Wednesday, August 28, 2013

ವಿಫಲವಾಗುವ ಪ್ರೇಮ ಸಾವಿಗಿ೦ತಲೂ ಭೀಕರವಾ .. ?


" ಅವಳನ್ನ ಒಮ್ಮೆ ನಾನು ನೋಡಿಬಿಟ್ಟರೆ ಸಾಕು ಕಣೋ... ಮತ್ತೆ ಬೇರೇನೂ ಬೇಕಿಲ್ಲ ನಂಗೆ..." ಹಳಿಯಾಳದ ಬಸ್ ಸ್ಟ್ಯಾಂಡಿನಿಂದ ಬೆಂಗಳೂರಿಗೆ ಕೆಲಸಕ್ಕೆ ಸೇರಲು ಹೊರಟವನ ಮನದಲ್ಲಿದ್ದುದು ನೌಕರಿಯ ಚಿಂತೆಯಾಗಿರಲಿಲ್ಲ. ಹೇಗಾದರೂ ಒಮ್ಮೆ ಅವಳನ್ನು ನೋಡಬೇಕು ಅನ್ನೋದು. ಅದು ೯೦ ರ ಜುಲೈ ೧೦. ವಿಚಿತ್ರವೆಂದರೆ ಹಾಗೆ ಹೊರಟವನ ಬಳಿಯಲ್ಲಿ ಆಕೆಯ ಅಡ್ರೆಸ್ಸು ಹೋಗಲಿ ಕನಿಷ್ಟ ಬೆಂಗಳೂರಿನ ಯಾವ ದಿಕ್ಕಿಗೆ ಆಕೆ ಗೂಡು ಮಾಡಿಕೊಂಡಿದ್ದಾಳೆ ಎನ್ನುವ ಮಾಹಿತಿಯೂ ಇರಲಿಲ್ಲ. ಆಕೆಯ ಮದುವೆ ಬೆಂಗಳೂರಿನ ಹುಡುಗನೊಂದಿಗೆ ಆಗಿದೆ. ಅಷ್ಟನ್ನೆ ನಂಬಿಕೊಂಡು ಯಲ್ಲಾಪುರ ತಾಶಿಲ್ದಾರರ ಮಗ ಹೊರಟು ನಿಂತಿದ್ದ. ಅಸಲಿಗೆ ಅವರಿಬ್ಬರ ಪ್ರೇಮವನ್ನು ನಾನು ತೀರ ಇತ್ತಿಚೆಗೇನೂ ನೋಡುತ್ತಿರಲಿಲ್ಲ. ಬಹುಶ: ೮೬ರ ಆರ೦ಭದಲ್ಲಿ ಒಮ್ಮೆ ಇದೇ ಬಸ್‌ಸ್ಟ್ಯಾಂಡಿನಲ್ಲಿ ಆಕೆಯನ್ನು ತೋರಿಸಿದ್ದ ನೆನಪು. ಅದೂ ಕೂಡಾ ಮಧ್ಯಾನ್ಹದ ಮೂರೂವರೆಗೆ ಹೊರಡುತ್ತಿದ್ದ ಬೆಳಗಾಂ-ಶಿರಶಿ ಬಸ್ಸಿನಲ್ಲಿ ಕಿಟಕಿ ಪಕ್ಕ ಕುಳಿತವಳ ಆಕಸ್ಮಿಕ ದರ್ಶನಕ್ಕೆ ಅವನು ಬೆರಗಾಗಿ ಬಿಟ್ಟಿದ್ದ. ಅಷ್ಟಕ್ಕೂ ಅನಾಮತ್ತು ಎರಡು ಕೀ.ಮಿ.ದೂರದ ಎ.ಪಿ.ಎಂ.ಸಿ. ಯಾರ್ಡಿನಲ್ಲಿದ್ದ ನಮ್ಮ ಕಾಲೇಜಿನಿಂದ ಮಧ್ಯಾನ್ಹದ ಬಿರು ಬಿಸಿಲಿನಲ್ಲೂ ಬಂದು ಆಗಷ್ಟೆ ಉಳಿದ ಕಾಲೇಜಿನಿಂದ ಬರುತ್ತಿದ್ದ ಹುಡುಗಿಯರನ್ನ ನೋಡಿ ಹೋಗುತ್ತಿದ್ದ ಶುದ್ಧ ಪಡ್ಡೆಗಳ ಗುಂಪು ನಮ್ಮದು. ಆ ಹೊತ್ತಿನಲ್ಲಿ ನಮ್ಮ ಈ ಹೀರೊಗೆ ತನ್ನ ಹುಡುಗಿ ಕಂಡು ಬಿಟ್ಟಿದಾಳೆ. ಎಲ್ಲರಿಗೂ ತೋರಿಸಿದ. " ಎ ನೋಡ್ರೋ... ಅವಳೆ...ದೀಪಾ " ಎಂದ. 
      ನಮಗೆಲ್ಲಾ ಅವನಿಗೊಬ್ಬ ಗರ್ಲ್‌ಫ್ರೆಂಡ್ ಇರುವ ವಿಚಾರ ಗೊತ್ತಿತ್ತಾದರೂ ನಾವು ಅದರ ವಿಷಯದಲ್ಲಿ ಗಂಭೀರವಾಗಿರಲಿಲ್ಲ. ಈಗ ನೋಡಿದರೆ ಆಕೆ ಜೊತೆಯಲ್ಲೇ ಯಲ್ಲಾಪುರಕ್ಕೆ ಹೊರಟು ಬಿಟ್ಟಿದಾನೆ. ಅಸಲಿಗೆ ಅವನು ಹೋಗಬೇಕಾಗಿದ್ದುದು ಸಾಯಂಕಾಲದ ಕಡೆಯ ಐದೂವರೆ ಬಸ್ಸಿಗೆ. ಆಕೆ ಕಂಡಿದ್ದೆ ಕೈಲಿದ್ದ ಸಣ್ಣ ನೋಟಬುಕ್ಕನ್ನು ನಮ್ಮೆಡೆಗೆ ಎಸೆದು ಕಾಲೇಜಿನಲ್ಲಿದ್ದ ಉಳಿದವಕ್ಕೆ ವ್ಯವಸ್ಥೆ ಮಾಡಿರೋ ಎಂದೆನ್ನುತ್ತಲೇ ಢರ್ರಗುಟ್ಟಿದ ಬಸ್ಸನ್ನೇರಿದ್ದ. ಅಲ್ಲಿಗೆ ಸುದೀಪ ಎಂಬ ನಮ್ಮ ಸುಂದರಾಂಗ ಸ್ನೇಹಿತನ ಪ್ರೇಮ ಪ್ರಕರಣಕ್ಕೆ ನಾವೆಲ್ಲ ಸೀರಿಯಸ್ಸಾಗಿದ್ದೆವು. ಒಂದು ವರ್ಷ ಕಳೆಯುವಷ್ಟರಲ್ಲಿ ಆ ಪ್ರಕರಣ ಹಾಗೇ ಮುಂದುವರಿದದ್ದು ಕೊನೆಗೊಮ್ಮೆ ಅಂತಿಮ ತಿರುವಿನಲ್ಲಿ ಆಕೆ ಬೇರೆಯವನನ್ನು ಮದುವೆಯಾದಾಗ ನಮ್ಮ ಅಂತಿಮ ವರ್ಷದ ಪರೀಕ್ಷೆಗೆ ಕೇವಲ ಮೂರು ದಿನವಿದ್ದವು. 
     ಹುಡುಗಿ ಕೈತಪ್ಪಿ ಹೋದದ್ದಕ್ಕೂ ಅದನ್ನು ತಡೆಯಲು ಏನೂ ಮಾಡಲೂ ಆಗದ ಅವನ ಅಸಹಾಯಕತನಕ್ಕೂ... ಅದಕ್ಕೂ ಮಿಗಿಲಾಗಿ ಬೇರೇನೂ ಮಾಡಲೇ ಸಾಧ್ಯವಿಲ್ಲದ ನಮ್ಮ ಅಬ್ಬೇಪಾರಿಗಳ ಗೆಳೆತನಕ್ಕೂ ಒಂದು ರೀತಿಯಲ್ಲಿ ಗ್ರಹಣ ಹಿಡಿದಂತಾಗಿ ಬಿಟ್ಟಿತ್ತು. ಆದರೂ ಆಗ ನಮಗಾರಿಗೂ ಅಷ್ಟಾಗಿ ಅದು ಬಾಧಿಸಿರಲಿಲ್ಲವಾದರೂ ನಾನು ಮತ್ತು ಇನ್ನೊಬ್ಬ ಸ್ನೇಹಿತ ರವಿ ವೋಲೆಕರ್ (ಮುಂದೆ ಈತ ಒಂದೂವರೆ ಮರ್ಡರು ಮಾಡಿ, ದಕ್ಕಿಸಿಕೊಂಡು ಬಿಡುಗಡೆಯೂ ಆಗಿ ನೌಕರಿಯನ್ನೂ ಗಿಟ್ಟಿಸಿಕೊಂಡ. ಅದಿನ್ಯಾವತ್ತಾದರೂ ಬರೆದೇನು) ಮಾತ್ರ ಕೊಂಚ ಸುದೀಪನ ಬಗ್ಗೆ ಆಂದೋಳನೆಗೊಂಡದ್ಡು ನಿಜ. ಆ ಕ್ಷಣಕ್ಕೆ ಬೇರೇನೂ ತೋಚಿಲ್ಲವಾದರೂ ಅವನನ್ನು ಹೇಗಾದರೂ ಪಾಸು ಮಾಡಿಸುವ ಸರ್ವಾನುಮತದ ನಿರ್ಣಯ ತೆಗೆದುಕೊಂಡಿತು ಮಿತ್ರ ಪಡೆ. 
    ಅವನೋ ದಿನಕ್ಕೆ ಸಿಗರೇಟು ಸೇದಿ ಹೊಗೆ ಬಿಡುತ್ತಾ ಅಪ್ಪಟ ವಿರಹದ ಅಪರಾವತಾರವೇ ಆಗಿಬಿಟ್ಟಿದ್ದ. ಕೊನೆಗೆ ಅಂತೂ ಇಂತೂ ಎಕ್ಸಾಂನಲ್ಲಿ ಮುಂದೆ ಮತ್ತು ಹಿಂದೆ ಇದ್ದ ನಾನು ಇನ್ನೊಬ್ಬ ಅವನನ್ನು ಹೇಗ್ಹೆಗೋ ಮಾಡಿ ನಮ್ಮೊಂದಿಗೆ ಪಾಸು ಮಾಡಿಸಿಕೊಳ್ಳುವಲ್ಲಿ ಸಫಲನಾಗಿದ್ದೆ. ಇದಾದ ಮೇಲೆ ಕೊಂಚ ಗೆಲುವಾಗಿದ್ದವನು ಇದ್ದಕ್ಕಿದ್ದಂತೆ ಒಂದಿನ ನಾನಿದ್ದ ಊರಾದ ತೇರಗಾಂವಕ್ಕೆ ಬಂದವನೇ " ಸಂತೋಷಾ... ಎಲ್ಲಡಿಯೋ.. ನಾ ಬೆಂಗಳೂರಿಗ ಹೋಗ್ತಿದಿನಿ. ಅಪ್ರೇಂಟಿಸ್ ಸಿಕ್ಕೆದ " ಎಂದವನ ಕಣ್ಣಿನಲ್ಲಿ ಮತ್ತೆ ದೀಪದ ಬೆಳಕು. ಬೆಂಗಳೂರಿಗೆ ಹೋದವನ ಉದ್ದೇಶ ನೌಕರಿಯಲ್ಲವೇ ಅಲ್ಲ ಅನ್ನೋದು ಹೊರಟಾಗಲೇ ತಿಳಿದಿತ್ತಾದರೂ ಕೂಡಾ ಕ್ರಮೇಣ ಜೀವನದ ಬಗ್ಗೆ... ಬದುಕಿನ ಆಟದಲ್ಲಿ ಕೊಂಚ ಬೆಂಗಳೂರಿನ ಹವೆಗೆ ಗಂಭೀರವಾಗಿ ಒಗ್ಗಿಕೊಂಡ. 
    ಈ ಮಧ್ಯೆ ನಾನೂ ಕೂಡಾ ಸಣ್ಣದಾದ ನೌಕರಿ ಹಿಡಿದು ಬೆಂಗಳೂರು ಸೇರಿಕೊಂಡೆ. ೯೦ ರಲ್ಲಿ ಬೆಂಗಳೂರೆಂಬ ಮಾಯಾನಗರಿಗೆ ೩೫೦ ರೂಪಾಯಿ ಸಂಬಳ ನಂಬಿಕೊಂಡು ಹೋದವನನ್ನು ಈ ಬಾರಿ ಸ್ವಾಗತಿಸಿದ್ದು ಸುದೀಪನ ಭವ್ಯ ನಿಲವು... ಅಜಾನುಬಾಹುವಾಗಿ ಬೆಳೆದಿದ್ದ ಆಕೃತಿ. ಹಳೆಯ ಸ್ನೇಹಿತರಿಬ್ಬರೂ ಒಂದಾಗುತ್ತಿದ್ದಂತೆ ಎರಡನೆಯ ದಿನ ಸಂಜೆಯೇ ಪುನ: ದೀಪ ಪ್ರಸ್ತಾಪವಾಗಿದ್ದಳು. " ಒಂದು ವರ್ಷ ಪೂರ್ತಿ ಕಣ್ಣು ಹರಿದೆಡೆಯಲ್ಲೆಲ್ಲಾ ಹುಡುಕಿದೆ ಆಕೆ ಕಾಣಲೆ ಇಲ್ಲ ಕಣೋ " ಎಂದವನ ಧ್ವನಿಯಲ್ಲಿ ಸೋತ ನಿರಾಶೆ ಸಣ್ಣದಾಗಿ ಮಡುಗಟ್ಟಿತ್ತು. " ಏ ಇನ್ನ ಆಕಿನ್ನ ಮರತಿಲ್ಲೇನು..? " ಎಂದರೆ " ಇಲ್ಲ. ಈಗ ನೀ ಬಂದಿದಿಯಲ್ಲ. ಇಬ್ಬರೂ ಕೂಡಾ ಆಕಿನ್ನ ಹುಡುಕೋಣ... ಸಿಕ್ಕೇ ಸಿಗ್ತಾಳೆ..." ಎಂದು ನನ್ನನ್ನು ಸುತ್ತಿನೊಳಕ್ಕೆ ಎಳೆದುಕೊಳ್ಳತೊಡಗಿದ್ದ. ಆ ಬಿ.ಟಿ.ಎಸ್ಸು... ಹಗಲು ರಾತ್ರಿಯ ಪಾಳಿಗಳು... ಆ ಮಧ್ಯೆ ಆಗೀಗ ಜರಗುತ್ತಿದ್ದ ನಮ್ಮ ಪಾನಕಗೋಷ್ಠಿ... ಎಲ್ಲದರ ಮಧ್ಯೆಯೂ ಆಕೆಯನ್ನು ಹುಡುಕುವ ಅವನ ಉತ್ಸಾಹ ಮಾತ್ರ ನನ್ನನ್ನು ಇವತ್ತಿಗೂ ಅಚ್ಚರಿಗೆ ತಳ್ಳುತ್ತದೆ. 
   ಪ್ರೇಮವೆನ್ನುವುದು ಅಷ್ಟೊಂದು ಗಾಢವಾ ಎಂದು. ಮತ್ತೆ ಎರಡು ವರ್ಷಗಳು ಕಳೆದವು. ೯೨ರ ಜುಲೈ ೧೦. ಶುಕ್ರವಾರವಿರಬೇಕು. ಇಬ್ಬರೂ ಮೆಜೆಸ್ಟಿಕ್ಕಿನಲ್ಲಿ ಸುತ್ತಾಡಿ ಹೊರಟವರು ಮಲ್ಲೇಶ್ವರದಲ್ಲಿ ಇಳಿದೆವು. ಮಳೆ ಹನಿಯತೊಡಗಿತ್ತು. ಇದ್ದಕ್ಕಿದ್ದಂತೆ ಗಲಾಟೆ ಆರಂಭವಾಗಿತ್ತು. ನನಗೋ ಬೆ೦ಗಳೂರು ಹೊಸದು. ಏನೆಂದರೆ ಏನೂ ಗೊತ್ತಿರಲಿಲ್ಲ. ಪಕ್ಕದಲ್ಲಿದ್ದವ "ಬೆಂಗಳೂರು ಗಲಾಟೆ ಇದು. ಬಾ " ಎನ್ನುತ್ತಾ ಎದುರಿಗೆ ಸಿಕ್ಕಿದ್ದ ಬಸ್ಸನ್ನೇರಿದ. ಮಲ್ಲೇಶ್ವರ ಸರ್ಕಲ್ ದಾಟಿ ಒಂಭತ್ತನೆಯ ಕ್ರಾಸ್ ದಾಟುವ ಮುಂಚೆ ಕಿರುಚಿಕೊಂಡ. " ಸಂತೋಷಾ ಹಾರಲೇ.. ಜಿಗಿ ಜಿಗಿ..... ಜಂಪ್..." ಎನ್ನುತ್ತ ಹಾರಿಬಿಟ್ಟ. ನಿಧಾನಕ್ಕೆ ಸಾಗುತ್ತಿದ್ದ ಬಸ್ಸಿನಿಂದ ನಾನೂ ಕೆಳಕ್ಕೆ ನೆಗೆದೆ. ಯಾಕೆ ಏನು ಎಂದು ಕೇಳುವ ಸಮಯವಲ್ಲ. ಬಹುಶ ಗಲಾಟೆಯದ್ದೇ ಕಾರಣವಿರಬೇಕು ಎಂದುಕೊಂಡೆ. ಆದರೆ ಅಸಲಿಗೆ ವಿಚಾರವೇ ಬೇರೆ ಇತ್ತು. ಏದುಸಿರಿಡುತ್ತಾ ಉದ್ವೇಗದಲ್ಲಿ ಕಣ್ಣರಳಿಸುತ್ತಾ ನುಡಿದಿದ್ದ. " ನಾನು ದೀಪಾಳನ್ನ ನೋಡಿದೆ.." ಹಾಂ ಎಂದಷ್ಟೆ ಎಂದೆ. ಆಕೆ ಸಿಕ್ಕಿದಳಲ್ಲ ಎನ್ನುವುದಕ್ಕಿಂತಲೂ ಆ ಗಲಾಟೆ... ಹನಿಯುತ್ತಿರುವ ಮಳೆ... ಚಲಿಸುತ್ತಿರುವ ಬಸ್ಸಿನಿಂದಲೂ ಇಣುಕಿ ಆಕೆಯನ್ನು ಹುಡುಕಿದ್ದು ಇವತ್ತಿಗೂ ನನ್ನ ಅಚ್ಚರಿಗಳಲ್ಲೊಂದು. ಅವನು ಮುಂದೆ ಮಾತಿಗೆ ಅವಕಾಶ ಕೊಡದೆ ನನ್ನ ಕೈ ಹಿಡಿದು ಹತ್ತನೆ ಕ್ರಾಸಿನತ್ತ ಹೆಜ್ಜೆ ಸರಿದವನ ಮುಖದಲ್ಲಿ ಎಂದಿಲ್ಲದ ಪ್ರಕಾಶ. ಇನ್ನೇನು ಸ್ವರ್ಗ ತನ್ನೆದುರಿಗೆ ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವ ಸಂಭ್ರಮ. ಆ ಓಟ.. ಗಲಾಟೆ... ಚದುರುತ್ತಿರುವ ಜನಗಳು.. ಪೋಲಿಸ್ ಹಾರ್ನ್.. ಅದ್ಯಾವುದೂ ಅವನ ಲಕ್ಷಕ್ಕಿಲ್ಲ. ಅವನ ಗಮ್ಯ ಅದಾವುದೋ ಆಕೃತಿಯನ್ನು ಬೆನ್ನಟ್ಟುವುದೇ ಆಗಿತ್ತು. 
       ಐದೇ ನಿಮಿಷದಲ್ಲಿ ಆಕೆಯನ್ನು ಸಮೀಪಸಿ ಎದುರಿಗೆ ಹೋದವನು " ದೀಪಾ ನಾನು... ಸುದೀಪ..." ಎಂದು ಧುತ್ತನೇ ಪ್ರತ್ಯಕ್ಷನಾದ. ಆಕೆ ಇದನ್ನು ಅಂದಾಜು ಹೋಗಲಿ ಕನಸಲ್ಲೂ ನೆನೆಸಿರಲಿಲ್ಲವೇನೋ...? ಅಥವಾ ಮಾಮೂಲಿನ ಪ್ರೇಮವಿರಬೇಕು ಎಂದು ಇವನನ್ನು ಮರೆತೇ ಬಿಟ್ಟಿದ್ದಳೊ...? ಒಟ್ಟಾರೆ " ಸುದೀ.. ನಾನು ಈಗ ಮದುವೆಯಾಗಿದ್ದೇನೆ.. ನೀನು ಇದನ್ನೆಲ್ಲ ಮರೆತಿಲ್ಲವಾ... ನೀವೆಲ್ಲ ಗಂಡಸರೇ ಹೀಗೆ " ಇತ್ಯಾದಿ... ಇತ್ಯಾದಿ ನುಡಿದು ರಪ್ಪನೆ ಮುಖಕ್ಕೆ ರಾಚಿ ಹೋರಟು ಹೋದಳು. ಆಕೆಯತ್ತಲೇ ನೋಡುತ್ತಿದ್ದ ನಾನು ದೊಪ್ಪನೆ ಬಿದ್ದ ಶಬ್ದ ಕೇಳಿ... ಇತ್ತ ತಿರುಗಿದೆ. ಬಹುಶ: ಇದನ್ನು ನಿರೀಕ್ಷಿಸದ ಸುದೀಗೆ ಆ ಇಪ್ಪತ್ತೇಳರ ಹರೆಯದಲ್ಲೇ ಸಣ್ಣದಾಗಿ ಹೃದಯಾಘಾತವಾಗಿತ್ತು. ಹೆಗ್ಹೇಗೋ ಗೊತ್ತಿಲ್ಲದ ಬೆ೦ಗಳೂರಿನಲ್ಲಿ ಅವನನ್ನು ಎತ್ತಿಕೊಂಡು ಯಾವ್ಯಾವುದೋ ವಾಹನ ಕಾಡಿ ಬೇಡಿ ಜಾಲಹಳ್ಳಿ ಸೇರಿಕೊಂಡಾಗ ರಾತ್ರಿ ಹನ್ನೊಂದು ಗಂಟೆ. 
        ಯಥಾ ಪ್ರಕಾರ... ಔಷಧಿ ಚೇತರಿಸಿಕೊಳ್ಳುವಿಕೆ ನಡೆಯಿತಾದರೂ ಆ ಘಟನೆಯಿಂದ ಸುದೀಪ ಹೊರಗೆ ಬರಲೆ ಇಲ್ಲವೇನೊ ಅನ್ನಿಸುತ್ತದೆ. ಮತ್ತೆ ಸರಿ ಸುಮಾರು ಐದು ವರ್ಷಗಳು ಕಳೆದವು. ನಾನು ಕಾರವಾರಕ್ಕೆ ಮರಳಿ ಬಂದು ಸರಕಾರಿ ನೌಕರಿ ಸೇರಿಕೊಂಡಿದ್ದೆ. ವ್ಯವಸ್ಥಿತವಾಗಿ ಗೂಡು ನಿರ್ಮಿಸಿಕೊಳ್ಳುವ ತವಕದಲ್ಲಿ ಅವನೊಂದಿಗಿದ್ದ ಇತರ ಮಿತ್ರರೂ ಹಗಲಿರುಳು ಕನವರಿಸುತ್ತಿದ್ದರೆ ಅವನು ಮಾತ್ರ ವರ್ಷದಿಂದ ವರ್ಷಕ್ಕೆ ಸಣ್ಣಗಾಗುತ್ತಾ... ಹತ್ತು ಹಲವು ಕಡೆಯಲ್ಲಿ ನೌಕರಿ ಬದಲಿಸುತ್ತಾ ಬದುಕಿದ್ದ. ಎಷ್ಟು ಹೇಳಿದರೂ ಹೇಳಿದಷ್ಟು ಹೊತ್ತು ಆಕೆಯನ್ನು ಮರೆತಂತೆ ಇರುತ್ತಿದ್ದನಾದರೂ ಏಕಾಂತ ಅವನನ್ನು ಬಹುಶ: ಕೊಂದು ಹಾಕುತ್ತಿತ್ತು. ಕಾರಣ ಮಧ್ಯದಲ್ಲಿ ಒಂದಷ್ಟು ತಿಂಗಳು ತುಮಕೂರಿನಲ್ಲಿ ಕೆಲಸ ಮಾಡಿ ಬಂದ. ಅನೀಲ ಕಪೂರನನ್ನು ಹೋಲುತ್ತಿದ್ದವ ವರ್ಷ ಕಳೆಯುವಷ್ಟರಲ್ಲಿ ಶಕ್ತಿ ಕಪೂರನಂತಾಗಿ ಬಿಟ್ಟಿದ್ದ. ೯೭ರ ಅದೇ ಜುಲೈ ತಿಂಗಳ ೧೦. ಗುರುವಾರ. ಅಲ್ಲಿಯವರೆಗೆ ಇದೆಲ್ಲ ಘಟಿಸಿ ಸುಮಾರು ವರ್ಷಗಳೇ ಕಳೆದಿದ್ದರಿಂದ ಯಾರಿಗೂ ಏನಾಗುತ್ತದೆ ಎನ್ನುವ ಅಂದಾಜು ಹೋಗಲಿ ಸಣ್ಣ ಯೋಚನೆಯೂ ಇದ್ದಿರಲಾರದು. 
         ಬೆಳಿಗ್ಗೆ ಮಿತ್ರರೊಂದಿಗೆ ಸೇರಿಕೊಂಡು ಮೊದಲಿನಿಂದ ಬಂದಿದ್ದ ಅಭ್ಯಾಸದಂತೆ " ಮುತ್ತತ್ತಿ " ಫಾಲ್ಸ್‌ಗೆ ಹೊರಟು ನಿಂತಿತ್ತು ಮಿತ್ರ ತಂಡ. ಆದಾಗಲೇ ಮದುವೆಯಾದವರು ಕುಟುಂಬದೊಂದಿಗೆ.. ಮಕ್ಕಳು ಸ್ನೇಹಿತರೂ ಎಲ್ಲಾ ಸೇರಿ ಸುಮಾರು ನಾಲ್ವತ್ತು ಜನ. ಮುತ್ತತ್ತಿ ತಲುಪಿ ಇನ್ನೇನು ಇಳಿಯ ಬೇಕೆನ್ನುವಾಗ... ಇದ್ದಕ್ಕಿದ್ದಂತೆ " ಸಂತೋಷಾ ಆಕಿ diipa ನಮಗ ಸಿಕ್ಕಿ ಇವತ್ತೀಗ ಎಷ್ಟ ವರ್ಷಾತು..? " ಎಂದು ಕೇಳಿದವನು..." ಬಹುಶ: ಐದು ವರ್ಷಾ. ದೀಪಾಗ ನೆನಪಿರುತ್ತಾ...? " ಎಂದು ಬಿಟ್ಟ. ಏಳ ಹೊರಟಿದ್ದವನು ಅವನ ಪಕ್ಕ ಕುಳಿತು ಮುಖ ನೋಡಿದೆ. ದೊಡ್ಡ ದುಂಡು ಕಣ್ಣಿನ ಹಿಂದೆ ಸಣ್ಣನೆಯ ನೀರಿನ ಪೊರೆ. ಸಮಾಧಾನ ಎನ್ನುವಂತೆ ಹೆಗಲು ತಟ್ಟಿ ಕೆಳಗಿಳಿಸಿಕೊಂಡು ಬಂದೆ. ನಂತರದ್ದು ಇತಿಹಾಸ. ಮಧ್ಯಾನ್ಹದವರೆಗೂ ಅಲ್ಲಲ್ಲಿ ನಮ್ಮೊಂದಿಗೆ ಇದ್ದವನು ಊಟದ ಹೊತ್ತಿಗೆ ಕಾಣೆಯಾಗಿ ಬಿಟ್ಟ.
 ಆ ದಿನ ಮಾತ್ರ ನಮ್ಮೊಂದಿಗೆ ಪಾನಕ ಗೋಷ್ಟಿಗೆ ಸೇರದೆ ಇವತ್ತು ಬೇಡ ನೀವು ತಗೊಳ್ಳಿ ಎಂದು ಬಲವಂತದಿಂದ ತನ್ನದು ಎನ್ನುತ್ತ ನನ್ನ ಗ್ಲಾಸಿಗೆ ಎರಡು ಗುಕ್ಕು ಹೆಚ್ಚಿಗೆ ಸುರಿದಿದ್ದ. ಊಟಕ್ಕೆ ಮುಂಚೆ ಹುಡುಕಿದರೆ ಸುದೀಪ ಎಲ್ಲೂ ಇಲ್ಲ. ಊಟ ಅರ್ಧಕ್ಕೆ ನಿಂತು ಹೋಯಿತು. ನಾಲ್ವತ್ತು ಜನ ಇನ್ನಿಲ್ಲದಂತೆ ಶೋಧಿಸಿ ಬಿಟ್ಟರು. ಏನೂ ಅಗಲಿಲ್ಲ. ಸುದೀಪ ಸಿಕ್ಕಾಗ ಸಂಜೆಯ ಆರು ಗಂಟೆ. ಅತ್ಯುತ್ತಮ ಈಜು ಪಟುವಾಗಿದ್ದವ ಕೇವಲ ಮೊಳಕಾಲು ಉದ್ದದ ನೀರಿನಲ್ಲಿ ಅಂಗಾತ ಮಲಗಿ ಹಾಗೆ ಪ್ರಾಣ ಬಿಟ್ಟು ಬಿಟ್ಟಿದ್ದ. ಅವನನ್ನು ಹುಡುಕಲು ನೀರಿಗಿಳಿದವರು ಅದೆಷ್ಟು ಬಾರಿ ಅವನ ದೇಹದ ಮೇಲೆ ಓಡಾಡಿದ್ದರೋ ದೇವರಿಗೆ ಗೊತ್ತು. ಸುಂದರಾಂಗ ಅಂಗಾತ ಮಲಗಿದವನ ಕೈಯ್ಯಲ್ಲಿ ಬರೆದುಕೊಂಡಿದ್ದು ಕೇವಲ " ದೀಪ ". ಆದರೆ ಆವತ್ತಿನದು ಆತ್ಮಹತ್ಯೆಯಾ...? ಆಕಸ್ಮಿಕವಾ...? ನೋಡಿದವರು ಒಬ್ಬರೂ ಇಲ್ಲ. ಅಸಲಿಗೆ ಅವನಲ್ಲಿ ಅದೆಷ್ಟು ದೊಡ್ಡ ಮಟ್ಟದ ಹೋಪ್ ಇತ್ತೆಂದರೆ ಖಂಡಿತಾ ಆಕೆ ತನ್ನನ್ನು ನೋಡುತ್ತಲೇ ಕಣ್ಣರಳಿಸಿ ಇನ್ನಿಲ್ಲದ ಸಂಭ್ರಮ ಪಡುತ್ತಾಳೆ ಎಂದುಕೊಂಡಿದ್ದ.
 ಆಕೆ ಒಮ್ಮೆ ಅವನಲ್ಲಿ ಮೊದಲಿನ ಸ್ನೇಹ ಸಹಜತೆಯಿಂದ ಮಾತಾಡಿ " ನೀನು ಚೆನ್ನಾಗಿರು ... ನಿನಗೆ ನಾನು ಮೋಸ ಮಾಡಿಲ್ಲ. ಪರಿಸ್ಥಿತಿಯಿಂದಾಗಿ ನಿನ್ನ ಮದುವೆಯಾಗಲಾಗಲಿಲ್ಲ..." ಇತ್ಯಾದಿಯ ಕೇವಲ ಒಂದು ಸಾಂತ್ವನ ಆಕೆಯಿಂದ ಅವನು ನಿರೀಕ್ಷಿಸಿದ್ದ. ಅಸಲಿಗೆ ಅವನು ಮೊದಲಿಗೆ ನಮ್ಮಲ್ಲಿ ಹೀಗೇ ಹೇಳಿಕೊಂಡಿದ್ದನಾದರೂ ಅದು ಎಲ್ಲಾ ಪ್ರೇಮಿಗಳು ಹೇಳುವ ಮಾತೇ ಅಂದುಕೊಂಡಿದ್ದೆವಾದರೂ, ಕೊನೆಯಲ್ಲಿ ಅವನಲ್ಲಿದ್ದ ಸಣ್ಣ ನೋಟ್ ಬುಕ್ಕಿನಲ್ಲಿ ಬೆಂಗಳೂರಿಗೆ ಹೊರಡುವ ದಿನ ಬರೆದುಕೊಂಡಿದ್ದ ವಾಕ್ಯ ನೋಡುವವರೆಗೂ ಯಾರಿಗೂ ಅವನ ಪ್ರೇಮದ ಗಾಢತನ ಅರಿವಾಗಿರಲೇ ಇಲ್ಲ. ಅಲ್ಲಿದ್ದುದು ಇಷ್ಟೆ " ದೀಪಾ ನನ್ನ ಒಮ್ಮೆ ಪ್ರೇಮದಿಂದ ನೋಡಿಬಿಡು. ನಾನು ನಿನ್ನ ನೆನಪಿನಲ್ಲೇ ಒಂದು ಬದುಕು ಕಂಡುಕೊಳ್ಳುತ್ತೇನೆ. ಇನ್ನೇನು ಬೇಡ. ಆದರೆ ಯಾವುದೇ ಕಾರಣಕ್ಕೂ ನನ್ನ ಪ್ರೀತಿಯ ನಂಬಿಕೆ ಕುಸಿಯದಿರಲಿ ಅಷ್ಟೆ " ದಿನಾ೦ಕ ೧೦. ಜುಲೈ ೯೦. ವಿಪರ್ಯಾಸವೆಂದರೆ ಅವನ ಬದುಕಿನಲ್ಲಿ ಘಟಿಸಿದ ಎಲ್ಲಾ ತಿರುವುಗಳಿಗೂ ಅಕ್ಷರಶ: ಮೂಕ ಸಾಕ್ಷಿ ಆ ತಾರೀಕು. ಇದಕ್ಕಿಂತಾ ಬೇರೆ ಪ್ರೇಮ ಕಥೆ ನಮಗೆ ಸಿಕ್ಕೀತೆ...? ಅಸಲಿಗೆ ಆಕೆ ತಿರಸ್ಕರಿಸಿದ ಮೇಲೆ ಅವನೆಂದೂ ಆಕೆಯನ್ನು ಮತ್ತೆ ಕಾಣುವ ತವಕವನ್ನೇ ಮಾಡಲಿಲ್ಲವಾದರೂ ಅವನಲ್ಲಿ ಆಕೆಯೆಡೆಗಿದ್ದ ಕನ್ಸರ್ನ್... ಆ ಪ್ರೇಮ ಇವತ್ತಿಗೂ ನನ್ನನ್ನು ಇನ್ನಿಲ್ಲದಂತೆ ಹಿಂಡುತ್ತದೆ. ಕೀ ಬೋರ್ಡ್ ಬಿಡುವ ಮುನ್ನ ಹೃದಯ ದ್ರವಿಸಿ ಬಿಟ್ಟಿತ್ತು. - ( ಕಳೆದ ತಿಂಗಳು ಇನ್ನಿಲ್ಲದೆ ಕಾಡಿದ ನೆನಪಿನ ಆವರಣ ಇದು.. ಆಗಲೇ ನನ್ನ ವಿಸ್ಮಯ ನಗರಿ ಬ್ಲಾಗ್ ನಲ್ಲಿ ಇದೆ.. ಮತ್ತೆ ಇಲ್ಲೊಮ್ಮೆ ಕಾಪಿ ಮಾಡಿದ್ದೇನೆ )

Wednesday, August 21, 2013

ಮನಸ್ಸು ಯಾಕೆ ಚೇಂಜ್ ಕೇಳುತ್ತೆ... ?

