯರು ತಾವಾಗಿಯೇ ಪರ್ಸು ಬಿಚ್ಚುವಂತೆ ಮಾಡುವಲ್ಲಿ ಸಿದ್ಧ ಹಸ್ತರು. ಬೇಡ ಬೇಡ ಎನ್ನುತ್ತಲೆ ತೆಗೆದುಕೊಳ್ಳುವ ಬಣ್ಣದ ನೋಟು ಇನ್ಯಾವತ್ತೂ ಆಕೆಯ ಪರ್ಸಿಗೆ ಹಿಂದಕ್ಕೆ ಬಂದ ಉದಾ. ತುಂಬ ಕಡಿಮೆ. 
ಕಾರಣ ಸಾವಿರದ ಆಸುಪಾಸಿನ ಹಣವನ್ನು ಕೇಳುವುದಾದರೂ ಹೇಗೆ..? ಎನ್ನುವ ಮುಲಾಜಿಗೆ ಬೀಳುವ ಹೆಣ್ಣು ಮಕ್ಕಳು, ಕೆಲವೊಮ್ಮೆ ಈ ಯಾಮಾರಿಸುವಿಕೆ ಗೊತ್ತಿದ್ದರೂ ಹೋಗಲಿ ಪಾಪ ಎನ್ನುವ ಮೂರ್ಖತನಕ್ಕೂ ಒಳಗಾಗಿ ಸುಮ್ಮನಿದ್ದು ಬಿಡುತ್ತಾರೆ. ಒಂದೆರಡು ಬಾರಿ ಅವನು ಅಯ್ಯೋ.. " ಎನ್ನುತ್ತಾ ಹಲವು ಅನುಕಂಪಕಾರಿ ಕಾರಣ ಕೊಡುತ್ತಾ ಹಣ ಹಿಂದಿರುಗಿಸದ ಬಗ್ಗೆ ಮುಖ ಸುಟ್ಟಾ ಬದನೆಯಂತೆ ಮಾಡಿ ಅವನು ಹಲ್ಕಿರಿಯುತ್ತಿದ್ದರೆ, 
"..ಪರವಾಗಿಲ್ಲ ಸುಮ್ನಿರು. ನಿನ್ಗೆ ಎಲ್ಲಾ ಅನುಕೂಲ ಆದ್ಮೇಲೆ ಅದರ ಡಬಲ್ ಇಸ್ಕೊಳ್ತೀನಿ.." ಎಂದಾಕೆ ಆಪ್ತ ಸಲುಗೆಯಲ್ಲಿ ನುಡಿಯುತ್ತಿದ್ದರೆ ಅತ್ತ ಅವನು ನಿರಾಳವಾಗಿಬಿಡುತ್ತಿರುತ್ತಾನೆ. ಕಾರಣ ತನ್ನ ಆ ಡಬಲ್ ಕೊಡುವ ಅನುಕೂಲ ಬರುವುದಿಲ್ಲ. ಹಾಗೆ ಆಕೆ ಹೇಳುತ್ತಿದ್ದಾಳೆಂದರೆ ಇನ್ನಾಕೆ ವಿಚಾರಿಸುವುದಿಲ್ಲ. ಅಲ್ಲಿಗೆ ಗಾಂಧಿ ನೋಟಿಗೆ ಕೃಷ್ಣನ ಲೆಕ್ಕವೇ. 
ಅದ್ಯಾವುದಕ್ಕೋ ಅಂತಾ ಕಾಯ್ದಿಟ್ಟ ಹಣವನ್ನೂ ಇಂತಹ ಪ್ಯಾಲಿ ಹೆಂಗಸರು ಹೀಗೆ ಕಳೆದುಕೊಳ್ಳುತ್ತಲೇ ಇರುತ್ತಾರೆ. ಆದರೆ ಎಲ್ಲೂ ಹೇಳಲಾಗದ ಮತ್ತು ತೀರ ತಲೆ ಹೋಗುವ ಮೊತ್ತವೂ ಅದಲ್ಲವಲ್ಲ. ಅಲ್ಲಿಗೆ ಅವನ ಜೀವನ ಅಷ್ಟರ ಮಟ್ಟಿಗೆ ನವನವೀನ. ಇತ್ತ ಎಲ್ಲಾ ಗೊತ್ತಾದರೂ ಅಯ್ಯೋ ಎನ್ನುವ ಅವನ ಮಾತಿಗೆ ಆಕೆ ಒಳಗೊಳಗೆ ನಕ್ಕು ಸುಮ್ಮನಾಗುತ್ತಾಳೆ. ಕಾರಣ ಆಕೆಗೊಂದು ಆಪ್ತ ಸ್ನೇಹದ ಮನಸ್ಸು ಬೇಕಿರುತ್ತದೆ. ಮಾತಾಡಿಕೊಳ್ಳಲು ಇಂಥ "ಕಡಿಮೆ ಡೆಂಜರ್"ಎನ್ನಿಸುವವನು ಬೇಕಿರುತ್ತಾನೆ. ಬಾಕಿ ಎಲ್ಲಾ ಓ.ಕೆ. ಸಿಕ್ಕಿದರೆ ಚಾನ್ಸು ತೊಗೊಳ್ಳುವವನೇ, ಅದರೆ ಗೆರೆ ದಾಟದ ಮನುಶ್ಯ ಎಂಬಿತ್ಯಾದಿ ಆಕೆಯದ ಮನಸ್ಸಿಗೆ ಸಮಾಧಾನಿಸುವ ಕಾರಣಗಳ ಜೊತೆಗೆ, ಎಲ್ಲೋ ತೀರ ಅಫೇರಾಗದಿದ್ದರೂ ಅದೂಂದು ರೀತಿಯ ಆತ್ಮ ಬಂಧುವಿನಂತಹ ಸಂಬಂಧ ಅನ್ನಿಸಿರುತ್ತದಲ್ಲ ಹಾಗಂದುಕೊಂಡಿರುತ್ತಾಳೆ ಆಕೆ. ಆದರೆ ಅಲ್ಲೆ ಯಡವಟ್ಟುಗಳಾಗೋದು. ( ನೆನಪಿರಲಿ ಹೀಗೆ ದುಡ್ಡು ಯಾಮಾರುವುದು ಒಂಥರಾ ಆಪ್ತ ಆಪ್ತ ಎನ್ನುವ ಸಲುಗೆಯಲ್ಲೇ. ಅದು ತೀರ ಅವರ ಮಧ್ಯದ ಆಫೇರು ಆಗಿರುವುದಿಲ್ಲ. ಅಕಸ್ಮಾತ ಆಗಿದ್ದರೆ ಆಕೆಯನ್ನು ಇಷ್ಟು ಸಣ್ಣ ಮೊತ್ತಕ್ಕೆ ಆತ ಯಾಮಾರಿಸುವುದಿಲ್ಲ.)ಇದೆಲ್ಲಾ ಆಗಿ ಎಲ್ಲಾ ಕಡೆಯಲ್ಲೂ ಅವನು ಹೀಗೆಯೆ ಕೈಎತ್ತುತ್ತಾನೆನ್ನುವುದು ಗೊತ್ತಾಗುತ್ತಿದ್ದರೂ ಹೋಗ್ಲಿ ಎನ್ನುವ ಪ್ಯಾದೆ ಹೆಣ್ಣುಮಕ್ಕಳು ಇವತ್ತು ಇದೇ ಸರ್ಕಲ್ಲಿನಲ್ಲಿ ಸಿಗುತ್ತಾರೆ. ಎಂಥೆಂಥಾ ರೀಸನ್ನುಗಳು ಅಂತೀರಿ. 
ಹಾಗಂತ ಹೆಣ್ಣು ಮಕ್ಕಳೇನೋ ಯಾಮಾರಿಸುವುದೇ ಇಲ್ಲವಾ ಎನ್ನುವ ಆಗತ್ಯವೇ ಇಲ್ಲ. ಅಷ್ಟೆ ಸಂಖ್ಯೆಯಲ್ಲಿ ತನ್ನ ಖರ್ಚಿಗೊಬ್ಬ/ಕುರ್ಚಿಗೊಬ್ಬ ಎಂದು ಬೇರೆ ಬೇರೆ ರೀಸನ್ನುಗಳಿಗೆ ಸ್ನೇಹಿತರನ್ನು ಸಾಕಿಕೊಳ್ಳುವ ಹೆಂಗಸರಿದ್ದಾರೆ. ವಾರಾಂತ್ಯಕ್ಕೆ ಬೇರೆ, ತೀರ ಜೊತೆಯಾಗಿರಲೊಬ್ಬ, ಅಗತ್ಯದ ಅಪಾರ ಖರ್ಚುಗಳಿಗೊಬ್ಬ ಇತ್ಯಾದಿ. ಕೊನೆಕೊನೆಗೆ ಅವನೊಡನೆ ಹೊರಟರೆ ಎಲ್ಲಾ ಅವನದ್ದೇ ಖರ್ಚು ಬಿಡು ಎಂದು ನಿರುಮ್ಮಳವಾಗಿ ಅವನ ಜೇಬು ತೆಳ್ಳಗಾಗಿಸುತ್ತಾ,  ತೀರ ಖಾಸಗಿಯಾಗಿ ಅವನೊಂದಿಗೆ ಕಳೆಯುವಾಗಲೂ ಅವಳಿಗೆ ವ್ಯತ್ಯಾಸಗಳಿರುವುದಿಲ್ಲ. ಇತ್ತ ಇವನೊಂದಿಗೂ ಅತ್ತ ಅವನಿಗೂ ತೆಕ್ಕೆ ಬದಲಿಸುತ್ತಾ ಬದುಕು ಕದಲಿಸುವವರಿದ್ದಾರೆ. ಸ್ನೇಹದ ಹೆಸರಲ್ಲಿ ಕೊಂಚ ಸಲಿಗೆಯವನೂ ಸರಿನೇ, ಸುಮ್ಮನೆ ಅವನ ಬಗಲಿಗೆ ಕೈ ಹೂಡಿ ನಡೆದರಾಯಿತು. ತೀರ ಸರಿಯಾಗಿ ಹುಡುಕಿದರೆ ಇವತ್ತು ಫೇಸ್‍ಬುಕ್ಕಿನಲ್ಲೂ ಅಲ್ಲಲ್ಲಿ ಕಾಲಿಗಡರುತ್ತಾರೆ ಇಂತಹ ಹೆಂಗಸರು. ಅಚ್ಚರಿ ಎಂದರೆ ಇಂಥ ಪರಿಚಯದ ಅರೆಬರೆ ಸ್ನೇಹಿತೆಯರನ್ನು ನಂಬಿಕೊಂಡು, ಸುಖಾಸುಮ್ಮನೆ ಅವರ ಜೊತೆ ಕೂತೆದ್ದು ಪಟ್ಟಾಂಗ ಹೊಡೆಯಲೇ ರಾಜಧಾನಿಗೆ ಎಡತಾಕುವವರೂ ಇದ್ದಾರೆ.
ನೆನಪಿರಲಿ, ಬ್ರಿಗೇಡ್‍ರೋಡ್‍ಲ್ಲಿ ಪರ್ಚೇಸಿಂಗ್ ಮಾಡಸ್ತೀಯಾ ಎನ್ನುವ ಹೆಣ್ಣುಗಳಿಗೂ ಕಡಿಮೆ ಇಲ್ಲ. ಆದರೆ ಹಾಗೆ ತೆವಲಿಗೆಂದೆ ನಮ್ಮ ಜೇಬಿಗೆ ಕೈಯಿಕ್ಕುವವರ ಬಗ್ಗೆ ಯಾರಾದರೂ ಸರಿ ಹುಶಾರಾಗಿರಲೇಬೇಕು. ತೀರ ಅವರಿಬ್ಬರ ಸಂಬಂಧವೆ ಖಾಸಗಿ ರೂಪದಲ್ಲಿದೆ ಎಂದರೆ ಅವರವರು ಏನು ಮಾಡಿಕೊಳ್ತಾರೋ, ಖರ್ಚೋ,  ಲಾಭನೋ ಅದು ಅವರ ಹಣೆಬರಹ. ಆದರೆ ಅಗತ್ಯಕ್ಕೆ ಬಳಸಿಕೊಳ್ಳುವವರ ಇಂತಹ ವಂಚನೆಯಿಂದ, ನಿಜಕ್ಕೂ ಯಾವಾಗಾದರೂ ಯಾರಿಗಾದರೂ ಸಹಾಯದ ಅವಶ್ಯಕತೆ ಇದ್ದಾಗ ಎಂಥವರೂ ಯೋಚಿಸಿ ಕೈಯೆತ್ತಿಬಿಡುವುದಾಗುತ್ತದಲ್ಲ ಆಗ ಆಗುವ ನಷ್ಟಕ್ಕೆ ಯಾರು ಹೊಣೆ..?
ಕಾರಣ ಇವತ್ತು ತಾನು ಕಷ್ಟದಲ್ಲಿದ್ದೇನೆ ಎಂದು ಕೆಲವೊಮ್ಮೆ ಮಕ್ಕಳ ಶಾಲೆ ಫೀಸಿಗೆ ಹಣ ಕಟ್ಟಿಸಿಕೊಂಡೂ ಕನಿಷ್ಟ ಮಗು ಸ್ಕೂಲಿಗೆ ಹೋಗ್ತಿದೆ ಎನ್ನುವ ಮಾಹಿತಿ ಕೊಡದ ಕೃತಘ್ನರು ಬೇಕಾದಷ್ಟಿದ್ದಾರೆ. ಮಾತು ಮತ್ತು ತೋರಿಕೆಯ ಜಂಭಕ್ಕೇನೂ ಕಮ್ಮಿ ಇರದ ಇಂತಹ ಗಂಡು/ಹೆಣ್ಣು ಇವತ್ತು ಸಮಾನ ಸಂಖ್ಯೆಯಲ್ಲಿದ್ದಾರೆ. ನಿಜಕ್ಕೂ ಹುಶಾರು ತಪ್ಪಿದಾಗ, ಅಗತ್ಯವಿದ್ದಾಗ ಮಾನವೀಯತೆಯ ದೃಷ್ಟಿಯಲ್ಲಿ ಸಹಾಯ ಮಾಡಿದವರನ್ನೇ ಖಳನಾಯಕ/ಕಿ ಸ್ಥಾನದಲ್ಲಿ ನಿಲ್ಲಿಸಿದವರಿಗೂ ಕೊರತೆ ಇಲ್ಲ ಇಲ್ಲಿ. ಜೊತೆಗೆ ಇಂತಹ ಸಹಾಯ ಪಡೆದ/ಮಾಡಿದ ಅವರನ್ನು ಹೊರತು ಪಡಿಸಿ ಉಳಿದವರು ಮಸಾಲೆ ಉರಿಸುವವರೇ ಜಾಸ್ತಿ ಇವತ್ತು ಗೋಡೆ ಬರಹದಲ್ಲಿ. ಹಾಗಾಗಿ ನಮಗೇ ಗೊತ್ತಾಗದಂತೆ ಯಾಮಾರಿಸುವವರ ಜೊತೆಗೆ ಹುಶಾರಾಗಿರದೇ ಇದ್ದರೆ ನಿಜಕೂ ನಮ್ಮದೇ ನಿಜವಾದ ಆಪ್ತರಿಗೆ ಏನಾದರೂ ಕೈ ಮುಂದೆ ಮಾಡಲು ನಾವು ಯೋಚಿಸುವಂತಾಗುವ ಪರಿಸ್ಥಿತಿಗೆ ಬದುಕು ಬಂದು ನಿಂತರೆ ಆಗುವ ಲುಕ್ಷಾನು ಇಂತಹ ಹಲಾಲು ಟೋಪಿ ಸ್ನೇಹಿತರಿಗಲ್ಲ. ನಮಗೇನೆ.. ನೆನಪಿರಲಿ.. 
ಇಲ್ಲದಿದ್ದರೆ ಹೀಗೆಲ್ಲಾ ನಾನು "ಪಿಸುಮಾತು" ಆಡುವ ಅವಶ್ಯಕತೆಯಾದರೂ ಯಾಕೆ ಬರುತ್ತದೆ...? 

Saturday, May 20, 2017

ಜಾಲತಾಣದಲ್ಲೂ ಅದೇ ಹಾಡು ಅದೇ ರಾಗ...

(..ಇವತ್ತು ಸೋಷಿಯಲ್ ಮೀಡಿಯಾ ಕೆಟ್ಟದಿಲ್ಲ. ಋಣಾತ್ಮಾಕ ಅಂಶಗಳು ಎಲ್ಲೆಡೆಗೂ ಇರ್ತವೆ. ಆದರೆ ಎಂಥವನೂ ಒಂದು ಚಾನ್ಸ್ ತೊಗೊಳ್ಳೊಣ ಎಂದೇ ಟ್ರೈ ಕೊಡುತ್ತಾ ಇದ್ದರೆ ಯಾರನ್ನು ನಂಬೋದು. ಇವರಿಗೆಲ್ಲ ಹೆಣ್ಣು ಮಕ್ಕಳೆ ಇರಲ್ಲವಾ ..? " ಇತ್ಯಾದಿ ಮಾತಾಡುತ್ತಿದ್ದ ಆಕೆಯ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ...)

