Sunday, August 11, 2013

ಅವಳ ಸ್ವಗತಗಳಿಗೆ ನಾನು ದನಿಯಾಗುತ್ತಾ...!!!


ಜೀವನದ ಈ ತಿರುವಿನಲ್ಲಿ ಬಂದು ನಿಂತ ಅವಳ ಬಳಿಯಲ್ಲಿ, ಯಾಕೆ ಅವನಿಗೆ ಒಲಿದೆ ಎಂಬುವುದರ ಬಗ್ಗೆ ಸ್ಪಷ್ಟ ಉತ್ತರವಿಲ್ಲ. ಆಕೆಯಷ್ಟೆ ಯಾಕೆ...? ಈ ಜಗತ್ತಿನಲ್ಲಿ ಯಾವುದೇ ಹೆಣ್ಣಿನ ಈ ರೀತಿಯ ಕಥೆಯ ಹಿಂದೆ ಇಂತಹದ್ದೊಂದು ಪ್ರಶ್ನೆಯನ್ನು ಇರಿಸಿದರೆ ಯಾವ ಬಿಂದುವಿನ ಬಳಿ ತಾನು ಬದಲಾದೆನೆಂದು ಹೇಗೆ ಹೇಳಿಯಾಳು... ? ಗೆದ್ದ ಗಂಡಸಾದರೂ ಹೇಗೆ ಗೆದ್ದೆ... ಎಲ್ಲಿ ಗೆದ್ದೆ ಅವಳನ್ನು ಎಂದು ಹೇಗೆ ಹೇಳಿಯಾನು... ? 
ಅಸಲಿಗೆ ಅಲ್ಲಿ ಎಲ್ಲವೂ ಗೆಲುವುಗಳೇ ... ಎಲ್ಲವೂ ಸೋಲುಗಳೇ ಪರಸ್ಪರರಿಗೆ, ಹಾಗಿದ್ದಾಗ ಅದೊಂದು ಬಯಸುವ ಸೋಲು ಮತ್ತು ಗೆಲುವಿನ ಸಂಗಮವಲ್ಲದೇ ಬೇರೇನಲ್ಲ... ಅದೇನು ಮೈಲಿಕಲ್ಲುಗಳೇ...? ಗುರುತಿಸಿಟ್ಟುಕೊಳ್ಳಲು. ಅದೇನಿದ್ದರೂ ಮನಸ್ಸು ಮನಸ್ಸುಗಳು ಸ೦ಬಂಧವಷ್ಟೆ... ಅಲ್ಲೇನಿದ್ದರೂ ಅನುಭೂತಿಗಳಷ್ಟೇ...! ಅವುಗಳನ್ನು ಬೆಸೆದುಕೊಳ್ಳಲು ಇಬ್ಬರಿಗೂ ಅದರಲ್ಲೂ ಗಂಡಸಿಗೆ ಗೊತ್ತಿರಬೇಕಷ್ಟೆ... !!
ಅದಕ್ಕೂ ಮಿಗಿಲಾಗಿ ಗಂಡಸಾದವ ಯಾವಾಗಲು ಸೋತು ಹೆಣ್ಣನ್ನು ಗೆಲ್ಲಬೇಕೆನ್ನುವ ನಿಜವಾದ ಸೂತ್ರ ಇವತ್ತಿಗೂ ತುಂಬ ಪ್ರಸ್ತುತ ಎನ್ನುವುದು ತುಂಬಾ ಗಂಡಸರಿಗೆ ಅರ್ಥವಾಗದಿರುವುದು ಖೇದ. ಜಗತ್ತು ಮುಂದುವರಿಯುತ್ತಿರುವಾಗಲೂ ಅದೇ ಹರಟೆ ಕಟ್ಟೆಯಲ್ಲಿ ಸಮಯ ಕಳೆದು " ನ್ಯೂಸ್ " ಬದಲಾಗಿ ಕಾರ್ಟೂನ್/ಫ್ಯಾಷನ್ ನೋಡುತ್ತ ಸಮಯ ಕಳೆವ, ಕಿರು ಬೆರಳಿನಲ್ಲಿ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಮೂಗು ಗಿವುಟಿ... ಆ ಉತ್ಪಾದನೆಯನ್ನ ಕುಳಿತಲ್ಲೇ ಮಾಯ ಮಾಡುತ್ತಾ... ಕೆಲವೊಮ್ಮೆ ವಾಕಿಂಗ್ ಹೊರಟರೆ ಎಗ್ಗಿಲ್ಲದೆ ಎಲ್ಲೆಂದರೆ ಅಲ್ಲಿ ಕ್ಯಾಕರಿ ಉಗುಳುವುದು... ಜನ ನೋಡಲಿ ಇಲ್ಲದಿರಲಿ ರಪರಪನೇ ಬುಡ ಕೆರೆದು ಕೊಂಡುಬಿಡುವ... 
            ಅದೇ ಹಳೆ ಲುಂಗಿಯಲ್ಲಿ ಸಶಬ್ದವಾಗಿ ಹಿಂಗಾಳಿ ಬಿಡುವುದು... ಮನೆಯಲ್ಲಿಯೂ ಬಾಗಿಲು ತೆಗೆದುಕೊಂಡು ನಿಂತುಕೊಂಡೆ ಉಚ್ಚೆ ಹೊಯ್ಯುವುದು... ಬರೀ ಕಾಚಾದಲ್ಲೇ ಓಡಾಡಿಕೊಂಡಿರುವುದು... ಸಾಕ್ಸ್ ಎಲ್ಲೋ ಶೂ ಎಲ್ಲೋ... ಹಾಸಿಗೆಯ ಮೇಲೆ ಆಗಾಗ ಭಾರತದ ಭೂಪಟ... ಹಲ್ಲುಜ್ಜದ ಬಾಯಿಯನ್ನ ನೊಣಗಳಿಗೆ ಹೆದ್ದಾರಿಯನ್ನಾಗಿಸಿ ಅಂಗಾತ ಹೊಟ್ಟೆ ಮೇಲೆ ಮಾಡಿ ಬಿದ್ದುಕೊಳ್ಳೊದು... ರಾತ್ರಿ ಮಲಗುವ ಮುನ್ನವಾದರೂ ಫ್ರೇಶ್ಶಾಗಿ ಇರಬೇಕೆನ್ನುವ ಸಣ್ಣ ಜ್ಞಾನವೂ ಇಲ್ಲದ...  ತನ್ನದೇ ಜಗತ್ತಿನಲ್ಲಿ ಅಪ್ಪಟ ಕಟ್ಟಳೆಯಲ್ಲಿ ಬದುಕಿ ನೂರು ವರ್ಷ ತೆಗೆಯುವುದಕ್ಕಿಂತಲೂ ಸ್ವಚ್ಛಂದವಾಗಿ ಜಗತ್ತು ನೋಡುವ ... ಸುಂದರ ಬಾಳು ಕಾಣುವದನ್ನು ತಪ್ಪು ಅನ್ನುತ್ತೀಯಾ...? ಇವೆಲ್ಲಾ ಚಿಕ್ಕ ಅಡ್ಜ್‌ಸ್ಟ್‌ಮೆಂಟ್‌ನಲ್ಲಿ ಸರಿಯಾಗಬಹುದಾದ ಕಿರ್ಕಿರಿಗಳು ಅನ್ನಿಸುತ್ತದನೋ...? ಆದರೆ ಅದೆಲ್ಲವನ್ನೂ ನಿರ೦ತರವಾಗಿ ಅನುಭವಿಸೋದಿದೆಯಲ್ಲ ಅದನ್ನು ಅನುಭವ ಮಾತ್ರ ತಿಳಿಸಬಲ್ಲದು.
