Monday, June 26, 2017

ಯಾರೂ ಯಾವತ್ತೂ ನಿಕೃಷ್ಟರಲ್ಲ... ಕಾಲ ಬದಲಿಸುತ್ತದೆ.
ನಾವು ನಾಳೆ ಯಾರು ಏನಾಗುತ್ತೇವೆಯೋ ಯಾರಿಗೂ ಗೊತ್ತಿಲ್ಲ. ಅದರೆ ಪ್ರತಿಯೊಬ್ಬರೂ ನನಗೆ ಮಾತ್ರ ಏನೂ ಆಗುವುದಿಲ್ಲ ಎನ್ನುವ ಗ್ಯಾರಂಟಿಯೊಂದಿಗೆ ಬದುಕುತ್ತಿರುತ್ತೇವೆ. ಪಕ್ಕದಲ್ಲೇ ಮಾರಣಾಂತಿಕ ಆಕ್ಸಿಡೆಂಟ್ ಆಗಿದ್ದರೂ ನಮ್ಮ ಕಾನ್ಫಿಡೆನ್ಸು ಹೇಗಿರುತ್ತದೆಂದರೆ, ಮರುಕ್ಷಣದಲ್ಲೇ ಎಂಭತ್ತರ ವೇಗಕ್ಕೆ ಪೆಡಲು ಒತ್ತುತ್ತಿರುತ್ತೇವೆ. ಅದು ಆಗಿನ ಕ್ಷಣಿಕ ದಿಗಿಲು. ಕಾರಣ ನಮ್ಮ ಬದುಕಿಗೆ ಸಮ್ಮತವಲ್ಲದ ಸಂಬಂಧಿಸಿಲ್ಲದ ಕ್ರಿಯೆಯಿಂದಾಗಿ ನಾವು ನಿರಾಳ. ಆದರೆ ದಶಕಗಳ ಕಾಲಾವಧಿಯಲ್ಲಿ ನಾವು ಏನಾಗಲಿಕ್ಕಿಲ್ಲ ಎಂದು ನಿರ್ಧರಿಸಿರುತ್ತೇವೆಯೋ ಅದು ತಿರುಗುಮುರಾಗಾಗಿ ಎದುರು ನಿಂತಾಗಿ ಬದುಕು, ಮನಸ್ಸು ಎಲ್ಲಾ ಕಕ್ಕಾಬಿಕ್ಕಿ ಎನ್ನುವುದಕ್ಕಿಂತಾ ಅಂತಹ ಪರಿಸ್ಥಿತಿಯಲ್ಲಿ ಮುಖ ಮತ್ತು ಮನಸ್ಸು ಎದ್ದು ನಿಲ್ಲಲೆತ್ನಿಸಿದರೂ ಏನೂ ಇರುವುದಿಲ್ಲ.ಸುಮಾರು ವರ್ಷಗಳ ಹಿಂದೆ ನಾನು ಏನೂ ಅಲ್ಲದಿದ್ದಾಗ, ನನಗೊಂದು ದಿಕ್ಕು ದೆಸೆ ಅಂತಲೇ ಇಲ್ಲದಿದ್ದಾಗ ಇದ್ದ ಚಿಕ್ಕ ಆಸರೆಯಂತಹ ನೌಕರಿಯ ಭಾಗವಾಗಿ ದಿನಾ ಬೆಳಿಗೆದ್ದು ಕಾರಿಡಾರನಲ್ಲಿ ನಡೆದುಕೊಂಡು ಹೋಗುವಾಗ ಮೊದ ಮೊದಲು ಅರ್ಥವಾಗದ ಮಾತಿಗೆ ಕಿವಿಗೊಡುತ್ತಿರಲಿಲ್ಲ. ಅಮೇಲಾಮೇಲೆ ಅದು ನಮ್ಮನ್ನೆ ಗೇಲಿ ಮಾಡಿಕೊಂಡು ಆಡಿಕೊಳ್ಳುತ್ತಿದ್ದಾರೆ ಎಂದರಿವಾಗಿತ್ತು. ಬೇರೇನೂ ಸಿಗದಿದ್ದರೂ ನಮ್ಮ ಬಟ್ಟೆ ಬರೆಗಳೂ ಗೇಲಿಗೀಡಾಗುತ್ತಿದ್ದವು. ಉಳಿದ ವಿಷಯಗಳೇನೆ ಇರಲಿ ಮೊದಲಿನಿಂದಲೂ ನಾನು ಡ್ರೆಸ್ಸು ಮತ್ತು ಆಯಾ ಹೊತ್ತಿಗಿನ ಕೆಲಸದ ವಿಷಯದಲ್ಲಿ ಅಚ್ಚುಕಟ್ಟು. ಅಂತಹ ಶಿಸ್ತು ನಮಗೆ ಇನ್ನಿಲ್ಲದ ವಿಶ್ವಾಸ ಕೊಡುತ್ತಿರುತ್ತದೆ. ಇದು ಆಗಲೂ ಈಗಲೂ ಹಲವರ ಕಿರಿಕಿರಿಗೂ, ಕಹಿಗೂ ಕಾರಣವಾಗಿದೆ. ಆಗಿನ ಕಾಲದಲ್ಲಿ ಹಾಗೆ ಗೇಲಿ ಮಾಡುತ್ತಿದ್ದವರಲ್ಲಿ ಅವನೊಬ್ಬನಿದ್ದ. ಅವನೇನು ಕೆಲಸ ಮಾಡುತ್ತಿದ್ದ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಆದರೆ ಕಂಡೊರ ಮೇಲೆಲ್ಲಾ ಸುಖಾಸುಮ್ಮನೆ ಏರಿ ಹೋಗುವುದೂ, ನಾಲ್ಕಾರು ಹುಡುಗರನ್ನು ಕಟ್ಟಿಕೊಂಡು ಧುಮಡಿ ಮಾಡುವುದು ಮಾಮೂಲಿಯಾಗಿತ್ತು. ಸಣ್ಣಸಣ್ಣ ಕಾರಣಕ್ಕೂ, ನಮಸ್ಕಾರ ಎಂದರೂ ಮೇಮೇಲೆ ಏರಿಬರುತ್ತಿದ್ದ. ಅವನಿಗೆ ಇಂತಹದ್ದಕ್ಕೆಲ್ಲಾ ಕೇವಲ ಅವಕಾಶ ಬೇಕಿತ್ತು ತನ್ನ ರುಬಾಬು ತೋರಿಸಲು ಅಷ್ಟೆ. ಯಾರೂ ಮಾತಾಡದಷ್ಟು ಕೆಟ್ಟಾ ಕೊಳಕಾಗಿಯೂ, ತಲೆ ಬುಡವಿಲ್ಲದ ಗೇಲಿ ಮಾಡುವುದರಿಂದಲೂ ಅವನು ಸುತ್ತಮುತ್ತಲಿಗೆ ಯಾರೂ ತಡುವಿಕೊಳ್ಳಲಾಗದಷ್ಟು ಅಸಹ್ಯದ ಪರಮಾವಧಿಯಲ್ಲಿದ್ದ.ಆಗಲೇ ನಾನು ಒಂದಿಷ್ಟು ಅವನ ಬಗ್ಗೆ ಮಾಹಿತಿ ಕಲೆ ಹಾಕಿದೆ. ಅವನೊಬ್ಬ ಆಫೀಸ್‍ಬಾಯ್. ನೀರು ಟೀ ತಂದು, ಟೇಬಲ್ ಒರೆಸಿ ಸಾಹೇಬರಿಗೆ ಊಟಕ್ಕಿಟ್ಟು, ಅವರ ತಟ್ಟೆ ಎತ್ತುತ್ತಿದ್ದ. ಅದರೆ ರೋಪು ಮಾತ್ರ ಆ ಅಧಿಕಾರಿಗಿಂತಲೂ ದೊಡ್ಡದಿತ್ತು. ಕಲಿತು ಬಿಟ್ಟಿದ್ದು ಏಳನೆಯ ತರಗತಿ. ಅದಕ್ಕಿಂತ ದೊಡ್ಡ ಕೆಲಸ ದೊರಕುವುದೂ ಸಾಧ್ಯವಿರಲಿಲ್ಲ. ಅದವನ ಕೀಳರಿಮೆಯೋ, ಸಂಕಟವೋ ನಮ್ಮ ಮೇಲೆಲ್ಲಾ ಎಗರುತ್ತಾ ಪಬ್ಲಿಕ್ಕಾಗಿ ಬೈದು ಮರ್ಯಾದೆಗೀಡು ಮಾಡುತ್ತಿದ್ದ.ನಾನೂ ಅಲ್ಲಿಂದ ಹೊರಬಿದ್ದೆ. ದಶಕಗಳೇ ಉರುಳಿದವು. ಊರು ರಾಜ್ಯ ಮತ್ತೆ ನಗರ ಎಲ್ಲಾ ಬದಲಾದವು. ಆದರೂ ಮನುಶ್ಯ ಅವನ ಚಹರೆ ಬದಲಾಗುತ್ತದೆಯೇ..? ಮೊನ್ನೆ ಮೊನ್ನೆ ಒಂದು ಖಾಸಗಿ ಕಾರ್ಯಕ್ರಮಕ್ಕೆ ಫಾರ್ಮ್‍ಹೌಸಿಗೆ ಹೋಗಿದ್ದೆ. ಅಲ್ಲೊಂದು ಚಿಕ್ಕ ಸಮಾರಂಭವಿತ್ತು. ಸುಮ್ಮನೆ ಒಂದಿಪ್ಪತ್ತು ಸ್ನೇಹಿತರು ಸೇರಿದ್ದೆವು. ಮಾತುಕತೆ, ಮೊಗೆಯ ಗೋಷ್ಠಿ. ನನಗೂ ಹೆಚ್ಚಿನ ಹಳೆಯ ಸ್ನೇಹಿತರು ಸಿಕ್ಕ ಖುಶಿಯಲ್ಲಿ ಲೋಕಾಭಿರಾಮವಾಗಿ ಹರಟಿ ಎದ್ದು ಬರುವಾಗ ಬೇಡ ಎಂದರೂ ಹಿಂದಿರುಗಿ ನೋಡಿದ್ದೆ.ನನ್ನ ಸಂಶಯ ನಿಜವಾಗಿತ್ತು. ಟೇಬಲ್ಲು ಒರೆಸಿ ನೆಲಕ್ಕೆ ಬಿದ್ದಿದ್ದ ತಿನಿಸಿನ ತುಣುಕುಗಳನ್ನು ಬಗ್ಗಿ ಎತ್ತಿಟ್ಟು, ಹಳೆಯ ಬಟ್ಟೆಯಿಂದ ನೆಲ ಒರೆಸುತ್ತ, ಕುಡಿದ ಗ್ಲಾಸುಗಳನ್ನು ಎತ್ತುತ್ತಾ ಅವನು ನೋಡುತ್ತಿದ್ದಾನೆ. ಅದು ಎದುರಿನವರು ನನ್ನ ಗುರುತು ಹಿಡಿದರಾ..? ನಾನು ಯಾರೆಂದು ಗೊತ್ತಾಗಿ ಹೋಯಿತಾ..? ಎನ್ನುವ ಅನುಮಾನ ಮತ್ತು ಅವಮಾನ ಭರಿತದ ದೃಷ್ಟಿ. ಆ ನೋಟದಲ್ಲಿ ತಾನೀಗಲೂ ತಟ್ಟೆ ಲೋಟ ಎತ್ತುತ್ತಿದ್ದೇನೆ, ನೆಲ ಒರೆಸುತ್ತಿದ್ದೇನೆ, ಹಿಂದ್ಯಾವತ್ತೋ ತಾನು ಎಗರುತ್ತಿದ್ದಾಗ "ನಿನ್ನ ಹಣೆ ಬರಹ ಇಷ್ಟೆ" ಎಂದು ಸುಮ್ಮನೆ ತಡುವಿಕೊಳ್ಳದೆ ಹೋಗುತ್ತಿದ್ದವನ ಮುಖದಲ್ಲಿ, ತನ್ನ ಬಗ್ಗೆ ಅವಹೇಳನ ಇದೆಯಾ ಎಂದು ಮುಖದ ಗೆರೆಗಳಲ್ಲಿ, ತನ್ನ ಬಗೆಗಿನ ಭಾವವನ್ನು ಹುಡುಕುವ ಅಪಸವ್ಯ ಭರಿತ, ಅವಮಾನಿತ ನೋಟ ಅದು. ಬೇರೇನೂ ಮಾಡಲಾಗದ ಆದರೆ ಹಿಂದಿನ ಕತೆ, ಈಗಿನ ಅವಮಾನಕರ ಸ್ಥಿತಿ ಎರಡಕ್ಕೂ ಏಗಲಾಗದ ಎಂಬ್ರಾಸಿಂಗ್ ನೋಟ ಅದು. ಕೆಲವೇ ಸೆಕೆಂಡು...ಬಿಟ್ಟು ಬಿಟ್ಟೆ. ಮತ್ತೆ ನಾನು ಅವನನ್ನು ದೃಷ್ಟಿಸಲಿಲ್ಲ.ಕಾರಣ ಈಗ ಅವನಿಗೆ ಏನಾದರೂ ಹೇಳಿ ಅಥವಾ ಮತ್ತೆ ನೋಡು ಈಗ ಹೆಂಗೆ...? ಎಂದು ಅವನನ್ನು ದೃಷ್ಟಿಸಿ ಆಗಬೇಕಾದುದೇನೂ ಇರಲಿಲ್ಲ. ಅಸಲಿಗೆ ಹಾಗೆ ಅವನ ಸ್ಥಿತಿಯನ್ನು ನಾನು ಮತ್ತೊಮ್ಮೆ ಅವನಿಗೆ ನೆನಪಿಸುವ ಅಗತ್ಯವೂ ಇರಲಿಲ್ಲ. ಅವನಿಗೆ ತನ್ನೆರಡೂ ಪರಿಸ್ಥಿತಿಗಳೂ ಅರಿವಿಗೆ ತಾನಾಗೇ ಬಂದಿರುತ್ತದೆ. ಅವಕಾಶ ಅಗತ್ಯ ಮತ್ತು ತಾಕತ್ತು ಇದ್ದಾಗ ಹಾರಾಡುವ ಮನುಶ್ಯ ನೆಲಕಚ್ಚಿದಾಗ ಮುಖದ ಮೇಲೆ ಚದರುವ ಅಂತಹ ಅವಮಾನಿತ ಖದರಿನ ಸತ್ತು ಹೋಗುವಷ್ಟು ಸಂಕಟದ ಲಕ್ಷಣಗಳನ್ನು ನಾನು ಸುಲಭವಾಗಿ ಗುರುತಿಸಬಲ್ಲೆ ಮತ್ತು ಹಾಗೆ ನನಗೆ ಗೊತ್ತಾಗುತ್ತಿದೆ ಎನ್ನುವುದನ್ನೂ ಎದುರಿನ ಅಪಮಾನಿತ ಸುಲಭಕ್ಕೆ ಅರಿತುಬಿಡುತ್ತಾನೆ ಸುಮ್ಮನೆ ಒಂದು ನೋಟಕ್ಕೆ. ಅದನ್ನು ಉದ್ದೇಶ ಪೂರ್ವಕವಾಗಿ ಮಾಡಲೇಬೇಕಿರುವುದಿಲ್ಲ. ಆದರೆ ಆ ಒಂದೆರಡು ಕ್ಷಣದಲ್ಲಿ ನಮಗರಿವಿಲ್ಲದೆ ಕೆಲವೊಂದು ಭಾವವನ್ನು ಹೊಮ್ಮಿಸುವ ಮನಸ್ಸು ಮತ್ತು ಮುಖ ಹಾಗು ನೆನಪು ಮತ್ತು ಎಲ್ಲಾ ಘಟನೆಗಳ ಇತಿಹಾಸ ಕ್ಷಣಾರ್ಧದಲ್ಲಿ ಮುಖಕ್ಕೆ ನುಗ್ಗಿ ಎಲ್ಲವನ್ನು ಮೇಳೈಸಿಬಿಡುತ್ತದೆ. ಕಾರಣ ಅದನ್ನು ಮರೆತಿರದ ಮನಸ್ಸು ನಿಮ್ಮ ಪ್ರತಿಕ್ರಿಯೆಗೂ ಮೊದಲೇ ಪ್ರತಿಬಿಂಬಿಸಿ ಬಿಟ್ಟಿರುತ್ತದೆ. ಅಷ್ಟೆ..ನೆಲಕ್ಕೆ ಕೂತೇ ಇದ್ದ ಅವನ ಭಂಗಿ, ಕೈಯ್ಯಲ್ಲಿದ್ದ ಮಾಪಿಂಗ್ ಬಟ್ಟೆ, ಎತ್ತಿದ್ದ ತಟ್ಟೆ ಜೊತೆ ತಲೆ ತಗ್ಗಿಸಿದ್ದ ಹುಳ್ಳಗಿನ ಮುಖ ಎಲ್ಲ ಒಂದೆರಡು ಸೆಕೆಂಡಿನಲ್ಲಿ ಗಮನಿಸಿದವನು ಸುಮ್ಮನೆ ನಡೆದು ಬಂದಿದ್ದೆ. ಅವನಿಗೆ ನೆನಪಿಸಿ ಆಗಬೇಕಾದುದೇನೂ ಇರಲಿಲ್ಲ. ಅವನೆದುರಿಗೆ ಈಗ ಹೆಂಗೆ..? ಎಂದು ನಾನು ಎದೆಯುಬ್ಬಿಸುವುದರ ಅವಶ್ಯಕತೆಯೂ ನನಗಿರಲಿಲ್ಲ. ಕೊಂಚವಾದರೂ ಮನುಶ್ಯ ಆಂತರಿಕವಾಗಿ ಬೆಳೆದಿದ್ದರೆ ಬದುಕು ಕಾಲಾನುಕ್ರಮದಲ್ಲಿ ಗಮ್ಯಗಳನ್ನು ಹೇಗೆ ತೋರಿಸಿತ್ತು ಎನ್ನುವುದವನ ಅರಿವಿಗೆ ಬಂದಿರುತ್ತೆ. ಆದರೆ ಇಂತಹ ಹಲವು ಘಟನೆಗಳಿಂದ ಪದೆ ಪದೆ ನನ್ನನ್ನು ನಾನು ಅಳೆದುಕೊಳ್ಳಲು ಅನುಕೂಲವಾಗುತ್ತಲೇ ಇರುತ್ತದೆ. ಪ್ರತಿ ದಿನ, ಘಟನೆಗಳು ನಮಗೆ ಸುತ್ತಿ ಹೊಡೆದಂತಹ ಪಾಠ. ಹಾಗೆ ಅವಕಾಶ ಇದ್ದಾಗ ಕಲಿತಷ್ಟೂ ಒಳ್ಳೆಯ ವಿದ್ಯಾರ್ಥಿಯಾಗುತ್ತೇನೆ. ಕಲಿಯುವ ಹಂಬಲ, ಅರ್ಜಿಸುವ ಮನಸ್ಸು ಹುಡುಕುತ್ತಲೇ ಇರುತ್ತದೆ. ಕಾಲ ಎಲ್ಲರಿಗೂ ಎಲ್ಲವನ್ನೂ ಕಲಿಸುತ್ತಲೇ ಇರುತ್ತದೆ. ಕೆಲವರಿಗೆ ಅರಿವಿಗೆ ಬರುತ್ತದೆ.. ಕೆಲವರಿಗೆ ಅರಿವಾಗುವ ಹೊತ್ತಿಗೆ ಜೀವನವೇ ಮುಗಿದಿರುತ್ತದೆ.ಲೈಫು ಇಷ್ಟೆ ಕಣ್ರಿ...