"..ಎನೋ ನನ್ನ ವಾರಿಗೆಯ ಸ್ನೇಹಿತರೆಲ್ಲಾ ಇದಾರೆ ಅಂತಾ ಫೇಸ್‍ಬುಕ್ಕು ವಾಟ್ಸಾಪು ಮಾಡಿಕೊಂಡೆ. ಇದು ನೋಡಿದ್ರೆ ಊರಿಗಿಲ್ಲದ ಉಸಾಬರಿ ಆಗ್ತಿದೆಯೋ ಮಾರಾಯ. ಇಷ್ಟು ವರ್ಷದ ನಂತರ ಅನವಶ್ಯಕವಾಗಿ ನಮ್ಮ ಮನೆಲಿ ಮಾತು ಕೇಳ್ಬೇಕಾಯಿತು ನೋಡು.." ಎನ್ನುತ್ತಾ ಆಕೆ ಅನ್ಯಮನಸ್ಕಳಾಗಿ ಹುಬ್ಬೇರಿಸುತ್ತಿದ್ದರೆ ಜಾಲತಾಣದಲ್ಲಿ ಕುಹಕಿಗಳ, ಮಹಿಳೆಯರನ್ನು ಕಾಡುವ ಹೊಸ ವರಸೆಗಳಿಗೆ ಹೊಸ ಸಾಕ್ಷಿಯಾಗತೊಡಗಿದ್ದೆ. 
ತೀರ ಹೊಸಬರಿಗೆ ಮಾತ್ರವಲ್ಲ, ಮನೆಯಲ್ಲಿದ್ದೇ ಕೆಲಸ ಕಾರ್ಯ ಮಾಡಿಕೊಂಡಿದ್ದ ನೆಮ್ಮದಿಯ ಹೆಣ್ಣುಮಕ್ಕಳಿಗೂ ಹೋಮಮೇಕರ್ ಎಂಬ ಡೆಸಿಗ್ನೇಶನ್ನು ಕೊಟ್ಟಿದ್ದೇ ಇವತ್ತು ಸಾಮಾಜಿಕ ಜಾಲತಾಣಗಳು. ತಂತಮ್ಮ ಮಕ್ಕಳ ಹತ್ತಿರ ಫೇಸ್‍ಬುಕ್ಕು ಐ.ಡಿ ಮಾಡಿಸಿಕೊಂಡು ತಾವೂ ಯುಗಾದಿಗೊಂದು ಫೆÇೀಟೊ, ಒಂದು ಪ್ರವಾಸದ ಚಿತ್ರ, ಯಾವುದೋ ಮಗುವಿನ ಬೊಚ್ಚು ನಗೆ, ಇನ್ಯಾವಾಗಿನದ್ದೋ ತಾನೆ ಬರೆದುಕೊಂಡಿದ್ದ ಹಳೆಯ ಕವನದ ಧೂಳು ಹಾರಿಸಿ ಇಲ್ಲಿ ಪ್ರಕಟಿಸಿಕೊಂಡು, ಎಲ್ಲೆಲ್ಲೋ ಇದ್ದ ಸ್ನೇಹಿತೆಯರೆಲ್ಲಾ ಸಿಕ್ಕಿ ತಮ್ಮದೇ ಒಂದು ವೃತ್ತ ರಚಿಸಿಕೊಂಡು ಅಲ್ಲೆಲ್ಲ ಫೆÇೀಟೊ, ಚಾಟು ಹೀಗೆ ಅವರವರ ಖುಷಿಗೆ ಮತ್ತು ಅಗತ್ಯಕ್ಕೆ ಜಾಲತಾಣ ಹೊಸ ರೀತಿಯ ಚೇತನ ಮಧ್ಯಮವಯ ದಾಟುತ್ತಿರುವವರಿಗೂ ಒದಗಿಸಿದ್ದು ಸುಳ್ಳಲ್ಲ. ಅದರಲ್ಲೂ ಹೆಣ್ಣುಮಕ್ಕಳು ಒಂದಿಷ್ಟು ನಿರುಮ್ಮಳವಾಗಿ ಆಪ್ತ ಸಂಗಾತಿಯಂತೆ ಅಲ್ಲಲ್ಲಿ ಮನಸ್ಸಿನ ಹರಿವಿಗೊಂದು ದಾರಿ ಕಲ್ಪಿಸಿಕೊಂಡಿದ್ದೂ ಹೌದು.
ತುಂಬ ಮಹಿಳೆಯರಿಗೆ ಸ್ಕ್ರೀನು ತೀಡುತ್ತಾ ಕೂಡಲು ಫೇಸ್‍ಬುಕ್ಕು ಆಪ್ತ ಅಪ್ತ. ರೆಸಿಪಿಯಿಂದ ಹಿಡಿದು, ಸಮಾಜ ಸೇವೆ, ಇನ್ಯಾರಿಗೋ ನೋಟ್ ಬುಕ್ಕು ವಿತರಣೆಗೆ ತಂಡ ಕಟ್ಟಿಕೊಂಡು ಹೋಗಿ ಅಲ್ಲೇ ಕಾಪಿಯ ಸಣ್ಣ ಔಟಿಂಗು, ಕಿಟ್ಟಿಪಾರ್ಟಿಯ ತೀರ್ಮಾನ, ಹೊಸ ಪುಸ್ತಕದ ಚರ್ಚೆ, ತಿಂಗಳ ಕಿರಿಕಿರಿಯವರೆಗೂ ಆಪ್ತವಾಗಿ ಇನ್‍ಬಾಕ್ಸಿನಲ್ಲಿ ಸ್ನೇಹಿತೆಯರೊಂದಿಗೆ ಹರಟಿಕೊಂಡು ಹಗುರಾಗಲು ಸಮಾನ ಮನಸ್ಕರ ಸಾಂಗತ್ಯ ಆಕೆಗೆ/ಅವಳಿಗೆ ಲಭ್ಯವಾಗಿದ್ದೇ ಇಂತಹ ಜಾಲಗಳು ಬದುಕಿಗೆ ಅಚ್ಚರಿಯಾಗಿ ಕಾಲಿಕ್ಕಿದ ಮೇಲೆ. 
ವಾಟ್ಸಾಪು, ಫೇಸ್‍ಬುಕ್ಕಿನದ್ದು ಈಗ ಯಮ ವೇಗ. ಯಾರ ಮಾಹಿತಿ, ಏನೇ ಅನಾಹುತಗಳೂ ಮೊದಲು ಜಾಹೀರಾಗೋದು ಅಲ್ಲೇ. ಅದೆಲ್ಲ ಅವರವರ ವೈಯಕ್ತಿಕ ಇಷ್ಟ. ಆದರೆ ಅದನ್ನೆ ಗುರಿಯಿಕ್ಕಿ ಹೆಣ್ಣುಮಕ್ಕಳಿಗೆ ಕಾಡುವ ಜಾಲಿಗರಿದ್ದಾರಲ್ಲ ಅವರ ಕೈಯಿಂದ ತಪ್ಪಿಸಿಕೊಳ್ಳೊದೇ ಇವತ್ತು ದೊಡ್ಡ ತಲೆ ನೋವಾಗಿದೆ. ಹೀಗೆ ಹಿಂದೆ ಬೀಳುವ ಹೆಚ್ಚಿನವರದ್ದೆಲ್ಲಾ ಒಂದೇ ಗುರಿಯೆಂದರೆ ಆಕೆ ಎಟುಕಬಹುದಾ ಎನ್ನುವುದು. ಇಲ್ಲದಿದ್ದರೆ ಇನ್ಯಾರಿಗೂ ಸಿಗದೆ ಇರಲಿ ಎನ್ನುವ ಆತ್ಮಸಂಕಟ. 
ಇವತ್ತು ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಸ್ನೇಹಿತೆಯರು ಇನ್ಯಾರ ಜೊತೆಗಾದರೂ ಸ್ನೇಹದಿಂದಿದ್ದರೆ, ಒಂದೆರಡು ಪಿಕ್‍ನಿಕ್ಕು, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಡಿದ್ದೆ ತಡ ಅವಳ ಇನ್‍ಬಾಕ್ಸಿಗೆ ಆತುಕೊಳ್ಳುತ್ತಾರೆ. ಅವರೆಲ್ಲರೊಂದಿಗೆ ಸಲಿಗೆಯಿಂದಿದ್ದೀಯಲ್ಲ ನನ್ನೊಂದಿಗೂ ಇರು ಎನ್ನುವುದೇ ಪರೋಕ್ಷ ವರಾತ. ಹೇಗಾದರೂ ಅವನೊಂದಿಗೆ ಸ್ನೇಹ ಇದೆ. ನಾನೂ ಹಂಗೆ ಒಬ್ಬಳೊಂದಿಗೆ ಕಟ್ಟಿಕೊಂಡು ಓಡಾಡಬೇಕು, ಫೆÇೀಟೊ ಹಾಕಿಕೊಳ್ಳಬೇಕು.. ಎನ್ನುವುದು ಒನ್‍ಲೈನ್ ಅಜೆಂಡಾ.
ಒಂಚೂರು ಸ್ನೇಹ ಕುದುರುವುದೇ ತಡ, ಯಾವ ಮುಲಾಜೂ ಇಲ್ಲದೆ ಆಕೆ ಯಾರಿಕೆ ಲೈಕ್ ಒತ್ತುತ್ತಾಳೆ, ಯಾರಿಗೆ ಕಮೆಂಟ್ ಮಾಡುತ್ತಾಳೆ, ಹಾಗೆ ಒತ್ತುವ ಲೈಕು,  ಮಾಡುವ ಕಮೆಂಟು ಎರಡನ್ನೂ ನಾನು ನೋಡಿದ್ದೇನೆ ಎನ್ನುವಂತೆ ತಾನೂ ಅದಕ್ಕೊಂದು ಲೈಕು ಒತ್ತುವುದು, ಆಕೆಗೆ ಬೀಳುವ ಎಲ್ಲಾ ಕಮೆಂಟ್‍ನ್ನು ಫಾಲೋ ಮಾಡುತ್ತಿರುವುದು, ಆಕೆ ರಾತ್ರಿ ಹನ್ನೊಂದರ ನಂತರವೂ ಆನ್‍ಲೈನ್‍ನಲ್ಲಿದ್ದರೆ ಪಕ್ಕದಲ್ಲಿ ಗಂಡ ಇಲ್ಲ ಎನ್ನುವ ಅಂದಾಜು, ತೀರ ಬೇಸರದಲ್ಲಿದ್ದೇನೆ ನಿಮ್ಜೊತೆ ಮಾತ್ರ ಹೇಳ್ಕೊಳ್ಳಕಾಗೋದು ಕಾಲ್ ಮಾಡಲೇ..?ಎನ್ನುವ ಪಿಸಣಾರಿತನ, ಇದೊಂದು ಕವನ ಬರೆದೆ ಅದ್ಯಾಕೋ ಕಣ್ಮುಂದೆ ನೀನು ಮಾತ್ರ ಬರ್ತೀದೀಯ ಎನ್ನುವ ಹುಕಿ, ಇದು ಕವನ ನಿನಗಾಗೇ, ಎಲ್ಲೋ ಟ್ರಿಪ್ ಹೋಗ್ತಿದೀವಿ ನೀನು ಬರ್ತೀ ಅಂತಾನೆ ಡಿಸೈಡ್ ಮಾಡಿದ್ದು ಅಲ್ಲೆಲ್ಲ ಉಳಿದವರ ಜತೆ ನನಗೆ ಕಂಪೆನಿ ಸೆಟ್ ಆಗಲ್ಲ ಎನ್ನುವ ಎಮೋಶನಲ್ ಬ್ಲಾಕ್ ಮೇಲ್, ಕವನ ಸಂಕಲನಕ್ಕೆ ನಿಮ್ಮ ಅಭಿಪ್ರಾಯ ಕೊಡಿ ಮಾತಾಡಲು ಮನೆಗೇ ಬರಲಾ..? ಎನ್ನುತ್ತಾ ದಾರಿ ಹುಡುಕುವವರು, ವಾಲ್ ಮೇಲೆ ನಿನ್ನ ಕವನ ನೋಡಿದ ಮೇಲೆ ನಾನು ಬರೆಯೋದನ್ನೇ ಬಿಟ್ಟೆ ಎನ್ನುತ್ತಾ, ಕೊನೆಗಾಕೆ ಹೂಂ ಎಂದರೆ ಅದೂ ಮನೆಯಲ್ಲಿ ಗಂಡ ಮಕ್ಕಳು ಇಲ್ಲದ ಸಮಯವೇ ಆಗಬೇಕಂತೆ. ಸ್ವಲ್ಪ ಸ್ನೇಹ ಎನ್ನುವ ಪರೀಧಿಯಲ್ಲಿ ಆಕೆ ಅಪ್ತತೆಯಿಂದ ಮಾತಾಡಿದರೂ ಸಾಕು, ಒಂದು ಕವನ ಬರೆದು, ಬೆಳ್‍ಬೆಳಿಗ್ಗೆ ನಿದ್ರೆಗೂ ಮೊದಲು ನಿನ್ನದೆ ಕನಸು ಎನ್ನುತ್ತಾ ಕನವರಿಕೆಗೆ ನಾಲ್ಕು ಸಾಲು ಇನ್‍ಬಾಕ್ಸ್ ಮಾಡಿ, ರಾಮರಾಮಾ ಆಕೆ ಯಾಕಾದರೂ ಜಾಲತಾಣಕ್ಕೆ ಕಾಲಿಟ್ಟೇನೋ ಎನ್ನುವಂತೆ ಮಾಡಿಬಿಡುತ್ತಿದ್ದಾರೆ.
ಹೇಗಿದೆ ವರಸೆ...? 
ಅದಕ್ಕೂ ಮಿಗಿಲಾಗಿ ದಿನಕ್ಕೆ ಮೂರೂ ಹೊತ್ತೂ ಬಂದು ಬೀಳುವ ಗುಡ್‍ಮಾರ್ನಿಂಗು, ಗುಡ್‍ನೈಟು, ಊಟ ಆಯಿತಾ, ತಿಂಡಿ ಆಯಿತಾ ಎನ್ನುವ ಮಾತುಕತೆಗೆ ಆಹ್ವಾನಿಸುವ ರಹದಾರಿಯನ್ನು ತೆರೆಯಲೆತ್ನಿಸುತ್ತಾ ಆಕೆ ಕಿರಿಕಿರಿಯಿಂದ ಬೇಸತ್ತು ಎನೋ ಒಂದು ಹೇಳಿ ಸಾಗಹಾಕಲು ಹೋದರೆ ಅದರಲ್ಲೇ ಹಲವು ಅರ್ಥ ಹುಡುಕುತ್ತಾ, ಇಷ್ಟೆ ಆಯಿತಾ ಅದೂ ಇಲ್ಲ. ಕೊಂಚ ಕಿರಿಕ್ ಆಗಿ ಬ್ಲಾಕ್ ಮಾಡಿದರೆ ಫೇಕ್ ಐ.ಡಿಯಿಂದಲೂ ಬೆನ್ನಟ್ಟುವುದನ್ನು ಬಿಡಲಾರರು. ಕೆಲವು ಕುಹಕಿಗಳಂತೂ ಇನ್ನೊಂದು ಫೇಕ್ ಐಡಿ ಮೂಲಕ ಆಕೆಯ ಗಂಡನಿಗೂ/ಹೆಂಡತಿಗೂ ಇಲ್ಲ ಸಲ್ಲದ ಮೆಸೇಜು ಕಳುಹಿಸಿ ಯಾಕಾದರೂ ಫೇಸ್‍ಬುಕ್ಕು ಮಾಡಿಕೊಂಡೇನೋ ಎನ್ನಿಸುತ್ತಿದ್ದಾರೆ. ಅವನ್ಯಾವನೋ ಮುಖ ಮೂತಿ ಇಲ್ಲದ ಫೇಕು ಮೇಸೆಜು ಮಾಡಿದ ಸರಿಯೇ. ಆದರೆ ಹತ್ತಾರು ವರ್ಷಗಳಿಂದ ಸಂಸಾರ ಮಾಡಿರುವ ಈ ಗಂಡನಿಗೇನಾಗಿರುತ್ತದೆ ಧಾಡಿ..? 
ಮೊದಲೇ ಹೆಂಡತಿ ಯಾವಾಗೆಲ್ಲ ಮೊಬೈಲ್ ತೀಡುತ್ತಿದ್ದುದು ಅವನ ಕಣ್ಣು ಕುಕ್ಕುತ್ತಿರುತ್ತದಲ್ಲ. ಮನೆಯಲ್ಲೂ ಈಗ ಪಿರಿಪಿರಿ ಶುರುವಾಗತೊಡಗುತ್ತದೆ. " ಮನೆ ನೀಟಾಗಿಡುತ್ತಿಲ್ಲ, ಮಕ್ಕಳ ಆವರೇಜು ಕಡಿಮೆಯಾಗುತ್ತಿದೆ, ಕರೆಂಟು ಬಿಲ್ ಜಾಸ್ತಿ, ಲಿಸ್ಟ್ ಬರೆದಿಟ್ಟಲ್ಲ.." ಹೀಗೆ ಕಾಂಜಿ ಪಿಂಜಿ ಮಾತುಗಳಿಗೆಲ್ಲ ಆಕೆ ತಲೆ ಕೊಡಬೇಕು. ಅವನೀಗ, ಮನೆಯಲ್ಲಿ ನಾನಿಲ್ಲದಾಗ ಸುಖಾಸುಮ್ಮನೆ ಫೇಸ್‍ಬುಕ್ಕಿನಲ್ಲಿ ಟೈಂಪಾಸ್ ಮಾಡ್ತಿದ್ದಿ ಅನ್ನುವುದನ್ನು ಪರೋಕ್ಷವಾಗಿ ಹೇಳುತ್ತಿದ್ದಾನೆ. ಹತ್ತಾರು ವರ್ಷಗಳಿಂದ ಬಾರದ ಪ್ರಶ್ನೆಗಳಿಗೆ ಈಗ ಎಲ್ಲಿಂದ ಉತ್ತರ ಹುಡುಕುವುದೆನ್ನುತ್ತಾ ಆಕೆ ಅನ್ಯಮನಸ್ಕಳಾಗುತ್ತಿದ್ದಾಳೆ. ಸ್ವಂತ ಹೆಂಡತಿ ಹೆಸರಿನಲ್ಲಿ ಚಾಟ್ ಮಾಡಿ ಅದು ನಾನೇ ಅವಳಿಲ್ಲ ಎನ್ನುವವರು, ನಿಮ್ಮದು ಪರ್ಸನಲ್  ಐ.ಡಿ/ವಾಟ್ಸ್ ಆಪ್ ನಂ. ಇದೆಯಾ ಎನ್ನುವ ಆಸೆಬುರಕರು, ನಾನು ಚಾಟ್ ಮಾಡಿದ್ದು ನನ್ನ ಹೆಂಡತಿಗೆ ಹೇಳಬೇಡಿ ಎನ್ನುವ ಮಖೇಡಿಗಳು ಹೀಗೆ ತರಹೇವಾರಿಯಲ್ಲಿ ಬಹಿರಂಗವಾಗುವ ಕುಹಕಿ ಗಂಡಸರ ಸಂಕಟಗಳೆಂದರೆ ಅರ್ಜೆಂಟಿಗೆ ಅವನಿಗೊಬ್ಬ ಹೆಂಗಸು ಬೇಕಿದೆ. ಚಾಟಿಗೆ, ಚಟಕ್ಕೆ, ಲೈಕಿಗೆ. ಯಾರಾದಾಳು ಎಂದು ಎಲ್ಲೆಡೆಗೆ ಕಾಳು ಹಾಕುವುದೇ ಆಗಿದೆ.
 ಆಕೆಗಾದರೆ ಹಂಚಿಕೊಳ್ಳಲು ಹಲವು ವಿಷಯಗಳಿವೆ, ತನ್ನದೆ ಚೆಂದದ ಪುಟವಿದೆ, ಹಲವು ಮಾಹಿತಿಯ ಕಣಜವಿದೆ. ಅವನಿಗೇನಿದೆ..? ತನಗೆ ಲಭ್ಯವಾಗದಿರುವ ಆಕೆಯ ಲೈಕು, ಕಮೆಂಟು, ಸ್ನೇಹ  ಬೇರೊಬ್ಬನಿಗೆ ದಕ್ಕುತ್ತಿದೆಯಲ್ಲ ಎನ್ನುವುದೇ ಒಳದರ್ದಿನ ಮೂಲ. ಅದನ್ನು ತಡೆಯುವ ಸಕಲ ಪ್ರಯತ್ನದ ಭಾಗವೇ ಆಕೆಯ ಇನ್‍ಬಾಕ್ಸ್‍ಗೆ ಎಚ್ಚರ, ನಿಯಂತ್ರಣ, ಪರೋಕ್ಷ ವಾರ್ನಿಂಗು ಎಲ್ಲ. ಆಕೆ ಸ್ನೇಹದ ಪರೀಧಿಯಲ್ಲಿದ್ದರೂ ಇವತ್ತಲ್ಲ ನಾಳೆ ಎಟುಕಿಯಾಳು ಎನ್ನುವ ಕುತ್ಸಿತ ಮನಸ್ಥಿತಿ ಅಷ್ಟೆ.
"..ಇವತ್ತು ಸೋಷಿಯಲ್ ಮೀಡಿಯಾ ಕೆಟ್ಟದಿಲ್ಲ. ಋಣಾತ್ಮಾಕ ಅಂಶಗಳು ಎಲ್ಲೆಡೆಗೂ ಇರ್ತವೆ. ಆದರೆ ಎಂಥವನೂ ಒಂದು ಚಾನ್ಸ್ ತೊಗೊಳ್ಳೊಣ ಎಂದೇ ಟ್ರೈ ಕೊಡುತ್ತಾ ಇದ್ದರೆ ಯಾರನ್ನು ನಂಬೋದು. ಇವರಿಗೆಲ್ಲ ಹೆಣ್ಣು ಮಕ್ಕಳೆ ಇರಲ್ಲವಾ ..? " ಇತ್ಯಾದಿ ಮಾತಾಡುತ್ತಿದ್ದ ಆಕೆಯ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ. 
ಕಾರಣ ಪ್ರತಿ ಹೆಣ್ಣೂ ಅಫೇರಿಗೇ ಆಗಲಿ ಎಂದು ಪ್ರಯತ್ನಿಸುವ, ಅವನ ಜೊತೆ ಚಾಟ್ ಮಾಡ್ತಿದ್ದೀರಾ ಎಂದು ಕಾಲ್ಕೆರೆದು ಬರುವ, ನನಗೊಂದು ಕಾಲ್ ಮಾಡಿ ಎಂದು ಮೇಸೆಜು ಹಾಕಿ ಕಾಲ್ ಮಾಡಿದರೆ ಆ ಕಡೆಯಿಂದ ಅದನ್ನೆ ಸ್ನೇಹಿತರಿಗೆ ತೋರಿಸಿಕೊಂಡು "..ನೋಡ್ರೊ ಆಕೆ ನನಗೆ ಕಾಲ್ ಮಾಡ್ತಾಳೆ.." ಎನ್ನುವ ಹರಾಜಿನ ಪ್ರಕ್ರಿಯೆಗಿಳಿಯುವ ಆತ್ಮವಂಚನೆಯ ಮಧ್ಯೆ, ಆಕೆ ಇನ್ನಾರೊಂದಿಗೂ ಆತ್ಮೀಯಳಾಗದಿರಲಿ ಎಂದೇ ಗಿಲ್ಟ್‍ಗೆ ತಳ್ಳುವ ಮುನ್ನ ಆಕೆಯ ಬಗ್ಗೆ ಅಲ್ಲಲ್ಲಿ ಮಾತಾಡಿ ಹೊಲಸು ಮಾಡುವವರ ಮಧ್ಯೆ, ಆಕೆ ಅಂತಹವರನ್ನು ಬ್ಲಾಕ್ ಮಾಡಿ ಮುನ್ನಡೆಯುವುದೊಂದೇ ದಾರಿ ಎಂದುಕೊಳುತ್ತಿದ್ದಾಳೆ. ಸ್ವಚ್ಛತೆ ಹೊರಗಷ್ಟೆ ಅಲ್ಲ ಒಳಗೂ ಆಗಬೇಕಿದೆ. ಅದರೆ ಜಾಲತಾಣದಲ್ಲಿ ಗಾರ್ಬೇಜೇ ಹೆಚ್ಚಾಗುತ್ತಿದೆ. 
ಇಲ್ಲದಿದ್ದರೆ ಪಿಸುಮಾತು ಆಡುವ ಅಗತ್ಯವಾದರೂ ಏಕಿರುತ್ತದೆ ನನಗೆ...?