          ಬೇರೇನೂ ಇಲ್ಲದಿದ್ದರೂ ನಮ್ಮ ಪಿರಿಯಡ್ ಟೈಂನಲ್ಲಾದರೂ ಸೊಂಟ ನೋವೆಂದರೆ ಕೊಂಚ ಒತ್ತಲೇ ಅಂತ ಕೇಳಿದರೂ ಸಾಕು ಅರ್ಧ ನೋವು ಮಾಯವಾಗಿ ಬಿಡುತ್ತೇ... ಈ ಎಲ್ಲ ವಿಷಯಗಳು ಸೆಕ್ಸ್‌ಗಿಂತಲೂ ಅದ್ಭುತ ಸುಖವನ್ನ, ನೆಮ್ಮದಿಯನ್ನ ಹೆಂಡತಿಯರಿಗೆ ಕೊಡುತ್ತವೆ ಅನ್ನೋದು ಯಾವಾಗ ಈ ಗಂಡಸರಿಗೆ ಅರ್ಥವಾಗುತ್ತೆ. ಅಸಲಿಗೆ ಎಲ್ಲೆಡೆಗೂ ಅನೈತಿಕ ಸಂಬಂಧಗಳಿಗೆ ಹೆಣ್ಣೇ ಕಾರಣವೆನ್ನುತ್ತಾರಾದರೂ ವಾಸ್ತವವಾಗಿ ನೋಡಿದರೆ ಗಂಡಸರೇ ಸರಿ ಇಲ್ಲ. ಅದಕ್ಕಾಗೇ ಈ ಅನೈತಿಕಗಳೂ, ತರಹೇವಾರಿ ಕೌಟುಂಬಿಕ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತಿವೆ. 
         ಆಫ್ ಕೋರ್ಸ್ ಹೆಣ್ಣಾದವಳು ಹೆಚ್ಚಿನಾಂಶ ಗಂಡನ ದರ್ಪ, ಅಧಿಕಾರವನ್ನೂ ಎಂಜಾಯ್ ಮಾಡುತ್ತಾಳೆನ್ನುವುದು ಸುಳ್ಳಲ್ಲವಾದರೂ ಅದು ಪ್ರೀತಿ ಭರಿತವಾಗಿರಬೇಕು. ತನ್ನೆಡೆಗೊಂದು ಕನ್ಸ್‌ರ್ನ ಇರಬೇಕೆಂದು ಬಯಸುತ್ತಾಳೆ. ಪಂಚ ಪಾಂಡವರನ್ನೇ ಭರಿಸಬೇಕಾಗಿ ಬಂದದ್ದು ದ್ರೌಪದಿಯ ಮೇಲೆ ನಡೆದ ದೌರ್ಜನ್ಯ ಎಂದೇ ಎಷ್ಟೋ ಕಡೆಯಲ್ಲಿ ಗುರುತಿಸಲಾಗುತ್ತಿದೆ. ಆದರೆ ನಿಜವಾದ ಪ್ರೇಮದಿಂದ ಬಂದಿದ್ದರೆ, ಆಕೆಗೆ ಶತ ಕೌರವರನ್ನೂ ಬೇಕಾದರೂ ಭರಿಸಬಲ್ಲ ತಾಕತ್ತಿತ್ತು. ಅದಕ್ಕೆ ಬೇಕಾದ ಮಾನಸಿಕ ಪ್ರಭುದ್ಧತೆಯ ಜೊತೆಗೆ ನೈಜ ಮನ್ನಣೆ ನೀಡಬೇಕಾದ ಜಾವಾಬ್ದಾರಿ ಮಾತ್ರ ಪುರುಷರದಲ್ಲದೇ ಇನ್ನೇನು...? ನಿಸ್ವಾರ್ಥ ಪ್ರೀತಿಗೆ ಹೆಣ್ಣು ಒಲಿಯುತ್ತಾಳೆನ್ನುವುದರಲ್ಲಿ ಇವತ್ತಿಗೂ ಸಂಶಯವಿಲ್ಲ.