Monday, June 19, 2017

ಅಸಹಾಯಕತೆಯ ಕವಲುದಾರಿಗಳು...


ಕೆಲವೊಮ್ಮೆ ತೀರ ನಮ್ಮ ನಂಬಿಕೆ ಮತ್ತು ವಿಶ್ವಾಸಕ್ಕೆ ಪಾತ್ರರಾದವರೇ ಕೈ ಎತ್ತಿ ಬದುಕಿಗೆ ಬೀಗವಿಕ್ಕಿ ಬಿಡುತ್ತಾರೆ. ಅದರಲ್ಲೂ ಅಂತಹ ಮಾಹಿತಿ ಮತ್ತು ಘಟನೆಯ ಕೊನೆಯ ಕಂತು ಪೂರೈಸಿದಾಗಲೇ ತಿಳಿಯಬೇಕಾದವರ ಗಮನಕ್ಕೆ ಬರುವ ಹೊತ್ತಿಗೆ ನಿಜಕ್ಕೂ ಸಮಯ ಮೀರಿ ಹೋಗಿರುತ್ತದೆ. ಆಗಿದ್ದನ್ನು ಅರಗಿಸಿಕೊಂಡು ಮುಂದಡಿ ಇಡುವ ಹೊತ್ತಿಗೆ ಸುತ್ತಲಿನ ಜಗತ್ತು ನಮ್ಮ ಕೈಬಿಟ್ಟು ಬಹುದೂರ ನಡೆದುಹೋಗಿರುತ್ತದೆ.
ತೀರ ಮಧ್ಯವಯಸ್ಸಿಗೆ ಬರುವ ಹೊತ್ತಿಗೆ ಬಾಬಣ್ಣ ಮಗಳಿಗಿಷ್ಟು ಮಗನಿಗಿಷ್ಟು ಎಂದು ಎತ್ತಿಟ್ಟು ಬದುಕು ಕಟ್ಟಿಕೊಂಡಿದ್ದನಾದರೂ ಮಗ ಹೆಂಗೂ ಕೈಗೆ ಬರೋದು ತಡ ಅದೆ... ನಡೀತದೆ.. ಎಂದುಕೊಂಡು ಚೆನ್ನಾಗಿ ಓದುತ್ತಿದ್ದ ಮಗಳ ಮೇಲೆ ಅಪೂಟು ಪ್ರೀತಿ ಇಟ್ಟುಕೊಂಡು, ಎಲ್ಲವೂ ಅರಾಮಾಗಿ ನಡೆಯುತ್ತಿದೆ ಎಂದು ನಿಶ್ಚಿಂತೆಯಾಗೂ ಇದ್ದ.
ಚೆನ್ನಾಗೇ ಓದಿಕೊಂಡಿದ್ದ ಮಗಳು ಇಂಜಿನಿಯರ್ ಆದಳು. ಒಂದು ಕೆಲಸವೂ ಸಿಕ್ಕಿತು. "ಮಗಳು ಸೆಟ್ಲ್ ಆದಳು ಇನ್ನೇನು ಮದುವೆ ಮಾಡಿದರಾಯಿತು. ಎಲ್ಲಾರಗೂ ಜೀವನಾ ಹಿಂಗಿದ್ದರ ಭಾಳ ಅರಾಮ ನೋಡು.." ಎಂದು ಇತರರ ಒಳ್ಳೆಯತನಕ್ಕೂ ಮನದುಂಬಿ ಹಾರೈಸುತ್ತಿದ್ದ ಬಾಬಣ್ಣ ಆವತ್ತು ಕರೆ ಮಾಡಿದಾಗ ನನಗೂ ಒಂದಷ್ಟು ಹೊತ್ತು ಮನಸ್ಸು ಅಲ್ಲಾಡಿ ಹೋಗಿತ್ತು. ಕಾರಣ ಆ ದನಿಯಲ್ಲಿ ಜೀವವೇ ಇರಲಿಲ್ಲ. ಶಕ್ತಿಯಂತೂ ಅದಕ್ಕೂ ಮೊದಲೇ ಸತ್ತು ಹೋಗಿತ್ತು. ಚೆಂದವಾಗಿ ಮದುವೆ ಮತ್ತು ಬೀಗರು ಎಂದೆಲ್ಲಾ ಕನಸ್ಸು ಕಾಣುತ್ತಾ ಸಂಜೆಗಳಲ್ಲಿ ವಿಹರಿಸುತ್ತಿದ್ದ ಅವನ ಕನಸಿಗೂ, ಮನಸ್ಸಿಗೂ ಬೆಂಕಿ ಇಟ್ಟ ಮಗಳು ಎಲ್ಲಾ ಇದ್ದೂ ಏನೂ ಇಲ್ಲದವನೊಡನೆ ಓಡಿ ಹೋಗಿದ್ದಳು.
(ಈ ಓಡಿ ಹೋಗುವ ಹುಡುಗಿಯರ ಲಾಜಿಕ್ಕು ಅಧ್ಬುತವೂ ವಿಚಿತ್ರ ಆಗಿರುತ್ತವೆ. ಅದೆಷ್ಟು ಬಾಲಿಷ ಮತ್ತು ಚೈಲ್ಡಿಷ್ ಆಗಿರುತ್ತಾರೆಂದರೆ ಸ್ವಂತ ದುಡ್ಡು ದುಗ್ಗಾಣಿ ಚೆನ್ನಾಗಿದ್ದರೂ ಗೆಳೆಯನಾದವ ಆಗೀಗ ಗಿಫ್ಟು ಕೊಡುತ್ತಾನೆ ಎಂಬ ಕಾರಣಕ್ಕೆ ಓಡಿ ಹೋಗುವ ಹುಡುಗಿಯರಿದ್ದಾರೆ. ಅದರಲ್ಲೂ ಮೊಬೈಲ್ ಮತ್ತು ಅದರ ಚಾರ್ಜ್‍ಗಾಗಿ ಮುಲಾಜಿಲ್ಲದೆ ಖರ್ಚು ಮಾಡುತ್ತಾರೆ ಎನ್ನುವ ಕಾರಣಕ್ಕೇನೆ ಓಡಿ ಹೋಗುವ, ಸಂಬಂಧ ಹೊಂದಿದ ಹುಡುಗಿಯರ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಅದರ ಬಗ್ಗೆ ಮತ್ತೆ ಬರೆಯುತ್ತೇನೆ)
ಬಾಬಣ್ಣ ಕುಸಿದು ಕುಳಿತುಬಿಟ್ಟಿದ್ದ. ತಲೆ ಮೇಲೆ ಚಪ್ಪಡಿ ಎಳೆದ ಮಗಳು ಸಲೀಸಾಗಿ ಇನ್ಯಾವುದೋ ಜಾತಿಯವನನ್ನು ಮತ್ತು ಸರಿಯಾಗಿ ಕೆಲಸವೂ ಇಲ್ಲದವನೊಡನೆ ರೈಟ್ ಹೇಳಿದ್ದಳು. ಕಾಲ ಎಲ್ಲವನ್ನೂ ಮಾಯಿಸುತ್ತದಲ್ಲ ಹಾಗೆ ಬಾಬಣ್ಣ ಕೂಡಾ ಕ್ರಮೇಣ ಚೇತರಿಸಿಕೊಂಡ. ಇದ್ದೊಬ್ಬ ಮಗನಾದರೂ ಚೆನ್ನಾಗಿದ್ದರೆ ಸಾಕೆಂದು ಮುತುವರ್ಜಿಯಿಂದ ಓದಿಸಿದ. ಮಗಳ್ಯಾವಾಗಲೋ ತಪ್ಪಾಯಿತು ಎಂದು ಕಾಲಿಗೆ ಬೀಳ ಬಂದವಳನ್ನು ತಲೆ ನೇವರಿಸಿ ನಡೀ ಎಂದಿದ್ದ. ಆದರೆ ಮನಸ್ಸಿಗೆ ಅದ ಗಾಯ ಕೆರೆಯುತ್ತಾ ಉಳಿದಿದ್ದು ಮಾಯುವುದಾದರೂ ಹೇಗೆ..? ಒಟ್ಟಾರೆ ಬಾಬಣ್ಣ ಮತ್ತೆ ಎದ್ದು ನಿಂತಿದ್ದ. ನನಗೂ ಕ್ರಮೇಣ ಅವನೊಂದಿಗಿನ ಸಂಪರ್ಕವೂ ಕಡಿಮೆiÀiÁಗಿ ಮೊಬೈಲ್ ಹಾವಳಿಯಲ್ಲಿ ಬದುಕು ದ್ವೀಪದಂತಾಗತೊಡಗಿ ಬಾಬಣ್ಣ ಒಂದು ದಶಕದ ಅವಧಿಯಲ್ಲಿ ಹೆಚ್ಚು ಕಡಿಮೆ ಮರೆಯಾಗೇ ಹೋಗಿದ್ದ.
ಆವತ್ತು ಕಚೇರಿಯೊಂದಕ್ಕೆ ಹೋದವನು ಹೊರ ಬರುವಾಗ ಅಷ್ಟು ದೂರದಲ್ಲಿ ರಿಜಿಸ್ಟರ್ ಮಾಡುತ್ತಾ ಎನೋ ಬರೆಯುತ್ತ ಕುಳಿತಿದ್ದ ವ್ಯಕ್ತಿಯೊಬ್ಬರು ಕಾಣಿಸಿದ್ದರು. ವಯಸ್ಸು, ದೇಹ ಎರಡೂ ನಿವಾಳಿಸಿದಂತಿತ್ತು. ಆದರೂ ಬದುಕಿಗೆ ಅಧಾರವಾಗಿ ಕೆಲಸ ಮಾಡುವ ಅವರ ತನ್ಮತಯಿಂದಲೇ ಶರೀರ ಮತ್ತು ಮನಸ್ಸು ಎರಡೂ ಬಸವಳಿದದ್ದು ಕಾಣಿಸುತ್ತಿತ್ತು. ಹೌದೋ ಅಲ್ಲವೋ ಎನ್ನುತ್ತಲೇ "..ಬಾಬಣ್ಣಾ.." ಎಂದೆ. ಕನ್ನಡಕ ಏರಿಸುತ್ತಾ ನೋಡಿದವರು ಎದ್ದು ನಿಧಾನಕ್ಕೆ ಬಂದು ಸುಮ್ಮನೆ ಹೆಗಲಿಗೆ ಕೈ ಹಾಕಿ ನಿಂತು "..ನಡೀ ಚಾ ಕುಡಿಯೋಣ.." ಎನ್ನುತ್ತಾ ಬಂದರು. ನನಗೆ ಮಾತಾಡಿ ಏನಾಯಿತು ಎನ್ನುವುದೆಲ್ಲಾ ವಿಚಾರಿಸುವ ಅಗತ್ಯ ಇಲ್ಲದಂತೆ ಅವರ ಪರಿಸ್ಥಿತಿ ವಿವರಿಸುತ್ತಿತ್ತು.
ಮಗಳು ಇದ್ದಕ್ಕಿದ್ದಂತೆ ಬದುಕಿನಿಂದ ಕೈಯೆತ್ತಿದವಳು ಮಗ್ಗುಲನ್ನು ಒಮ್ಮೆ ಮುರಿದಿದ್ದಳು. ಆದರೂ ಅದೆಂಗೊ ಚೇತರಿಸಿಕೊಂಡ ಬಾಬಣ್ಣ ಮಗನ ಬದುಕಾದರೂ ಸುಗಮವಾಗಲಿ ಎಂದು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದ್ದ. ಮಗ ಚೆನ್ನಾಗೂ ಓದಿದ, ವಿದೇಶಿ ರೀತಿನೀತಿ ಎಲ್ಲಾ ಕಟ್ಟಿಕೊಂಡ ಅವನ ಇಚ್ಚೆಯಂತೆ ಬಾಬಣ್ಣ ಮದುವೆನೂ ಮಾಡಿದ. ಇದ್ದಬದ್ದ ಹಣವೆಲ್ಲಾ ತೀರಿ ಹೋದರೂ ಬಾಬಣ್ಣ ಮಗ ಹೆಂಗಿದ್ರೂ ಜೊತೆಗಿರುವವ ಎಂದು ಎಲ್ಲಾ ಕೇಳಿದಂತೆ ಮಾಡಿಬಿಟ್ಟ. ಕೊನೆಗೆ ಬೆಂಗಳೂರಿನಲ್ಲಿ ಪ್ರತ್ಯೇಕ ಮನೆಗಾಗಿ ಇದ್ದ ಸ್ವಂತ ಮನೆಯ ಮೇಲೆ ಸಾಲಕ್ಕೂ ಯೋಚಿಸಲಿಲ್ಲ. ಹೆಂಗಿದ್ದರೂ ಮಗ ಜೊತೆಗಿರುವವ ನನ್ನದಾದರೇನು ಅವನದಾದರೇನು ಎಂದು ಲಕ್ಷಗಟ್ಟಲೇ ಸಾಲಕ್ಕೆ ಮುದ್ರೆ ಒತ್ತಿ ಬಿಟ್ಟಿದ್ದ. ಎಲ್ಲಾ ಮುಗಿದು ಹೊಸ ಮನೆ ಗೃಹಪ್ರವೇಶವಾಗಿ ಮಗ ಮನೆಗೆ ಬಾರದಿದ್ದಾಗಲೇ ಗೊತ್ತಾಗಿತ್ತು ಮಗ ಕೈ ಬಿಟ್ಟ ವಿಷಯ.
ಹೊಸ ಫ್ಲಾಟು ತೆಗೆದುಕೊಂಡು ತನ್ನಿಷ್ಟದಂತೆ ಸಂಸಾರ ಆರಂಭಿಸಿದ್ದ ಮಗ ಬಾಬಣ್ಣ ಇದ್ದಾನಾ ಇಲ್ವಾ ಎಂದು ವಿಚಾರಿಸಲು ಈಗ ಬರುತ್ತಿಲ್ಲ. ಕಟ್ಟಬೇಕಿದ್ದ ಸಾಲದ ಬಾಕಿಯನ್ನೂ ನಿಲ್ಲಿಸಿಬಿಟ್ಟಿದ್ದಾನೆ. ಸಂಪೂರ್ಣ ದಿವಾಳಿ ಎಂದು ಘೋಶಿಸುವುದೊಂದೆ ಬಾಕಿ ಇದ್ದಾಗ ಸ್ನೇಹಿತರೊಬ್ಬರು ಅದೇ ಮನೆಯನ್ನು ಕೊಂಡು ಸಾಲ ತೀರಿಸಿ ಅವನಿಗೆ ಉಳಿಯಲೊಂದು ಚಿಕ್ಕ ರೂಮು ಬಿಟ್ಟುಕೊಟ್ಟಿದ್ದಾರೆ. ಬಾಕಿ ಜಾಗವನ್ನು ಬಾಡಿಗೆಗೆ ಮಾಡಿಕೊಂಡಿದ್ದಾರೆ. ಸ್ವಂತ ಮನೆಯಲ್ಲೇ ಬಾಡಿಗೆಯವನಂತೆ ಬದುಕುತ್ತಿರುವ ಕರ್ಮಕ್ಕೆ ಬಾಬಣ್ಣನ ಕೈ ಮತ್ತು ಮನಸ್ಸು ಪೂರ್ತಿಯಾಗಿ  ಖಾಲಿಯಾಗಿದ್ದವು.
ಜಗತ್ತು ಎರಡೂ ಕಡೆಯಿಂದಲೂ ಬಡಿದು ನಿಲ್ಲಿಸಿತ್ತು. ಜೊತೆಗೆ ಇದ್ದ ಹೆಂಡತಿಯೊಂದಿಗೆ ಬದುಕಲೇಬೇಕಲ್ಲ. ಸಾಲವೇನೂ ಇಲ್ಲ. ಆದರೆ ದುಡಿದ ಕೂಡಿಟ್ಟಿದ್ದ ಎಲ್ಲಾ ಸಂಪತ್ತೂ ಮಕ್ಕಳು ಸಲೀಸಾಗಿ ಖಾಲಿ ಮಾಡಿದ್ದರು. ಸೆಟ್ಲ್ ಆಗೋದೆ ಎಂದುಕೊಂಡಿದ್ದ ಬದುಕು ಬೀದಿಗೆ ಬಂದಿತ್ತು. ಯಾವ ರೀತಿಯಲ್ಲೂ ಬದುಕು ಸ್ಥಿರಗೊಳ್ಳುವ ಮೊದಲಿನ ಹಳಿಗೆ ಬರುವ ಲಕ್ಷಣವೇ ಇರಲಿಲ್ಲ. ದಿನವಹಿ ಊಟಕ್ಕೆ, ಖರ್ಚಿಗೆ ಎಲ್ಲಿಂದ ತಂದಾನು. ರಿಟೈರ್ ಆದ ಮೇಲಿನ ದುಡ್ಡು ಕೂಡಾ ಮಗನ ಮನೆಗೂ ಅದಕ್ಕೂ ಮೊದಲೂ ಓದಿಗೂ ಮದುವೆಗೂ ಇವನ ಕೈಯಿಂದಾನೆ ಖರ್ಚಾಗಿ ಹೋಗಿದೆ. ಎಲ್ಲಾ ಮಾಡಿಸಿಕೊಂಡ ಮಗ ಮಗಳು ಇಬ್ಬರೂ ಈಗ ಇದ್ದರೂ ಇಲ್ಲದಂತಾಗಿ, ಅವಮಾನವಾಗಿ ಹಿಂದಿರುಗಿದ್ದಾನೆ. ಕೊನೆಯ ಕಾಲದಲ್ಲಿ ಬದುಕು ದೇಹ ಎರಡರೊಂದಿಗೂ ಬಡಿದಾಡುತ್ತಾ ಮತ್ತೆ ಸಣ್ಣ ಕೆಲಸ ಹುಡುಕಿಕೊಂಡಿದ್ದಾನೆ ಬಾಬಣ್ಣ.
ಹೊರಡುವ ಮೊದಲು ಬಾಬಣ್ಣನನ್ನು ಬಲವಂತವಾಗಿ ನನ್ನೊಂದಿಗೆ ಕರೆದೊಯ್ದೆ. ಅವನ ಮೊಗೆ ಮೊಗೆ ಬಿಯರ್‍ನ ಋಣ ನಾನು ಮರೆಯಲಾದರೂ ಹೇಗೆ ಸಾಧ್ಯ...? ಸಣ್ಣ ಸಂಕೋಚ ಮತ್ತು ಹಳೆಯ ಅನುಭವದ ಚಳಕುಗಳೊಂದಿಗೆ ಮುದುರಿ ಎದುರಿಗೆ ಕುಳಿತಿದ್ದ ಬಾಬಣ್ಣನ ಕೈಯ್ಯಲ್ಲಿ ಈಗ ತುಂಬು ಮೊಗೆ ಎತ್ತಿಕೊಳ್ಳಲೂ ಶಕ್ತಿ ಇಲ್ಲದಂತಿದ್ದ. ಶರೀರ ನಿಧಾನಕ್ಕೆ ನಡಗುತ್ತಿತ್ತು. ದಶಕಗಳ ಹಿಂದೆ ಇದೇ ಖುರ್ಚಿಯಲ್ಲಿ ಮರ್ಯಾದೆಯುತವಾಗಿ ತಲೆ ಎತ್ತಿ ಕೂಡುತ್ತಿದ್ದ ದೇಹ ಇವತ್ತು ಹಿಡಿಯಾಗಿಸಿ ಕೂತುಕೊಂಡಿತ್ತು. ಕಣ್ಣಿನಲ್ಲಿ ಆತ್ಮವಿಶ್ವಾಸ ಸಾಯಲಿ ಬದುಕು ಯಾವಾಗ ಮುಗಿದೀತು ಎನ್ನುವ ನಿರೀಕ್ಷೆಯ ತಪನೆಯಲ್ಲಿತ್ತು. ಏನಾಗಿ ಹೋಯಿತು ಎನ್ನುವ ದುಗುಡದೊದಿಗೆ ಹೇಗೊ ಒಂದಷ್ಟು ಹೊತ್ತು ಕೂತಿದ್ದ ಬಾಬಣ್ಣ ಊಟ ಮಾತ್ರ ಬಿಲ್ ಕುಲ್ ಒಲ್ಲೆ ಎಂದ.
" ಬೇಜಾರಾಗಬೇಡ. ನಾನು ಇಲ್ಲಿ ಊಟ ಮಾಡ್ತಾ ಇದ್ರ ಮನೆಯಲ್ಲಿ ಅವಳು ಒಬ್ಳೆ ಕಾಯ್ತಿರ್ತಾಳೆ. ಸರಿಯಾಗೋದಿಲ್ಲ. .." ಎನ್ನುತ್ತಿದ್ದರೆ ಸುಮ್ಮನೆ ಅವರ ಭುಜ ಬಳಸಿ ಎಬ್ಬಿಸಿಕೊಂಡು ಬಂದೆ. ಎರಡೂ ಊಟದ ಪಾರ್ಸೆಲ್ ಕೈಗಿತ್ತು ಒಮ್ಮೆ ಮೌನವಾಗಿ ನಿಂತು ತಬ್ಬಿಕೊಂಡು ನಡೆದುಬಿಟ್ಟೆ. ನಿಂತಿದ್ದರೆ ಇಬ್ಬರನ್ನೂ ಸುಧಾರಿಸಲು ಇನ್ನೊಬ್ಬರು ಬೇಕಾಗುತ್ತಿದ್ದರಾ ಗೊತ್ತಿಲ್ಲ. ಆದರೆ ವಾಸ್ತವದ ಭೀಕರತೆಯ ಎದುರು ನಾನೂ ಅಕ್ಷರಶ: ನಡುಗಿದ್ದೆ. ಬಾಬಣ್ಣನ ಮಾತು ಕಿವಿಯಲ್ಲೇ ಗುಂಯ್ ಗುಡುತ್ತಿತ್ತು..
" ಹಿಂಗಾಗುತ್ತೆ ಅನ್ನೋದಾದರೆ ಮಕ್ಕಳ ಸುಖಾನೂ ಬೇಡ. ಈ ವೃದ್ಯಾಪ್ಯ ಅನ್ನೋದು ಮೊದಲೇ ಬೇಡ ನೋಡು..ಉಫ್.." ಉಳಿದದ್ದೇನೆ ಇರಲಿ, ಹೀಗಾಗುವುದಾದರೆ ನನ್ನ ಆಯುಸ್ಸು ಅದಕ್ಕೂ ಮೊದಲೇ ಮುಗಿದು ಹೋಗಲಿ.." ಎನ್ನಿಸಿದ್ದೂ ಸುಳ್ಳಲ್ಲ.

Monday, May 29, 2017

ಸ್ವತ: ಮಾಡಿಕೊಳ್ಳುವ ಸಿಹಿವಂಚನೆ ಅದು...

