Saturday, August 5, 2017

ಅಪನಂಬಿಕೆ ಎಂಬ ಅಪರಿಚಿತ ಅತಿಥಿ...
(ಇರುವ ಎರಡು ದಿನದಲ್ಲಿ ಏನೆ ಆದರೂ ಕಳೆದುಕೊಳ್ಳುವುದು ಎಂದು ಏನೂ ಇಲ್ಲ. ಎಲ್ಲಾ ಆಯಾ ಸಮಯದ ಕರ್ಮವಷ್ಟೆ. ಸಮಯಕ್ಕೆ ತಕ್ಕಂತೆ ಬದಲಾಗದಿದ್ದರೆ ನೀವು ಅಲ್ಲೆ ಇರುತ್ತಿರಿ)

ನಮಗೆ ಬೇಕಿದ್ದೋ ಬೇಡದೆಯೋ ಒಂದು ಘಟನೆ ನಡೆದು ಹೋಗುತ್ತದೆ. ಇದ್ದಕ್ಕಿದ್ದಂತೆ ಇಬ್ಬರ ಮಧ್ಯೆ ಒಂದು ಅಂತರ ಹುಟ್ಟಿಬಿಡುತ್ತದೆ ಅಪರಾತ್ರಿಯಲ್ಲಿ ಸರಕ್ಕನೆ ಹುಟ್ಟಿ ಅಲ್ಲೆ ಸತ್ತು ಹೋಗುವ ಅಪಸವ್ಯದ ಕಾಮದಂತೆ. ಅದಿಬ್ಬರಿಗೂ ಬೇಕಿರಲಿಲ್ಲ ಅದರೆ ಮನಸ್ಸು ಬಹಳ ಸೂಕ್ಷ ಎನ್ನುವ ಸತ್ಯ ನಮಗೆ ಗೊತ್ತಿರಬೇಕು ಮತ್ತು ಗಂಡಸು ಅಂಡು ಒದರಿಕೊಂಡು ಹೋಗುತ್ತಾನೆಂದ ಮಾತ್ರಕ್ಕೆ ಅವನಿಗೆ ಭಾವನೆಗಳಿಲ್ಲ ಅಥವಾ ಹೆಂಗಸರಿಗಾಗುವ ಮತ್ತು ಅವರ ಸೆಂಟಿಮೆಂಟಿಗಾಗುವ ಫೀಲಿಂಗು ಮಾತ್ರವೇ ಕಿಮ್ಮತ್ತಿನದು ಅಂತಲ್ಲ. ಗಂಡಸು ಪ್ರಿಯಾರಿಟಿಗೆ ಮತ್ತು ಪ್ರಾಕ್ಟಿಕಾಲಿಟಿಗೆ ಒತ್ತು ಕೊಡುವುದರಿಂದ ಸ್ವಲ್ಪ ಈಜಿ ಗೋಯಿಂಗ್ ಅಂತನ್ನಿಸಿ ಬಿಡುತ್ತಾನೆ. ಅದಕ್ಕಿಂತಲೂ ಪ್ರತಿಘಳಿಗೆ ಮತ್ತು ಕಾಲದಲ್ಲೂ ಅವನಿಗೆ ಬದುಕು 360 ಕೋನದಿಂದಲೂ ಆವರಿಸಿಕೊಂಡು ಹಣಿಯುತ್ತಿರುತ್ತದೆ ಎನ್ನುವುದು ಸಂಬಂಧದಲ್ಲಿ (ಎಂದರೆ ಬರೀ ಅಫೇರ್ ಅಂತಲ್ಲ. ಅದು ಯಾವುದೇ ರೀತಿಯದ್ದು ಅಣ್ಣ/ತಮ್ಮ ತಂಗಿ ಮಾವ ಹೀಗೆ) ನಂಬಿಕೆ ಇರಿಸಿಕೊಂಡವರ ಅರಿವಿಗೆ ಬರುವವರೆಗೆ ತೀರ ತಡವಾಗಿರುತ್ತದೆ. ಕಾರಣ ಇವತ್ತು ಸ್ವಂತ ಗಂಡ ಹೆಂಡತಿಯರಿಗೇ ಎಷ್ಟೊ ಸರ್ತಿ ದಿನಕೊಮ್ಮೆ ಮುಖ ಕೊಟ್ಟು ಮಾತಾಡುವ ವ್ಯವಧಾನ ಉಳಿದಿಲ್ಲ. ಅಷ್ಟರ ಮಟ್ಟಿಗೆ ಅವರಿಬ್ಬರ ಪ್ರಿಯಾರಿಟಿ ಮತ್ತು ಸಣ್ಣಮಟ್ಟಿಗಿನ ಇಗೋ ಅವರ ಸಮಯ ಮತ್ತು ಬದುಕು ಎರಡನ್ನೂ ತಿಂದುಹಾಕುತ್ತಿರುತ್ತದೆ. ಅಂತಹದರಲ್ಲಿ ಹೆಂಗೋ ಚೆಂದವಾಗಿ ಬದುಕಿ ಬಿಡೋಣ ಎನ್ನುವ ಸಣ್ಣಸಣ್ಣ ಸಂಬಂಧಗಳಲ್ಲಿ ತಲೆ ಮೇಲೆ ಹತ್ತಿ ಕೂರುವಂತಹ ಮನಸ್ಥಿತಿ ಒಕ್ಕರಿಸಿಬಿಟ್ಟರೆ ದೇವರಾಣೆ ಅವರಲ್ಲಿ ಬದುಕು ತೇಪೆ ಹಾಕಿದ ಕೌದಿಯಾಗುತದೆ ಹೊರತಾಗಿ ಯಾವತ್ತೂ ಹರವಾದ ದುಪ್ಪಟಿಯಾಗಿ ಮಚ್ಚಟೆಗೀಡು ಮಾಡುವುದು ಕಷ್ಟಕಷ್ಟ.
