Saturday, October 10, 2015

ಅಪ್ಪ.. ತಪ್ಪು ನಿಂದಲ್ಲ ಸುಮ್ನಿರು...
ಪ್ರತಿಬಾರಿಯೂ ವೈಯಕ್ತಿಕವಾಗಿ ಮುಗ್ಗರಿಸಿದಾಗಲೂ ಹೆಣ್ಣೊಬ್ಬಳ ವಕಾಲತ್ತು ಬದುಕಿಗೊಂದು ತಿರುವನ್ನುತಂದಿಟ್ಟುಬಿಡುತ್ತದೆಅಷ್ಟೆ... ಅಲ್ಲಿವರೆಗೂ ಬದಲಾಗುತ್ತ ಇಲ್ವಾ ಅನ್ನಿಸುತ್ತಿದ್ದ ಎಂಥದ್ದೇ ಅರೆಬರೆ ಜೀವನ ಕೂಡಇದ್ದಕ್ಕಿದ್ದಂತೆ ಹಳಿಗೆ ಹತ್ತುತ್ತದೆಆದರೆ ಬದಲಾದ ಜೀವನಪಥದಲ್ಲಿ ಬದುಕು ನಿಭಾಯಿಸೋದಾದರೂಗೊತ್ತಿರಲೇಬೇಕು...

ನಾರಾಯಣ ನಮಗೆಲ್ಲ ನಾಣಿಯಾಗಿದ್ದ (ಹೆಸರು ಬದಲಿಸಿದ್ದೇನೆ). ಪೂರ್ತಿ ಮಂದನೂ ಅಲ್ಲದ ಇತ್ತ ಹೇಳಿದ್ದೋಮ್ಮೆಲೆ ಅರ್ಥವೂ ಆಗದ ಹುಡುಗ. ಗುಂಪಿನಲ್ಲಿ ಅತ್ಯಂತ ಗೇಲಿಗೂ, ಆಗೀಗ ತಲೆ ಮೇಲೆ ಮೊಟಕಿಸಿಕೊಳ್ಳಲು ಒಂದು ತಲೆಯೂ ಬೇಕಾಗಿ ಅವನಿದ್ದನೇ ಹೊರತಾಗಿ ಅವನ್ಯಾವತ್ತೂ ತನ್ನದೂ ಒಂದು ತಲೆ ಎಂಬ ಐಡೆಂಟಿಟಿ ತೋರಿದವನೇ ಅಲ್ಲ.
ಅವನ ಕಾಲದ ಅತಿ ದೊಡ್ಡ ತ್ರಾಸೆಂದರೆ ಗಣಿತದಲ್ಲಿ ಸೊನ್ನೆಯಾದರೆ ಇಂಗ್ಲಿಷ್ ಅಪೂಟು ತಲೆಗೆ ಹೋಗುತ್ತಿರಲಿಲ್ಲ. ಅವನಷ್ಟೇ ಯಾಕೆ ನನ್ನ ಕಾಲದ ಅತಿ ಹೆಚ್ಚು ಹುಡುಗರ ಇಂಗ್ಲಿಷಿನ ಕಥೆಯೂ ಹೀಗೇ. ಕಾರಣ ನಮ್ಮ ಮಾಸ್ತರುಗಳಿಗೇ ಪಾಪ ಭಾಷೆಯೊಂದು ಭವಿಷ್ಯತ್ತಿನಲ್ಲಿ ಹೀಗೆ ದೇಶವನ್ನಾಳಬಹುದೆನ್ನುವ ಅಂದಾಜಿರಲಿಲ್ಲ. ಇನ್ನು ನಮಗೆಲ್ಲಿಂದ ಬರಬೇಕು..? ಆ ಕಾಲಕ್ಕಾದ ಪ್ರಮಾದ ನಮ್ಮನ್ನು ಈಗಲೂ ಕಾಡುತ್ತದೆ. ನಾನಿವತ್ತಿಗೂ ಬರೆದಷ್ಟು ಸುಟವಾಗಿ ಅಂಗ್ರೇಜಿ (ಇಂಗ್ಲಿಷ್) ಮಾತನಾಡಲಾರೆ. ಆದರೆ ಸಂವಹನಕ್ಕೆ ಅಗತ್ಯವಿರುವಷ್ಟು ಗಲಗಲ ಎನ್ನುತ್ತೇನೆ. ಅಷ್ಟಕ್ಕೂ ಎದುರಿನವರನ್ನು ನಂಬಿಸಲಿಕ್ಕೆ, ಅವರಿಗೊಂದು ಸ್ಪಷ್ಟ ಚಿತ್ರ ಕೊಡುವುದಕ್ಕೆ ಭಾಷೆಗಿಂತಲೂ ವಿಷಯದ ಅರಿವು ಮತ್ತದನ್ನು ಪ್ರಸ್ತುತಪಡಿಸುವ ರೀತಿ ಮುಖ್ಯವಾಗುತ್ತದೆ ಹೊರತಾಗಿ ಭಾಷೆನೇ ಎಲ್ಲವೂ ಅಲ್ಲ. ಹಾಗಾಗಿ ದೇಶದ ಯಾವ ಮೂಲೆಯಲ್ಲೂ ನನಗಿವತ್ತು ಭಾಷೆ ತೊಂದರೆಯೆಂದೆನಿಸಿಲ್ಲ.
ಆದರೆ ನಾಣಿಗೆ ಇಂಗ್ಲಿಷ್ ಹೇಗೆ ಕೈಕೊಟ್ಟಿತ್ತೋ ಹಾಗೆಯೇ ಇತರ ವಿಷಯಗಳೊಂದಿಗೆ ಸಾಮಾನ್ಯಜ್ಞಾನವೂ ಕೈಬಿಟ್ಟಿತ್ತು. ಅವನಪ್ಪ ಇವನನ್ನು ತಿದ್ದಲು ಭಯಾನಕ ಶಿಕ್ಷೆಗೆ ಈಡು ಮಾಡುತ್ತಿದ್ದರು. ಎಷ್ಟೋ ಬಾರಿ ಅವನನ್ನು ಬೆತ್ತಲೆ ನೇತುಹಾಕಿದ್ದನ್ನು ನೋಡಿಕೊಂಡು ನಾವು ದೂರದಿಂದಲೇ ಓಡಿ ಹೋದದ್ದೂ ಇದೆ. ಮುಖ ಮೂತಿ ನೋಡದೆ ಬಾರಿಸುತ್ತಿದ್ದರು. ಅವನ ಕಿರುಚುವಿಕೆಗೆ ಯಾರಾದರೂ ಎದುರು ಮನೆಯ ಅಜ್ಜಿಯಂದಿರು ಹೋಗಿ, ಅವರಪ್ಪನನ್ನು ಬೈದು ಹುಡುಗನನ್ನು ಎತ್ತಾಕಿಕೊಂಡು ಬಂದು ಮನೆಯೊಳಗೆ ಇರಿಸಿಕೊಳ್ಳುತ್ತಿದ್ದರು. ಅಂಗಿ-ಚೆಡ್ಡಿಗಳಿಲ್ಲದ ಹುಡುಗ ಬುಳುಬುಳು ಮಾಡುತ್ತಾ ಕಟ್ಟೆ ಮೇಲೆ ಕೂತಿರುತ್ತಿದ್ದರೆ ರಾತ್ರಿಯಾಗುವ ಹೊತ್ತಿಗೆ ಅಪ್ಪನೆಂಬ ನರಸಿಂಹ ಮಗನನ್ನು ಮೈದಡವಿ ಹೊದೆಸಿ ನಿz ಬರುವವರೆಗೂ ಕುಚ್ಚು ತಟ್ಟುತ್ತಿದ್ದ. ಅದೇನೇ ಇದ್ದರೂ ವಿಪರೀತ ಓದುವ ಬಗೆಗಿನ ಆಸ್ಥೆ ಮತ್ತವನನ್ನು ಇನ್ನಿಲ್ಲದಂತೆ ಹಿಂಬಾಲಿಸುತ್ತಿದ್ದ ಪಾಲಕರ ನಿಗಾದಿಂದ ಅವನಿಗೆ ಓದು, ಶಾಲೆ ಮತ್ತು ವ್ಯವಸ್ಥೆಯ ಬಗ್ಗೆಯೇ ಹೇವರಿಕೆ ಬಂದು ಬಿಟ್ಟಿತ್ತಾ ಗೊತ್ತಿಲ್ಲ. ತೀರಾ ಕಾಲೇಜಿನ ಹೊತ್ತಿಗೆ ಜಸ್ಟ್‌ಪಾಸ್ ಎನ್ನುವಲ್ಲಿಗೆ ಬಂದು ನಿಂತಿದ್ದ.