(ಎಲ್ಲಾ ಗೊತ್ತಾದರೂ "ಅಯ್ಯೋ.." ಎನ್ನುವ ಅವನ ಮಾತಿಗೆ ಆಕೆ ಒಳಗೊಳಗೆ ನಕ್ಕು ಸುಮ್ಮನಾಗುತ್ತಾಳೆ. ಕಾರಣ ಆಕೆಗೊಂದು ಆಪ್ತ ಸ್ನೇಹದ ಮನಸ್ಸು ಬೇಕಿರುತ್ತದೆ. ಮಾತಾಡಿಕೊಳ್ಳಲು ಇಂಥ "ಕಡಿಮೆ ಡೆಂಜರ್"ಎನ್ನಿಸುವವನು ಬೇಕಿರುತ್ತಾನೆ.)
"..ಎಷ್ಟು ಸರ್ತಿ ಹೇಳಿದೀನಿ ನಿನ್ಗೆ ಟೈಂಗೆ ಸರಿಯಾಗಿ ಇರ್ಬೇಕು ಅಂತಾ. ಕಾಲ್ ಬೇರೆ ಹೋಗ್ತಿಲ್ಲ ನಿನಗೆ.." ಎನ್ನುತ್ತಾ ಆಕೆ ಸ್ನೇಹದಿಂದಲೂ ಅವನ ಜೊತೆಗೆ ಇರುವ ಸಲುಗೆಯಿಂದಲೂ ಕಾರ್ಯಕ್ರಮಕ್ಕೆ ತಡವಾಗಿ ಬಂದವನನ್ನು ಗದರುತ್ತಿದ್ದರೆ, ಆತ ಪ್ಯಾಲಿ ನಗೆ ನಗುತ್ತಾ, ಅರೆ ಚಿಗುರಿದ ಗಡ್ಡ ಕೆರೆದು, 
" ನಿನ್ನಂಗೆ ಎಲ್ಲಾ ಅಪ್‍ಡೆಟ್ ಇರಲ್ಲಮ್ಮಾ ನಾವು.. ಎಲ್ಲಾ ಕಡೆನೂ ಗಮನ ಕೊಡೊದ್ರಲ್ಲಿ ಮೊಬೈಲ್ ಅಪ್ಡೆಟ್ ಮಾಡ್ಕೊಳ್ಳಕೂ ದುಡ್ಡು ಉಳ್ದಿರಲ್ಲ.." ಇತ್ಯಾದಿಯಾಗಿ ಮಾತಲ್ಲೇ ಅಡ್ವಾಂಟೇಜ್ ಹುಟ್ಟಿಸಿಕೊಳ್ಳುತ್ತಾ, ತನ್ನ ಕತೆಯನ್ನು ಅನುಕಂಪ ಭರಿತವಾಗಿ ನುಡಿಯುತ್ತಿದ್ದರೆ, ನಂತರ ನಡೆಯುತ್ತಿದ್ದ ಕಾರ್ಯಕ್ರಮಕ್ಕಿಂತಲೂ ಸ್ನೇಹಿತನ ಮೇಲೆ ಅನುಕಂಪ ಆಕೆಯನ್ನು ಹೆಚ್ಚು ಹಿಂಡಿ ಹಾಕುತ್ತಿತ್ತು. ಅವನು ಬೇಡ ಬೇಡ ಎಂದು ಹಲ್ಲು ಕಿರಿಯುತ್ತಿದ್ದರೂ ಬಿಡದೆ ಅವನಿಗೊಂದು ಒಳ್ಳೆ ಊಟ ಹಾಕಿಸಿ, ಹಾಗೆ ಬಿಲ್ಲು ಕೊಡುವಾಗ ತಾನು, ಮಕ್ಕಳು ಮರಿ ಐಸ್‍ಕ್ರೀಂ ಎಂದೆಲ್ಲಾ ಖರ್ಚು ಮಾಡುವಾಗ ಮಾಡುತ್ತಿದ್ದ ಲೆಕ್ಕಾಚಾರದ ಬದುಕಿಗಿಂತಲೂ ಕೊಂಚ ಹೆಚ್ಚಾಗಿದೆ ಎನ್ನಿಸುವುದು ಅರಿವಿಗೆ ಬಾರದಂತೆ ಮಾಡುವ ಅವನ, ಹದಭರಿತ ಊಟ, ತಮಾಷೆಯ ಪ್ರೀತಿ ಪೂರ್ವಕ ಮಾತಿನ ಭರದಲ್ಲಿ ತುಸು ಹೆಚ್ಚೆ ಖರ್ಚಾಗಿದೆ ಎನ್ನಿಸಿದರೂ ಅದೊಂದು ದುಗುಡ ಎನ್ನಿಸದೆ, ಹೆಂಗೋ ಬದುಕುತ್ತಿದ್ದಾನೆ ಎಂಬ ಸ್ನೇಹ ಪೂರ್ವಕ ಪ್ರೀತಿಯ ಒಲುಮೆಯಲ್ಲಿ ಮರೆತು ಹೋಗುತ್ತಾ ಕಡೆಗೆ ಆಟೊದಲ್ಲಿ ಕೂತಾಗ ಹೀಗೆ ಆಗಾಗ ಅವನಿಗೆ ಕೊಡುವ ಮತ್ತು ಖರ್ಚು ಮಾಡುತ್ತಿರುವದರ ಹಿಂದಿನ ತನ್ನ ಆಪ್ತತೆಯ ಬಗೆಗೆ ಆಕೆಗೆ ಹೆಮ್ಮೆಯಾಗುತ್ತ ಗುನುಗಿಕೊಂಡೆ ಮನೆಯತ್ತ ನಡೆಯುತ್ತಾಳೆ.
ಆದರೆ ಹಾಗೆ ವಿಶ್ವಾಸಗಳಿಸಿಕೊಂಡು ಅವಳಿಂದ ಕೈ ಸಾಲ ಎತ್ತುತ್ತಿರುವ ಆತ, ಅದಾದ ಅರ್ಧ ಗಂಟೆಯಲ್ಲೇ ಇನ್ನೇಲ್ಲೋ ಚಾಟ್‍ನಲ್ಲಿ ಮತ್ತದೇ ಗೋಳು ಹೇಳಿಕೊಳ್ಳುತ್ತಾ ಇನ್ನೊಬ್ಬಳು ಸ್ನೇಹಿತೆಯಿಂದಲೂ ಇನ್ನೊಂದೆರಡು ಸಾವಿರ ಎತ್ತುವಳಿಯ ಉಳುಮೆ ಮಾಡುತ್ತಿದ್ದನೆ ಎಂದು ಗೊತ್ತೇ ಆಗುವುದಿಲ್ಲ. 
ತನ್ನ ಕೈ ನಡೆಯುವಾಗ ಇನ್ನಿಲ್ಲದ ಆರ್ಭಟಕ್ಕಿಳಿಯುವ ಇಂಥವರು, ಅಷ್ಟೆ ನಾಜೂಕಾಗಿ ಕೈ ಸಾಲ ಎನ್ನುತ್ತಿವಲ್ಲ ಅದನ್ನು ಎತ್ತುವುದರಲ್ಲಿ ಪ್ರವೀಣರು. ತೀರ ಹತ್ತಾರು ಸಾವಿರವನ್ನು ಯಾವ ಸ್ನೇಹಿತೆಯೂ ಸುಲಭಕ್ಕೆ ಕೊಡಲಾರಳು. ಅಷ್ಟೊಂದು ಹಣವನ್ನು ಇಟ್ಟುಕೊಂಡು ಓಡಾಡಲಾರರು ಕೂಡ. ಹಾಗೆ ಅಷ್ಟೆಲ್ಲಾ ಕೇಳಿದರೆ ಅದು ವರ್ಕೌಟೂ ಆಗುವುದಿಲ್ಲ. ಆದರೆ ಒಂದೆರಡು ಸಾವಿರ, ನೂರಿನ್ನೂರು ಚಿಲ್ರೆ ಹಣವಾದರೆ ಆಕೆ ವಾಪಸ್ಸು, ಕೇಳದಂತೆನೂ ಇರಬೇಕು. ಕೇಳಿದರೂ ಯಾರೋ ಒಬ್ಬರಿಗೆ ಹಿಂದಿರುಗಿಸಲು ಅನಾನುಕೂಲವೂ ಇರಬಾರದು. ಹೆಚ್ಚಿನ ಇವೆಲ್ಲಾ ಗಾಡಿಗೆ ಪೆಟ್ರೊಲ್ ರೂಪದಲ್ಲೂ, ಎಷ್ಟೊ ಸರ್ತಿ ಸಣ್ಣ ಮೊತ್ತದ ಮೊಬೈಲ್ ಕರೆನ್ಸಿ ರೂಪದಲ್ಲೂ, ಕೆಲವೊಮ್ಮೆ ಆವತ್ತಿನ ಪುಷ್ಕಳ ಚಿಕನ್ ಊಟದ ರೂಪದಲ್ಲೂ(ಬಹುಶ: ತುಂಬ ಜನರಿಗೆ ಈ ಅನುಭವಾಗಿರುತ್ತದೆ. ತಮ್ಮ ಊಟಕ್ಕೆ ಲೆಕ್ಕಾಚಾರವಿರುತ್ತದೆ. ಅದೇ ಬೇರೆಯವರು ಬಿಲ್ಲೆತ್ತುವ ದಿನ ಅದ್ಯಾವುದೂ ಇರುವುದೂ ಇಲ್ಲ ಮತ್ತು ಆವತ್ತು ಕಂಡು ಕೇಳರಿಯದ ಮೆನು ಎಲ್ಲಾ ಟೇಬಲ್ಲಿಗೆ ದಾಖಲಾಗುತ್ತಿರುತ್ತವೆ ಆವತ್ತೇ ಅವರಿಗೆ ಹಸಿವೂ ಕೂಡಾ), ಈ ತಿಂಗಳ ಅಮ್ಮನ ಮೆಡಿಸಿನ್ ಮುಗಿದು ಹೋಗಿದೆ ಎನ್ನುವ ಅನುಕಂಪದ ಅಧಾರದ ಮೇಲೆ, ತಮ್ಮ/ತಂಗಿ ಹಾಸ್ಪಿಟಲ್ ಎನ್ನುವ ಕಾಮನ್ ಆದರೆ ಎಫೆಕ್ಟೀವ್ ರೀಸನ್ನು, ಗಾಡಿಗೇನೋ ಪ್ರಾಬ್ಲಂ ನಡ್ಕೊಂಡೆ ಓಡಾಡ್ತೀದಿನಿ ಎನ್ನುವ ಪಾಪದ ನೆಪ, ಹೀಗೆ ಹತ್ತಿರವಾದ ಸ್ನೇಹಿತೆಯರು ತಾವಾಗಿಯೇ ಪರ್ಸು ಬಿಚ್ಚುವಂತೆ ಮಾಡುವಲ್ಲಿ ಸಿದ್ಧ ಹಸ್ತರು. ಬೇಡ ಬೇಡ ಎನ್ನುತ್ತಲೆ ತೆಗೆದುಕೊಳ್ಳುವ ಬಣ್ಣದ ನೋಟು ಇನ್ಯಾವತ್ತೂ ಆಕೆಯ ಪರ್ಸಿಗೆ ಹಿಂದಕ್ಕೆ ಬಂದ ಉದಾ. ತುಂಬ ಕಡಿಮೆ. 
ಕಾರಣ ಸಾವಿರದ ಆಸುಪಾಸಿನ ಹಣವನ್ನು ಕೇಳುವುದಾದರೂ ಹೇಗೆ..? ಎನ್ನುವ ಮುಲಾಜಿಗೆ ಬೀಳುವ ಹೆಣ್ಣು ಮಕ್ಕಳು, ಕೆಲವೊಮ್ಮೆ ಈ ಯಾಮಾರಿಸುವಿಕೆ ಗೊತ್ತಿದ್ದರೂ ಹೋಗಲಿ ಪಾಪ ಎನ್ನುವ ಮೂರ್ಖತನಕ್ಕೂ ಒಳಗಾಗಿ ಸುಮ್ಮನಿದ್ದು ಬಿಡುತ್ತಾರೆ. ಒಂದೆರಡು ಬಾರಿ ಅವನು ಅಯ್ಯೋ.. " ಎನ್ನುತ್ತಾ ಹಲವು ಅನುಕಂಪಕಾರಿ ಕಾರಣ ಕೊಡುತ್ತಾ ಹಣ ಹಿಂದಿರುಗಿಸದ ಬಗ್ಗೆ ಮುಖ ಸುಟ್ಟಾ ಬದನೆಯಂತೆ ಮಾಡಿ ಅವನು ಹಲ್ಕಿರಿಯುತ್ತಿದ್ದರೆ, 
"..ಪರವಾಗಿಲ್ಲ ಸುಮ್ನಿರು. ನಿನ್ಗೆ ಎಲ್ಲಾ ಅನುಕೂಲ ಆದ್ಮೇಲೆ ಅದರ ಡಬಲ್ ಇಸ್ಕೊಳ್ತೀನಿ.." ಎಂದಾಕೆ ಆಪ್ತ ಸಲುಗೆಯಲ್ಲಿ ನುಡಿಯುತ್ತಿದ್ದರೆ ಅತ್ತ ಅವನು ನಿರಾಳವಾಗಿಬಿಡುತ್ತಿರುತ್ತಾನೆ. ಕಾರಣ ತನ್ನ ಆ ಡಬಲ್ ಕೊಡುವ ಅನುಕೂಲ ಬರುವುದಿಲ್ಲ. ಹಾಗೆ ಆಕೆ ಹೇಳುತ್ತಿದ್ದಾಳೆಂದರೆ ಇನ್ನಾಕೆ ವಿಚಾರಿಸುವುದಿಲ್ಲ. ಅಲ್ಲಿಗೆ ಗಾಂಧಿ ನೋಟಿಗೆ ಕೃಷ್ಣನ ಲೆಕ್ಕವೇ. 