ಅದಾಗಿದ್ದು ಹಾಗೆಯೇ ಅವಳಿಗೂ ಅವನಿಗೂ ಅದ್ಯಾಕೋ ಸ್ವಲ್ಪ ಅಪನಂಬಿಕೆ ಹುಟ್ಟಿಬಿಟ್ಟಿದೆ. ಅದಲ್ಲಿಗಲ್ಲಿಗೆ ಸರಿ ಹೋಗುವ ಮೊದಲೇ ಒಬ್ಬರಿಗೊಬ್ಬರು ಶರಂಪರ ಕಿತ್ತುಕೊಂಡಿದ್ದಾರೆ. ಅದರಲೂ ಯಾವಾಗ ಯಾರಿಗೆ ಅವನ/ಳ ಮಾತು ಮತ್ತು ಮೆಸೇಜು ಇನ್ನಾವುದೇ ರೀತಿಯ ಸಂವಹನ ಬೇಕಿರುವುದಿಲ್ಲವೋ ಆಗ ಮೇಲೆ ಬಿದ್ದಷ್ಟೂ ಒಂದು ರೀತಿಯ ಹೇವರಿಕೆ ಹುಟ್ಟುತ್ತದೆಯೇ ಹೊರತಾಗಿ ಅಪ್ತತೆ ಬೆಳೆಯುವುದೇ ಇಲ್ಲ. ಅದು ಮೀರಿ ನಾನು ಮಾತಾಡಿಸಿಕೊಂಡೆ ತೀರುತ್ತೇನೆ, ಅವನನ್ನು/ಳನ್ನು ಮತ್ತೆ ಒಲಿಸಿಕೊಳ್ಳುತ್ತೇನೆ ಎಂದು ದಿನವಿಡೀ ಅದರಲ್ಲೇ ಮುಳುಗೆದ್ದು ಹಿಂಬಾಲಿಸಿ ವರಾತಕ್ಕಿಟ್ಟುಕೊಳ್ಳುವುದಿದೆಯಲ್ಲ ಅದು ಸರಿಪಡಿಸಿಕೊಳ್ಳುವ ಸ್ಥಿತಿಯಲ್ಲ. ಅದೊಂದು ರೀತಿಯಲ್ಲಿ ಇಗೋಗೆ ಸಿಕ್ಕ ಮನಸ್ಸಿನ ಮತ್ತು ಅಯ್ಯೋ ಎಂಬ ಸ್ವಯಂ ಸಹಾನುಭೂತಿಯ, ತಾನು ಅಪ್ಪಟ ಚಿನ್ನದ ಮನಸ್ಥಿತಿಯ ಸುಪಿರಿಯಾರಿಟಿ ಕಾಂಪ್ಲೆಕ್ಸಿನ ಡೆಸ್ಪರೇಷನ್ನು.
ಅಯ್ಯೋ ನನ್ನ ಬದುಕು, ನನ್ನ ಪಾಲಿಸಿ, ನನ್ನ ನೈತಿಕತೆ, ನನ್ನ ಬದುಕಿನ ರೀತಿ, ನಾನು ಯಾವತ್ತು ತಪ್ಪೇ ಮಾಡಿಲ್ಲ, ನನ್ನ ಬದುಕಿನ ಸಂಸ್ಕಾರವೇ ಹಿಂಗಿತ್ತು, ಇನ್ನೆಂಗೆ ನನ್ನ ಗಂಡ/ಹೆಂಡತಿನ್ನ ಎದುರಿಸಲಿ, ನನ್ನ ಪ್ರಿನ್ಸಿಪಲ್ಲೇ ಕಿತ್ತುಹೋಯ್ತು, ಇನ್ನು ನನ್ನ ಬದುಕಿಡೀ ನರಕವೇ ಎಂದು ಅಲವತ್ತುಕೊಳ್ಳುವ ವ್ಯಕ್ತಿತ್ವಕ್ಕೆ ಬೇಕಿರುವುದು ಸಾಂತ್ವನ ಅಥವಾ ಪ್ರೀತಿ ಅಥವಾ ಬೆಂಬಲ ಅಥವಾ ಒತ್ತಾಸೆ ಅಲ್ಲವೇ ಅಲ್ಲ. ಅವರಿಗೆ ಆಗಿದ್ದಿದ್ದು ಮೊದಲೇ ಹೇಳಿದಂತೆ ಡೆಸ್ಪರೇಶನ್ನಿನ ಕಾಂಪ್ಲೆಕ್ಸು. ಅದರಿಂದ ಹೊರಗೆ ಬರಲು ಅವರಿಗೆ ತೋಚುವುದೊಂದೇ ಮಾರ್ಗ ಮೊದಲು ಆಗಿರುವ ಸಂಕಟವನ್ನು ಸರಿಪಡಿಸಿಕೊಂಡು ತನ್ನ ಮನಸ್ಸಿಗೆ ತಾನು ನಂಬಿದ್ದಕ್ಕೆ ಸರಿ ಎನ್ನಿಸುವ ಮನಸ್ಥಿತಿಗೆ ಒಂದು ಶಭಾಶಗಿರಿ ಕೊಟ್ಟುಕೊಂಡು ಅಯ್ಯಪ್ಪಾ ಎಲ್ಲಾ ಸರಿಯಾಗಿಬಿಟ್ಟಿತು ಅದಕ್ಕೆ ತಕ್ಕಂತೆ ನಾನೂ ಸರಿ, ನನ್ನ ಬದುಕು ಸರಿಯಾಯಿತು ಎನ್ನುವ ಮನಸ್ಸಿನ ಕಾಂಪ್ಲೆಕ್ಸಿಗೆ ಹಾಯೆನ್ನಿಸುವ ಅವಶ್ಯಕತೆಯ ತರಾತುರಿಗೆ ಬಿದ್ದಿರುತ್ತಾರೆ ಹೊರತಾಗಿ ಅದರಿಂದ ಯಾವತ್ತೂ ಶಾಶ್ವತ ಪರಿಹಾರವಾಗಿರುವುದೇ ಇಲ್ಲ ಎನ್ನುವುದು ಅವರ ಮೆದುಳಿಗಿಳಿಯುವುದೇ ಇಲ್ಲ. ಕಾರಣ ಅವರಿಗೆ ತತಕ್ಷಣಕ್ಕೆ ಮನಸ್ಸಿನ ಭರವಸೆಗೆ ತಾನು ಸರಿ ಇದ್ದೇನೆ ಎನ್ನುವ ಒಳಗುದಿಗೆ ಅರ್ಜೆಂಟಾಗಿ ಒಂದು ಪ್ರಾಮಿಸ್ಸು ಬೇಕಿರುತ್ತದೆ. ಅದಾಗಿಬಿಟ್ಟರೆ ಅಲ್ಲಿಗೆ ಅಯ್ಯಪ್ಪಾ ಎಂದು ಹೊರಟು ಬಿಡುತ್ತಾರೆ. ಮುಂದೊಮ್ಮೆ ಇನ್ನೇನೋ ತಲೆ ಕೆದರಿಕೊಳ್ಳುವವರೆಗೂ ಯಾವ ಉಸಾಬರಿಯೂ ಇರುವುದಿಲ್ಲ. 