ಊರ ತುಂಬೆಲ್ಲ ನಾಣಿ ಅಪಹಾಸ್ಯಕ್ಕೀಡಾಗುತ್ತಿದ್ದ. ‘ಹುಡುಗ ಓದೋದು ಒಂದ ಬಿಟ್ಟ ಬಾಕಿ ಎಲ್ಲಾ ಮಾಡ್ತಾನು’ ಎನ್ನಿಸಿಕೊಳ್ಳುವಲ್ಲಿಗೆ, ಅವನ ಮಿತಿಗೂ ಮೀರಿದ ನಿರೀಕ್ಷೆಗಳಿಂದಾಗಿ ನಾಣಿ ಇನ್ನಷ್ಟು ಕುಬ್ಜನಾಗತೊಡಗಿದ್ದ. ಆದರೆ ಅದ್ಯಾವದಕ್ಕೂ ತಲೆ ಕೊಡದೆ ಹೇಗೋ ಕಾಲೇಜು ಮುಗಿಸುವ ಹಂತದಲ್ಲಿzಗ ಅವನಿಗರಿವಾಗಿಯೋ, ಅವನ ಪಾಪದ ಪರಿಸ್ಥಿತಿಗೋ ಹುಡುಗಿಯೊಬ್ಬಳು ಒಲಿದು ಬಿಟ್ಟಿದ್ದಳು.
ಅಷ್ಟೆ.. ನಾಣಿಯ ಖದರು ಮತ್ತು ವರಸೆ ಎರಡೂ ಬದಲಾಗಿದ್ದವು. ಐನ್‌ಟೈಮಿಗೆ ಮಾತಿನಲ್ಲಿ ಅಡರಿಕೊಳ್ಳುತ್ತಿದ್ದ ಉಗ್ಗುತನ, ಆತ್ಮವಿಶ್ವಾಸ ಕದಡಿಹೋಗಿದ್ದ ಬದುಕಿನ ಪಳಿಯುಳಿಕೆಯಂತಿದ್ದ ನಾಣಿ ಸರಕ್ಕನೆ ಎದ್ದುನಿಂತಿದ್ದ. ಯಾರೆಂದರೆ ಯಾರಿಗೂ ಗುಟ್ಟು ಬಿಟ್ಟು ಕೊಡದೆ ಇಬ್ಬರೂ ಕದ್ದು ಭೇಟಿಯಾಗುತ್ತಿದ್ದರೆ ಕೋಟೆ ಸುತ್ತಲಿನ ಸಂಜೆಗಳಿಗೆ ರಂಗು ನಶೆಯಾಗತೊಡಗಿತ್ತು. ಕಾಲೇಜು ಕೊನೆಯ ವರ್ಷದಲ್ಲಿ ಅವನ ಈ ದಿನದಿಂದ ದಿನಕ್ಕೆ ಬದಲಾಗುತ್ತಿದ್ದ ವರ್ತನೆಗೆ, ದಿರಿಸಿಗೆ, ಮಾತುಕತೆಯಲ್ಲಿನ ದಮ್ಮಿಗೆ ಎಲ್ಲರೂ ಹುಬ್ಬೇರಿಸತೊಡಗಿದ್ದರು. ಹುಡುಗಿ ಅವನಂದು ಹೊಸ ಭರವಸೆ ಮತ್ತು ಬೆಳಕು ಮೂಡಿಸಿದ್ದು ದಿಟ. ಬದುಕು ಕವಲೊಡೆದು ಹೊಸ ಹೊರಳಿನಲ್ಲಿ ತಿರುಗತೊಡಗಿತ್ತು. ಇಬ್ಬರಲ್ಲೂ ಪ್ರಾಮಾಣಿಕ ಪ್ರೀತಿ, ನಂಬಿಕೆ ಎರಡೂ ಇದ್ದವು.