Friday, May 19, 2017


ಅವಳೊಂದು ಜೀವೋನ್ಮಾದ... ಅದರೆ ಅವನು...?

(ರಾತ್ರಿ ಹನ್ನೊಂದಕ್ಕೆ ಮಂಚಕ್ಕೆ ತಲೆಯಿಡುತ್ತಿದ್ದರೆ ಬೇಕಿದೆಯೋ ಬೇಡವೋ ವಿಚಾರಿಸಿಕೊಳ್ಳದೇ ಅವನೊಂದಿಗೆ ದೇಹ ಉಜ್ಜುವ ಪ್ರಕ್ರಿಯೆಯಲ್ಲಿ, ಮನಸ್ಸು ಎಲ್ಲಿ ಯಾವ ಪಾತ್ರೆಯ ಕರೆಯ ಜೊತೆ ತೊಳೆದು ಸರಿದು ಹೋಗಿರುತ್ತದೋ ಗೊತ್ತಾಗುವುದಾದರೂ ಹೇಗೆ..? )

" ನಾವು ನಾಜೂಕು ಇದ್ರೂ ಅತೀ ಹೆಚ್ಚು ಕೆಲ್ಸ ನಡೆಯೋದೇ ನಮ್ಮಿಂದ..." ಅವಳ ಮಾತಿಗೆ ತತಕ್ಷಣಕ್ಕೆ ಹೂಂ ಅಥವಾ ಉಹೂಂ ಎನ್ನಲು ನನ್ನಲ್ಲಿ ಯಾವ ಕಾರಣಗಳೂ ಇರಲಿಲ್ಲ. ಕಾರಣ ದೈತ್ಯ ಕೆಲಸಗಾರ ಅಥವಾ ಅವನದ್ದು ಭಾರಿ ವರ್ಕು ಅಂತೆಲ್ಲಾ ಏನೇ ವಿಶೇಷಣಗಳಿಟ್ಟುಕೊಂಡು, ಗಂಡಸಿನ ವರ್ಕಾಲಿಕ್ ನೇಚರ್ ಅಂತೆಲ್ಲಾ ಮಾತಾಡುತ್ತಿದ್ದರೂ ಒಂದೇ ದಿನ ಮನೆಲಿ ಬಿಟ್ಟುನೋಡಿ. ಸುಮ್ಮನೆ ಇವತ್ತೊಂದಿನ ಮನೆ ಸುಧಾರಿಸಿ ಅಂತಾ ಪೂರ್ತಿ ಮನೆನಾ ಕೈ ಗಿಟ್ಟು ಹೊರಟು ಬಿಡಿ.
ಅವನು ಅರ್ಧ ದಿನವೂ ತಡೆಯಲಾರ,
ಉಹೂಂ ..ತೋಪೆದ್ದು ಹೋಗುತ್ತಾನೆ.
ಯಾವಾಗ ಮತ್ತೆ ಆಫಿûೀಸಿಗೆ ಸೇರಿಯೇನು ಎಂದು ಗೊಣಗಾಟ ಬಾಯಿಂದಾಚೆಗೆ ಬಾರದಿದ್ದರೂ ಮರುದಿನ ಕಚೇರಿ ಸಮಯವೋ ಅಥವಾ ಮನೆಯಿಂದಾಚೆಗೆ ಹೋಗುವುದಕ್ಕೋ ಆತ ಕಾಯುತ್ತಲೇ ಇರುತ್ತಾನೆನ್ನುವುದು ಸುಳ್ಳಲ್ಲ. ಕಾರಣ ದೊಡ್ಡ ದೊಡ್ಡ ಕೆಲಸವನ್ನು ಸಲೀಸಾಗಿ ಎಂಥವನೂ ನಿಭಾಯಿಸಿ ಬಿಡುತ್ತಾನೆ. ಆ ಕೆಲಸಕ್ಕೆ ಬೇಕಾದಷ್ಟು ಸಹನೆ ಮತ್ತು ಕಾರ್ಯವಾಹಿ ದಕ್ಷತೆ ಮೈಗೂಡಿಸಿಕೊಂಡು ಮಾನಸಿಕವಾಗಿ ಒಂದು ಸಿದ್ಧತೆ ಎಂದಿರುತ್ತದೆ. ಹಾಗಾಗಿ ನಾಳೆ ಬೆಳಿಗ್ಗೆಯಿಂದಲೆ ಇದಿಷ್ಟು ಕೆಲಸ ಎಂದು ಲೆಕ್ಕ ಹಾಕಿಕೊಂಡವನನ್ನು ನೋಡಿ. ಅಷ್ಟು ಮಾತ್ರಕ್ಕೆ ಅವನಿಗೆ ಸುಸ್ತು ಅಥವಾ ಸೋಮಾರಿತನ ಎಂಬುವುದಿರುವುದಿಲ್ಲ.
ಸಮಯಕ್ಕೆ ಸರಿಯಾಗಿ, ಅಗತ್ಯಕ್ಕೆ ತಕ್ಕಂತೆ ತನ್ನ ಕೈಲಾದಷ್ಟು ದಕ್ಷತೆಯಲ್ಲಿ ಆ ಕೆಲಸ ಮಾಡಿ ಮುಗಿಸಿರುತ್ತಾನೆ ಅಥವಾ ತನ್ನ ಕೆಳಗಿರುವವರಿಂದ ಮಾಡಿಸುತ್ತಾನೆ ಒಟ್ಟಾರೆ ಕಮೀಟ್‍ಮೆಂಟು ಪೂರ್ತಿಯಾಗುತ್ತದೆ. ಲೆಕ್ಕಾಚಾರದ ಕೆಲಸವನ್ನವನು ಕಳ್ಳು ಬಿದ್ದು ಹದಗೆಡಿಸದೇ ಹೋದರೂ ಮನಸ್ಸಿರದಿದ್ದರೂ ಮುಗಿಸುವಲ್ಲಂತೂ ಮೋಸವಾಗುವುದಿಲ್ಲ.
ಆದರೆ ಹಾಗೊಂದು ಹುದ್ದೆದಾರಿಕೆ ಕೊಡದೆ, ದೊಡ್ಡ ಕೆಲಸವನ್ನೇನೂ ಹೇಳದೆ ಸುಮ್ಮನೆ ಮನೆಯಲ್ಲಿ ಕುಳ್ಳಿರಿಸಿ, ಅತೀ ಬುದ್ಧಿವಂತಿಕೆ, ಅಪಾರ ತಾಕತ್ತು ಇದಾವುದನ್ನೂ ಬೇಡದ ಮನೆಯ ಪುಟಗೋಸಿ(?) ಕೆಲಸಕ್ಕೆ ಕುಳ್ಳಿರಿಸಿ. ಅರ್ಧ ಗಂಟೆಯಲ್ಲಿ ಅವನ ಸಹನೆ ಸತ್ತು ಹೋಗಿರುತ್ತದೆ. ಮೊದಲರ್ಧದಲ್ಲೇ ನಶಿಸುವ ದಕ್ಷತೆ ಇನ್ನುಳಿದದ್ದಕ್ಕಂತೂ ಅಂತೂ ಮುಗಿಸುವ ಇರಾದೆಯಲ್ಲಿ ಯಾಂತ್ರಿಕವಾಗಿ ನಡೆಯಲಾರಂಭಿಸಿರುತ್ತದೆ.
ಕಾರಣ ಅವನ ಲೆಕ್ಕದಲ್ಲಿ ಇಂತಹದ್ದೆಲ್ಲ ಮನೆಗೆಲಸ ಎಂದು ಏನು ಪಟ್ಟಿ ಮಾಡಬಹುದೋ ಅದನ್ನೆಲ್ಲಾ ಅವನಲ್ಲ ಅವನ ಹೆಂಡತಿ ಅಥವಾ ಅನುಕೂಲವಿದ್ದರೆ ಮನೆಗೆಲಸದವಳು ಮಾಡಬೇಕಾದ ಬಾಬತ್ತು. ಅಲ್ಲಿಗೆ ಇಂಡೈರಕ್ಟಲಿ ಯಾರು, ಏನು ಎಂದು ನೀವು ಊಹಿಸಿಕೊಳ್ಳಿ. ಅಲ್ಲಿಗೆ ಅವನಿಗೆ ಕೆಲಸ ಮಾಡಲು ಬರುವುದಿಲ್ಲ ಎಂದಲ್ಲ.
ಆತ ಚೆಂದಗೆ ಅಡಿಗೆ ಮಾಡಬಲ್ಲ ಅದರೆ ದಿನವೂ ಅಲ್ಲ. ನೀಟಾಗಿ ಐರನ್ ಮಾಡಬಲ್ಲ ಅದರೆ ಪ್ರತಿ ನಿತ್ಯ ಅಲ್ಲ. ಗೀಡಕ್ಕೆ ನೀರು ಹಾಕಬಲ್ಲ ಅವನಿಗೆ ಪುರಸೊತ್ತಾದರೆ ಮಾತ್ರ, ಮೆಶಿನ್ ಹಾಕಬಲ್ಲ ಟಿ.ವಿ. ಯಲ್ಲಿ ಕಿತ್ತು ಹೋದ ಚಿತ್ರ ಬರುತ್ತಿದ್ದರೆ ಅಥವಾ ಐ.ಪಿ.ಎಲ್. ಇಲ್ಲದಿದ್ದಾಗ ಮಾತ್ರ. ಕೊನೆಗೆ ಕಾಯಿಪಲ್ಯೆಯನ್ನೂ ಹೆಚ್ಚಿ ಇಷ್ಟಿಷ್ಟೆ ನೀಟಾಗಿ ತುರಿದು ಕೊಡಬಲ್ಲ ಯಾವಾಗಲೂ ಅಲ್ಲ ಆ ಹೊತ್ತಿಗೆ ಹೆಂಡತಿಯ ಸಾಮೀಪ್ಯದಲ್ಲಿರಲು ಮನ ಬಯಸುತ್ತಿದ್ದರೆ ಮಾತ್ರ. ಹಾಗಾಗಿ ಯಾವೆಲ್ಲಾ ಮನೆಯ ಕಂಪಲ್ಸರಿ ಎನ್ನುವ ಕೆಲಸಗಳಿವೆಯೋ ಅದರಲ್ಲೆಲ್ಲಾ ಅವನಿಗೇ ಗೊತ್ತಿಲ್ಲದೆ ರಿಸರ್ವೇಶನ್ನು ಹುಟ್ಟಿಬಿಟ್ಟಿರುತ್ತದೆ. ಬೇಕಿದ್ದರೆ ಅದನ್ನು ಮನಸ್ಸಿಗೊಲ್ಲದ ಕೆಲಸ ಎನ್ನಿ.
ಅದೇ ಆಕೆಯನ್ನು ನೋಡಿ. ಬೇಕಿದೆಯೋ ಇಲ್ಲವೋ ದಿನವೂ ಎಲ್ಲಾ ಕೆಲಸಗಳನ್ನು ಮಾಡಿಕೊಂಡೆ ದಿನ ಮುಂದೆ ಸರಿಯಲು ಬಿಡುತ್ತಾಳೆಯೇ ವಿನ: ಕೆಲಸ ಬಾಕಿ ಇಟ್ಟುಕೊಂಡು ಆವತ್ತಿಗೆ ಕೈ ಜಾಡಿಸುವ ಜಾಯಮಾನವೇ ಅಲ್ಲ. ಬೆಳಿಗೆದ್ದು ಹಾಲಿಗಿಟ್ಟು, ಕಾಫಿ ಕಾಯಿಸಿ, ಮಕ್ಕಳ ಬೆನ್ನಿಗೆ ಗುಮ್ಮುತ್ತಾ ಅಡುಗೆ ಮನೆಯಿಂದಲೇ ಕೂಗುತ್ತಾ, ಅಗೀಗ ಗ್ಯಾಸ್ ಮೇಲಿಟ್ಟ ಪದಾರ್ಥ ಏನಾಯಿತು ಗಮನಿಸುತ್ತಾ, ತನ್ನ ಡಬ್ಬಿ, ಮಕ್ಕಳ ಡಬ್ಬಿ ಅದೂ ಹಿಂದಿನ ದಿನವೇ ತೊಳೆದಿಟ್ಟುಕೊಂಡಿದ್ದರೆ ಮಾತ್ರ ಬಚಾವು. ಇಲ್ಲವಾದರೆ ಆಗಲೇ ಪಕ್ಕದ ಸಿಂಕನಲ್ಲೇ ಅದನ್ನು ಕೈಯ್ಯಾಡಿಸಿ, ಗಲಬರಿಸುತ್ತಾ, ಓಡಾಡುತ್ತಲೇ ಮಕ್ಕಳಿಗೆ ಬೀಸಿನೀರು ತೋಡಿ ಬಕೀಟಿಗೆ ಬಿಟ್ಟುಕೊಟ್ಟು, ಅರೆಬರೆ ಕೂದಲು ಕಿತ್ತುಕೊಳ್ಳುವ ಹುಡುಗಿಗೆ ಟೇಫು ಬಿಗಿದು, ಹುಡುಗನಿಗೆ ಬೆಲ್ಟು ಏರಿಸಿ, ಆಗಷ್ಟೆ ಏಳುವ ಅವನ ಕೈಗೆ ಕಾಫಿ ಕೊಡುತ್ತಾ, ಕೆಲವೊಮ್ಮೆ ಎದ್ದೇ ಇರದ ಅವನನ್ನು ಎಬ್ಬಿಸಿ ಮಕ್ಕಳನ್ನು ಬಿಟ್ಟು ಬರಲು ದಬ್ಬಿ, ಅದಕ್ಕವನು ಏನೋ ಮಂತ್ರ ಗೊಣಗುತ್ತಿದ್ದರೆ ಅದಕ್ಕೆ ಲಕ್ಷ್ಯ ಕೊಡದೆ, ಆಗೀನ ಮಟ್ಟಿಗೆ ತಿಂಡಿ ಮಾಡಿ, ಹೊರಗೆ ಸೋಫದ ಮೇಲೆ ನೇತಾಡುತ್ತಿದ್ದ ಟವಲ್ ಎತ್ತಿಟ್ಟು, ಅರಬರೆ ಬಾಯ್ದೆರಿದಿದ್ದ ಬಾಸ್ಕೇಟ್ ಸರಿ ಪಡಿಸಿ. ಅಲ್ಲಲ್ಲೆ ಬಿದ್ದಿದ್ದ ಪೇಪರ್ ಜಾಗಕ್ಕೆ ತಳ್ಳಿ, ಲಾಡಿ ಬಿಟ್ಟುಕೊಂಡು ಬೆಡ್‍ರೂಮಿನಲ್ಲೆಲ್ಲೋ ನೇತಾಡುವ ಅವನ ಬರ್ಮುಡಾವನ್ನು ಬೇಕೆಂದೇ ಸಶಬ್ದವಾಗಿ ಎರಡೇ ಬೆರಳಲ್ಲಿ ಎತ್ತಿ ನೇತಾಡಿಸುತ್ತಾ ತಪಕ್ಕನೆ ಬಕೀಟಿನಲ್ಲಿ ಬಿಟ್ಟು, ಕೆದರಿದ್ದ ಬೆಡ್ ಸ್ಪ್ರೆಡ್ ಸರಿಪಡಿಸಿ, ಐರನ್ನಿಗೆ ಸ್ವಿಚ್ಚು ಒತ್ತಿ, ಅಷ್ಟೊತ್ತಿಗೆ ಅವನ ಸ್ನಾನ ಆಗಿದ್ದರೆ ಟೇಬಲ್ ಮೇಲೆ ತಿಂಡಿ ಜೋಡಿಸಿ ಅದರ ಮಧ್ಯೆ ತನ್ನ ಸ್ನಾನ, ಡ್ರೆಸ್ಸು, ನಿನ್ನೆನೆ ನೆನಪಿರಿಸಿಕೊಂಡಿದ್ದ ಕೆಲಸ ಜೊತೆಗೆ ಸಂಜೆ ಬರುವಾಗ ತರಲೇಬೇಕಾದ ಸಾಮಾನಿನ ಲಿಸ್ಟು ಇವನ್ನೆಲ್ಲಾ ಸರಿಪಡಿಸಿಕೊಂಡು ಚಾರ್ಜಿಗೆ ಹಾಕಿದ್ದ ಮೊಬೈಲು ಎತ್ತಿಕೊಂಡು, ಚಪ್ಪಲಿ ಸಿಕ್ಕಿಸಿಕೊಳ್ಳುತ್ತಾ ಬಾಯಲ್ಲೇ ಹಿಡಿದಿದ್ದ ಕ್ಲಿಪ್ಪನ್ನು ತಲೆಗೆ ತೂರಿಸಿ, ರಾಮಾ ರಾಮಾ ಏನಿದು..? ಅವಳೇನು ಹೆಣ್ಣಾ ಗೂಡ್ಸ್ ಗಾಡಿನಾ..?
ಅದೇ ಅವನ ಲಿಸ್ಟ್ ನೋಡಿ, ಬೆಳಿಗೆದ್ದಾ, ಕಾಪಿ,ಶೇವಿಂಗ್,ತಿಂಡಿ, ಮಟ್ಟಸವಾಗಿ ಐರನ್ ಮಾಡಿದ್ದ ಡ್ರೆಸ್ಸು ಏರಿಸಿಕೊಂಡು ಜಿಪ್ ಎಳೆದುಕೊಳ್ಳುವಾಗ ಕರ್ಚೀಫು ಕೊಡಲು ಹೆಂಡತಿಯೇ ಬೇಕು. ಅಷ್ಟಾಗಿ ಕೈಗೆ ಪ್ಲೆಟು ಎತ್ತಿಕೊಂಡು ತಿನ್ನುತ್ತಾ ಅದನ್ನೂ ಸಿಂಕಿಗೂ ಇಡದೆ, ಕೂತಲ್ಲೇ ಟೀಗೆ ಕೂಗು ಹಾಕುತ್ತಾ, ಕೈಯೊರೆಸಿಕೊಂಡು ಎದ್ದು ಬರುವ ಅವನಿಗೆ ದಿನವಿಡೀ ಬಿಜಿ ಎನ್ನುವ ಲೆಕ್ಕಾಚಾರದಲ್ಲಿ "ಹ್ಯಾಗೆ" ಎಂದು ಕೂತುಕೊಂಡು ಕೇಳಬೇಕೆನ್ನಿಸುತ್ತದೆ ನನಗೆ. ಕಾರಣ ಆಫೀಸಿನ ಕೆಲಸ ಬಿಡಿ ಆಕೆ ಅದನ್ನೂ ಮಾಡುತ್ತ ಮತ್ತೆ ಸಂಜೆ ಬಂದು ಮತ್ತೆ ರೂಟಿನ್ ಶುರು ಮಾಡಿಕೊಳ್ಳುತ್ತಾಳಲ್ಲ ಆಗಲೂ ಒಂದಿಷ್ಟಾದರೂ ಕೆಲಸ ನಾಳೆಗಿರಲಿ ಎಂದಾಕೆ ಎತ್ತಿಟ್ಟಿದ್ದೇ ಇಲ್ಲ. ಅಕ್ಕಿ ರುಬ್ಬಿ ಇಡದಿದ್ದರೆ ಹುಳಿ ಬಾರದೆ ಹೇಗೆ ದೋಸೆಯಾಗುವುದಿಲ್ಲವೋ ಹಾಗೆ ಮರುದಿನಕ್ಕೆ ಬೇರೆಯದೇ ಕೆಲಸದ ಲಿಸ್ಟು ಆಕೆಯ ತಲೆಯಲ್ಲಿ ಕಾಯುತ್ತಲೆ ಇರುತ್ತದೆ.
ಇದೆಲ್ಲಾ ಮುಗಿದು ರಾತ್ರಿ ಹನ್ನೊಂದಕ್ಕೆ ಮಂಚಕ್ಕೆ ತಲೆಯಿಡುತ್ತಿದ್ದರೆ ಬೇಕಿದೆಯೋ ಬೇಡವೋ ವಿಚಾರಿಸಿಕೊಳ್ಳದೇ ಅವನೊಂದಿಗೆ ದೇಹ ಉಜ್ಜುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಾಗ, ಮನಸ್ಸು ಎಲ್ಲಿ ಯಾವ ಪಾತ್ರೆಯ ಕರೆಯ ಜೊತೆ ತೊಳೆದು ಸರಿದು ಹೋಗಿರುತ್ತದೋ ಗೊತ್ತಾಗುವುದಾದರೂ ಹೇಗೆ..? ಆ ಹೊತ್ತಿಗಿನ ಮಾನಸಿಕ ಬಣ್ಣಗಳನ್ನು ಗುರುತಿಸಲು ಕತ್ತಲೆಗೆ ಶಕ್ತಿ ಇದ್ದಿದ್ದರೆ ಅಥವಾ ಆ ರಾತ್ರಿಗಳಿಗೆ ಕಣ್ಣಿದ್ದಿದ್ದರೆ ಅದರ ಕತೆಯೇ ಬೇರೆಯಾಗುತ್ತಿತ್ತೇನೋ. ಆದರೆ ಅದಾವುದೂ ಉಹೂಂ ಆಗುವುದೇ ಇಲ್ಲ. ಎಲ್ಲಾ ದುಮ್ಮಾನಗಳು ಕಾವಳದಲ್ಲೇ ಕಳೆದುಹೋಗುತ್ತವೆ. ಬೇರೆ ದಾರಿ ಮತ್ತು ಅವಕಾಶ ಎರಡೂ ಇರುವುದೇ ಇಲ್ಲವಲ್ಲ.
ಪ್ರತಿ ನಿತ್ಯದಂತೆ ಬದುಕಿನುದ್ದಕ್ಕೂ ಹೀಗೆ ಮಾಡಿಕೊಂಡೆ ಬದುಕು ಮಕ್ಕಳು ಮನೆ ನಡೆಸುವ ಆಕೆಯ ಪರಿಚಾರಿಕೆಗೆ ಯಾವ ಐ.ಎಸ್.ಓ. ಸ್ಟಾಂಡರ್ಡು ಸರ್ಟಿಫಿಕೇಟು ಕೊಡಬಲ್ಲದು..? ಇದ್ದಿದ್ದೇ ಆಗಿದ್ದರೆ ಯಾವ ಥೌಸೆಂಡೂ ಸಾಲುತ್ತಿರಲಿಲ್ಲ. ಅದರೆ ಅದಿಷ್ಟೆಲಾ ಜಗತ್ತಿಗೆ ಬೇಕಿಲ್ಲ ಅವನಿಗೆ ಮಾತ್ರ ಗೊತ್ತಾದರೆ ಸಾಕು ಎಂದಾಕೆ ಮನದಲ್ಲೇ ಮುದಗೊಳ್ಳುತ್ತಿದ್ದರೆ, ಎಲ್ಲಾ ಆದ ನಂತರವೂ, "ಹೆಂಗಸರಿಗೆ ಇಂಟರೆಸ್ಟೇ ಇಲ್ಲ ಮಾರಾಯ.." ಎಂದು ಡಾಕ್ಟರೇಟ್ ಪ್ರಧಾನ ಮಾಡುತ್ತಿದ್ದರೆ ಬದುಕು ಒರಳು ಕಲ್ಲಲ್ಲಿ ಗರಗರ ಆಡಿದಂತಲ್ಲದೆ ಜೋಕಾಲಿಯಾದೀತಾದರೂ ಹೇಗೆ..? ಉತ್ತರಿಸಬೇಕಾದ ಆಕೆಗೆ ಬೇರೆ ಆಪ್ಶನ್ನು ಇಲ್ಲ. ಇದ್ದ ಆವನಿಗೆ ಅದು ಬೇಕಿಲ್ಲ. ಮನಸ್ಸು ಮಾತ್ರ ಪಿಸುನುಡಿಯುತ್ತಲೇ ಇರುತ್ತದೆ.. ಇಷ್ಟೆನಾ ಬದುಕು..? ಗೊತ್ತಿಲ್ಲ. ಆಕೆಯ ಕಣ್ಣಿಗೆ ದೃಷ್ಠಿ ಬೇರೆಸಲಾಗದ ನಾನು ಸುಮ್ಮನೆ ಶೂ ಲೇಸು ಬಿಗಿವ ನೆಪದಲ್ಲಿ ಕೆಳಗೆ ನೋಡುತ್ತೇನೆ. ಅಷ್ಟಕ್ಕೂ ತಲೆ ಎತ್ತಲು ನನಗಾದರೂ ಯಾವ ಸಮಜಾಯಿಸಿ ಬಾಕಿ ಉಳಿದಿರುತ್ತೆ ಅಂಥಾ ಹೊತ್ತಿನಲ್ಲಿ.