ಅದ್ಯಾವುದಕ್ಕೋ ಅಂತಾ ಕಾಯ್ದಿಟ್ಟ ಹಣವನ್ನೂ ಇಂತಹ ಪ್ಯಾಲಿ ಹೆಂಗಸರು ಹೀಗೆ ಕಳೆದುಕೊಳ್ಳುತ್ತಲೇ ಇರುತ್ತಾರೆ. ಆದರೆ ಎಲ್ಲೂ ಹೇಳಲಾಗದ ಮತ್ತು ತೀರ ತಲೆ ಹೋಗುವ ಮೊತ್ತವೂ ಅದಲ್ಲವಲ್ಲ. ಅಲ್ಲಿಗೆ ಅವನ ಜೀವನ ಅಷ್ಟರ ಮಟ್ಟಿಗೆ ನವನವೀನ. ಇತ್ತ ಎಲ್ಲಾ ಗೊತ್ತಾದರೂ ಅಯ್ಯೋ ಎನ್ನುವ ಅವನ ಮಾತಿಗೆ ಆಕೆ ಒಳಗೊಳಗೆ ನಕ್ಕು ಸುಮ್ಮನಾಗುತ್ತಾಳೆ. ಕಾರಣ ಆಕೆಗೊಂದು ಆಪ್ತ ಸ್ನೇಹದ ಮನಸ್ಸು ಬೇಕಿರುತ್ತದೆ. ಮಾತಾಡಿಕೊಳ್ಳಲು ಇಂಥ "ಕಡಿಮೆ ಡೆಂಜರ್"ಎನ್ನಿಸುವವನು ಬೇಕಿರುತ್ತಾನೆ. ಬಾಕಿ ಎಲ್ಲಾ ಓ.ಕೆ. ಸಿಕ್ಕಿದರೆ ಚಾನ್ಸು ತೊಗೊಳ್ಳುವವನೇ, ಅದರೆ ಗೆರೆ ದಾಟದ ಮನುಶ್ಯ ಎಂಬಿತ್ಯಾದಿ ಆಕೆಯದ ಮನಸ್ಸಿಗೆ ಸಮಾಧಾನಿಸುವ ಕಾರಣಗಳ ಜೊತೆಗೆ, ಎಲ್ಲೋ ತೀರ ಅಫೇರಾಗದಿದ್ದರೂ ಅದೂಂದು ರೀತಿಯ ಆತ್ಮ ಬಂಧುವಿನಂತಹ ಸಂಬಂಧ ಅನ್ನಿಸಿರುತ್ತದಲ್ಲ ಹಾಗಂದುಕೊಂಡಿರುತ್ತಾಳೆ ಆಕೆ. ಆದರೆ ಅಲ್ಲೆ ಯಡವಟ್ಟುಗಳಾಗೋದು. ( ನೆನಪಿರಲಿ ಹೀಗೆ ದುಡ್ಡು ಯಾಮಾರುವುದು ಒಂಥರಾ ಆಪ್ತ ಆಪ್ತ ಎನ್ನುವ ಸಲುಗೆಯಲ್ಲೇ. ಅದು ತೀರ ಅವರ ಮಧ್ಯದ ಆಫೇರು ಆಗಿರುವುದಿಲ್ಲ. ಅಕಸ್ಮಾತ ಆಗಿದ್ದರೆ ಆಕೆಯನ್ನು ಇಷ್ಟು ಸಣ್ಣ ಮೊತ್ತಕ್ಕೆ ಆತ ಯಾಮಾರಿಸುವುದಿಲ್ಲ.)ಇದೆಲ್ಲಾ ಆಗಿ ಎಲ್ಲಾ ಕಡೆಯಲ್ಲೂ ಅವನು ಹೀಗೆಯೆ ಕೈಎತ್ತುತ್ತಾನೆನ್ನುವುದು ಗೊತ್ತಾಗುತ್ತಿದ್ದರೂ ಹೋಗ್ಲಿ ಎನ್ನುವ ಪ್ಯಾದೆ ಹೆಣ್ಣುಮಕ್ಕಳು ಇವತ್ತು ಇದೇ ಸರ್ಕಲ್ಲಿನಲ್ಲಿ ಸಿಗುತ್ತಾರೆ. ಎಂಥೆಂಥಾ ರೀಸನ್ನುಗಳು ಅಂತೀರಿ. 
ಹಾಗಂತ ಹೆಣ್ಣು ಮಕ್ಕಳೇನೋ ಯಾಮಾರಿಸುವುದೇ ಇಲ್ಲವಾ ಎನ್ನುವ ಆಗತ್ಯವೇ ಇಲ್ಲ. ಅಷ್ಟೆ ಸಂಖ್ಯೆಯಲ್ಲಿ ತನ್ನ ಖರ್ಚಿಗೊಬ್ಬ/ಕುರ್ಚಿಗೊಬ್ಬ ಎಂದು ಬೇರೆ ಬೇರೆ ರೀಸನ್ನುಗಳಿಗೆ ಸ್ನೇಹಿತರನ್ನು ಸಾಕಿಕೊಳ್ಳುವ ಹೆಂಗಸರಿದ್ದಾರೆ. ವಾರಾಂತ್ಯಕ್ಕೆ ಬೇರೆ, ತೀರ ಜೊತೆಯಾಗಿರಲೊಬ್ಬ, ಅಗತ್ಯದ ಅಪಾರ ಖರ್ಚುಗಳಿಗೊಬ್ಬ ಇತ್ಯಾದಿ. ಕೊನೆಕೊನೆಗೆ ಅವನೊಡನೆ ಹೊರಟರೆ ಎಲ್ಲಾ ಅವನದ್ದೇ ಖರ್ಚು ಬಿಡು ಎಂದು ನಿರುಮ್ಮಳವಾಗಿ ಅವನ ಜೇಬು ತೆಳ್ಳಗಾಗಿಸುತ್ತಾ,  ತೀರ ಖಾಸಗಿಯಾಗಿ ಅವನೊಂದಿಗೆ ಕಳೆಯುವಾಗಲೂ ಅವಳಿಗೆ ವ್ಯತ್ಯಾಸಗಳಿರುವುದಿಲ್ಲ. ಇತ್ತ ಇವನೊಂದಿಗೂ ಅತ್ತ ಅವನಿಗೂ ತೆಕ್ಕೆ ಬದಲಿಸುತ್ತಾ ಬದುಕು ಕದಲಿಸುವವರಿದ್ದಾರೆ. ಸ್ನೇಹದ ಹೆಸರಲ್ಲಿ ಕೊಂಚ ಸಲಿಗೆಯವನೂ ಸರಿನೇ, ಸುಮ್ಮನೆ ಅವನ ಬಗಲಿಗೆ ಕೈ ಹೂಡಿ ನಡೆದರಾಯಿತು. ತೀರ ಸರಿಯಾಗಿ ಹುಡುಕಿದರೆ ಇವತ್ತು ಫೇಸ್‍ಬುಕ್ಕಿನಲ್ಲೂ ಅಲ್ಲಲ್ಲಿ ಕಾಲಿಗಡರುತ್ತಾರೆ ಇಂತಹ ಹೆಂಗಸರು. ಅಚ್ಚರಿ ಎಂದರೆ ಇಂಥ ಪರಿಚಯದ ಅರೆಬರೆ ಸ್ನೇಹಿತೆಯರನ್ನು ನಂಬಿಕೊಂಡು, ಸುಖಾಸುಮ್ಮನೆ ಅವರ ಜೊತೆ ಕೂತೆದ್ದು ಪಟ್ಟಾಂಗ ಹೊಡೆಯಲೇ ರಾಜಧಾನಿಗೆ ಎಡತಾಕುವವರೂ ಇದ್ದಾರೆ.
ನೆನಪಿರಲಿ, ಬ್ರಿಗೇಡ್‍ರೋಡ್‍ಲ್ಲಿ ಪರ್ಚೇಸಿಂಗ್ ಮಾಡಸ್ತೀಯಾ ಎನ್ನುವ ಹೆಣ್ಣುಗಳಿಗೂ ಕಡಿಮೆ ಇಲ್ಲ. ಆದರೆ ಹಾಗೆ ತೆವಲಿಗೆಂದೆ ನಮ್ಮ ಜೇಬಿಗೆ ಕೈಯಿಕ್ಕುವವರ ಬಗ್ಗೆ ಯಾರಾದರೂ ಸರಿ ಹುಶಾರಾಗಿರಲೇಬೇಕು. ತೀರ ಅವರಿಬ್ಬರ ಸಂಬಂಧವೆ ಖಾಸಗಿ ರೂಪದಲ್ಲಿದೆ ಎಂದರೆ ಅವರವರು ಏನು ಮಾಡಿಕೊಳ್ತಾರೋ, ಖರ್ಚೋ,  ಲಾಭನೋ ಅದು ಅವರ ಹಣೆಬರಹ. ಆದರೆ ಅಗತ್ಯಕ್ಕೆ ಬಳಸಿಕೊಳ್ಳುವವರ ಇಂತಹ ವಂಚನೆಯಿಂದ, ನಿಜಕ್ಕೂ ಯಾವಾಗಾದರೂ ಯಾರಿಗಾದರೂ ಸಹಾಯದ ಅವಶ್ಯಕತೆ ಇದ್ದಾಗ ಎಂಥವರೂ ಯೋಚಿಸಿ ಕೈಯೆತ್ತಿಬಿಡುವುದಾಗುತ್ತದಲ್ಲ ಆಗ ಆಗುವ ನಷ್ಟಕ್ಕೆ ಯಾರು ಹೊಣೆ..?
ಕಾರಣ ಇವತ್ತು ತಾನು ಕಷ್ಟದಲ್ಲಿದ್ದೇನೆ ಎಂದು ಕೆಲವೊಮ್ಮೆ ಮಕ್ಕಳ ಶಾಲೆ ಫೀಸಿಗೆ ಹಣ ಕಟ್ಟಿಸಿಕೊಂಡೂ ಕನಿಷ್ಟ ಮಗು ಸ್ಕೂಲಿಗೆ ಹೋಗ್ತಿದೆ ಎನ್ನುವ ಮಾಹಿತಿ ಕೊಡದ ಕೃತಘ್ನರು ಬೇಕಾದಷ್ಟಿದ್ದಾರೆ. ಮಾತು ಮತ್ತು ತೋರಿಕೆಯ ಜಂಭಕ್ಕೇನೂ ಕಮ್ಮಿ ಇರದ ಇಂತಹ ಗಂಡು/ಹೆಣ್ಣು ಇವತ್ತು ಸಮಾನ ಸಂಖ್ಯೆಯಲ್ಲಿದ್ದಾರೆ. ನಿಜಕ್ಕೂ ಹುಶಾರು ತಪ್ಪಿದಾಗ, ಅಗತ್ಯವಿದ್ದಾಗ ಮಾನವೀಯತೆಯ ದೃಷ್ಟಿಯಲ್ಲಿ ಸಹಾಯ ಮಾಡಿದವರನ್ನೇ ಖಳನಾಯಕ/ಕಿ ಸ್ಥಾನದಲ್ಲಿ ನಿಲ್ಲಿಸಿದವರಿಗೂ ಕೊರತೆ ಇಲ್ಲ ಇಲ್ಲಿ. ಜೊತೆಗೆ ಇಂತಹ ಸಹಾಯ ಪಡೆದ/ಮಾಡಿದ ಅವರನ್ನು ಹೊರತು ಪಡಿಸಿ ಉಳಿದವರು ಮಸಾಲೆ ಉರಿಸುವವರೇ ಜಾಸ್ತಿ ಇವತ್ತು ಗೋಡೆ ಬರಹದಲ್ಲಿ. ಹಾಗಾಗಿ ನಮಗೇ ಗೊತ್ತಾಗದಂತೆ ಯಾಮಾರಿಸುವವರ ಜೊತೆಗೆ ಹುಶಾರಾಗಿರದೇ ಇದ್ದರೆ ನಿಜಕೂ ನಮ್ಮದೇ ನಿಜವಾದ ಆಪ್ತರಿಗೆ ಏನಾದರೂ ಕೈ ಮುಂದೆ ಮಾಡಲು ನಾವು ಯೋಚಿಸುವಂತಾಗುವ ಪರಿಸ್ಥಿತಿಗೆ ಬದುಕು ಬಂದು ನಿಂತರೆ ಆಗುವ ಲುಕ್ಷಾನು ಇಂತಹ ಹಲಾಲು ಟೋಪಿ ಸ್ನೇಹಿತರಿಗಲ್ಲ. ನಮಗೇನೆ.. ನೆನಪಿರಲಿ.. 
ಇಲ್ಲದಿದ್ದರೆ ಹೀಗೆಲ್ಲಾ ನಾನು "ಪಿಸುಮಾತು" ಆಡುವ ಅವಶ್ಯಕತೆಯಾದರೂ ಯಾಕೆ ಬರುತ್ತದೆ...? 