ಯಾವ ಕಾರಣಕ್ಕೂ ಪ್ರೀತಿಯಿಂದ ಕೂರಿಸಿ ಮುದ್ದು ಮಾಡಿರದ ಬದುಕಿನಲ್ಲಿ ಸೇವಿ(ಸೇವಂತಿ) ಅದ್ಯಾವ ಗಳಿಗೆಯಲ್ಲಿ ಕಾಲಿಟ್ಟಿದ್ದಳೋ ಅಚ್ಚರಿಯೆಂಬಂತೆ ನಾಣಿಯ ಉಗ್ಗು ಹಾರಿಹೋಗಿತ್ತು. ಸೇವಿ ಅದೆಂಥ ಪರಿಯಲ್ಲಿ ಅವನಂದು ಧಿಶಕ್ತಿಯನ್ನು ಸ್ಥಾಪಿಸಿಬಿಟ್ಟಿದ್ದಳೆಂದರೆ ಸುಮ್ಮನೆ ಸೋತಂತೆ ನಡೆಯುತ್ತಿದ್ದ ಅವನ ದೈಹಿಕ ಪರಿಭಾಷೆಯೇ ಬದಲಾಗಿತ್ತು. ಯಾವತ್ತೂ ಸರಿಯಾಗಿ ಕೂದಲೂ ತೀಡದವನು ಜೊಂಪೆ ಹಾರಿಸುತ್ತಾ, ‘ವಯ್... ಸಂತೂ ನಿನ್ನ ಕೂಲಿಂಗ್ ಗ್ಲಾಸ್ ಕೊಡಪಾ ನಾಳೆ ಒಂದಿನಾ’ ಎನ್ನುವಲ್ಲಿಗೆ ಬಂದು ನಿಂತಾಗ ಹಕ್ಕಿಗಳು ಹಾರುವ ಸ್ಪಷ್ಟ ಚಿತ್ರಣ ಎದುರಿಗಿತ್ತು. ಬೇರೆ ದಾರಿನೂ ಇರಲಿಲ್ಲ ಅವರಿಗೆ. ಅವನಿಗಿದ್ದ ನಂಬಿಕೆ ಎಂದರೆ ನಾನು ಮತ್ತು ಶಂಕರ ಮಾತ್ರ ಅವನ ಪ್ರೀತಿಯ ಬಳ್ಳಿಗೆ ಆಧಾರವಾಗಬಹುದಾಗಿತ್ತು. ಅವನು ಮಾತಾಡುತ್ತಿದ್ದರೆ ಕೈಯೆಲ್ಲ ಬೆವರಿ ಒದ್ದೆಯಾಗುತ್ತಿದ್ದವು. ಎಲ್ಲಿ ಯಾವಾಗ ಯಾರು ತನ್ನನ್ನು ಸಂಶಯಿಸುತ್ತಿzರೋ ಎನ್ನುವಂತೆಯೇ ಅವನ ದೇಹದ ಕದಲಿಕೆಗಳು ಭಿನ್ನವಾಗಿರುತ್ತಿದ್ದವು.