ನೆನಪಿರಲಿ ಹೀಗೆ ಮಾಡುವವರ ಬದುಕಿನಲ್ಲಿ ಯಾವತ್ತೂ ಖುಶಿಯೆನ್ನುವುದು ಅಡರುವುದು ಕಷ್ಟ. ಕಾರಣ ಪ್ರತಿ ಬಾರಿಯೂ ಅವರ ಮನಸ್ಸು ಒಳಗೊಳಗೆ ಯುದ್ಧಮಾಡುತ್ತಲೇ ಇರುತ್ತದೆ. ಅವರಿಗೇ ಗೊತ್ತಿಲ್ಲದಂತೆ ತಾನಂದುಕೊಂಡಂತೆ ಬದುಕುತ್ತಿರುವ ಸರಿ ತಪ್ಪಿಗೆ ತಿಕ್ಕಾಟದಲ್ಲೇ ಇರುತ್ತಾರೆ. ಎಲ್ಲರನ್ನೂ ಖುಶಿಯಾಗಿಡುವ ಹ್ಯಾಂವಕ್ಕೆ ಹೆಣಗಾಡುತ್ತಿರುತ್ತಾರೆ. ಆದರೆ ಯಾವತ್ತೂ ಜತೆಗಿರುವವರಾಗಲಿ ಇತರರಾಗಲಿ ಮೇಲೆ ನೀ ಮಾಡಿದ್ದು ಸರಿ ಎನ್ನುವಂತೆ ವರ್ತಿಸಬಹುದಾದರೂ ಮನಸ್ಸು ಪೂರ್ವಕವಾಗಿ ಜತೆಯಾಗಲಾರರು.
ಕಾರಣ ಇಂತಹ ಸಂಬಂಧಗಳಲ್ಲಿ ಅಯ್ಯೋ ಅದೇ ಕಿರಿಕಿರಿ ಹೋಗಲಿ ಹೂಂ..ಅಂದು ಸುಮ್ನಾಗೋಣ ಎಂದಿರುತ್ತದೆಯೇ ಹೊರತಾಗಿ ಯಾವತ್ತೂ ಅವರೊಂದಿಗೆ ಒಂದು ನಂಬಿಗಸ್ಥ ವ್ಯವಸ್ಥೆ ಪುನರ್‍ಸ್ಥಾಪನೆ ಬಲು ಕಷ್ಟ. ಕಾರಣ ಅವರ ಡೆಸ್ಪರೇಶನ್ನು ಮತ್ತು ಸರಿ ಮಾಡಿಕೊಳ್ಳುವ ಅತಿ ಎನ್ನುವ ಕಾಂಪ್ಲೆಕ್ಸು ಎದುರಿನವರಿಗೆ ಹೇವರಿಕೆಯಾಗಿಬಿಟ್ಟಿರುತ್ತದೆ. ಅದಕ್ಕೂ ಮಿಗಿಲು ದಿಗಿಲು ಹುಟ್ಟಿಸುತ್ತದೆ. ಯಾವಾಗ ಯಾವ ಹೊತ್ತಿನಲ್ಲಿ ತಲೆ ಏರುತ್ತಾರೋ ಯಾರಿಗೆ ಗೊತ್ತು..? ಅಂತಹ ಭರವಸೆ ಮತ್ತು ನಂಬಿಕೆಯ ಜೊತೆ ಹುಟ್ಟಿಸುವಲ್ಲಿ ವಿಫಲವಾಗಿರುವ ಮನಸ್ಥಿತಿಯಿಂದಾಗಿ ಇದ್ದಬದ್ದ ಚೆಂದದ ಘಳಿಗೆಗಳನ್ನೂ ಹಾಳುಮಾಡಿಕೊಳ್ಳುತ್ತಿರುತ್ತಾರೆ.