Wednesday, May 10, 2017

ಪಾತಾಳ ಗಂಗೆ… ಬರಿದಾಗಲಿರುವ ಅಂತರಗಂಗೆ…

ಪಾತಾಳ ಎನ್ನುವುದೇ ಒಂದು ಕಲ್ಪನೆ. ಅಂದರೆ ಯಾರೂ ಮುಟ್ಟಲಾಗದ ಆಳ, ತಡವಲಾಗದ ಬುಡತುದಿ ಎಂದೇ ಅರ್ಥ. ಪುರಾಣಗಳ ಹೊರತುಪಡಿಸಿದರೆ ಪಾತಾಳ ಕೈಗೆ ದಕ್ಕುವುದು ಅಸಾಧ್ಯವಾದುದರಿಂದಲೇ ಅದನ್ನು ಕೈಯಳತೆಗೆ ಸಿಗದ ಉದಾಹರಣೆಯಾಗಿ ಬಳಸುತ್ತೇವೆಯೇ ವಿನಾ ಪ್ರಾತ್ಯಕ್ಷಿಕ ರೂಪಕ್ಕೆ ಎಟುಕಿಸಿಕೊಂಡಿದ್ದೇ ಇಲ್ಲ.  ಭೂಮಿಯ ನಾಲ್ಕಾರು ಸಾವಿರ ಮೀಟರ್ ಆಳದಲ್ಲಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಯಾವ ಉಪಗ್ರಹವೂ ನಮಗೆ ಬಿಡಿಸಿಕೊಟ್ಟಿಲ್ಲ. ಅದು ಸಾಧ್ಯವೂ ಇಲ್ಲ. ಅದೇನಿದ್ದರೂ ತರಂಗಗಳ ಮೂಲಕ ನೀಡುವ ಕಲರ್ ಕೋಡಿಂಗ್ ಇಟ್ಟುಕೊಂಡು ನಾವು ವಿಶ್ಲೇಷಿಸುವ ಮೂಲಕ ಭೂಮಿಯ ಇಂತಿಂಥ ಭಾಗದಲ್ಲಿ ಹೀಗೆ ಇದೆ ಎಂಬ ಲೆಕ್ಕಾಚಾರಕ್ಕೆ ಬಂದಿದ್ದೇವೆ. (ಇವೆಲ್ಲ ಪಕ್ಕಾ ಮಾಹಿತಿ ಸಿಕ್ಕುವುದಾಗಿದ್ದರೆ ಕೊಳವೆ ಬಾವಿಗೆ ಬಿದ್ದ ಮಗುವನ್ನು ಪಾರು ಮಾಡಲು ಇಂತಲ್ಲಿ ಹೀಗೇ ಗುಂಡಿ ಹೊಡೆಯಬೇಕೆನ್ನುವುದು ಸುಲಭದ ಲೆಕ್ಕಚಾರವಾಗುತ್ತಿತ್ತು. ಆದರೆ ಈವರೆಗೂ ಕಲ್ಲು ಅಡ್ಡ ಬಂದಾಗಲೇ ಗೊತ್ತಾಗುತ್ತೆ ನಮ್ಮ ಅಂದಾಜು ತಪ್ಪಾಗಿದ್ದು) ಆದರೆ ನೀರಿನ ವ್ಯವಸ್ಥೆ ಹಾಗಿಲ್ಲ. ಹಾಗಿರೋದಕ್ಕೆ ಸಾಧ್ಯವೂ ಇಲ್ಲ. ಯಾವ ತಂತ್ರಜ್ಞಾನದ ಮೂಲಕವೂ ಭೂಮಿಯ ಆಳದ ಚಹರೆ ಮತ್ತು ಸಾಧ್ಯತೆಯನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವೇ ಇಲ್ಲ. ಅಷ್ಟಕ್ಕೂ ಭೂಮಿಯ ಆಳದಲ್ಲಿ ನೀರಿನ ಸಂಗ್ರಹ ಆಗುತ್ತಾದರೂ ಹೇಗೆ..? ಎರಡು ವಿಧದಲ್ಲಿ. ಅದರಲ್ಲಿ ಮೊದಲನೆಯದು ಮೇಲ್ಮೈ ಮೂಲಕ.
ಮೂಲತಃ ಭೂಮಿಯ ಸಂದಿಯಲ್ಲಿ ಒಳಗಿಳಿಯುವ ನೀರು, ನಿಸರ್ಗದತ್ತವಾಗಿ ಸಾವಿರಾರು ಕೋವೆಗಳಿಂದ ಸೋಸಿ, ಬಸಿದುಕೊಂಡು ಸೆಲೆಯಾಗಿ ಒಂದಕ್ಕೊಂದು ಸೇರುತ್ತಾ ಮತ್ತೂ ಇಳಿಮುಖವಾಗಿ ಗುರುತ್ವದತ್ತ ಒಸರುತ್ತಾ, ಗಟ್ಟಿಯಾದ ನೆಲದ ಪದರು ದೊರಕಿದರೆ ಅಲ್ಲೇ ಸಂಗ್ರಹವಾಗಿ, ನಿಂತಲ್ಲೆ ತನ್ನ ಕೆಳಗಿನ ನೆಲವನ್ನು ಕ್ರಮೇಣ ತೋಯಿಸಿ, ಒದ್ದೆಯಾಗಿಸಿ ಮತ್ತೂ ಕೆಳಗಿಳಿಯಲು ದಾರಿ ಮಾಡಿಕೊಂಡು, ಒಂದು ಸಂದಿನ ಬಿರುಕನ್ನು ಸೇರಿ, ಭೂಮಿಯ ಮೇಲ್ಪದರದ ಅಪ್ಪಟ ಬುಡ ದಾಟಿ ಇನ್ನೇನು ಮುಂದಕ್ಕೆ ಹೋಗುವುದು ಸಾಧ್ಯವೇ ಇಲ್ಲ ಎನ್ನುವಂತೆ ಶಿಲಾ ಪದರ ಅಡ್ಡ ಬಂದಾಗ ಅಲ್ಲೇ ಒಟ್ಟಾಗಿ ಸಂಗ್ರಹದ ಮಟ್ಟ ಏರಿ, ಹಾಗೆ ಏರಿದಾಗ ಉಕ್ಕಿ ಹರಿದ ಭಾಗದಲ್ಲಿಂದ ಇನ್ನೂಂದು ಸ್ಥಳಕ್ಕೆ ದೌಡಾಯಿಸುತ್ತಾ, ಆಚೀಚೆಗೂ ನೀರಿನ ಸಂಗ್ರಹ ಹೆಚ್ಚಿಸುತ್ತಾ ನಿಂತುಬಿಡುವ ನೀರೇ ನಮಗೆ ಪೂರೈಕೆಯಾಗುವ ನೆಲ ಜಲವಲಯ. ಇದಕ್ಕೆ ಪ್ರತಿ ಮಳೆಗಾಲದಲ್ಲಿ, ನೆರೆ ಬಂದ ಸಂದರ್ಭಗಳಲ್ಲಿ ಈ ರೀತಿಯ ಆವರ್ತನದಲ್ಲಿ ಭರ್ತಿಯಾಗುತ್ತಲೇ ಇರುತ್ತದೆ.
ಎರಡನೆಯದ್ದು ಲಕ್ಷಾಂತರ ವರ್ಷಗಳ ಹಿಂದೆ ಭೂಮಿ, ಹಿಮಗಲ್ಲುಗಳ ಉಂಡೆಯಾಗಿ ಸುತ್ತುತ್ತಿದ್ದಾಗ, ಕಾಲಗರ್ಭದೊಂದಿಗೆ ಭೂಗರ್ಭದಲ್ಲಿ ಸೇರಿಕೊಂಡು ಅದರ ಜೌಗು ಅಲ್ಲಿನ ಹೀರು ಶಿಲಾ ಪದರ, ಒಸರು ಪ್ರದೇಶ ಸೇರಿ ಗಾಳಿಯಾಡದೆ ಉಳಿದು ಹೋಗಿ ಒತ್ತಡಕ್ಕೊಳಗಾಗಿ ಸ್ಪಂಜಿನ ಅಥವಾ ಮಂಜಿನ ರೂಪದಲ್ಲಿ ಶಿಲಾ ಪದರದಲ್ಲಿ ಸಂಚಯವಾಗಿ ಶೇಖರವಾಗಿದ್ದು ಇದೆ. ಇದನ್ನು ಕಣ ಶಿಲೆ ಅಥವಾ ಉಪ್ಪುಗಲ್ಲು ಎನ್ನುತ್ತೇವಲ್ಲ ಅವು ಹಿಡಿದುಕೊಂಡಿರುತ್ತವೆ. ಇದರಲ್ಲಿ ಅಗಾಧ ಪ್ರಮಾಣದ ನೀರಿನ ಸಂಗ್ರಹ ಇದ್ದಿದ್ದು, ಈಗಲೂ ಇದೆ. ಆದರೆ ಅದು ನಮ್ಮ ಕೈಗೆಟುಕುವ ಅಂದಾಜಿನ ಹೊರಗಿದ್ದುದರಿಂದಲೇ ನಾವದನ್ನು ‘ಪಾತಾಳ ಗಂಗೆ’ ಎನ್ನುವುದು. ವೈಜ್ಞಾನಿಕವಾಗಿ ‘ಪೆಲಿಯೋ ವಾಟರ್’ ಎಂದು ಹೆಸರು. ಅದರೆ ಅದು ಎಲ್ಲಾ ಕಡೆಯಲ್ಲೂ ಇಲ್ಲ. ತೀರ ನೀರಿನ ಒರತೆಯ ಜತೆ ಎಲ್ಲಿ ಮರಳು ಶಿಲೆಗಳ ಫಲಕಗಳಿವೆಯೋ ಅಲ್ಲಿ ಮಾತ್ರ ಈ ನೀರಿನ ಖಜಾನೆ ಭದ್ರವಾಗಿ ಇದೆ. ಹಾಗೆ ಇದ್ದುದರಿಂದಲೇ ನಮ್ಮ ಮೇಲ್ಮೈನ ನೆಲ ಜಲವಲಯ ಭದ್ರವಾಗಿ ಉಳಿದುಕೊಂಡಿದ್ದು. ಆದರೆ ದಕ್ಷಿಣ ಭಾರತ ಒರಟು ಶಿಲಾ ಫಲಕಗಳ ಭೂಮಿ. ಇಲ್ಲಿ ಏನಿದ್ದರೂ ನೆಲ ಜಲವಲಯವೇ ನಮಗೆ ಜೀವಾಳ. ಪಾತಾಳ ಗಂಗೆಯ ಖಜಾನೆ ಇಲ್ಲಿ ನೆಪ ಮಾತ್ರಕ್ಕೆ.
ನಿಸರ್ಗದ ಇಂಥ ಸಂಕೀರ್ಣ ವ್ಯವಸ್ಥೆಯಿಂದಾಗೇ ನಾವು ಇಲ್ಲಿವರೆಗೂ ಸಿಹಿ ನೀರಿನ ಕೊರತೆ ಅಷ್ಟಾಗಿ ಅನುಭವಿಸಿಲ್ಲ. ಅದರೆ ಕ್ರಮೇಣ ಮೇಲ್ಮೈ ವಲಯಕ್ಕೆ ಆಧುನೀಕರಣದ ಕಾಂಕ್ರಿಟ್ ಹೊಡೆತ ಕೊಟ್ಟು ನೀರು ಒಸರುವ ಸೆಲೆಯ ಸಂದುಗಳನ್ನು ಹಾಳುಗೆಡವುತ್ತಾ ಬಂದೆವಲ್ಲ ಆ ಕಾರಣಕ್ಕೆ ಒಕ್ಕರಿಸಿದ್ದೇ ಅಗಾಧ ಬರ ಮತ್ತು ಸಿಹಿನೀರ ಕೊರತೆ.
ಈಗ ಪಾತಾಳಕ್ಕೆ ಡ್ರಿಲ್ಲು ಹೊಡೆದು ಆ ಶಿಲಾಗರ್ಭಕ್ಕೆ ತೂತು ಕೊರೆದು ಅಲ್ಲಿಂದ ನೀರನ್ನು ಮೇಲಕ್ಕೆಬ್ಬಿಸಿ ತಂದು (ಗಂಟೆಗೆ ಒಂದು ಲಕ್ಷ ಲೀ. ಬರುತ್ತದಂತೆ!) ಅದನ್ನು ಕರ್ನಾಟಕಕ್ಕೆ ಹರಿಸುವ ಯೋಜನೆಗೆ ಸರಕಾರ ಸಿದ್ಧವಾಗಿ ನಿಂತಿದೆ. ವಿಚಿತ್ರವೆಂದರೆ ಹಾಗೆ ಪಾತಾಳದಿಂದ ನೀರು ಎಬ್ಬಿಸಿದ್ದೇ ಅದರೆ ಮುಂದೊಮ್ಮೆ ನೆಲ ಸಡಿಲಗೊಂಡು, ಶಿಥಿಲಾವಸ್ಥೆಯಿಂದಾಗಿ ಸಣ್ಣ ಅಲುಗಾಟಕ್ಕೂ ಕುಸಿದು, ಪೂರ್ತಿ ಶಿಲಾ ರಚನೆಯ ವ್ಯವಸ್ಥೆಯನ್ನೇ ಹದಗೆಡಿಸುವುದಲ್ಲದೆ, ಸಣ್ಣ ಭೂಕಂಪಕ್ಕೂ ಅನಾಹುತಕಾರಿ ಭೂಕುಸಿತವಾಗಿ ಇರುವ ಮೂಲ ಭೂ ಬಂಧದ ರಚನೆಯನ್ನೇ ಹಾಳು ಮಾಡುವ ಈ ಪದ್ಧತಿಯ ಬಗ್ಗೆಯೇ ವೈಜ್ಞಾನಿಕವಾಗಿ ತಕರಾರಿದೆ. ಕಾರಣ, ಭೂಗರ್ಭದಲ್ಲಿರುವುದು ಸಿಹಿ ನೀರೇ ಎನ್ನುವುದಕ್ಕೆ ಯಾವುದೇ ಪುರಾವೆ, ರಿಪೋರ್ಟುಗಳನ್ನು ಯಾರೂ ಸಮೀಕ್ಷೆ ಮಾಡಿ ನೀಡಿಲ್ಲ. ಅಕಸ್ಮಾತ್ ಸಿಹಿ ನೀರೇ ಆಗಿದ್ದರೂ ಸಾವಿರಾರು ಮೀ. ಆಳದಲ್ಲಿ ಅದು ಸಹಜ ಶಿತಕಾರಕ ಸ್ಥಿತಿಯಲ್ಲಿರುವುದು ಅಸಾಧ್ಯ. ಹೊರ ವಾಯುವಲಯದ ಸಂಪರ್ಕವಿಲ್ಲದೆ ಇರುವುದರಿಂದ ಒಮ್ಮೆಲೆ ತೆರೆದುಕೊಂಡಾಗ ಯಾವ ರೀತಿಯ ರಾಸಾಯನಿಕ ಬದಲಾವಣೆಗೆ ಈಡಾಗುತ್ತದೆ ಎನ್ನುವುದರ ಬಗ್ಗೆಯೂ ಮಾಹಿತಿ ಇಲ್ಲ. ಅದನ್ನು ಎಬ್ಬಿಸಿ ಸಹಜ ಸ್ಥಿತಿಗೆ ತರುವುದಕ್ಕೆ ಬೇಕಾದ ವಿಸ್ತೃತ ನೀಲನಕ್ಷೆ ನಮ್ಮೆದುರಿಗಿಲ್ಲ. ಇನ್ನು ಅದು ಸಹಜ ಶುದ್ಧ ನೀರಾಗಿರುತ್ತದೆ ಎನ್ನಲು ಅಸಾಧ್ಯ. ಕಾರಣ ಸಿಹಿ ನೀರಿಗೆ ಹೊರಾವರಣದ ಆಮ್ಲಜನಕದ ಸಂಪರ್ಕ ನಿರಂತರವಾಗಿ ಬೇಕಾಗುತ್ತದೆ.
ಇವೆಲ್ಲಾ ಸರಿ ಇದ್ದರೂ ಒಂದು ಬಾವಿಗೆ ಹತ್ತು ಕೋಟಿ ರು. ಸುರಿದು ನೀರು ಮೇಲೆತ್ತಿದರೂ ಎಷ್ಟು ಕಾಲ ಎತ್ತಬಲ್ಲಿರಿ? ಹಾಗೆ ಖಾಲಿಯಾಗುವ ನೀರಿಗೆ ಮರುಪೂರ್ಣ ಹೇಗೆ ಮಾಡುವುದು? ಹಾಗೆ ಖಾಲಿ ಮಾಡಿ ಮುಂದಿನ ಪೀಳಿಗೆಗೆ ಖಾಲಿ ಒಡಲನ್ನು ಬಿಡುವುದೇ? ಎಲ್ಲದಕ್ಕಿಂತ ದೊಡ್ಡ ಲೋಪವೆಂದರೆ ಹಾಗೆ ಪಾತಳಕ್ಕೆ ಗರಡಿ ಹಾಕಲು ದಕ್ಷಿಣ ಭಾರತದ ನೆಲ ಸೂಕ್ತ ಎಂದು ಸಲಹೆ ಕೊಟ್ಟಿದ್ಯಾರು? ಯಾವ ಉಪಗ್ರಹದ ನೆರವಿನಿಂದ ಯೋಜನೆಯ ನಕ್ಷೆ ತಯಾರಿಸಲಾಗಿದೆ? ಅಕಸ್ಮಾತ್ ಡ್ರಿಲ್ಲು ಕೊರೆದದ್ದೇ ಆದರೆ ಯಾವ ರೀತಿಯ ನೀರು ಬರಬಲ್ಲದು? ಆಯಾ ಸ್ಥಳದಲ್ಲಿ ಇರುವ ನೀರಿನಲ್ಲಿ ಇರುವ ಅಂಶಗಳು ಯಾವುದು? ಹಾಗೆ ಸಾವಿರಾರು ಮೀ. ಆಳವನ್ನು ಹೊರ ಮೈ ವಾಯು ವಲಯಕ್ಕೆ ತೆರೆದುಕೊಡುತ್ತಿದ್ದಂತೆ ಆಗಬಹುದಾದ ರಾಸಾಯನಿಕ ಪಲ್ಲಟಗಳ ಮಾಹಿತಿ ಇದೆಯಾ?
ನೀರಿನೊಂದಿಗೆ ಸೇರಿಕೊಂಡು ಬರುವ ಫ್ಲೋರೈಡ್, ಸಿಲಿಕಾರ್ಡ್, ಕ್ಲೋರೈಡ್ ರಾಸಾಯನಿಕಗಳು ಮತ್ತು ಉಷ್ಣವನ್ನು ಸಹಜ ಸ್ಥಿತಿಗೆ ತರುವ ವಿಧಾನಗಳೇನು?ಎಲ್ಲಿ ಶಿಲಾ ಪದರುಗಳು ಮತ್ತು ಫಲಕಗಳ ಕೊರತೆಯಾಗಿ ಬರೀ ಬಂಡೆಯ ಅದಿರಿನ ತಳಹದಿ ಹೊಂದಿರುತ್ತವೋ ಅಲ್ಲೆಲ್ಲಾ ಶಿಲಾಮೇಲ್ಮೈ ಪದರದೊಂದಿಗೆ ರಾಸಾಯನಿಕ ಪರಿವರ್ತನೆಗೊಳಪಟ್ಟು ಅದು ಕಲುಷಿತ ನೀರಾಗೇ ಬದಲಾಗಿರುತ್ತದೆ. ಅಕಸ್ಮಾತ್ ಈ ನೀರನ್ನು ಎತ್ತಿ ತಂದರೂ ಅದಕ್ಕೆ ತಗುಲುವ ವೆಚ್ಚ ಒಂದು ಬಾವಿಗೆ ಸುಮಾರು ಹತ್ತು ಕೋಟಿಯಷ್ಟು.  ಹಾಗೆ ಪ್ರತಿ ಗಂಟೆಗೆ ಒಂದು ಲಕ್ಷ ಲೀ. ನೀರು ಬರುತ್ತಿದ್ದಂತೆ ಅದನ್ನು ಸಹಜ ಸ್ಥಿತಿಗೆ ತರಲು ಆಗುವ ಕಾರ್ಯವಾಹಿ ವೆಚ್ಚ, ಅದಕ್ಕೆ ಬೇಕಾಗುವ ಕರೆಂಟು, ಮಾನವ ಶಕ್ತಿ ಹಾಗೂ ಇತರ ಶಕ್ತಿಯ ಮೂಲಗಳ ವೆಚ್ಚ ಇನ್ನೂ ಐದಾರು ಕೋಟಿಯಾದರೂ ಆಗಲಿಕ್ಕಿಲ್ಲವೇ? ಅಷ್ಟೆಲ್ಲಾ ಆದ ಮೇಲೂ ಅಲ್ಲಿಂದ ಎಷ್ಟು ಕಾಲ ನೀರು ಎತ್ತಬಹುದೆನ್ನುವ ಶೇ.1 ರಷ್ಟು ಲೆಕ್ಕಾಚಾರ ಕೂಡಾ ಕಂಪನಿ ಅಥವಾ ಇಲಾಖೆಯ ಬಳಿಯಿಲ್ಲ!
ಅದರ ಬದಲಿಗೆ ಒಂದು ಲಕ್ಷ ಲೀಟರ್ ನೀರು ಇಂಗಿಸುವ ಸಾಮರ್ಥ್ಯದ ಇಂಗು ಗುಂಡಿಗೆ ಒಂದೇ ಲಕ್ಷ ರು. ಖರ್ಚು ಮಾಡಿದಲ್ಲಿ ಪ್ರತಿ ಗುಂಡಿಯಿಂದಾಗಿ ಅದರ ಮೂರು ಕಿ.ಮೀ. ವ್ಯಾಪ್ತಿಯೊಳಗಿನ ಜಲಮೂಲಗಳು ಪುನಃ ಜೀವ ಪಡೆದುಕೊಳ್ಳುತ್ತವೆ. ಅಲ್ಲದೆ ನೆಲಜಲ ವಲಯ ಸಮೃದ್ಧವಾಗುತ್ತದೆ. ಸರಿಯಾಗಿ ಇಂಗು ಗುಂಡಿ ಮತ್ತು ಮಳೆ ಕೊಯ್ಲು ಮಾಡಿದ್ದೇ ಆದರೆ ಐದೇ ವರ್ಷಗಳಲ್ಲಿ ಶೇ. 50ರಷ್ಟು ಸಿಹಿ ನೀರ ಅಂತರ್ಜಲ ಪ್ರಮಾಣ ಏರಿಸಬಹುದು. ಇದಕ್ಕೆ ತಗುಲುವ ವೆಚ್ಚ ಶೇ.1ಮಾತ್ರ. ಇನ್ನು ಈ ಯೋಜನೆ ಕೈಗೆತ್ತಿಕೊಳ್ಳುತ್ತಿರುವ ‘ವಾಟರ್ ಕ್ವೆಸ್ಟ್’ ಕಂಪನಿ ಬಳಿ ಒಂದೇ ಒಂದು ವೈಜ್ಞಾನಿಕ ಮಾಹಿತಿ ಇಲ್ಲ. ತನ್ನ ವೆಬ್‌ಸೈಟಿನಲ್ಲಿ ಶಾಲೆ ಹುಡುಗರು ಕಲರ್ ಹೈಲೈಟರ್‌ನಿಂದ ಮಾರ್ಕ್ ಮಾಡಿರುವ ನಾಲ್ಕಾರು ನಕಾಶೆಗಳನ್ನು ಸೇರಿಸಿಟ್ಟಿದೆ. ನಾಲ್ಕು ಆಳಕೊಳವೆ ಬಾವಿ ಹೊಡೆಯುವ ಮಶಿನ್ ಚಿತ್ರ ಬಿಟ್ಟರೆ ತಾನು ಹೇಗೆ, ಯಾವ ಆಧಾರದ ಮೇಲೆ ಇಲ್ಲಿ ನೀರಿನ ಅಂತರಾಳದ ಬಗ್ಗೆ ಖಾತರಿ ಕೊಡುತ್ತಿದ್ದೇನೆ ಎನ್ನುವ ಬಗ್ಗೆ ಒಂದಕ್ಷರದ ಮಾಹಿತಿಯೂ ಇಲ್ಲ. ಅವರ ಕಾರ್ಯ ತಂತ್ರದ ಬಗ್ಗೆಯೂ ಖಚಿತತೆ ಇಲ್ಲ. ಅವರ ವಿಶ್ವಾಸವೆಂದರೆ ಎರಡ್ಮೂರು ಸಾವಿರ ಅಡಿ ನೆಲಕ್ಕೆ ಡ್ರಿಲ್ಲು ಹೊಡೆದು ಭೂಮಿಗೆ ತೂತು ಕೊರೆದದ್ದೇ ಆದರೆ ಎಲ್ಲಿದ್ದರೂ ನೀರು ಬಂದೇ ಬರುತ್ತದೆ. ಅದಕ್ಕೆ ಹೆಚ್ಚಿನ ವೈಜ್ಞಾನಿಕ ವಿಶ್ಲೇಷಣೆ ಬೇಕಿಲ್ಲ ಎಂಬುದು. ಆದರೆ ನೀರು ಇಲ್ಲೇ ಇಷ್ಟೇ ಇದೆ ಎನ್ನುವುದು ಮತ್ತು ಅಲ್ಲಿರುವ ನೀರನ್ನು ತೆಗೆದಾದ ಮೇಲೆ ಭೂಮಿಯೊಳಗೆ ಸ್ವಯಂ ಮರುಪೂರಣ ವ್ಯವಸ್ಥೆ ಇದೆ ಎನ್ನುವ ಬಗ್ಗೆ ಕಂಪನಿ ಕರಾರುವಕ್ಕಾಗಿ ಕಿವಿಗೆ ಗೊಂಡೆ ಹೂವಿಡುತ್ತಿದೆ. ನೆನಪಿರಲಿ ಸಮುದ್ರದ ನೀರು ಸಿಹಿನೀರಾಗಿ ಪರಿವರ್ತನೆಯಾಗಿ ಭೂಮ್ಯಾಂತರಾಳ ಸೇರುವ ಪ್ರಕ್ರಿಯೆಯೇ ಇಲ್ಲ.
ಇಂಡಿ, ಆಲಂದ ಚಿಕ್ಕನಾಯಕನಹಳ್ಳಿ, ಶಿಡ್ಲಘಟ್ಟ, ಚಳ್ಳಕೆರೆ, ಆನೇಕಲ್, ಮಹಾಲಿಂಗಪುರ, ಅಣ್ಣಿಗೇರಿಯಲ್ಲಿ ಇಂಥ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಸ್ತಾಪಿಸಿರುವ ನೀರಾವರಿ ಇಲಾಖೆ ಪ್ರತಿ ದಿನ ಇಲ್ಲಿಂದ ಸರಾಸರಿ 100 ದಶ ಲಕ್ಷ ಲೀ. ನೀರು ಮೇಲೆತ್ತುವ ಪ್ರಸ್ತಾವನೆಗೆ ಅನುಮೋದನೆ ನೀಡುತ್ತಿದೆ. ಆದರೆ ಇಲ್ಲಿನ ಗಂಟೆಗೆ ಸುಮಾರು 100 ದ.ಲ. ಕ್ಯೂಬಿಕ್ ಮೀ. ನೀರು ಹರಿವು ಭೂಮಿಯಾಳದಲ್ಲಿ ಸರಾಸರಿ 350 ಮೀ. ನಂತರ 600 ಮೀ. ವರೆಗೂ ಇದೆ ಎನ್ನುವುದನ್ನು ಯಾವ ಸಂಸ್ಥೆ ದೃಢಪಡಿಸಿದೆ? ಉತ್ತರ ಸೊನ್ನೆ. ಇದನ್ನೂ ‘ವಾಟರ್ ಕ್ವೆಸ್ಟ್’ ಸಂಸ್ಥೆಯೇ ವರದಿ ನೀಡಿದ್ದು, ನೀರು ಬಾರದಿದ್ದರೆ ದುಡ್ಡು ಬೇಡ ಎನ್ನುವ ಆಕರ್ಷಕ ಆಫರ್ ಕೊಟ್ಟಿಿದೆ! ಆದರೆ ಅಷ್ಟು ಆಳಕ್ಕೆ ಬೋರ್ ಇಳಿಸಿದರೆ ನೀರು ಬಂದೇ ಬರುತ್ತದೆ. ಇದಕ್ಕೆ ದೊಡ್ಡ ಲೆಕ್ಕಾಚಾರವೇನೂ ಬೇಕಿಲ್ಲ. ಅದನ್ನು ಶುದ್ಧೀಕರಿಸಲು ಇದರ ಎರಡು ಪಟ್ಟು ದುಡ್ಡು ಪೀಕುವ ಸಂಸ್ಥೆ ಆ ವಿಶ್ಲೇಷಣೆಯನ್ನು ಇಲ್ಲಿ ಮಾಡಿಯೇ ಇಲ್ಲ. ಅಕಸ್ಮಾತ್ ನೀರು ರಾಸಾಯನಿಕಮಿಶ್ರವಾಗಿದ್ದರೆ ಅದನ್ನು ಶುದ್ಧೀಕರಿಸಲೇಬೇಕಲ್ಲ ಆಗ? ಸಮುದ್ರದ ನೀರು ಅಲ್ಲಿಂದ ಇಂಗಿ ಸಿಹಿ ನೀರಾಗಿ ಪರಿವರ್ತನೆಯಾಗಿ ಇಲ್ಲೆಲ್ಲ ಕೋಟ್ಯಂತರ ಲೀಟರ್‌ಗಟ್ಟಲೆ ಸಂಗ್ರಹವಾಗಿದೆ ಎನ್ನುವ ಕತೆ ಕೇಳಲಷ್ಟೇ ಚೆಂದ. ಅಂಥ ನೈಸರ್ಗಿಕ ಪ್ರಕ್ರಿಯೆ ಅಸಾಧ್ಯ ಎನ್ನುವುದನ್ನು ವಿಜ್ಞಾನದ ಸೆಕೆಂಡರಿ ಹುಡುಗನೂ ಹೇಳಬಲ್ಲ. ಹಾಗಿದ್ದಾಗ ಸ್ವಯಂ ಮರುಪೂರಣ ಎನ್ನುವ ಕತೆ ಹಾಗೂ ನೀರು ಮೇಲೆತ್ತುವ ಲೆಕ್ಕಾಚಾರ ನೋಡಿದರೆ ಬರಲಿರುವ ದಿನಗಳಲ್ಲಿ ಕರ್ನಾಟಕವನ್ನು ಸ್ಮಶಾನವನ್ನಾಗಿಸುವ ಹುನ್ನಾರದ ಹೊರತಾಗಿ ಬೇರೆ ಒಂದೇ ಒಂದು ಧನಾತ್ಮಕ ಅಂಶವೂ ಅದರಲ್ಲಿಲ್ಲ.
ಸಂತೋಷ ಕುಮಾರ ಮೆಹೆಂದಳೆ

Saturday, May 6, 2017


ಅವಳ ಕನಸು ಕಮರುವ ಮೊದಲು...  


(ಅವಳೊಂದು ಭಾವಗೀತೆಯಾ..?ಅವಳೊಂದು ಕವಿತೆಯಾ...? ಯಾರಿಗೆ ಗೊತ್ತು..? ಸರಿಯಾಗಿ ಓದಿಕೊಂಡರೆ ದೊಡ್ಡ ಕಾವ್ಯವೇ ಆದಾಳು. ಆದರೆ ಎಂಜಲು ಹಚ್ಚದೆ ಪುಟ ತಿರುವಬಲ್ಲ ಹಿಕಮತ್ತು ಅವನಿಗೆ ಗೊತ್ತಿರಬೇಕಿತ್ತು. ಪ್ರತಿ ಹುಡುಗಿಯ ಕನಸಿಗೊಂದು ತಿರುವು ಸಿಗುವುದೇ ಈ ಹಂತದಲ್ಲಿ... )
                 