 ‘ನಮ್ಮಪ್ಪನಿಗೆ ಗೊತ್ತಾಗೋ ಮುಂಚೆ ಓಡಿ ಹೋದರ ಹ್ಯಾಂಗ..? ನಿನಗೆ ನಾಲ್ಕಾರು ಊರ ಅಡ್ಯಾಡಿ ಗೊತ್ತದ ಸಂತೂ. ಇಲ್ಲಿದ್ದರ ಒಂದೋ ನಮಪ್ಪ ಕೊಂದಬಿಡ್ತಾನು ಇಲ್ಲಂದರೆ ಆಕೀ ಅಣ್ತಮ್ಮಂದಿರು ನನ್ನ ಬಡಿತಾರು ಏನ್ ಮಾಡಲಿ. ಹೆಂಗಾರ ಒಂದು ಎರಡ ವಾರ ಉಳಿಯೋ ವ್ಯವಸ್ಥೆ ಮಾಡಲ್ಲ ಸಂತೂ..." ಎನ್ನುತ್ತಾ ಅಸಹಾಯಕ, ಅಮಾಯಕ ನಾಣಿ, ಅಪರೂಪಕ್ಕೆ ಬದುಕಿನಲ್ಲಿ ಅರಳಿದ್ದ ಪ್ರೀತಿಯ ಬೆಳಕನ್ನು ರಕ್ಷಿಸಿಕೊಳ್ಳುವ ಆತುರಕ್ಕಿಳಿದಿದ್ದ. ಅದು ಅವನ ಮೊಟ್ಟಮೊದಲ ಗೆಲುವಾಗಿತ್ತು. ಅವನ ಜೀವನದ ಹೊಸ ಬಣ್ಣವಾಗಿತ್ತು. ಅದಿಲ್ಲದೆ ಅವನಿನ್ನು ಬದುಕಲಾರದ ಹಂತ ತಲುಪಿದ್ದ ಮತ್ತು ಇನ್ನೇನಾದರೂ ಸಾಧಿಸಲು ಒಂದು ಶಕ್ತಿಯಾಗಿ ನಾಣಿ ತನ್ನ ಪ್ರೀತಿಯನ್ನು ಬಳಸಿಕೊಂಡಿದ್ದ.
 ‘ನೋಡು ನಾಣಿ ಹಿಂಗ ಅರ್ಜೆಂಟ್ ಮಾಡಬ್ಯಾಡ. ಈಗ ಓಡಿ ಹೋದರೂ ಆ ಮೇಲೆ ಏನು ಮಾಡಾಂವ..? ಎಷ್ಟ ದಿನಾ ಅಂತಾ ಇಲ್ಲಿಂದ ಒಯ್ದಿದ್ದ ರೊಕ್ಕಾ ಕೆಲಸಕ್ಕ ಬರ್ತದ. ಅದಕ್ಕೆ ಮೊದಲು ಇಬ್ರೂ ಓದಿ ಮುಗಿಲಿ. ಎನಾರ ಒಂದು ವ್ಯವಸ್ಥಾ ಮಾಡ್ಕೊಂಡು ಹೋಗೀರಂತೆ. ಗಡಿಬಿಡಿ ಮಾಡಿ ಎಲ್ಲ ಹಾಳು ಮಾಡ್ಕೊಬ್ಯಾಡ್ರಿ" ಎಂದು ಇಬ್ಬರಿಗೂ ತಿಳಿಹೇಳಿ, ಅವರನ್ನು ಸಧ್ಯಕ್ಕೆ ತಡೆಯುವ ಯೋಜನೆ ಚಾಲನೆ ಬರುವ ಮೊದಲೇ ಅವಘಡ ಘಟಿಸಿಬಿಟ್ಟಿತ್ತು. ದುರದಷ್ಟ ನಾಣಿ ಉಗ್ರನರಸಿಂಹನ ಕೈಗೆ ಸಿಕ್ಕಿಬಿದ್ದಿದ್ದ. ಅವನ ಕಾಲೇಜು ಮುಗಿಯಲು ಕೆಲವೇ ವಾರಗಳಿzಗ ಮತ್ತೊಮ್ಮೆ ಅವರಪ್ಪನ ಹೊಡೆತಕ್ಕೆ ಈಡಾಗಿದ್ದ.