ಬದುಕು ಬಂದಂತೆ ಸ್ವೀಕರಿಸಿ ಚೆಂದವಾಗಿಸಿಕೊಳ್ಳುವ ಹೊಂದಾಣಿಕೆ ಎನ್ನುವ ಸ್ವಭಾವ ಅರ್ಥವೇ ಆಗಿರುವುದಿಲ್ಲ. ಅಕಸ್ಮಾತ ಇದನ್ನು ವಿವರಿಸಲು ಹೋಗಿ ತಾನು ಇದ್ದಬದ್ದವರೊಂದಿಗೆ ಹೇಗೆಲ್ಲಾ ಸಾವರಿಸಿಕೊಂಡು ಹೋಗುತ್ತಿದ್ದೇನೆ ಎನ್ನುವುದಕ್ಕೆ ಅಂಟಿಕೊಳ್ಳುತ್ತಾರೆ ಹೊರತಾಗಿ ವಾಸ್ತವ ಅರಿವಿಗೆ ತಂದುಕೊಳ್ಳುವುದಿಲ್ಲ. ಬರೀ ಹೆಣ್ಣು ಗಂಡಿನ ಮಧ್ಯೆ ಅಂತಲ್ಲ ಇದು ಇಬ್ಬರಲ್ಲೂ ಅಷ್ಟೆ. ಯಾವುದೇ ಸ್ನೇಹ, ಅವಳೊಂದಿಗಿನ ಗೆಳೆತನ, ಚಿಕ್ಕಪ್ಪನೊಂದಿಗಿನ ಮುಯ್ಯಿ, ಸ್ವಂತ ಹೆಂಡತಿಯೊಂದಿಗಿನ ಅರೆಮುನಿಸು, ಕಚೇರಿ ಸಹೋದ್ಯೋಗಿಯೊಂದಿಗೆ ಒಂದು ದಿವ್ಯವಾದ ಮುಖಸಿಂಡರಿಸುವ ಪಢಪೆÇೀಶಿತನ, ಕೆಲಸದಾಳಿನ ಜೊತೆಗಿನ ಒಣಉಸಾಬರಿ, ಪಕ್ಕದ ಮನೆಯಾತನ ಹಲ್ಕಟಗಿರಿ, ನಿಮ್ಮ ಫೇಸ್‍ಬುಕ್ ವಾಲ್ ಮೇಲೆ ಬಂದು ಕ್ಯಾತೆ ತೆಗೆಯುವ ನಿಮ್ಮ ಕಮೆಂಟಿಗೆ ಆಕೆ/ಅವನು ಲೈಕ್ ಒತ್ತಿದ್ದಾನೆ ಎಂದು ನೋಡುವ ಸಣ್ಣತನ, ಎದೆಯುದ್ದ ಮಗನ ಸರಿಬರದ ನಡವಳಿಕೆ, ನಮ್ಮ ನಮ್ಮ ಸ್ನೇಹದವರೊಂದಿಗಿನ ಲೈಕು ಕಮೆಂಟಿಗೆ ಸಂಕಟ ಪಟ್ಟುಕೊಂಡು ಇನ್ನೊಬ್ಬರ ಇನ್‍ಬಾಕ್ಸಿಗೆ ಹೋಗಿ ತಿಪ್ಪೆ ಸಾರಿಸುವವರು, ತಮ್ಮತಮ್ಮ ಬದುಕೇ ಕಿತ್ತು ಹೋಗಿದ್ದರೂ ಅಕೆಯ ಸಂಕಟಕ್ಕೆ ಕೈಯೊಡ್ಡುವ ಸಹಾನುಭೂತಿಗಳಿಸುವ ಹೀಗೆ ಯಾರಿದ್ದಾರೆ ಯಾರಿಲ್ಲ ಇದರಲ್ಲಿ. ಎಲ್ಲರದ್ದೂ ವರಾತ ಒಂದೇ ತಾವು ಸರಿ ಎನ್ನಿಸಿಕೊಳ್ಳುವ ಮತ್ತು ಮೊದಲಿನಂತೆ ಎಲ್ಲಾ ಚೆಂದವಾಗಿ ನಡೆದುಬಿಡಲಿ ಎನ್ನುವ ಧಾವಂತ.
ಅರೇ ಸುಮನೆ ಬಿದ್ದ ನೀರೂ ಆರಲು ಅದರದ್ದೇ ಸಮಯ ತೆಗೆದುಕೊಳ್ಳುವಾಗ ಪ್ರತಿಯೊಂದೂ ಸರಿ ಹೋಗಲು ಅಥವಾ ಹೋದಂತೆ ಅನ್ನಿಸಲು ಅದರದ್ದೇ ಸಮಯಗಳಿರುತ್ತವೆ. ಹಾಗಾದಲ್ಲಿ ಮಾತ್ರ ಅಂತಹದ್ದು ತಣಿದು ಸೂಕ್ತವಾದ ಸಮಯಕ್ಕೆ ಮಾಯ್ದು ಏನೂ ಆಗಿಲ್ಲವೆಂಬಂತೆ ನೆಟ್ಟಗಾಗುವುದು. ಇದು ಪ್ರಕೃತಿಯೇ ಕೊಟ್ಟ ಸುಲಭದ ಸಲೀಸು ವಿಧಾನ. ಇದರಿಂದ ನೀವು ಯಾರನ್ನು ಸಂತೈಸಲು ಸರಿ ಮಾಡಲು ಹೊರಡುತ್ತಿರೋ ಅವಳೆ/ನೇ ಕೊನೆಗೊಮ್ಮೆ ಅಯ್ಯೋ ಸುಖಾ ಸುಮ್ಮನೆ ಸಮಯ ವ್ಯರ್ಥ ಮಾಡಿಕೊಂಡೆ ಎನ್ನುವ ಹಂತಕ್ಕೆ ಬಂದಿರುವ ಉದಾ. ಸಾವಿರ. ನನ್ನ ಕೌನ್ಸೆಲಿಂಗ್ ಹಲವು ವಿಧಾನದಲ್ಲಿ ಸುಮ್ಮನಿರಿಸಿಬಿಡುವುದು ಅತ್ಯಂತ ಉಪಯುಕ್ತ ವಿಧಾನವಾಗಿ ಯಶಸ್ಸಾಗಿದ್ದಿದೆ. ಕಾರಣ ಎದುರಿನವರ ಮೌನ ಕೆಲವೊಮೆ ನಿಮ್ಮ ಅಹಂನ್ನು ಹಣಿದರೆ ಕೆಲವೊಮ್ಮೆ ಅಯ್ಯೋ ಪಾಪ ಎನ್ನುವ ಮನಸ್ಥಿತಿಯನ್ನು ಕ್ರಮೇಣ ತಯಾರು ಮಾಡುತ್ತದೆ. ಇದನ್ನು ಬಿಟ್ಟು ನನಗೆ ಹಿಂಗೇ ನನಗೇ ಹಂಗೇ ಬದುಕು ಎಂದು ನಿಲ್ಲಲು ಹೋದಲ್ಲಿ ಅದು ಬದುಕಾಗುವುದಿಲ್ಲ. ಇದ್ದ ಬದ್ದ ಎಲ್ಲರ ಜೀವ ತಿನ್ನುವ ಸರಕಾಗುತ್ತದೆ. ಕಾರಣ ಇರುವ ಎರಡು ದಿನದಲ್ಲಿ ಏನೆ ಆದರೂ ಕಳೆದುಕೊಳ್ಳುವುದು ಎಂದು ಏನೂ ಇಲ್ಲ. ಎಲ್ಲಾ ಆಯಾ ಸಮಯದ ಕರ್ಮವಷ್ಟೆ. ಸಮಯಕ್ಕೆ ತಕ್ಕಂತೆ ಬದಲಾಗದಿದ್ದರೆ ನೀವು ಅಲ್ಲೆ ಇರುತ್ತಿರಿ. ಕಾಲ
ಅಪಾಯಕಾರಿ ಒಳ್ಳೆಯತನಗಳು
(ಮೆಸೆಂಜರು, ವಾಟ್ಸಾಪುಗಳ ಹಾವಳಿಯಿಂದಾಗಿ ಕುಲ ಗೋತ್ರ ಗೊತ್ತಿಲ್ಲದವರೂ ಅಡ್ವೈಸರುಗಳಾಗಿ ಅವತರಿಸುತ್ತಿರುವ ಸಂದರ್ಭದಲ್ಲಿ ಯಾವಾಗ ಯಾರ ಮುಖವಾಡ ಬಿಚ್ಚಿಕೊಳ್ಳುತ್ತದೆ, ಯಾರೆಲ್ಲಾ ಹರಾಜಾಗುತ್ತಾರೆ ಹೇಳಲಾಗುವುದಿಲ್ಲ. ಆಗ ಇಂಥವರನ್ನು ನಂಬಿ ಕತೆ ಕೊಟ್ಟು ಕೂತವರ ಪರಿಸ್ಥಿತಿ..?)

ಇಂಥವರು ಯಾರದೇ ಬದುಕಿನಲ್ಲೂ ತೀರ ಅಪಾಯಕಾರಿ. ಸ್ವಂತದ ಬದುಕಂತೂ ನಿಸ್ಸಂಶಯ ಗಬ್ಬೆಬ್ಬಿಸಿಕೊಂಡಿರುತ್ತಾರೆ ಆದರೆ ಹೊರಗೆ ಬರುತ್ತಿದ್ದಂತೆ ಅದೆಲ್ಲಿರುತ್ತದೋ ಬ್ರಹ್ಮಕಳೆ ಮುಖದಲ್ಲಿಟ್ಟುಕೊಂಡು, ಒಳಗಿನ ವೃಣದ ಮೇಲೆ ಸ್ಪ್ರೇ ಹೊಡೆದುಕೊಂಡೆ ರಸ್ತೆಗಿಳಿದಿರುತ್ತಾರೆ. ನೋಡಿದವರು ಮಾತಾಡಿದವರು ಯಾರೂ ಇವರನ್ನು ನಾಲಾಯಕ್ ಎಂದಾಗಲಿ, ಅಪಾಯಕಾರಿ ಎಂದಾಗಲಿ ಅವಗಾಹನೆಗೆ ತಂದುಕೊಳ್ಳುವುದು ಸಾಧ್ಯವೇ ಇರುವುದಿಲ್ಲ. ಯಾವಾಗ ಬೇಕಾದರೂ ಸಹಾನುಭೂತಿಗೆ ಒಳಗಾಗಲು, ಕೈ ಕಾಲು ಹಿಡಿಯಲು ತನ್ನ ತಪ್ಪೇನು ಇಲ್ಲ ಎಂದು ಚೆಂದವಾಗಿ ವಾದಿಸಲು, ಎದುರಿನವರೂ ಎಲ್ಲೂ ಅನಾವಶ್ಯಕ ತೊಂದರೆಗೀಡಾಗಬಾರದು ಎನ್ನುವ ಕಾಳಜಿಯುತ ಮಾತುಕತೆಯೊಂದಿಗೆ, ಹಾಗೆ ಸೆಂಟಿಮೆಂಟಾಗಿ ಅವರನ್ನು ನಂಬಿಸಿ, ಮಾತುಕತೆಗೆಳೆಯುವುದು ಬೇಡದ ಅವರ ಸಂಸಾರದ ಕತೆ ವಿಚಾರಿಕೊಳ್ಳುತ್ತಾ ಬಳಸಿಕೊಳ್ಳುವುದರಲ್ಲಿ ಇವರದು ಎತ್ತಿದ ಕೈ. ಇಂಥವರು ತೀರ ಮನೆ ಹೊರಗೆ ದೂರದಲ್ಲಿ ಎಲ್ಲೋ ಇರುತ್ತಾರೆಂದಲ್ಲ. ಮನೆಯಲ್ಲೇ, ತೀರ ಸಂಬಂಧಿಗಳಲ್ಲಿ, ಆಪ್ತೇಷ್ಟರಲ್ಲಿ, ಬಂಧುವಾಗಿಯೂ ಇರುತ್ತಾರೆ.