"..ಮದುವೆ ಅಂತಾಗಿಬಿಟ್ಟರೆ ಹುಡುಗಿಯರೆಲ್ಲಾ ಸುಖವಾಗೇ ಇರ್ತಾರೆ ಅಂತೀಯಾ..?"
ಸರಕ್ಕನೆ ತೀರ ಉತ್ತರಿಸಲಾಗದ ಪ್ರಶ್ನೆ ಕೇಳಿಬಿಟ್ಟಿದ್ದಳು ಶಾಂತಿ. ನಾನು ಸುಮ್ಮನೆ ಶಬ್ದಗಳನ್ನು ತಡುವಿಕೊಂಡಿದ್ದೆ. ಅಸಲಿಗೆ ಹಾಗೆ ಸುಖ ಎನ್ನುವುದನ್ನು ಮತ್ತು ಅದಕ್ಕೊಂದು ಮಾನದಂಡವನ್ನು ಯಾರೂ ರೂಪಿಸಿಲ್ಲವಾದರೂ ಒಂದು ಖಚಿತತೆಯ ಹಾದಿಯಲ್ಲಿ, ಬದುಕು ಹೂವಿನ ಹಾಸಿಗೆ ಎಂದುಕೊಳ್ಳುವುದಕ್ಕೆ ಎಲ್ಲರೂ ಅವರವರ ಭಾವಕ್ಕೆ ಪಕ್ಕಾಗೇ ಇರುತ್ತಾರೆ.
ಆದರೆ ಇಂತಹದ್ದೊಂದು ಮೂಲಭೂತ ಪ್ರಶ್ನೆಯನ್ನಿಟ್ಟುಕೊಂಡು ಉತ್ತರ ಹೇಳು ಎನ್ನುವಂತೆ ಮುಖ ನೋಡಿದ ಶಾಂತಿಗೆ ಎನೂ ಉತ್ತರಿಸದೆ ಸುಮ್ಮನೆ ಒಂದು ಪ್ಯಾಲಿ ನಗೆ ನಕ್ಕೆ. ಕಾರಣ ಎಂಥದ್ದೇ ಬುದ್ಧಿವಂತ ಎಂದುಕೊಂಡರೂ ಗಂಡಸು ಹೆಣ್ಣಿನ ಮನಸ್ಸಿಗೂ, ಆಕೆಯ ಒಳಾವರಣಕ್ಕೂ ಲಗ್ಗೆ ಇಕ್ಕಿದ್ದು ಕಡಿಮೆಯೇ. ಹಾಗಂತ ಎಲ್ಲಾ ಗಂಡಸಿನದೇ ತಪ್ಪಾ..? ಖಂಡಿತಾ ಅಲ್ಲ. ಅರಳಿಕೊಳ್ಳುವಷ್ಟಾದರೂ ಅರಳದಿದ್ದರೆ ಅದು ಮೊಗ್ಗಾಗೇ ಇರುತ್ತದೆ ಎನ್ನುವುದು ಹೇಗೆ ಸತ್ಯವೋ ಹಾಗೆ ತೆರೆದುಕೊಳ್ಳುವಷ್ಟಾದರೂ ಅವನೊಂದಿಗಿನ ಸಾಂಗತ್ಯಕ್ಕೆ ಬೀಳದಿದ್ದರೆ ಆಕೆ ಹೂವಾಗಲಾರಳು.
ಹೀಗೆ ಒಂದು ಸಾಮಾಜಿಕ ಚೌಕಟ್ಟಿನಲ್ಲಿ ಚೆಂದದ ಸಂಸಾರಕ್ಕೂ ಅದಕ್ಕಿಂತಲೂ ಚೆಂದವಾಗಿ ಈ ಬದುಕು ಹುಟ್ಟಿದ ಮೇಲೆ ಆರಂಭಿಸಿಬಿಡಬೇಕೆನ್ನುವ, ಅನಾಮತ್ತಾಗಿ ಅನುಭವಿಸಿಬಿಡಬೇಕೆನ್ನುವ ಅಗಾಧ ಆಸೆಗೂ, ತನ್ನ ಏನೆಲ್ಲಾ ಕನಸಿನ, ಬದುಕಿನ ಫ್ಯಾಂಟಸ್ಸಿಗೆ ಆಕೆ ಕಾಯುವುದು ಒಬ್ಬ ರಾಜಕುಮಾರನಿಗಾಗಿ, ಬದುಕು ಏನೇ ಗ್ಯಾಜೆಟ್‍ಗಳ ಸಾಂಗತ್ಯದಲ್ಲಿ ವೃತ್ತದೊಳಗೆ ಸೇರಿಕೊಂಡಿದೆ ಎಂದುಕೊಂಡರೂ ಸುರುಳಿಯಲ್ಲಿನ ತಿರುವುಗಳಿಗೊಂದು ಮಹತ್ವ ಬರಲು ವೃತ್ತ ಬೇಕೆ ಬೇಕು ಎನ್ನುವಂತೆ ಆಕೆ ಅವನಿಗಾಗೇ ಕಾದಿರುತ್ತಾಳೆ. ತನ್ನ ಬದುಕು ಅವನೊಂದಿಗೆ ಆರಂಭ ಮತ್ತು ಅವನೊಂದಿಗೆ ಅಂತ್ಯ.. ಅಲ್ಲಿ ಏನೆಲ್ಲಾ ಖುಶಿ ಅಥವಾ ಭರಿಸಲಾಗದ ಹಳವಂಡಗಳಿದ್ದರೂ ಎಲ್ಲವೂ ತನ್ನದೇ. ತಾನು ಆ ಜಗತ್ತಿನ ಅಧೀಕೃತ ಸಾಮ್ರಾಜ್ಞಿ ಎಂದೇ ಹೆಗಲು ಒಡ್ಡಲು ತಯಾರಾಗಿ ನಿಂತಿರುತ್ತಾಳೆ. ಹೊರುತ್ತಾಳಾ ಇಲ್ವಾ ಅದು ಸೆಕಂಡರಿ.
ಕಾರಣ ಅಲ್ಲಿಯವರೆಗಿನ ಅನಿವಾರ್ಯದ ಓದು, ಬದುಕಿನ ಮೊದಲ ಹೀರೊ ಅಪ್ಪನ ಪ್ರೀತಿ, ಅಣ್ಣನ ರಕ್ಷಣೆಯ ಸಾಂಗತ್ಯ, ತಮ್ಮನ ಓಲೈಕೆ, ತಂಗಿಯ ಹುಸಿಮುನಿಸು, ಅಕ್ಕನ ಕದನ, ಯಾವಾಗಲೂ ಒಂದು ಕಣ್ಣಿಟ್ಟೆ ಕಾಯುವ ಅಮ್ಮನ ಬೇಹುಗಾರಿಕೆ, ದೂರದಿಂದಲೇ ಹೊಂಚುತ್ತಿದ ಊರ ಹುಡುಗರು, ಇನ್ಯಾವಾಗಲೋ ಮೈ ಕೈ ತಾಗಿಸುವ ಸಮೀಪದ ಸಂಬಂಧಿ, ಉಗುಳಲಾಗದ ಬಿಸಿ ತುಪ್ಪದಂತಹ ಕುಟುಂಬದ ಕ್ಲೋಸು ಮನುಶ್ಯ, ಒಲ್ಲೆನೆಂದರೂ ಬೀಡದ ಅವಳ್ಯಾರೋ ಸ್ನೇಹಿತೆ, ಯೌವ್ವನ ಹೊಸ ಬಿಸಿಗಳನ್ನೆಲ್ಲ ಕದ್ದು ತೋರಿಸುವ ಆಗೀಗ ಮಜ ಕೊಡುವ ಕೊಂಚವೇ ಸಿನಿಯರ್ ಹುಡುಗಿ, ಆಗೆಲ್ಲಾ ಇದ್ದಕ್ಕಿದ್ದಂತೆ ಎದೆಗೆ ಕೈಯಿಕ್ಕಿಬಿಡುವ ಆಕೆಯ ಚರ್ಯೆ ಮುಜುಗರ ತರಿಸಿದರೂ ಹೊಸ ವಿಷಯಗಳ ಬಗ್ಗೆ, ಅರಿಯದ ಖಾಸಗಿ ಜಗತ್ತಿನ ಅಗಾಧತೆಗಳನ್ನು ಆಕೆ ಎತ್ತಿಡುವಾಗ, ಕದ್ದಾದರೂ ಸರಿ ಆಕೆಯ ಒರಟು ಸಾಮೀಪ್ಯ ಬೇಕೆನ್ನಿಸಿರುತ್ತದೆ ಪ್ರತಿ ಹುಡುಗಿಗೆ.
ಇವೆಲ್ಲದರ ಆಚೆಗೆ ಇದೆಲ್ಲವನ್ನೂ ನಿವಾಳಿಸಿ ತನ್ನದೇ ಒಂದು ಪ್ರಪಂಚ, ಅಲ್ಲೊಂದು ಅಧ್ಬುತ ಕಚಗುಳಿ, ಅದಕ್ಕೂ ಮಿಗಿಲಾದ ತನ್ನೆಲ್ಲಾ ಕನಸಿಗೆ ನೀರೆರೆಯುವವನ ಸಾಂಗತ್ಯ, ಅಲ್ಲಿ ತನ್ನ ಮೇಲೆ ಕಣ್ಣಿರಲ್ಲ, ಇತರರ ಕಣ್ಣಿಂದ ಕಾಯಲು ಅವನಿರುತ್ತಾನೆ. ತನಗೆ ಏನು ಬಂದರೂ ಬಾರದಿದ್ದರೂ ಅವನು ಕಲಿಸುತ್ತಾನೆ. ತಾನು ಶೃದ್ಧೆಯಿಂದ ಒಪ್ಪವಾಗಿ ಒಂದು ಗೂಡಿನಲ್ಲಿ ಬದುಕು ಬಣ್ಣಗಳ ಸಂತೆಯಾಗಿಸಬೇಕೆನ್ನುವ ಸಮಯಕ್ಕೆ ಆಕೆ ಸರಹೊತ್ತಿನಲ್ಲೂ ಕನಸುಗಟ್ಟಿ ಕಾಯುತ್ತಿರುತ್ತಾಳೆ. ಆಕೆ ಬದುಕು ಮತ್ತು ಕ್ಷಣಗಳೂ ಆರಂಭವಾಗುತ್ತಿದ್ದುದೇ ಹಾಗೆ.
ಪ್ರಿಯ ದೊರೆ... ಒಂದು ಉಮ್ಮಾ...
ಪ್ರತಿ ಮಾತಿನ ಮೊದಲು ಮತ್ತು ಕೊನೆಗೊಮ್ಮೆ ಅಧರ ಮುದ್ರೆಯೊತ್ತದಿದ್ದರೆ ಬದುಕಿನ ಸವಿಯ ಕ್ಷಣಗಳು ಕಳೆದುಕೊಂಡಂತೆನೆ ಎನ್ನುವುದು ಆಕೆಯ ನಿಲುವು. ಅದಕ್ಕೆ. ಉಮ್ಮಾ... ಎಂದೇ ಆರಂಭಿಸು ಎಂದೇ ಆಕೆಯ ವಾದ. ಪ್ರೀತಿಯ ವಾದಕ್ಕೆ ಅಕೆಯ ಎದುರಿನಲ್ಲಿ ಅವನು ಗೆದ್ದಿದ್ದು ಕಮ್ಮಿ. ಅವನದೇನಿದ್ದರೂ ಆಕೆಗೆ ಸೋತು ಗೆಲ್ಲುವುದು.
ಎಲ್ಲಿದ್ದೀಯೋ.. ಯಾವ ಗುಡ್ಡ ಹತ್ತುತ್ತಿದ್ದಿಯೋ ಗೊತ್ತಿಲ್ಲ. ನಾನು ಮಾತ್ರ ಕಮ್ಮಗಿನ ಕಬ್ಬಿನ ಹಾಲನ್ನೂ ಅದರ ನೊರೆಯ ಜೊತೆಗೆ ತುಟಿಯೆಲ್ಲ ನೊರೆಯಾಗುವಂತೆ ಮಾಡಿಕೊಳ್ಳುತ್ತಾ ಸಂಜೆಯ ಚಳಿಗೆ ಮುದುರುತ್ತಾ, ಅದರೊಳಗೂ ಕಾಡಿ ನೆನಪಾಗುವ ನಿನ್ನ ತುಂಟತನಕ್ಕೆ ಸಣ್ಣಗೆ ಅಲ್ಲಲ್ಲೆ ಖಾಸಗಿಯಾಗಿ ಒದ್ದೆಯಾಗುತ್ತಾ ಕೂತಿದ್ದೇನೆ. ಜೀವನದಲ್ಲಿ ಮೊದಲನೇ ಬಾರಿಗೆ ಅರಿವಿಲ್ಲದೇ ನಿನ್ನ ಮಿಸ್ ಮಾಡ್ಕೊಳ್ಳೋಕೆ ಶುರುವಿಟ್ಟುಕೊಂಡೆನಲ್ಲ ‌ ..ನಿನ್ನ ಕರೆಗೆ ಯದ್ವಾ ತದ್ವಾ ಕಾಯೋಕೆ ಪ್ರಾರಂಭಿಸಿದೆನಲ್ಲ ..ಸಾವಿರಾರು ದ್ವಂಧ್ವಗಳ, ಭಯಗಳ ನಡುವೆಯಲ್ಲೂ ಇನ್ನಿಲ್ಲದ ದರ್ದಿನಲ್ಲಿ ಮೊದಲನೇ ಸಲ ನಿನ್ನ ಭೇಟಿ ಮಾಡಿದ್ನಲ್ಲ ಆವತ್ತೇ ಅನ್ನಿಸಿಬಿಡ್ತು ನಂಗೆ ಇವ್ನ ಕಟ್ಕೊಂಡು ಬದುಕು ಕಷ್ಟ ಅಂತ ...!
ಯಾಕೆ ಗೊತ್ತಾ ? ಯಾವತ್ತೂ ನಿನ್ನಿಂದ ತಪ್ಪಿಸಿಕೊಂಡು ಓಡದ ಹಾಗೆ ಅಡಿಕ್ಟು ಆಗಿದ್ದು ಆವತ್ತೇ ...ಪ್ರತೀ ದಿನ ಪ್ರತೀ ಕ್ಷಣ ನಿನಗಾಗಿ ಕಾಯುವ ಹಾಗೇ ಹಂಬಲಿಸುವ ಹಾಗೇ ಮಾಡಿದ್ದೀಯಲ್ಲ ...ಇವತ್ತಿಡೀ ನೆನಪಿಸಿಕೊಳ್ದೇ ತೆಪ್ಪಗಿರೋಣ ಅಂತ ಶಪತ ಹಾಕಿ ಆಣೆ ಮಾಡ್ಕೊಂಡು ದಿನವನ್ನು ಶುರುವಿಟ್ಟುಕೊಳ್ಳೋಣ ಅಂತ ಹೊರಟ್ರೂ ..ನಿನಗೊಂದು ತಣ್ಣನೆಯ ಮೆಸೇಜ್ ಮಾಡ್ದೇ ಇದ್ರೆ ಆ ದಿನವೇ ಮುಂದೆ ಹೋಗದೇ ಭೂಮಿನೇ ನಿಂತುಬಿಟ್ಟಿದ್ಯೇನೋ ಅನ್ನುವಷ್ಟು ಅಡಿಕ್ಷನ್ ಮನಸ್ಸಿಗೆ ಒಗ್ಗಿದೆ ಅಂತಾದ್ರೆ ನೀನೇ ಹೇಳು...ನಿನ್ನ ಕಟ್ಕೊಂಡು ಬದುಕು ಕಷ್ಟ ಆಗುತ್ತೆ ಅಂತ ನಂಗೆ ಅನ್ಸಿದ್ದು ತಪ್ಪಾ ಅಥವಾ ಬದುಕು ಅಂತಹ ಅಪರೂಪದ ಸುಖದ ಒತ್ತಡದಲ್ಲಿ ಬದುಕೊದಕ್ಕೆ ಅಂತನೆ ಹಿಂಗೆ ಮಾಡಿಕೊಂಡೆನಾ..? ನನ್ನ ಬದುಕಿನಲ್ಲಿ ನಡೆದು ಬಂದು ಕಾಲೂರಿ ನಿಂತವನು ನೀನು... ಬರುವದಕ್ಕೇ ಕಾಯುತ್ತಿರುವವಳಂತೆ ನಿನ್ನ ತೆಕ್ಕೆಗೆಳೆದುಕೊಂಡವಳು ನಾನು.. ಇಬ್ಬರಿಗೂ ಅದು ಅನಿರೀಕ್ಷಿತ..!
ಬೆಟ್ಟ ಹತ್ತುವಾಗ ಸಿಕ್ಕ ಪುಟ್ಟ ನವಿಲುಗರಿಯಂತೆ... ಒಂಟಿ ಸಂಜೆಯಲ್ಲೊಂದು ಕವಿತೆಯ ಸಾಲು ಹೊಳೆದಂತೆ ..ಯಾವತ್ತೋ ಕಳೆದು ಹೋದ ಬಾಲ್ಯದ ಗೆಳತಿಯ ಪತ್ರ ಸಿಕ್ಕಂತೆ ..ಆಮೇಲಿನದೆಲ್ಲ ವಿವರಣೆಗೆ ದಕ್ಕುವದಿಲ್ಲ ಬಿಡು.. ನೀನು ನನ್ನ ಕವಿತೆಗಳಲ್ಲಿ, ಬರೆದ ಸಾಲುಗಳಲ್ಲಿ, ಹಾಡುವ ಹಾಡುಗಳಲ್ಲಿ, ಅಲೆದ ದಾರಿಗಳಲ್ಲಿ, ಮಾಡುವ ಕೆಲಸಗಳಲ್ಲಿ, ಮಾಡಿಕೊಂಡ ಸಿಂಗಾರದಲ್ಲಿ, ಎಲ್ಲಿ ನೀನು ದಾಕಲಾಗಲಿಲ್ಲ ಹೇಳು..? ಕಾಲಿನ ಹೆಬ್ಬೆರಳ ತುದಿಯಿಂದ ಹಿಡಿದು ನೆತ್ತಿಯ ಮೇಲಿನ ಜೀವ ನಾಡಿಯ ತನಕ ...ನಿನ್ನ ಮುಂದೆ ಬೆತ್ತಲಾಗದೇ ಉಳಿದದ್ದೇನಿದೆ ..? ಎಲ್ಲೆಲ್ಲೋ ನನಗೆ ಗೊತ್ತಿಲ್ಲದಂತೆ ಹುಟ್ಟಿಕೊಳ್ಳುವ ಸುಖದ ಸಣ್ಣ ಗುಳ್ಳೆಗಳನ್ನೂ ಬಿಡದೆ ನೇವರಿಸಿ ಕಿಚ್ಚೆಬ್ಬಿಸುವ ನಿನ್ನ ಹುಚ್ಚೆಬ್ಬಿಸುವ ಸ್ಪರ್ಷಕ್ಕೆ ಕೋಣೆಯ ತಾಪವೇ ಏರುತ್ತದಲ್ಲ...?ಅದೇನಾ ಬದುಕಿನ ಅರಿಯದ ಸುಖದ ಗಮ್ಯ..? ನನಗೆ ಗೊತ್ತಿಲ್ಲ. ವಿವರಿಸಬೇಕಾದ ನೀನು ವೃತ್ತದಾಚೆಗೀಗೀಗ.
ಅದೆಲ್ಲ ಬಿಡು ಕೊಟ್ಟದ್ದು, ಪಡೆದದ್ದು, ಸುಖಕ್ಕೆ ಮೈಯೊಡ್ಡಿದ್ದು, ತೋಯ್ದು ಮುದ್ದೆಯಾದದ್ದು, ಹನಿದು ನೀರಾದದ್ದು, ಕರಗಿ ಕಳೆದು ಹೋದದ್ದು, ಸಾವಿರ ಮಾತಾಡಿದ್ದು,  ಆಡದೇ ಮನದಲ್ಲಿ ಉಳಿದು ಹೋದದ್ದು ಲಕ್ಷಾಂತರ ಮೆಸೇಜ್ ಕಳಿಸಿಕೊಂಡದ್ದು, ಇದೆಲ್ಲವೂ ಬರೀ ಕಡು ಕತ್ತಲೆಯ ಬೆತ್ತಲೆಯ ಮೋಹ ಅಂತ ಯಾರಾದ್ರೂ ಹೇಳಿದ್ರೆ ..ಅಥವಾ ನಮಗೇ ಇನ್ಯಾವತ್ತೋ ದುರ್ಬಲ ಕ್ಷಣದಲ್ಲಿ ಹಾಗನ್ನಿದ್ರೆ ಮರೆತು ಬಿಡಬಹುದು..ಆದ್ರೆ ನೀನು ಸಿಕ್ಕಾಗ ಅನುಭವಿಸಿದ ಬೆರಳಂಚಿನ ಪುಳಕ ...ಒಂಟಿ ಸಾಯಂಕಾಲದ ಹಿತ್ತಲಿನಲ್ಲಿ ನಿನ್ನದೇ ನೆನಪು ಮಾಡುತ್ತ ಕಳೆದು ಬಿಡುವ ಬೇಸರ...ಬದುಕು ಬೇಸರ ಅನ್ನಿಸಿದಾಗ ನೀನೊಬ್ಬನಿದ್ದೀಯಲ್ಲ ಆತ್ಮಬಂದು ಅಂತ ಅಂದುಕೊಂಡು ಹಗುರಾಗುವ ಆ ಕ್ಷಣ ..."
ಹೀಗೆ ಬದುಕಿನ ಬಗ್ಗೆ ಆಕೆಯ ಕನಸು,ಹುಟ್ಟಿಕೊಂಡ ಚಿಗುರು ಗರಿಕೆಗಳ ಒಡಲಲ್ಲಿ ಅಸೆಗಳ ಒರತೆ ಮೂಟೆ ಮೂಟೆ.  ಅವಳೊಂದು ಭಾವಗೀತೆಯಾ..? ಅವಳೊಂದು ಕವಿತೆಯಾ...? ಯಾರಿಗೆ ಗೊತ್ತು..? ಸರಿಯಾಗಿ ಓದಿಕೊಂಡರೆ ದೊಡ್ಡ ಕಾವ್ಯವೇ ಆದಾಳು. ಆದರೆ ಎಂಜಲು ಹಚ್ಚದೆ ಪುಟ ತಿರುವಬಲ್ಲ ಹಿಕಮತ್ತು ಅವನಿಗೆ ಗೊತ್ತಿರಬೇಕಿತ್ತು. ಶಾಂತಿಯ ಬದುಕು ಪುಟ ಮಗುಚಿದಂತೆಲ್ಲಾ ಬಣ್ಣಗಳ ಕದಡಿದ್ದು ನನಗೆ ಸ್ಪಷ್ಟವಾಗಿ ಕಂಡಿತ್ತು. ಬದುಕಿನ ಮೊದಲ ಪುಟಕ್ಕೆ ಕಾಲಿಟ್ಟಾಗ ಎಲ್ಲವೂ ಹೊಸ ಪಾನುಗಳೇ. ಆದರೆ ಗಂಡಸೆಂಬುವನು, ಗಂಡನಾದಾಗ ಪಾನುಗಳಲ್ಲಿ ಚಿತ್ಕಾಟು ಎದ್ದು ಕಾಣತೊಡಗುತ್ತದೆ. ಏನೇ ಸ್ನೇಹಿತನಂತಿದ್ದಾನೆ ಎಂದುಕೊಂಡರೂ ಸ್ನೇಹಿತೆಯೊಬ್ಬಳ ಕಾಲ್‍ಗೂ ಕೂಡಾ ಮನ ಬಿಚ್ಚಿಕೊಂಡು ಆಚೆ ಹೋಗಿ ಮಾತಾಡಬಲ್ಲ ಸಣ್ಣ ಸ್ವಾತಂತ್ರ್ಯ ಅರಿವಿಲ್ಲದೆ ಬಂಧಕ್ಕೊಳಗಾದಾಗಲೇ, ಆಕೆಯ ಕನಸಿನ ಲೊಕಕ್ಕೆ ಸೂಚಿಯ ಮೊನೆ ತಾಗಿದ್ದು ಗೊತ್ತಾಗೋದು. ವಿಚಿತ್ರವೆಂದರೆ ಪ್ರತಿ ಗಂಡಸೂ ತನ್ನವಳ ಎದುರು ಸಾಚಾ ಮತ್ತು ಹೀರೋ ಆಗೇ ಇರಬಯಸುತ್ತಾನೆ ಎನ್ನುವುದು ಆಕೆಗೆ ಗೊತ್ತಾಗುತ್ತಿದ್ದರೂ ಅದನ್ನಾಕೆ ನಂಬಿ ಬದುಕು ಕಟ್ಟಲು ಎದ್ದು ನಿಂತಿರುತ್ತಾಳೆ.
ಶಾಂತಿ ಇದರಲ್ಲಿ ಮೊದಲಲ್ಲ ಮತ್ತು ಕೊನೆಯೂ ಅಲ್ಲ. ನನ್ನ ಕಥಾನಕದ ಸಾವಿರಾರು ಕೊವೆಗಳಲ್ಲಿ ತಮ್ಮ ಬಿಸಿಯುಸಿರು ಬಿಟ್ಟು ನನ್ನ ಹೆಗಲಿಗೆ ಕತೆಯನ್ನೆಲ್ಲಾ ದಾಟಿಸಿ ನಿರುಮ್ಮಳ್ಳವಾಗಿ ಎದ್ದು ಹೋದ ತಾಯಂದಿರಿದ್ದಾರೆ, ಸಹೋದರಿಯರಿದ್ದಾರೆ, ಪುಟ್ಟ ಪುಟ್ಟ ಅಮ್ಮಂದಿರಿದ್ದಾರೆ, ಸಾಂಗತ್ಯವೇ ಇಲ್ಲದೆ ಮಕ್ಕಳು ಹಡೆದ ನತದೃಷ್ಟೆಯರಿದ್ದಾರೆ, ಒಪ್ಪತ್ತಿನ ಊಟಕ್ಕಾಗಿ ದೈಹಿಕವಾಗಿ ಬೆತ್ತಲಾಗಿ ನಿಂತು ಬಿಟ್ಟ ಜಿವಚ್ಛವಗಳಿದ್ದಾರೆ, ಭಾವನೆಗಳ ಬಿಕರಿಗಿಟ್ಟು ಹಲ್ಕಿರಿದು ನಿಲ್ಲುತ್ತಿರುವ ದೈನೆಸಿ ಚಿಕ್ಕಮ್ಮಂದಿರಿದ್ದಾರೆ, ಹೆಂಗೋ ಗಂಡ ಅಂತೊಬ್ಬನಿರಲಿ ಎಂದು ಗೊತ್ತಿದ್ದೂ ಹಳ್ಳಕ್ಕೆ ಬಿದ್ದು ಕಾಲಿಗೆ ಕಲ್ಲು ಕಟ್ಟಿಕೊಂಡ ಹೆಂಗಸರಿದ್ದಾರೆ. ಹೆಣ್ಣಿನ ಸಾಕಿದ್ದೇ ಗಂಡಸುತನ ಎಂದುಕೊಂಡ ಪುಂಗವರಿದ್ದಾರೆ ಅದಕ್ಕೂ ಮಿಗಿಲಾಗಿ ತನಗೆ ಸಂಬಳ ಎಷ್ಟು ಏನು ಮಾಡುತ್ತಿದ್ದೇನೆ ಎನ್ನುವುದನ್ನೂ ತಿಳಿಪಡಿಸದ ಕುರಿಯಂತೆ ಹೆಂಡತಿಯನ್ನು ಸಾಕುತ್ತಿರುವವರಿದ್ದಾರೆ.
ಇವೆಲ್ಲದರ ಮಧ್ಯೆ ಬದುಕನ್ನು ನೇರ್ಪುಗೊಳಿಸುವ ಆಕೆಯ ಬಿಸಿಯುಸಿರು, ಹೇಳಿಕೊಂಡು ಹಗುರವಾದೇನಾ ಎನ್ನುವ ಹೃದಯದ ಪಿಸುಮಾತಿಗೆ ದನಿಯಾಗುವ ಮೂಲಕ ಕೊಂಚವಾದರೂ ಸಾಂತ್ವನ ನೀಡಿದ್ದೇ ಆದರೆ ಅಷ್ಟರ ಮಟ್ಟಿಗೆ ನಾನು ಧನ್ಯ. ಅಂತಹ ಹಲವು ಹರವುಗಳ ದನಿಗಳ ಭಾವಜಾಲ ನಿಮ್ಮೆದುರಿಗೆ ಇನ್ನು ಮೇಲೆ ಪ್ರತಿವಾರ
ಪಿಸುಮಾತಿನ ಪಾರಿಜಾತ...