         ಯಾವುದೇ ಗಂಡಸರು ಹೆಣ್ಣಿನ ಆಸೆಗಳನ್ನು ಭೌತಿಕವಾಗಿ ನೂರಕ್ಕೆ ನೂರರಷ್ಟು ಪೂರೈಸುತ್ತಾರೇನೋ, ಆದರೆ ಮಾನಸಿಕವಾಗಿ ಅವರಿಗೆ ಬೇಕಾದ ಜೊತೆಯನ್ನು ನೀಡುವಲ್ಲಿ ವಿಫಲವಾಗುತ್ತಿರುವುದರಲ್ಲಿ ಸ೦ದೇಹವೇ ಇಲ್ಲ. ಹೆಣ್ಣಿಗೆ ಒಂದು ಬೊಗಸೆ ಪ್ರೇಮವನ್ನು ಪ್ರಾಮಾಣಿಕವಾಗಿ ಕೊಡೋದನ್ನ ಈ ಲೋಕದಲ್ಲಿ ಪ್ರತಿಯೊಬ್ಬ ಗಂಡಸು ಅರಿತ ದಿನದಿ೦ದಲೇ ಅನೈತಿಕತೆ ನಾಶವಾಗಬಲ್ಲದು. ಹೊರತಾಗಿ ಬೇರೇನೂ ಕಾರಣವಲ್ಲ. ಹೆಣ್ಣು ಹೇಗೆ ಪ್ರೇಮಕ್ಕೆ... ಪ್ರೀತಿಗೆ ಸೋಲುತ್ತಾಳೋ... ಅಷ್ಟು ಸುಲಭವಾಗಿ ಶಯನೋತ್ಸವಕ್ಕೆ ಮಂಚಕ್ಕೆ ಬಂದು ಬಿಡಲು ಸಜ್ಜಾಗಲಾರಳು, ಮತ್ತದು ಅವಳಿಂದ ಸಾಧ್ಯವಿಲ್ಲ ಕೂಡಾ... ! 
           ಮನಸ್ಸಿನಲ್ಲಿ ಉಳಿದು ಬಿಟ್ಟಿದೆ. ಇವತ್ತಿಗೂ ಮನಸ್ಸಿಲ್ಲದ ಮನಸ್ಸಿನಿಂದ ದೈಹಿಕವಾಗಿ ಹೆಣ್ಣನ್ನು ಸೇರೋದಿದೆಯಲ್ಲ ಅದರಷ್ಟು ನೀಚ ಕೆಲಸ ಈ ಲೋಕದಲ್ಲಿ ಮತ್ತಾವುದೂ ಇರಲಾರದು. ಎಷ್ಟೊ ಜನ ಗಂಡಸರಿಗೆ ಇವತ್ತಿಗೂ ಎರಡು ಸೆಕ್ಸ್‌ನ ಮಧ್ಯೆ ಕನಿಷ್ಟ ಅವಧಿಯ ಅಂತರವಾದರೂ ಇರಬೇಕೆನ್ನುವ ಪರಿಜ್ಞಾನವೂ ಇಲ್ಲ. ಅಲ್ಲೂ ಒಂದೇ ಮುಖ್ಯವಾಗುತ್ತಿದೆಯೇ ಹೊರತಾಗಿ ಹೆಂಡತಿಗೆ ಬೇಕೆ ಬೇಡವೇ... ಅವಳ ಮನಸ್ಥಿತಿ ಹೇಗಿದೆ... ಇತ್ಯಾದಿ ಎಲ್ಲವೂ ಅವರಿಗೆ ಸೆಕ್ಸ್ ಬೇಕೆನ್ನುವ ಆಸೆಯೆದುರಿಗೆ ಗೌಣವಾಗುತ್ತದೆ.  ತುಂಬಾ ಕೇಸ್‌ಗಳಲ್ಲಿ ಸಾಮಾಜಿಕ ಭದ್ರತೆಗೊಸ್ಕರ ಅವಲ೦ಭಿಸಿರುವುದರಿಂದಾಗಿ ಹೆಣ್ಣು ಗಂಡಸಿನ ಎಲ್ಲಾ ರೀತಿಯ ಅವಗುಣಗಳನ್ನು ಗಣಿಸಿಯೂ ಅವನೊಂದಿಗೆ ಬಾಳುತ್ತಾಳೆ.
ಕೊನೆಯಲ್ಲಿ ಒಂದೇ ಒಂದು ಮಾತು. ಎಲ್ಲರಿಗೂ ಇದು ... ಏನು ಗೊತ್ತೆ... ?