ಮನಸ್ಸು ಬಯಸೋದನ್ನು ಹೀಗೇ ಅಂತಾ ಪ್ರಿಡಿಕ್ಟ್ ಮಾಡಿರೋರು ತುಂಬಾ ಕಡಿಮೆ. ಯಾಕೆಂದರೆ ಪ್ರಕೃತಿಯಂತೆ ಮನುಶ್ಯನೂ ಬದಲಾವಣೆ ಬಯಸುತ್ತಾನಾ...? ಹೌದೆಂದು ಬಿಡುತ್ತದೆ ಕೂಡಲೇ ಕಳ್ಳ ಮನಸ್ಸು. ಹಾಗಾದರೆ ಯಾವುದೆಲ್ಲಾ ಬದಲಾವಣೆ ಮಾಡ್ತೀರಿ...? ಯಾಕೆಂದರೆ ಬಹಳಷ್ಟು ವಿಷಯದಲ್ಲಿ ಸಾಮಾನ್ಯವಾಗಿ ಬದಲಾವಣೆ ಬಯಸಿ ನಮ್ಮ ಕೈಲಾದ ಮಟ್ಟಿಗೆ ಬದುಕಿನಲ್ಲಿ ಅನುಭವವನ್ನು ಪಡೆಯುತ್ತಲೇ ಇರುತ್ತೇವೆ. ಹೊಸ ಮೊಬೈಲ್ ಬಂತು ಹಳೆಯದನ್ನು ಬಿಸಾಡಿದಿರಿ... ಹೊಸ ಶರ್ಟ್ ಬಂತು ಹಳೆಯದು ಮೂಲೆಗೆ ಹಾಕಿದಿರಿ... ಹೊಸ ಶೂ ಬರ್ತಿದ್ದಂತೆ ನಿನ್ನೆಯವರೆಗೆ ಇದ್ದ ಆತ್ಮೀಯತೆ ಹಳೆಯ ಶೂ ಮೇಲೆ ಇಲ್ಲವಾಗುತ್ತೆ...
          ಮೊನ್ನೆಯವರೆಗೂ ಚೆನ್ನಾಗೇ ಇದ್ದ ಪಿಂಕ್ ಸೀರೆ ಫ್ಯಾಶನ್ ಶೋ ಗೆ ಹೋಗಿ ಬಂದ ಮೇಲೆ ಬೇಡವಾಗತೊಡಗುತ್ತದೆ... ಅದಕ್ಕೂ ಮೊದಲೇ ಲ೦ಗವನ್ನೆತ್ತಿ ಬಿಸಾಡಿದರೆ... ಆಸ್ಟ್ರೇಲಿಯಾ ಖಂಡದಂತೆ ತೂತಾಗಿರೋ ಬನಿಯನ್ನು ಗೂಟದಿಂದೀಚೆಗೆ ಬರುವುದೇ ಇಲ್ಲ. ಶಾರುಖನನ್ನು ನೋಡಿದಾಗ ಹೀಗೆ ಏನಾದರೂ ಆಗೋಣ ಎನ್ನಿಸುವ ಮನಸ್ಸಿಗೆ, ಅವನ ಚಿತ್ರದಿಂದ ಎದ್ದೀಚೆಗೆ ಬರುವಷ್ಟರಲ್ಲಿ ನಾಳೆಯ ಗುಂಡಿನ ಪಾರ್ಟಿಯ ಬಗ್ಗೆ ಚಿಂತೆ ಆರಂಭವಾಗಿರುತ್ತದೆ. ಹೊಸ ಹೆಣ್ಣಿನೊಂದಿಗೆ ಪರಿಚಯವಾಗುತ್ತಿದ್ದಂತೆ ದೇಹ ಇದ್ದಕ್ಕಿದ್ದಂತೆ ಸೆಟೆದು ನಿಲ್ಲುತ್ತದೆ. ನಾಳೆ ಜಿನ್ಸ್ ಹಾಕೋಣ ಅನ್ನಿಸುತ್ತದೆ. ಆಗೀಗ ಇನ್ ಶರ್ಟ್ ಕರೆಕ್ಟಾಗಿದೆಯಾ ಇಲ್ಲವಾ ನೋಡಿಕೊಳ್ಳುತ್ತೇವೆ. ಮಾತಿಗೊಮ್ಮೆ ಮುಖದಲ್ಲಿ ಮುಗುಳ್ನಗೆ. ಮೈಯೆಲ್ಲಾ ಉದಾರತೆ. ನಿಮಿಷಕ್ಕೊಮ್ಮೆ ಕೂದಲು ಸವರುವ ಬೆವರು ಅಂಗೈ. ಆಚೆ ಮನೆ ಆಂಟಿ ವಿಚಾರಿಸಿದರೆ ಎದ್ದು ಬಿದ್ಡು ಮಾಹಿತಿ ನೀಡುತ್ತೇವೆ. ಮನೆಯಾಕೆ ಕೇಳಿದರೆ ಟಿ.ವಿ. ನ್ಯೂಸ್ ಬರುವಾಗ ನಿಂದೇನೆ ಕಿರಿಕಿರಿ ಎನ್ನುತ್ತೇವೆ. ಅಷ್ಟೇಕೆ ಹೋದ ವಾರವಷ್ಟೆ ಖರೀದಿಸಿ ಹಾಕಲಾರಂಭಿಸಿದ್ದ ಚಪ್ಪಲಿ ಇದ್ದಕಿದ್ಡಂತೆ ಯಾಕೋ ಬೇಡವೆನ್ನಿಸಿ ಮೂಲೆಗೆ ತಳ್ಳುತ್ತೇವೆ... ಇದೆಲ್ಲಾ ಸರಿ ಹೇಗೋ ಅಡ್ಜಸ್ಟ್ ಮಾಡಿಕೊಂಡು ಬಿಡುತ್ತಾರೆ. ಯಾಕೆಂದರೆ ಇವುಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಾ ವರ್ಗದವರ ಅನುಕೂಲಕ್ಕೆ ತಕ್ಕಂತೆ ಪಾಕೆಟ್ಟಿಗೆ ಸರಿದೂಗುವಂತಹ ಆಲ್ಟರ್‌ನೇಟ್ ಲಭ್ಯವಿದೆ.
        ಆದರೆ ಅಕಸ್ಮಾತಾಗಿ ಇದ್ದಕ್ಕಿದ್ಡಂತೆ ಹೆಂಡತಿ ಬೇಡವೆನ್ನಿಸಿಬಿಟ್ಟರೆ...? ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಅಸಲಿಗೆ ಹಾಗಂತ ಹೇಳಲು ಯಾರಿಗೂ ನೇರಾ ನೇರ ಧೈರ್ಯವಿರುವುದಿಲ್ಲ. ಆದರೆ ಅದ್ಯಾವುದಾದರೂ ಪಾರ್ಟಿಗಳಲ್ಲಿ ಒಂದು ಪೆಗ್ಗು ಮುಗಿಯುತ್ತಿದ್ದಂತೆ ಕೊ೦ಚ ಪಡ್ಡೆ ಥರದವನೊಬ್ಬ ಇಂತಹದಕ್ಕೆ ಪೀಠಿಕೆ ಹಾಕಿ ನೋಡಲಿ. ಹೆಚ್ಚಿನಂಶ ಕಂಪ್ಲೇಂಟು ಒಂದೇ " ಹೆಂಡತಿ ಸರಿ ಇಲ್ಲ ಮಾರಾಯಾ ? " ಹಾಗಾದರೆ ಬದಲಾಯಿಸಿ ಬಿಡಿ. ಊಹುಂ... ಬೇರೇನನ್ನಾದರೂ, ಏನಾದರೂ ಮಾಡಿ ಬದಲಾಯಿಸಿ ಬಿಡಬಲ್ಲ ಗಂಡಸು ಈ ವಿಷಯದಲ್ಲಿ ಹೇಗೋ ಇರಲಿ ಬಿಡು ಎಂದು ಬುಡ ಒದರಿಕೊಂಡು ಎದ್ದು ಬಿಡುತ್ತಾನೆ ಯಾಕೆ...? ಧೈರ್ಯವಿರುವುದಿಲ್ಲವಾ ಅಥವಾ ಅದಕ್ಕೂ ಆಲ್ಟರ್‌ನೇಟ್ ಸಿಕ್ಕುವುದಿಲ್ಲವಾ...? ಎರಡೂ ಅಲ್ಲ. ಉಳಿದ ವಿಷಯದಂತೆ ಹೆಂಡತಿಯನ್ನು ಬದಲಿಸಲು ಸಾಮಾಜಿಕವಾಗಿ ಅಥವಾ ವೈಯಕ್ತಿಕವಾಗಿ ಲಭ್ಯತೆ ಅಥವಾ ವ್ಯಾಪ್ತಿ ಇಲ್ಲವೆಂದೆ...? ಅದಕ್ಕೂ ಅಲ್ಲ. ವ್ಯವಸ್ಥೆ. ಈಗಾಗಲೇ ಒಪ್ಪಿಕೊಂಡಿರುವ ವ್ಯವಸ್ಥೆ. 
          ಇಲ್ಲಿಯವರೆಗೆ ಅಧಿಕಾರ ಬದ್ಧವಾಗಿ, ಸಾಮಾಜಿಕವಾಗಿ ಒಪ್ಪಿಕೊಂಡಿರುವ ವ್ಯವಸ್ಥೆಯ ವಿರುದ್ಧ ಹೋಗುವ ಧೈರ್ಯವಿಲ್ಲವೆನ್ನುವುದು ಒಂದೆಡೆಯಾದರೆ ಮೊದಲೇ ಹೇಳಿದಂತೆ ಅದಕ್ಕೆ ವಸ್ತುವಿನ ರೂಪ ಕಲ್ಪಿಸುವ ಮಟ್ಟಕ್ಕೆ ಇನ್ನೂ ನಮ್ಮ ನೈತಿಕತೆ ಹೋಗಿಲ್ಲದಿರುವುದು ನಮ್ಮ ಹೆಣ್ಣು ಮಕ್ಕಳ ಪುಣ್ಯ. ಅಸಲಿಗೆ ಯಾಕೆ ಹೀಗನ್ನಿಸುತ್ತದೆ ? ಐದಾರು ವರ್ಷದಲ್ಲಿ ಅದ್ಯಾಕೆ ಕೆಲವು ಗಂಡಸರು ಹಾಗೆ ಹೊರಗೆ ಬಿದ್ಡು ಅಂಡಲೆಯಲು ಆರಂಭಿಸಿಬಿಡುತ್ತಾನೆ ? ಅದೇ ಹಳೆಯ ಫ್ರೆಂಡ್ಸು... ಪಾರ್ಟೀ... ಸಂಜೆಯ ವಾಕಿಂಗ್ ನೆಪ. ಇಲ್ಲವಾದರೆ ಮೂಕ ಕೋಲೆ ಬಸವನಂತೆ ಟಿ.ವಿ. ಮುಂದೆ ಬಟನ್ ಒತ್ತುತ್ತಾ ಅದರಲ್ಲೇನೋ ಡಾಕ್ಟರೇಟ್ ಮಾಡುವವನಂತೆ ಕೂತು ಬಿಟ್ಟಿರುತ್ತಾನೆ. ಇದಕ್ಕೆ ಕಾರಣ ಬರಿ ಗಂಡಸರಷ್ಟೆ ಎಂದರೆ ತಪ್ಪಾಗುತ್ತದೆ. ಅದೂ ಇತ್ತೀಚೆಗಿನ ನಾನು ಗಮನಿಸಿದ ಎಲ್ಲ ಸ್ಥರದ ಪುರುಷರಲ್ಲೂ ಈ ಭಾವನೆ ತುಂಬಾ ಜಾಗೃತವಾಗಿದ್ಡು ಹುಬ್ಬೇರಿಸುತ್ತಿದೆ. ಎಲ್ಲ ಕುಟುಂಬದಲ್ಲೂ ಎಲ್ಲ ಕಾಲದಲ್ಲೂ ಸುಖ ಶಾಂತಿ ಸಮೃದ್ಧಿಯೇ ತುಂಬಿ ತುಳುಕುತ್ತಿರುತ್ತದೆ ಎಂದು ನಿರೀಕ್ಷಿಸೋದು ತಪ್ಪು. ಆದರೆ ಎಲ್ಲ ಇದ್ದೂ ಹೀಗೊಂದು ಭಾವನೆಗಳು ಕಾಣಿಸುತ್ತಿದೆಯಂತಾದರೆ ಅದ್ಯಾಕೆ...? ಇದನ್ನು ಆಯಾ ದಂಪತಿಗಳೇ ಚರ್ಚಿಸಿಕೊಳ್ಳಬೇಕು. 
         ಎಲ್ಲೋ ಒಂದೆಡೆಯಲ್ಲಿ ಒಬ್ಬರಿಗೊಬ್ಬರು ಅನ್ ಕಂಫರ್ಟ್ ಮಾಡಿಕೊಳ್ಳುತ್ತಿದ್ದೇವೆಯಾ... ಪರಸ್ಪರರಿಗೆ ಸಹಾಯ ಸಲ್ಲಿಸುತ್ತಿಲ್ಲವಾ..? ಕೆಲಸದ ಹೊರೆ ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿಲ್ಲವಾ ? ಅಥವಾ ವೃತ್ತಿಯ ಒತ್ತಡದಲ್ಲಿ ಹೆಂಡತಿ /ಗಂಡ ಸಹಕಾರ ಅಗತ್ಯವಾದಾಗ ಲಭ್ಯವಾಗುತ್ತಿಲ್ಲವಾ..? ಇದೆಲ್ಲಕ್ಕಿಂತಲೂ ಇಬ್ಬರು ಗಂಡಸರು ಕೊಂಚ ಕ್ಲೋಸ್ ಆಗಿ ಚರ್ಚಿಸುತ್ತಿದ್ದಾರೆಂದರೆ ಖಂಡಿತಕ್ಕೂ ಕೆಲವರಲ್ಲಾದರೂ ಬರೋ ವಿಷಯ ಸೆಕ್ಸ್. ನಿಜಕ್ಕೂ ದಾಂಪತ್ಯದ ಪ್ರಮುಖ ಭಾವಾನುಬಂಧವಾಗಿ ಚಲಾವಣೆಯಾಗಬೇಕಾಗಿರುವ ಈ ವಿಷಯ ಐದೇ ವರ್ಷದಲ್ಲಿ ಪರಸ್ಪರರು ಮುಖ ತಿರುಗಿಸುವಂತೆ ಮಾಡುತ್ತದೆ, ಇಲ್ಲ ಆಕೆ ಆಸಕ್ತಿ ಕಳೆದುಕೊ೦ಡಿರುತ್ತಾಳೆ. ಅಚ್ಚರಿ ಎಂದರೆ ಇಬ್ಬರೂ ಕುಳಿತು ಆ ಬಗ್ಗೆ ಚರ್ಚಿಸುವುದೇ ಇಲ್ಲ. ಬದಲಾಗಿ ಬಂದು ಗೆಳೆಯನಲ್ಲೋ ಇನ್ನಾರಲ್ಲೋ ತೋಡಿಕೊಳ್ತಾರೆ " ಛೇ ನಮ್ಮಾಕೆಗೆ ಇಂಟರೆಸ್ಟೇ ಇಲ್ಲ ಮಾರಾಯ ? "  ಹೆಚ್ಚಿನಂಶ ಗಂಡಸರ ಕಂಪ್ಲೆ೦ಟ್ ಇದು. ಇದು ಎಷ್ಟೊ ಕಡೆಯಲ್ಲಿ ಉಲ್ಟಾ ಕೂಡಾ ಇರಬಹುದು. 
     ಆದರೆ ಆಕೆಯಲ್ಲಿ ಇರುವ ಕೊರತೆ ಏನು..? ಎಲ್ಲೋ ಗಂಡನ ಭಾವ ಪೂರ್ವಕ ಅನುಬಂಧದ ಕೊರತೆ ಕಾಡಿರಬಹುದಾ...? ಅಥವಾ ನಿಮ್ಮ ವರ್ತನೆ ಕೂಡಾ ಅದಕ್ಕೆ ಕಾರಣವಾಗಿರಬಹುದಾ..? ಜೊತೆಗೆ ಸಾಕಷ್ಟು ಸ್ತ್ರೀಯರಲ್ಲಿ ಒಂದು ಮಗುವಾಗುತ್ತಿದ್ದಂತೆ ಈ ಬಗ್ಗೆ ಒಂದು ರೀತಿಯ ಅನಾದರ ಬೆಳೆದು ಬಿಡುತ್ತಿದೆ. ಕೆಲವೊಮ್ಮೆ ಲಭ್ಯವಾಗದಿರೋ ಏಕಾಂತತೆ ಇತ್ಯಾದಿಗಳು ಕಾರಣವಾಗಿರಬಹುದಾದರೂ, ಎಷ್ಟೋ ಕಡೆಯಲ್ಲಿ ಸ್ತ್ರೀಯರು ಇವತ್ತಿಗೂ ಸೆಕ್ಸ್ ಎಂದರೆ ಅಸಹ್ಯ ಎನ್ನುವಂತೆ ಮುಖ ತಿರುಗಿಸೋದು ತುಂಬ ಕಾಮನ್ ಅಭಿಪ್ರಾಯ. ಅಂದರೆ ಅವರಲ್ಲಿ ಭಾವನೆಗಳೇ ಇಲ್ಲವೆಂದಲ್ಲ ಆದರೆ ಅದ್ಯಾವ ಕಾರಣಕ್ಕೋ ಮುರಿದು ಹೋಗಿರುವ ಮನಸ್ಸು ಅರಳುತ್ತಲೇ ಇಲ್ಲ ಅನ್ನೋದು ಅವರು ಸೆಕ್ಸ್‌ನತ್ತ ಅಭಿಮುಖವಾಗುವಂತೆ ಮಾಡಿರುತ್ತದೆ. ಅಷ್ಟೆ ಪ್ರಮಾಣದಲ್ಲಿ ಪುರುಷರು ಕೂಡಾ ತೋರಿಸುವ ಅನಾದರ ಆಕೆಯನ್ನು ಇನ್ನಷ್ಟು ನಿರ್ಲಿಪ್ತತೆಯತ್ತ ದೂಡುತ್ತದೆ. ಹೀಗೆ ಇಬ್ಬರಲ್ಲೂ ತಲೆದೋರುವ ಸಣ್ಣ ಪುಟ್ಟ ಕಾರಣಗಳು ಕ್ರಮೇಣ ಅಂತರವನ್ನಾಗಿಸುವುದರೊಂದಿಗೆ ಅಲ್ಟಿಮೇಟ್ಲಿ ಅದು ಇಬ್ಬರಿಗೂ ಬೇಡ ಎನ್ನಿಸುವ ವಿಷಯವಾಗಿ ಬದಲಾಗುತ್ತದೆ. ಒಟ್ಟಾರೆ ಇದರ ಪರಿಣಾಮ ಇಬ್ಬರ ಮೇಲೂ ಆಗುತ್ತದೆಯಲ್ಲದೇ ಗಂಡಸಾದವನಿಗೆ ಲಭ್ಯತೆ, ಅವಕಾಶ ಸಮಾಜ ಕಲ್ಪಿಸಿರೋ ಸೌಲಭ್ಯಗಳಿಂದಾಗಿ ಇಲ್ಲೂ ಬದಲಾವಣೆ ಬೇಕೆನ್ನಿಸಲಾರಂಭಿಸುತ್ತದೆ. 
            ಅದಕ್ಕೆ ಸರಿಯಾಗಿ ತುಂಬಾ ಪ್ರಬಲ ಮಾಧ್ಯಮಗಳಾದ ಟಿ.ವಿ. ಮತ್ತು ಸಿನೇಮಾಗಳೂ ಕೂಡಾ ಒಂದಾದರೂ ಅನೈತಿಕ ಸಂಬಂಧವಿರೋ ಚಿತ್ರಗಳನ್ನೆ ನೀಡೋದು ಅವರ ನಂಬಿಕೆಗೆ ಇನ್ನಷ್ಟು ಬಲ ನೀಡುತ್ತದೆ. ಸೋ. ಮನದಲ್ಲಿ ಮನೆ ಮಾಡುವ ಆಸೆಯ ಸುಖಕ್ಕಾಗಿ ಪುರುಷ ಸಹಜವಾಗಿ ಇನ್ನೊಂದು ಅಫೇರ್‌ನತ್ತ ಮುಖ ಮಾಡುತ್ತಾನೆ.  ( ಕೇವಲ ಸೆಕ್ಸ್‌ನ ಮೋಜಿಗಾಗೇ ಸ್ತ್ರೀಯರನ್ನು ಬದಲಾಯಿಸುವ ಗಂಡಸರಿಗೆ ಈ ಬರಹ ಅಪ್ಲಿಕೇಬಲ್ ಅಲ್ಲ ) ಇಲ್ಲೊಂದು ಉದಾ. ರಾತ್ರಿ ಹೊತ್ತು ಮನೆಯಲ್ಲಿಯೇ ಚಿಕ್ಕದಾಗಿ ಪೆಗ್ ತೆಗೆದುಕೊಂಡು ಕುಳಿತುಕೊಂಡು ಹರಟುವ ಗಂಡ, ಹೆಂಡತಿಯಲ್ಲಿ ಅದೆಷ್ಟು ಪ್ರೀತಿ ಆಸೆ ಹುಟ್ಟಿಸಿರುತ್ತಾನೆಂದರೆ, ಬೆಳಿಗ್ಗೆ ಆಕೆ ಅದೇ ಖುಷಿಯಲ್ಲಿದ್ದರೆ ಇವನಿಗೆ ಕುಡಿತ ಇಳಿದ ಪರಿಣಾಮವೋ ಅಥವಾ ಕುಡಿದಾಗ ಮಾತ್ರ ಆ ಹುಮ್ಮಸ್ಸು ಬರುತ್ತದೋ... ಒಟ್ಟಾರೆ ಮಾತೇ ಹೊರಡುತ್ತಿಲ್ಲ. " ನಿನ್ನೆ ಅಷ್ಟು ಚೆನ್ನಾಗಿ ಮಾತಾಡಿದ್ರಲ್ಲ ಈಗೆನ್ರಿ ಆಗಿದೆ ಮಾತಾಡಲು ... " ಎಂದರೆ " ತುಂಬಾ ಬ್ಯೂಸಿ ಕಣೆ " ಎಂದು ಹರಿ ಹಾಯ್ದು ಎದ್ಡು ಹೋಗುತ್ತಾನೆ.
         ಈ ಗಂಡಸರ ಹಣೆ ಬರಹವೇ ಇಷ್ಟು ಎಂದುಕೊಳ್ಳದೇ ಇನ್ನೇನು ಮಾಡಿಯಾಳು ಪಾಪ. ಬದಲಾವಣೆ ಬೇಕು. ಖಂಡಿತಾ ಅದು ಬದುಕನ್ನು ಹಸಿರನ್ನಾಗಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಯಾವುದು ಎಷ್ಟು ಎಂದು ನಿರ್ಧರಿಸ ಬೇಕಾದದ್ದು ಗೊತ್ತಿರಬೇಕು. ಅದಕ್ಕೂ ಮಿಗಿಲಾಗಿ ಬಿನ್ನಾಭಿಪ್ರಾಯಗಳ ಬಗ್ಗೆ ನೇರಾನೇರ ಚರ್ಚಿಸುವ ಯಾವ ಗಂಡ ಹೆಂಡತಿಯರೂ ಬಹುಶ: ಬದುಕಿನಲ್ಲಿ ಯಾವತ್ತೂ ಬದಲಾವಣೆ ಬಯಸಲಿಕ್ಕಿಲ್ಲ. ಆದರೆ ಇದರಲ್ಲಿ ಸ್ತ್ರೀಯರು ಕೊಂಚ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ ಎನ್ನುವುದು ಅನಿವಾರ್ಯ ಮತ್ತು ಅದು ಪುರುಷ ಧೋರಣೆಯ ಇನ್ನೊಂದು ಮುಖ ಅನ್ನೋದು ವಿಪರ್ಯಾಸ ಕೂಡಾ. ಹಾಗಾಗಿ ಹೆಂಡತಿಯಲ್ಲೂ ಬದಲಾವಣೆ ಬೇಕು ಎನ್ನುವವರಲ್ಲಿ ಎಲ್ಲ ಓ.ಕೆ... ಇದೊಂದು ಯಾಕೆ ? ಎಂದರೆ ಸ್ಪಷ್ಟ ಉತ್ತರವಿಲ್ಲದಿದ್ದರೆ ಖಂಡಿತಾ ಅದು ಸರಿಪಡಿಸಬಹುದಾದ ಕಾರಣವೇ ಇರುತ್ತೆ ಅಷ್ಟೆ. ಇಂಗ್ಲೀಷಿನಲ್ಲಿ ಅದಕ್ಕೆ ...ಇನ್‌ಫ್ಯಾಚುಯೇಶನ್... ಎನ್ನುತ್ತಾರೆ. ಅದಕ್ಕೇ ಮನಸ್ಸು ಚೇ೦ಜ್ ಕೇಳುತ್ತೆ... ! ಮತ್ತು ಬಹಳಷ್ಟು ಜನ ಒಂದಲ್ಲ ಒಂದು ಸಾರಿ ಈ ಇನ್‌ಫ್ಯಾಚುಯೇಶನ್‌ಗೆ ಒಳಗಾಗಿಯೇ ಇರುತ್ತಾರೆ ಹೊರತಾಗಿ ಎಲ್ಲರಲ್ಲೂ ಹೆಂಡತಿಯರನ್ನು ಬದಲಿಸಬೇಕೆಂದೇನೂ ಇರುವುದಿಲ್ಲ.

.dpuf

Monday, August 12, 2013

ಅವಳು ನೋಡಿದ್ದು " ಅದಕ್ಕೆ...! " ಅಂತ ಯಾಕಂದ್ಕೊಬೇಕು...?

ಸಹಜವಾಗಿ ಎಲ್ಲರೂ ಒಂದು ಕ್ಷಣ ಸುಂದರಿಯರನ್ನು ಕಂಡರೆ ದೃಷ್ಟಿ ಹರಿಸುತ್ತಾರಾ...? ಎಲ್ಲರೂ ಹೀಗೇ ಮಾಡ್ತಾರಾ...? ನನಗೆ ಗೊತ್ತಿಲ್ಲ.  ಆದರೆ ಅವನು ಹದಿನಾರರ ರಾಹುಲ್ ಎಂಬ ಹುಡುಗನಿರಲಿ ಅಥವಾ ಅರವತ್ತರ ರಿಟೈರ್ ಮಹಾದೇವ ಸ್ವಾಮಿಯೇ ಇರಲಿ. ಖಂಡಿತಕ್ಕೂ ಗಂಡು ಮನಸ್ಸು ಒಂದು ಕ್ಷಣ ಕಣ್ಣರಳಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಸಲಿಗೆ ಇದನ್ನು ಓದಿದವರು ಎದುರಿಗೆ ಎಷ್ಟೇ ನಿರಾಕರಿಸಲಿ ಮನಸ್ಸಿನಲ್ಲಿ ಮಾತ್ರ ಅದನ್ನು ಒಪ್ಪಿಕೊಳ್ಳಲೇಬೇಕು. ಅಷ್ಟಕ್ಕೂ ಇಲ್ಲವೆನ್ನೋದಾದರೆ ಕೊಂಚ ಮಾತ್ರದ ನಿಜಾಯಿತಿ ಅನ್ನೋದು ಕೂಡಾ ಈ ಲೋಕದಿಂದ ಹೊರಟು ಹೋಗಿದೆ ಎಂದೇ ಅರ್ಥ.  ( ಬಟ್ಟೆಯಂತೆ ಗರ್ಲ್‌ಫ್ರೆಂಡ್ಸ್‌ನ್ನು ಬದಲಾಯಿಸುವವರಿಗೆ ಇದು ಅನ್ವಯವಾಗುವುದಿಲ್ಲ )
          ಹಾಗಿದ್ರೆ ಸ್ತ್ರೀಯರು ನೋಡೋದೇ ಇಲ್ಲವಾ ? ನೋಡ್ತಾರೆ. ಅವರೂ ಕೂಡಾ ನಮ್ಮ ನಿಮ್ಮಂತೆ ಒಮ್ಮೆ ಕನಿಷ್ಟ ಒಂದು ಸುತ್ತನ್ನಾದರೂ ಕಣ್ಣರಳಿಸಿರುತ್ತಾರೆ. ಆದರೆ ಖಂಡಿತಾ ನಮ್ಮ ಮತ್ತು ಅವರ ನೋಟದಲ್ಲಿ ಒಂದು ಅಗಾಧವಾದ ವ್ಯತ್ಯಾಸ ಇದ್ದೇ ಇದೆ. ಯಾಕೆಂದರೆ ಒಂದು ಹೆಣ್ಣು ನಮ್ಮನ್ನು ನೋಡಿದ ಮಾತ್ರಕ್ಕೆ ಅದರಲ್ಲಿ ಒಂದು ಅದಮ್ಯ ವಾಂಛೆ ಇದೆ ಎಂದರ್ಥವಲ್ಲ. ಆ ಕೂಡಲೇ ಆಕೆ ನಿಮ್ಮನ್ನು ಬಯಸುತ್ತಿದ್ದಾಳೆ ಎಂದರ್ಥವಲ್ಲ. ಆದರೆ ನಮಗರ್ಥವಾಗೋದೆ ಅದು. ಯಾಕೆಂದರೆ ನಾವು ನೋಡುವ ದೃಷ್ಟಿಯಲ್ಲಿ ಬರಿ ಆಸೆಯ ಗೋಪುರಗಳೇ ಇವೆ. ಅಕಸ್ಮಾತ ಕಾಲೇಜು ಹುಡುಗನೊಬ್ಬನನ್ನು ಒಂದು ಹುಡುಗಿ ಎರಡ್ಮೂರು ಬಾರಿ ತಿರುಗಿ ನೋಡಿದಳೆಂದಿಟ್ಟುಕೊಳ್ಳಿ. ಅದೆಷ್ಟು ವ್ಯವಸ್ಥಿತವಾಗಿ ಅವನ ದಿನಚರಿ ಬದಲಾಗುತ್ತದೆ ಎಂದರೆ ದಿನಾಲು ಮೊದಲನೆ ಪಿರಿಯಡ್ ಅರ್ಧಕ್ಕೆ ಹೋಗುತ್ತಿದ್ದವನು ಇವತ್ತು ಬೆಳಿಗ್ಗೆ ಪ್ರೇಯರ್ ಮುಂಚೆ ಕಿಣಿ ಕಿಣಿ ಎನ್ನಿಸುತ್ತಾ ಗೇಟಿನೊಳಕ್ಕೆ ನುಗ್ಗುತ್ತಿದ್ದಾನೆ... ಮುಖದಲ್ಲೇನೋ ಹುಮ್ಮಸ್ಸು.. ಯಾರಾದರೂ ತನ್ನನ್ನು ನೋಡುತ್ತಿದ್ದಾರಾ ಎಂದು ಪದೇ ಪದೇ ಅತ್ತಿತ್ತ ದೃಷ್ಟಿ ಹರಿಸುತ್ತಾ ಆಕೆಯನ್ನು ಹೇಗೆ ಆದಷ್ಟು ನೇರವಾಗಿ ನೋಡುತ್ತಾ ನಿಲ್ಲಲು ಸಾಧ್ಯವಾಗುತ್ತೆ ಎಂದು ಪದೇ ಪದೇ ನಿಂತಲ್ಲೇ ಭಂಗಿ ಬದಲಿಸುತ್ತಾ... ಆ ಕಡೆಗೆ ಕ್ಲಾಸಿನಲ್ಲೂ ಹಿಂದಿನ ಕಾರ್ನರ್ರೆ ಆಗಬೇಕು. ಇಲ್ಲವಾದರೆ ತಿರುಗಿ ನೋಡಿದರೆ ಲೆಕ್ಚರರ್ ಕಣ್ಣು ಬಿಡ್ತಾನಲ್ಲ. 
            ಆಕೆ ಎಷ್ಟು ಹೊತ್ತಿಗೆ ಕಾರಿಡಾರ್‌ನಲ್ಲಿ ಎದುರಿಗೆ ಬರ್ತಾಳೆ. ಬಸ್ಸಿನಲ್ಲಿ ಕರೆಕ್ಟಾಗಿ ಎಷ್ಟು ದೂರದಿಂದ ಬರ್ತಾಳೆ... ಯಾವ ಸ್ಟಾಪಿಗೆ ಹತ್ತಬೇಕು... ದರಿದ್ರ ಶೂ ಈ ಬಾರಿ ಬದಲಿಸಬೇಕು... ಚೆನ್ನಾಗಿ ಕಾಣುತ್ತಿಲ್ಲ ಅನ್ನೋದನ್ನ ಗಮನಿಸ್ತಾಳಾ... ? ಅವಳಿಗೂ ಹೀಗೆ ಅನ್ನಿಸುತ್ತದಾ...? ಒಂದೇ ಎರಡೇ... ಆದರೆ ವಿಪರ್ಯಾಸವೆಂದರೆ ನಮಗೆ ಅರ್ಥವಾಗುತ್ತಿರೋದು ಬರೀ ಬಾಡಿ ಲಾಂಗ್ವೇಜ್ ಮಾತ್ರ ಅನ್ನೋದು. ಅಸಲಿಗೆ ಅದಕ್ಕೆ ಪೂರಕವಾಗಿ ನಮ್ಮ ಟಿ.ವಿ. ಹಾಗೂ ಸಿನೇಮಾದ ಪ್ರಭಾವ ಹೇಗಿದೆ ಎಂದರೆ ನೈಜತೆಯಿಂದ ದೂರವಾಗಿ ಕೇವಲ ಆಕರ್ಷಣೆಯ ಸರಕನ್ನೇ ಬಿಂಬಿಸುವುದರಿಂದ ಪ್ರಬಲ ಮಾಧ್ಯಮದ ಪ್ರಭಾವವನ್ನು ಮನಸ್ಸು ಸುಲಭವಾಗಿ ನಂಬಿಕೊಂಡು ಬಿಡುತ್ತದೆ. ಅಸಲಿಗೆ ಯಾರೋ ಒಬ್ಬಳು ನಮ್ಮನ್ನು ನೋಡಿದ ಮಾತ್ರಕ್ಕೆ ಆಕೆಗೆ ನೀವು ಇಷ್ಟವಾಗಿ ಭಯಂಕರ ಪ್ರೀತಿ ಮೂಡಿ ಬಿಟ್ಟಿದೆ ಎಂದಲ್ಲ.
            ಅದರ ಬದಲಾಗಿ ಅದೇಕೋ ಅದ್ಯಾವುದೋ ನಿಮ್ಮ ಪ್ಯಾಂಟಿನ ಕಲರ್ ಸು೦ದರವಾಗಿ ಕಂಡಿರಬಹುದು... ನಿಮ್ಮ ಹೇರ್ ಸ್ಟೈಲ್ ಬದಲಾಯಿಸಿದ್ದನ್ನು ಗಮನಿಸಿರಬಹುದು.. ನಿಮ್ಮ ಕೈಲಿದ್ದ ಬುಕ್ಸ್ ಮೇಲಿನ ಸ್ಟ್ಯಾಲ್ಲೋನ್ ಚಿತ್ರ... ಬೆಲ್ಟ್‌ಗೆ ಇದ್ದ ಮೆಟಾಲಿಕ್ ಬಕ್ಕಲ್‌ನ ಮಿಂಚು... ಕೂದಲಿಗೆ ಕೊಂಚವೇ ಹಚ್ಚಿಸಿರುವ ಬ್ರೌನ್ ಶೇಡ್ ... ನಿಮ್ಮ ನಡಿಗೆಯ ವಿಚಿತ್ರ ಭಂಗಿ.. ವಿಭಿನ್ನವಾಗಿ ನಿಂತುಕೊಳ್ಳುವ ಶೈಲಿ.. ಅಥವಾ ನಗೆ ತರಿಸಬಹುದಾದ ನಿಮ್ಮ ಅಗಲ ಹಸ್ತ.. ಗಿಡ್ಡ ಕೈ... ಅಗತ್ಯಕ್ಕಿಂತ ಹೆಚ್ಚು ಬಾರಿ ಬಾಚಿಕೊಳ್ಳುವ ಕೂದಲು... ಆಗಾಗ ತೆಗೆದು ನೋಡಿ ಸುಖಾಸುಮ್ಮನೆ ಆನ್ ಮಾಡಿ ಒಳಗಿರಿಸುತ್ತಿರುವ ಮೊಬೈಲು.... ರಿಂಗ್ ಟೋನ್ ಇಲ್ಲದಿದ್ದರೂ ಕಿವಿಗಿರಿಸಿಕೊಂಡು ಜೀವವಿದೆಯಾ ಎಂದು ಸುಖಾ ಸುಮ್ಮನೇ ನೋಡುವ ನಿಮ್ಮ ಎಡಬಿಡಂಗಿತನ... ಅನಾವಶ್ಯಕವಾಗಿ ಕಿರಿಯುತ್ತಿರುವ ಹಲ್ಲು... ನಿಮ್ಮ ಬ್ಯಾಗಿನ ಮೇಲಿರುವ ಹಳೆಯ ಹೇಮಾಮಾಲಿನಿಯ ಹೊಸ ಪ್ರಿಂಟು... ನೀವವಳನ್ನು ಆಗಾಗ ಕದ್ದು ಗಮನಿಸುತ್ತಿರೋದು... ಆ ಕಡೆಯವಳ ಗುಂಗುರಾದರೂ ನೀಟಾಗಿ ಕಾಣುವ ಫ್ರ೦ಟ್ ಕಟ್ ಜೊಂಪೆ ಕೂದಲು... 
              ಹೊರಗೆ ಎಲ್ಲೋ ನೋಡಿದರೂ ನಿಮ್ಮ ಅಕ್ಕಪಕ್ಕವೇ ಇರುವ ದೃಷ್ಟಿ... ಎಷ್ಟೆ ರಿಸರ್ವ್ ಆಗಿದ್ದರೂ ಕೊಂಚ ಸುಂದರಿ ರಸಿಕ ಹುಡುಗಿ ಸಹಜ ಮಾತುಕತೆಗೆ ಇಳಿದ ಕೂಡಲೇ ಬದ್ಲಾಗಿ ಬಿಡುವ ನಿಯತ್ತು.. ಮಾತಾಡುತ್ತಲೇ ಬದಲಾಗುವ ನಿಮ್ಮ ಬಾಡಿ ಲಾಂಗ್ವೇಜು... ಅದರಲ್ಲಿನ ಅಧೀರತೆ... ಕಂಡು ಕಾಣದಂತೆ ಹಲ್ಬಿಡುತ್ತಾ ಅಗಲಿಸುತ್ತಲೇ ಇರುವ ಬಾಯಿ... ಆಗಾಗ ಕೆರೆದುಕೊಳ್ಳುವ ಕಿವಿಯ, ಮೂಗಿನ ತುದಿಗಳು... ಕೊಂಚ ಬಿಸಿಲಿದ್ದರೂ ಹಾಕಿಕೊಂಡು ನಿಂತು ಬಿಡೋ ತಂಪು ಕನ್ನಡಕ... ಒಂದೇ ಎರಡೇ ಆಕೆಗೆ ಈ ಎಲ್ಲಾ ವಿಷಯಗಳು ಒಮ್ಮೆಲೇ ಗಮನಕ್ಕೆ ಬಂದಿರಬಹುದು ಅಥವ ಒಂದೂ ಬಾರದಿರಬಹುದು. ಆದರೆ ಖಂಡಿತಾ ಇಂತಹ ಎಷ್ಟೊ ವಿಷಯದಲ್ಲಿ ಒಂದನ್ನಾದರೂ ಆಕೆ ಗಮನಿಸಿರುತ್ತಾಳೆ. ಅದಕ್ಕಾಗಿ ಒಮ್ಮೆ ತಪ್ಪಿದರೆ ಎರಡು ಬಾರಿ ನಿಮ್ಮತ್ತ ನೋಡಿರಬಹುದು. ಆದರೆ ಹಾಗೆ ನೋಡಿದ ಮಾತ್ರಕ್ಕೆ ನಾವು ಮನದಲ್ಲಿ ಮಂಡಿಗೆ ತಿನ್ನಲಾರಂಭಿಸಿಬಿಡುತ್ತೇವೆ. ತೀರ ಆಘಾತಕಾರಿ ಸಂಗತಿ ಎಂದರೆ ಸಂಜೆಯ ಹೊತ್ತಿಗೆ ಕೊಂಚ ಮಾತ್ರ ಗುಂಡು ಹಾಕಿಕೊಂಡೋ ಅಥವಾ ಅದಿಲ್ಲದೆಯೋ " ಸಖತ್ತಾಗಿ ಲೈನ್ ಕೊಡ್ತಾಳಮ್ಮ" ಎಂದು ಆ ಕಡೆಯವನು ಆಡಿಕೊಳ್ಳುತ್ತಿದ್ದರೆ, ಇಲ್ಲಿನ ಪಕ್ಕದ ಊರಿನಲ್ಲೊಮ್ಮೆ " ಆದ್ ಯಾ ನಮನಿ ನೋಡ್ತು ಮಾರಾಯ., ಯಂಗಂತೂ ಹ್ಯಾಂಗ್ಯಾಂಗೋ ಆಗ್ ಹೋಯ್ತಾ... ಸಾಯಲಿ ನಿನ್ನೆ ಸರ‍್ಯಾಗಿ ಮನಿಕಳಾಕೂ ಆಗ್ಲಿಲಾ ಹೇಳಿ... ಎಂತಾ ಸ್ಟ್ರಾಂಗು ಅದರ ಕಣ್ಣು ಹೇಳಿ... " ಎಂದು ಮಾಣಿ ತನ್ನದೇ ಜೊತೆಗಿನವನ ಕಿವಿ ಕಚ್ಚುತ್ತಿರುತ್ತದೆ. 
            ಅಸಲಿಗೆ ಇವನ ಅದೇ ನೇತಾಡುವ ಲೂಸು ಪ್ಯಾಂಟು, ಸೊಂಟದ ಮೇಲೆ ನಿಲ್ಲದೇ ಒದ್ದಾಡುವ ದೊಗಳೆ ಜೀನ್ಸು... ಅದಕ್ಕೆ ಹಲ್ಲು ಕಚ್ಚಿ ನೇಣು ಹಾಕಿದ೦ತೆ ಬಿಗಿದ ಅವನ ಕೈಗಿಂತ ದಪ್ಪದ ಲೆದರ್ ಬೆಲ್ಟು... ಮತ್ತು ಹೊಟ್ಟೆಗಿಲ್ಲದವರಂತಹ ಬಡಕಲು ಬೆನ್ನು, ಆಕೆಯನ್ನು ಅದಿನ್ಯಾವ ಪರಿ ಆಕರ್ಷಿಸುತ್ತದೋ ಆ ಮಾಣಿಯೇ ವಿವರಿಸಬೇಕು. ಅಸಲಿಗೆ ಇದೇ ಪುರುಷ ಪುಂಗವ ತನಗೇ ಗೊತ್ತಿಲ್ಲದಂತೆ ನಿನ್ನೆಯ ಬದಲಾಯಿಸದ ಅ೦ಡರ್‌ವೇರ್ ಉಂಟು ಮಾಡುತ್ತಿದ್ದ ಕಿರ್ಕಿರಿಗೆ ಅದು ಬಸ್ ಸ್ಟ್ಯಾಂಡೋ... ಮಾರ್ಕೇಟ್ಟಾ... ಶಾಪಿಂಗ್ ಕಾಂಪ್ಲೆಕ್ಸಾ... ನೋಡದೆ ಎಲ್ಲರೆದುರಲ್ಲೇ ಹಿಂಭಾಗ, ಮುಂಭಾಗ ಕೆರೆದುಕೊಳ್ಳುತ್ತಾ ನಿಂತಿದ್ದಾಗಲೂ ನೋಡಿದ ಹೆಂಗಸರಷ್ಟೆ ಅಲ್ಲ, ಗಂಡಸರೂ ಕೂಡಾ " ಅದ್ನೋಡು ಅದ್ಯಾವ ರೀತಿ ಗಿಟಾರ್ ಬಾರಿಸ್ತಾನೆ... ಸಾಯಲಿ ಸರ್ಯಾಗಿ ಸ್ನಾನ ಮಾಡೋಕು ಬರಲ್ಲವಾ " ಎಂದು ಹಲ್ಲು ಕಚ್ಚುತ್ತಿದ್ದರೆ, ಪಕ್ಕದ ರಸ್ತೆ ದಾಟುತ್ತಿದ್ದ ಆಂಟಿಯನ್ನು ನೋಡುತ್ತಾ ನಿಂತು ಬಿಡುವ ನಮ್ಮ ಕಂಠೀರವನಿಗೆ ಅರ್ಥವೇ ಆಗುವುದಿಲ್ಲ. ಬದಲಿಗೆ ಕೈ ಇನ್ನೊಮ್ಮೆ ಸಂದುಗಳತ್ತ ಬಿಡು ಬೀಸಾಗಿ ಸರಿಸುತ್ತಲೇ ನಿಂತಿರುತ್ತಾನೆ.
           ಯಾಕೆ ಹೀಗೆ ಯಾವುದೇ ಪುರುಷರು, ಹುಡುಗಿಯರು ಅಥವಾ ಹೆಣ್ಣೊಬ್ಬಳು ಒಂದೆರಡು ಬಾರಿ ಹೆಚ್ಚಾಗಿಯೇ ನೋಡಿದಳೆಂದರೆ ಅದರಲ್ಲಿ ಕಾಮದ ವಾಸನೆಯನ್ನೇ ಹುಡುಕುತ್ತಾರೆ... ? ಯಾಕೆಂದರೆ ಅದೊಂದು ರೀತಿಯಲ್ಲಿ ನಮ್ಮ ಮನಸ್ಸು ಹಾಗೇ ಯೋಚಿಸುತ್ತಾದ್ದರಿಂದಾಗಿನಾ ಅಥವಾ ಹಾಗೊಂದು ಆಸೆ ಹೊಕ್ಕುಳಿನಾಳದಿಂದ ಹುಟ್ಟಿಕೊಂಡು ಬಿಡುತ್ತದಾ ? ಅದನ್ನು ಹಾಗೆ ಮ೦ಡಿಗೆ ತಿನ್ನುವವರೇ ಹೇಳಬೇಕು. ಅಸಲಿಗೆ ಹಾಗೆ ನಾವು ನೋಡುವ ಮಟ್ಟಕ್ಕೆ ಈ ದೇಶದ ಹೆಣ್ಣು ಮಕ್ಕಳೇನಾದರೂ ಇಳಿದು ಬಿಟ್ಟಿದ್ದರೆ ನಾವು ಇಷ್ಟೊತ್ತಿಗೆ ನೈತಿಕವಾಗಿ ಅಷ್ಟೇ ಅಲ್ಲ ಸರ್ವತೋಮುಖವಾಗಿ ದಿವಾಳಿತನದ ಅಂಚಿನಲ್ಲಿ ನಿಂತಿರುತ್ತಿದ್ದೆವು. ಅಕಸ್ಮಾತಾಗಿ ಎಲ್ಲಾ ರಂಗದಲ್ಲೂ ಇವತ್ತು ಪುರುಷ ನಿಂತು ಸಾಧಿಸುತ್ತಿದ್ದಾನೆಂದರೆ ಎಲ್ಲಾ ಕಡೆಯಲ್ಲೂ ಅಷ್ಟೆ ಬೆ೦ಗಾವಲಾಗಿ ಬೆಂಬಲವಾಗಿ ನಿಂತು ಬಿಟ್ಟಿರೋ ಹೆಣ್ಣೇ ಕಾರಣ. ಜೊತೆಗೆ ನಮ್ಮಷ್ಟು ಕಚ್ಚೆ ಹರುಕತನವಿನ್ನೂ ಈ ನಮ್ಮ ದೇಶದ ಹೆಣ್ಣುಗಳಿಗೆ ಕಾಡಿಲ್ಲ ಎನ್ನುವುದೂ ಕೂಡಾ ನಮ್ಮ ನಮ್ಮ ಓಡುವ, ನೋಡುವ ನೋಟಗಳಿಗೆ ಅರ್ಥವಾದರೆ ನಮ್ಮ ಸರ್ವತೋಮುಖ ಪ್ರಖರತೆ ಇನ್ನಷ್ಟು ಹೆಚ್ಚಾದೀತು... ! ಇನ್ನು ಮುಂದೆ ನೋಡುವಾಗ ಹುಶಾರು.