ವಿಭಿನ್ನ ಜಾತಿಯ ಹುಡುಗಿಯೊಂದಿಗಿನ ಪ್ರೇಮ ಕಥಾನಕದ ಹೊಸ ಇತಿಹಾಸದಲ್ಲಿ ತಾನು ಯಾವ ರೀತಿಯಲ್ಲೂ ಪಾಲುದಾರನಾಗಲು ಅವರಪ್ಪ ಸಿದ್ಧನಿರಲಿಲ್ಲ. ಒಂದೇ ಹೊಡೆತಕ್ಕೆ ನಾಣಿ ಬಿದ್ದಿದ್ದ. ಮೂರು ದಿನದ ಗೃಹ ಬಂಧನದ ನಂತರ ಆಸ್ಪತ್ರೆಗೆ ದಾಖಲಿಸಿದ್ದು ಗೊತ್ತಾಗಿ ನಾನು ಮತ್ತು ಶಂಕರ ದೌಡಾಯಿಸಿದ್ದೆವು. ಎಷ್ಟೆಂದರೂ ನಮಗೆ ನಾಣಿ ಒಂಥರಾ ಆಪ್ತಬಳಗದ ಹುಡುಗ. ಅದಕ್ಕೂ ಮೊದಲೇ ಸೇವಂತಿಯನ್ನು ಯಾವ ಕಾರಣಕ್ಕೂ ಅತ್ತ ಸುಳಿಯದಂತೆ ತಾಕೀತು ಮಾಡಿ ಅವನ ಕಥೆ, ಪರಿಸ್ಥಿತಿ ಎಲ್ಲಾ ಅವಳಿಗೆ ಚಾಚೂ ತಪ್ಪದೆ ತಿಳಿಸುವುದಾಗಿ ಆಣೆ ಪ್ರಮಾಣದ ಗ್ಯಾರಂಟಿಯೊಂದಿಗೆ ಹೋಗುವ ವೇಳೆಗೆ ಅವನಪ್ಪನ ಹೊಸ ರೂಪ ಕಾಣಿಸುತ್ತಿತ್ತು.
 ಆಸ್ಪತ್ರೆಯ ಹೊರಗೆ ತೀರಾ ಜೋಲು ಮೋರೆಯೊಂದಿಗೆ, ಜೀವನದಲ್ಲಿ ಅಪೂಟು ಸೋತು ಹೋದ ಛಾಯೆ ಹೊತ್ತು ಅವನಪ್ಪ ಕೂತಿದ್ದ. ವಾರ್ಡಿನಲ್ಲಿ ನಾಣಿ ಮಲಗಿದ್ದ. ಆದರೆ ಮುಖದಲ್ಲಿ ಮಂದಹಾಸವಿತ್ತು. ಹುಡುಗ ಏಟಿಗೆ ಹುಶಾರು ತಪ್ಪಿದ್ದು ಅವರಪ್ಪನ ಬಲ ಕುಸಿದುಹೋಗಿತ್ತು. ಅವನಪ್ಪ ಸ್ವತಃ ನಾಣಿ ಎದುರಿಗೆ ನಿಂತು ‘ಹೆಂಗಾದರ ಇರಪ್ಪಾ ಅದರ ಹುಶಾರಾಗಿ ಬಿಡಪ್ಪಾ’ ಎಂದು ಬೇಡಿಕೊಂಡಿದ್ದ. ಆದರೆ ಆಘಾತಕಾರಿ ಎಂದರೆ ನಾಣಿಯದ್ದು ಮೊದಲು ಉಗ್ಗಾದರೂ ಇತ್ತು. ಈಗ ಬರೀ ಗೊರ ಗೊರ.. ಏನೇ ಹೇಳುವುದೂ, ಕೇಳುವುದಕ್ಕೆಲ್ಲ ಬರೆದು ತೋರಿಸಬೇಕು. ಕಾರಣ ಉಗ್ರನರಸಿಂಹನ ಏಟಿಗೆ ಬಲ ಕೆನ್ನೆ ಚೆಕ್ಕು ಚೆದುರುವುದರೊಂದಿಗೆ ಕಿವಿ ತಮಟೆ ಒಡೆದು, ಗಂಟಲೂ ಕೈಕೊಡತೊಡಗಿತ್ತು. ಅವನು ಶಾಶ್ವತವಾಗಿ ಕೆಪ್ಪನಾಗಿದ್ದ. ಇನ್ನೇನಿದ್ದರೂ ಒಂದು ಕಿವಿ ಮಾತ್ರ. ಅದೂ ಕ್ರಮೇಣ ಮಂದವಾಗತೊಡಗಿತ್ತು. ನಾನು ಶಂಕ್ರ ಉಸಿರು ಕಟ್ಟಿ ನಿಂತಿದ್ದೆವು. ಅಷ್ಟಾದರೂ ನಾಣಿ ಗೊರ ಗೊರ ಎನ್ನುತ್ತಾ ಬರೆಯತೊಡಗಿದ್ದ.