ಅಗತ್ಯ ಬಿದ್ದಾಗ "...ನೋಡು ನಾನು ಆವತ್ತೇ ಹೇಳಿರಲಿಲ್ವಾ.." ಎಂದು ಸಾಧಿಸಿಕೊಂಡು ತನ್ನ ನಂಬುಗೆ ಮತ್ತು ತನಗನ್ನಿಸಿದ್ದೇ ಸರಿ ಎಂಬುವುದನ್ನು ಸಾಧಿಸಲು ಕಾಯುತ್ತಾ ಅದಕ್ಕಾಗಿ ಏನೂ ಮಾಡಲು ಹಿಂದೆ ಮುಂದೆ ನೋಡದ, ಯಾರ ಸಂಸಾರದ ವಿಷಯದಲ್ಲೂ ತಲೆ ಹಾಕಲು ಹೇಸದ, ಇನ್ಯಾರದ್ದೋ ಗಂಡ ಹೆಂಡತಿಯನ್ನು ಸರಿಪಡಿಸುತ್ತೇನೆಂದು ಹೊರಟು ನಿಲ್ಲುವ, ಇಂತಹ ನಿರಪಾಯಕಾರಿಯಂತೆ ಕಾಣಿಸುವ ಸಮೀಪ ಸಂಬಂಧಿಗಳು ನಿಜಕ್ಕೂ ಅಪಾಯಕಾರಿ. ವಿಚಿತ್ರ ಎಂದರೆ ಕಿತ್ತು ಹೋಗುತ್ತಿದ್ದ ಸ್ವತ: ಹೆಂಡತಿಯೊಂದಿಗಿನ ಸಂಬಂಧ ಪುನರ್ ಸ್ಥಾಪಿಸಿಕೊಳ್ಳಲು ಮತ್ತೆ ಇನ್ಯಾರದ್ದೋ ಸಹಾಯ ಇವರಿಗೇ ಬೇಕಿರುತ್ತದೆ. ಸ್ವಂತದ ಮನೆಯಲ್ಲಿ ಅದೆಂಥಾ ಶರಂಪರ ಕಿತ್ತಾಟಗಳಿರುತ್ತವೆಂದರೆ ಗಂಡ/ಹೆಂಡತಿ ಒಬ್ಬರನ್ನೊಬ್ಬರು ತಿರುಗಿಯೂ ನೋಡದೆ ವಾರಗಟ್ಟಲೆ ಬದ್ಧ ದ್ವೇಷಿಗಳಾಗುತ್ತಿರುತ್ತಾರೆ. (ಈಗಿನ ಕಾಲವಾದ್ದರಿಂದ ಫೇಸ್‍ಬುಕ್ಕು/ವಾಟ್ಸಾಪುಗಳಲ್ಲೆಲ್ಲಾ ಬ್ಲಾಕು ಮಾಡಿಕೊಂಡು ರೇಜಿಗೆ ಹುಟ್ಟಿಸುವಂತಹ ದಂಪತಿಗಳಿದ್ದಾರೆ ಎಂದರೆ ನೀವು ನಂಬಲೇಬೇಕು. ಅದರ ಸ್ಕ್ರೀನ್‍ಶಾಟ್‍ಗಳನ್ನೂ ಗ್ಯಾರಂಟಿಗಾಗಿ ಕಳುಹಿಸಿಕೊಳ್ಳುವ ಇವರು ಅದಿನ್ನೆಂಥಾ ನಂಬಿಕೆ ಸ್ವಂತದರಲ್ಲಿ ಉಳಿಸಿಕೊಂಡಿದ್ದಾರು..? ಮೊದಲಾದರೆ ಬರೀ ಮಾತು ನಿಂತುಹೋಗಿ ಅವಕಾಶ ಸಿಕ್ಕಿದಾಗೆಲ್ಲಾ ಅಪರೋಕ್ಷ ಹರಿಹಾಯುವುದು ನಡೆಯುತ್ತಿತ್ತು. ಈಗೀಗ ಇಬ್ಬರೂ ನೌಕರಿಯಲ್ಲೂ ಇರುವುದರಿಂದ ಮುಲಾಜಿಲ್ಲದೆ ಬ್ಲಾಕ್ ಮಾಡಿ ಬಿಸಾಡಿ ಜತೆಗೆ ಇತರರೊಂದಿಗೆ ಚಾಟ್‍ನಲ್ಲಿದ್ದು ಸಮಯ/ಸಂಕಟ ಕಳೆದುಕೊಂಡು ಹಗುರಾಗುವವರಿದ್ದಾರೆ. ಹೊರಗೆ ಕೆಲಸ ಮಾಡುವ ಅಡ್ವಾಂಟೇಜೂ / ಡಿಸ್ ಅಡ್ವಾಂಟೆಜೂ ಎರಡೂ ಇದು ಹೌದಾದರೂ ಒಳಗೊಳಗೆ ಬೇರೆಯವರ ವಿಷಯದಲ್ಲಿ ತಮಾಷೆ ನೋಡುವ ಮೊದಲು ತಮಗೇ ಆದಾಗ ಏನಾಗುತ್ತದೆನ್ನುವ ಅರಿವಿರಬೇಕು. ಅದರೆ ಇಂಥವರಿಗೆ ಇದೆಲ್ಲಾ ತಾಗುವುದೂ ಇಲ್ಲ.)