Sunday, August 11, 2013

ಅವಳ ಸ್ವಗತಗಳಿಗೆ ನಾನು ದನಿಯಾಗುತ್ತಾ...!!!


ಜೀವನದ ಈ ತಿರುವಿನಲ್ಲಿ ಬಂದು ನಿಂತ ಅವಳ ಬಳಿಯಲ್ಲಿ, ಯಾಕೆ ಅವನಿಗೆ ಒಲಿದೆ ಎಂಬುವುದರ ಬಗ್ಗೆ ಸ್ಪಷ್ಟ ಉತ್ತರವಿಲ್ಲ. ಆಕೆಯಷ್ಟೆ ಯಾಕೆ...? ಈ ಜಗತ್ತಿನಲ್ಲಿ ಯಾವುದೇ ಹೆಣ್ಣಿನ ಈ ರೀತಿಯ ಕಥೆಯ ಹಿಂದೆ ಇಂತಹದ್ದೊಂದು ಪ್ರಶ್ನೆಯನ್ನು ಇರಿಸಿದರೆ ಯಾವ ಬಿಂದುವಿನ ಬಳಿ ತಾನು ಬದಲಾದೆನೆಂದು ಹೇಗೆ ಹೇಳಿಯಾಳು... ? ಗೆದ್ದ ಗಂಡಸಾದರೂ ಹೇಗೆ ಗೆದ್ದೆ... ಎಲ್ಲಿ ಗೆದ್ದೆ ಅವಳನ್ನು ಎಂದು ಹೇಗೆ ಹೇಳಿಯಾನು... ? 
ಅಸಲಿಗೆ ಅಲ್ಲಿ ಎಲ್ಲವೂ ಗೆಲುವುಗಳೇ ... ಎಲ್ಲವೂ ಸೋಲುಗಳೇ ಪರಸ್ಪರರಿಗೆ, ಹಾಗಿದ್ದಾಗ ಅದೊಂದು ಬಯಸುವ ಸೋಲು ಮತ್ತು ಗೆಲುವಿನ ಸಂಗಮವಲ್ಲದೇ ಬೇರೇನಲ್ಲ... ಅದೇನು ಮೈಲಿಕಲ್ಲುಗಳೇ...? ಗುರುತಿಸಿಟ್ಟುಕೊಳ್ಳಲು. ಅದೇನಿದ್ದರೂ ಮನಸ್ಸು ಮನಸ್ಸುಗಳು ಸ೦ಬಂಧವಷ್ಟೆ... ಅಲ್ಲೇನಿದ್ದರೂ ಅನುಭೂತಿಗಳಷ್ಟೇ...! ಅವುಗಳನ್ನು ಬೆಸೆದುಕೊಳ್ಳಲು ಇಬ್ಬರಿಗೂ ಅದರಲ್ಲೂ ಗಂಡಸಿಗೆ ಗೊತ್ತಿರಬೇಕಷ್ಟೆ... !!
ಅದಕ್ಕೂ ಮಿಗಿಲಾಗಿ ಗಂಡಸಾದವ ಯಾವಾಗಲು ಸೋತು ಹೆಣ್ಣನ್ನು ಗೆಲ್ಲಬೇಕೆನ್ನುವ ನಿಜವಾದ ಸೂತ್ರ ಇವತ್ತಿಗೂ ತುಂಬ ಪ್ರಸ್ತುತ ಎನ್ನುವುದು ತುಂಬಾ ಗಂಡಸರಿಗೆ ಅರ್ಥವಾಗದಿರುವುದು ಖೇದ. ಜಗತ್ತು ಮುಂದುವರಿಯುತ್ತಿರುವಾಗಲೂ ಅದೇ ಹರಟೆ ಕಟ್ಟೆಯಲ್ಲಿ ಸಮಯ ಕಳೆದು " ನ್ಯೂಸ್ " ಬದಲಾಗಿ ಕಾರ್ಟೂನ್/ಫ್ಯಾಷನ್ ನೋಡುತ್ತ ಸಮಯ ಕಳೆವ, ಕಿರು ಬೆರಳಿನಲ್ಲಿ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಮೂಗು ಗಿವುಟಿ... ಆ ಉತ್ಪಾದನೆಯನ್ನ ಕುಳಿತಲ್ಲೇ ಮಾಯ ಮಾಡುತ್ತಾ... ಕೆಲವೊಮ್ಮೆ ವಾಕಿಂಗ್ ಹೊರಟರೆ ಎಗ್ಗಿಲ್ಲದೆ ಎಲ್ಲೆಂದರೆ ಅಲ್ಲಿ ಕ್ಯಾಕರಿ ಉಗುಳುವುದು... ಜನ ನೋಡಲಿ ಇಲ್ಲದಿರಲಿ ರಪರಪನೇ ಬುಡ ಕೆರೆದು ಕೊಂಡುಬಿಡುವ... 
            ಅದೇ ಹಳೆ ಲುಂಗಿಯಲ್ಲಿ ಸಶಬ್ದವಾಗಿ ಹಿಂಗಾಳಿ ಬಿಡುವುದು... ಮನೆಯಲ್ಲಿಯೂ ಬಾಗಿಲು ತೆಗೆದುಕೊಂಡು ನಿಂತುಕೊಂಡೆ ಉಚ್ಚೆ ಹೊಯ್ಯುವುದು... ಬರೀ ಕಾಚಾದಲ್ಲೇ ಓಡಾಡಿಕೊಂಡಿರುವುದು... ಸಾಕ್ಸ್ ಎಲ್ಲೋ ಶೂ ಎಲ್ಲೋ... ಹಾಸಿಗೆಯ ಮೇಲೆ ಆಗಾಗ ಭಾರತದ ಭೂಪಟ... ಹಲ್ಲುಜ್ಜದ ಬಾಯಿಯನ್ನ ನೊಣಗಳಿಗೆ ಹೆದ್ದಾರಿಯನ್ನಾಗಿಸಿ ಅಂಗಾತ ಹೊಟ್ಟೆ ಮೇಲೆ ಮಾಡಿ ಬಿದ್ದುಕೊಳ್ಳೊದು... ರಾತ್ರಿ ಮಲಗುವ ಮುನ್ನವಾದರೂ ಫ್ರೇಶ್ಶಾಗಿ ಇರಬೇಕೆನ್ನುವ ಸಣ್ಣ ಜ್ಞಾನವೂ ಇಲ್ಲದ...  ತನ್ನದೇ ಜಗತ್ತಿನಲ್ಲಿ ಅಪ್ಪಟ ಕಟ್ಟಳೆಯಲ್ಲಿ ಬದುಕಿ ನೂರು ವರ್ಷ ತೆಗೆಯುವುದಕ್ಕಿಂತಲೂ ಸ್ವಚ್ಛಂದವಾಗಿ ಜಗತ್ತು ನೋಡುವ ... ಸುಂದರ ಬಾಳು ಕಾಣುವದನ್ನು ತಪ್ಪು ಅನ್ನುತ್ತೀಯಾ...? ಇವೆಲ್ಲಾ ಚಿಕ್ಕ ಅಡ್ಜ್‌ಸ್ಟ್‌ಮೆಂಟ್‌ನಲ್ಲಿ ಸರಿಯಾಗಬಹುದಾದ ಕಿರ್ಕಿರಿಗಳು ಅನ್ನಿಸುತ್ತದನೋ...? ಆದರೆ ಅದೆಲ್ಲವನ್ನೂ ನಿರ೦ತರವಾಗಿ ಅನುಭವಿಸೋದಿದೆಯಲ್ಲ ಅದನ್ನು ಅನುಭವ ಮಾತ್ರ ತಿಳಿಸಬಲ್ಲದು.
          ಬೇರೇನೂ ಇಲ್ಲದಿದ್ದರೂ ನಮ್ಮ ಪಿರಿಯಡ್ ಟೈಂನಲ್ಲಾದರೂ ಸೊಂಟ ನೋವೆಂದರೆ ಕೊಂಚ ಒತ್ತಲೇ ಅಂತ ಕೇಳಿದರೂ ಸಾಕು ಅರ್ಧ ನೋವು ಮಾಯವಾಗಿ ಬಿಡುತ್ತೇ... ಈ ಎಲ್ಲ ವಿಷಯಗಳು ಸೆಕ್ಸ್‌ಗಿಂತಲೂ ಅದ್ಭುತ ಸುಖವನ್ನ, ನೆಮ್ಮದಿಯನ್ನ ಹೆಂಡತಿಯರಿಗೆ ಕೊಡುತ್ತವೆ ಅನ್ನೋದು ಯಾವಾಗ ಈ ಗಂಡಸರಿಗೆ ಅರ್ಥವಾಗುತ್ತೆ. ಅಸಲಿಗೆ ಎಲ್ಲೆಡೆಗೂ ಅನೈತಿಕ ಸಂಬಂಧಗಳಿಗೆ ಹೆಣ್ಣೇ ಕಾರಣವೆನ್ನುತ್ತಾರಾದರೂ ವಾಸ್ತವವಾಗಿ ನೋಡಿದರೆ ಗಂಡಸರೇ ಸರಿ ಇಲ್ಲ. ಅದಕ್ಕಾಗೇ ಈ ಅನೈತಿಕಗಳೂ, ತರಹೇವಾರಿ ಕೌಟುಂಬಿಕ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತಿವೆ. 
         ಆಫ್ ಕೋರ್ಸ್ ಹೆಣ್ಣಾದವಳು ಹೆಚ್ಚಿನಾಂಶ ಗಂಡನ ದರ್ಪ, ಅಧಿಕಾರವನ್ನೂ ಎಂಜಾಯ್ ಮಾಡುತ್ತಾಳೆನ್ನುವುದು ಸುಳ್ಳಲ್ಲವಾದರೂ ಅದು ಪ್ರೀತಿ ಭರಿತವಾಗಿರಬೇಕು. ತನ್ನೆಡೆಗೊಂದು ಕನ್ಸ್‌ರ್ನ ಇರಬೇಕೆಂದು ಬಯಸುತ್ತಾಳೆ. ಪಂಚ ಪಾಂಡವರನ್ನೇ ಭರಿಸಬೇಕಾಗಿ ಬಂದದ್ದು ದ್ರೌಪದಿಯ ಮೇಲೆ ನಡೆದ ದೌರ್ಜನ್ಯ ಎಂದೇ ಎಷ್ಟೋ ಕಡೆಯಲ್ಲಿ ಗುರುತಿಸಲಾಗುತ್ತಿದೆ. ಆದರೆ ನಿಜವಾದ ಪ್ರೇಮದಿಂದ ಬಂದಿದ್ದರೆ, ಆಕೆಗೆ ಶತ ಕೌರವರನ್ನೂ ಬೇಕಾದರೂ ಭರಿಸಬಲ್ಲ ತಾಕತ್ತಿತ್ತು. ಅದಕ್ಕೆ ಬೇಕಾದ ಮಾನಸಿಕ ಪ್ರಭುದ್ಧತೆಯ ಜೊತೆಗೆ ನೈಜ ಮನ್ನಣೆ ನೀಡಬೇಕಾದ ಜಾವಾಬ್ದಾರಿ ಮಾತ್ರ ಪುರುಷರದಲ್ಲದೇ ಇನ್ನೇನು...? ನಿಸ್ವಾರ್ಥ ಪ್ರೀತಿಗೆ ಹೆಣ್ಣು ಒಲಿಯುತ್ತಾಳೆನ್ನುವುದರಲ್ಲಿ ಇವತ್ತಿಗೂ ಸಂಶಯವಿಲ್ಲ.
         ಯಾವುದೇ ಗಂಡಸರು ಹೆಣ್ಣಿನ ಆಸೆಗಳನ್ನು ಭೌತಿಕವಾಗಿ ನೂರಕ್ಕೆ ನೂರರಷ್ಟು ಪೂರೈಸುತ್ತಾರೇನೋ, ಆದರೆ ಮಾನಸಿಕವಾಗಿ ಅವರಿಗೆ ಬೇಕಾದ ಜೊತೆಯನ್ನು ನೀಡುವಲ್ಲಿ ವಿಫಲವಾಗುತ್ತಿರುವುದರಲ್ಲಿ ಸ೦ದೇಹವೇ ಇಲ್ಲ. ಹೆಣ್ಣಿಗೆ ಒಂದು ಬೊಗಸೆ ಪ್ರೇಮವನ್ನು ಪ್ರಾಮಾಣಿಕವಾಗಿ ಕೊಡೋದನ್ನ ಈ ಲೋಕದಲ್ಲಿ ಪ್ರತಿಯೊಬ್ಬ ಗಂಡಸು ಅರಿತ ದಿನದಿ೦ದಲೇ ಅನೈತಿಕತೆ ನಾಶವಾಗಬಲ್ಲದು. ಹೊರತಾಗಿ ಬೇರೇನೂ ಕಾರಣವಲ್ಲ. ಹೆಣ್ಣು ಹೇಗೆ ಪ್ರೇಮಕ್ಕೆ... ಪ್ರೀತಿಗೆ ಸೋಲುತ್ತಾಳೋ... ಅಷ್ಟು ಸುಲಭವಾಗಿ ಶಯನೋತ್ಸವಕ್ಕೆ ಮಂಚಕ್ಕೆ ಬಂದು ಬಿಡಲು ಸಜ್ಜಾಗಲಾರಳು, ಮತ್ತದು ಅವಳಿಂದ ಸಾಧ್ಯವಿಲ್ಲ ಕೂಡಾ... ! 
           ಮನಸ್ಸಿನಲ್ಲಿ ಉಳಿದು ಬಿಟ್ಟಿದೆ. ಇವತ್ತಿಗೂ ಮನಸ್ಸಿಲ್ಲದ ಮನಸ್ಸಿನಿಂದ ದೈಹಿಕವಾಗಿ ಹೆಣ್ಣನ್ನು ಸೇರೋದಿದೆಯಲ್ಲ ಅದರಷ್ಟು ನೀಚ ಕೆಲಸ ಈ ಲೋಕದಲ್ಲಿ ಮತ್ತಾವುದೂ ಇರಲಾರದು. ಎಷ್ಟೊ ಜನ ಗಂಡಸರಿಗೆ ಇವತ್ತಿಗೂ ಎರಡು ಸೆಕ್ಸ್‌ನ ಮಧ್ಯೆ ಕನಿಷ್ಟ ಅವಧಿಯ ಅಂತರವಾದರೂ ಇರಬೇಕೆನ್ನುವ ಪರಿಜ್ಞಾನವೂ ಇಲ್ಲ. ಅಲ್ಲೂ ಒಂದೇ ಮುಖ್ಯವಾಗುತ್ತಿದೆಯೇ ಹೊರತಾಗಿ ಹೆಂಡತಿಗೆ ಬೇಕೆ ಬೇಡವೇ... ಅವಳ ಮನಸ್ಥಿತಿ ಹೇಗಿದೆ... ಇತ್ಯಾದಿ ಎಲ್ಲವೂ ಅವರಿಗೆ ಸೆಕ್ಸ್ ಬೇಕೆನ್ನುವ ಆಸೆಯೆದುರಿಗೆ ಗೌಣವಾಗುತ್ತದೆ.  ತುಂಬಾ ಕೇಸ್‌ಗಳಲ್ಲಿ ಸಾಮಾಜಿಕ ಭದ್ರತೆಗೊಸ್ಕರ ಅವಲ೦ಭಿಸಿರುವುದರಿಂದಾಗಿ ಹೆಣ್ಣು ಗಂಡಸಿನ ಎಲ್ಲಾ ರೀತಿಯ ಅವಗುಣಗಳನ್ನು ಗಣಿಸಿಯೂ ಅವನೊಂದಿಗೆ ಬಾಳುತ್ತಾಳೆ.
ಕೊನೆಯಲ್ಲಿ ಒಂದೇ ಒಂದು ಮಾತು. ಎಲ್ಲರಿಗೂ ಇದು ... ಏನು ಗೊತ್ತೆ... ?
ಈ ಜಗತ್ತಿನ ಎಲ್ಲ ಸ್ತ್ರೀಯರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಅಸೆಗಳು ಗೂಡು ಕಟ್ಟಿಕೊ೦ಡೇ ಇರುತ್ತವೆ. ಆದರೆ ಅವರಿಗೆ ಬದುಕಿನ ಓಟದಲ್ಲಿ ಅದಕ್ಕೊಂದು ಅಗತ್ಯದ ಪ್ರಿಯಾರಿಟಿ ಇರುವುದಿಲ್ಲ ಅಷ್ಟೆ. ಎಲ್ಲರೂ ಯಾಕೆ ಹೀಗೆ ಮಾಡುವುದಿಲ್ಲವೆಂಬ ಪ್ರಶ್ನೆ ಏನಾದರು ಇದ್ದರೆ ಅದಕ್ಕೆ ಕಾರಣ " ಕೇವಲ ಅವಕಾಶ ಮತ್ತು ಸೌಲಭ್ಯ ಹಾಗು ಅವರಲ್ಲಿ ಅಂತಹದ್ದೊಂದು ಧೈರ್ಯದ ಕೊರತೆಯೇ " ಹೊರತಾಗಿ ಅವರಿಗೇನು ಆಸೆ ಇಲ್ಲವೆಂದಲ್ಲ..."
ಹೀಗೆ ಅವಳು ಗಂಟೆಗಟ್ಟಲೆ ಮಾತಾಡುತ್ತಿದ್ದರೆ ನನ್ನ ಧ್ವನಿಗೆ ಅಲ್ಲಿ ಜಾಗವಿರಲಿಲ್ಲ. ಅಷ್ಟಕ್ಕೂ ಒಂದು ನೊಂದ ಜೀವಕ್ಕೆ ಅದರ ಧ್ವನಿಗೆ ಕಿವಿಯಾಗುವುದಕ್ಕಿಂತ ದೊಡ್ಡ ಸಾಂತ್ವನ ಬೇಕಾ...? ಅಷ್ಟೆ. ನಾನು ಕುಳಿತೆ ಇದ್ದೆ. ಅವಳ ಧ್ವನಿಗೆ ಕಿವಿಯಾಗುತ್ತಾ. ಅಷ್ಟಕ್ಕೂ ನಾನು ಹೋದದ್ದೇ ಅದಕ್ಕಾಗಿ. ಅಲ್ಲಿ ಆ ದಿನ ಸೇರಿದವರದೆಲ್ಲರದೂ ಒಂದೊಂದು ಕಥೆ. ಉಳಿದಿದ್ದನ್ನು ಇನ್ಯಾವತ್ತಾದರೂ ಬರೆದೇನು.

Friday, August 9, 2013

ಸಾಹಿತ್ಯದ ಗು೦ಪುಗಾರಿಕೆಯಲ್ಲೇ ಕಳೆದುಹೋಗುತ್ತಿರುವ ಸೃಜನ ಶೀಲತೆ.

( ಬರೆಯದಿದ್ದರೂ ಸಾಹಿತಿಯಾಗಿ ಚಲಾವಣೆಯಲ್ಲಿರುವವರನ್ನು ಅವರ ಸಾಹಿತ್ಯಕ್ಕಿಂತಲೂ ವ್ಯವಸ್ಥಿತವಾಗಿ ಮುಖ್ಯವಾಹಿನಿಯಲ್ಲಿ ಚಲಾವಣೆಯಲ್ಲಿಡಲಾಗಿದೆಯೇ ಹೊರತಾಗಿ ಸರಿಯಾದ ಮೂರ್ತ ರೂಪವೇ ಇಲ್ಲದ ಬರಹಗಳನ್ನು ಕೇವಲ ಪ್ರಚಾರದ ರೂಪದಲ್ಲಿ ಸಾಹಿತ್ಯವನ್ನಾಗಿಸಿ ಪ್ರಶಸ್ತಿಯತ್ತಲೂ ಎಳೆದ ಉದಾ. ನಮ್ಮ ಮುಂದಿವೆ )
ಇತ್ತೀಚಿನ ಸಾಹಿತ್ಯ ಮತ್ತು ಹಿರಿ-ಕಿರಿಯ ಸಾಹಿತಿಗಳ ಧೋರಣೆಗಳನ್ನು ಗಮನಿಸಿದರೆ ಬಹುಶ: ಇನ್ನೊಂದು ದಶಕದೊಳಗಾಗಿ ನಾವು ಸಾಹಿತ್ಯವೆಂದರೆ ನಿರ್ಧಿಷ್ಟ ಗುಂಪುಗಳಲ್ಲಿದ್ದರೆ ಮಾತ್ರ ಆತ ಬರೆದದ್ದು ಸಾಹಿತ್ಯ ಅಥವಾ ಆತ ಸಾಹಿತಿ ಎನ್ನುವ ಕಾಲ ಬರುತ್ತದಾ..? ನಿಸ್ಸಂಶಯ. ಯಾಕೆಂದರೆ ಕಳೆದ ಒಂದೂವರೆ ದಶಕಗಳಿಂದ ನಾನು ಗಮನಿಸುತ್ತಿರುವ ಸಾಹಿತ್ಯ ಲೋಕದಲ್ಲಿ ಇವತ್ತಿನ ದಿನದವರೆಗೂ ಬದಲಾಗುತ್ತಿರುವ ತೀವ್ರಗಾಮಿ ಗುಂಪುಗಾರಿಕೆಯ ಧೋರಣೆಯಿಂದಾಗಿ ಬಹುಶ: ಸಾಹಿತಿ ಮತ್ತು ಸಾಹಿತ್ಯಕ್ಕೆ ಹೊಸ ವಾಖ್ಯಾನ ರೂಪಿಸಬೇಕಾಗಿ ಬರುತ್ತದೇನೋ ಎನ್ನುವಂತಾಗಿ ಹೋಗಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ತಾಲೂಕಾ ಸಾಹಿತ್ಯ ಸಮ್ಮೇಳನದಿಂದ ಹಿಡಿದು ಯಾವುದೇ ಜಿಲ್ಲಾವಾರು ಕೊನೆಗೆ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದವರೆಗೂ ಗಮನಿಸುವಾಗ ಅಲ್ಲಿ ವಲಯವಾರು ಗುಂಪುಗಾರಿಕೆಯನ್ನು ಅದರ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. 
ಆಯಾ ಕಾಲಕಾಲಕ್ಕೆ ಬದಲಾಗುವ ಅಧ್ಯಕ್ಷರುಗಳಿಂದ ಹಿಡಿದು ಪದಾಧಿಕಾರಿಗಳವರೆಗೆ ಬೇಕಾದವರಿಗೆ ಇವತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಲು ಅವಕಾಶ ಲಭ್ಯವಾಗುತ್ತಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ. ಅದಕ್ಕಿಂತಲೂ ಮಿಗಿಲಾಗಿ ಆಯಾ ತಾಲೂಕು ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಸೋತು ಹೋಗುವ ಸಾಹಿತ್ಯ ಪರಿಷತ್ ಅಭ್ಯರ್ಥಿಗಳದ್ದೇ ಒಂದು ಬದಲಾದ, ಬಲವಾದ ಗುಂಪುಗಳು ಇನ್ನೊಂದೆಡೆಗೆ ಸೀಮಿತ ಮಟ್ಟದಲ್ಲಿ ಹೆಸರು ಪ್ರತಿಸ್ಪರ್ಧೆ ನಡೆಸಲು ಹೋರಾಟ ನಡೆದಿರುತ್ತದೆ. ಯಾಕೆ ಒಮ್ಮೆ ಈ ಅಧ್ಯಕ್ಷ ಪದವಿಯ ಹಣಾಹಣಿ ನಡೆದ ನಂತರದ ದಿನಗಳಲ್ಲಿ ಇವರೆಲ್ಲಾ ಸಾಹಿತ್ಯಿಕವಾಗಿ ಒಂದಾಗಬಾರದು. ಉಹೂಂ ಸಾಧ್ಯವೇ ಇಲ್ಲ. 
ಆಯಾ ಭಾಗದಲ್ಲಿ ಅವಕಾಶ ಪಡೆವ ಸಮ್ಮೇಳನಗಳು ಮತ್ತು ಆಗಾಗ ಕಾಲಕಾಲಕ್ಕೆ ನಡೆವ ಚರ್ಚೆಗಳು ಇತ್ಯಾದಿಗಳಲ್ಲಿ ಭಾಗವಹಿಸಿ ವಹಿಸಿಯೇ ಸಾಹಿತ್ಯ ಲೋಕದಲ್ಲಿ ಚಲಾವಣೆಗೆ ಬಂದು ಬಿಡುವವರೂ ಇಲ್ಲದಿಲ್ಲ. ಕವನ ಸಂಕಲನದ ಚರ್ಚೆ ಇರಲಿ, ವಿಮರ್ಶೆ ಇರಲಿ, ಹಳೆಯ ಮತ್ತು ಹೊಸ ತಲೆಮಾರಿನ ಸಾಹಿತ್ಯದ ಬೆಳವಣಿಗೆಗಳ ತುಲನಾತ್ಮಕ ಸಾಮೂಹಿಕ ದೃಷ್ಟಿಕೋನ ಎನ್ನುವ ಇಷ್ಟುದ್ದದ ಹೆಸರಿನ, ಹೆಸರಲ್ಲೇ ಗೊಂದಲ ಹುಟ್ಟಿಸುವ ಚರ್ಚೆ ಇರಲಿ, ಹಿರಿಯರೊಬ್ಬರಿಗೆ ಅಭಿನಂದನಾ ಗ್ರಂಥ ಸಮರ್ಪಣೆ, ಅದರ ಚರ್ಚೆ, ಬಿಡುಗಡೆ, ಕೊನೆಯಲ್ಲಿ ಹಿರಿಯ ಸಾಹಿತಿಯೊಬ್ಬರು ತೀರಿಕೊಂಡಾಗಿನ ಅಶ್ರು ತರ್ಪಣ ಕಾರ್ಯಕ್ರಮವಿರಲಿ... ಇತ್ಯಾದಿಗಳ ಯಾವುದೇ ಸಮಾರಂಭವಿರಲಿ. ಅಲ್ಲೆಲ್ಲಾ ಆಯಾ ಭಾಗದಲ್ಲಿ ನಿರ್ದಿಷ್ಟ ಸಂಗಡಿಗರದ್ದೇ ಗುಂಪುಗಳು ಭಾಗವಸಿರುತ್ತವೆ. ಆಯಾ ಗುಂಪಿನ ವ್ಯಕ್ತಿಗಳು ಭಾಗವಹಿಸಿದ್ದರೆ ಅವರ ವಿರೊಧಿ ಗುಂಪು ಅಲ್ಲಿ ತಲೆ ಹಾಕೋದಿಲ್ಲ. ಅವರ ಪಾಡಿಗೆ ಅವರು ಇವರನ್ನು ಬೈಯುತ್ತಾ ಗಂಭೀರ ಚರ್ಚೆಗಿಳಿದಿರುತ್ತಾರೆ. ಇಲ್ಲ ಒಬ್ಬರನ್ನು ಕರೆದರೆ ಇನ್ನೊಬ್ಬರನ್ನು ಶಿಫಾರಸ್ಸು ಮಾಡುವ ವಶೀಲಿಯೂ ಇರುತ್ತದೆ.  
       ಯಾವುದೇ ಇವತ್ತಿನ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದವರ, ಪರಿಷತ್ ಖರ್ಚಿನಲ್ಲಿ ಬಿಡುಗಡೆಯಾದವರ ಪುಸ್ತಕಗಳ ಲೇಖಕರ ಹೆಸರು ಇತರ ವಿವರ ಜಾಲಾಡಿದರೆ ಸಾಹಿತ್ಯಕ್ಕೆ ಅವರ ಕೊಡುಗೆ ಏನು ಎನ್ನುವುದು ನಿಚ್ಚಳ. ಇದರಲ್ಲಿ ನಿಜವಾದ ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿರುವವರು ಬಹಳವೆಂದರೆ ಒಂದ್ಹತ್ತು ಶೇ. ಇದ್ದಾರು ಅಷ್ಟೆ. ಉಳಿದಂತೆ ಪೇಪರು ಮತ್ತು ಪಬ್ಲಿಸಿಟಿ ಹಾಗು ಸಮ್ಮೇಳನದ ಗಾದಿಯೇರಲು ಹವಣಿಸಿದವರಲ್ಲಿ ಎಷ್ಟು ಜನರ ಸಾಹಿತ್ಯ ಇವತ್ತಿನ ಕನ್ನಡದ ದಿಗ್ಗಜ ಪತ್ರಿಕೆಗಲ್ಲಿ ಪ್ರಕಟವಾಗುವ ಅರ್ಹತೆ ಪಡೆದಿವೆ...? ಇದರರ್ಥ ಎಲ್ಲಾ ಪತ್ರಿಕೆಯಲ್ಲೂ ಪ್ರಕಟವಾಗೋದೆಲ್ಲಾ ಅದ್ಭುತ ಸಾಹಿತ್ಯವೆಂದಲ್ಲ. ಆದರೆ ಇವತ್ತಿಗೂ ಪ್ರತಿ ಹೊಸಪತ್ರಕರ್ತನಿಗೆ ಅಲ್ಟಿಮೇಟ್ಲಿ ದಶಕಗಳಿಂದ ಕಾಲೂರಿ ನಿಂತ ಕನ್ನಡ ಪತ್ರಿಕೆಗಳಲ್ಲಿ ಕೆಲಸ ಮಾಡಬೇಕು ಎಂದು ಅನ್ನಿಸುವ ಮಾತು ಎಷ್ಟು ಹಸಿ ಸತ್ಯವೋ... ಇತ್ತೀಚಿನ ಬರಹಗಾರರಿಗೆ ಕನಿಷ್ಟ ಅವರ ಬರಹಗಳು ಪ್ರಜಾವಾಣಿ, ಸುಧಾ, ತರಂಗದ, ಕ.ಪ್ರ. ವಿಜಯವಾಹಿನಿ. ವಿ.ಕ ದ. ಸಖಿಯಲ್ಲಿ -  ಸಾಪ್ತಾಹಿಕದಲ್ಲಿ ಪ್ರಕಟವಾಗಬೇಕೆನ್ನುವ ಒಳಾಭಿಲಾಷೆ ತುಡಿತಗಳಿರುವುದು ಅಷ್ಟೆ ನಿಜ. 
           ಹೀಗಿದ್ದಾಗ ಎಷ್ಟೆ ಇಲ್ಲವೆಂದರೂ ಪ್ರಜಾವಾಣಿ ಬಳಗ ಸೇರಿದಂತೆ  ತರಂಗ,ಸುದಾ, ಸಖಿ ಇತ್ಯಾದಿಗಳಲ್ಲಿ ಮತ್ತು ಇತ್ತೀಚೆಗೆ  ಕ್ವಾಂಟಿಟಿಯಿಂದಾಗಿ ಎಲ್ಲ ಹಿರಿ ಕಿರಿ ಬರಹಗಾರರನ್ನು ಆಪೋಶನವಾಗಿಸಿಕೊಂಡು ಹೆಸರು ಮಾಡಿದ ಕ. ಪ್ರ. ಗುಂಪಿನಲ್ಲಿ ಎಷ್ಟು ಜನ ಈ ಗಾದಿಸಾಹಿತಿಗಳು ಕಾಲಕಾಲಕ್ಕೆ ಕಾಣಿಸಿಕೊಂಡಿದ್ದಾರೆ...? ಒಂದೊಮ್ಮೆ ಹೆಸರು ಮಾಡಿ ಕೇವಲ ಸ್ಟೇಜಿಗೇ ಸೀಮಿತರಾಗಿ ಹೋದ, ಕಳೆದ ತಲೆಮಾರಿನ ಸಾಹಿತಿಗಳು ಕೂಡಾ ಇವತ್ತೂ ಎಷ್ಟು ಜನ ನಿರಂತರತೆಯನ್ನು ಉಳಿಸಿಕೊಂಡಿದ್ದಾರೆ...? ಇನ್ನು ದೊಡ್ಡದೊಂದು ಸನ್ಮಾನ ಮತ್ತು ಪ್ರಶಸ್ತಿ ಬರುತ್ತಿದ್ದಂತೆ ಬರೆಯುವುದನ್ನೇ ನಿಲ್ಲಿಸಿ ಬಿಟ್ಟ ಕಳೆದೆರಡು ದಶಕಗಳಿಂದಲೂ ಬರೆಯದೇ ಸಾಹಿತಿಯಾಗಿ ಚಲಾವಣೆಯಲ್ಲಿರುವವರು ಎಷ್ಟು ಜನ ಬೇಕು ನಿಮಗೆ..? ಇವರೆಲ್ಲರನ್ನೂ ಅವರ ಸಾಹಿತ್ಯಕ್ಕಿಂತಲೂ ಬರೆದದ್ದಕ್ಕಿ೦ತಲೂ ವ್ಯವಸ್ಥಿತವಾಗಿ ಮುಖ್ಯವಾಹಿನಿಯಲ್ಲಿ ಚಲಾವಣೆಯಲ್ಲಿಡಲಾಗಿದೆಯೇ ಹೊರತಾಗಿ ಇವತ್ತಿಗೂ ಅಮುಖ್ಯ ಎನ್ನಿಸುವ ಸರಿಯಾದ ಮೂರ್ತ ರೂಪವೇ ಇಲ್ಲದ ಬರಹಗಳನ್ನು ಕೇವಲ ಪ್ರಚಾರದ ರೂಪದಲ್ಲಿ ಸಾಹಿತ್ಯವನ್ನಾಗಿಸಿ ಅವರನ್ನು ಪ್ರಶಸ್ತಿಯತ್ತಲೂ ಎಳೆದ ಉದಾ. ನಮ್ಮ ಮುಂದಿವೆ. 
          ಒಂದು ಸಾಹಿತ್ಯವನ್ನು ಎಷ್ಟು ಚೆನ್ನಾಗಿ ಮತ್ತು ಅಷ್ಟೆ ಕೆಟ್ಟದಾಗಿ ವಿಮರ್ಶೆ ಮಾಡಲು ಸಾಧ್ಯವೆನ್ನುವುದು ಹೇಗೆ ಸತ್ಯವೋ ಇದನ್ನು ಬಳಸಿಕೊಂಡೇ ಕೆಲವರನ್ನು ತುಳಿದದ್ದೂ, ಕೆಲವರನ್ನೂ ಬೆಳೆಸಿದ್ದು ಇದೇ ಗುಂಪು ಎಂಬುವುದು ಸಾಹಿತ್ಯದ ಇತ್ತೀಚಿನ ವಿಪರ್ಯಾಸ. ಇತ್ತಿಚಿಗೆ ಬರಹಗಳಲ್ಲಿ ಎಷ್ಟು ಜನ ಇವತ್ತಿಗೂ ಸಾಹಿತ್ಯಿಕವಾಗಿ ಜೀವಂತವಾಗಿದ್ದಾರೆ ಎಂದರೆ ಉತ್ತರ ನಿರಾಶೆ ಮೂಡಿಸುತ್ತದೆ. ಹಳೆಯ ದಾಖಲೆಗಳು ಬರೆದ ಬರಹಗಳ ಮೌಲ್ಯವನ್ನು ನಾನು ಕಡಿಮೆ ಮಾಡುತ್ತಿಲ್ಲ ಅಥವಾ ಅವನ್ನು ಗಣಿಸಬಾರದು ಎಂದು ನಾನಿಲ್ಲಿ ಪ್ರತಿಪಾದಿಸುತ್ತಿಲ್ಲ. ಆದರೆ ಇವರೊಂದಿಗೆ ಪ್ರಸ್ತುತದಲ್ಲಿರುವ ಆದರೆ ಇವರ ಸಂಪರ್ಕಕ್ಕೆ ಬಾರದಿರುವ ಆದರೆ ಪ್ರಸ್ತುತ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಅವರನ್ನು ಒಪ್ಪಿಕೊಂಡಿರುವ, ಆದರಿಸುವ ಓದುಗರು ಇರುವವರನ್ನು ಯಾಕೆ ಪರಿಗಣಿಸಲಾಗುತ್ತಿಲ್ಲ..? ಅದಕ್ಕಾಗಿ ಅವರೆಲ್ಲಾ ಇವತ್ತು ಇವುಗಳೆಲ್ಲದಕ್ಕಿಂತಲೂ ವೇಗವಾಗಿ ಮತ್ತು ಉತ್ತಮವಾಗಿ ಟ್ಯಾಬ್ಲಾಯಿಡ್‌ಗಳ ಮುಖಾಂತರ ಓದುಗರನ್ನು ಆವರಿಸಿಕೊಂಡಿದ್ದಾರೆ. ಆಶ್ಚರ್ಯವೆಂದರೆ ಇವತ್ತಿನ ಕೆಲವು ಟ್ಯಾಬ್ಲಾಯಿಡ್‌ಗಳು ಸಮಾಜ ಮುಖಿಯಾಗಿ ಬೆಳೆಯುತ್ತಿದ್ದರೆ ರಾಜ್ಯದ ಪ್ರಮುಖ ಪತ್ರಿಕೆಗಳು ಮಾತ್ರ ಅದೇ ಮಡಿವಂತಿಕೆ ಪ್ರದರ್ಶಿಸುತ್ತಲೇ ಇವೆ. 
           ಸಮ್ಮೇಳನ ಅಥವಾ ಸಾಹಿತ್ಯದ ಚಟುವಟಿಕೆಗಳು ನಡೆಯುವ ಈ ಸಂದರ್ಭದಲ್ಲಿ ಆಯ್ಕೆ ಮಾಡುವಾಗ ಇವರು ಅನುಸರಿಸುವ ಮಾನದ೦ಡ ಯಾವುದು ಹಾಗಿದ್ದರೆ...? ಬರಿ ಅವರೊಂದಿಗಿನ ಒಡನಾಟವೊಂದೇ ಮಾನದಂಡವಾಗುವುದಾದರೆ ನಾನೂ ತುಂಬಾ ಚೆನ್ನಾಗಿ ಸಂಬಂಧವಿರಿಸಿಕೊಳ್ಳಬಲ್ಲೆ ಎನ್ನುತ್ತಾರೆ ಕೆಲವರು. ಇದೇ ಕಾರಣಕ್ಕೆ ಇವತ್ತು ಗಡಿ ಭಾಷೆ ಮೀರಿ ಜನಪ್ರಿಯತೆ ಪಡೆದಿರುವ ಯಂಡಮೂರಿಯವರನ್ನು ವ್ಯವಸ್ಥಿತವಾಗಿ ಪ್ರತ್ಯೇಕಿಸಿದಂತೆ ಆಯಾ ಕಾಲ ಘಟಕ್ಕೆ ಅನುಗುಣವಾಗಿ ಭೈರಪ್ಪನವರು ನೇಪಥ್ಯದತ್ತ ಸರಿದರು ಎನ್ನುವುದನ್ನು ಗುಟ್ಟಾಗಿ ಒಪ್ಪಿಕೊಳ್ಳುತ್ತಾರೆ ಆ ಕಾಲದ ಬರಹಗಾರರು. ಆದರೆ ಹೀಗೆ ಗುಂಪುಗಾರಿಕೆಯನ್ನು ಮೆರೆದ ಜ್ಞಾನಪೀಠಿಗಳ ಮಟ್ಟ ಎಷ್ಟು,..?  ಯಾಕೆಂದರೆ ಇಂತಹ ಗುಂಪುಗಾರಿಕೆ ಹಿಂದಿರಲಿಲ್ಲವೆಂದಲ್ಲ. ಭೈರಪ್ಪನ೦ಥವರು ಅದನ್ನು ಪೋಶಿಸಲಿಲ್ಲ ಅಷ್ಟೆ. 
       ತಮ್ಮ ಪಾಡಿಗೆ ಪತ್ರಿಕೆಗಳಿಗೆ ಬರೆದುಕೊಂಡಿದ್ಡು, ಪ್ರಕಾಶಕರು ಕಾಯ್ದು, ಪ್ರಕಟಿಸಿ ನಿಮ್ಮ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದರೂ ಕೂಡಾ ನೀವು ಅವರ ಕಣ್ಣಿಗೆ ಬೀಳದೆ ಗುಂಪಿನಲ್ಲಿ ಗೋವಿಂದಾ ಆಗಿಬಿಡುತ್ತೀರಿ. ಅಸಲಿಗೆ ಎಲ್ಲಾ ರೀತಿಯ ಪುಸ್ತಕ ಬರಹಗಾರರು ಇದರಲ್ಲಿ ಬರುವುದಿಲ್ಲ ಆ ಪ್ರಶ್ನೆ ಬೇರೆ. ಆದರೆ ಅಪ್ಪಟ ಕಥೆ, ಕಾದಂಬರಿ ಮತ್ತು ವಿಮರ್ಶೆ ಬರೆದುಕೊಂಡು ನಿರಂತರವಾಗಿ ಪ್ರಮುಖ ನಿಯತಕಾಲಿಕೆಗಳಲ್ಲಿ ಸ್ಥಾನ ಉಳಿಸಿಕೊಂಡಿರೋ ಎಷ್ಟೋ ಬರಹಗಾರರು ಇವತ್ತಿಗೂ ಅವರವರ ಸ್ಥಳದಲ್ಲೇ ಅಪರಿಚಿತರು. ಒ೦ದೋ ಅದಕ್ಕೆ ಕಾರಣ ಅವರೊಂದಿಗರು ಅವರನ್ನು ಉದ್ದೇಶಪೂರ್ವಕವಾಗಿ ಬೆಳೆಯಲು ಬಿಡದಿರುವುದು. ಇಲ್ಲ ಅಗತ್ಯ ಸಂದರ್ಭದಲ್ಲಿ ಹೆಸರನ್ನು ಸೂಚಿಸಬೇಕಾದವರು ಜಾಣ ಮೌನ ವಹಿಸಿಬಿಡುವುದರ ಮೂಲಕ ತಳ್ಳಿ ಬಿಡುವುದು. ಇದಕ್ಕೆ ಇನ್ನೊಂದು ಗುಂಪು ಕೂಡಾ ಕೆಲಸ ಮಾಡುತ್ತದೆ. ಇತ್ತೀಚೆಗೆ ಸಾಹಿತ್ಯಕ್ಕೆ ಸಂಗೀತ ಬೆರೆಸಿ ತಮ್ಮ ಹೆಸರು ಅದರಲ್ಲಿ ಸೇರಿಸಿಕೊಂಡು ಸಾಹಿತ್ಯದ ಗಂಧ ಗಾಳಿ ಇಲ್ಲದವರೂ ಅದರಲ್ಲಿ ಕೈಯ್ಯಾಡಿಸಿ ಸುದ್ದಿಗೆ ಬರುವುದು ಈ ಗುಂಪಿನ ಕ್ಷಮತೆ. ಸಂಗೀತದಲ್ಲಿ ಸಾಹಿತ್ಯದಲ್ಲಿ ಎರಡೂ ಇಲ್ಲದಿದ್ದರೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುವುದು. ಗೀತ-ಸಂಗೀತ. ಸಾಹಿತ್ಯ-ಗೀತ ಇತ್ಯಾದಿ ಗೋಷ್ಠಿಗಳು ಈ ಗುಂಪಿನವರ ಬಳುವಳಿಗಳು. 
        ಒಂದಷ್ಟು ತಮಗೆ ಬೇಕಾದ ಕವಿಯಿತ್ರಿಯರನ್ನು ಮೇಲೆ ಕೂಡಿಸಿ ಯಾರೊಬ್ಬ ಸಂಗೀತಗಾರನನ್ನು ಹಿಡಿದು ಅವರ ಕವನವನ್ನೇ ಹಾಡಿಸುವುದರ ಮೂಲಕ ಜನರ ಗಮನ ಸೆಳೆಯುವ ಜಾಯಮಾನ. ಇನ್ನು ಮುಂದೆ ಹೋಗುವವರು ಚಿತ್ರಗಳನ್ನೂ ಬರೆಸುತ್ತಿದ್ದಾರೆ. ಇವೆಲ್ಲ ಗುಂಪುಗಾರಿಕೆ ಹೊರತುಪಡಿಸಿದರೆ ಸೃಜನ ಶೀಲತೆಯನ್ನು ಹೊರ ಹೊಮ್ಮಿಸುವುದಾದರೂ ಹೇಗೆ...? ಕೆಲವರ ಪ್ರಶ್ನೆ. ಏಕೆಂದರೆ ಅಷ್ಟು ಮಾತ್ರದ ಪ್ರಸಿದ್ಧಿ, ಹೆಸರು, ಪಬ್ಲಿಸಿಟಿ ಬಿಟ್ಟು ಈಗಿನ ಬರಹಗಾರರು ಬದುಕುವುದಾದರೂ ಹೇಗೆ...? ಅದೆಲ್ಲಾ ಬೇಕೆಂದರೆ ಮತ್ತೇ ಗುಂಪುಗಾರಿಕೆ ಬೇಕೆ ಬೇಕಲ್ಲ...? ಮತ್ತೆ ಅದ್ಹೇಗೆ ಹಿಂದಿನ ತಲೆ ಮಾರಿನಂತೆ ಸೃಜನ ಶೀಲತೆ ಹೊರಹೊಮ್ಮೀತು...? ನನಗೆ ಅನುಭವಕ್ಕೆ ಮತ್ತು ಇಷ್ಟು ವರ್ಷಗಳ ಸಾಹಿತ್ಯ ಲ್ಕವನ್ನು ಕಂಡಂತೆ ಬರೆದಿದ್ದೇನೆ.. ಅನುಭವಿಗಳು, ಜ್ಞಾನಿಗಳು ನನ್ನನ್ನು ತಿದ್ದಬಹುದು. ಅದಕ್ಕೆ ಧಾರಾಳ ಅವಕಾಶ ಮತ್ತು ಸ್ವಾಗತ ಎರಡೂ ಇದೆ.  
      ಲಾಸ್ಟ್ ಬಿಟ್ : ಈಗಿನ ರೆಬೆಲ್ ಬರಹಗಾರರೆನ್ನಿಸಿಕೊಂಡ ಹೊಸ ಪೀಳಿಗೆಯ ಲೇಖಕರಾದರೂ ಈ ಸಂಪ್ರದಾಯವನ್ನು ಮುರಿದು ಹೊರಗೆ ಬರಲಿ. ಕೇವಲ ಬರಹದ ಮೂಲಕವೇ ಓದುಗರನ್ನು ತಲುಪುವ ಪ್ರಯತ್ನ ಮಾಡೋಣ. ಆ ದಿಶೆಯಲ್ಲಿಯೇ ನನ್ನ ಪ್ರಯತ್ನವಿದೆ ಆದ್ದರಿಂದಲೇ ನಾನಿವತ್ತಿಗೂ ಸಾಹಿತ್ಯಿಕವಾಗಿ ಯಾವ ಗುಂಪಿನೊಂದಿಗೂ ಗುರುತಿಸಿಕೊಂಡಿಲ್ಲ ಓದುಗರನ್ನು ಹೊರತು ಪಡಿಸಿ. ಕನಿಷ್ಟ ಹೀಗೆ ಬಹಿರಂಗ ಲೇಖನವಾಗಿಸಿ ಸಂದೇಶ ನೀಡಿದ ನಂತರವಾದರೂ ಆ ದಿಶೆಯಲ್ಲಿ ಪ್ರಯತ್ನ ಆರಂಭಗೊಂಡಲ್ಲಿ ಅಷ್ಟರ ಮಟ್ಟಿಗೆ ಸಾರಸ್ವತ ಲೋಕ ಬದುಕಿದೆ ಎಂದೇ ಅರ್ಥ.