‘ಅಪ್ಪಂದೇನೂ ತಪ್ಪಿಲ್ಲ... ಸುಮ್ನೆ ಬೇಜಾರು ಮಾಡ್ಕೊಬ್ಯಾಡ ಅಂತಾ ಹೇಳೋ. ನನಗೇನೂ ಆಗಿಲ್ಲ. ಆದರೆ, ದಿನಾ ಈಗ ಧುಪಟಿ ಹಾಕಿ ಮಲಗಿಸಿ ನಿದ್ದಿ ಬರೋತಂಕ ತಟ್ಟತಾನಲ್ಲ ಹಂಗ ಕುಂತು ತಟ್ಟೊದ ಮಾತ್ರ ನಿಲ್ಲಸಬ್ಯಾಡ ಅಂತ ಹೇಳೊ ಸಂತೂ. ದಿನಾ ಬಾಜೂ ಕೂರಿಸಿಕೊಂಡು ಊಟ ಹಾಕ್ತಾನು. ಅಷ್ಟು ಸಾಕು. ಹೇಳೊದು ಕೇಳೊದೆ ಬರದ ಹೊಂದಕೋತೆನಿ. ಅಪ್ಪ ನಾ ಶಾಣ್ಯಾ ಆಗಲಿ ಅಂತ ಹೊಡಿತಿದ್ದ ಅಷ್ಟೇ. ನಂಗೇನೂ ಬ್ಯಾಸರಿಲ್ಲ. ಅಪ್ಪಂಗ ಹೇಳು ನಿಂದೇನೂ ತಪ್ಪಿಲ್ಲ ಅಂತ. ಮುಖಾ ಸಣ್ಣದ ಮಾಡ್ಕೊಂಡು ಕುಂದರಬ್ಯಾಡ ಅಂತ ಹೇಳಲ್ಲ. ಆದರ ದಿನಾ ನನ್ನ ಜೊತಿಗೆ ಹಿಂಗೆ ಇರಲಿ..ಅಷ್ಟೇ..’ ಮೊದಲ್ಯಾವತ್ತೂ ದಕ್ಕದ ಅಪ್ಪನ ಪ್ರೀತಿಗೆ ನಾಣಿ ಸೋತುಹೋಗಿದ್ದ. ಅತ್ತ ನೋಡಿದರೆ ಅವನಿಗಿಂತಲೂ ಗೊರಗೊರ... ಎನ್ನುತ್ತಾ ಅವನಪ್ಪ ನಾಣಿಯ ತಲೆ ಸವರುತ್ತಾ ನಿಂತಿದ್ದಾನೆ. ಇತ್ತ ನೋಡಿದರೆ ಸೇವಂತಿ ಊರು ಬಿಟ್ಟಿದ್ದಳು. ಉಳಿದದ್ದು ಮುಂದಿನ ವಾರಕ್ಕಿರಲಿ.
 ಕಾರಣ  ಅವಳು ಎಂದರೆ..