ಕಾರಣ ಬೇಕಿದೆಯೋ ಬೇಡವೋ ಅವರಿಗೊಂದಿಷ್ಟು ನಮ್ಮ ನಮ್ಮ ಸಂಸಾರದ ರಗಳೆಗಳು ಗೊತ್ತಿರುತ್ತವೆ. ಅದನ್ನೆ ಹಿಡಿದುಕೊಂಡು ಇಂಟರ್‍ಫೀಯರು ಮಾಡುತ್ತಾ, ಇಬ್ಬರಿಗೂ ಆಪ್ತವಾಗಿ ಮಾತಾಡುತ್ತ ಹೇಗೋ ಅವರಿಗೂ ಒಬ್ಬ ಆಪ್ತನ ಮಧ್ಯಸ್ಥಿಕೆ ಬೇಕಾಗುತ್ತಿರುತ್ತದೆ ಅಂತ ಅನ್ನಿಸಿರುತ್ತದೆಯೇ ವಿನ: ಪ್ರಾಕ್ಟಿಕಲೀ ಹಾಗೆ ಬೇಕಿರುವುದೇ ಇಲ್ಲ. ಆದರೂ ಆ ಹೊತ್ತಿಗಿನ ಸಂಕಟಕ್ಕೆ ಹೌದೆಂದು ಬಿಡುತ್ತಾರೆ. ಇಂಥವರು ಬರದಿದ್ದರೂ ಅವರೇನೂ ಮರ್ಡರ್ ಮಾಡಿಕೊಳ್ಳುವುದಿಲ್ಲ. ಅದರೆ ಇಬ್ಬರಲ್ಲೂ ಅವನೇ/ಳೇ ಮೊದಲು ಮಾತಾಡಿಸಲಿ ಸರಿಪಡಿಸಲಿ ಎಂಬೆಲ್ಲ ಪುರಾತನ ಇಗೋಗಳು ಒಂದಿಷ್ಟು ಇರುತ್ತವಲ್ಲ. ಅದಕ್ಕೆ ಸರಿಯಾಗಿ ಇಂಥವನೊಬ್ಬ ಎಟುಕಿ ಸರಿ ಹೋಗಿದ್ದು ಅ ಸಂಸಾರದ ಕತೆ ಸುಖಾಂತ್ಯವಾಗುತ್ತದೆ. ಅದರೆ ಅವನ ಕತೆ ಅಲ್ಲಿಂದ ಶುರುವಾಗುತ್ತದೆ. ಅವಕಾಶ ಇದ್ದಾಗಲೆಲ್ಲ " ಅವರಿಬ್ಬರನ್ನೂ ಸರಿ ಮಾಡಿದ್ದು ನಾನೇಯಾ. ಇಲ್ದಿದ್ರೆ ಇಷ್ಟೊತ್ತಿಗೆ ಡೈವೋರ್ಸೆ.." ಎಂದು ಕತೆ ಶುರುವಿಟ್ಟು ಬಿಟ್ಟಿರುತ್ತಾರೆ. ಅದನ್ನೆ ಕೇಳಿದ ತಲೆಮಾಸಿದ ಇನ್ಯಾವನೋ/ಳೋ " ಅಯ್ಯೋ ನಮ್ಮವಳೂ ಹಂಗೇ ಮಾರಾಯ.." ಎಂದು ಬಾಯ್ ತಪ್ಪಿ ಅಂದು ಬಿಟ್ಟರೆ ಅಷ್ಟೆ ಅಲ್ಲಿ ಅಡರಿಕೊಂಡುಬಿಡುತ್ತಾರೆ.
ಇವತ್ತು ವಾಟ್ಸಾಪಿನ ಒಳಕೋಣೆಗಳಲ್ಲಿ ಬಹಳಷ್ಟು ಗಂಡಸರು ತಂತಮ್ಮ ಸಂಸಾರದ ಗುಟ್ಟುಗಳನ್ನೇ ಬಿಚ್ಚಿಟ್ಟು ಬಿಡುತ್ತಿರುತ್ತಾರೆ ಅದರಲ್ಲೂ ಎದುರಿಗೆ ಹೆಂಗಸಿದ್ದರಂತೂ ಮುಗಿದೇ ಹೋಯಿತು.
" ಅಯ್ಯೋ ಇಲ್ಲ ಮಾರಾಯ್ತಿ ಅವಳು ಸ್ವಲ್ಪ ಹಂಗೇ...ಇತ್ಯಾದಿ.." ಕತೆ ಹೊಡೆಯುತ್ತಾ "..ನೋಡು ನಾನು ಏನು ಬೇಕಿದ್ದರೂ ಹೇಳುತ್ತಿದ್ದೇನೆ ಅಂದರೆ ನಿನ್ನ ಮೇಲೆಷ್ಟು ವಿಶ್ವಾಸ ಇಡುತ್ತಿದ್ದೇನೆ.."ಎಂದೇ ಪ್ರತಿಧ್ವನಿಸುತ್ತಿರುತ್ತಾರೆ. ವಿಪರ್ಯಾಸ ಎಂದರೆ ಮುಖಮೂತಿ ಪರಿಚಯ ಇಲ್ಲದ ಕೇವಲ ಚಾಟು/ಫೇಸ್‍ಬುಕ್ಕಿನ ಪರಿಚಯದವರೆದುರಿಗೆ ಸಂಸಾರದ ವಿಷಯ ಬಿಚ್ಚಿ ಕೂಡುವ ಗಂಡಸು/ಹೆಂಗಸರ ಮೇಲೆ ಅದಿನ್ನೆಂಥಾ ಭರವಸೆ ಹುಟ್ಟೀತು. ಇವತ್ತು ಇದನ್ನೆಲ್ಲಾ ಹೇಳುವ ಆತ/ಆಕೆ ತನ್ನ ವಿಷಯವನೂ ಬೇರೆಡೆ ಬಾಯ್ಬಿಡುವುದಿಲ್ಲ ಎಂದು ಯಾರಿಗೆ ಗೊತ್ತು..?
ಅಸಲಿಗೆ ಇಲ್ಲಿ ತನ್ನ ಹೆಂಡತಿ ಸರಿ ಇಲ್ಲ ಎನ್ನುವುದನ್ನು ಬಾಯಿ ತಪ್ಪಿ ಮಾತಾಡುವ ಗಂಡಸು ಇನ್ನೇನಾದರೂ ಕೂಡಾ ಮಾತಾಡಬಹುದೆನ್ನುವ ಒಂದು ಅವಗಾಹನೆ ಒಳಗೊಳಗೇ ಹುಟ್ಟಬೇಕು. ಇಂಥಾ ಹರಕು ಬಾಯಿಯವರಿಗೆ ಎದುರಿನವರನ್ನು ತಪ್ಪಿತಸ್ಥ ಅಥವಾ ತಾನು ಹೇಳಿದ್ದು ನಂಬಿದ್ದೇ ಸರಿ ಎನ್ನುವ ಹುಕಿಯಿರುತ್ತದಲ್ಲ ಅದಕ್ಕಾಗಿ ಎಂಥಾ ಸನ್ನಿವೇಶ ನಿರ್ಮಾಣಕ್ಕೂ ಅದಕ್ಕಾಗಿ ಭಯಾನಕ ಡೆಡಿಕೇಶನ್ನಿನಲ್ಲಿ ನಿಂತುಬಿಟ್ಟಿರುತ್ತಾರೆ. ಕಾರಣ ಇಂಥವರು ಎಂಥಾ ಮುಖವಾಡದ ಹಿಂದಿರುತ್ತಾರೆಂದರೆ ಭಯಾನಕ ಅಸಂತೃಪ್ತಿಯೊಂದು ಮನಸ್ಸಿನಲ್ಲಿ ಮನೆಮಾಡಿರುತ್ತದೆ. ಬದುಕು ಒಳಗೊಳಗೇ ನಾಲ್ಕು ದಿನ ಚೆಂದವಿದ್ದರೆ ಇನ್ನೂ ನಾಲ್ಕು ತಿಂಗಳು ಕೈಕೊಡುತ್ತಿರುತ್ತದೆ. ತೀರ ಖಾಸಗಿ ಬದುಕು ಯಾವತ್ತೊ ಕೈಬಿಟ್ಟಿರುತ್ತದೆ. ಸೆಕ್ಸು ಎನ್ನುವ ಫ್ಯಾಂಟಸ್ಸಿ ಮನದ ಮೂಲೆಯಲ್ಲಿ ವಿಷವಾಗಿ ಕೂತುಬಿಟ್ಟಿರುತ್ತದೆ. ಎದುರಿಗೆ ಇರುವ ಸ್ನೇಹಿತರು ಸಂಬಂಧಿ ಏನಾದರೂ ಮಾಡುತ್ತಾ ಸಾಧಿಸುತ್ತ ಎದ್ದು ನಿಲ್ಲುತ್ತಿದ್ದರೆ ಅದಕ್ಕೆ ಕಾಂಪಿಟೇಶನ್ನು ಕೊಡಲಾಗದ ತಮ್ಮ ಕೀಳರಿಮೆಯ ಹಿಂಜರಿತನ ಒಳಗೊಳಗೇ ಕಾಡುತ್ತಿರುತ್ತದೆ.