Monday, August 5, 2013

ಅವಳಿಗಾಗಿ ಯಾರನ್ನು ಕೂಗಲಿ ....?

( ಅಂದಿನಿಂದಲೂ ಸಣ್ಣ ಸಣ್ಣ ಕೆಂಪು ಹೂವಿನ ಅಂಗಿಯ ಪುಟ್ಟ ಹುಡುಗಿ ಬಿಸಿಲಿಗೆ ಮುಂಗುರುಳ ಹಾರಿಸುತ್ತಾ, ಹಸಿವಿನ ಕಂಗಳಿಂದ ಸಂಜೆಯ ಆಸೆಗಳಿಗೆ ಈಡಾಗುತ್ತಾ ಕಟ್ಟಿಗೆಗೆ ಕಾಡು ನುಗ್ಗುವುದು ಕಾಣಿಸುತ್ತಲೇ ಇದೆ. ಕೈಗೆ ಸಿಕ್ಕಷ್ಟು ನೋಟು-ಚಿಲ್ಲರೆಗಳನ್ನು ಅದರ ಕೈಗಿಟ್ಟು ಬಂದಿದ್ದೆ. ಎದೆಯೊಳಗೆನೋ ಅರ್ಥವಾಗದ ಮುಳ್ಳು ಮುರಿದ ಸಂಕಟ )

ಬಾಲ್ಯ ಮತ್ತು ಹಳ್ಳಿಯ ಜೀವನ ಬೆರಗು, ಭಯ, ಅದ್ಭುತ, ಎಂಜಾಯೇಬಲ್ ಅನ್ನಿಸಿದಷ್ಟು ಬೇರಾವುದೂ ನನಗನ್ನಿಸಿಲ್ಲ. ಬಾಲ್ಯದ ಹುಡುಗಾಟಗಳು, ನಾಳಿನ ಯೋಚನೆಗಳಿಲ್ಲದ, ಮುಲಾಜಿಲ್ಲದ, ಮರ್ಜಿ ಕಾಯಬೇಕಿಲ್ಲದ, ಊರ ಹೊರಗಿನ ತೋಪಿನಿಂದ ಹಿಡಿದು, ಸ್ಮಶಾನದ ಗೋರಿಯ ಬೆನ್ನಿನವರೆಗೂ ನಮ್ಮದೇ ಆಟದ ಆಡ್ಡೆಗಳು. ಅದರಲ್ಲೂ ಮಲೆನಾಡಿನ ಮನೆಗಳಲ್ಲಿ ಕಳೆಯುತ್ತಿದ್ದ ದಿನಗಳು ನನ್ನನ್ನು ಹಸಿರಾಗಿಟ್ಟಿವೆ.
ಆ ಸೆಳೆತವೇ ಈಗಲೂ ನನ್ನನ್ನು ಪದೇ ಪದೇ ಹಳ್ಳಿಗೆ, ಅಲ್ಲಿನ ಮಣ್ಣಿನ ವಾಸನೆಗೆ ತೆರಳುವಂತೆ ಮಾಡುತ್ತಲೇ ಇವೆ. ಎಂದಿಗೂ ಮುಗಿದ ನೆನಪುಗಳ ಸರಮಾಲೆ ಎನ್ನುವುದಕ್ಕಿಂತಲೂ ಅನುಭವಿಸಿದ ಹಸಿರಿನ ಕ್ಷಣ ಉಸಿರು ಕೂಡಾ ಇವತ್ತಿಗೂ ನನ್ನನ್ನು ಹಳ್ಳಿಗಳ ಮೋಹಿಯನ್ನಾಗಿಸಿದ್ದು ಸುಳ್ಳಲ್ಲ. ತೀರ ಸ್ಟಾರ್ ಹೋಟೇಲ್ ಒಂದರ ಸುವಾಸನೆಯ ಕೋಣೆಯಲ್ಲಿ ಹಿತವಾದ ಏ.ಸಿ. ಹೊಟ್ಟೆ ಬೀರಿಯುವಂತೆ ಊಟ, ಡ್ರಿಂಕ್ಸು.. ಏಲ್ಲವೂ ಇದ್ದರೂ ಅಂತಹ ಅನುಭವಗಳಿಗೆ ಐಚ್ಛಿಕ್ಕವೋ, ಅನೈಚ್ಛಿಕ್ಕವೋ ಹಲವು ಬಾರಿ ಈಡಾಗಿದ್ದರೂ ರಾತ್ರಿ ತಲೆ ಕೊಟ್ಟೊಡನೆ ಬೆಳಿಗ್ಗೆವರೆಗೂ ನಿದ್ರೆ ಎನ್ನುವುದನ್ನು ಸುಖವಾಗಿ ಅಂತಲ್ಲಿ ಅನುಭವಿಸಿದ್ದೇ ಇಲ್ಲ.
ಅದೇನಿದ್ದರೂ ಒಂದೋ ನನ್ನ ಮನೆಯಲ್ಲಿ, ಇಲ್ಲ ತೀರಾ ಕಟ್ಟಾನು ಕಾನಿನ ಮೂಲೆಯ ನನ್ನ ಬೈಕು ಮಾತ್ರ ತೂರಿ ಹೋಗುವ ಕಾಲ್ದಾರಿಯ ಕೊಟ್ಟಕೊನೆಯ ಹಳ್ಳಿಗಳಲ್ಲಿ, ಅದರ ಹುಲ್ಲು ಗೊಣಬೆಯ ಮಾಳದ ಮೇಲಾದರೂ ಸರಿನೇ, ಕೊನೆಗೆ ಹಿನ್ನೀರ ಮಧ್ಯದ ಕಡಲ ದಂಡೆಯಾದರೂ ಸರಿನೇ, ಅಲ್ಲಿ ಇರುವ ಸಣ್ಣ ಹೊರಸು, ಗುಡಿಸಲಿನಂತಹ ಮನೆ, ನಾಲ್ಕಾರು ಆತ್ಮಿಯರು, ಅದರಲ್ಲೊಬ್ಬರು ಹಿರಿಯರು, ಬೇಕೆಂದಾಗ ಎಳೆನೀರು, ಪಕ್ಕ ಸಮುದ್ರ ಕುತ್ತಿಗೆಯ ಕೆಂಪು ಬಾಯಿ ಮೀನುಗಳು, ತಪ್ಪಲೆಯಲ್ಲಿ ಗಂಜಿ.
ಉಳಿದ ಕಡೆಯಲ್ಲಾದರೆ ಅವರ ಮನೆಗಳಲ್ಲಿ ಮಾಡಿನ ಮೇಲೆ ಒಂದೇ ಸಮನೇ ಇಲಿ ಕರ ಕರನೆ ಕೊರೆಯುವ ಸದ್ದಿನ ನಡುವೆಯೂ, ಆಗೀಗ ಕಡಿದು ಹಾಕುವ ಕಾಡು ಹುಳಗಳ ನಡುವೆಯೂ ನಿದ್ರೆ ಮತ್ತು ಅಲ್ಲಿ ಅವರ ಮನೆಗಳಲಿ ಸಿಗುವ ಸೀದಾ ಸಾದಾ, ಆದರೆ ಮನೆ ಮಂದಿಯೆಲ್ಲ ಕುಳಿತು ಉಣ್ಣುವ ಲೋಕಾಭಿರಾಮ ಕಪಟವಿಲ್ಲದ ಮಾತಿನ ನಗು, ಹರಟೆಯ ನಡುವೆ ಒಂಡೆದ್ದು ಕಣ್ತುಂಬಾ ನಿದ್ರೆ ಮಾಡುವ ಹಳ್ಳಿಗಳ ಜೀವನವನ್ನು ಹುಡುಕಿಕೊಂಡು ಹೋಗಿ ದಿನಗಟ್ಟಲೇ ಇದ್ದು ಬರುವುದೂ ಸುಳ್ಳಲ್ಲ. ಹಾಗಾಗೇ ನನ್ನ ಬರಹ ಮತ್ತು ಬದುಕಿನ ಹಲವು ಮಜಲುಗಳಿಗೆ ಪ್ರೇರಣೆ ಆ ಜೀವನಾನುಭವವೇ ಹೊರತು ಬೇರೇನಲ್ಲ. ಆಗೀನ ಬಾಲ್ಯದ ಶ್ರೀಮಂತಿಕೆ, ಕಳೆದ ದಿನಗಳ ನಾಸ್ಜಾಲಿಯಾಗಳೆಡೆಗೆ ಕಣ್ಣು ಹೊರಳುವಂತೆ ಮಾಡಿದ್ದು ಮೊನ್ನಿನ ಸಣ್ಣ ಘಟನೆ.
ಯಾವುದೋ ಕೆಲಸದ ನಿಮಿತ್ತ ನಾಲ್ಕಾರು ವರ್ಷಗಳಿಂದ ಅಣಿಶಿಯ ಕಾಡಿನಲ್ಲಿ ಕಾಲಿಡದವನು ಅನಿವಾರ್ಯವಾಗಿ ನನ್ನ ಕಾರನ್ನು ಹೊರಗೆಳೆದು ಹೂಳು ದಾರಿಯಲ್ಲಿ ಹತ್ತಿಸಬೇಕಾಗಿತ್ತು. ಅವಡುಗಚ್ಚಿ ಚಕ್ರ ತಿರುವಬೇಕಾದ ರೀತಿಯಲ್ಲಿ ಹೊಂಡಗಳಿಂದ ಗಬ್ಬೆದ್ದು ಹೋಗಿರುವ ಆ ರಸ್ತೆ, ಅಧ್ವಾನ್ನಗಳ ಮಧ್ಯೆಯೂ ನನ್ನನ್ನು ಆಗೀಗ ಉಲ್ಲಸಿತನನ್ನಾಗಿಸುವುದೆಂದರೆ ಪ್ರವಾಸ ಮತ್ತು ಬೆಳ್ಳಂಬೆಳಿಗ್ಗೆ ಕಾಡು ದಾರಿಯಲ್ಲಿ ಸಾಗುವ ಡ್ರೈವಿಂಗು ಮಾತ್ರವೇ.
ಮೊನ್ನೆ ಹಾಗು ಹೀಗೂ ಅನಾಹುತಕಾರಿ ಹೊಂಡಗಳ ಅಣಶಿಯ ಮುಖ್ಯ ರಸ್ತೆಯ ಬದಲಾಗಿ ಉಳವಿಯ ಕಾಡಿನಲ್ಲಿ ಕಾರು ತಿರುಗಿಸಿ ಹಳಿಯಾಳದ ಕಡೆಗೆ ಸರಿದು ಹೋಗಿದ್ದೆ. ಜೋಯಿಡಾ, ಡಿಗ್ಗಿ, ಕರನ್‌ಜೋಯಿಡಾ, ಆ ಕಡೆಯ ಸಾಂಬ್ರಾಣಿ, ಭಗವತಿ, ದಾಂಡೇಲಿಯ ಆಸು ಪಾಸಿನ ಕಾಡುಗಳು ನನಗೆ ಮುಂಚಿನಿಂದಲೂ ಅಪ್ಯಾಯಮಾನ ಸ್ಥಳಗಳೆ. ಹಾಗಾಗಿ ಸಣ್ಣನೆ ಸಿಳ್ಳು ಹೊಡೆದುಕೊಂಡು, ಅಲ್ಲೇ ರಸ್ತೆ ಬದಿಯಲ್ಲೊಮ್ಮೆ ಅರ್ಧ ಕಪ್ಪು ಬಿಸಿ ಬಿಸಿ ಟೀ ಕುಡಿದು ಇನ್ನು ದಾಂಡೇಲಿ ಕಣ್ಣು ಬಿಡುವ ಮುಂಚೆ ಕಾಳಿ ನದಿಯ ಮಗ್ಗುಲಲ್ಲಿ ನಿಂತುಕೊಡಿದ್ದೆ ಸುಮ್ಮನೆ ಅದರ ಶಬ್ದ ಕೇಳುತ್ತಾ.
ನಂತರದ್ದು ಎಂದಿನಂತೆ ದಿನವಹಿ ಕಾರ್ಯಗಳು, ವಾಹನಗಳ ಧೂಳು, ಪೇಪರ್ ಮಿಲ್ ವಾಸನೆ, ಆತ್ಮೀಯ ಸ್ನೇಹಿತರ ಹಿಂಡು, ಎದುರಿಗೆ ಜನ, ದನ, ವಾಹನ, ಬೈಸೈಕಲ್ಲು ಭರಾಟೆ ಎಲ್ಲದ ಮಧ್ಯೆ ಅಲ್ಲಲ್ಲಿ ನಿಂತುಕೊಂಡು ನನ್ನ ಕೆಲಸ ಮುಗಿಸಿ ಮಿತ್ರ ಹಿಂಡಿನೊಂದಿಗೆ ಸಟ್ಟ ಸರಹೊತ್ತಿನ ರಣ ಬಿಸಿಲಿನ ಝಳಕ್ಕೆ ಈಡಾಗುತ್ತಾ ತಂಪಾಗಲು ಬೀಯರು, ಹಿಂದಿರುಗಿ ಕಾಡು ರಸ್ತೆಗೆ ಕಾಲಿಟ್ಟು ಇನ್ನೇನು ಅಣಶಿಯ ತೆಕ್ಕೆ ಸೇರಿಕೊಳ್ಳಬೇಕು. ಉಳವಿ ರಸ್ತೆ ತಿರುವಿನ ನಂತರ ನಾಲ್ಕಾರು ಕೀ.ಮಿ. ದಾಟಿ ಖಾಮ್ಸೆತಡಿಗಿಂತಲೂ ಮುಂಚೆ ಕಟ್ಟಾನು ಕಾಡಿನ ಪಕ್ಕದಲ್ಲಿ ನಿಲ್ಲಿಸಿದೆ. ನೀರು ಕುಡಿದು ಇನ್ನೇನು ತಿರುಗ ಬೇಕು, ಕಾಡಿನ ಅಂಚಿನಿಂದ ಚರ ಪರ ಸದ್ದು. ತಿರುಗಿದೆ.
ತೀರ ಪುಟ್ಟ ಪುಟ್ಟ ಕೈಗಳ ಪಿಳಿ ಪಿಳಿ ಕಣ್ಣಿನ ಪುಟ್ಟ ಹುಡುಗಿ, ಕೈಗಳಲ್ಲಿ ಸಣ್ಣ ಸಣ್ಣ ಕಟ್ಟಿಗೆ ತುಂಡುಗಳನ್ನು ಹಿಡಿದು ಬರಿಗಾಲಲ್ಲಿ ಈಚೆಗೆ ಬಂದು ಅಷ್ಟು ದೂರದಲ್ಲಿದ್ದ ಆಗಲೇ ಸೇರಿದ್ದ ರಾಶಿಗೆ ಸೇರಿಸುತ್ತಿತ್ತು. ಮತ್ತೊಮ್ಮೆ ಕಾಡಿನೊಳಗೆ ಹೋಗಿ ಮತ್ತೆ ಹದಿನೈದು ನಿಮೀಷದಲ್ಲಿ ಹಿಂದಿರುಗಿದ್ದಳು ಆ ಹುಡುಗಿ. ಸಟ್ಟ ಸರಹೊತ್ತಿನ ಮಧ್ಯಾನ್ಹ, ಕಾಡೆಂದರೆ ಕಾಡು, ಬಿರು ಬಿಸಿಲಿನ ಮೂರೂವರೆ, ಶಾಲೆಯೋ ಮನೆಯಲ್ಲಿ ಅಮ್ಮನೊಂದಿಗೆ ಇರಬೇಕಿದ್ದ ಮಗು ಕಟ್ಟಿಗೆ ಆಯುತ್ತಿತ್ತು.
" ಏನಮ್ಮ ಒಬ್ಬಳೆ ಕೆಲಸ ಮಾಡುತ್ತಿದೀಯಾ. ನಿನ್ನ ಹೆಸರೇನು ..? " ಎಂದೆ. ಆಗಿದ್ದಿಷ್ಟು. ಮಗು ಎರಡನೆಯ ತರಗತಿ ಓದುತ್ತಿದೆ. ಆದರೆ ಅನಿವಾರ್ಯದ ಕೆಲಸಗಳ ನಿಮಿತ್ತ ಹೆಚ್ಚಿನ ದಿನಗಳನ್ನು ಅಮ್ಮನೊಂದಿಗೆ ಕಾಡಿನಲ್ಲೇ ಬಿರು ಬಿಸಿಲಿನಲ್ಲಿ ಕಳೆಯುತ್ತಿದೆ. ಅಮ್ಮ ದಿನಗೂಲಿಯ ಲೆಕ್ಕದಲ್ಲಿ ಕಾಡಿನ ದರಗಲನ್ನು ಆರಿಸಿ ಒಟ್ಟು ಮಾಡಿ ತಂದು ತುಂಬಿಸಿ ದಿನಕ್ಕೆ ನಲ್ವತೈವತ್ತು ರೂಪಾಯಿ ದುಡಿಯುತ್ತಾಳೆ. ಆ ಹೊತ್ತಿನಲ್ಲಿ ಮಗು ಸಣ್ಣ ಪುಟ್ಟ ಕಟ್ಟಿಗೆ ಆರಿಸಿ ಆರಿಸಿ ತಂದು ರಸ್ತೆ ಪಕ್ಕದಲ್ಲಿ ಗುಡ್ಡೆ ಹಾಕಿ ಇಡುತ್ತೆ. ನಾಲ್ಕು ಗಂಟೆಯ ಹೊತ್ತಿಗೆ ಅಮ್ಮ ಬಂದು ದರಗಲು ಮುಟ್ಟಿಸಿ, ಕಟ್ಟಿಗೆ ಗಂಟಿಗೆ ಕೈಯಿಡುತ್ತಾಳೆ. ತಾಯಿ ಮಗಳಿಬ್ಬರು ನಡೆದು ಹೋಗುತ್ತಾರೆ.
" ದಿನಕ್ಕೆ ಅಮ್ಮಂಗೆ ಕೂಲಿ ಸಿಗ್ತದೆ. ಆದ್ರೆ ಕಟ್ಟಿಗೆ ಒಳ್ಳೆಯದಿಲ್ಲಾಂದ್ರೆ ರಾತ್ರಿ ಬ್ಯಾಗ್ನೇ ಅಡಿಗೆ ಆಗೋದಿಲ್ಲ. ನ೦ಗೆ ಹಸಿವಾಗಿರ್ತದೆ. ಅದ್ಕೆ ನಾನು ಅಮ್ಮ ಬರೋ ಹೊತ್ತಿಗೆ ಒಣ ಕಟ್ಟಿಗೆ ಆರಿಸಿ ಇಡ್ತಿನಿ. ಅಮ್ಮ ಕೆಲ್ಸ ಮುಗ್ಸಿ ಸಂಜೆ ಬೇಗ ಹೋಗಿ ಬೆಂಕಿ ಹಾಕಿದ್ರೆ ಬೇಗ ಅಡ್ಗೆ ಆದ್ರೆ ನಂಗೆ ಊಟಾ ಬೇಗ ಸಿಗ್ತದೆ.." ಮನಸ್ಸಿನಾಳದಲ್ಲೆಲ್ಲೋ ಒಮ್ಮೆ ಛುಳ್ ಎಂದು ಬಿಟ್ಟಿತು. ಇವತ್ತೀಗೂ ನನ್ನನ್ನು ಕಲಕುತ್ತಿರುವ ಧ್ವನಿ ಅದು. ಬೆಳಗಿನಿಂದ ಸಂಜೆಯವರೆಗೂ ಹೀಗೆ ಕೆಲಸ, ಮನೆಯೆಡೆಗಿನ ಕಕ್ಕುಲಾತಿ, ಅದರ ಮೇಲೆ ಹಸಿವು ಅದೂ ಗಂಜಿಯಾದರೂ ಒಂಚೂರು ಬೇಗ ಸಿಗುವುದಾದರೆ ಸಿಗಲಿ ಅದಕ್ಕೆ ಒಣ ಕಟ್ಟಿಗೆ ಆರಿಸಿ ಗುಡ್ಡೆ ಹಾಕುತ್ತಿದೆ ಮಗು. ಮಗುವನ್ನೊಮ್ಮೆ ನೋಡಿದೆ ಛೆ ಎನ್ನಿಸಿತು. ಶಾಲೆ ಎಂದೆ..?.
" ನಾನು ವಾರಕ್ಕೆರಡೆ ಸರ್ತಿ ಹೋಗ್ತೇ. ಬಾಕಿ ಸರ್ತಿ ಒಂದೆರಡು ದಿನಾ ನಾಯ್ಕ ಮಾಸ್ತರು ಮನೆಗೇ ಬಂದು ಹೇಳಿಕೊಡ್ತಾರೆ.." ನಿಜಕ್ಕೂ ಧನ್ಯ ಆ ಮಾಸ್ತರ ಜೀವನ. ಅಂದಿನಿಂದಲೂ ಸಣ್ಣ ಸಣ್ಣ ಕೆಂಪು ಹೂವಿನ ಪುಟ್ಟ ಹುಡುಗಿ ಬಿಸಿಲಿಗೆ ಮುಂಗುರುಳ ಹಾರಿಸುತ್ತಾ, ಸಣ್ಣ ಹಸಿವಿನ ಕಂಗಳಿಂದ ಸಂಜೆಯ ಆಸೆಗಳಿಗೆ ಈಡಾಗುತ್ತಾ ಕಟ್ಟಿಗೆಗೆ ಕಾಡು ನುಗ್ಗುವುದು ಕಾಣಿಸುತ್ತಲೇ ಇದೆ. ಕೈಗೆ ಸಿಕ್ಕಷ್ಟು ನೋಟು-ಚಿಲ್ಲರೆಗಳನ್ನು ಅದರ ಕೈಗಿಟ್ಟು ಬಂದಿದ್ದೆ. ಎದೆಯೊಳಗೆನೋ ಅರ್ಥವಾಗದ ಮುಳ್ಳು ಮುರಿದ ಸಂಕಟ. ಊಟದಿಂದ ಹಿಡಿದು ನೀರು ಕುಡಿಯುವಾಗಲೂ ಮಗುವಿನ ಮುಖ ನೆನಪಾದರೆ ಗಂಟಲು ಕಟ್ಟದೇ ಇನ್ನೇನು ಮಾಡೀತು. ಎಲ್ಲಿದ್ದೇವೆ ನಾವು..? ಬೆಚ್ಚನೆ ಗೂಡು, ಮಧ್ಯಾನ್ಹ ಶಾಲೆ ಊಟ, ಪುಕ್ಕಟೆ ಸೈಕಲ್ಲು ಯಾವಾಗ ಆ ಮಗುವಿಗೆ ತಲುಪೋದು...? ಯಾರಿಗೆ ಕೂಗಲಿ.

ಅವರ ಕೊನೆಯ ಆಸೆಗಳು ನನಗೆ ಗೊತ್ತಾಗಲೇ ಇಲ್ಲ...!

ಪಾಪ ಒಂದು ದಶಕಕ್ಕೂ ಹೆಚ್ಚಿನ ಕಾಲ ಒಬ್ಬಂಟಿಯಾಗಿ ಕಳೆದು ಹೋದ ಆ ಹಿರಿಯ ಜೀವಕ್ಕೆ ಏನು ಹೇಳಿಕೊಳ್ಳುವುದಿತ್ತೋ...? 

ಆ ದಿನಗಳಲ್ಲಿ ನಾನು ವಿಪರೀತ ಕೋಪಕ್ಕೆ ಬೀಳುತ್ತಿದ್ದೆ. ಅದರಲ್ಲೂ ದಿನಾ ರಾತ್ರೆಯಿಡೀ ಕಂಪ್ಯೂಟರ್ ಮುಂದೆ ಕೂತು ಡ್ರಾಯಿಂಗುಗಳನ್ನು ಮಾಡಿ ಅದರದ್ದೇ ಲೈನುಗಳು ತಲೆಯಲ್ಲಿ ಕದಲುತ್ತಿರುವಾಗಲೇ ಎಂ. ಜಿ. ರೋಡ್ ಆಚೆಗೆ ಶಿವಾಜಿನಗರದ ಚೌಕಿನಿಂದ ಆಚೆಗೆ ಸರಿದು ರೂಮಿಗೆ ಬಂದು ಬಿದ್ದರೆ ಎಚ್ಚರವಾಗುತ್ತಿದ್ದುದು ಮಧ್ಯಾನ್ಹದ ಐದು ಗಂಟೆಗೆ ಹಾಸ್ಟೆಲ್ ಆವರಣದಲ್ಲಿ ಟ್ರೇನಿಂಗ್ ಹುಡುಗರು ಬಂದು ಗಿಜಿಗಿಜಿ ಶುರು ಮಾಡಿದಾಗಲೇ. ಅದಕ್ಕೂ ಭಯಂಕರವಾಗಿ ಬೊಬ್ಬಿರಿಯುತ್ತಿದ್ದುದೆಂದರೆ ಯಮ ಹಸಿವು. ಬೆಳ್ಳಿಗೆ ಪಕ್ಕದ ಕಾಕಾನ ಹೊಟೇಲ್ ಭಾರತ ರೆಸ್ಟೋರಾಂಟಿನಲ್ಲಿ ಪರಾಟಾ ತಿಂದು ಮಲಗಿದವನಿಗೆ, ಹಸಿವು ಆ ಹೊತ್ತಿಗೆ ಏನೂ ಆಗಬಹುದೆನ್ನುವಂತಹ ಹಪಾಹಪಿಯನ್ನು ತಂದಿಟ್ಟಿರುತ್ತಿತ್ತು. ಪಕ್ಕದಲ್ಲಿ ನನಗಿಂತಲೂ ಜೋರಾಗಿ ನಿದ್ರೆ ತೆಗೆಯುತ್ತಿದ್ದ ಬಸವನ ಲುಂಗಿ ಒಂದು ಕಡೆ ತಾನೊಂದು ಕಡೆಯಾದರೆ ಅವನ ಪಕ್ಕದಲ್ಲಿ ಮಲಗಿರುತ್ತಿದ್ದ ತಿಪ್ಟೂರು ರವಿಗೆ ಬಾಯಿಯಲ್ಲಿ ಆಗ್ಲೇ ನೊಣವೊಂದು ಸಂಸಾರ ಹೂಡಿ, ಹೊರಡುವ ತಯಾರಿಯಲ್ಲಿದ್ದುದೂ ಗೊತ್ತಾಗದಷ್ಟು ಯಮ ನಿದ್ರೆ. ಅವರಿಬ್ಬರ ಬುಡಕ್ಕೊಂದು ಒದೆ ಒದ್ದು ಬ್ರಶ್ಶು, ನೀರು ಹುಡುಕುವಾಗ ಅಡರುತ್ತಿದ್ದ ಆಗೀನ ಬೆಂಗಳೂರು ಚಳಿ ಹೊರಬೀಳುವ ಮುನ್ನ ಜಾಕೆಟ್ಟು ಹುಡುಕುವಂತೆ ಮಾಡುತ್ತಿತ್ತು. 
     ಹಾಗೆ ಹೊರಟು ಎಂ.ಈ.ಎಸ್. ರೋಡಿನ ಕೊನೆಯ ಬಾರಿನಲ್ಲಿ ಕುಳಿತು ಇಷ್ಟಿಷ್ಟು ಬೀಯರು ಕುಡಿದು, ಮಿಲ್ಟ್ರಿ ಕ್ಯಾಂಟಿನಿನಲ್ಲಿ ಅವರಿಬ್ಬರು ಹೊಂತೆ ತಿಂದರೆ, ನನ್ನದು ಮಾತ್ರ ಅದೇ ಒಣಕಲು ಚಪಾತಿ ಮತ್ತು ಮೊಟ್ಟೆ ಸಾರಿನ ಸುಗ್ಗಿ ಜಾಲಹಳ್ಳಿಯ ರಾಘವೆಂದ್ರ ಭವನದಲ್ಲಿ. ಹಾಗೆ ಕುಳಿತಾಗಲೇ ಅದೊಂದಿನ ಅವರು ಪರಿಚಯವಾಗಿದ್ದು. ಆ ದಿನ ಶನಿವಾರವಾದ್ದರಿಂದ ಕುಡುಕರ ನಿಯಮದಂತೆ ಕೊಂಚ ಹೆಚ್ಚೇ ಕುಡಿದು, ಇನ್ನೇನು ಉಂಡು ಮುಗಿಯಬೇಕು ಮಾಣಿ ಇದ್ದಕ್ಕಿದ್ದಂತೆ "...ಸಾರ್ ಚಪಾತಿ ಖಾಲಿ..." ಅಂದು ಬಿಡಬೇಕೆ. ಸಮಯ ನೋಡಿಕೊಂಡೆ ಆಗಿನ್ನು ಎಳೂ ಮುಕ್ಕಾಲು ಆಗಿಲ್ಲ. ಅಸಲಿಗೆ ಅದು ತುಂಬಾ ಚಿಕ್ಕ ಹೊಟೇಲು. ದಿನಕ್ಕೆ ಇಪ್ಪತ್ತು ಊಟ ಹೋದರೆ ಜಾಸ್ತಿ. ಅದಕ್ಕಾಗಿ ಲಿಮಿಟೆಡ್ಡು ಪ್ರಿಪರೇಶನ್‌ನಲ್ಲಿ ಅವನಿದ್ದರೆ ನನಗೆ ಉರಿ ಉರಿ. ಬಾಯಿಗೆ ಬಂದದ್ದು ಕಕ್ಕಿ ಅವನನ್ನು ಸಿಗಿದು ಬಿಡುವ ಕೋಪದಲ್ಲಿ ಕೂಗಾಡುತ್ತಿದ್ದರೆ ಆಚೆ ಟೇಬಲ್ಲಿಗೆ ಕುಳಿತಿದ್ದ ವೃದ್ಧರೊಬ್ಬರು ತಣ್ಣಗೆ, " ಯಾಕಪ್ಪಾ ಚಪಾತಿ ತಾನೆ ಇದು ತೊಗೊ... " ಎನ್ನುತ್ತಾ ತಮಗೆಂದು ತಂದಿರಿಸಿದ್ದ ತಟ್ಟೆಯನ್ನು ನನ್ನೆದುರಿಗೆ ತಳ್ಳಿ ಕೈ ತೊಳೆದು ನಡೆದುಬಿಟ್ಟಿದ್ದರು. ಕುಳಿತಲ್ಲೇ ನಾನು ನೀರಾಗಿದ್ದೆ.
       ಮುಂದಿನ ಕೆಲವೇ ದಿನಗಳಲ್ಲಿ ನನ್ನ ಅವರ ಮಧ್ಯೆ ಬೆಳೆದ ಬಾಂಧವ್ಯ, ವಯಸ್ಸು ಹೊರತು ಪಡಿಸಿ ಅವರು ಎಲ್ಲದರಲ್ಲೂ ಅಪ್ಪಟ್ಟ ಹೆಗಲು ತಬ್ಬಿ ನಡೆವ ಸ್ನೇಹಿತನಂತೆ. ವಯಸ್ಸಿನಲ್ಲಿ ಮಾತ್ರ ಬಹುಶ: ಅವರಿಗಾದ ಜೀವನಾನುಭವದ ಅರ್ಧದಷ್ಟು ನನಗಾಗಿರಲಿಲ್ಲ. ಈ ವಿಷಯದಲ್ಲಿ ನಾನು ನಿಜಕ್ಕೂ ಅದೃಷ್ಟ ಶಾಲಿಯೋ ಅಥವಾ ಒಂದು ರೀತಿಯಲ್ಲಿ ವಿಚಿತ್ರ ಪ್ರಾಣಿನೋ ಗೊತ್ತಿಲ್ಲ. ಮೊದಲಿನಿಂದಲೂ ಇವತ್ತಿನವರೆಗೂ ನನ್ನ ಗಾಢ ಗೆಳೆತನ ಎನ್ನುವುದು ಏನಿದ್ದರೂ ತೀರ ವಯಸ್ಸಾದ ಜೀವಗಳೊಂದಿಗೆ ಹೆಜ್ಜೆ ಹಾಕಿ ಬೆಳೆದದ್ದೇ. ಹಾಗೆ ಎಲ್ಲಾ ಹಿರಿಯರೂ ಕೂಡಾ ತೀರ ಪಕ್ಕದ ವಯಸ್ಸಿನ ಹುಡುಗರಂತೆ ನನ್ನ ಪರಿಗಣಿಸಿದರು ಆನ್ನೋದು ಇವತ್ತಿಗೂ ವಿಸ್ಮಯಕಾರಿನೇ.
        ಮೊದಮೊದಲಿಗೆ ತೀರ ಚಿಕ್ಕವನಾಗಿದ್ದಾಗ ನಾಲ್ಕನೆಯತ್ತೆ ದಾಟದ ನಾನು ಮಧ್ಯಾನ್ಹದ ಉರಿ ಬಿಸಿಲಲ್ಲಿ ಬ್ಯಾಣಕ್ಕೆ ಬೆಂಕಿ ಇಕ್ಕಲು, ಅಗಳದ ಮಧ್ಯೆ ಕಟ್ಟಿಕೊಂಡಿದ್ದ ಹೆಜ್ಜೇನು ಹುಡುಕಲು ಕಂಬಳಿ ಗೊಪ್ಪೆ ಹಾಕಿಕೊಂಡು, ಕೊನೆಗೆ ಏನಿಲ್ಲವೆಂದರೂ ಪೇರು, ಮುಳ್ಳಣ್ಣು, ಹಲಸಿನಣ್ಣು, ಪನ್ನಿರಲ ಕಿತ್ತಲು, ಕೊನೆಗೆ ಕಾನಿನಲ್ಲಿ ಬಿಳಲು ತರಲು, ಗೂಟ ಕಡಿದುಕೊಂಡು ಬರಲೆಂದು ಅಕ್ಷರಶ: ನನ್ನ ಮೂರರಷ್ಟು ಹೆಚ್ಚಿನ ವಯಸ್ಸಿನ ಸೋದರ ಮಾವನೊಂದಿಗೆ, ನನ್ನ ಸಮ ಸಮಕ್ಕೆ ಬರುತ್ತಿದ್ದ ಹಿಡಿಗತ್ತಿಯನ್ನು ಎಳೆಯುತ್ತಾ ಹೊರಟಿರುತ್ತಿದ್ದೆ. ಹಾಗೆ ಸರಿ ಸುಮಾರು ಇಪ್ಪತ್ತೈದು ವರ್ಷ ಕಳೆದರೂ ಹಳೆಯದನ್ನು ನೆನೆಸಿಕೊಳ್ಳುತ್ತಾ ಮಾತಿಗೆ ಕುಳಿತರೆ ಮಾವ ಈಗಲೂ ಅದೇ ಹರೆಯದ ಮಲೆನಾಡಿನ ಹುಲಿಯೇ. ನಂತರದಲ್ಲಿ ನನ್ನೊಂದಿಗೆ ಎರ್ಡ್ಮೂರು ವರ್ಷ ಸೇವೆಯ ಆರಂಭದ ದಿನದಲ್ಲಿ ಹೆಜ್ಜೆ ಹಾಕಿದ ಪವಿತ್ರನ್ ಎಂಬ ಜೀವ ಕೂಡಾ ಕನಿಷ್ಟ ಎರಡು ದಶಕದಷ್ಟು ಹಿರಿತನದ್ದು. ಅಲ್ಲಿಂದ ಮತ್ತೆ ತಿರುಗಣಿ ತಿರುಗಿ ಇದೇ ಉ.ಕ. ಜಿಲ್ಲೆಗೆ ಬಂದು ಕುಳಿತ ಮೊಟ್ಟ ಮೊದಲ ದಿನದಿಂದ ಹಿಡಿದು ಮೊನ್ನೆ ಮೊನ್ನೆ ರಿಟೈರಾಗುವವರೆಗೂ ನನ್ನೊಂದಿಗೆ ಕೆಲಸದಿಂದ ಹಿಡಿದು ಕಾರು-ಬಾರು, ಎಲ್ಲಾ ಹಂಚಿಕೊಂಡು ಹೋದವರೂ ಕೂಡಾ ನಾನು ಹುಟ್ಟುವ ಮೊದಲೇ ನೌಕರಿಗೆ ಸೇರಿದ್ದಷ್ಟು ದೊಡ್ಡ ಹಿರಿಯರು.
     ಅತ್ತ ಸಾಹಿತ್ಯಿಕ ವಲಯದಲ್ಲಿ ಇವತ್ತೀಗೂ ಗಾಢ್‌ಫಾದರ್‌ಗಳಿಲ್ಲದೇ ಕಾಲೂರುವಾಗ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನಕ್ಕೆಂದು ನಿಂತಿದ್ದವರು ಕೊನೆಕೊನೆಗೆ ನನ್ನೊಂದಿಗೆ ಬಾ ಹೋಗು ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಸ್ನೇಹಿತರ ವಲಯಕ್ಕೆ ಲಗ್ಗೆ ಇಟ್ಟು ಬಿಟ್ಟರು. ಮೊನ್ನೆ ಮೊನ್ನೆ ಆಕಸ್ಮಿಕವಾಗಿ ಹೀಗೆ ಯಾವತ್ತೋ ಬದುಕಿನ ರೈಲಿನಲ್ಲಿ ಸ್ಟೇಶನ್ನು ಬಂದಾಗ ಇಳಿದು ಹೋದ ಪ್ರಯಾಣಿಕರಂತೆ ಮರೆಯಾಗಿದ್ದ ವಯಸ್ಕ ಆತ್ಮೀಯರು ಕರೆ ಮಾಡಿ ಮಾತಾಡಿಸಿದಾಗ ಆಘಾತ. ನಾನು ಅವರು ಬಹುಶ: ತೀರಿಯೇ ಹೋಗಿದ್ದಾರೆಂದು ಭಾವಿಸಿದ್ದೆ. ಅವರಲ್ಲಿ ಹಾಗೆ ಹೇಳಿ ಕ್ಷಮೆ ಕೇಳಿ ಬೈಸಿಕೊಂಡೆ. ಈಗಲೂ ಅವರಲ್ಲಿ ಆಗಿನಿಂದಲೂ ಇದ್ದ ಅದೇ ಹಾಸ್ಯಮಯ ಧಾಟಿ. ಕೊನೆಯಲ್ಲಿ " ಇಷ್ಟು ಬೇಗ ಕಳಿಸ್ಬೇಡವೋ ಇನ್ನೊಂದು ಮದುವೆಯಾಗಿ ಸಂಸಾರ ಮಾಡಬೇಕಿದೆ... " ಎಂದು ಲಂಪಟ ಗಂಡಸಿನಂತೆ ಹಾಸ್ಯ ಮಾಡಿ ಫೋನಿಟ್ಟರು. ಕಳೆದ ವರ್ಷ ಹಿಮಾಲಯದ ಪಾದಕ್ಕೆ, ಅಲ್ಲಿನ ಚಳಿಗೆ ನಮ್ಮ ಸೊಕ್ಕು ಕರಗಿಸಿಕೊಳ್ಳಲೆಂದು ಹೋದಾಗ, ನಮಗಿಂತಲೂ ವೇಗವಾಗಿ ಹಿಮದಲ್ಲಿ ಪರ್ವತಗಳನ್ನು ಏರಿ ನಿಂತು, ಬನ್ನಿ ಬನ್ನಿ ಎಂದು ಕರೆಯುತ್ತಿದ್ದ ದ.ಕ. ವೃದ್ಧ(?)ರೊಬ್ಬರು ಭೇಟಿಯಾದರು. ಕೇವಲ ಮೂರು ತಾಸುಗಳ ಆರಂಭಿಕ ಭೇಟಿ ಅದು. ಚಾರಣದ ಹದಿನೈದು ದಿನದ ನಂತರ ಬೇರ್ಪಡೆಯಾದರೂ ಇವತ್ತಿಗಾಗಲೇ ಅವರು ಕನಿಷ್ಟ ವಾರಕ್ಕೊಮ್ಮೆಯಾದರೂ ಕರೆ ಮಾತಾಡುವಷ್ಟು ಆತ್ಮಿಯರು. 
          ಅಷ್ಟೇಕೆ ಕಳೆದ ರಾಷ್ಟ್ರ ಮಟ್ಟದ ವೈಜ್ಞಾನಿಕ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ, ಅದಕ್ಕೂ ಮೊದಲು ಪಾಂಡಿಯಲ್ಲಿ ನಡೆದಾಗ ಎರಡೂ ಕಡೆಯಲ್ಲೂ ನೆರೆದಿದ್ದ ಗುಂಡು ಕಂಪೆನಿಯಲ್ಲಿ ಕುಳಿತುಕೊಳ್ಳಲು ಅನುಮಾನಿಸುವಷ್ಟು ಹಿರಿಯರು ನನ್ನೊಂದಿಗಿದ್ದರು.  ಆಗ ಬೆಂಗಳೂರಿನಲ್ಲಿ ಹೀಗೆ ಚಪಾತಿಯಿಂದ ಆರಂಭವಾದ ಸ್ನೇಹ ಆಗೀಗ ಕುಳಿತು ಗುಂಡು ಹಾಕುವವರೆಗೂ ಸಲುಗೆ ಬೆಳೆದು, ಉಳಿದಂತೆ ಅದ್ಭುತ ಮಾತುಗಾರರಾದ ಅವರು ರಾಮಕೃಷ್ಣ ಹೆಗಡೆಯಿಂದ ಹಿಡಿದು, ಪೋರೆನ್ಸಿಕ್ ಸೈನ್ಸ್‌ನಿಂದ ತೀರ ಪೋಲಿಸ್ ಟಾರ್ಚರುಗಳು, ಅದರಲ್ಲಿ ವಿವಿಧ ದೇಶದ ವಿಧಾನಗಳನ್ನು ಉಲ್ಲೇಖಿಸುತ್ತಾ, ತಾವು ಉತ್ತರ ಭಾರತದಲ್ಲಿ ಕಳೆದ ದಿನಗಳ ಬಗ್ಗೆ ವಿವರಿಸುತ್ತಿದ್ದರೆ ರಾತ್ರಿಗಳಿಗೆ ಬೆಂಕಿ ಬೀಳಬೇಕು.
           ಅದೊಂದಿನ ನಾನು ಭಾರತ ರೆಸ್ಟೋರಾಂಟಿಗೆ ಹೋಗುವಾಗ ಅಕಸ್ಮಾತಾಗಿ ಅವರು ರಾಯಚೂರಿನ ರಾಜರಾಂನೊಂದಿಗೆ ನಿ೦ತಿದ್ದು ಕಾಣಿಸಿತ್ತು. ಯಾವತ್ತೂ ಹೀಗೆ ಅದರಲ್ಲೂ ಲಫಂಗರಿಗೆ ಗುರುವಿನಂತಿದ್ದ ರಾಜಾರಾಮನೊ೦ದಿಗೆ ಪರಿಚಯ ಇದ್ದಿರಬಹುದೆನ್ನುವ ಅಂದಾಜಿರದ ನನಗೆ ಅವರು ಅವನ ತಂದೆಯೆಂದೂ, ಇವನ ಕಾಟಾಚಾರಕ್ಕೆ ಬೇಸತ್ತು ಬೆಂಗಳೂರಿಗೆ ಬಂದರೆ ಈ ಪುಣ್ಯಾತ್ಮ ಕೂಡಾ ಬಂದು ಇದೇ ಜಾಲಹಳ್ಳಿಯಲ್ಲಿ ಕಾಲೂರಿರಬೇಕೆ...? ಆ ದಿನ ಅವರು ಕುಸಿದು ಹೋಗಿದ್ದರು. ಆಗ್ಲೇ ಊರು ಬಿಟ್ಟು ನಾಲ್ಕು ವರ್ಷಗಳಾಗಿದ್ದುವಂತೆ. ಅವರಿಗೆ ಪೆನ್ಶನ್ ಇತ್ತು. ಬೊಮ್ಮಸಂದ್ರದ ಮೂಲೆಯಲ್ಲಿ ಚಿಕ್ಕ ರೂಮು ಮಾಡಿಕೊಂಡಿದ್ದರು. ಪೇಪರು ಓದು, ವಾಕಿಂಗ್, ಸಂಜೆ ಮೂಡಿದ್ದರೆ ಗುಂಡು, ಪಾನಿ ಪೂರಿ ಆರಾಮವಾಗಿ ಎಲ್ಲ ಗೋಜಲು ಬಿಟ್ಟು ಸ್ವಂತ್ರತ್ರವಾಗಿ ಕಳೆದವರಿಗೆ ಇದ್ದಕ್ಕಿದ್ದಂತೆ ವಕ್ಕರಿಸಿದ್ದ ರಾಜಾರಾಂ ತಲೆ ನೋವು ತಂದಿಟ್ಟಿದ್ದ. ನಾನು ಅವರ ಪರವಾಗಿ ಮಾತಾಡಿ ಅವನು ಬೊಮ್ಮಸಂದ್ರದ ರೂಮಿಗೆ ಹೋಗಿ ಕಾಡದಂತೆಯೂ, ಕಾಸು ಮತ್ತೊಂದು ಎಂದು ಹಿಂದೆ ಬೀಳದಂತೆ ಮಾಡಿದ್ದೇನಾದರೂ ಅವರಲ್ಲಿ ಮೊದಲಿದ್ದ ಖುಶಿ ಉಳಿದಿರಲಿಲ್ಲ. ಅವರವರ ವೈಯಕ್ತಿಕ ವಿಷಯಗಳೇನೇನಿದ್ದವು...? ವೃದ್ಧ ಜೀವ ಜೀವನದಲ್ಲಿ ಆಸಕ್ತಿ ಕಳೆದುಕೊಂಡಂತಿತ್ತು. 
           ಇದ್ದಕ್ಕಿದ್ದಂತೆ ಒ೦ದಿನ ನಾಪತ್ತೆ ಆಗಿ ಬಿಟ್ಟಿದ್ದರು. ಸುತ್ತ ಮುತ್ತೆಲ್ಲಾ ಹುಡುಕಾಡಿದೆವು. ಬಸು, ರವಿ, ಪ್ರದೀಪ, ಮೈಸೂರಿನ ಮುಕುಂದ ಎಲ್ಲಾ ಜಾಲಹಳ್ಳಿಯಿಂದ ಎಂ.ಎಸ್. ರಾಮಯ್ಯವರೆಗೂ ಗಲ್ಲಿಗಳನ್ನು ತಿರುವ್ಯಾಡಿ ಬಿಟ್ಟಿದ್ದೆವು. ಬಹುಶ: ರಾಜಾರಾಂ ಕಿರಿಕಿರಿ ಮಾಡಿದನೇನೋ ಎಂದು ಎತ್ತಾಕಿಕೊಂಡು ಸಮಾ ರೂಮಿನಲ್ಲಿ ಚಚ್ಚುತ್ತಿದ್ದರೆ ಅವನೋ ಊರೇ ಸೇರುವಂತೆ ಏಟಿಗೂ ಮುಂಚೆ ಕಿರುಚಲಾರಂಭಿಸಿದ್ದ. ಅದಾಗಿ ನಂತರದಲ್ಲಿ ಅವರು ಕಂಡಿರಲೇ ಇಲ್ಲ. ಇದ್ದಕ್ಕಿದ್ದಂತೆ ಒಂದಿನ ನಾಲೈದು ವರ್ಷದ ಹಿಂದೆ ಮೆಜೆಸ್ಟಿಕ್ಕಿನಲ್ಲಿ ಕಂಡವರು ತಾವಾಗೆ ಕೂಗಿ ಮಾತಾಡಿಸಿದ್ದರು. ಕೊಂಚ ಇಳಿದು ಹೋಗಿದ್ದಾರೆ ಅನಿಸಿದ್ದು ಬಿಟ್ಟರೆ ಅದೇ ವಿಶಾಲ ನಗೆ. ಅದೇ ನಿರರ್ಗಳ ಮಾತು. ಮಧ್ಯಾನ್ಹದ ಹೊತ್ತೆ ಬಿಟ್ಟು ಬಿಡದೆ ಕರೆದೊಯ್ದು ಗ್ರಿನ್ ಹೋಟೆಲಿನಲ್ಲಿ ಕೂಡಿಸಿಕೊಂಡಿದ್ದರು. ಬೇಕೆಂದೇ ಜಾಲಹಳ್ಳಿ ಬಿಟ್ಟು ಬೆಂಗಳೂರಿನ ಇನ್ನೊಂದು ದಿಕ್ಕಿನ ಇಂದಿರಾನಗರದ ಕಡೆಗೆ ಸರಿದು ಹೋಗಿ ರೂಮು ಮಾಡಿಕೊಂಡಿದ್ದಾಗಿ ತಿಳಿಸಿದ್ದರು.
            ನಾನೂ ಹೆಚ್ಚು ಕೆದಕಿರಲಿಲ್ಲ. ಅದಾಗಿ ವರ್ಷಗಳೇ ಸರಿದವು.  ಮೊನ್ನೆ ಇದ್ದಕ್ಕಿದ್ದಂತೆ ಅದೇ ಬಿ.ಇ.ಎಲ್.ನಲ್ಲಿ ಈಗ ಎಂಪ್ಲಾಯಿ ಆಗಿರುವ ಶ್ರೀನಿವಾಸ ಕರೆ ಮಾಡಿದವನು "...ನಿನ್ನ ಒಲ್ಡ್ ಫ್ರೆಂಡ್ ಹೋಗಿ ಬಿಟ್ಟರಂತೆ ಕಣೊ..." ಎಂದರೆ ಒಮ್ಮೆ ಕ್ಷಣಕ್ಕೆ ಅರಿವಾಗಲಿಲ್ಲ " ಯಾರು ಎಂದೆ...?" " ಅದೇ ಬೊಮ್ಮ ಸಂದ್ರದಲ್ಲಿದ್ದರಲ್ಲ ಅವರು..." ಒಹೋ.. ಮುಂದೆ ಮಾತಾಡಲಾಗಲಿಲ್ಲ. ... ನಾಲ್ಕು ದಿನ ಮೊದಲು ಇಲ್ಲಿ ಗಣಪತಿ ದೇವಸ್ಥಾನದ ಹತ್ತಿರ ಸಿಕ್ಕಿದವರು ನನ್ನ ಬಗ್ಗೆ ವಿಚಾರಿಸಿದ್ದರಂತೆ. ಮೊಬೈಲು ನಂಬರು ಕೊಡು ಎಂದಿದ್ಡಾರೆ. ಇವನು ಆಯಿತು ವಿಚಾರಿಸಿ ಕೊಡುತ್ತೇನೆ ಎಂದು ಎರಡ್ಮೂರು ದಿನವಾದರೂ ನನ್ನನ್ನು ಸಂಪರ್ಕಿಸಿಲ್ಲ. ಮರುದಿನ ಕೂಡಾ ಸಿಕ್ಕಿದಾಗ ನಂಬರು ಇನ್ನು ತೆಗೆದುಕೊಳ್ಳಲಾಗಿಲ್ಲ ಅಂದಿದ್ದಕ್ಕೆ ಮುಖ ಸಣ್ಣದು ಮಾಡಿ ಅವನ ಹತ್ತಿರ ಮಾತಾಡಬೇಕಿತ್ತು .. ಛೇ... ಎಂದು ಗೊಣಗಿಕೊಂಡಿದ್ದಾರೆ ಅಷ್ಟೆ. ಮರುದಿನಕ್ಕೆ ಅವರಿಲ್ಲ. ಜಾಲಹಳ್ಳಿಯಲ್ಲಿ ಎಂದಿನಂತೆ ಭೇಏಯಾಗುತ್ತಿದ್ದ ಗಣೇಶ ದೇವಸ್ಥಾನದ ಹತ್ತಿರ ಕಲ್ಲು ಬೆಂಚಿನ ಮೇಲೆ ಕುಳಿತಲ್ಲೇ ಪ್ರಾಣ ಬಿಟ್ಟಿದಾರೆ.." ಮುಂದಿನ ಮಾತು ಕೇಳಿಸಿಕೊಳ್ಳಲಿಲ್ಲ. ಕೊನೆಯ ಕ್ಷಣದಲ್ಲಿ ಮನಸ್ಸು ಖಾಲಿ ಖಾಲಿಯಾದಂತೆನಿಸಿತು. ಯಾಕೆಂದರೆ ಹಿರಿಯರಾಗಿದ್ದಷ್ಟೂ ನಿರ್ಗಮನದ ಬಾಗಿಲು ತುಂಬ ಹತ್ತಿರಕ್ಕಿರುತ್ತವೆ. ನನಗೆ ಅಂಥ ಆತ್ಮೀಯರ ವಲಯ ದೊಡ್ಡದು. ಮತ್ಯಾವ ಕರೆಯೂ ಅಂತಹದ್ದು ಬಾರದಿರಲಿ ಅನ್ನಿಸಿ ಎರಡು ನಿಮಿಷ ಮೌನವಾಗಿದ್ದು ಬಿಟ್ಟೆ. ಆ ದಿನ ಪೂರ್ತಿ ಮೊಬೈಲಿಗೆ ಕಿವಿಗೊಡಲೇ ಕಿರ್ಕಿರಿ. ಪಾಪ ಒಂದು ದಶಕಕ್ಕೂ ಹೆಚ್ಚಿನ ಕಾಲ ಒಬ್ಬಂಟಿಯಾಗಿ ಕಳೆದು ಹೋದ ಆ ಹಿರಿಯ ಜೀವಕ್ಕೆ ಏನು ಹೇಳಿಕೊಳ್ಳುವುದಿತ್ತೋ...?

Sunday, August 4, 2013

ಎಲ್ಲದಕ್ಕೂ ಸೌಂದರ್ಯವೇ ಮಾನದಂಡವಾಗುವುದಾದರೆ ...?

( ಯಾವಾಗಲೂ ಸೌಂದರ್ಯವೋ, ಆಪೊಸಿಟ್ ಸೆಕ್ಸ್ ಅಥವಾ ಪ್ರಭಾವಿ ಒತ್ತಡವನ್ನೇ ಮನಸ್ಸು ಬಯಸುತ್ತದಲ್ಲ ಅದು ಅಚ್ಚರಿಗೊಳಿಸುತ್ತದೆ )
( ಪ್ರತಿಯೊಂದು ಕ್ಷೇತ್ರದಲ್ಲೂ ಸೌಂದರ್ಯವೊಂದು ಮಾನದಂಡವಾಗುವುದಾದರೆ ಮಾಮೂಲಿನ, ಸಾಮಾನ್ಯದವರು, ಉಳಿದವರೆಲ್ಲಾ ಎಲ್ಲಿ ಹೋಗಬೇಕು...? ಈ ಪ್ರಶ್ನೆ ಯಾಕೆ ಉಂಟಾಗುತ್ತಿದೆಯೆಂದರೆ ಇವತ್ತು ಅಸಾಮಾನ್ಯ ಅಥವಾ ಮೇಧಾವಿಗಳು ಕೂಡಾ ಕನಿಷ್ಠ ಮಟ್ಟದ ರೂಪ ಸೌಂದರ್ಯದ ಕಡೆಗೆ ಗಮನ ಕೊಡುತ್ತಿರುವುದು ಸಣ್ಣನೆಯ ಜಿಜ್ಞಾಸೆ ಉಂಟು ಮಾಡುತ್ತಿದೆ ).
ಸಾನಿಯಾ ಮಿರ್ಜಾ/ಸೈನಾ ನೆಹ್ವಾಲ್ / ಜ್ವಾಲ  ಅಕಸ್ಮಾತಾಗಿ ನಮ್ಮ ಪಕ್ಕದ ಗಲ್ಲಿಯಲ್ಲಿರೋ ಯಾವುದೋ ಸಾಮಾನ್ಯ ಹೆಣ್ಣು ಮಗಳಂತೆಯೋ ಅಥವಾ ಕೊಂಚ ಕುರೂಪಿ ಎನ್ನಿಸುವ ದೇಹ ಸೌಂದರ್ಯವನ್ನು ಪಡೆದಿದ್ದರೆ ಅವರನ್ನು ಇಷ್ಟೊಂದು ಆದರಿಸಲಾಗುತ್ತಿತ್ತಾ...?
 
...ಇಂಪಾಸಿಬಲ್...
ಪ್ರಶ್ನೆ ಸುಂದರವಾಗಿದ್ದರಿಂದಲೇ ಅವರೆಲ್ಲಾ  ಇಷ್ಟು ಪ್ರಸಿದ್ಧಿ ಪಡೆದಳಾ ಅಥವಾ ಆಟಂದಿಂದಾನಾ ಎಂದಲ್ಲ. ಅಸಲಿಗೆ ಇವತ್ತಿನ ಎಲ್ಲಾ ಕ್ಷೇತ್ರದಲ್ಲೂ ಕಂಡೂ ಕಾಣದಂತೆ ಅದರಲ್ಲೂ ಹೆಣ್ಣು ಮಕ್ಕಳ ಸೌಂದರ್ಯವನ್ನು ಆಧಾರವಾಗಿಸಿಕೊಂಡು ಎಲ್ಲದಕ್ಕೂ ಆಯ್ಕೆಯ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತಿದೆ ಎನ್ನುವುದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಮೇಲ್ಕಾಣಿಸಿದ ಸಾನಿಯಾ/ಸೈನಾ ಒಂದು ಉದಾಹರಣೆ ಅಷ್ಟೆ.
ಯಾಕೆಂದರೆ ಅವರಿಗಿಂತಲೂ ಮಿಗಿಲಾದ ಬೇರೆ ಕ್ರೀಡಾ ರಂಗದಲ್ಲಿ ಸಾಧನೆ ಮಾಡಿದ ಹೆಣ್ಣು ಮಕ್ಕಳು ಇವತ್ತು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದ್ದರೂ ಯಾರನ್ನೂ ಜಾಹಿರಾತು ಕ್ಷೇತ್ರಗಳು ಗಮನಿಸಲೇ ಇಲ್ಲ. ಅಷ್ಟೇಕೆ, ಹಾಕಿಯ ಮಾ೦ತ್ರಿಕ, ಸ್ಥಾನಕ್ಕಾಗಿ ಬಡಿದಾಟದ ಹೋರಾಟ ನಡೆಸಿದ ಧನರಾಜ್ ಪಿಳ್ಳೆಯಾಗಲಿ, ಕನ್ನಡದ ದಾಖಲೆಯ ಬೌಲರ್ ಇದೇ ಅನೀಲ ಕುಂಬ್ಳೆಯಾಗಲಿ ( ಹಾಗೆ ನೋಡಿದರೆ ಕುಂಬ್ಳೆ ಸಾಕಷ್ಟು ಸೊಗಸುಗಾರನೇ ಆದರೆ ಗ್ಲಾಮರ್‌ನ್ನು ಆತ ಪ್ರದರ್ಶಿಸುತ್ತಿರಲಿಲ್ಲ ) ಇವತ್ತು ಅಷ್ಟಕ್ಕಷ್ಟೆ. ಅದೇ ಅವನಿಗಿಂತಲೂ ಕಡಿಮೆ ದಾಖಲೆಯ ಆದರೆ ಗ್ಲಾಮರಸ್ ಯುವಕ ಶ್ರೀಶಾಂತ್ ಇವತ್ತು ಹೆಚ್ಚು ಆಪ್ತ.
ಅಷ್ಟೇಕೆ ಕನಿಷ್ಟ ಸಣ್ಣ ಸಮಾರಂಭಗಳನ್ನು ಗಮನಿಸುವಾಗಲೂ ಒಂದು ವಿಷಯ ಎದ್ದು ಕಂಡುಬರುತ್ತದೆ. ಅದ್ಭುತ ಸೌಂದರ್ಯವತಿಯರು ಸೂಜಿಗಲ್ಲಿನಂತೆ ಸೆಳೆಯುತ್ತಿರುತ್ತಾರೆ. ಅಸಲಿಗೆ ಆಕೆಯಲ್ಲಿನ ಸಾಮರ್ಥ್ಯ ಎಷ್ಟು ಎಂದು ಮಾತ್ರ ಯಾರೂ ಗಮನಿಸಿರುವುದಿಲ್ಲ. ಇದರರ್ಥ ಸುಂದರವಾಗಿರುವ ಎಲ್ಲಾ ಜನರಲ್ಲಿ ಅಥವಾ ಮಹಿಳೆಯರಲ್ಲಿ ಸಾಮರ್ಥ್ಯ ಇರುವುದಿಲ್ಲ ಎಂದಲ್ಲ. ಆದರೆ ಸಾಕಷ್ಟು ಪ್ರತಿಭಾನ್ವಿತರಾಗಿದ್ದೂ ಸೌಂದರ್ಯವಿಲ್ಲದೋರು ಮೂಲೆಗುಂಪಾಗುತ್ತಾರಲ್ಲ ಅದು ಮನಸ್ಸನ್ನು ತಾಕುತ್ತದೆ. ಅವರು ನೋಡಲು ಆಕರ್ಷಣೀಯವಾಗಿಲ್ಲ ಎಂದ ಮಾತ್ರಕ್ಕೆ ನಾವು ಅವರನ್ನು ಮನಸ್ಸಿನಾಚೆಗೆ ಸರಿಸಿ ಬಿಡುವ ಸಂಪ್ರದಾಯವೇಕೆ...?
ಇದೇ ಸಾನಿಯಾ/ಸೈನಾ/ ಇತ್ಯಾದಿಗಳು ಅಕಸ್ಮಾತ ಮಾಮೂಲಿ ರೂಪಿನವಳಾಗಿದ್ದರೆ ಅಷ್ಟಾಗಿ ಮಿಂಚುತ್ತಿದ್ದಳಾ?ಅವಶ್ಯಕತೆ ಇರುವ-ಇಲ್ಲದೆಡೆಯಲ್ಲೆಲ್ಲಾ ಸಭೆ ಸಮಾರಂಭಗಳಲ್ಲಿ ಬಹುಶ: ಆಕೆಯ ಮೂಗುತಿ ಮಿನುಗಿದಷ್ಟು ಇನ್ನಾವುದೂ ಮಿನುಗಿರಲಿಕ್ಕಿಲ್ಲ. ಅಗತ್ಯ ಇದೆಯೋ ಇಲ್ಲವೋ ಆಕೆಯನ್ನು ಆಹ್ವಾನಿಸಲು ಪೈಪೋಟಿಯೇ ನಡೆದು ಹೋದವು. ಅದೆಷ್ಟು ಸಮಾರ೦ಭಗಳಲ್ಲಿ, ಏನು ಚರ್ಚೆ ನಡೆಯುತ್ತಿದೆ, ಇದೆಲ್ಲಾ ಯಾಕೆ ಚರ್ಚಿಸುತ್ತಿದ್ದಾರೆ ಅರ್ಥ ಆಗುತ್ತಿತ್ತೋ ಇಲ್ಲವೊ ಗೊತ್ತಿಲ್ಲ. ಆಕೆ ಮುಗುಮ್ಮಾಗಿ ಮಾತಾಡಿ ಎದ್ದು ಬರಬೇಕಾಗುತ್ತಿತ್ತಾದರೂ ಅನಿವಾರ್ಯವಾಗಿ ಅತಿಥಿಯಾಗಿ, ಗ್ಲಾಮರಸ್ ಅಟ್ರಾಕ್ಷನ್‌ಗಾಗಿ ಆಕೆ ಪಾಲ್ಗೊಂಡಿದ್ದಿದೆ. (ಮೇರಿ ಕೊಂ ಗೆ ಇವರಷ್ಟು ಜಾಹಿರಾತು ಬರದಿರಲು ಆಕೆ ಮದುವೆಯಾಗಿ ಮಕ್ಕಲಾಗಿರುವ ಮತ್ತು ಮಾಡ ಆಗಿಲ್ಲದ)
ಆದರೆ ಚಿನ್ನದ ರಾಣಿ ಎಂದೇ ಖ್ಯಾತಿ ಪಡೆದ, ಓಡುವುದನ್ನು ಬಿಟ್ಟು ಬೇರಾವುದೇ ಗ್ಲಾಮರ್ ಕಡೆಗೆ ಗಮನವನ್ನೇ ನೀಡದ ಪಿ.ಟಿ. ಉಷಾ ಯಾವಾಗ ಟ್ರಾಕ್ ಬಿಟ್ಟಿಳಿದಳೋ, ಯಾವಾಗ ಚಿನ್ನದ ಬೇಟೆ ನಿಂತಿತೋ, ಅದಕ್ಕಿಂತಲೂ ಮೊದಲೇ ಪತ್ರಿಕೆ ಆವೃತ್ತಿಗಳಿಂದ ಆಕೆ ಕಾಣೆಯಾಗಿದ್ದಳು. ಅಷ್ಟೇಕೆ ಆಕೆ ಆಟದಿಂದ ನಿವೃತ್ತಿಯಾದದ್ದೇ ಆದದ್ದು ಆಕೆಯ ಬಗ್ಗೆ ಒಂದೇ ಒಂದು ಸಾಲು ಅಲ್ಲಲ್ಲಿ ಕೂಡಾ ಕಾಣದಂತೆ ಮಾಯವಾಗಿಬಿಟ್ಟಿದ್ದವು. ಆದರೆ ಕ್ರಿಕೆಟ್‌ನ ಕಪಿಲ್ ಇವತ್ತೂ ಮಾಡೆಲಿಂಗ್ ಮಾಡುತ್ತಾನೆ.
          ಆದರೆ ಇದೇ ಸ್ಟಾರ ಆಟಗಾರರು ಅಥವಾ ನಟಿಯರು ಇವತ್ತು ಜಾಗತಿಕ ಎಷ್ಟನೆ ರ‍್ಯಾಂಕಿಂಗ್‌ನಲ್ಲಿದ್ದಾರೆ. ಆಕೆ ಏನು ತಿನ್ನುತ್ತಾಳೆ. ಯಾಕೆ ರ‍್ಯಾಂಕಿಂಗ್‌ನಲ್ಲಿ ಕೆಳಗಿಳಿದಳು, ಆಕೆ ಆಡುತ್ತಾಳೋ ಇಲ್ಲವೋ.. ಆಕೆಗೆ ತಲೆ ನೋವ್ಯಾಕೆ ಬಂತು. ನಿನ್ನೆ ಎಷ್ಟು ನೀರು ಕುಡಿದಳು.. ಆಕೆಯ ಟವಲ್ ಯಾವ ಕಂಪೆನಿಯದು.. ಅದಷ್ಟು ಬೆಳ್ಳಗಿರಲು ಯಾವ ಸೋಪು ಪುಡಿ ಉಪಯೋಗಿಸುತ್ತಾಳೆ... ಆಕೆ ಹಲ್ಲು ತಿಕ್ಕುವಾಗ ಹೇಗೆ ಬ್ರಶ್ ಹಿಡಿಯುತ್ತಾಳೆ...? ಇವೆಲ್ಲಾ ನಮಗೆ ಬೇಕಾ.. ಯಾವೊಬ್ಬ ವ್ಯಕ್ತಿ ಪ್ರಸಿದ್ಧನಾದ ಮಾತ್ರಕ್ಕೆ ಅವನ ಕಂಡೂ ಕಾಣದ ದಿನಚರಿಯಿಂದ ಹಿಡಿದು ಏನೆಲ್ಲಾ ವರದಿ ಮಾಡುವ ನಮಗೆ ಕನಿಷ್ಟ ಉಳಿದವರ ಕಡೆಗೆ ಗಮನ ಹರಿಸಬೇಕು ಎನ್ನುವ ಸಣ್ಣ ಮನಸ್ಸಾದರೂ, ಪರಿಜ್ಞಾನವಾದರೂ ಬೇಡವಾ...? ಕೇವಲ ಸೌಂದರ್ಯವೊಂದನ್ನು ಬಂಡವಾಳ ಮಾಡಿಕೊಂಡು ಕೆಲಸದಿಂದ ಪದವಿಯವರೆಗೆ ಎಲ್ಲವನ್ನು ಗೆಲ್ಲುತ್ತಾ, ಪಡೆದುಕೊಳ್ಳುತ್ತಿರುವ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಗೊತ್ತಾಗುತ್ತದೆ.
      ಅಷ್ಟೇಕೆ ಬಹುಶ: ಚಿತ್ರರಂಗದ ವ್ಯಕ್ತಿತ್ವಗಳು ಇವತ್ತು ನಮ್ಮ ನಿಮ್ಮ ಮನದಲ್ಲಿ ಪ್ರಭಾವಶಾಲಿಯಾಗಿ ಬೇರೂರಿದಷ್ಟು ಬೇರಾವ ಪರ್ಸನಾಲಿಟಿಗಳು ಇವತ್ತು ಅಚ್ಚೊತ್ತುತ್ತಿಲ್ಲ. ಯಾಕೆ, ಅವರೆಲ್ಲಾ ರಂಗು ರಂಗಿನ ಥಳುಕಿನ ಬದುಕಿನ ಪ್ರತಿಬಿಂಬಗಳಾಗಿ ನಮ್ಮ ಕನಸಿನ ಅಮೂರ್ತತೆಗೊಂದು ಮೂರ್ತ ರೂಪವನ್ನು ಕಲ್ಪಿಸುತ್ತಾರೆಂದೇ ...? ಎಷ್ಟು ಆರ್ಡಿನರಿಯಾಗಿರುವ "ಅಂತರಾ ಮಾಲಿ" ಬೀರುವ ಪ್ರಭಾವ, ಆಕೆ ನೀಡುವ ಸಂದೇಶವನ್ನು, ಸುಲಭವಾಗಿ ಸ್ವೀಕರಿಸುವ ಮನಸ್ಸಿನ ಮೇಲೆ, ಪಕ್ಕದ ಮನೆಯ ಆತ್ಮೀಯವಾಗಿ ನಮ್ಮ ಕುಟುಂಬದಲ್ಲಿ ಬೆರೆತು ಹೋದ ಸಾಧಾರಣ ರೂಪಿನ ಹುಡುಗಿ ಪ್ರಭಾವ ಬೀರಲಾರಳು. ಒಬ್ಬಾತ ತಾರೆಯ ಅಥವಾ ನಟಿಯೊಬ್ಬಳ ಆರಾಧನೆಯ ಪರಾಕಾಷ್ಟೆ ಎಷ್ಟೆಂದರೆ ಒಂದೊಮ್ಮೆ ಆಕೆಗೋಸ್ಕರ ಪ್ರಾಣವನ್ನೂ ಕೊಡಲು ಮುಂದಾಗೋದು ಇಂತಹ ಮೂರ್ಖತನದಲ್ಲೊಂದು. ಯಾವುದೇ ಚಿತ್ರ ತಾರೆ ಅಥವಾ ಅವರ ಥಳುಕಿನ ಪ್ರಪಂಚದ ಒಂದು ಮುಖವನ್ನಷ್ಟೆ ಕಂಡಿರುವ ಮನಸ್ಸಿಗೆ, ಅದೇ ವಾಸ್ತವ ಎ೦ದು ನಂಬುವ ಬಣ್ಣದ ಬದುಕಿನ ಚೆಂದವೇ ಇಷ್ಟವಾಗುವ ನಮಗೆ ಅದರಾಚೆಗಿನ ಸತ್ಯತೆಗಳು ಬದುಕಿನ ಕಠೋರತೆಗಳು ಬೆಚ್ಚಿಸುವುದೇ ಇಲ್ಲ.
ಅದನ್ನು ಅಂದರೆ ವಾಸ್ತವವನ್ನು ನೇರವಾಗಿ ಬೆರಳು ಮಾಡಿ ತೋರಿಸುವ ಅದೇ ಗಬ್ಬು ವಾಸನೆಯ ಫ್ರೆಂಡು ನಮಗೆ ಶೀ... ಅನ್ನಿಸುತ್ತಾನೆ. ನಮಗಷ್ಟೂ ಗೊತ್ತಿಲ್ಲವಾ ಅನ್ನಿಸುವಂತೆ ಮಾಡುತ್ತಾನೆ. 