Monday, January 23, 2017


ಅವನ್ಯಾಕೆ ಮಾತೇ ಅಡುವುದಿಲ್ಲ...?

( ಹೆಚ್ಚಿನಂಶ ಅವರವರ ಮನೆಯಲ್ಲಿ ತನ್ನ ಗಂಡ ಮಾತೇ ಆಡುವುದಿಲ್ಲ ಎನ್ನುವದೂರು ಸಹಜ ಮತ್ತು ಅವನಲ್ಲೀಗ ಮೊದಲಿದ್ದ ಆಸಕ್ತಿ ಉತ್ಸಾಹ ಎರಡೂ ಮಾತಾನಾಡುವುದರಲ್ಲಿ ಉಳಿದೇ ಇಲ್ಲ ಎನ್ನುವ ಕಮೆಂಟು ಸುಅಭವಾಗಿ ಅವನಿಗೆ ತಗಲುತ್ತಲೇ ಇರುತ್ತದೆ. ಅದು ಒಂದಿಷ್ಟು ನಿಜವಾದರೂ ಅಸಲಿಗೆ ಅವನು ಬೇಕೆಂದೇ ಅದನ್ನು ಮಾಡುತ್ತಿರುವುದಿಲ್ಲ. ಒಲ್ಲದ ಮನಸ್ಥಿತಿಗೆ ದೇಹದಲ್ಲಿ ಸ್ರವಿಸುವ ಹಾರ್ಮೋನು ಅವನನ್ನು ಬೇರೆಡೆಗೆ ಸೆಳೆಯುತ್ತಾ ಅವನಿಗರಿವಾಗದೆ ಅವನನ್ನು ಮಾತಾಡದಂತೆ ತಡೆಯಲು ಪ್ರೇರೇಪಿಸುತ್ತಿರುತ್ತದೆ. ಇದು ಗೊತ್ತಿಲ್ಲದ ಶೇ. 98 ರಷ್ಟು ಕುಟುಂಬದಲ್ಲಿ ಆತ ಮೌನವಾಗಿದ್ದೇ ಖಳನಾಗುತ್ತಿರುತ್ತಾನೆ.)