Saturday, May 20, 2017

ಜಾಲತಾಣದಲ್ಲೂ ಅದೇ ಹಾಡು ಅದೇ ರಾಗ...

(..ಇವತ್ತು ಸೋಷಿಯಲ್ ಮೀಡಿಯಾ ಕೆಟ್ಟದಿಲ್ಲ. ಋಣಾತ್ಮಾಕ ಅಂಶಗಳು ಎಲ್ಲೆಡೆಗೂ ಇರ್ತವೆ. ಆದರೆ ಎಂಥವನೂ ಒಂದು ಚಾನ್ಸ್ ತೊಗೊಳ್ಳೊಣ ಎಂದೇ ಟ್ರೈ ಕೊಡುತ್ತಾ ಇದ್ದರೆ ಯಾರನ್ನು ನಂಬೋದು. ಇವರಿಗೆಲ್ಲ ಹೆಣ್ಣು ಮಕ್ಕಳೆ ಇರಲ್ಲವಾ ..? " ಇತ್ಯಾದಿ ಮಾತಾಡುತ್ತಿದ್ದ ಆಕೆಯ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ...)

"..ಎನೋ ನನ್ನ ವಾರಿಗೆಯ ಸ್ನೇಹಿತರೆಲ್ಲಾ ಇದಾರೆ ಅಂತಾ ಫೇಸ್‍ಬುಕ್ಕು ವಾಟ್ಸಾಪು ಮಾಡಿಕೊಂಡೆ. ಇದು ನೋಡಿದ್ರೆ ಊರಿಗಿಲ್ಲದ ಉಸಾಬರಿ ಆಗ್ತಿದೆಯೋ ಮಾರಾಯ. ಇಷ್ಟು ವರ್ಷದ ನಂತರ ಅನವಶ್ಯಕವಾಗಿ ನಮ್ಮ ಮನೆಲಿ ಮಾತು ಕೇಳ್ಬೇಕಾಯಿತು ನೋಡು.." ಎನ್ನುತ್ತಾ ಆಕೆ ಅನ್ಯಮನಸ್ಕಳಾಗಿ ಹುಬ್ಬೇರಿಸುತ್ತಿದ್ದರೆ ಜಾಲತಾಣದಲ್ಲಿ ಕುಹಕಿಗಳ, ಮಹಿಳೆಯರನ್ನು ಕಾಡುವ ಹೊಸ ವರಸೆಗಳಿಗೆ ಹೊಸ ಸಾಕ್ಷಿಯಾಗತೊಡಗಿದ್ದೆ. 
ತೀರ ಹೊಸಬರಿಗೆ ಮಾತ್ರವಲ್ಲ, ಮನೆಯಲ್ಲಿದ್ದೇ ಕೆಲಸ ಕಾರ್ಯ ಮಾಡಿಕೊಂಡಿದ್ದ ನೆಮ್ಮದಿಯ ಹೆಣ್ಣುಮಕ್ಕಳಿಗೂ ಹೋಮಮೇಕರ್ ಎಂಬ ಡೆಸಿಗ್ನೇಶನ್ನು ಕೊಟ್ಟಿದ್ದೇ ಇವತ್ತು ಸಾಮಾಜಿಕ ಜಾಲತಾಣಗಳು. ತಂತಮ್ಮ ಮಕ್ಕಳ ಹತ್ತಿರ ಫೇಸ್‍ಬುಕ್ಕು ಐ.ಡಿ ಮಾಡಿಸಿಕೊಂಡು ತಾವೂ ಯುಗಾದಿಗೊಂದು ಫೆÇೀಟೊ, ಒಂದು ಪ್ರವಾಸದ ಚಿತ್ರ, ಯಾವುದೋ ಮಗುವಿನ ಬೊಚ್ಚು ನಗೆ, ಇನ್ಯಾವಾಗಿನದ್ದೋ ತಾನೆ ಬರೆದುಕೊಂಡಿದ್ದ ಹಳೆಯ ಕವನದ ಧೂಳು ಹಾರಿಸಿ ಇಲ್ಲಿ ಪ್ರಕಟಿಸಿಕೊಂಡು, ಎಲ್ಲೆಲ್ಲೋ ಇದ್ದ ಸ್ನೇಹಿತೆಯರೆಲ್ಲಾ ಸಿಕ್ಕಿ ತಮ್ಮದೇ ಒಂದು ವೃತ್ತ ರಚಿಸಿಕೊಂಡು ಅಲ್ಲೆಲ್ಲ ಫೆÇೀಟೊ, ಚಾಟು ಹೀಗೆ ಅವರವರ ಖುಷಿಗೆ ಮತ್ತು ಅಗತ್ಯಕ್ಕೆ ಜಾಲತಾಣ ಹೊಸ ರೀತಿಯ ಚೇತನ ಮಧ್ಯಮವಯ ದಾಟುತ್ತಿರುವವರಿಗೂ ಒದಗಿಸಿದ್ದು ಸುಳ್ಳಲ್ಲ. ಅದರಲ್ಲೂ ಹೆಣ್ಣುಮಕ್ಕಳು ಒಂದಿಷ್ಟು ನಿರುಮ್ಮಳವಾಗಿ ಆಪ್ತ ಸಂಗಾತಿಯಂತೆ ಅಲ್ಲಲ್ಲಿ ಮನಸ್ಸಿನ ಹರಿವಿಗೊಂದು ದಾರಿ ಕಲ್ಪಿಸಿಕೊಂಡಿದ್ದೂ ಹೌದು.
ತುಂಬ ಮಹಿಳೆಯರಿಗೆ ಸ್ಕ್ರೀನು ತೀಡುತ್ತಾ ಕೂಡಲು ಫೇಸ್‍ಬುಕ್ಕು ಆಪ್ತ ಅಪ್ತ. ರೆಸಿಪಿಯಿಂದ ಹಿಡಿದು, ಸಮಾಜ ಸೇವೆ, ಇನ್ಯಾರಿಗೋ ನೋಟ್ ಬುಕ್ಕು ವಿತರಣೆಗೆ ತಂಡ ಕಟ್ಟಿಕೊಂಡು ಹೋಗಿ ಅಲ್ಲೇ ಕಾಪಿಯ ಸಣ್ಣ ಔಟಿಂಗು, ಕಿಟ್ಟಿಪಾರ್ಟಿಯ ತೀರ್ಮಾನ, ಹೊಸ ಪುಸ್ತಕದ ಚರ್ಚೆ, ತಿಂಗಳ ಕಿರಿಕಿರಿಯವರೆಗೂ ಆಪ್ತವಾಗಿ ಇನ್‍ಬಾಕ್ಸಿನಲ್ಲಿ ಸ್ನೇಹಿತೆಯರೊಂದಿಗೆ ಹರಟಿಕೊಂಡು ಹಗುರಾಗಲು ಸಮಾನ ಮನಸ್ಕರ ಸಾಂಗತ್ಯ ಆಕೆಗೆ/ಅವಳಿಗೆ ಲಭ್ಯವಾಗಿದ್ದೇ ಇಂತಹ ಜಾಲಗಳು ಬದುಕಿಗೆ ಅಚ್ಚರಿಯಾಗಿ ಕಾಲಿಕ್ಕಿದ ಮೇಲೆ. 
ವಾಟ್ಸಾಪು, ಫೇಸ್‍ಬುಕ್ಕಿನದ್ದು ಈಗ ಯಮ ವೇಗ. ಯಾರ ಮಾಹಿತಿ, ಏನೇ ಅನಾಹುತಗಳೂ ಮೊದಲು ಜಾಹೀರಾಗೋದು ಅಲ್ಲೇ. ಅದೆಲ್ಲ ಅವರವರ ವೈಯಕ್ತಿಕ ಇಷ್ಟ. ಆದರೆ ಅದನ್ನೆ ಗುರಿಯಿಕ್ಕಿ ಹೆಣ್ಣುಮಕ್ಕಳಿಗೆ ಕಾಡುವ ಜಾಲಿಗರಿದ್ದಾರಲ್ಲ ಅವರ ಕೈಯಿಂದ ತಪ್ಪಿಸಿಕೊಳ್ಳೊದೇ ಇವತ್ತು ದೊಡ್ಡ ತಲೆ ನೋವಾಗಿದೆ. ಹೀಗೆ ಹಿಂದೆ ಬೀಳುವ ಹೆಚ್ಚಿನವರದ್ದೆಲ್ಲಾ ಒಂದೇ ಗುರಿಯೆಂದರೆ ಆಕೆ ಎಟುಕಬಹುದಾ ಎನ್ನುವುದು. ಇಲ್ಲದಿದ್ದರೆ ಇನ್ಯಾರಿಗೂ ಸಿಗದೆ ಇರಲಿ ಎನ್ನುವ ಆತ್ಮಸಂಕಟ. 
ಇವತ್ತು ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಸ್ನೇಹಿತೆಯರು ಇನ್ಯಾರ ಜೊತೆಗಾದರೂ ಸ್ನೇಹದಿಂದಿದ್ದರೆ, ಒಂದೆರಡು ಪಿಕ್‍ನಿಕ್ಕು, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಡಿದ್ದೆ ತಡ ಅವಳ ಇನ್‍ಬಾಕ್ಸಿಗೆ ಆತುಕೊಳ್ಳುತ್ತಾರೆ. ಅವರೆಲ್ಲರೊಂದಿಗೆ ಸಲಿಗೆಯಿಂದಿದ್ದೀಯಲ್ಲ ನನ್ನೊಂದಿಗೂ ಇರು ಎನ್ನುವುದೇ ಪರೋಕ್ಷ ವರಾತ. ಹೇಗಾದರೂ ಅವನೊಂದಿಗೆ ಸ್ನೇಹ ಇದೆ. ನಾನೂ ಹಂಗೆ ಒಬ್ಬಳೊಂದಿಗೆ ಕಟ್ಟಿಕೊಂಡು ಓಡಾಡಬೇಕು, ಫೆÇೀಟೊ ಹಾಕಿಕೊಳ್ಳಬೇಕು.. ಎನ್ನುವುದು ಒನ್‍ಲೈನ್ ಅಜೆಂಡಾ.
ಒಂಚೂರು ಸ್ನೇಹ ಕುದುರುವುದೇ ತಡ, ಯಾವ ಮುಲಾಜೂ ಇಲ್ಲದೆ ಆಕೆ ಯಾರಿಕೆ ಲೈಕ್ ಒತ್ತುತ್ತಾಳೆ, ಯಾರಿಗೆ ಕಮೆಂಟ್ ಮಾಡುತ್ತಾಳೆ, ಹಾಗೆ ಒತ್ತುವ ಲೈಕು,  ಮಾಡುವ ಕಮೆಂಟು ಎರಡನ್ನೂ ನಾನು ನೋಡಿದ್ದೇನೆ ಎನ್ನುವಂತೆ ತಾನೂ ಅದಕ್ಕೊಂದು ಲೈಕು ಒತ್ತುವುದು, ಆಕೆಗೆ ಬೀಳುವ ಎಲ್ಲಾ ಕಮೆಂಟ್‍ನ್ನು ಫಾಲೋ ಮಾಡುತ್ತಿರುವುದು, ಆಕೆ ರಾತ್ರಿ ಹನ್ನೊಂದರ ನಂತರವೂ ಆನ್‍ಲೈನ್‍ನಲ್ಲಿದ್ದರೆ ಪಕ್ಕದಲ್ಲಿ ಗಂಡ ಇಲ್ಲ ಎನ್ನುವ ಅಂದಾಜು, ತೀರ ಬೇಸರದಲ್ಲಿದ್ದೇನೆ ನಿಮ್ಜೊತೆ ಮಾತ್ರ ಹೇಳ್ಕೊಳ್ಳಕಾಗೋದು ಕಾಲ್ ಮಾಡಲೇ..?ಎನ್ನುವ ಪಿಸಣಾರಿತನ, ಇದೊಂದು ಕವನ ಬರೆದೆ ಅದ್ಯಾಕೋ ಕಣ್ಮುಂದೆ ನೀನು ಮಾತ್ರ ಬರ್ತೀದೀಯ ಎನ್ನುವ ಹುಕಿ, ಇದು ಕವನ ನಿನಗಾಗೇ, ಎಲ್ಲೋ ಟ್ರಿಪ್ ಹೋಗ್ತಿದೀವಿ ನೀನು ಬರ್ತೀ ಅಂತಾನೆ ಡಿಸೈಡ್ ಮಾಡಿದ್ದು ಅಲ್ಲೆಲ್ಲ ಉಳಿದವರ ಜತೆ ನನಗೆ ಕಂಪೆನಿ ಸೆಟ್ ಆಗಲ್ಲ ಎನ್ನುವ ಎಮೋಶನಲ್ ಬ್ಲಾಕ್ ಮೇಲ್, ಕವನ ಸಂಕಲನಕ್ಕೆ ನಿಮ್ಮ ಅಭಿಪ್ರಾಯ ಕೊಡಿ ಮಾತಾಡಲು ಮನೆಗೇ ಬರಲಾ..? ಎನ್ನುತ್ತಾ ದಾರಿ ಹುಡುಕುವವರು, ವಾಲ್ ಮೇಲೆ ನಿನ್ನ ಕವನ ನೋಡಿದ ಮೇಲೆ ನಾನು ಬರೆಯೋದನ್ನೇ ಬಿಟ್ಟೆ ಎನ್ನುತ್ತಾ, ಕೊನೆಗಾಕೆ ಹೂಂ ಎಂದರೆ ಅದೂ ಮನೆಯಲ್ಲಿ ಗಂಡ ಮಕ್ಕಳು ಇಲ್ಲದ ಸಮಯವೇ ಆಗಬೇಕಂತೆ. ಸ್ವಲ್ಪ ಸ್ನೇಹ ಎನ್ನುವ ಪರೀಧಿಯಲ್ಲಿ ಆಕೆ ಅಪ್ತತೆಯಿಂದ ಮಾತಾಡಿದರೂ ಸಾಕು, ಒಂದು ಕವನ ಬರೆದು, ಬೆಳ್‍ಬೆಳಿಗ್ಗೆ ನಿದ್ರೆಗೂ ಮೊದಲು ನಿನ್ನದೆ ಕನಸು ಎನ್ನುತ್ತಾ ಕನವರಿಕೆಗೆ ನಾಲ್ಕು ಸಾಲು ಇನ್‍ಬಾಕ್ಸ್ ಮಾಡಿ, ರಾಮರಾಮಾ ಆಕೆ ಯಾಕಾದರೂ ಜಾಲತಾಣಕ್ಕೆ ಕಾಲಿಟ್ಟೇನೋ ಎನ್ನುವಂತೆ ಮಾಡಿಬಿಡುತ್ತಿದ್ದಾರೆ.