ಇಂಥವರ ವಿರುದ್ಧ ಮಾಡಲು ನಿಮ್ಮಲ್ಲಿ ಯಾವುದೇ ಗಹನವಾದ ಆದರೆ ಹೌದೆನ್ನಿಸುವ ಆರೋಪಗಳು ಸಾಕ್ಷಿ ಸಮೇತ ಲಭ್ಯವಿರುವುದಿಲ್ಲ. ಆದರೆ ಹಿಂದಿನಿಂದ ಆಡಿಸುವ ಕಡ್ಡಿಗೆ ಎದುರಿನವರ ಬದುಕು ಬರಬಾದಾಗುತ್ತಿರುತ್ತದೆ. ಇವರು ಮಾತ್ರ ಯಾರಿಗೋ ಎನೋ ಉಪಕಾರ ಮಾಡಿದ್ದೇನೆ ಅಥವಾ ಮಾಡುತ್ತಿದ್ದೇನೆ ಎನ್ನುವ ಭ್ರಮೆಯಲ್ಲಿ ತಮ್ಮದೆನ್ನುವ ಬದುಕು ಎಕ್ಕುಟ್ಟಿ ಹೋಗುತ್ತಿದ್ದರೂ ಅನಾಯಾಸವಾಗಿರುತ್ತಾರೆ. ಇಂಥವರಿಗೆ ಈಗೀಗ ಸಾಮಾಜಿಕ ಜಾಲತಾಣದಲ್ಲಿ ಸುಲಭಕ್ಕೆ ಪಾಪದ ಮಾತಿಗೆ ಬೀಳುವ ಹೆಣ್ಣುಮಕ್ಕಳೂ ಕಡಿಮೆ ಇಲ್ಲ. ಬಾಕಿ ಏನೂ ಮಾಡಲಾಗದಿದ್ದರೂ ಅವರವರ ಕತೆಗೆ ಪಾಪ ಎನ್ನುತ್ತಾ ಬೆರಳು ಕಚ್ಚುತ್ತಾ ಸರಿ ಪಡಿಸಬೇಕಾದ ಜಾಗದಲ್ಲಿ ನಿಧಾನಕ್ಕೆ ತುಪ್ಪ ಸುರಿಯುತ್ತಿರುತ್ತಾರೆ. ಎಲ್ಲೋ ಎನೋ ನಡೆಯುವ ಅತೃಪ್ತಿ ಇವರನ್ನು ಸಂಕಟಕ್ಕೀಡು ಮಾಡುತ್ತಿರುತ್ತದೆ.
ಒಟ್ಟಾರೆ ಒಳ್ಳೆಯತನದ ಮುಖವಾಡದ ಹಿಂದೆ ತೀರ ಒಂದು ಕುತ್ಸಿತ ಮನಸ್ಥಿತಿ ಇರುವುದು ಗೊತ್ತಾಗುವ ಹೊತ್ತಿಗೆ ತಡವಾಗಿರುತ್ತದೆ. ತೀರ ಅತ್ತು ನಂಬಿಸಲು ಹಿಂದೆ ಮುಂದೇ ನೋಡದ ಇಂಥವರ ಒಳ್ಳೆಯತನದ ಬದಲಿಗೆ ನಮ್ಮ ನಮ್ಮ ಸಂಕಟಗಳನ್ನು ನಾವೇ ಅರಗಿಸಿಕೊಳ್ಳುವುದು ಗೊತ್ತಿರಬೇಕು. ಆದರೆ ಮೆಸೆಂಜರು, ವಾಟ್ಸಾಪುಗಳ ಹಾವಳಿಯಿಂದಾಗಿ ಕುಲ ಗೋತ್ರ ಗೊತ್ತಿಲ್ಲದವರೂ ಅಡ್ವೈಸರುಗಳಾಗಿ ಅವತರಿಸುತ್ತಿರುವ ಸಂದರ್ಭದಲ್ಲಿ ಯಾವಾಗ ಯಾರ ಮುಖವಾಡ ಬಿಚ್ಚಿಕೊಳ್ಳುತ್ತದೆ, ಯಾರೆಲ್ಲಾ ಹರಾಜಾಗುತ್ತಾರೆ ಹೇಳಲಾಗುವುದಿಲ್ಲ. ಆಗ ಇಂಥವರನ್ನು ನಂಬಿ ಕತೆ ಕೊಟ್ಟು ಕೂತವರ ಪರಿಸ್ಥಿತಿ..?