ಬಹಳಷ್ಟು ದಂಪತಿಗಳಲ್ಲಿ ಒಂದು ದೂರು ಸಹಜವಾಗಿ ಕೇಳುತ್ತಿರುತ್ತದೆ. 
" ...ರಾಜಕೀಯ, ಕ್ರಿಕೇಟು, ಸಿನೇಮಾ ಬಿಟ್ಟರೆ ಬೇರೆ ಮಾತೆ ಇಲ್ಲ ಅವರಿಗೆ. ಊರವರ ಜತೆಗೆಲ್ಲಾ ಮಾತಾಡೊಕೆ ಆಗುತ್ತೆ ನನ್ನ ಜತೆ ಮಾತಾಡೊಕೆ ಸಮಯವೇ ಇಲ್ಲ ಅವರಿಗೆ. ಏನು ಕೇಳಿದರೂ ಹಾಂ ಹೂಂ ಅಂತಿರ್ತಾರೆ. ಬರೀ ಲೆಕ್ಕಾಚಾರದಷ್ಟೆ ಮಾತಾಗುತ್ತೆ. " ಇತ್ಯಾದಿ. 
ಹೌದು. ಆತ ಕ್ರಮೇಣ ಮಾತೇ ನಿಲ್ಲಿಸಿರುತ್ತಾನೆ ಹಾಗಂತ ಆಕೆಯ ಕಂಪ್ಲೆಂಟು. ಆದರೆ ವೈಜ್ಞಾನಿಕವಾಗಿ ಅದು ಅವನ ನಿರ್ಧಾರವಾಗಿರುವುದಿಲ್ಲ. ಅನುಭವ ಮತ್ತು ಮಾನಸಿಕ ಸ್ಥಿತಿಗತಿಗೆ ಸಿಲುಕಿದ ದೇಹದ ಸಮತೋಲನ ನಿರ್ವಹಿಸುವ ಹಾರ್ಮೋನುಗಳು ಅವನನ್ನು ಆ ಸ್ಥಿತಿಗೆ ತಂದು ನಿಲ್ಲಿಸಿರುತ್ತವೆ. ಹಾಗಾಗಿ ಆತ ಎಲ್ಲಿ ಮತ್ತು ಏನು ಮಾತಾಡಬೇಕೆನ್ನುವುದನ್ನು ಅವನಿಗೆ ಗೊತ್ತಿಲ್ಲದೆ ಅವನ ಮನಸ್ಸು ನಿರ್ಧರಿಸಿಬಿಟ್ಟಿರುತ್ತದೆ. 
ಆದರೆ ಅಪವಾದ ಮತ್ತು ಬೈಗುಳುಗಳಿಗೆ ಅವನು ತುತ್ತಾಗುತ್ತಲೇ ಇರುತ್ತಾನೆ. ಅದರ ಮುಂದುವರಿದ ಪರಿಣಾಮವಾಗಿ ಬಿಗು ಇನ್ನಷ್ಟು ಬೆಳೆಯುತ್ತದೆ ಹೊರತಾಗಿ ಚಿಂತನೆ ಮತ್ತು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವ ಯಾವ ಚರ್ಚೆಯೂ ನಡೆಯುವುದೇ ಇಲ್ಲ. ಅಷ್ಟಕ್ಕೂ ಗಂಡಸು, ಪುರುಷ, ಹುಡುಗ, ಗಂಡ, ಅಪ್ಪ ಹೀಗೆ ಯಾವ್ಯಾವುದೋ ರೂಪದಲ್ಲಿರುವ ಅವನ್ಯಾಕೇ ಮಾತೇ ಆಡುವುದಿಲ್ಲ...? 
ಇದು ಬರೀ ಹೆಣ್ಣೊಬ್ಬಳ ಪ್ರಶ್ನೆ ಅಲ್ಲ. ಆರಂಭದಲ್ಲಿ ಹಲವು ಔಚಿತ್ಯಗಳಿಗೆ ಮತ್ತು ತನ್ನೆಲ್ಲಾ ಪ್ರವರಗಳನ್ನು ಹೇಳಿಕೊಳ್ಳಲು ಸಾಲುಸಾಲಾಗಿ ಮಾತುಗಳನ್ನು ಪೆÇೀಣಿಸುತ್ತಿದ್ದ ಹುಡುಗ, ಮದುವೆಯ ನಂತರದ ದಿನಗಳಲ್ಲಿ ಇದ್ದಕ್ಕಿದ್ದಂತೆ ಮೌನವಾಗಿ ಹೋಗುತ್ತಾನೆ ಅಥವಾ ಆಕೆಗೆ ಹಾಗಂತ ಅನ್ನಿಸಿರುತ್ತದೆ. ಕ್ರಮೇಣ ಗಂಡನಾದವನೂ ಎಲ್ಲದಕ್ಕೂ ಹಾಂ.. ಹೂಂ.. ಎಂದಷ್ಟೆ ಮಾತಾಡುತ್ತಾನೆ ಹೊರತಾಗಿ ತನ್ನ ಭಾವನೆಗಳನ್ನು ಯಾಕೆ ಏನೂ ಹೇಳೊದೇ ಇಲ್ವಲ್ಲ. ಯಾಕೆ ಗಂಡಸರಿಗೆ ಭಾವನಾತ್ಮಾಕ ಮಾತೇ ಬೇಕಿರೋದಿಲ್ವಾ..? ಅದೇ ಹೊರಗೆ ನಾಲ್ಕಾರು ಜನ ಸೇರಿದರೆ ರಾಜಕೀಯ, ಕಛೇರಿ ಮ್ಯಾಟರ್ರು, ಕ್ರಿಕೆಟ್ಟು ಅಬ್ಬಬ್ಬಾ ಅದೇನು ಮೀಟರ್ರು, ನಾಲ್ಕಾರು ತಾಸು ಬೇಕಿದ್ದರೂ ನೋಡುನೋಡುತ್ತಲೇ ಮಾತಾಡುತ್ತಾ ಕಳೆಯುತ್ತಾರೆ. ಒಳ ಬರುತ್ತಿದ್ದಂತೆ ಅದ್ಯಾಕೆ ಗಂಭೀರ ಗಣಪತಿಯಾಗುತ್ತಾನೆ..? ಸಂಬಂಧಿಕರು ಬಂದಿದ್ದರೆ, ಸ್ನೇಹಿತೆಯರಿದ್ದರೆ ಬಾಯೇ ಬಿಡುವುದಿಲ್ಲ. ಇದ್ಯಾಕೆ ಹಿಂಗೆ..? ನಮ್ಮ ಜತೆಗಿನ ಆಪ್ತತೆ ಕಡಿಮೆಯಾಗಿದೆಯಾ...ಅಥವಾ ನಮ್ಮ ಐ.ಕ್ಯೂ. ಇವ್ನಿಗೆ ಸಾಕಾಗುತ್ತಿಲ್ಲವಾ..? 
ಹೀಗೆ ಹಲವು ಸಂದರ್ಭದಲ್ಲಿ ಆಕೆಗೆ ಒಳಗೊಳಗೇ ಅನ್ನಿಸಿದ್ದು ಸುಳ್ಳಲ್ಲ ಮತ್ತು ಗಂಡಸೊಬ್ಬ ಮಾತೇ ಆಡದೆ ಬರೀ ವ್ಯವಹಾರಿಕ ಮಾತುಗಳನ್ನಷ್ಟೆ ಮಾತಾಡುತ್ತಾನೆನ್ನುವ ದೂರಿಗೂ ಅವನು ಜಗ್ಗಲಾರ ಎನ್ನುವುದು ಎರಡೂ ಕಡೆಯ ವಾದ. ಆದರೆ ಹಾಗೊಂದು ಹಂತಕ್ಕೆ ಅವನು ತಲುಪುವ ಮೊದಲು ಆಕೆಯಂತೆ, ಅವನೂ ಕಿವಿ ತೆಗೆದು ಕಾಯುತ್ತಿರುತ್ತಾನೆ ಎನ್ನುವುದು ನೆನಪಿಸಿಕೊಂಡರೆ ನೆನಪಾದೀತು.
ಕಾರಣ ಅವನಿಗೂ ಆಕೆಯ ಮಾತುಗಳು ಬೇಕಿರುತ್ತವೆ. ಆದರೆ ಅದರಲ್ಲಿ ಪ್ರಾಯೋಗಿಕತೆ (ಅಥವಾ ವಾಸ್ತವಿಕತೆ ಅಂತಿಟ್ಟುಕೊಳ್ಳಿ) ಇರೋದೆ ಇಲ್ಲ ಅನ್ನೋದು ಅವನ ವಾದ. ದುರಂತವೆಂದರೆ ಯಾವತ್ತೂ ಇಬ್ಬರೂ ಬಾಯ್ಬಿಟ್ಟು ಹೇಳಿಕೊಳ್ಳಲಾರರು. ಇದೆಲ್ಲಾ ಹೀಗೆ ಇತಿಹಾಸದಿಂದಲೂ ನಡೆಯುತ್ತಾ ಈಗಲೂ ಮುಂದುವರೆಯುತ್ತಿರಲು ಕಾರಣ ಅವಳು ಭಾವ ಜೀವಿಯಾದರೆ ಅವನು ಪ್ರಾಯೋಗಿಕ ಜೀವಿ. ಆಕೆ ಮಾನಸಿಕ ಸಾಂಗತ್ಯ ಇಷ್ಟಪಟ್ಟು ಮುನ್ನಡೆಯುತ್ತಿದ್ದರೆ ಅವನು ದೈಹಿಕ (ಪ್ರಾಯೋಗಿಕ) ಸಾಂಗತ್ಯದ ನಂತರ ಮನಸ್ಸಿನಾಳಕ್ಕೆ ಇಳಿಯುತ್ತಾನೆ. ಆಕೆಗೆ ಮಾತಿನ ನಲುಮೆಯಿಂದ ಗಂಟೆ, ದಿನಗಳನ್ನು ಕಳೆಯಲು ಇಷ್ಟಪಡುತ್ತಾಳಾದರೆ ಅವನಿಗೆ ಇದೆಲ್ಲಾ ಸಿಲ್ಲಿ ಎನ್ನಿಸುವ ರೇಜಿಗೆಗೆ ಕಾರಣ ಅವನ ಮಾನಸಿಕ ಸ್ಥಿತಿಗತಿಯಲ್ಲಿ ಹೀಗೆ ಭಾವನಾತ್ಮಕ ಮಾತುಗಳಿಗೆ ಪ್ರಾಯೋಗಿಕ ಔಟ್‍ಪುಟ್ ಏನೂ ಇರೋದಿಲ್ಲ ಎನ್ನುವ ತರ್ಕ. 
ಇದೆಲ್ಲದರ ಫಲಿತಾಂಶ ಇಬ್ಬರ ಮಧ್ಯೆ ಒಂದು ಪಾರದರ್ಶಕ ಗೋಡೆ ಎದ್ದು ನಿಲ್ಲುತ್ತದೆ. ಇಬ್ಬರಿಗೂ  ಎಲ್ಲ ಕಾಣುತ್ತಿದೆ ಆದರೆ ಕೇಳಿಸುವುದಿಲ್ಲ. ಎಲ್ಲಾ ಗೊತ್ತಾಗುತ್ತಿದೆ ಆದರೆ ಇಬ್ಬರ ಮಾತುಗಳಿಗೂ ಜೀವವಿರುವುದಿಲ್ಲ ಹಾಗಾಗಿ ಏನೂ ಅರ್ಥವಾಗುತ್ತಿಲ್ಲ. ಅಷ್ಟೊತ್ತಿಗೆ ಕೆಲವು ವರ್ಷಗಳ ಕಾಲದ ಸಾಂಗತ್ಯ ಅಥವಾ ದಾಂಪತ್ಯದಲ್ಲಿ ಕೆಲವು ವಿಷಯ ಮತ್ತು ಸೂಕ್ಷ್ಮತೆ ಅರ್ಥವಾಗಿಬಿಟ್ಟಿರುತ್ತದೆ. ಜತೆಗೆ ಅವರಿಬ್ಬರಲ್ಲಿನ ಲೈಂಗಿಕ ಆವರ್ತನೆಯಲ್ಲಿನ ಒಳಗೊಳ್ಳುವಿಕೆಯ ಹಂತದಲ್ಲಿ ಅಗತ್ಯದ ತೆರೆದುಕೊಳ್ಳದಿರುವಿಕೆ ಕೂಡಾ ನಿರ್ದಿಷ್ಟ ಎತ್ತರದ ಗೋಡೆಯ ರೂಪತಾಳಿರುತ್ತದೆ. ಗಮನಿಸಿ ನೋಡಿ. ಹೆಣ್ಣಾದವಳು ರಸಿಕತೆಯಲ್ಲಿ ಯಾವ ನಾವಿನ್ಯತೆಯನ್ನೂ ಪ್ರಯತ್ನಿಸದಿದ್ದರೆ ಅಷ್ಟರ ಮಟ್ಟಿಗೆ ಅವನ ಜೀವನದ ಅರ್ಧ ರಸ ಕಡಿಮೆಯಾದಂತೇನೆ. 
ಏನು ಮಾಡಬೇಕು ಹೇಗೆ ಮಾಡಬೇಕು ಎನ್ನುವುದನ್ನೆಲ್ಲಾ, ಸರಸ ಎಷ್ಟು ರಸಮಯವಾಗಿರಬೇಕು ಎನ್ನುವುದನ್ನು ಮದುವೆ ಆಗಿ ಆರೆಂಟು ವರ್ಷ ಕಳೆದ ದಂಪತಿಗಳಿಗೆ ಕಲಿಸುವ ಹೇಳಿಕೊಡುವ, ವಿಡಿಯೋ ತೋರಿಸುವ ಅಗತ್ಯವಿರುವುದೇ ಇಲ್ಲ. ಆದರೆ ಹಾಗೊಂದು ಪ್ರಯತ್ನದಲ್ಲಿ ಆಕೆ ಸಹಕರಿಸದಿದ್ದರೆ ಆತ ಸಪ್ಪಗಾಗತೊಡಗುತ್ತಾನೆ. ಆಕೆಗೆ ಯಾವ ಹೊಸ ಮಾಹಿತಿ, ಬದಲಾವಣೆ, ವಿಭಿನ್ನತೆ ಇತ್ಯಾದಿ ಗೊತ್ತೇ ಇರುವುದಿಲ್ಲ ಎಂದಿಟ್ಟುಕೊಂಡರೂ, ಅವನ ಮೇಲೆ ಹಾಗೊಂದು ಸಾಂಗತ್ಯವನ್ನು ಹಂಚಿಕೊಳ್ಳುವುದರಿಂದಲೇ ಬದುಕು ಇನ್ನಷ್ಟು ರಸಮಯವಾಗಲಿದೆ ಎನ್ನುವ ನಂಬುಗೆನಾದರೂ ಆಕೆಗೆ ಇರುತ್ತದಾ...? ಅದೂ ಇಲ್ಲ. ಯಾವದಕ್ಕೂ ಕೇವಲ ತನ್ನ ಅರಿವಿಗೆ ದಕ್ಕಿದ ಜ್ಞಾನ ಮಾತ್ರವೇ ಸತ್ಯ ಎನ್ನುವ ವಾಸ್ತವಕ್ಕೆ ಬಿಗಿದು ಆತುಕೊಂಡು ನಿಂತುಬಿಟ್ಟಿರುತ್ತಾರೆ. 
ಎಲ್ಲದಕೂ ಒಲ್ಲೆನೆನ್ನುವ ಸಹವರ್ತಿಯನ್ನು ಅಧಿಕೃತವಾಗಿ ಯಾರೂ ಒತ್ತಾಯಿಸಲಾರರು. ಅದರಲ್ಲಿ ತಿರಸ್ಕೃತ ಮುಖದ ಒತ್ತಾಯದ ಸಾಮಿಪ್ಯವನ್ನು ನಿಜವಾದ ಗಂಡಸಾದವನು ಎದುರಿಸಲಾರ. ಅಲ್ಲಿಗೆ ಒತ್ತಾಯಿಸಿ ಪಡೆಯಲೊಲ್ಲದ, ಹಾಗೆ ಒತ್ತಾಯದಿಂದ ಸುಖ ಪಡೆಯಲಾರೆನೆನ್ನುವ ಸತ್ಯ, ಗಂಡಸಿನ ಅಳಿದುಳಿದ ಆಸಕ್ತಿಯ ಮೇಲೂ ಪರಿಣಾಮ ಬೀರುತ್ತದೆ. ಹಾಗೆ ನಕಾರಾತ್ಮಕ ಮತ್ತು ನಾವಿನ್ಯತೆ ಇಲ್ಲದ ದಾಂಪತ್ಯದ ಸಾಂಗತ್ಯದಲ್ಲಿ ಕ್ರಮೇಣ ಆಸಕ್ತಿ ಕಳೆದುಕೊಳ್ಳುತ್ತಾನೆ. ಅ ಒಂದು ಹಂತದ ಸಲುಗೆಯ ನಂತರದಲ್ಲಿ ಅವನಿಗೆ, ಆಕೆ ತನಗೇನು ಬೇಕು ಎನ್ನುವುದನ್ನು ಅರಿತುಕೊಳ್ಳಲಿ ಎನ್ನುವ ಭಾವ ಮೊಳೆಯುತ್ತಿರುತ್ತದೆ. ಆದರೆ ಆಕೆ ಅದಕ್ಕೆ ಪಕ್ಕಾಗುವುದಿಲ್ಲ ಎನ್ನುವುದರಿವಾಗುತ್ತಿದ್ದಂತೆ ಆ ಖಾಸಗಿ ಸಾಂಗತ್ಯ ತೀರ ಯಾಂತ್ರಿಕವಾಗತೊಡಗುತ್ತದೆ. ಅದು ಅವನ ಸಂಗಾತಿಯೊಂದಿನ ಖಾಸಗಿ ಆಪ್ತತೆಯ ಅಂತರವನ್ನೂ ಹೆಚ್ಚು ಮಾಡತೊಡಗುತ್ತದೆ.