ಹೇಗಿದೆ ವರಸೆ...? 
ಅದಕ್ಕೂ ಮಿಗಿಲಾಗಿ ದಿನಕ್ಕೆ ಮೂರೂ ಹೊತ್ತೂ ಬಂದು ಬೀಳುವ ಗುಡ್‍ಮಾರ್ನಿಂಗು, ಗುಡ್‍ನೈಟು, ಊಟ ಆಯಿತಾ, ತಿಂಡಿ ಆಯಿತಾ ಎನ್ನುವ ಮಾತುಕತೆಗೆ ಆಹ್ವಾನಿಸುವ ರಹದಾರಿಯನ್ನು ತೆರೆಯಲೆತ್ನಿಸುತ್ತಾ ಆಕೆ ಕಿರಿಕಿರಿಯಿಂದ ಬೇಸತ್ತು ಎನೋ ಒಂದು ಹೇಳಿ ಸಾಗಹಾಕಲು ಹೋದರೆ ಅದರಲ್ಲೇ ಹಲವು ಅರ್ಥ ಹುಡುಕುತ್ತಾ, ಇಷ್ಟೆ ಆಯಿತಾ ಅದೂ ಇಲ್ಲ. ಕೊಂಚ ಕಿರಿಕ್ ಆಗಿ ಬ್ಲಾಕ್ ಮಾಡಿದರೆ ಫೇಕ್ ಐ.ಡಿಯಿಂದಲೂ ಬೆನ್ನಟ್ಟುವುದನ್ನು ಬಿಡಲಾರರು. ಕೆಲವು ಕುಹಕಿಗಳಂತೂ ಇನ್ನೊಂದು ಫೇಕ್ ಐಡಿ ಮೂಲಕ ಆಕೆಯ ಗಂಡನಿಗೂ/ಹೆಂಡತಿಗೂ ಇಲ್ಲ ಸಲ್ಲದ ಮೆಸೇಜು ಕಳುಹಿಸಿ ಯಾಕಾದರೂ ಫೇಸ್‍ಬುಕ್ಕು ಮಾಡಿಕೊಂಡೇನೋ ಎನ್ನಿಸುತ್ತಿದ್ದಾರೆ. ಅವನ್ಯಾವನೋ ಮುಖ ಮೂತಿ ಇಲ್ಲದ ಫೇಕು ಮೇಸೆಜು ಮಾಡಿದ ಸರಿಯೇ. ಆದರೆ ಹತ್ತಾರು ವರ್ಷಗಳಿಂದ ಸಂಸಾರ ಮಾಡಿರುವ ಈ ಗಂಡನಿಗೇನಾಗಿರುತ್ತದೆ ಧಾಡಿ..? 
ಮೊದಲೇ ಹೆಂಡತಿ ಯಾವಾಗೆಲ್ಲ ಮೊಬೈಲ್ ತೀಡುತ್ತಿದ್ದುದು ಅವನ ಕಣ್ಣು ಕುಕ್ಕುತ್ತಿರುತ್ತದಲ್ಲ. ಮನೆಯಲ್ಲೂ ಈಗ ಪಿರಿಪಿರಿ ಶುರುವಾಗತೊಡಗುತ್ತದೆ. " ಮನೆ ನೀಟಾಗಿಡುತ್ತಿಲ್ಲ, ಮಕ್ಕಳ ಆವರೇಜು ಕಡಿಮೆಯಾಗುತ್ತಿದೆ, ಕರೆಂಟು ಬಿಲ್ ಜಾಸ್ತಿ, ಲಿಸ್ಟ್ ಬರೆದಿಟ್ಟಲ್ಲ.." ಹೀಗೆ ಕಾಂಜಿ ಪಿಂಜಿ ಮಾತುಗಳಿಗೆಲ್ಲ ಆಕೆ ತಲೆ ಕೊಡಬೇಕು. ಅವನೀಗ, ಮನೆಯಲ್ಲಿ ನಾನಿಲ್ಲದಾಗ ಸುಖಾಸುಮ್ಮನೆ ಫೇಸ್‍ಬುಕ್ಕಿನಲ್ಲಿ ಟೈಂಪಾಸ್ ಮಾಡ್ತಿದ್ದಿ ಅನ್ನುವುದನ್ನು ಪರೋಕ್ಷವಾಗಿ ಹೇಳುತ್ತಿದ್ದಾನೆ. ಹತ್ತಾರು ವರ್ಷಗಳಿಂದ ಬಾರದ ಪ್ರಶ್ನೆಗಳಿಗೆ ಈಗ ಎಲ್ಲಿಂದ ಉತ್ತರ ಹುಡುಕುವುದೆನ್ನುತ್ತಾ ಆಕೆ ಅನ್ಯಮನಸ್ಕಳಾಗುತ್ತಿದ್ದಾಳೆ. ಸ್ವಂತ ಹೆಂಡತಿ ಹೆಸರಿನಲ್ಲಿ ಚಾಟ್ ಮಾಡಿ ಅದು ನಾನೇ ಅವಳಿಲ್ಲ ಎನ್ನುವವರು, ನಿಮ್ಮದು ಪರ್ಸನಲ್  ಐ.ಡಿ/ವಾಟ್ಸ್ ಆಪ್ ನಂ. ಇದೆಯಾ ಎನ್ನುವ ಆಸೆಬುರಕರು, ನಾನು ಚಾಟ್ ಮಾಡಿದ್ದು ನನ್ನ ಹೆಂಡತಿಗೆ ಹೇಳಬೇಡಿ ಎನ್ನುವ ಮಖೇಡಿಗಳು ಹೀಗೆ ತರಹೇವಾರಿಯಲ್ಲಿ ಬಹಿರಂಗವಾಗುವ ಕುಹಕಿ ಗಂಡಸರ ಸಂಕಟಗಳೆಂದರೆ ಅರ್ಜೆಂಟಿಗೆ ಅವನಿಗೊಬ್ಬ ಹೆಂಗಸು ಬೇಕಿದೆ. ಚಾಟಿಗೆ, ಚಟಕ್ಕೆ, ಲೈಕಿಗೆ. ಯಾರಾದಾಳು ಎಂದು ಎಲ್ಲೆಡೆಗೆ ಕಾಳು ಹಾಕುವುದೇ ಆಗಿದೆ.
 ಆಕೆಗಾದರೆ ಹಂಚಿಕೊಳ್ಳಲು ಹಲವು ವಿಷಯಗಳಿವೆ, ತನ್ನದೆ ಚೆಂದದ ಪುಟವಿದೆ, ಹಲವು ಮಾಹಿತಿಯ ಕಣಜವಿದೆ. ಅವನಿಗೇನಿದೆ..? ತನಗೆ ಲಭ್ಯವಾಗದಿರುವ ಆಕೆಯ ಲೈಕು, ಕಮೆಂಟು, ಸ್ನೇಹ  ಬೇರೊಬ್ಬನಿಗೆ ದಕ್ಕುತ್ತಿದೆಯಲ್ಲ ಎನ್ನುವುದೇ ಒಳದರ್ದಿನ ಮೂಲ. ಅದನ್ನು ತಡೆಯುವ ಸಕಲ ಪ್ರಯತ್ನದ ಭಾಗವೇ ಆಕೆಯ ಇನ್‍ಬಾಕ್ಸ್‍ಗೆ ಎಚ್ಚರ, ನಿಯಂತ್ರಣ, ಪರೋಕ್ಷ ವಾರ್ನಿಂಗು ಎಲ್ಲ. ಆಕೆ ಸ್ನೇಹದ ಪರೀಧಿಯಲ್ಲಿದ್ದರೂ ಇವತ್ತಲ್ಲ ನಾಳೆ ಎಟುಕಿಯಾಳು ಎನ್ನುವ ಕುತ್ಸಿತ ಮನಸ್ಥಿತಿ ಅಷ್ಟೆ.
"..ಇವತ್ತು ಸೋಷಿಯಲ್ ಮೀಡಿಯಾ ಕೆಟ್ಟದಿಲ್ಲ. ಋಣಾತ್ಮಾಕ ಅಂಶಗಳು ಎಲ್ಲೆಡೆಗೂ ಇರ್ತವೆ. ಆದರೆ ಎಂಥವನೂ ಒಂದು ಚಾನ್ಸ್ ತೊಗೊಳ್ಳೊಣ ಎಂದೇ ಟ್ರೈ ಕೊಡುತ್ತಾ ಇದ್ದರೆ ಯಾರನ್ನು ನಂಬೋದು. ಇವರಿಗೆಲ್ಲ ಹೆಣ್ಣು ಮಕ್ಕಳೆ ಇರಲ್ಲವಾ ..? " ಇತ್ಯಾದಿ ಮಾತಾಡುತ್ತಿದ್ದ ಆಕೆಯ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ. 
ಕಾರಣ ಪ್ರತಿ ಹೆಣ್ಣೂ ಅಫೇರಿಗೇ ಆಗಲಿ ಎಂದು ಪ್ರಯತ್ನಿಸುವ, ಅವನ ಜೊತೆ ಚಾಟ್ ಮಾಡ್ತಿದ್ದೀರಾ ಎಂದು ಕಾಲ್ಕೆರೆದು ಬರುವ, ನನಗೊಂದು ಕಾಲ್ ಮಾಡಿ ಎಂದು ಮೇಸೆಜು ಹಾಕಿ ಕಾಲ್ ಮಾಡಿದರೆ ಆ ಕಡೆಯಿಂದ ಅದನ್ನೆ ಸ್ನೇಹಿತರಿಗೆ ತೋರಿಸಿಕೊಂಡು "..ನೋಡ್ರೊ ಆಕೆ ನನಗೆ ಕಾಲ್ ಮಾಡ್ತಾಳೆ.." ಎನ್ನುವ ಹರಾಜಿನ ಪ್ರಕ್ರಿಯೆಗಿಳಿಯುವ ಆತ್ಮವಂಚನೆಯ ಮಧ್ಯೆ, ಆಕೆ ಇನ್ನಾರೊಂದಿಗೂ ಆತ್ಮೀಯಳಾಗದಿರಲಿ ಎಂದೇ ಗಿಲ್ಟ್‍ಗೆ ತಳ್ಳುವ ಮುನ್ನ ಆಕೆಯ ಬಗ್ಗೆ ಅಲ್ಲಲ್ಲಿ ಮಾತಾಡಿ ಹೊಲಸು ಮಾಡುವವರ ಮಧ್ಯೆ, ಆಕೆ ಅಂತಹವರನ್ನು ಬ್ಲಾಕ್ ಮಾಡಿ ಮುನ್ನಡೆಯುವುದೊಂದೇ ದಾರಿ ಎಂದುಕೊಳುತ್ತಿದ್ದಾಳೆ. ಸ್ವಚ್ಛತೆ ಹೊರಗಷ್ಟೆ ಅಲ್ಲ ಒಳಗೂ ಆಗಬೇಕಿದೆ. ಅದರೆ ಜಾಲತಾಣದಲ್ಲಿ ಗಾರ್ಬೇಜೇ ಹೆಚ್ಚಾಗುತ್ತಿದೆ. 
ಇಲ್ಲದಿದ್ದರೆ ಪಿಸುಮಾತು ಆಡುವ ಅಗತ್ಯವಾದರೂ ಏಕಿರುತ್ತದೆ ನನಗೆ...?