     ಆದರೆ ಅಸಲಿಗೆ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದ ನಾವು ಅಲ್ಲೇ ಪಿಗ್ಗಿ ಬೀಳುತ್ತೇವೆ. ಯಾಕೆಂದರೆ ಗಬ್ಬು ವಾಸನೆಯ ಫ್ರೆಂಡು ಹೇಳುವ ವಾಸ್ತವತೆ ನಮ್ಮ ಮನಸ್ಸಿಗೆ ನಾಟುವುದಿಲ್ಲ. ಅದೇ ಜೊತೆಗೆ ಇರುವ ಅಥವಾ ನೋಡಲು ಲಕ್ಷಣವಾಗಿರುವ ಗೆಳತಿ ಹೇಳಲಿ ಮರುದಿನವೇ ನಮ್ಮ ಆಟಿಟ್ಯೂಡು ಬದಲಾಗಿರುತ್ತದೆ. ಯಾಕೆಂದರೆ ಯಾವಾಗಲೂ ಸೌಂದರ್ಯವೋ, ಆಪೊಸಿಟ್ ಸೆಕ್ಸ್ ಅಥವಾ ಪ್ರಭಾವಿ ಒತ್ತಡವನ್ನೇ ಮನಸ್ಸು ಬಯಸುತ್ತದಲ್ಲ ಅದು ಅಚ್ಚರಿಗೊಳಿಸುತ್ತದೆ. 
     ಅಸಲಿಗೆ ಸೌಂದರ್ಯ ಸ್ಪರ್ಧೆಯನ್ನು ನಡೆಸಿದಾಗ ಆಯ್ಕೆಯಾದವಳು ಉದುರಿಸುವ ನುಡಿಮುತ್ತುಗಳಂತೂ ಅಸಹ್ಯದ ಪರಮಾವಧಿ ಯಾಕನ್ನಿಸುತ್ತದೆಂದರೆ, ಆಕೆಯ ವರ್ತನೆಗೂ ಮಾತುಗಳಿಗಿರುವ ವ್ಯತ್ಯಾಸವಲ್ಲದೇ ಬೇರೇನಲ್ಲ. ಸಾಹಿತ್ಯದಿಂದ ಹಿಡಿದು ಯಾವುದೇ ರಂಗದಲ್ಲೂ ಸೌಂದರ್ಯವನ್ನೇ ಮಾನದಂಡವಾಗಿ ಬಳಸುತ್ತಿರುವ ಪರಿ ಯಾವ ರೀತಿಯದ್ದಾಗಿದೆಯೆ೦ದರೆ ಬಹುಶ: ಈ ಲೋಕದಲ್ಲಿ ಕುರೂಪಿಯರಂತೂ ಬಿಡಿ, ಸಾಮಾನ್ಯ ವರ್ಗದವರೂ ಕನಸುಗಳನ್ನೇ ಕಾಣುವುದಿಲ್ಲವಾ ಎನ್ನಿಸುವ ಹತಾಶೆಯ ಭಾವ ಮೂಡುತ್ತಿರುವುದು ವಾಸ್ತವತೆಯ ಎದುರಾ ಎದುರೇ ಭ್ರಮೆಯತ್ತ ಸಾಗುತ್ತಿರುವುದರ ವಿಪರ್ಯಾಸವಲ್ಲದೇ ಇನ್ನೇನು...?
     ನಮ್ಮ ನಮ್ಮ ಇತಿಮಿತಿಗಳು ನಾವು ಏನು ಅನ್ನೋದು ನಮಗೇ ಅರ್ಥವಾಗದಿರುವಾಗಲೇ ಇಂಥವು ಘಟಿಸುತ್ತವೆ. ಮನಸ್ಸು ತುಂಬ ಹಿತ ಎನ್ನಿಸುವಂತಹದನ್ನು ಮಾದರಿಯಾಗಿ ಸ್ವೀಕರಿಸಲು ಆರಂಭಿಸುತ್ತದೆ. ಒಮ್ಮೆ ಅದಕ್ಕೆ ಮನಸ್ಸು ಹೊಂದಿಕೊಂಡು ಬಿಟ್ಟರೆ ಆ ಮಾಡೆಲ್ ಮಾಡುವುದೆಲ್ಲಾ ಮಾದರಿಯಾಗುತ್ತದೆ. ಅದರ ಅನುಕರಣೆಯಲ್ಲೇ ಮನಸ್ಸು ಬದುಕತೊಡಗುತ್ತದೆ. ಅಲ್ಲಿಗೆ ಬದುಕಿನ ಸ್ವಂತಿಕೆ ಸತ್ತು ಹೋಗುತ್ತದೆ. ವಾಸ್ತವದಿಂದ ದೂರ ಓಡಿರುವ ಮನಸ್ಸು ನಂತರದಲ್ಲಿ ಸುಲಭಕ್ಕೆ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಅರ್ಥವಾಗುವ ಹೊತ್ತಿಗೆ ಬದುಕಿನಲ್ಲಿ ಸ್ವಂತಿಕೆಯನ್ನು ರೂಪಿಸಿಕೊಳ್ಳುವ ಅಥ್ವಾ ಸ್ವ೦ತದ ಗುರುತನ್ನು ಮೂಡಿಸುವ ಮನಸ್ಸು ಪಕ್ವವಾಗುವ ಹೊತ್ತಿಗೆ ತುಂಬಾ ತಡವಾಗಿ ಬಿಟ್ಟಿರುತ್ತದೆ. ಯಾಕೆಂದರೆ ಯಾವುದೇ ಇರಲಿ ಅದು ದೈಹಿಕ ಸೌ೦ದರ್ಯವೇ ಇರಲಿ, ಐಹಿಕ ಭೋಗವೇ ಇರಲಿ... ಇನ್ನಾವುದೇ ರಂಗದ ಸಂಬಂಧಿತವಾಗಿರಲಿ, ಮನಸ್ಸು ಎಲ್ಲದರಲ್ಲೂ ಚೆಂದವನ್ನೇ ನಮ್ಮ ಮನಸ್ಸಿಗೆ ಹಿಡಿಸುವಂತಹದ್ದನ್ನೇ ಹುಡುಕೋದಾದರೆ ಉಳಿದ ಜೀವ ವರ್ಗಗಳಿಗೆ ಇಲ್ಲಿ ಬೆಲೆನೇ ಇಲ್ಲವಾ ... ?


Saturday, August 3, 2013

ಮುಕ್ಕಾಲು ಅವಧಿಗೆ ಮುಗಿದು ಹೋದ ಜೀವ..!

( ಹಾಗೆ ನನ್ನೊಂದಿಗಿದ್ದೂ ಇಲ್ಲದಂತಿರುವ ಮಿತ್ರ ತೀರ ಇದೇ ನೆಲದಿಂದ ಎದ್ದು ಹೋದವನು. ಕರಾವಳಿಯ ಮೀನಿಗೆ ಬಾಯ್ಬಿಡುತ್ತಿದ್ದವನು. ಅದಕ್ಕಿಂತಲೂ ಮಿಗಿಲಾಗಿ ಈ ನೆಲದ ಬಗ್ಗೆ ಅದೊಂದು ರೀತಿಯಲ್ಲಿ ವ್ಯಾಮೋಹಿಯಾಗಿದ್ದವನು. ಮೊಟ್ಟ ಮೊದಲ ಬಾರಿಗೆ ನನಗೆ ಕರಾವಳಿಯ ಬದುಕು ಪರಿಚಯಿಸಿದವನು. ನನಗಿಂತ ಸಾಕಷ್ಟು ಹಿರಿಯನಾಗಿದ್ದರೂ ಅದೆಂದಿಗೂ ಅರಿವಿಗೆ ಬರದಂತಿದ್ದು ಬಿಟ್ಟಿದ್ದ ಅವನು.
ಮೊಟ್ಟ ಮೊದಲ ಬಾರಿಗೆ ನನ್ನೆದುರಿಗೆ ಆತ ಕುಳಿತು ಅವಳ ಬಗ್ಗೆ ಹೇಳುವಾಗ ಅವನ ಕಣ್ಣುಗಳಲ್ಲಿ ಬಣ್ಣಗಳಿದ್ದವು.)
ತೀರ ಭಾವುಕ ಹುಡುಗನಂತೆ ಆಡದಿದ್ದರೂ ಪ್ರೇಮದ ಸೆಳಕುಗಳು ಅವನ ಮೇಲೆ ಪ್ರಭಾವ ಬಿರಿದ್ದು ಸ್ಪಷ್ಟವಿತ್ತು. ಅಗಿನ್ನೂ ಹದಿನಾರು ತುಂಬದ ನನಗೆ ಇಪ್ಪತ್ತೊಂದರ ಅವನೊಡನೆ ಮೊದಲನೆಯ ದಿನವೇ ಬೆಳೆದ ಸಲುಗೆ ಮುಂದೆ ಜೀವನದುದ್ದಕ್ಕೂ ನೆರಳಿನಂತೆ ನೆನಪಾಗಿ ಉಳಿದು ಬಿಡುತ್ತದೆಂಬ ಕಲ್ಪನೆಯೂ ಇರಲಿಲ್ಲ. ಯಲ್ಲಾಪುರದ ಮೂಲೆಯೊಂದರಿಂದ ಬರುತ್ತಿದ್ದ ಅವಳು ಅವನನ್ನು ಪ್ರೀತಿಸಿಯೂ, ಇದ್ದಕ್ಕಿದ್ದಂತೆ ಇವನ ಕಾಲೇಜು ಮುಗಿವ ಮುಂಚೆ ಅವನನ್ನು ಬಿಟ್ಟು ತಾನು ಮದುವೆಗೆಂದು ಹೊರಟು ನಿಂತಾಗ ಆದ ನಿರಾಶೆಯಲ್ಲಿ ಅವನು ಪ್ರಾಣ ಕಳೆದುಕೊಳ್ಳದಿದ್ದುದೇ ಹೆಚ್ಚು. ಹಾಗಾಗದಂತೆ ತಿಂಗಳೊಪ್ಪತ್ತು ಅವನ ಜೊತೆಗಿದ್ದು ಕಾಯ್ದಿದ್ದೆ. ಕಾಲೇಜು ಪಕ್ಕದ ಏ.ಪಿ.ಏಮ್.ಸಿ. ಗೋಡಾನಿನ ಗೋಡೆಗಳಿಗೆ ಆತು ನಿಂತುಕೊ೦ಡವನ ಹೃದಯದಲ್ಲಿದ್ದುದು ನಿರಾಶೆಯಲ್ಲ... ಆಕೆಯೆಡೆಗಿನ ಕೋಪವಲ್ಲ... ಬಹುಶ ಮನೆಯವರು ಆಕೆಯನ್ನು ಒತ್ತಾಯಿಸಿದ್ದಾರೆ ಅದಕ್ಕೆ ಮದುವೆಯಾಗಿದ್ದಾಳೆ ಇಲ್ಲದಿದ್ದರೆ ನನ್ನ ಮರೆಯುತ್ತಿರಲಿಲ್ಲ ಎನ್ನುವ ಕಕ್ಕುಲಾತಿ. ಅದೇ ಯಾವಾಗಲೂ ಹುಡುಗರು ತೋರುವ ಹುಂಬ ವರಸೆ. ಛೇ ...
ಆಕೆ, ನಾವು ಮುಖ ಮೂತಿಯೂ ಕಾಣದ ಬೆಂಗಳೂರಿಗೆ ಮದುವೆಯಾಗಿ ಇವನನ್ನು ಭಗ್ನ ಪ್ರೇಮಿಯಾಗಿಸಿ ಹೋದರೆ ಮುಂದಿನ ಆರು ತಿ೦ಗಳು ಒಣ.. ಒಣ. ಕಾಲೇಜು ಹುಡುಗಿಯರಿಗೆ ಟಿಂಗಲ್ ಇಲ್ಲ... ಬಸ್ ಸ್ಟ್ಯಾಂಡಿನಲ್ಲಿ.. ಗೌಜಿಯಿಲ್ಲ.. ಪಕ್ಕದ ಅಶೋಕ ಕ್ಯಾಂಟಿನ್ ಖಾಲಿ ಖಾಲಿ.. ನಂತರದ ದಿನದಲ್ಲಿ ನಮ್ಮ ಕಾಲೇಜು ರಿಸಲ್ಟ್ ಬಂದರೆ ಪೂರ್ತಿ ಕಾಲೇಜಿಗೆ ಎರಡೇ ಪಾಸು. ಒಂದು ನಾನು ಡಿಸ್ಟಿಂಕ್ಷನಲ್ಲಿದ್ದರೆ. ನನ್ನ ಹಿಂದೆ ಅವನು. ಅದಕ್ಕಿಂತಲೂ ಅವನಿಗೆ ಖುಷಿ ಕೊಟ್ಟಿದ್ದೆಂದರೆ ಬೆಂಗಳೂರಿನ ಕಂಪೆನಿಯೊಂದು ಅವನನ್ನು ಕೈ ಬೀಸಿ ಕರೆದಿತ್ತು. ಪ್ಯಾದೆ ಸ್ನೇಹಿತ " ಸ೦ಜೀಗೇ ಬೆಂಗಳೂರಿಗೆ ಹೊಂಟ ಬಿಡ್ತೇನಿ " ಎಂದು ಎದ್ದು ನಿಂತ. " ಹೇ ಬೆಂಗಳೂರಾಗ ಎಲ್ಲಿ ಉಳೀತಿ..? ಏನ ಮಾಡ್ತಿ..? ಹುಚ್ಚರಂಗಾಡಬ್ಯಾಡ " ಎಂದರೆ " ... ಆಕಿನ್ನ ಬೆಂಗಳೂರಿಗೆ ಕೊಟ್ಟಾರ... ಇವತ್ತಲ್ಲ ನಾಳೆ ಕಂಡಾಳೇಳು.." ಎಂದವನ ಜೇಬಿನಲ್ಲಿ ಇದ್ದಿದ್ದು ಆಗೀನ ಕಾಲಕ್ಕೆ ಸಮೃದ್ಧ ಎನ್ನಿಸುವ ಐನೂರು ರೂಪಾಯಿ ಮಾತ್ರ.
ನಾನು ಮಾತ್ರ ಎಲ್ಲೂ ಏಗದೇ ಮೂರ್ನಾಲ್ಕು ಕಡೆಯಲ್ಲಿ ಮಣ್ಣು ಹೊತ್ತು ಅವನ ಹಿಂದೆ ಒಂದು ವರ್ಷದ ನಂತರ ಅದೇ ಕಂಪೆನಿಗೆ ಹೊರಟು ನಿಂತಾಗ ನನ್ನ ಹತ್ತಿರ ಅಷ್ಟು ದುಡ್ಡು ಕೂಡಾ ಇರಲಿಲ್ಲ. ಆದರೆ ಹೋಟ್ಲು ಸೇರಿಯಾದರೂ ಬದುಕಿಯೇನು ಹಿಂದಿರುಗಲಾರೆನೆಂಬ ಕ್ರೋಧ ಮನೆ ಮಾಡಿದ್ದು ಸುಳ್ಳಲ್ಲ. (ಮುಂದೆಂದೋ ಬಾರ್ ಬಾಯ್ ಆಗಿ ಕೂಡಾ ದುಡಿದೆ ಅದು ಬೇರೆ ಮಾತು) ತೀರ ಬೆಳ್ಳಂಬೆಳಿಗ್ಗೆ ಮ೦ಜಿನ ತೆರೆಯ ಬೆ೦ಗ್ಳೂರಿಗೆ ಕಾಲಿಕ್ಕಿದಾಗ ಎದುರಿಗೆ ನಿಂತಿದ್ದವ ಅದೇ ಸ್ಮಾರ್ಟಿ ಫೇಲೊ ಸ್ನೇಹಿತ. ಮೊದಲಿಗಿಂತಲೂ ಸುಂದರವಾಗಿ ಕಾಣುತ್ತಿದ್ದ. ಆ ದಿನ ಜುಲೈ ಆರ೦ಭದ ದಿನಗಳು. ಬಿ.ಟಿ.ಎಸ್. ಕಡೆಯಲ್ಲಿ ಹೆಜ್ಜೆ ಇಕ್ಕುವ ಮೊದಲೇ ಬ್ಯಾಗಿಗೆ ಕೈ ಹಾಕಿ ಹೇಗಲಿಗೇರಿಸಿದವನ ಬಾಯಿಂದ ಬಂದ ಮೊದಲ ಮಾತೇ ಅದು
" ಇನ್ನ ನಿ ಬಂದ್ಯಲ್ಲ. ಆಕಿನ್ನ ಹುಡುಕೋದ ದ್ವಾಡದೇನಲ್ಲ ಬಿಡ.." ಎಂದಿದ್ದ. ತತಕ್ಷಣಕ್ಕೆ ನಾನು ಗೊತ್ತಾಗದೇ " ಯಾರನ್ನೋ... ? " ಎಂದವನು ನಾಲಿಗೆ ಕಚ್ಚಿಕೊ೦ಡರೇ ಅವನ ಮುಖದಲ್ಲಿ ನೀನು ಅವಳನ್ನು ಮರೆತಿದೀಯಾ ಎನ್ನುವ ವೈಧವ್ಯದ ಕಳೆ.
" ಏನೋ ಮರತ ಬಿಟ್ಟೇನ.. ಆಕಿನ್ನ ನೋಡೂ ಸಲ್ವಾಗೇ ಬೆ೦ಗ್ಳೂರಿಗ ಬಂದೇನಿ. ಬಿ.ಈ.ಎಲ್ ಬಸ್‌ನ್ಯಾಗ ಬೆ೦ಗ್ಳೂರ ಪೂರ್ತಿ ರೌಂಡ್ ಹೊಡದೇನಿ, ಇನ್ನ ನೀ ಇದೀಯಲ್ಲ ಹುಡಕ್ತೇನಿ ಬಿಡ..." ಎಂದವನ ಹೆಗಲಿಗೆ ಕೈಯಿಕ್ಕಿ ಸಂತೈಸಿದ್ದೆ. ಅದೆಂತಾ ನಂಬಿಕೆನೋ..ಅದೃಷ್ಟಾನೊ.. ನಾ ಹೋದ ಮೂರನೆಯ ತಿಂಗಳಲ್ಲೇ ಸೆಪ್ಟೆಂಬರ್ ಸಂಜೆ ಇಬ್ಬರೂ ೨೭೩ ನಂಬರ ಬಸ್ಸಿನಲ್ಲಿ ಹೋಗುತ್ತಿದ್ದರೆ ಪುಟ್ ಬೋರ್ಡಿನಲ್ಲಿ ಆತು ನಿಂತು ಚಲಿಸಿದವನಿಗೆ ಅದ್ಯಾವ ಮಿಂಚೋ ಅದೆಂಥಾ ದೃಷ್ಟಿನೋ... ಮಲ್ಲೇಶ್ವರದ ಹತ್ತನೆ ಕ್ರಾಸಿನಲ್ಲಿ, ಕಿರುಚಿದ .." ಏ ಆಕಿ ಹೊಂಟಾಳ.. ಇಳ್ದ ಬಿಡ.. " ಎನ್ನುತ್ತಾ ಹೋಗುತ್ತಿದ್ದ ಬಸ್ಸಿನಿಂದ ಇಳಿಯಲು ಹೋಗಿ ಮೂರು ಪಲ್ಟಿ ಹೊಡೆದು ಎದ್ದ. ಬಸ್ಸು ಸ್ಲೋ ಆಗುತ್ತಿದ್ದಂತೆ ನಾನೂ ಇಳಿದು ಬಂದೆ.
ಜನವೆಲ್ಲಾ ಶೋ ನೋಡುತ್ತಿದ್ದರೆ.. ನನ್ನ ಕೈ ಹಿಡಿದು "...ಅಲ್ಲಿ ಆಕಿನ್ನ ನೋಡಿದ್ನಿ..." ಎಂದ. ಅಸಲಿಗೆ ನಾನೆಂದೂ ಆಕೆಯನ್ನು ನೋಡಿರಲೇ ಇಲ್ಲ. ಯಾಕೆಂದರೆ ಅವನ ಪ್ರೇಮ ಕಥೆಗೆ ನಾನು ಸಾಕ್ಷಿಯಾಗಿದ್ದರೂ ಯಾವತ್ತೂ ಆಕೆಯ ದರ್ಶನವಾಗಿರಲೇ ಇಲ್ಲವಲ್ಲ. ಅವನು ಕೂಡಲೇ ಕಿತ್ತು ಹೋದ ತನ್ನ ಕೈ ಕಾಲು ಗಮನಿಸದೆ ನನ್ನ ಕೈ ಹಿಡಿದು ಎಂಟನೇ ಕ್ರಾಸಿನತ್ತ ಚಲಿಸಿದವನು ಆಕೆಯನ್ನು ತೋರಿಸುತ್ತಾ ಅವಳೆ ಅವಳೇ ಎನ್ನುತ್ತಾ ಧಡ ಧಡನೆ ನಡೆದು ಆಕೆಯೆದುರಿಗೆ ನಿಂತುಕೊಂಡು "... ಹಾಯ್ ನಾನು ನಿನ್ನ... ಇಲ್ಲೇ ಬೆಂಗಳೂರಾಗಿ ಇದಿನಿ.. " ಎಂದು ಬಿಟ್ಟ. ಒಂದೇ ಕ್ಷಣ. ಗುರುತಿಸಿದ್ದ ಆಕೆಯ ಮುಖ ಅಪರಿಚಿತವಾಯಿತು. ಹುಬ್ಬೇರಿ ಕೆಳಗಿಳಿದು ಪೋನಿ ಮಾಡಿಸಿದ್ದ ಕೂದಲನ್ನು ಹಿಂತಳ್ಳುತ್ತಾ ಅದೇನು ಹೇಳಿದಳೋ... ಅವನಿಗೆ ಜೀವನಾಘಾತವಾಗಿ ಹೋಗಿತ್ತು. ಅಷ್ಟೆ,
ಜಿಟಿಜಿಟಿ ಬೀಳುತ್ತಿದ್ದ ಮಳೆ... ಎಂಟನೆ ಕ್ರಾಸಿನ ಆ ಕೊಚ್ಚೆ... ಚಿಕ್ಕ ಪುಟ್‌ಪಾತು... ಸರಸರನೆ ಸರಿದಾಡುವ ಜನ.. ಉಹೂ೦.. ಯಾವೆಂದರೆ ಯಾವುದೂ ಅವನ ಕಣ್ಣಿಗೆ ಬೀಳಲಿಲ್ಲ. ಆತ ಕುಸಿದು ಗಟಾರಿನ ಗಲೀಜಿನ ಪಕ್ಕಕ್ಕೆ ಅನಾಮತ್ತು ನೆಲಕ್ಕೆ ಕುಳಿತು ಅತ್ತು ಬಿಟ್ಟಿದ್ದ. ತೀರ ಮಗುವಿನಂತೆ ನನ್ನ ಮಡಿಲಿಗೊರಗಿ. ಅಷ್ಟೆ ಆತ ಮತ್ತೆಂದೂ ಚೇತರಿಸಿಕೊಳ್ಳಲೇ ಇಲ್ಲ. ಅದೇನು ಆಕೆ ಹೇಳಿದ್ದಳೋ, ಅದೇ ಚಿಂತೆ ಅವನನ್ನು ಕ್ರಮೇಣ ಹಣಿದು ಬಿಟ್ಟಿತ್ತು. ಒಂದೆಡೆಯಲ್ಲಿ ಪ್ರೀತಿಸಿದವಳು ಕೈಕೊಟ್ಟ ಆಘಾತ. ಕೈಗೆ ಸಿಕ್ಕೂ ಸಿಗದಂತಾಗುತ್ತಿದ್ದ ನೌಕರಿಗಳು, ಎನೇ ಮಾಡಿದರೂ ಆಗಾಗ ಕೈ ಕೊಡುತ್ತಿದ್ದ ಅದೃಷ್ಟ... ನೋವಾ.. ಹತಾಶೆಯಾ ನಿರಾಶೆಯಾ ೧೯೯೭ರ ಅದೇ ಜುಲೈ ರವಿವಾರ ಮಿತ್ರರೊ೦ದಿಗೆ ಮುತ್ತತ್ತಿ ಕಾಡಿಗೆ ಪಿಕ್ ನಿಕ್‌ಗೆ ಹೋದವನು ಊಟಕ್ಕೆಂದು ಕಣ್ಬಿಡುವಷ್ಟರಲ್ಲಿ ಆತ ಹೊರಟುಹೋಗಿದ್ದ. ಎಲ್ಲಿ ಹುಡುಕಿದರೂ ಇಲ್ಲ.
ಅಂದು ಹೋದವ ಮತ್ತೇ ಬರಲೇ ಇಲ್ಲ. ಹೇಗೆ ಬಂದಾನು...? ಅದಕ್ಕೂ ಎರಡು ದಿನದ ಮೊದಲಷ್ಟೆ ಕೂಡಾ ಆತ ಅವಳ ಬಗ್ಗೆಯೇ ಮಾತಾಡಿದ್ದ. ಯಾಕೋ ಆಕಿನ್ನ ಮರಿಯಾಕ ಆಗೋಲ್ಲ ಸಂತೋಷಾ..." ಎಂದು ಕಣ್ಣಿರಾಗಿದ್ದ. ಆಕೆಯ ಮೇಲಿನ ಪ್ರೇಮ ಅವನನ್ನು ಇನ್ನಿಲ್ಲದಂತೆ ಜೀವವನ್ನೇ ಕೊಡುವಷ್ಟು ಹಿಂಡಿ ಬಿಟ್ಟಿತ್ತಾ, ಕೇಳೋಣವೆಂದರೆ ಮುಕ್ಕಾಲಲ್ಲ ಅರ್ಧ ಜೀವನದ ಹಾದಿಯನ್ನು ಸವೆಸುವ ಮೊದಲೇ, ಇದೇ ಕಾಳಿ ನದಿಲಿ ಮೀನಿಗಿಂತಲೂ ವೇಗವಾಗಿ ನೀರಿಗೆ ಬೀಳುತ್ತಿದ್ದವನು ಮುತ್ತತ್ತಿಯ ಮೊಳಕಾಲವರೆಗಿನ ನೀರಿನಲ್ಲಿ ಐಕ್ಯವಾಗಿ ಬಿಟ್ಟ ಅಂದರೆ ಅದು ಇವತ್ತಿಗೂ ಅಚ್ಚರಿಯೇ. ಅದು ಆತ್ಮ ಹತ್ಯೆಯಾ... ಬೇಕಾಗೇ ತಾನಾಗೇ ಬಲಿಗೊಟ್ಟ ಜೀವವಾ... ಅಥವಾ ಕೊಂಚ ಮಾತ್ರ ಉಸಿರುಕಟ್ಟುವಿಕೆಯಿಂದ ಬಳಲುತ್ತಿದ್ದವನ ಅಕಸ್ಮಿಕವಾ... ಗೊತ್ತಿಲ್ಲ. ಅವನ ಮುಕ್ಕಾಲಿಗಿಂತ ಮೊದಲೇ ಮುಗಿದ ಬದುಕಿನ ಹಾದಿಯಲ್ಲಿ ನಾನು ಇಂದಿಗೂ ಒಂಟಿ... ನೆನಪುಗಳು ಮಾತ್ರ ಅವನ ಪವಿತ್ರ ಪ್ರೇಮದಂತೆ.
ಅಸಲಿಗೆ ಹೀಗೆ ಬದುಕಿನ ಪಯಣದಲ್ಲಿ ರೈಲೇರಿದಂತೆ ಬಂದು ಇಳಿದು ಬಿಡುವ ಆತ್ಮೀಯ ಜೀವಗಳು ಪಯಣದುದ್ದಕ್ಕೂ ತಮ್ಮ ಛಾಪನ್ನು ಬಿಟ್ಟು ಬಿಡುತ್ತವಲ್ಲ ಬಹುಶ: ಬದುಕಿನ ಜೀವಸೆಲೆಗೆ ಅವು ಜೀವಂತಿಕೆಯಾಗುತ್ತವಾ...? ಗೊತ್ತಿಲ್ಲ. ಆದರೆ ಮನದಾಳದಲ್ಲೆಲ್ಲೋ ಆಗೀಗ ಒದ್ದೆಯಾಗುವುದಂತೂ ನಿಜ. ಅಷ್ಟಕ್ಕೂ ನನ್ನ ಅವನ ಮೊದಲ ಭೇಟಿಯಾದದ್ಡೂ ಇಂತಹದ್ದೇ ಫೆಬ್ರುವರಿಯ ಮೊದಲವಾರದಲ್ಲ

ಅವರ ಕೊನೆಯ ಆಸೆಗಳು ನನಗೆ ಗೊತ್ತಾಗಲೇ ಇಲ್ಲ...!