 ಕ್ರಮೇಣ ಅವನಿಗೆ ಯಾವುದನ್ನಾದರೂ ಹಂಚಿಕೊಳ್ಳಬೇಕು ಎನಿಸುವ ಮನಸ್ಸೂ ಕಡಿಮೆಯಾಗತೊಡಗುತ್ತದೆ. ಅಂತಿಮವಾಗಿ ಅದು ಪ್ರಮುಖ ಸಂವಹನ ಮಾಧ್ಯಮವಾದ ಮಾತಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೆ ಆಗುವ ಚಕ್ರದಲ್ಲಿ ಉಧ್ಬವಾಗುವ ಅಶಾಂತಿ, ಅಸಂತೃಪ್ತಿ ಪರಿಣಾಮ ಅವನಿಗರಿವಾಗದೆ ಅವನ ಭಾವನೆಗಳ ಮೇಲೂ ಬೀಳತೊಡಗುತ್ತದೆ. ಹಾಗಾಗಿ ಆತ ಈಚೆ ಬರುತ್ತಿದ್ದಂತೆ ತನ್ನ ಇತರೆ ಹವ್ಯಾಸ, ಆಸಕ್ತಿ ಮತ್ತು ಇತರ ಚಟುವಟಿಕೆಗಳತ್ತಲೇ ಮಾತುಕತೆ ಹೊರಳಿಸುವಂತಾಗುತ್ತಾನೆ ಹೊರತಾಗಿ ಅವನಾಗಿ ಬೇಕೆಂದೆ ಹಾಗೆ ಮಾಡಿರುವುದಿಲ್ಲ. 
ಹೆಣ್ಣು ಮತ್ತು ಗಂಡುಗಳಿಬ್ಬರ ಭಾವನಾತ್ಮಕ, ಪ್ರಾಯೋಗಿಕ ವಿಷಯ, ಮಾತುಗಳ ಹಂಚಿಕೆ ಮತ್ತು ವಿಷಯದ ಆಯ್ಕೆ ಅವರ ಕೈಯಲ್ಲಿ ಇಲ್ಲವೇ ಇಲ್ಲ. ಅವರಿಬ್ಬರ ಮಾನಸಿಕ ಸ್ಥಿತಿಗತಿ ಸೇರಿದಂತೆ ಎಲ್ಲವನ್ನೂ ನಿರ್ಧರಿಸುವುದು ಈಗಾಗಲೇ ರೂಪಗೊಂಡಿರುವ ನರಕೋಶಗಳ ಆಧಾರದ ಮೇಲೆ ಹೊರತಾಗಿ ಅವರವರೇ ಅದನ್ನು ಆಯ್ದುಕೊಳ್ಳುವ ಸಾಧ್ಯತೆಗಳು ಇಲ್ಲವೇ ಇಲ್ಲ. ಆದರೆ ದೈನಂದಿನ ನಡವಳಿಕೆ ಮತ್ತು ಮನಸ್ಸಿನ ಹಾರ್ಮೋನ್ ಸ್ರವಿಸುವಿಕೆಗೆ ಕಾರಣವಾಗುವ ಚೋದಕಗಳಿಗೆ, ಹೊರಭಾಗದಲ್ಲಿ ನಡೆಯುವ ಪ್ರಕ್ರಿಯೆಗಳಿಂದ ದೊರಕುವ ಪ್ರಚೋದನೆ ಇಬ್ಬರನ್ನೂ ನಿಯಂತ್ರಿಸುತ್ತಲೇ ಇರುತ್ತದೆ. ಮಾನಸಿಕವಾಗಿ ಮೆದುಳಿನ ಮತ್ತು ಆ ಸಂಬಂಧಿ ನರಗಳ ಪ್ರಕ್ರಿಯೆಗಳಲ್ಲಿ ಭಾವನಾತ್ಮಕ ಮತ್ತು ಪ್ರಾಯೋಗಿಕ ಎಂದು ಇಬ್ಬರಲ್ಲೂ ಈ ಮೊದಲೇ ಬೈ ಡಿಫಾಲ್ಟ್ ಡಿಸೈನ್ ಆಗಿರುವುದರಿಂದ ಮೂಲ ವರ್ತನೆ ಹಾಗೆಯೇ ಇರುತ್ತದೆ. ಆದರೆ ಸಂಗಾತಿ ಮತ್ತು ಸಮಯದ ಅನುಕೂಲದ ಮೇರೆಗೆ ಇಬ್ಬರ ವರ್ತನೆಯಲ್ಲೂ ಬದಲಾವಣೆಗೆ ಅವಕಾಶ ಇದ್ದೇ ಇರುತ್ತದೆ. 
ಇದಕ್ಕೊಂದು ಉದಾ. ಎಂದರೆ ಪರಿಚಯದ ಮೊದಮೊದಲಿಗೆ ಅವನ ಮಾತುಕತೆ ತುಂಬ ಭಾವನಾತ್ಮಕವಾಗಿರುತ್ತದೆ ಮತ್ತದಕ್ಕೆ ಆಕೆ ಅದೆಷ್ಟು ತಿವ್ರವಾಗಿ ಸ್ಪಂದಿಸುತ್ತಾಳೆಂದರೆ ಅವರಿಬ್ಬರ ಸಾಮಿಪ್ಯಕ್ಕೆ ಸಮಯವೇ ಉಳಿದಿರುವುದಿಲ್ಲ. ಅದೇ ಒಮ್ಮೆ ಸಾಂಗತ್ಯ ನೇರವೇರುತ್ತಿದ್ದಂತೆ ಆತ ಪ್ರಾಯೋಗಿಕವಾಗಿ ಬಿಡುತ್ತಾನೆ. ಇದನ್ನು ನೀವೆ ನಿಮ್ಮ ಜೀವನ ಶೈಲಿಯಲ್ಲಿ ಸಂಗಾತಿಯೊಂದಿಗಿನ ನಡೆನುಡಿಯಲ್ಲಿ ಗಮನಿಸಿಕೊಳ್ಳಬಹುದು. ಪುರುಷ ಮಿಲನಕ್ಕೂ ಮೊದಲು ವ್ಯವಹರಿಸುವ ರೀತಿಗೂ ನಂತರ ತತಕ್ಷಣ ಮೊಬೈಲು, ಟಿ.ವಿ. ರಿಮೋಟ್ ಎತ್ತಿಕೊಂಡು ಕೂಡುವ ವರ್ತನೆಯನ್ನು ಗಮನಿಸಿದರೆ ಇದರ ಒಳಾರ್ಥ ಸೂಕ್ಷ್ಮವಾಗಿ ಅರ್ಥವಾದೀತು. ಪ್ರಾಯೋಗಿಕ ನಡೆ ಮತ್ತು ಬಯಕೆಯ ಭಾವಗಳಲ್ಲಿ, ಪ್ರಾಯೋಗಿಕತೆ ಗೆದ್ದಾಗ ಭಾವುಕತೆಯಲ್ಲಿ ಇಳಿಕೆಯಾಗುತ್ತದೆ. ಇದನ್ನೆ ನಾನು "ಭಾವ - ಪ್ರಾಯೋಗಿಕ ಸಿದ್ಧಾಂತ" ಎಂದು ಕರೆದಿದ್ದು ಮತ್ತು ಇದನ್ನು ಸೂಕ್ಷ್ಮವಾಗಿ ಗ್ರಹಿಸಿ, ಸಹನೆಯಿಂದ ಚರ್ಚೆ, ತರ್ಕಕ್ಕೆ ಕೂತಲ್ಲಿ ಈ ನೈಸರ್ಗಿಕ ತಾಕಲಾಟದಿಂದ ಹೊರಬಂದು ಬೇಕಾದಂತೆ ಇಬ್ಬರೂ ಬದುಕು ಕಟ್ಟಿಕೊಳ್ಳಬಹುದಾಗಿದೆ. ಆದರೆ ತೀವ್ರವಾಗಿ ಸಾಂಗತ್ಯದಲ್ಲಿ ಸಂಗಾತಿಯ ನಿರೀಕ್ಷೆಗಳು ಸೋಲುವಾಗ ಆತ ಅದನ್ನು ಕೇಳಿ ಪಡೆಯದ ದಾಕ್ಷಿಣ್ಯದ ಭಾವಕ್ಕೂ, ಅದೆಲ್ಲಾ ಆಗುವುದಿಲ್ಲ ಎನ್ನುವ ಆಕೆಯ ನಿಯಂತ್ರಿತ ಒಲವಿನ ಕಾರಣಕ್ಕೂ, ಆತ ತಾನೂ ಇದ್ದ ಗೆರೆ ದಾಟುವುದೇ ಇಲ್ಲ. ಇನ್ನು ಅದೆಂಗೆ ಇಬ್ಬರ ಮಧ್ಯದಲ್ಲಿ ಭಾವ-ಪ್ರಾಯೋಗಿಕ ಒಲವಿನ ಪರಿಭಾಷೆ ನಿರಂತರವಾಗಿ ಹರಿಯಲು ಸಾಧ್ಯ...? 
ಇನ್ನೂ ಒಂದಿದೆ, ಇಬ್ಬರಲ್ಲೂ ಕೆಲವೊಂದು ವ್ಯತಿರಿಕ್ತ ಭಿನ್ನಾಭಿಪ್ರಾಯಗಳು ಮತ್ತು ಏನು ಮಾತಾಡಿದರೆ ಅದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಬರುತ್ತದೆ ಎನ್ನುವುದು ಇಬ್ಬರ ಅರಿವಿಗೂ ಬಂದುಬಿಟ್ಟಿರುತ್ತದ್ದಾರಿಂದ ಇಬ್ಬರೂ ಆಯಾ ಭಾವನೆಗಳನ್ನು ಸುಧಾರಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಅದರಿಂದ ಆ ಗೋಡೆ ಮಾತುಗಳ ಮಧ್ಯೆ ಕಂಡೂ ಕಾಣದಂತೆ ಎದ್ದು ನಿಲ್ಲುತ್ತಲೆ ಇರುತ್ತದೆ. ಪ್ರತಿ ಸಂವಹನದಲ್ಲೂ ಇಬ್ಬರಲ್ಲೂ ಒಂದು ಅಂತರ್ಗತ ಎಚ್ಚರಿಕೆ ಅವರಿಗರಿವಾಗದೆ ಬೆರೆತು ಬಿಟ್ಟಿರುತ್ತದೆ. ಹಾಗೆ ಮಾತಿಗೆ ಮೊದಲೇ ಢಾಲು ಅಡ್ಡ ಇರಿಸಿಕೊಂಡಿದ್ದೇ ಆದರೆ ಮಾತುಗಳು ಭಾವನಾತ್ಮಕವಾಗಿ ಅವರನ್ನು ಹತ್ತಿರಕ್ಕೆ ಸರಿಸುವುದೇ ಇಲ್ಲ. ಅಲ್ಲಿಗೆ ಮಾತಿಗಿಂತ ಮೌನಕ್ಕೆ ಹೆಚ್ಚು ಸಾಂಗತ್ಯ ದೊರಕುತ್ತಾ ಏನಾದರೂ ಮಾತಾಡಿ ಕಿರಿಕ್ ಮಾಡಿಕೊಳ್ಳುವುದಕ್ಕಿಂತ ಸುಮ್ಮನಿದ್ದು ಬಿಡೋಣ ಎನ್ನಿಸತೊಡಗಿ ಇಬ್ಬರಲ್ಲೂ ಮಾತು ಕ್ರಮೇಣ ಕಡಿಮೆಯಾಗುತ್ತಾ ಎಲ್ಲಿ ತಮ್ಮ ಮಾತಿಗೆ ಬೆಲೆ ಇರುತ್ತದೋ, ಭಾವಕ್ಕೆ, ಪ್ರಾಯೋಗಿಕ ಸಂವಹನಕ್ಕೆ ಒತ್ತು ದೊರಕುತ್ತದೋ ಅಲ್ಲಷ್ಟೆ ಮಾತಿನ ರಭಸ ಹೆಚ್ಚಾಗುತ್ತಿರುತ್ತದೆ. 
ದುರಂತವೆಂದರೆ ಯಾವ ದಂಪತಿಯರಲ್ಲೂ ಇದನ್ನು ಒಡೆಯುವ ಮನೋಭಾವ ಮಾತ್ರ ಸಿದ್ಧಾಂತದಾಚೆಗೆ ಬರುತ್ತಲೇ ಇಲ್ಲ. ಇಬ್ಬರೂ ಮಾತಾಡಿ ಯಾಕೆ ಮೂಡ್ ಹಾಳುಮಾಡಿಕೊಳ್ಳೊದು ಎನ್ನುವ ನಿಲುವಿಗೆ ಬಂದು ನಿಲ್ಲುತ್ತಿದ್ದಾರೆನ್ನುವುದು ಮೌನಕ್ಕಿಂತಲೂ ದೊಡ್ಡ ಆಘಾತ. ಬದುಕಿನಲ್ಲಿ ಬೇಕಿದ್ದ ಭಾವನಾತ್ಮಕ ಸಾಂಗತ್ಯದ ಜತೆಗೆ ಪ್ರಾಯೋಗಿಕ ಒಲವೂ ಸೇರಿದಾಗ ಇಬ್ಬರ ಮಾತುಗಳಿಗೂ ಜೀವ ಬರುತ್ತದೆ. ಆದರೆ ಸಲ್ಲಬೇಕಿದ್ದ ಸಾಂಗತ್ಯದಲ್ಲಿ ಮೀಸಲಾತಿ ಶುರುವಾದಾಗ ಮಾತುಗಳೂ ಮತ್ತು ನಡತೆಗೂ ಅಂತರಗಳು ಉತ್ಪತ್ತಿಯಾಗತೊಡಗುತ್ತವೆ. ಅದರ ಫಲಿತಾಂಶವೇ ಇಬ್ಬರ ಮಧ್ಯದಲ್ಲಿ ಮಾತುಗಳಿಗೆ ಬರೀ ಶಬ್ದ ಮತ್ತು ಅಕ್ಷರಗಳ ರೂಪ ದೊರೆಯುತ್ತ ಹೊರತಾಗಿ ಅದರಲ್ಲಿ ಜೀವ ಇರುವುದೇ ಇಲ್ಲ. 
ಎಲ್ಲದಕ್ಕಿಂತಲೂ ಯಾವಾಗಲೂ ಅಗುವುದಿಲ್ಲ ಮತ್ತು ಪ್ರತಿ ಕಾರ್ಯದಲ್ಲೂ ನೆಗೆಟಿವ್ ಪ್ರೇರಿತ ಯೋಚನೆಗಳ ಚರ್ಚೆಗಿಳಿಯುವ ಸಂಗಾತಿಯಿಂದ ಅವನು ಆದಷ್ಟು ವಿಷಯಾಂತರ ಮಾಡಲು ಆರಂಭಿಸಿಬಿಡುತ್ತಾನೆ. ಯಾವಾಗ ಚರ್ಯೆಯ ಹಿಂದಿನ ಮನಸ್ಥಿತಿ ತನಗೆ ಹೊಂದಾಣಿಕೆ ಆಗುತ್ತಿಲ್ಲ ಎನ್ನಿಸುತ್ತದೋ ಅಲ್ಲಿಗೆ ಅವನ ಮಾತುಗಳೂ ಕಡಿಮೆಯಾಗತೊಡಗುತ್ತವೆ. ಆದರೆ ಹಾಗೆ ಆಗುತ್ತಿರುವ ಬದಲಾವಣೆಯನ್ನು ಬದಲಿಸಬೇಕಾದ ಆಕೆ ಅದಕ್ಕೆ ಮತ್ತಿಷ್ಟು ನೀರು ಹೊಯ್ಯುವ ಮೂಲಕ ಆರಿಸಿಬಿಡುತ್ತಾಳೆ. 
ಅಲ್ಲಿಗೆ ಎಲ್ಲವೂ 
ಶಾಂತಿ.. ಶಾಂತಿ.. ಶಾಂತಿ..