Friday, May 19, 2017


ಅವಳೊಂದು ಜೀವೋನ್ಮಾದ... ಅದರೆ ಅವನು...?

(ರಾತ್ರಿ ಹನ್ನೊಂದಕ್ಕೆ ಮಂಚಕ್ಕೆ ತಲೆಯಿಡುತ್ತಿದ್ದರೆ ಬೇಕಿದೆಯೋ ಬೇಡವೋ ವಿಚಾರಿಸಿಕೊಳ್ಳದೇ ಅವನೊಂದಿಗೆ ದೇಹ ಉಜ್ಜುವ ಪ್ರಕ್ರಿಯೆಯಲ್ಲಿ, ಮನಸ್ಸು ಎಲ್ಲಿ ಯಾವ ಪಾತ್ರೆಯ ಕರೆಯ ಜೊತೆ ತೊಳೆದು ಸರಿದು ಹೋಗಿರುತ್ತದೋ ಗೊತ್ತಾಗುವುದಾದರೂ ಹೇಗೆ..? )

" ನಾವು ನಾಜೂಕು ಇದ್ರೂ ಅತೀ ಹೆಚ್ಚು ಕೆಲ್ಸ ನಡೆಯೋದೇ ನಮ್ಮಿಂದ..." ಅವಳ ಮಾತಿಗೆ ತತಕ್ಷಣಕ್ಕೆ ಹೂಂ ಅಥವಾ ಉಹೂಂ ಎನ್ನಲು ನನ್ನಲ್ಲಿ ಯಾವ ಕಾರಣಗಳೂ ಇರಲಿಲ್ಲ. ಕಾರಣ ದೈತ್ಯ ಕೆಲಸಗಾರ ಅಥವಾ ಅವನದ್ದು ಭಾರಿ ವರ್ಕು ಅಂತೆಲ್ಲಾ ಏನೇ ವಿಶೇಷಣಗಳಿಟ್ಟುಕೊಂಡು, ಗಂಡಸಿನ ವರ್ಕಾಲಿಕ್ ನೇಚರ್ ಅಂತೆಲ್ಲಾ ಮಾತಾಡುತ್ತಿದ್ದರೂ ಒಂದೇ ದಿನ ಮನೆಲಿ ಬಿಟ್ಟುನೋಡಿ. ಸುಮ್ಮನೆ ಇವತ್ತೊಂದಿನ ಮನೆ ಸುಧಾರಿಸಿ ಅಂತಾ ಪೂರ್ತಿ ಮನೆನಾ ಕೈ ಗಿಟ್ಟು ಹೊರಟು ಬಿಡಿ.
ಅವನು ಅರ್ಧ ದಿನವೂ ತಡೆಯಲಾರ,
ಉಹೂಂ ..ತೋಪೆದ್ದು ಹೋಗುತ್ತಾನೆ.
ಯಾವಾಗ ಮತ್ತೆ ಆಫಿûೀಸಿಗೆ ಸೇರಿಯೇನು ಎಂದು ಗೊಣಗಾಟ ಬಾಯಿಂದಾಚೆಗೆ ಬಾರದಿದ್ದರೂ ಮರುದಿನ ಕಚೇರಿ ಸಮಯವೋ ಅಥವಾ ಮನೆಯಿಂದಾಚೆಗೆ ಹೋಗುವುದಕ್ಕೋ ಆತ ಕಾಯುತ್ತಲೇ ಇರುತ್ತಾನೆನ್ನುವುದು ಸುಳ್ಳಲ್ಲ. ಕಾರಣ ದೊಡ್ಡ ದೊಡ್ಡ ಕೆಲಸವನ್ನು ಸಲೀಸಾಗಿ ಎಂಥವನೂ ನಿಭಾಯಿಸಿ ಬಿಡುತ್ತಾನೆ. ಆ ಕೆಲಸಕ್ಕೆ ಬೇಕಾದಷ್ಟು ಸಹನೆ ಮತ್ತು ಕಾರ್ಯವಾಹಿ ದಕ್ಷತೆ ಮೈಗೂಡಿಸಿಕೊಂಡು ಮಾನಸಿಕವಾಗಿ ಒಂದು ಸಿದ್ಧತೆ ಎಂದಿರುತ್ತದೆ. ಹಾಗಾಗಿ ನಾಳೆ ಬೆಳಿಗ್ಗೆಯಿಂದಲೆ ಇದಿಷ್ಟು ಕೆಲಸ ಎಂದು ಲೆಕ್ಕ ಹಾಕಿಕೊಂಡವನನ್ನು ನೋಡಿ. ಅಷ್ಟು ಮಾತ್ರಕ್ಕೆ ಅವನಿಗೆ ಸುಸ್ತು ಅಥವಾ ಸೋಮಾರಿತನ ಎಂಬುವುದಿರುವುದಿಲ್ಲ.
ಸಮಯಕ್ಕೆ ಸರಿಯಾಗಿ, ಅಗತ್ಯಕ್ಕೆ ತಕ್ಕಂತೆ ತನ್ನ ಕೈಲಾದಷ್ಟು ದಕ್ಷತೆಯಲ್ಲಿ ಆ ಕೆಲಸ ಮಾಡಿ ಮುಗಿಸಿರುತ್ತಾನೆ ಅಥವಾ ತನ್ನ ಕೆಳಗಿರುವವರಿಂದ ಮಾಡಿಸುತ್ತಾನೆ ಒಟ್ಟಾರೆ ಕಮೀಟ್‍ಮೆಂಟು ಪೂರ್ತಿಯಾಗುತ್ತದೆ. ಲೆಕ್ಕಾಚಾರದ ಕೆಲಸವನ್ನವನು ಕಳ್ಳು ಬಿದ್ದು ಹದಗೆಡಿಸದೇ ಹೋದರೂ ಮನಸ್ಸಿರದಿದ್ದರೂ ಮುಗಿಸುವಲ್ಲಂತೂ ಮೋಸವಾಗುವುದಿಲ್ಲ.
ಆದರೆ ಹಾಗೊಂದು ಹುದ್ದೆದಾರಿಕೆ ಕೊಡದೆ, ದೊಡ್ಡ ಕೆಲಸವನ್ನೇನೂ ಹೇಳದೆ ಸುಮ್ಮನೆ ಮನೆಯಲ್ಲಿ ಕುಳ್ಳಿರಿಸಿ, ಅತೀ ಬುದ್ಧಿವಂತಿಕೆ, ಅಪಾರ ತಾಕತ್ತು ಇದಾವುದನ್ನೂ ಬೇಡದ ಮನೆಯ ಪುಟಗೋಸಿ(?) ಕೆಲಸಕ್ಕೆ ಕುಳ್ಳಿರಿಸಿ. ಅರ್ಧ ಗಂಟೆಯಲ್ಲಿ ಅವನ ಸಹನೆ ಸತ್ತು ಹೋಗಿರುತ್ತದೆ. ಮೊದಲರ್ಧದಲ್ಲೇ ನಶಿಸುವ ದಕ್ಷತೆ ಇನ್ನುಳಿದದ್ದಕ್ಕಂತೂ ಅಂತೂ ಮುಗಿಸುವ ಇರಾದೆಯಲ್ಲಿ ಯಾಂತ್ರಿಕವಾಗಿ ನಡೆಯಲಾರಂಭಿಸಿರುತ್ತದೆ.
ಕಾರಣ ಅವನ ಲೆಕ್ಕದಲ್ಲಿ ಇಂತಹದ್ದೆಲ್ಲ ಮನೆಗೆಲಸ ಎಂದು ಏನು ಪಟ್ಟಿ ಮಾಡಬಹುದೋ ಅದನ್ನೆಲ್ಲಾ ಅವನಲ್ಲ ಅವನ ಹೆಂಡತಿ ಅಥವಾ ಅನುಕೂಲವಿದ್ದರೆ ಮನೆಗೆಲಸದವಳು ಮಾಡಬೇಕಾದ ಬಾಬತ್ತು. ಅಲ್ಲಿಗೆ ಇಂಡೈರಕ್ಟಲಿ ಯಾರು, ಏನು ಎಂದು ನೀವು ಊಹಿಸಿಕೊಳ್ಳಿ. ಅಲ್ಲಿಗೆ ಅವನಿಗೆ ಕೆಲಸ ಮಾಡಲು ಬರುವುದಿಲ್ಲ ಎಂದಲ್ಲ.
ಆತ ಚೆಂದಗೆ ಅಡಿಗೆ ಮಾಡಬಲ್ಲ ಅದರೆ ದಿನವೂ ಅಲ್ಲ. ನೀಟಾಗಿ ಐರನ್ ಮಾಡಬಲ್ಲ ಅದರೆ ಪ್ರತಿ ನಿತ್ಯ ಅಲ್ಲ. ಗೀಡಕ್ಕೆ ನೀರು ಹಾಕಬಲ್ಲ ಅವನಿಗೆ ಪುರಸೊತ್ತಾದರೆ ಮಾತ್ರ, ಮೆಶಿನ್ ಹಾಕಬಲ್ಲ ಟಿ.ವಿ. ಯಲ್ಲಿ ಕಿತ್ತು ಹೋದ ಚಿತ್ರ ಬರುತ್ತಿದ್ದರೆ ಅಥವಾ ಐ.ಪಿ.ಎಲ್. ಇಲ್ಲದಿದ್ದಾಗ ಮಾತ್ರ. ಕೊನೆಗೆ ಕಾಯಿಪಲ್ಯೆಯನ್ನೂ ಹೆಚ್ಚಿ ಇಷ್ಟಿಷ್ಟೆ ನೀಟಾಗಿ ತುರಿದು ಕೊಡಬಲ್ಲ ಯಾವಾಗಲೂ ಅಲ್ಲ ಆ ಹೊತ್ತಿಗೆ ಹೆಂಡತಿಯ ಸಾಮೀಪ್ಯದಲ್ಲಿರಲು ಮನ ಬಯಸುತ್ತಿದ್ದರೆ ಮಾತ್ರ. ಹಾಗಾಗಿ ಯಾವೆಲ್ಲಾ ಮನೆಯ ಕಂಪಲ್ಸರಿ ಎನ್ನುವ ಕೆಲಸಗಳಿವೆಯೋ ಅದರಲ್ಲೆಲ್ಲಾ ಅವನಿಗೇ ಗೊತ್ತಿಲ್ಲದೆ ರಿಸರ್ವೇಶನ್ನು ಹುಟ್ಟಿಬಿಟ್ಟಿರುತ್ತದೆ. ಬೇಕಿದ್ದರೆ ಅದನ್ನು ಮನಸ್ಸಿಗೊಲ್ಲದ ಕೆಲಸ ಎನ್ನಿ.