ಹಿರಿಯರಾಗಿದ್ದಷ್ಟೂ ನಿರ್ಗಮನದ ಬಾಗಿಲು ತುಂಬ ಹತ್ತಿರಕ್ಕಿರುತ್ತವೆ. ನನಗೆ ಅಂಥ ಆತ್ಮೀಯರ ವಲಯ ದೊಡ್ಡದು. -

ಆ ದಿನಗಳಲ್ಲಿ ನಾನು ವಿಪರೀತ ಕೋಪಕ್ಕೆ ಬೀಳುತ್ತಿದ್ದೆ. ಅದರಲ್ಲೂ ದಿನಾ ರಾತ್ರೆಯಿಡೀ ಕಂಪ್ಯೂಟರ್ ಮುಂದೆ ಕೂತು ಡ್ರಾಯಿಂಗುಗಳನ್ನು ಮಾಡಿ ಅದರದ್ದೇ ಲೈನುಗಳು ತಲೆಯಲ್ಲಿ ಕದಲುತ್ತಿರುವಾಗಲೇ ಎಂ. ಜಿ. ರೋಡ್ ಆಚೆಗೆ ಶಿವಾಜಿನಗರದ ಚೌಕಿನಿಂದ ಆಚೆಗೆ ಸರಿದು ರೂಮಿಗೆ ಬಂದು ಬಿದ್ದರೆ ಎಚ್ಚರವಾಗುತ್ತಿದ್ದುದು ಮಧ್ಯಾನ್ಹದ ಐದು ಗಂಟೆಗೆ ಹಾಸ್ಟೆಲ್ ಆವರಣದಲ್ಲಿ ಟ್ರೇನಿಂಗ್ ಹುಡುಗರು ಬಂದು ಗಿಜಿಗಿಜಿ ಶುರು ಮಾಡಿದಾಗಲೇ. ಅದಕ್ಕೂ ಭಯಂಕರವಾಗಿ ಬೊಬ್ಬಿರಿಯುತ್ತಿದ್ದುದೆಂದರೆ ಯಮ ಹಸಿವು. ಬೆಳ್ಳಿಗೆ ಪಕ್ಕದ ಕಾಕಾನ ಹೊಟೇಲ್ ಭಾರತ ರೆಸ್ಟೋರಾಂಟಿನಲ್ಲಿ ಪರಾಟಾ ತಿಂದು ಮಲಗಿದವನಿಗೆ, ಹಸಿವು ಆ ಹೊತ್ತಿಗೆ ಏನೂ ಆಗಬಹುದೆನ್ನುವಂತಹ ಹಪಾಹಪಿಯನ್ನು ತಂದಿಟ್ಟಿರುತ್ತಿತ್ತು. ಪಕ್ಕದಲ್ಲಿ ನನಗಿಂತಲೂ ಜೋರಾಗಿ ನಿದ್ರೆ ತೆಗೆಯುತ್ತಿದ್ದ ಬಸವನ ಲುಂಗಿ ಒಂದು ಕಡೆ ತಾನೊಂದು ಕಡೆಯಾದರೆ ಅವನ ಪಕ್ಕದಲ್ಲಿ ಮಲಗಿರುತ್ತಿದ್ದ ತಿಪ್ಟೂರು ರವಿಗೆ ಬಾಯಿಯಲ್ಲಿ ಆಗ್ಲೇ ನೊಣವೊಂದು ಸಂಸಾರ ಹೂಡಿ, ಹೊರಡುವ ತಯಾರಿಯಲ್ಲಿದ್ದುದೂ ಗೊತ್ತಾಗದಷ್ಟು ಯಮ ನಿದ್ರೆ. ಅವರಿಬ್ಬರ ಬುಡಕ್ಕೊಂದು ಒದೆ ಒದ್ದು ಬ್ರಶ್ಶು, ನೀರು ಹುಡುಕುವಾಗ ಅಡರುತ್ತಿದ್ದ ಆಗೀನ ಬೆಂಗಳೂರು ಚಳಿ ಹೊರಬೀಳುವ ಮುನ್ನ ಜಾಕೆಟ್ಟು ಹುಡುಕುವಂತೆ ಮಾಡುತ್ತಿತ್ತು. ಹಾಗೆ ಹೊರಟು ಎಂ.ಈ.ಎಸ್. ರೋಡಿನ ಕೊನೆಯ ಬಾರಿನಲ್ಲಿ ಕುಳಿತು ಇಷ್ಟಿಷ್ಟು ಬೀಯರು ಕುಡಿದು, ಮಿಲ್ಟ್ರಿ ಕ್ಯಾಂಟಿನಿನಲ್ಲಿ ಅವರಿಬ್ಬರು ಹೊಂತೆ ತಿಂದರೆ, ನನ್ನದು ಮಾತ್ರ ಅದೇ ಒಣಕಲು ಚಪಾತಿ ಮತ್ತು ಮೊಟ್ಟೆ ಸಾರಿನ ಸುಗ್ಗಿ ಜಾಲಹಳ್ಳಿಯ ರಾಘವೆಂದ್ರ ಭವನದಲ್ಲಿ. ಹಾಗೆ ಕುಳಿತಾಗಲೇ ಅದೊಂದಿನ ಅವರು ಪರಿಚಯವಾಗಿದ್ದು. ಆ ದಿನ ಶನಿವಾರವಾದ್ದರಿಂದ ಕುಡುಕರ ನಿಯಮದಂತೆ ಕೊಂಚ ಹೆಚ್ಚೇ ಕುಡಿದು, ಇನ್ನೇನು ಉಂಡು ಮುಗಿಯಬೇಕು ಮಾಣಿ ಇದ್ದಕ್ಕಿದ್ದಂತೆ "...ಸಾರ್ ಚಪಾತಿ ಖಾಲಿ..." ಅಂದು ಬಿಡಬೇಕೆ. ಸಮಯ ನೋಡಿಕೊಂಡೆ ಆಗಿನ್ನು ಎಳೂ ಮುಕ್ಕಾಲು ಆಗಿಲ್ಲ. ಅಸಲಿಗೆ ಅದು ತುಂಬಾ ಚಿಕ್ಕ ಹೊಟೇಲು. ದಿನಕ್ಕೆ ಇಪ್ಪತ್ತು ಊಟ ಹೋದರೆ ಜಾಸ್ತಿ. ಅದಕ್ಕಾಗಿ ಲಿಮಿಟೆಡ್ಡು ಪ್ರಿಪರೇಶನ್‌ನಲ್ಲಿ ಅವನಿದ್ದರೆ ನನಗೆ ಉರಿ ಉರಿ. ಬಾಯಿಗೆ ಬಂದದ್ದು ಕಕ್ಕಿ ಅವನನ್ನು ಸಿಗಿದು ಬಿಡುವ ಕೋಪದಲ್ಲಿ ಕೂಗಾಡುತ್ತಿದ್ದರೆ ಆಚೆ ಟೇಬಲ್ಲಿಗೆ ಕುಳಿತಿದ್ದ ವೃದ್ಧರೊಬ್ಬರು ತಣ್ಣಗೆ, " ಯಾಕಪ್ಪಾ ಚಪಾತಿ ತಾನೆ ಇದು ತೊಗೊ... " ಎನ್ನುತ್ತಾ ತಮಗೆಂದು ತಂದಿರಿಸಿದ್ದ ತಟ್ಟೆಯನ್ನು ನನ್ನೆದುರಿಗೆ ತಳ್ಳಿ ಕೈ ತೊಳೆದು ನಡೆದುಬಿಟ್ಟಿದ್ದರು. ಕುಳಿತಲ್ಲೇ ನಾನು ನೀರಾಗಿದ್ದೆ. ಮುಂದಿನ ಕೆಲವೇ ದಿನಗಳಲ್ಲಿ ನನ್ನ ಅವರ ಮಧ್ಯೆ ಬೆಳೆದ ಬಾಂಧವ್ಯ, ವಯಸ್ಸು ಹೊರತು ಪಡಿಸಿ ಅವರು ಎಲ್ಲದರಲ್ಲೂ ಅಪ್ಪಟ್ಟ ಹೆಗಲು ತಬ್ಬಿ ನಡೆವ ಸ್ನೇಹಿತನಂತೆ. ವಯಸ್ಸಿನಲ್ಲಿ ಮಾತ್ರ ಬಹುಶ: ಅವರಿಗಾದ ಜೀವನಾನುಭವದ ಅರ್ಧದಷ್ಟು ನನಗಾಗಿರಲಿಲ್ಲ. ಈ ವಿಷಯದಲ್ಲಿ ನಾನು ನಿಜಕ್ಕೂ ಅದೃಷ್ಟ ಶಾಲಿಯೋ ಅಥವಾ ಒಂದು ರೀತಿಯಲ್ಲಿ ವಿಚಿತ್ರ ಪ್ರಾಣಿನೋ ಗೊತ್ತಿಲ್ಲ. ಮೊದಲಿನಿಂದಲೂ ಇವತ್ತಿನವರೆಗೂ ನನ್ನ ಗಾಢ ಗೆಳೆತನ ಎನ್ನುವುದು ಏನಿದ್ದರೂ ತೀರ ವಯಸ್ಸಾದ ಜೀವಗಳೊಂದಿಗೆ ಹೆಜ್ಜೆ ಹಾಕಿ ಬೆಳೆದದ್ದೇ. ಹಾಗೆ ಎಲ್ಲಾ ಹಿರಿಯರೂ ಕೂಡಾ ತೀರ ಪಕ್ಕದ ವಯಸ್ಸಿನ ಹುಡುಗರಂತೆ ನನ್ನ ಪರಿಗಣಿಸಿದರು ಆನ್ನೋದು ಇವತ್ತಿಗೂ ವಿಸ್ಮಯಕಾರಿನೇ. ಮೊದಮೊದಲಿಗೆ ತೀರ ಚಿಕ್ಕವನಾಗಿದ್ದಾಗ ನಾಲ್ಕನೆಯತ್ತೆ ದಾಟದ ನಾನು ಮಧ್ಯಾನ್ಹದ ಉರಿ ಬಿಸಿಲಲ್ಲಿ ಬ್ಯಾಣಕ್ಕೆ ಬೆಂಕಿ ಇಕ್ಕಲು, ಅಗಳದ ಮಧ್ಯೆ ಕಟ್ಟಿಕೊಂಡಿದ್ದ ಹೆಜ್ಜೇನು ಹುಡುಕಲು ಕಂಬಳಿ ಗೊಪ್ಪೆ ಹಾಕಿಕೊಂಡು, ಕೊನೆಗೆ ಏನಿಲ್ಲವೆಂದರೂ ಪೇರು, ಮುಳ್ಳಣ್ಣು, ಹಲಸಿನಣ್ಣು, ಪನ್ನಿರಲ ಕಿತ್ತಲು, ಕೊನೆಗೆ ಕಾನಿನಲ್ಲಿ ಬಿಳಲು ತರಲು, ಗೂಟ ಕಡಿದುಕೊಂಡು ಬರಲೆಂದು ಅಕ್ಷರಶ: ನನ್ನ ಮೂರರಷ್ಟು ಹೆಚ್ಚಿನ ವಯಸ್ಸಿನ ಸೋದರ ಮಾವನೊಂದಿಗೆ, ನನ್ನ ಸಮ ಸಮಕ್ಕೆ ಬರುತ್ತಿದ್ದ ಹಿಡಿಗತ್ತಿಯನ್ನು ಎಳೆಯುತ್ತಾ ಹೊರಟಿರುತ್ತಿದ್ದೆ. ಹಾಗೆ ಸರಿ ಸುಮಾರು ಇಪ್ಪತ್ತೈದು ವರ್ಷ ಕಳೆದರೂ ಹಳೆಯದನ್ನು ನೆನೆಸಿಕೊಳ್ಳುತ್ತಾ ಮಾತಿಗೆ ಕುಳಿತರೆ ಮಾವ ಈಗಲೂ ಅದೇ ಹರೆಯದ ಮಲೆನಾಡಿನ ಹುಲಿಯೇ. ನಂತರದಲ್ಲಿ ನನ್ನೊಂದಿಗೆ ಎರ್ಡ್ಮೂರು ವರ್ಷ ಸೇವೆಯ ಆರಂಭದ ದಿನದಲ್ಲಿ ಹೆಜ್ಜೆ ಹಾಕಿದ ಪವಿತ್ರನ್ ಎಂಬ ಜೀವ ಕೂಡಾ ಕನಿಷ್ಟ ಎರಡು ದಶಕದಷ್ಟು ಹಿರಿತನದ್ದು. ಅಲ್ಲಿಂದ ಮತ್ತೆ ತಿರುಗಣಿ ತಿರುಗಿ ಇದೇ ಉ.ಕ. ಜಿಲ್ಲೆಗೆ ಬಂದು ಕುಳಿತ ಮೊಟ್ಟ ಮೊದಲ ದಿನದಿಂದ ಹಿಡಿದು ಮೊನ್ನೆ ಮೊನ್ನೆ ರಿಟೈರಾಗುವವರೆಗೂ ನನ್ನೊಂದಿಗೆ ಕೆಲಸದಿಂದ ಹಿಡಿದು ಕಾರು-ಬಾರು, ಎಲ್ಲಾ ಹಂಚಿಕೊಂಡು ಹೋದವರೂ ಕೂಡಾ ನಾನು ಹುಟ್ಟುವ ಮೊದಲೇ ನೌಕರಿಗೆ ಸೇರಿದ್ದಷ್ಟು ದೊಡ್ಡ ಹಿರಿಯರು. ಅತ್ತ ಸಾಹಿತ್ಯಿಕ ವಲಯದಲ್ಲಿ ಇವತ್ತೀಗೂ ಗಾಢ್‌ಫಾದರ್‌ಗಳಿಲ್ಲದೇ ಕಾಲೂರುವಾಗ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನಕ್ಕೆಂದು ನಿಂತಿದ್ದವರು ಕೊನೆಕೊನೆಗೆ ನನ್ನೊಂದಿಗೆ ಬಾ ಹೋಗು ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಸ್ನೇಹಿತರ ವಲಯಕ್ಕೆ ಲಗ್ಗೆ ಇಟ್ಟು ಬಿಟ್ಟರು. ಮೊನ್ನೆ ಮೊನ್ನೆ ಆಕಸ್ಮಿಕವಾಗಿ ಹೀಗೆ ಯಾವತ್ತೋ ಬದುಕಿನ ರೈಲಿನಲ್ಲಿ ಸ್ಟೇಶನ್ನು ಬಂದಾಗ ಇಳಿದು ಹೋದ ಪ್ರಯಾಣಿಕರಂತೆ ಮರೆಯಾಗಿದ್ದ ವಯಸ್ಕ ಆತ್ಮೀಯರು ಕರೆ ಮಾಡಿ ಮಾತಾಡಿಸಿದಾಗ ಆಘಾತ. ನಾನು ಅವರು ಬಹುಶ: ತೀರಿಯೇ ಹೋಗಿದ್ದಾರೆಂದು ಭಾವಿಸಿದ್ದೆ. ಅವರಲ್ಲಿ ಹಾಗೆ ಹೇಳಿ ಕ್ಷಮೆ ಕೇಳಿ ಬೈಸಿಕೊಂಡೆ. ಈಗಲೂ ಅವರಲ್ಲಿ ಆಗಿನಿಂದಲೂ ಇದ್ದ ಅದೇ ಹಾಸ್ಯಮಯ ಧಾಟಿ. ಕೊನೆಯಲ್ಲಿ " ಇಷ್ಟು ಬೇಗ ಕಳಿಸ್ಬೇಡವೋ ಇನ್ನೊಂದು ಮದುವೆಯಾಗಿ ಸಂಸಾರ ಮಾಡಬೇಕಿದೆ... " ಎಂದು ಲಂಪಟ ಗಂಡಸಿನಂತೆ ಹಾಸ್ಯ ಮಾಡಿ ಫೋನಿಟ್ಟರು. ಕಳೆದ ವರ್ಷ ಹಿಮಾಲಯದ ಪಾದಕ್ಕೆ, ಅಲ್ಲಿನ ಚಳಿಗೆ ನಮ್ಮ ಸೊಕ್ಕು ಕರಗಿಸಿಕೊಳ್ಳಲೆಂದು ಹೋದಾಗ, ನಮಗಿಂತಲೂ ವೇಗವಾಗಿ ಹಿಮದಲ್ಲಿ ಪರ್ವತಗಳನ್ನು ಏರಿ ನಿಂತು, ಬನ್ನಿ ಬನ್ನಿ ಎಂದು ಕರೆಯುತ್ತಿದ್ದ ದ.ಕ. ವೃದ್ಧ(?)ರೊಬ್ಬರು ಭೇಟಿಯಾದರು. ಕೇವಲ ಮೂರು ತಾಸುಗಳ ಆರಂಭಿಕ ಭೇಟಿ ಅದು. ಚಾರಣದ ಹದಿನೈದು ದಿನದ ನಂತರ ಬೇರ್ಪಡೆಯಾದರೂ ಇವತ್ತಿಗಾಗಲೇ ಅವರು ಕನಿಷ್ಟ ವಾರಕ್ಕೊಮ್ಮೆಯಾದರೂ ಕರೆ ಮಾತಾಡುವಷ್ಟು ಆತ್ಮಿಯರು. ಅಷ್ಟೇಕೆ ಕಳೆದ ರಾಷ್ಟ್ರ ಮಟ್ಟದ ವೈಜ್ಞಾನಿಕ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ, ಅದಕ್ಕೂ ಮೊದಲು ಪಾಂಡಿಯಲ್ಲಿ ನಡೆದಾಗ ಎರಡೂ ಕಡೆಯಲ್ಲೂ ನೆರೆದಿದ್ದ ಗುಂಡು ಕಂಪೆನಿಯಲ್ಲಿ ಕುಳಿತುಕೊಳ್ಳಲು ಅನುಮಾನಿಸುವಷ್ಟು ಹಿರಿಯರು ನನ್ನೊಂದಿಗಿದ್ದರು.  ಆಗ ಬೆಂಗಳೂರಿನಲ್ಲಿ ಹೀಗೆ ಚಪಾತಿಯಿಂದ ಆರಂಭವಾದ ಸ್ನೇಹ ಆಗೀಗ ಕುಳಿತು ಗುಂಡು ಹಾಕುವವರೆಗೂ ಸಲುಗೆ ಬೆಳೆದು, ಉಳಿದಂತೆ ಅದ್ಭುತ ಮಾತುಗಾರರಾದ ಅವರು ರಾಮಕೃಷ್ಣ ಹೆಗಡೆಯಿಂದ ಹಿಡಿದು, ಪೋರೆನ್ಸಿಕ್ ಸೈನ್ಸ್‌ನಿಂದ ತೀರ ಪೋಲಿಸ್ ಟಾರ್ಚರುಗಳು, ಅದರಲ್ಲಿ ವಿವಿಧ ದೇಶದ ವಿಧಾನಗಳನ್ನು ಉಲ್ಲೇಖಿಸುತ್ತಾ, ತಾವು ಉತ್ತರ ಭಾರತದಲ್ಲಿ ಕಳೆದ ದಿನಗಳ ಬಗ್ಗೆ ವಿವರಿಸುತ್ತಿದ್ದರೆ ರಾತ್ರಿಗಳಿಗೆ ಬೆಂಕಿ ಬೀಳಬೇಕು. ಅದೊಂದಿನ ನಾನು ಭಾರತ ರೆಸ್ಟೋರಾಂಟಿಗೆ ಹೋಗುವಾಗ ಅಕಸ್ಮಾತಾಗಿ ಅವರು ರಾಯಚೂರಿನ ರಾಜರಾಂನೊಂದಿಗೆ ನಿ೦ತಿದ್ದು ಕಾಣಿಸಿತ್ತು. ಯಾವತ್ತೂ ಹೀಗೆ ಅದರಲ್ಲೂ ಲಫಂಗರಿಗೆ ಗುರುವಿನಂತಿದ್ದ ರಾಜಾರಾಮನೊ೦ದಿಗೆ ಪರಿಚಯ ಇದ್ದಿರಬಹುದೆನ್ನುವ ಅಂದಾಜಿರದ ನನಗೆ ಅವರು ಅವನ ತಂದೆಯೆಂದೂ, ಇವನ ಕಾಟಾಚಾರಕ್ಕೆ ಬೇಸತ್ತು ಬೆಂಗಳೂರಿಗೆ ಬಂದರೆ ಈ ಪುಣ್ಯಾತ್ಮ ಕೂಡಾ ಬಂದು ಇದೇ ಜಾಲಹಳ್ಳಿಯಲ್ಲಿ ಕಾಲೂರಿರಬೇಕೆ...? ಆ ದಿನ ಅವರು ಕುಸಿದು ಹೋಗಿದ್ದರು. ಆಗ್ಲೇ ಊರು ಬಿಟ್ಟು ನಾಲ್ಕು ವರ್ಷಗಳಾಗಿದ್ದುವಂತೆ. ಅವರಿಗೆ ಪೆನ್ಶನ್ ಇತ್ತು. ಬೊಮ್ಮಸಂದ್ರದ ಮೂಲೆಯಲ್ಲಿ ಚಿಕ್ಕ ರೂಮು ಮಾಡಿಕೊಂಡಿದ್ದರು. ಪೇಪರು ಓದು, ವಾಕಿಂಗ್, ಸಂಜೆ ಮೂಡಿದ್ದರೆ ಗುಂಡು, ಪಾನಿ ಪೂರಿ ಆರಾಮವಾಗಿ ಎಲ್ಲ ಗೋಜಲು ಬಿಟ್ಟು ಸ್ವಂತ್ರತ್ರವಾಗಿ ಕಳೆದವರಿಗೆ ಇದ್ದಕ್ಕಿದ್ದಂತೆ ವಕ್ಕರಿಸಿದ್ದ ರಾಜಾರಾಂ ತಲೆ ನೋವು ತಂದಿಟ್ಟಿದ್ದ. ನಾನು ಅವರ ಪರವಾಗಿ ಮಾತಾಡಿ ಅವನು ಬೊಮ್ಮಸಂದ್ರದ ರೂಮಿಗೆ ಹೋಗಿ ಕಾಡದಂತೆಯೂ, ಕಾಸು ಮತ್ತೊಂದು ಎಂದು ಹಿಂದೆ ಬೀಳದಂತೆ ಮಾಡಿದ್ದೇನಾದರೂ ಅವರಲ್ಲಿ ಮೊದಲಿದ್ದ ಖುಶಿ ಉಳಿದಿರಲಿಲ್ಲ. ಅವರವರ ವೈಯಕ್ತಿಕ ವಿಷಯಗಳೇನೇನಿದ್ದವು...? ವೃದ್ಧ ಜೀವ ಜೀವನದಲ್ಲಿ ಆಸಕ್ತಿ ಕಳೆದುಕೊಂಡಂತಿತ್ತು. ಇದ್ದಕ್ಕಿದ್ದಂತೆ ಒ೦ದಿನ ನಾಪತ್ತೆ ಆಗಿ ಬಿಟ್ಟಿದ್ದರು. ಸುತ್ತ ಮುತ್ತೆಲ್ಲಾ ಹುಡುಕಾಡಿದೆವು. ಬಸು, ರವಿ, ಪ್ರದೀಪ, ಮೈಸೂರಿನ ಮುಕುಂದ ಎಲ್ಲಾ ಜಾಲಹಳ್ಳಿಯಿಂದ ಎಂ.ಎಸ್. ರಾಮಯ್ಯವರೆಗೂ ಗಲ್ಲಿಗಳನ್ನು ತಿರುವ್ಯಾಡಿ ಬಿಟ್ಟಿದ್ದೆವು. ಬಹುಶ: ರಾಜಾರಾಂ ಕಿರಿಕಿರಿ ಮಾಡಿದನೇನೋ ಎಂದು ಎತ್ತಾಕಿಕೊಂಡು ಸಮಾ ರೂಮಿನಲ್ಲಿ ಚಚ್ಚುತ್ತಿದ್ದರೆ ಅವನೋ ಊರೇ ಸೇರುವಂತೆ ಏಟಿಗೂ ಮುಂಚೆ ಕಿರುಚಲಾರಂಭಿಸಿದ್ದ. ಅದಾಗಿ ನಂತರದಲ್ಲಿ ಅವರು ಕಂಡಿರಲೇ ಇಲ್ಲ. ಇದ್ದಕ್ಕಿದ್ದಂತೆ ಒಂದಿನ ನಾಲೈದು ವರ್ಷದ ಹಿಂದೆ ಮೆಜೆಸ್ಟಿಕ್ಕಿನಲ್ಲಿ ಕಂಡವರು ತಾವಾಗೆ ಕೂಗಿ ಮಾತಾಡಿಸಿದ್ದರು. ಕೊಂಚ ಇಳಿದು ಹೋಗಿದ್ದಾರೆ ಅನಿಸಿದ್ದು ಬಿಟ್ಟರೆ ಅದೇ ವಿಶಾಲ ನಗೆ. ಅದೇ ನಿರರ್ಗಳ ಮಾತು. ಮಧ್ಯಾನ್ಹದ ಹೊತ್ತೆ ಬಿಟ್ಟು ಬಿಡದೆ ಕರೆದೊಯ್ದು ಗ್ರಿನ್ ಹೋಟೆಲಿನಲ್ಲಿ ಕೂಡಿಸಿಕೊಂಡಿದ್ದರು. ಬೇಕೆಂದೇ ಜಾಲಹಳ್ಳಿ ಬಿಟ್ಟು ಬೆಂಗಳೂರಿನ ಇನ್ನೊಂದು ದಿಕ್ಕಿನ ಇಂದಿರಾನಗರದ ಕಡೆಗೆ ಸರಿದು ಹೋಗಿ ರೂಮು ಮಾಡಿಕೊಂಡಿದ್ದಾಗಿ ತಿಳಿಸಿದ್ದರು. ನಾನೂ ಹೆಚ್ಚು ಕೆದಕಿರಲಿಲ್ಲ. ಅದಾಗಿ ವರ್ಷಗಳೇ ಸರಿದವು.  ಮೊನ್ನೆ ಇದ್ದಕ್ಕಿದ್ದಂತೆ ಅದೇ ಬಿ.ಇ.ಎಲ್.ನಲ್ಲಿ ಈಗ ಎಂಪ್ಲಾಯಿ ಆಗಿರುವ ಶ್ರೀನಿವಾಸ ಕರೆ ಮಾಡಿದವನು "...ನಿನ್ನ ಒಲ್ಡ್ ಫ್ರೆಂಡ್ ಹೋಗಿ ಬಿಟ್ಟರಂತೆ ಕಣೊ..." ಎಂದರೆ ಒಮ್ಮೆ ಕ್ಷಣಕ್ಕೆ ಅರಿವಾಗಲಿಲ್ಲ " ಯಾರು ಎಂದೆ...?" " ಅದೇ ಬೊಮ್ಮ ಸಂದ್ರದಲ್ಲಿದ್ದರಲ್ಲ ಅವರು..." ಒಹೋ.. ಮುಂದೆ ಮಾತಾಡಲಾಗಲಿಲ್ಲ. ... ನಾಲ್ಕು ದಿನ ಮೊದಲು ಇಲ್ಲಿ ಗಣಪತಿ ದೇವಸ್ಥಾನದ ಹತ್ತಿರ ಸಿಕ್ಕಿದವರು ನನ್ನ ಬಗ್ಗೆ ವಿಚಾರಿಸಿದ್ದರಂತೆ. ಮೊಬೈಲು ನಂಬರು ಕೊಡು ಎಂದಿದ್ಡಾರೆ. ಇವನು ಆಯಿತು ವಿಚಾರಿಸಿ ಕೊಡುತ್ತೇನೆ ಎಂದು ಎರಡ್ಮೂರು ದಿನವಾದರೂ ನನ್ನನ್ನು ಸಂಪರ್ಕಿಸಿಲ್ಲ. ಮರುದಿನ ಕೂಡಾ ಸಿಕ್ಕಿದಾಗ ನಂಬರು ಇನ್ನು ತೆಗೆದುಕೊಳ್ಳಲಾಗಿಲ್ಲ ಅಂದಿದ್ದಕ್ಕೆ ಮುಖ ಸಣ್ಣದು ಮಾಡಿ ಅವನ ಹತ್ತಿರ ಮಾತಾಡಬೇಕಿತ್ತು .. ಛೇ... ಎಂದು ಗೊಣಗಿಕೊಂಡಿದ್ದಾರೆ ಅಷ್ಟೆ. ಮರುದಿನಕ್ಕೆ ಅವರಿಲ್ಲ. ಜಾಲಹಳ್ಳಿಯಲ್ಲಿ ಎಂದಿನಂತೆ ಭೇಏಯಾಗುತ್ತಿದ್ದ ಗಣೇಶ ದೇವಸ್ಥಾನದ ಹತ್ತಿರ ಕಲ್ಲು ಬೆಂಚಿನ ಮೇಲೆ ಕುಳಿತಲ್ಲೇ ಪ್ರಾಣ ಬಿಟ್ಟಿದಾರೆ.." ಮುಂದಿನ ಮಾತು ಕೇಳಿಸಿಕೊಳ್ಳಲಿಲ್ಲ. ಕೊನೆಯ ಕ್ಷಣದಲ್ಲಿ ಮನಸ್ಸು ಖಾಲಿ ಖಾಲಿಯಾದಂತೆನಿಸಿತು. ಯಾಕೆಂದರೆ ಹಿರಿಯರಾಗಿದ್ದಷ್ಟೂ ನಿರ್ಗಮನದ ಬಾಗಿಲು ತುಂಬ ಹತ್ತಿರಕ್ಕಿರುತ್ತವೆ. ನನಗೆ ಅಂಥ ಆತ್ಮೀಯರ ವಲಯ ದೊಡ್ಡದು. ಮತ್ಯಾವ ಕರೆಯೂ ಅಂತಹದ್ದು ಬಾರದಿರಲಿ ಅನ್ನಿಸಿ ಎರಡು ನಿಮಿಷ ಮೌನವಾಗಿದ್ದು ಬಿಟ್ಟೆ. ಆ ದಿನ ಪೂರ್ತಿ ಮೊಬೈಲಿಗೆ ಕಿವಿಗೊಡಲೇ ಕಿರ್ಕಿರಿ. ಪಾಪ ಒಂದು ದಶಕಕ್ಕೂ ಹೆಚ್ಚಿನ ಕಾಲ ಒಬ್ಬಂಟಿಯಾಗಿ ಕಳೆದು ಹೋದ ಆ ಹಿರಿಯ ಜೀವಕ್ಕೆ ಏನು ಹೇಳಿಕೊಳ್ಳುವುದಿತ್ತೋ...? 

ಅವನಿಗೇನೋ ಕಾರಣಗಳಿದ್ದವು. ನನಗ್ಯಾವ ಕೀಳರಿಮೆ ಕಾಡಿತ್ತು ... ?


SANTOSHKUMAR MEHANDALE's picture
ಬಾಲ್ಯ ಕಾಲದ ಕಥನ 
ಮೌನದ ಮಾತುಗಳು..
 ( ಹತ್ತಾರು ವರ್ಷಗಳ ಹಿಂದೆ ಆತ " ಬೇರೆದಾವ್ರ ಕಡಿಂದ ಹೇಳಿಸಿಕೊಂಡ ನಗೋದಕ್ಕಿಂತ ನಾವ ಹೇಳಿಕೊಂಡ್ರ ಏನೂ ಅನಸಾಂಗಿಲ್ಲ ನೋಡಲೇ..." ಎಂದಿದ್ದ..) ಮೊನ್ನೆ ಮೈಸೂರಿನಲ್ಲೊಂದು ರಾಷ್ಟ್ರಮಟ್ಟದ ಕಾನ್ಫ್‌ರೆನ್ಸಿನಲ್ಲಿ ಪಾಲ್ಗೊಳ್ಳುವ, ತನ್ಮೂಲಕ ಮರಾಠಿಯ ಜನಪ್ರಿಯ ದಿನಪತ್ರಿಕೆ " ಲೋಕಸತ್ತಾ" ದ ಸಂಪಾದಕರಾದ ಶ್ರೀಯುತ ಕುಮಾರ್ ಕೇತ್ಕರ್ ಅವರ ಜೊತೆಯಲ್ಲಿ ವಿಡಿಯೋ ಕಾನ್ಫರೆನ್ಸಿನಲ್ಲಿ ನಮ್ಮವರ ಪರವಾಗಿ ಸಂವಾದ ನಡೆಸುವ ಅಪರೂಪದ ಅವಕಾಶ ದೊರಕಿತ್ತು. ಈ ಸಂವಾದ ಮುಂಬೈನ ಮುಖ್ಯ ವಾಹಿನಿಯಲ್ಲಿ ಪ್ರಸಾರವಾಯಿತು ಕೂಡಾ. ಬಹುಶ: ನನಗಾದ ಒಟ್ಟು ವಯಸ್ಸಿನಷ್ಟು ಅವರ ಪತ್ರಿಕೋದ್ಯಮ ಸೇರಿದಂತೆ ಅನುಭವಕ್ಕೇನೆ ಅಷ್ಟು ವಯಸ್ಸಾಗಿದ್ದಿರಬೇಕು.
ಅದರಲ್ಲಿ ದೇಶದ ಸೈನ್ಸ್‌ಫಿಕ್ಷನ್ ಸಾಹಿತ್ಯ ಜಗತ್ತಿನ ಗಣ್ಯಾತಿಗಣ್ಯರೆಲ್ಲಾ ಪಾಲ್ಗೊಂಡಿದ್ದರು. ಚೆನೈನ ಶ್ರೀ ಪನ್ನೀರ್ ಸೆಲ್ವಂ ಎಂಬ ವಿದೇಶದಲ್ಲೆಲ್ಲಾ ಇನ್ನಿಲ್ಲದಂತೆ ಸೈನ್ ಫಿಕ್ಷನ್ ಬಗ್ಗೆ ಪಾಂಗಿತವಾಗಿ ಮಾತಾಡಿ ಹೆಸರು ಗಳಿಸಿದ ಬುದ್ಧಿಜೀವಿಯೂ ಅಲ್ಲಿದ್ದರು. ದಿನಕರ ಚರಕ ಎಂಬ ತುಂಬು ಮುಖದ ಕಾಶ್ಮೀರಿ ಸುಂದರಾಂಗ ಜಾಗತಿಕವಾಗಿ ಹೆಸರು ಮಾಡಿರುವ ಛಿಜಿezಥಿಛಿ.ಜಣಡಿ ಎಂಬ ವೆಬ್ ಮಾಲೀಕ ಹಾಗು ಸಂಪಾದಕ ಅಮೇರಿಕೆಯಿಂದ ಬಂದು ಅದರಲ್ಲಿ ಪಾಲ್ಗೊಂಡಿದ್ದ. ಹಾಗೆ ತುಂಬ ಅಕಸ್ಮಿಕವಾಗಿ ನನಗೆ ಅವಕಾಶ ಲಭ್ಯವಾಗಿದ್ದ ಆ ಸಮಾರಂಭದಲ್ಲಿ ತುಂಬು ವಯಸ್ಸಿನ ಹಿರಿಯರಾದ ಜಿ.ಟಿ.ನಾರಾಯಣರಾವ್ ಕೂಡಾ ಸೇರಿದ್ದರಲ್ಲದೇ ಕೊನೆಯಲ್ಲಿ ಹೋಗುವಾಗ ಕಾಲಿಗೆ ನಮಸ್ಕರಿಸಲೆಂದು ಹೋದರೆ, ಕೆಳಕ್ಕೆ ಬಿಡದೆ ತಬ್ಬಿಕೊಂಡು "...ಇನ್ನು ತುಂಬಾ ಬೆಳೀಬೇಕಪ್ಪಾ ಚೆನ್ನಾಗಿ ಬರೀತಿ... ಹೀಗೇ ಬರೀತಿರು..." ಎಂದು ಹರಸಿದ್ದರು. ಮಾತಾಡದೆ ಸುಮ್ಮನೆ ಅವರಿಗೆ ತಲೆ ಬಾಗಿದ್ದೆ.
ಅದೇ ದಿನ ಸಂಜೆ ಒಂದು ಕರೆ ನನ್ನ ಅಂಕಣವನ್ನು ಹೊಗಳಿಕೊಂಡು ಬಂದಿತ್ತು. ಅಸಲಿಗೆ ಕರೆ ನೀಡಿರುವ ವ್ಯಕ್ತಿಯನ್ನು ನಾನು ಯಾವುದೇ ಕಾರಣಕ್ಕೂ ನೆನಪಿಸಿಕೊಳ್ಳುವ ಸಂಪಕ೯ವಿರಲೇ ಇಲ್ಲ. ಅಸಲಿಗೆ ಆತ ನಾನಿದ್ದ ಊರಿನವನೂ ಅಲ್ಲ. ಹಿಂದೊಮ್ಮೆ ನಾನಿದ್ದ ಪಕ್ಕದ ಅರ್ಲವಾಡಾದಿಂದ ಕರೆ ನೀಡಿದ್ದ. ತುಂಬು ಧನ್ಯವಾದಗಳೊಂದಿಗೆ ಸಂಪರ್ಕ ಕಡಿಯುವಾಗ ನಮ್ಮೂರಿನ ಹುಡುಗನೊಬ್ಬನ ನೆನಪು ತೂರಿ ಬಂದಿತ್ತು. ಅಲ್ಲಿಯವರೆಗೂ ಆತ ನನ್ನ ನೆನಪಿನಾಳದಲ್ಲಿ ಕದಲಿರಲೇ ಇಲ್ಲ. ಅಸಲಿಗೆ ಅವನ ಹೆಸರೂ ಕೂಡಾ ನನಗೆ ನೆನಪಿಲ್ಲ. ನಾನಿದ್ದ ಊರಿನಲ್ಲಿ ಹಿಂದಿನ ಓಣಿಯಲ್ಲಿ ಅವನು ವಾಸಿಸುತ್ತಿದ್ದ. ಅವನು ಬಹುಶ: ನನಗಿಂತಲೂ ಎರಡ್ಮೂರು ವರ್ಷಕ್ಕೆ ದೊಡ್ಡವನಿದ್ದ. ಒಂದು ಕಾಲು ಕೊಂಚ ಊನವಿತ್ತಾ ಈಗ ಖಚಿತವಾಗಿ ನೆನಪಾಗುತ್ತಿಲ್ಲ. ನಾನು ಬಹುಶ: ಏಳನೆಯ ತರಗತಿಯಲ್ಲಿದ್ದೆ. ಆತ ಆಗಲೇ ಹೊಲದ ಕೆಲಸಕ್ಕೆ ಹೋಗುತ್ತಿದ್ದ. ಕೊಂಚ ವಿಚಿತ್ರವಾಗಿ ಆಡುತ್ತಿದ್ದ ಅವನು. ಆ ಬಗ್ಗೆ ಯಾರೂ ಅಷ್ಟಾಗಿ ಗಮನ ನೀಡಿರದಿದ್ದರೂ ಕೂಡಾ ಅವನಲ್ಲಿ ಒಂದು ಇನ್ಫೀರಿಯಾರಿಟಿ ಬೆಳೆದುಬಿಟ್ಟಿತ್ತಾ ಈಗಲೂ ಖಚಿತವಾಗುತ್ತಿಲ್ಲ.
ಆದರೆ ಇದ್ದಕ್ಕಿದ್ದಂತೆ ಒಂದಿನ ಸಂಜೆಯ ಹೊತ್ತು ಊರ ಹೊರಗಿನ ಬಯಲಲ್ಲಿ ಇತರ ಹುಡುಗರು ಆಟವಾಡುತ್ತಾ ಆನಂದಿಸುತ್ತಿದ್ದ ವಾಲಿ ಬಾಲ್ ಸಂಭ್ರಮದಲ್ಲಿ ಭಾಗಿಯಾಗಿ ತಾನೂ ಇನ್ನಿಲ್ಲದಂತೆ ಕುಣಿಯುತ್ತಿದ್ದವನು ಅಷ್ಟು ದೂರದಲ್ಲಿ ಚಪ್ಪಾಳೆ ತಟ್ಟುತ್ತಾ ಕಾಲು ಕುಣಿಸುತ್ತಾ ನಿಂತಿದ್ದ ನನ್ನ ಬಳಿಗೆ ಸಾಗಿದ್ದ.
ಮೊದ ಮೊದಲು ಮಾಮೂಲಿನ ಮಾತುಕತೆ ಸಾಗಿದವಾದರೂ ಬರುಬರುತ್ತಾ ಆತ ಆಡುತ್ತಿದ್ದ ಮಾತುಗಳಲ್ಲಿ ಹುದುಗಿದ್ದ ಅರ್ಥ ಈಗೀಗ ತುಂಬಾ ಸ್ಪಷ್ಟವಾಗಿ ಆಗುತ್ತಿದೆ. ಬಹುಶ: ಮೊದಲೇ ಹೇಳಿದಂತೆ ಓದಿನಲ್ಲೂ ಅಷ್ಟಕ್ಕಷ್ಟೆ ಎನ್ನಿಸುವಂತಿದ್ದ ಅವನ ಆವರೇಜುತನ ಹಾಗು ಅವನಿಗಿದ್ದ ನೂನ್ಯತೆಗಳು ಅವನನ್ನು ಹಾಗೆ ಆಡಿಸಿತ್ತಾ ಗೊತ್ತಿಲ್ಲ.
" ನಿನಗೇನ್ ಬಿಡೊ ನಿಮ್ಮಕ್ಕ... ಅಣ್ಣ ಹೇಳಿಕೊಡ್ತಾರು. ಭಟ್ಟರ ಹುಡುಗ್ರ ಇದೀರಿ.. ಶಾಣ್ಯಾ ಇರ್ತೇರಿ.. ಓದ್ತೇರಿ... " ಎಂದವನು ನಿಲ್ಲಿಸಿ " ... ನೋಡಲೇ, ನನಗ ಗಣಿತ ತಲ್ಯಾಗ ಹೋಗಾಂಗಿಲ್ಲ... ಮತ್ತ ಹುಡುಗೋರು ಹ೦ಗ.. ಮಾಡ್ತಾರ ನೋಡ... ಸುಮ್ಮ ಸುಮ್ಮನ ಮಶ್ಕೀರಿ ಮಾಡ್ತಾರ. ಅದಕ್ಕ ನನ್ನ ನೋಡಿ ಯಾವನಾರ ನಗೋ ಬದಲಿಗೆ ನಾನ ಜೋಕ್ ಮಾಡಿ ಬಿಡ್ತೇನಿ " ಎಂದಿದ್ದ. ಯಾಕೆ ಅವನಿಗೆ ಆ ವಯಸ್ಸಿನಲ್ಲಾಗಲೇ ಅಂಥದ್ದೊಂದು ಕೀಳರಿಮೆ ಮೂಡಿ ಬಿಟ್ಟಿತ್ತಾ..?ಆಗ ಇದನ್ನೆಲ್ಲ ಅರ್ಥಮಾಡಿಕೊಂಡು ಸಮಾಧಾನಿಸುವ ವಯಸ್ಸೂ ಅಲ್ಲ. ಅದಕ್ಕಿಂತಲೂ ಮಿಗಿಲಾಗಿ ಗಣಿತ ಪಿರಿಯಡ್ ಬಂದಕೂಡಲೇ ನಾನೇ ಎಷ್ಟೋ ಬಾರಿ ಪಿಳಿ ಪಿಳಿ ಕಣ್ಬಿಟ್ಟುಕೊಳ್ಳುತ್ತಿದ್ದವನು. ನಾನೇ ಓದಿನಲ್ಲಿ ತೋರಿಸದ ಶ್ರದ್ಧೆ... ಎಲ್ಲರನ್ನೂ ಪ್ರಶ್ನಿಸುವ... ಮಾತು ಮಾತಿಗೂ ರೇಗುವ ಶಾರ್ಟ್ ಟೆಂಪರ್‌ಮೆಂಟಿನಿಂದಾಗಿ ಕಿಲಾಡಿತನ ಮಾಡಿಕೊಂಡು ಅಲ್ಲಲ್ಲಿ "... ಭಟ್ಟರ ಹುಡುಗ, ಕಡೆದಾಂವ ಸಲ್ಪ ಬರೊಬ್ಬರ ಇಲ್ಲ... ಸುಮಾರ " ಎಂದು ಆಡಿಕೊಳ್ಳುವಷ್ಟು ಆವರೇಜಿಗೆ ಸರಿದು ನಿಂತಿದ್ದವನು. ಹಾಗಾಗಿ ಇನ್ನು ಅವನು ನನ್ನ ಬಗ್ಗೆ ಇವ್ರ ಶಾಣ್ಯಾರ ಮನಿಯಂವ ಅಂತ ಅಂದ್ಕೊಂಡಿದ್ದಕ್ಕೆ ಕೊಂಚ ಒಳಗೊಳಗೇ ಬೀಗಿದ್ದೆನಾ...?
ಯಾಕೆಂದರೆ ನನಗೂ ಓದಿಗೂ ಆವತ್ತಿನ ಮಟ್ಟಿಗೆ ಅಷ್ಟಕ್ಕಷ್ಟೆ. ಆರಂಭದಲ್ಲಿ ಹುಶಾರಿನ ಹುಡುಗ ಅನ್ನಿಸಿಕೊಂಡವ ತೀರ ಎಸ್ಸೆಸ್ಸೆಲ್ಸಿ ಬರುವ ಹೊತ್ತಿಗೆ ಸೆಕೆ೦ಡ್ ಕ್ಲಾಸಿನಲ್ಲಿ ಉಸಿರು ಕಟ್ಟಿ ಪಾಸಾಗಿದ್ದೆ. ನಂತರದ ದಿನದಲ್ಲಿ ಅದ್ಯಾವ ಜಿದ್ದಿಗೆ ಬಿದ್ದೆನೋ ಗೊತ್ತಿಲ್ಲ. ಸಾಕೆನ್ನಿಸುವಷ್ಟು ತೆಕ್ಕೆ ತುಂಬಾ ಡಿಗ್ರಿಗಳನ್ನು ಮಾಡಿಕೊಂಡೆ ಆ ಪ್ರಶ್ನೆ ಬೇರೆ. ಆದರೆ ಹಾಗೆ ಹೇಳಿದ್ದ ಅವನು ನಂತರದಲ್ಲಿ ಎರಡ್ಮೂರು ಸಲ ನಾನು ಗಮನಿಸಿದಂತೆ ತನ್ನಲ್ಲಿ ಕೀಳರಿಮೆಯನ್ನೂ, ಊರಿನಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಒಮ್ಮೆಯಲ್ಲ ಒಮ್ಮೆ ಕಾಡಿಯೇ ಕಾಡಿದ್ದ ಕೊಂಚ ಬಡತನ.. ಇತ್ಯಾದಿಗಳ ಜೊತೆಯಲ್ಲಿ ಓದಿನಲ್ಲೇನೂ ಇಲ್ಲದ ಅವನಿಗೆ ಅದು ಮನದಲ್ಲೆಲ್ಲೋ ತುಂಬಾ ಗಾಯದಂತೆ ತಾಗಿ ಬಿಟ್ಟಿತ್ತಾ. ಆದ್ರೆ ನಂತರದ ಹಲವು ಬಾರಿಯ ಮಾತಿನಲ್ಲಿ ಅವನು ಸಹಜವಾಗಿ ಎಂಬಂತೆ ತನ್ನ ಕೊಂಚ ವಿಶಿಷ್ಟ ಮ್ಯಾನರಿಸಮ್ಮಿನ ಆಂಗಿಕ ಅಭಿನಯದ ಮೂಲಕ ತನಗೇನು ಆಗಿಲ್ಲ ತಾನು ಎಲ್ಲರಂತೆ ಎನ್ನುವ ವಿಷಯವನ್ನು ತೋರಿದ್ದ. ಅದು ಸಹಜವೂ ಆಗಿತ್ತು. ಅವನಾಗಿ ಮಾಡುತ್ತಿದ್ದ ಗುಣ ಲಕ್ಷಣವಲ್ಲ ಅದು. ಮನಸ್ಸು ತನಗೇ ಅರಿವಿಲ್ಲದೇ ಕೀಳರಿಮೆಯನ್ನು ಮುಚ್ಚಿಟ್ಟುಕೊಳ್ಳಲು ಅನುಸರಿಸುವ ಒಂದು ರೀತಿಯ ನಾಟಕ ಅದು.
ಆಗಲೂ ನನಗೆ ಅಂಥಾ ವ್ಯತ್ಯಾಸವೇನೂ ಈ ವಿಷಯದಲ್ಲಿ ಗೋಚರಿಸಿರಲ್ಲಿಲ್ಲ. ಆದರೆ ನಂತರದ ಒಂದು ಸಂಜೆ ಇದ್ದಕ್ಕಿದ್ದಂತೆ ಅವನು ತೀರಿಕೊಂಡ ಸುದ್ದಿ ಬಂದಿತ್ತು. ಕೊನೆ ಕೊನೆಗೆ ನಮ್ಮದೇ ಊರಿನ ಟ್ರಕ್ಕೊಂದರಲ್ಲಿ ಕೆಲಸ ಮಾಡುವಾಗ ಮೇಲಿಂದ ಬಿದ್ದು ತೀರಿಕೊಂಡಿದ್ದ ಎಂಬ ಸುದ್ದಿ ಬಂದಿತ್ತು. ಅದು ಅವನು ಮೇಲಿಂದ ಬಿದ್ದಿದ್ದನೋ ಅಥವಾ ಅವನ ಮೇಲೆ ಅವನು ಲಾರಿಗೆ ತುಂಬಿಸುತ್ತಿದ್ದ ಹತ್ತಿಯ ಅಂಡಿಗೆಗಳು ಬಿದ್ದಿದ್ದವೋ ಒಟ್ಟಾರೆ ಒಂದು ಆಕಸ್ಮಿಕದಲ್ಲಿ ಅವನು ತೀರಿಕೊಂಡಿದ್ದ. ಆ ಹೊತ್ತಿಗೆ ನನಗೂ ಎಲ್ಲರಂತೆ ಛೇ ಪಾಪ ಎನ್ನಿಸಿ ಸುಮ್ಮನಾಗಿಸಿದ್ದ ಆ ಸುದ್ದಿ ಮೊನ್ನೆ ಮೊನ್ನೆಯವರೆಗೂ ಏನೂ ಅನ್ನಿಸಿರಲೇ ಇಲ್ಲ. ಆದರೆ ಇದ್ದಕ್ಕಿದ್ದಂತೆ ಊರ ಕಡೆಯಿಂದ ಚಿಮ್ಮಿ ಬಂದ ಒಂದು ಕರೆ ಅದ್ಯಾಕೋ ತನ್ನ ಪರಿಚಯವನ್ನು ಹೇಳಿಕೊಂಡು ಮಾತಾಡುತ್ತಿದ್ದರೆ ಹತ್ತು ನಿಮಿಷದಲ್ಲಿ ಇನ್ನಿಲ್ಲದಂತೆ ಅವನ ನೆನಪನ್ನು ತಂದಿಟ್ಟು ಬಿಟ್ಟಿತ್ತು. ಹಾಗೆ ತನ್ನನ್ನು ಪರಿಚಯಿಸಿಕೊಂಡು " ನೀವು ಆಗ ಭಾಳ ಸಣ್ಣಗ ಇದ್ರಿ... ಈಗ ಫೋಟೊದಾಗ್ ನೋಡಿದ್ರ ಗುರ್ತ ಸಿಗಧಂಗಾ ಆಗಿದಿರಿ..." ಇತ್ಯಾದಿ ಮಾತಾಡುತ್ತಿದ್ದರೆ ಯಾಕೋ ಅದ್ಯಾರೆಂದು ಎಷ್ಟು ತಲೆ ಕೊಡಹಿದರೂ ನೆನಪಾಗದ ವ್ಯಕ್ತಿಯ ಬದಲಿಗೆ ಇವನ ನೆನಪಾಗಬೇಕೆ.
ವಿಚಿತ್ರವೆಂದರೆ ಹತ್ತಾರು ವರ್ಷಗಳ ಹಿಂದೆ ಆತ " ಬೇರೆದಾವ್ರ ಕಡಿಂದ ಹೇಳಿಸಿಕೊಂಡ ನಗೋದಕ್ಕಿಂತ ನಾವ ಹೇಳಿಕೊಂಡ್ರ ಏನೂ ಅನಸಾಂಗಿಲ್ಲ ನೋಡಲೇ..." ಎಂದಿದ್ದ, ತನ್ನನ್ನು ತಾನೇ ಗೇಲಿಗೊಳಪಡಿಸಿಕೊಳ್ಳುವ ಅಂಥಾ ಬುದ್ಧಿಜೀವಿಯೇನೂ ಅಲ್ಲದ ಅವನ ಆ ಮಾತು ಇವತ್ತು ಇನ್ನಿಲ್ಲದಂತೆ ತಿವಿದದ್ದು ಸುಳ್ಳಲ್ಲ. ಅಸಲಿಗೆ ನನ್ನ ವೃತ್ತಿಗೂ ಓದಿಗೂ ಏನೊಂದು ಸಂಬಂಧವಿಲ್ಲದೆಯೂ, ಅಷ್ಟಕ್ಕೂ ತೀರ ಸೆಕೆಂಡ್ ಕ್ಲಾಸಿನಲ್ಲಿ ಎಸ್ಸೆಲ್ಸಿ ಪಾಸಾದ ನಾನು ಯಾವ ಕೀಳರಿಮೆಯನ್ನು ಮೆಟ್ಟಿ ಹಾಕಲು ಹಾಗೆ ತೆಕ್ಕೆ ತುಂಬಾ ವರ್ಷಕ್ಕೆರಡು ಡಿಪ್ಲೋಮಾಗಳನ್ನು... ಮಾಸ್ಟರ್ ಡಿಗ್ರಿಯನ್ನು ಓದಿಕೊಂಡೆ...?.
ನಾನ್ಯಾವ ಕೀಳರಿಮೆಯನ್ನು ಮೆಟ್ಟಲು ಪ್ರಯತ್ನಿಸಿದೆ. ಗೊತ್ತಾಗುತ್ತಿಲ್ಲ. ಆದರೆ ಹೀಗೆ ತೀರ ಸಂಜೆಯ ಹೊತ್ತಿನಲ್ಲಿ ಕರೆದು ಒಂದು ಯೋಚನೆಯನ್ನು ನನ್ನಲ್ಲಿ ಸ್ಫುರಿಸುವಂತೆ ಮಾಡಿದ ಊರ ಹತ್ತಿರದ ಮಿತ್ರನಿಗೆ ಹೃದಯ ಪೂರ್ವಕ ನಮಸ್ಕಾರಗಳಿದ್ದೆ ಇದೆ.