ಅದೇ ಆಕೆಯನ್ನು ನೋಡಿ. ಬೇಕಿದೆಯೋ ಇಲ್ಲವೋ ದಿನವೂ ಎಲ್ಲಾ ಕೆಲಸಗಳನ್ನು ಮಾಡಿಕೊಂಡೆ ದಿನ ಮುಂದೆ ಸರಿಯಲು ಬಿಡುತ್ತಾಳೆಯೇ ವಿನ: ಕೆಲಸ ಬಾಕಿ ಇಟ್ಟುಕೊಂಡು ಆವತ್ತಿಗೆ ಕೈ ಜಾಡಿಸುವ ಜಾಯಮಾನವೇ ಅಲ್ಲ. ಬೆಳಿಗೆದ್ದು ಹಾಲಿಗಿಟ್ಟು, ಕಾಫಿ ಕಾಯಿಸಿ, ಮಕ್ಕಳ ಬೆನ್ನಿಗೆ ಗುಮ್ಮುತ್ತಾ ಅಡುಗೆ ಮನೆಯಿಂದಲೇ ಕೂಗುತ್ತಾ, ಅಗೀಗ ಗ್ಯಾಸ್ ಮೇಲಿಟ್ಟ ಪದಾರ್ಥ ಏನಾಯಿತು ಗಮನಿಸುತ್ತಾ, ತನ್ನ ಡಬ್ಬಿ, ಮಕ್ಕಳ ಡಬ್ಬಿ ಅದೂ ಹಿಂದಿನ ದಿನವೇ ತೊಳೆದಿಟ್ಟುಕೊಂಡಿದ್ದರೆ ಮಾತ್ರ ಬಚಾವು. ಇಲ್ಲವಾದರೆ ಆಗಲೇ ಪಕ್ಕದ ಸಿಂಕನಲ್ಲೇ ಅದನ್ನು ಕೈಯ್ಯಾಡಿಸಿ, ಗಲಬರಿಸುತ್ತಾ, ಓಡಾಡುತ್ತಲೇ ಮಕ್ಕಳಿಗೆ ಬೀಸಿನೀರು ತೋಡಿ ಬಕೀಟಿಗೆ ಬಿಟ್ಟುಕೊಟ್ಟು, ಅರೆಬರೆ ಕೂದಲು ಕಿತ್ತುಕೊಳ್ಳುವ ಹುಡುಗಿಗೆ ಟೇಫು ಬಿಗಿದು, ಹುಡುಗನಿಗೆ ಬೆಲ್ಟು ಏರಿಸಿ, ಆಗಷ್ಟೆ ಏಳುವ ಅವನ ಕೈಗೆ ಕಾಫಿ ಕೊಡುತ್ತಾ, ಕೆಲವೊಮ್ಮೆ ಎದ್ದೇ ಇರದ ಅವನನ್ನು ಎಬ್ಬಿಸಿ ಮಕ್ಕಳನ್ನು ಬಿಟ್ಟು ಬರಲು ದಬ್ಬಿ, ಅದಕ್ಕವನು ಏನೋ ಮಂತ್ರ ಗೊಣಗುತ್ತಿದ್ದರೆ ಅದಕ್ಕೆ ಲಕ್ಷ್ಯ ಕೊಡದೆ, ಆಗೀನ ಮಟ್ಟಿಗೆ ತಿಂಡಿ ಮಾಡಿ, ಹೊರಗೆ ಸೋಫದ ಮೇಲೆ ನೇತಾಡುತ್ತಿದ್ದ ಟವಲ್ ಎತ್ತಿಟ್ಟು, ಅರಬರೆ ಬಾಯ್ದೆರಿದಿದ್ದ ಬಾಸ್ಕೇಟ್ ಸರಿ ಪಡಿಸಿ. ಅಲ್ಲಲ್ಲೆ ಬಿದ್ದಿದ್ದ ಪೇಪರ್ ಜಾಗಕ್ಕೆ ತಳ್ಳಿ, ಲಾಡಿ ಬಿಟ್ಟುಕೊಂಡು ಬೆಡ್‍ರೂಮಿನಲ್ಲೆಲ್ಲೋ ನೇತಾಡುವ ಅವನ ಬರ್ಮುಡಾವನ್ನು ಬೇಕೆಂದೇ ಸಶಬ್ದವಾಗಿ ಎರಡೇ ಬೆರಳಲ್ಲಿ ಎತ್ತಿ ನೇತಾಡಿಸುತ್ತಾ ತಪಕ್ಕನೆ ಬಕೀಟಿನಲ್ಲಿ ಬಿಟ್ಟು, ಕೆದರಿದ್ದ ಬೆಡ್ ಸ್ಪ್ರೆಡ್ ಸರಿಪಡಿಸಿ, ಐರನ್ನಿಗೆ ಸ್ವಿಚ್ಚು ಒತ್ತಿ, ಅಷ್ಟೊತ್ತಿಗೆ ಅವನ ಸ್ನಾನ ಆಗಿದ್ದರೆ ಟೇಬಲ್ ಮೇಲೆ ತಿಂಡಿ ಜೋಡಿಸಿ ಅದರ ಮಧ್ಯೆ ತನ್ನ ಸ್ನಾನ, ಡ್ರೆಸ್ಸು, ನಿನ್ನೆನೆ ನೆನಪಿರಿಸಿಕೊಂಡಿದ್ದ ಕೆಲಸ ಜೊತೆಗೆ ಸಂಜೆ ಬರುವಾಗ ತರಲೇಬೇಕಾದ ಸಾಮಾನಿನ ಲಿಸ್ಟು ಇವನ್ನೆಲ್ಲಾ ಸರಿಪಡಿಸಿಕೊಂಡು ಚಾರ್ಜಿಗೆ ಹಾಕಿದ್ದ ಮೊಬೈಲು ಎತ್ತಿಕೊಂಡು, ಚಪ್ಪಲಿ ಸಿಕ್ಕಿಸಿಕೊಳ್ಳುತ್ತಾ ಬಾಯಲ್ಲೇ ಹಿಡಿದಿದ್ದ ಕ್ಲಿಪ್ಪನ್ನು ತಲೆಗೆ ತೂರಿಸಿ, ರಾಮಾ ರಾಮಾ ಏನಿದು..? ಅವಳೇನು ಹೆಣ್ಣಾ ಗೂಡ್ಸ್ ಗಾಡಿನಾ..?
ಅದೇ ಅವನ ಲಿಸ್ಟ್ ನೋಡಿ, ಬೆಳಿಗೆದ್ದಾ, ಕಾಪಿ,ಶೇವಿಂಗ್,ತಿಂಡಿ, ಮಟ್ಟಸವಾಗಿ ಐರನ್ ಮಾಡಿದ್ದ ಡ್ರೆಸ್ಸು ಏರಿಸಿಕೊಂಡು ಜಿಪ್ ಎಳೆದುಕೊಳ್ಳುವಾಗ ಕರ್ಚೀಫು ಕೊಡಲು ಹೆಂಡತಿಯೇ ಬೇಕು. ಅಷ್ಟಾಗಿ ಕೈಗೆ ಪ್ಲೆಟು ಎತ್ತಿಕೊಂಡು ತಿನ್ನುತ್ತಾ ಅದನ್ನೂ ಸಿಂಕಿಗೂ ಇಡದೆ, ಕೂತಲ್ಲೇ ಟೀಗೆ ಕೂಗು ಹಾಕುತ್ತಾ, ಕೈಯೊರೆಸಿಕೊಂಡು ಎದ್ದು ಬರುವ ಅವನಿಗೆ ದಿನವಿಡೀ ಬಿಜಿ ಎನ್ನುವ ಲೆಕ್ಕಾಚಾರದಲ್ಲಿ "ಹ್ಯಾಗೆ" ಎಂದು ಕೂತುಕೊಂಡು ಕೇಳಬೇಕೆನ್ನಿಸುತ್ತದೆ ನನಗೆ. ಕಾರಣ ಆಫೀಸಿನ ಕೆಲಸ ಬಿಡಿ ಆಕೆ ಅದನ್ನೂ ಮಾಡುತ್ತ ಮತ್ತೆ ಸಂಜೆ ಬಂದು ಮತ್ತೆ ರೂಟಿನ್ ಶುರು ಮಾಡಿಕೊಳ್ಳುತ್ತಾಳಲ್ಲ ಆಗಲೂ ಒಂದಿಷ್ಟಾದರೂ ಕೆಲಸ ನಾಳೆಗಿರಲಿ ಎಂದಾಕೆ ಎತ್ತಿಟ್ಟಿದ್ದೇ ಇಲ್ಲ. ಅಕ್ಕಿ ರುಬ್ಬಿ ಇಡದಿದ್ದರೆ ಹುಳಿ ಬಾರದೆ ಹೇಗೆ ದೋಸೆಯಾಗುವುದಿಲ್ಲವೋ ಹಾಗೆ ಮರುದಿನಕ್ಕೆ ಬೇರೆಯದೇ ಕೆಲಸದ ಲಿಸ್ಟು ಆಕೆಯ ತಲೆಯಲ್ಲಿ ಕಾಯುತ್ತಲೆ ಇರುತ್ತದೆ.
ಇದೆಲ್ಲಾ ಮುಗಿದು ರಾತ್ರಿ ಹನ್ನೊಂದಕ್ಕೆ ಮಂಚಕ್ಕೆ ತಲೆಯಿಡುತ್ತಿದ್ದರೆ ಬೇಕಿದೆಯೋ ಬೇಡವೋ ವಿಚಾರಿಸಿಕೊಳ್ಳದೇ ಅವನೊಂದಿಗೆ ದೇಹ ಉಜ್ಜುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಾಗ, ಮನಸ್ಸು ಎಲ್ಲಿ ಯಾವ ಪಾತ್ರೆಯ ಕರೆಯ ಜೊತೆ ತೊಳೆದು ಸರಿದು ಹೋಗಿರುತ್ತದೋ ಗೊತ್ತಾಗುವುದಾದರೂ ಹೇಗೆ..? ಆ ಹೊತ್ತಿಗಿನ ಮಾನಸಿಕ ಬಣ್ಣಗಳನ್ನು ಗುರುತಿಸಲು ಕತ್ತಲೆಗೆ ಶಕ್ತಿ ಇದ್ದಿದ್ದರೆ ಅಥವಾ ಆ ರಾತ್ರಿಗಳಿಗೆ ಕಣ್ಣಿದ್ದಿದ್ದರೆ ಅದರ ಕತೆಯೇ ಬೇರೆಯಾಗುತ್ತಿತ್ತೇನೋ. ಆದರೆ ಅದಾವುದೂ ಉಹೂಂ ಆಗುವುದೇ ಇಲ್ಲ. ಎಲ್ಲಾ ದುಮ್ಮಾನಗಳು ಕಾವಳದಲ್ಲೇ ಕಳೆದುಹೋಗುತ್ತವೆ. ಬೇರೆ ದಾರಿ ಮತ್ತು ಅವಕಾಶ ಎರಡೂ ಇರುವುದೇ ಇಲ್ಲವಲ್ಲ.
ಪ್ರತಿ ನಿತ್ಯದಂತೆ ಬದುಕಿನುದ್ದಕ್ಕೂ ಹೀಗೆ ಮಾಡಿಕೊಂಡೆ ಬದುಕು ಮಕ್ಕಳು ಮನೆ ನಡೆಸುವ ಆಕೆಯ ಪರಿಚಾರಿಕೆಗೆ ಯಾವ ಐ.ಎಸ್.ಓ. ಸ್ಟಾಂಡರ್ಡು ಸರ್ಟಿಫಿಕೇಟು ಕೊಡಬಲ್ಲದು..? ಇದ್ದಿದ್ದೇ ಆಗಿದ್ದರೆ ಯಾವ ಥೌಸೆಂಡೂ ಸಾಲುತ್ತಿರಲಿಲ್ಲ. ಅದರೆ ಅದಿಷ್ಟೆಲಾ ಜಗತ್ತಿಗೆ ಬೇಕಿಲ್ಲ ಅವನಿಗೆ ಮಾತ್ರ ಗೊತ್ತಾದರೆ ಸಾಕು ಎಂದಾಕೆ ಮನದಲ್ಲೇ ಮುದಗೊಳ್ಳುತ್ತಿದ್ದರೆ, ಎಲ್ಲಾ ಆದ ನಂತರವೂ, "ಹೆಂಗಸರಿಗೆ ಇಂಟರೆಸ್ಟೇ ಇಲ್ಲ ಮಾರಾಯ.." ಎಂದು ಡಾಕ್ಟರೇಟ್ ಪ್ರಧಾನ ಮಾಡುತ್ತಿದ್ದರೆ ಬದುಕು ಒರಳು ಕಲ್ಲಲ್ಲಿ ಗರಗರ ಆಡಿದಂತಲ್ಲದೆ ಜೋಕಾಲಿಯಾದೀತಾದರೂ ಹೇಗೆ..? ಉತ್ತರಿಸಬೇಕಾದ ಆಕೆಗೆ ಬೇರೆ ಆಪ್ಶನ್ನು ಇಲ್ಲ. ಇದ್ದ ಆವನಿಗೆ ಅದು ಬೇಕಿಲ್ಲ. ಮನಸ್ಸು ಮಾತ್ರ ಪಿಸುನುಡಿಯುತ್ತಲೇ ಇರುತ್ತದೆ.. ಇಷ್ಟೆನಾ ಬದುಕು..? ಗೊತ್ತಿಲ್ಲ. ಆಕೆಯ ಕಣ್ಣಿಗೆ ದೃಷ್ಠಿ ಬೇರೆಸಲಾಗದ ನಾನು ಸುಮ್ಮನೆ ಶೂ ಲೇಸು ಬಿಗಿವ ನೆಪದಲ್ಲಿ ಕೆಳಗೆ ನೋಡುತ್ತೇನೆ. ಅಷ್ಟಕ್ಕೂ ತಲೆ ಎತ್ತಲು ನನಗಾದರೂ ಯಾವ ಸಮಜಾಯಿಸಿ ಬಾಕಿ ಉಳಿದಿರುತ್ತೆ ಅಂಥಾ ಹೊತ್ತಿನಲ್ಲಿ.