Thursday, August 1, 2013

ಮೌನದ ಮಾತುಗಳು : ಸಾವಿನ ಹಕ್ಕಿಯ ರೆಕ್ಕೆಯ ಕೆಳಗೆ.

( ಅಷ್ಟು ಸತತ ಪ್ರಯತ್ನಗಳ ಹೊರತಾಗಿಯೂ ಜೀವ ಎನ್ನುವ ಅಮೂಲ್ಯ ಶಕ್ತಿ ಅದ್ಹೇಗೆ ಕೈಯಿಂದ ತಪ್ಪಿಸಿಕೊಳ್ಳುತ್ತಿತ್ತು ಗೊತ್ತಾಗಲೇ ಇಲ್ಲ. ಬಹುಶ: ಅದಕ್ಕಾಗೇ ಸಾವು ಈಗಲೂ ಯಾವಾಗಲೂ ನಿಗೂಢಾ... ವಿವರಿಸಲು ಅದೊಂದಕ್ಕೆ ಮಾತ್ರ ಅನುಭವಿಗಳಿಲ್ಲ... )

ಹೀಗೆ ಸತತವಾಗಿ ಹಲವು ಸಾವುಗಳಿಗೆ ನಾನು ಜೀವಂತ ಸಾಕ್ಷಿಯಾಗಿದ್ದುದು ಬಹುಶ: ಇದೇ ಮೊದಲ ಬಾರಿಯಾ..? ಇರಬೇಕು. ಯಾಕೆಂದರೆ ಕಳೆದ ಮೂರ್ನಾಲ್ಕು ದಿನದಲ್ಲಿ ನಾನು ಕುಳಿತಿದ್ಡ ಜಾಗವೇ ಹಾಗಿತ್ತು. ಹೆಚ್ಚೆ೦ದರೆ ಎಡದಿಂದ ಬಲಕ್ಕೆ ನಾನು ಕುಳಿತ ಸ್ಟೂಲಿನ ದಿಕ್ಕು ಬದಲಾಗುತ್ತಿತ್ತೇ ವಿನಹ ಉಳಿದದ್ದೆಲ್ಲವೂ ಎಂದಿನಂತೆ ಆಚೀಚೆ ಯಾವಾಗ ಪ್ರಾಣ ಹೋದಿತೋ ಎಂದು ಭಯಬೀಳುವ, ಗುಳಿ ಬಿದ್ದ ಕಣ್ಣುಗಳ, ಬಾಯಿಯಲ್ಲಿ, ಕೈಯ್ಯಲ್ಲಿ, ಕೊನೆಗೆ ಅವರ ಸ್ರಾವ ಮತ್ತು ಬಾಹ್ಯ ವಿಸರ್ಜನೆಗಳಿಗೂ ನಳಿಕೆ ಹಾಕಿಕೊಂಡ, ಕೆಲವೊಂದು ದೇಹಗಳು ಊಟಕ್ಕೂ ನಳಿಕೆ ಏರಿಸಿಕೊಂಡು ಮಲಗಿರುವ ಕರುಣಾಜನಕ ಹೃದಯ ವಿದ್ರಾವಕ ದೃಶ್ಯ ಮಾಮೂಲು.
ಅಸಲಿಗೆ ಹಾಗೆ ನಾನು ಮೊದಲ ದಿನ ಹೋಗಿ ಅಲ್ಲಿಗೆ ಕುಳಿತುಕೊಳ್ಳುತ್ತಲೇ ವಾತಾವರಣ ಸಹಜ ಇಲ್ಲ ಎನ್ನಿಸಿತ್ತು. ಯಾಕೆಂದರೆ ನಾನಿದ್ದ ಆ ಕೋಣೆಗೆ ಆಲ್ಲಿದ್ದ ಇತರೆ ಜನರೂ, ಸಿಬ್ಬಂದಿಗಳೇ ಕಾಲಿಡಲು ಯಾಕೋ ಅನುಮಾನಿಸುತ್ತಾ ನಿಂತಿರುತ್ತಿದ್ದುದು ಅದರಲ್ಲೂ ರಾತ್ರಿ ಸರಹೊತ್ತು ಕಳೆಯತೊಡಗುತ್ತಿದ್ದಂತೆ ಎಲ್ಲೆಂದರಲ್ಲಿ ಆಚೀಚೆ ಹರಡಿಕೊ೦ಡಿರುತ್ತಿದ್ದ ಸಿಬ್ಬಂದಿಗಳು ಕಾಫೀಯ ನೆವದಲ್ಲಿ ಒಂದೇ ಟೇಬಲ್ಲಿನ ಬಳಿಗೆ, ಗಾಢ ದೀಪದ ಬುಡದಲ್ಲಿ ಸೇರಿಕೊಂಡು ಯಾವಾಗ ರಾತ್ರಿ ಎರಡರಿಂದ ಬೆಳಗಿನ ಐದರವರೆಗೆ ಹೊತ್ತು ಕಳೆದು ಬೆಳಕು ಮೂಡಿತೋ ಎಂದು ಕಾಯುತ್ತಾ, ಸಮಯ ಸವೆಸಿ ಆಗೀಗ ಮಧ್ಯದ ಹಾಲ್‌ನಿಂದಲೇ ಉಳಿದೆಲ್ಲಾ ಕೋಣೆಗಳಿಗೂ, ಅಲ್ಲಿದ್ದ ಜೀವಚ್ಛವಗಳ ಮೇಲೂ ಅವುಗಳ ಮಧ್ಯದಲ್ಲೇ ಮುಚ್ಚಿರುತ್ತಿದ್ದ ಬೆಳ್ಳಗಿನ ಬಟ್ಟೆಗಳ ಉದ್ದಾನುಉದ್ದ ಮ೦ಚಗಳ ಕಡೆಗೂ ಬೆರಗು ಕಣ್ಣು ಬೀರುತ್ತಾ, ಹೋದ ವೇಗದಲ್ಲೆ ಹಿಂತಿರುಗಿ ಹಾಲ್ ಮಧ್ಯೆ ಸೇರಿಕೊಂಡು ಬಿಡುತ್ತಿದ್ದರು.
ಹೀಗೆ ಸರಿ ರಾತ್ರಿ ಎರಡೂವರೆ ಹೊತ್ತಿಗೆ ಪಿಳಿ ಪಿಳಿ ಕಣ್ಣು ಬಿಟ್ಟು ಕೂತಿರುತ್ತಿದ್ದ ನನ್ನನ್ನು ಒಂದು ಪ್ರೇತವೆಂಬಂತೆ ಕಣ್ಣು ಬಿಟ್ಬಿಟ್ಟು ನೋಡುತ್ತಾ ಇದ್ದಾಗಲೇ ನಾನು ಅದನ್ನು ಗಮನಿಸಿದ್ದು. ಅದಕ್ಕೆ ಕಾರಣ ನನ್ನ ಬೆನ್ನ ಹಿಂದೆ ಒಂದೇ ಒಂದು ಅಡಿಗೂ ಕಮ್ಮಿ ದೂರದಲ್ಲಿ ಪ್ರಯಾಸ ಪಡದೆಯೂ ಕೈಚಾಚಿದರೆ ನಿಲುಕುವಷ್ಟು ಪಕ್ಕದಲ್ಲೇ ಒಂದು ಶವವಿತ್ತು. ನಾನು ಅಂದೇ ಸಂಜೆ ಕೆಲವೇ ಗಂಟೆಯ ಮೊದಲು ಅವರು ಉಸಿರಿಗಾಗಿ ಚಡಪಡಿಸುವುದನ್ನೂ ನೋಡಿದ್ದೆ. ಈಗ ಇದ್ದಕ್ಕಿದ್ದಂತೆ ವ್ಯಕ್ತಿ "ಬಾಡಿ"ಯಾಗಿ ಬದಲಾಗಿದ್ದ. ಭಯ ಹುಟ್ಟಿಸಿದ್ದ. ಅದನ್ನು ಗಮನಿಸುವ ಮೊದಲು ಎಷ್ಟೋ ಬಾರಿ ನಿದ್ರೆಯ ಜೊಂಪು ತಡೆಯುವ ಭರದಲ್ಲಿ ನಾನು ಕೂಡಾ ಅದೇ ಮ೦ಚಕ್ಕೆ ಒರಗಿ ಸಣ್ಣಗೆ ರೆಸ್ಟು ಮಾಡಿದ್ದೆ. ಈಗ ನೋಡಿದರೆ ಸರಿ ರಾತ್ರಿಯಲ್ಲಿ ಹಾಲ್ ಮಧ್ಯದಿಂದ ನನ್ನನ್ನು, ಪಕ್ಕದ ಶವವನ್ನು ಒಂದೇ ಥರಹ ನೋಡುತ್ತಿದ್ದಾರೆ.
ಅಂಗಾತ ಮಲಗಿ, ತೆರೆದ ಬಾಯಿ ಹಾಗೇ ಬಿಟ್ಟುಕೊಂಡಿದ್ದ ಶವ, ಆಗಾಗ ಹಾರಿ ಬರುತ್ತಿದ್ದ ಸಣ್ಣ ಸೊಳ್ಳೆಯ ಗುಂಯ್ ಬಿಟ್ಟರೆ ಈ ಹಾಲ್ ಮಧ್ಯೆ ಸೇರಿಕೊಂಡಿದ್ದ ಹುಡುಗಿಯರ ಪಿಸ ಪಿಸ, ಆಗೀಗೊಮ್ಮೆ ಬದುಕುಳಿದಿದ್ದವರು ಮೈ ಮುರಿಯುತ್ತಿದ್ಡ, ಹೊರಳಿ ಮಗ್ಗಲು ಬದಲಿಸುವ ಸಶಬ್ದಕ್ಕೆ ಸಾಕ್ಷಿಯಾಗುತ್ತಾ ಅವರ ಕಣ್ಣಿಗೆ ಆಹಾರವಾಗಿ ಕುಳಿತೇ ಇದ್ದೆ. ಇದಾದ ಮರುದಿನ ಸಂಜೆ ಎಂದಿನಂತೆ ಅದೇ ರೂಮಿನೊಳಕ್ಕೆ ಕಾಲಿಟ್ಟಾಗ ಪರಿಸ್ಥಿತಿ ಇನ್ನೂ ಗಂಭೀರವಾಗಿತ್ತು. ಯಾಕೆಂದರೆ ನಿನ್ನೆಯ ಹಿಂದಿನ ಮ೦ಚ ಖಾಲಿಯಾಗಿತ್ತು. ಅದರ ಪಕ್ಕದಲ್ಲಿ ಇದ್ದ ವ್ಯಕ್ತಿಗೆ ಕೃತಕವಾಗಿ ಹೃದಯ ಅದುಮಿ ಉಸಿರು ಹೊರಳಿಸುವ ಪ್ರಯತ್ನ ನಡೆದಿತ್ತು. ಬೆಳ್ಳಂಬೆಳಿಗ್ಗೆಯಷ್ಟೆ ಬಂದಿದ್ದ ವ್ಯಕ್ತಿಯತ್ತ ಸಣ್ಣಗೆ ಸಾಂತ್ವನದ ನಗೆ ಬೀರಿ ಎದ್ದು ಹೋಗಿದ್ದೆ. ಈಗ ನೋಡಿದರೆ ಅವನೂ ಶವವಾಗುತ್ತಾನಾ..? ನನ್ನ ಸಂಶಯ ಸುಳ್ಳಾಗಿರಲಿಲ್ಲ.
ರಾತ್ರಿಯ ಭಯಾನಕ ಅವಧಿ ಇನ್ನು ಒಂದು ಗಂಟೆ ಇರುವಂತೆ ಅಷ್ಟು ದೂರದಲ್ಲಿ ಆ ದಿನ ರಾತ್ರೆಯ ಕಂಪೆನಿಗೆಂಬಂತೆ ಮತ್ತೊಂದು ಶವ ತಯಾರಾಗಿತ್ತು. ಇದೇನು ದಿನವೂ ಶವಗಳ ಜೊತೆ ಕುಳಿತುಕೊಳ್ಳುತ್ತಿದ್ದೇನೆ ಎಂದು ದಿಕ್ಕು ತಿರುಗಿಸಿದೆ. ಎಂದಿನಂತೆ ಆ ರಾತ್ರಿಯೂ ನಟ್ಟಿರುಳ ಹೊತ್ತಿನಲ್ಲಿ ಎದುರಿಗಿನ ಹಾಲ್‌ನಲ್ಲಿದ್ದ ಸಿಬ್ಬಂದಿ ನರ್ಸ್ ಹುಡುಗಿಯರ ಕಣ್ಣಿಗೆ ಆಸಕ್ತಿಯ ಪ್ರಾಣಿಯಾಗಿ ಕುಳಿತಿದ್ದೆ. ಯಾಕೆಂದರೆ ನನ್ನಂತೆ ಆ ರೂಮಿನಲ್ಲಿ ಇದ್ದವರಾರೂ ಸರಿರಾತ್ರಿಯ ಹೊತ್ತಿನಲ್ಲಿ ಹೀಗೆ ಅಬ್ಬೆ ಪಾರಿಗಳಂತೆ ಕಣ್ಬಿಟ್ಟು ಕೂರುತ್ತಿರಲಿಲ್ಲ. ಹೇಗೋ ಒಂದು ಜಾಗ ಅಡ್ಜಸ್ಟ್ ಮಾಡಿಕೊಂಡು ಆಯಾ ಮ೦ಚದ ಪಕ್ಕದಲ್ಲಿ ಮಲಗಿರುತ್ತಿದ್ದರು. ನಿದ್ರೆಗೂ ಮೊದಲೇ ಅಥವಾ ತಮ್ಮ ಪಕ್ಕದ ಮ೦ಚದಲ್ಲೊಮ್ಮೆ ಶವವಿದೆ ಎನ್ನುವುದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದೆ ನಿದ್ರಿಸಿರುತ್ತಿದ್ದರು. ಹೀಗಾಗಿ ನನ್ನ ಮೇಲಿನ ಅನುಕಂಪವೋ, ಆಸಕ್ತಿಯೋ ರಾತ್ರಿಯ ಎರಡೂವರೆಗೆ ಹಾಲ್ ಮಧ್ಯದಿಂದ ಕಾಫಿಗೆ ಕರೆ ಬಂತು.
ಇಷ್ಟಗಲ ಕಣ್ಬಿಡುತ್ತಿದ್ದ ನರ್ಸ್ ಟ್ರೈನಿಂಗ್ ಹುಡುಗಿಯ ಕಣ್ಣಲ್ಲಿ ಸಣ್ಣ ಅನುಮಾನದ ಸೆಳಕು ನನ್ನ ಮೇಲಿತ್ತು "..ಯಾಕೆ ನೀವು ಹೊರಕ್ಕೆ ಬಂದು ಮಲಗೋಲ್ಲ ಅಥ್ವಾ ಆ ಮ೦ಚಗಳಿಂದ ಇತ್ತ ಸರಿಯಲ್ಲ.. ಅಲ್ಲಿ ಪಕ್ಕದಲ್ಲಿ ಬಾಡಿಯಿದೆ..!.." ಏನಂದು ಉತ್ತರಿಸಲಿ. ಜೀವವಿದ್ದಾಗ ಹೆದರಿಸದ ಮನುಶ್ಯ ಶವವಾದ ತಕ್ಷಣ ಅದ್ಯಾಕೆ ಹೆದರಿಸುತ್ತಾನೆ...? ಒ೦ದು ಕಾಲದಲ್ಲಿ ನಾನು ಹೀಗೇ ಶವಗಳನ್ನು ಹೂಳಿದ್ದ/ಸುಟ್ಟಿದ್ದ ಸ್ಮಶಾನದಲ್ಲಿ ಸರಹೊತ್ತಿನವರೆಗೂ ಕಾಲು ಚಾಚಿ ಕುಳಿತಿರುತ್ತಿದ್ದುದು, ಸದ್ದಿಲ್ಲದೇ ಎಡೆ ಎತ್ತಿಕೊಂಡು ಬಿಡುತ್ತಿದ್ದುದು ಈಗಲೂ ಆಡಿಕೊಳ್ಳುವ ವಿಷಯ. ಉತ್ತರ ಬಹುಶ: ಮರುದಿನ ಸಿಗಲಿತ್ತಾ ಗೊತ್ತಿಲ್ಲ. ಮೂರನೆಯ ದಿನದ ರಾತ್ರಿ ಮತ್ತೆ ಶವಗಳ ಜೊತೆ ನನ್ನ ರಾತ್ರಿ ಸಂಸಾರ ಆರ೦ಭವಾಗಿತ್ತು. ಇವತ್ತು ಎದುರಿಗಿದ್ದ ಮ೦ಚ ಬಿಟ್ಟು ಉಳಿದವರು ಜೀವ೦ತ ಇದ್ದಾರಾ..? ಸಂಶಯ.
ಅದರಲ್ಲಿ ಸಂಜೆ ಬೇಗ ಆಗಮಿಸಿದಾಗ ಮೊದಲನೆಯ ಮ೦ಚದಲ್ಲಿದ್ದ ವ್ಯಕ್ತಿ ಸರಿಯಾಗಿ ಕುಡಿದು ಕರಳು ಬಕ್ಕಬಾರಲಾಗುವಂತೆ ಸುಟ್ಟಿದ್ದ. ಕುಡಿದದ್ದು ಅರಗಿಸುವ ತಾಕತ್ತಿರಲಿಲ್ಲ. ಸರಿ ಪ್ರಾಯದ ಹೆಂಡತಿ ಮಗುವನ್ನು ಅನಾಥನನ್ನಾಗಿಸಲು ಸಿದ್ಧನಿದ್ದಂತೆ ತನ್ನ ದೇಹವನ್ನು ಸಿಬ್ಬಂದಿ ಕೈಗೊಪ್ಪಿಸಿ ಆಗೀಗೊಮ್ಮೆ ಉಸಿರೆಳೆಯುತ್ತಾ ಮಲಗಿದ್ದ. ಬಾಯಿ, ಮೂಗು ಎಲ್ಲೆಡೆಯಲ್ಲೂ ಕೊಳವೆ ಹಾಕಿ ನಾಲ್ಕಾರು ಜನ ಜೀವ ಹಿಡಿದಿಡುವ ಪ್ರಯತ್ನಕ್ಕಿದ್ದರು. ಕುತೂಹಲಕ್ಕೆ ಪ್ರಾಣ ಹೋಗುತ್ತದಾದರೆ ಹೇಗೆ ಹೋಗುತ್ತದೆ ಎಂದು ಗಮನಿಸುತ್ತಾ ಅವರ ಹಿಂದೇ ನಿ೦ತಿದ್ದೆ. ಉಹೂ೦ ಅಲ್ಲೇನಿದೆ ಗೊತ್ತಾಗಲು. ತಾಜಾ ವೈದ್ಯನೊಬ್ಬ ಹೃದಯ ಅಮುಕಿ ಪ್ರಾಣವಾಯು ಒಳಕ್ಕೆ ಸೆಳೆಯಲು ಪ್ರಯತ್ನಿಸುತ್ತಾ, ಎದೆ ಗೂಡು ಅಮುಕಿ ಅಮುಕಿ ಸುಸ್ತಾಗುತ್ತಿದ್ದ.
ಉಹೂ೦.. ನೋಡ ನೋಡುತ್ತಿದ್ದಂತೆ ಬಾಯಿಗಿಟ್ಟ ಕೊಳವೆಗಳಲ್ಲಿ ಚಲಿಸುತ್ತಿದ ಜೀವದ್ರವ ಅಲ್ಲೆ ನಿಂತು ಹೊರಕ್ಕೆ ಹರಿಯಿತು. ಯುವ ವೈದ್ಯ ಕೈಚಲ್ಲಿದ್ದ. ಸಣ್ಣ ಹತಾಶೆ ಅವನ ಮುಖದಲ್ಲಿತ್ತು. ವಿಚಿತ್ರವೆಂದರೆ ಅವರು ಅದನ್ನಾರಿಗೂ ನೇರವಾಗಿ ಘೋಷಿಸದೇ ಆಪ್ತರಲ್ಲೊಬ್ಬರಿಗೆ ಮಾತ್ರವೇ ವಿವರಿಸಿ ಆಚೆ ನಡೆದಾಗ, ಅದನ್ನು ಅರಿಯದ ಹೆಂಗರಳು ಬಾಯಿಯಲ್ಲಿದ್ದ, ಕೈಗಿದ್ದ ಕೊಳವೆ ನೋಡುತ್ತಾ, ಆಗೀಗ ಮೈದಡುವುತ್ತಾ ".. ಕಾಫಿ ಕುಡಿತಿಯೇನಪ್ಪಾ..? ಗಂಜಿ ಕಾಯ್ಸ್ಕಂಬರಾಕೆ ಅವ್ಳಿಗೆ ಹೇಳಿದಿನಿ ಇನ್ನೇನು ಬಂದಿಬಿಡ್ತಾಳೆ.." ಎನ್ನುವ ಕಕ್ಕುಲಾತಿಗಳ ಮಧ್ಯೆ, ಎದುರಿಗಿದ್ದುದು ಶವ ಎಂದರಿವಾಗುತ್ತಿದ್ದಂತೆ, ಹಿಂದೆ ಸರಿದು ಸುತ್ತೆಲ್ಲಾ ನೋಡಿದಳು. ಅಲ್ಲಿಯವರೆಗೂ ಕಾಫಿ, ಊಟಕ್ಕೆ ಈಡಾಗುತ್ತಿದ್ದ ಉಪಚಾರದ ಜಾಗದಲ್ಲಿ ಭಯ.. ಭಯ.. ಭಯ... ಅದ್ಹೇಗೆ ಇಮ್ಮಿಡಿಯೇಟ್ ವ್ಯತ್ಯಾಸ...? ನನ್ನರಿವಿಗೆ ಬರಲಿಲ್ಲ. ಆಕೆಯ ಕಂಗಳಲ್ಲಿ ಅಲ್ಲಿಯವರೆಗಿದ್ದ ಕಕ್ಕುಲಾತಿಯ ಬದಲಿಗೆ ಸಾವಿನ ನೆರಳು.
ನಾನು ಎದ್ದು ಹೋಗಿ ಒಮ್ಮೆ ನೋಡಿದೆ. ಅಂಗಾತ ಬಿದ್ದಿದ್ದ ಕುಡುಕನ ಎದೆ ಕೆಂಪಗಿತ್ತು. ಅದುಮಿಸಿಕೊಂಡಿದ್ದಕ್ಕಾ ಅಥವಾ ಎದೆಯಿಂದ ಪ್ರಾಣ ಹಾರಿದ್ದಕ್ಕಾ...? ನೋವಿನ ವಿಕಾರ ಗೆರೆಗಳು ಮುಖದ ಮೇಲೆ ಹಾಗೆ ಇದ್ದವು. ಅಂಗಿ ಸರಿಪಡಿಸಿ, ವಿರುದ್ಧ ದಿಕ್ಕಿಗೆ ತಿರುಗಿಕೊಂಡಿದ್ದ ಕೈಗಳನ್ನು ಸ್ವಸ್ಥಾನಕ್ಕೆಸರಿಸಿ.. ಉಹೂ೦ ಅಷ್ಟು ಸುಲಭಕ್ಕೆ ಸಾಧ್ಯವಾಗಲಿಲ್ಲ. ಯಾಕೆಂದರೆ ಆಗಲೇ ಗಂಟೆಗೂ ಮೇಲ್ಪಟ್ಟ ಅವಧಿಯಲ್ಲಿ ದೇಹ ಸೆಟೆದುಕೊಳ್ಳಲಾರಂಭಿಸಿತ್ತು. ಸುಮ್ಮನೇ ಇದ್ದ ಹಳೆಯ ಬೆಡಶಿಟ್ ತಲೆಗೆ ಎಳೆದು ಬಂದು ಕುಳಿತಾಗಲೇ ಗೊತ್ತಾಗಿದ್ದು ಆ ದಿನ ನನ್ನ ಸುತ್ತಲೂ ಮೂರು ಶವಗಳಿದ್ದವು. ಅವುಗಳತ್ತ ಲಕ್ಷ್ಯಕೊಡದೆ ಹಾಗೆ ನಾನು ಬೆಡ್ ಶೀಟ್ ಎಳೆಯುತ್ತಿದ್ದಾಗಲೇ ಹಾಲ್ ಮಧ್ಯದ ಹೊಸ ನರ್ಸ್ ಟ್ರೈನಿಂಗ್ ಹುಡುಗಿ ಇಷ್ಟಗಲ ಕಣ್ಬಿಟ್ಟು ನನ್ನನ್ನು ಒಂದೇ ತರಹ ಗಮನಿಸುತ್ತಿದ್ದುದು.
ತಲೆ ಕೊಡವಿ ಅಲ್ಲೇ ಇದ್ದ ಡಾಕ್ಟರ್ಸ್‌ಗಳ ಟಬ್ಬಿನೊಳಕ್ಕೆ ಕೈಮುಳುಗಿಸಿ ಸಿಂಕಿನಲ್ಲಿ ತೊಳೆದು ಹೊರಕ್ಕೆಬಂದೆ. ಮಧ್ಯಭಾಗದಲ್ಲಿ ಎಂದಿನಂತೆ ಮಧ್ಯರಾತ್ರಿಯ ಕಾಫ್ಹಿ ಸರಬರಾಜು. ಈ ಬಾರಿ ಸಂಕೋಚವಿಲ್ಲದೇ ಹೋಗಿ ಸ್ಟೂಲೆಳೆದುಕೊಂಡು ಕುಳಿತು ಕಪ್ಪನ್ನೆತ್ತಿಕೊಂಡಿದ್ದೆ. ಹಿಂದೆ ನೋಡಿದೆ ಶವಗಳು ಹಿಂಬಾಲಿಸಿರಲಿಲ್ಲ. ಉಳಿದವರು ನೆಮ್ಮದಿಯಾಗಿ ಕುಳಿತರು. ಆದರೆ ಇನ್ನೊಂದು ಸಾವಿನ ಹಕ್ಕಿ ರೆಕ್ಕೆಯಗಲಿಸುತ್ತಾ ಆಗೀಗ ಅದೇ ಹಾಲ್‌ನ ಮಧ್ಯದಿಂದ ರೂಮಿನೊಳಕ್ಕೆ ಎಷ್ಟೊತ್ತಿಗೂ ಕಾಲಿಡಲಿದೆ ಎಂದು ಅವರಾರಿಗೂ ಗೊತ್ತಿರಲಿಲ್ಲ. ನನ್ನೊಬ್ಬನನ್ನು ಬಿಟ್ಟು. ಕಾಯುತ್ತಲೇ ಕುಳಿತ್ತಿದ್ದೆ. ಯಾಕೋ ಕೊಂಚ ತಡವಾಗಿತ್ತು. ಬಹುಶ: ಅದಕ್ಕೂ ಗೊತ್ತಾಗಿತ್ತೇನೋ ನನ್ನ ಕಾವಲು. ನಾನು ಸತತ ನಾಲ್ಕು ದಿನಗಳ ಶವಾಗಾರದಂತಿದ್ದ ಆ ಆಸ್ಪತ್ರೆಯ ಎಮರ್‌ಜೆನ್ಸಿ ಹಾಲ್‌ನಿಂದ ಈಚೆ ಬಂದಿದ್ದೆ. ಬೆಳಕು ಹರಿಯುವವರೆಗೂ ಯಾವ ಶವಗಳೂ ಹುಲು ಮಾನವರಂತೆ ಕದಲದೇ ಜೀವ ಇದ್ದವರಿಗಿಂತಲೂ ಸಾಧುವಾಗಿ ಸುಮ್ಮನಿದ್ದವು. ಕ್ಷಣ ಕಾಲವೂ ನನ್ನ ಕಾಡಿರಲಿಲ್ಲ. ಜೀವಂತ ಮನುಶ್ಯರಿಗಿಂತ ನಿಜಕ್ಕೂ ಮೇಲೆನಿಸಿದ್ದವು. ಭಯ ಬೀಳಲು ಕಾರಣವೇನಿರಲಿಲ್ಲ. ಆದರೆ ಕಾಯ್ದು ಕೂತಿದ್ದ ಇನ್ನೊಂದು ಸಾವು ತನ್ನ ಕರಿ ನೆರಳ ರೆಕ್ಕೆಯಗಲಿಸಿ ಫಡಫಡಿಸುತ್ತಲೇ ಇತ್ತು. ಅಂತೆಯೇ ನನ್ನ ಕಾವಲು ಕೂಡಾ...!