ಈ ಜಗತ್ತಿನ ಎಲ್ಲ ಸ್ತ್ರೀಯರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಅಸೆಗಳು ಗೂಡು ಕಟ್ಟಿಕೊ೦ಡೇ ಇರುತ್ತವೆ. ಆದರೆ ಅವರಿಗೆ ಬದುಕಿನ ಓಟದಲ್ಲಿ ಅದಕ್ಕೊಂದು ಅಗತ್ಯದ ಪ್ರಿಯಾರಿಟಿ ಇರುವುದಿಲ್ಲ ಅಷ್ಟೆ. ಎಲ್ಲರೂ ಯಾಕೆ ಹೀಗೆ ಮಾಡುವುದಿಲ್ಲವೆಂಬ ಪ್ರಶ್ನೆ ಏನಾದರು ಇದ್ದರೆ ಅದಕ್ಕೆ ಕಾರಣ " ಕೇವಲ ಅವಕಾಶ ಮತ್ತು ಸೌಲಭ್ಯ ಹಾಗು ಅವರಲ್ಲಿ ಅಂತಹದ್ದೊಂದು ಧೈರ್ಯದ ಕೊರತೆಯೇ " ಹೊರತಾಗಿ ಅವರಿಗೇನು ಆಸೆ ಇಲ್ಲವೆಂದಲ್ಲ..."
ಹೀಗೆ ಅವಳು ಗಂಟೆಗಟ್ಟಲೆ ಮಾತಾಡುತ್ತಿದ್ದರೆ ನನ್ನ ಧ್ವನಿಗೆ ಅಲ್ಲಿ ಜಾಗವಿರಲಿಲ್ಲ. ಅಷ್ಟಕ್ಕೂ ಒಂದು ನೊಂದ ಜೀವಕ್ಕೆ ಅದರ ಧ್ವನಿಗೆ ಕಿವಿಯಾಗುವುದಕ್ಕಿಂತ ದೊಡ್ಡ ಸಾಂತ್ವನ ಬೇಕಾ...? ಅಷ್ಟೆ. ನಾನು ಕುಳಿತೆ ಇದ್ದೆ. ಅವಳ ಧ್ವನಿಗೆ ಕಿವಿಯಾಗುತ್ತಾ. ಅಷ್ಟಕ್ಕೂ ನಾನು ಹೋದದ್ದೇ ಅದಕ್ಕಾಗಿ. ಅಲ್ಲಿ ಆ ದಿನ ಸೇರಿದವರದೆಲ್ಲರದೂ ಒಂದೊಂದು ಕಥೆ. ಉಳಿದಿದ್ದನ್ನು ಇನ್ಯಾವತ್ತಾದರೂ ಬರೆದೇನು.

Friday, August 9, 2013

ಸಾಹಿತ್ಯದ ಗು೦ಪುಗಾರಿಕೆಯಲ್ಲೇ ಕಳೆದುಹೋಗುತ್ತಿರುವ ಸೃಜನ ಶೀಲತೆ.

( ಬರೆಯದಿದ್ದರೂ ಸಾಹಿತಿಯಾಗಿ ಚಲಾವಣೆಯಲ್ಲಿರುವವರನ್ನು ಅವರ ಸಾಹಿತ್ಯಕ್ಕಿಂತಲೂ ವ್ಯವಸ್ಥಿತವಾಗಿ ಮುಖ್ಯವಾಹಿನಿಯಲ್ಲಿ ಚಲಾವಣೆಯಲ್ಲಿಡಲಾಗಿದೆಯೇ ಹೊರತಾಗಿ ಸರಿಯಾದ ಮೂರ್ತ ರೂಪವೇ ಇಲ್ಲದ ಬರಹಗಳನ್ನು ಕೇವಲ ಪ್ರಚಾರದ ರೂಪದಲ್ಲಿ ಸಾಹಿತ್ಯವನ್ನಾಗಿಸಿ ಪ್ರಶಸ್ತಿಯತ್ತಲೂ ಎಳೆದ ಉದಾ. ನಮ್ಮ ಮುಂದಿವೆ )
ಇತ್ತೀಚಿನ ಸಾಹಿತ್ಯ ಮತ್ತು ಹಿರಿ-ಕಿರಿಯ ಸಾಹಿತಿಗಳ ಧೋರಣೆಗಳನ್ನು ಗಮನಿಸಿದರೆ ಬಹುಶ: ಇನ್ನೊಂದು ದಶಕದೊಳಗಾಗಿ ನಾವು ಸಾಹಿತ್ಯವೆಂದರೆ ನಿರ್ಧಿಷ್ಟ ಗುಂಪುಗಳಲ್ಲಿದ್ದರೆ ಮಾತ್ರ ಆತ ಬರೆದದ್ದು ಸಾಹಿತ್ಯ ಅಥವಾ ಆತ ಸಾಹಿತಿ ಎನ್ನುವ ಕಾಲ ಬರುತ್ತದಾ..? ನಿಸ್ಸಂಶಯ. ಯಾಕೆಂದರೆ ಕಳೆದ ಒಂದೂವರೆ ದಶಕಗಳಿಂದ ನಾನು ಗಮನಿಸುತ್ತಿರುವ ಸಾಹಿತ್ಯ ಲೋಕದಲ್ಲಿ ಇವತ್ತಿನ ದಿನದವರೆಗೂ ಬದಲಾಗುತ್ತಿರುವ ತೀವ್ರಗಾಮಿ ಗುಂಪುಗಾರಿಕೆಯ ಧೋರಣೆಯಿಂದಾಗಿ ಬಹುಶ: ಸಾಹಿತಿ ಮತ್ತು ಸಾಹಿತ್ಯಕ್ಕೆ ಹೊಸ ವಾಖ್ಯಾನ ರೂಪಿಸಬೇಕಾಗಿ ಬರುತ್ತದೇನೋ ಎನ್ನುವಂತಾಗಿ ಹೋಗಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ತಾಲೂಕಾ ಸಾಹಿತ್ಯ ಸಮ್ಮೇಳನದಿಂದ ಹಿಡಿದು ಯಾವುದೇ ಜಿಲ್ಲಾವಾರು ಕೊನೆಗೆ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದವರೆಗೂ ಗಮನಿಸುವಾಗ ಅಲ್ಲಿ ವಲಯವಾರು ಗುಂಪುಗಾರಿಕೆಯನ್ನು ಅದರ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. 
ಆಯಾ ಕಾಲಕಾಲಕ್ಕೆ ಬದಲಾಗುವ ಅಧ್ಯಕ್ಷರುಗಳಿಂದ ಹಿಡಿದು ಪದಾಧಿಕಾರಿಗಳವರೆಗೆ ಬೇಕಾದವರಿಗೆ ಇವತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಲು ಅವಕಾಶ ಲಭ್ಯವಾಗುತ್ತಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ. ಅದಕ್ಕಿಂತಲೂ ಮಿಗಿಲಾಗಿ ಆಯಾ ತಾಲೂಕು ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಸೋತು ಹೋಗುವ ಸಾಹಿತ್ಯ ಪರಿಷತ್ ಅಭ್ಯರ್ಥಿಗಳದ್ದೇ ಒಂದು ಬದಲಾದ, ಬಲವಾದ ಗುಂಪುಗಳು ಇನ್ನೊಂದೆಡೆಗೆ ಸೀಮಿತ ಮಟ್ಟದಲ್ಲಿ ಹೆಸರು ಪ್ರತಿಸ್ಪರ್ಧೆ ನಡೆಸಲು ಹೋರಾಟ ನಡೆದಿರುತ್ತದೆ. ಯಾಕೆ ಒಮ್ಮೆ ಈ ಅಧ್ಯಕ್ಷ ಪದವಿಯ ಹಣಾಹಣಿ ನಡೆದ ನಂತರದ ದಿನಗಳಲ್ಲಿ ಇವರೆಲ್ಲಾ ಸಾಹಿತ್ಯಿಕವಾಗಿ ಒಂದಾಗಬಾರದು. ಉಹೂಂ ಸಾಧ್ಯವೇ ಇಲ್ಲ. 
ಆಯಾ ಭಾಗದಲ್ಲಿ ಅವಕಾಶ ಪಡೆವ ಸಮ್ಮೇಳನಗಳು ಮತ್ತು ಆಗಾಗ ಕಾಲಕಾಲಕ್ಕೆ ನಡೆವ ಚರ್ಚೆಗಳು ಇತ್ಯಾದಿಗಳಲ್ಲಿ ಭಾಗವಹಿಸಿ ವಹಿಸಿಯೇ ಸಾಹಿತ್ಯ ಲೋಕದಲ್ಲಿ ಚಲಾವಣೆಗೆ ಬಂದು ಬಿಡುವವರೂ ಇಲ್ಲದಿಲ್ಲ. ಕವನ ಸಂಕಲನದ ಚರ್ಚೆ ಇರಲಿ, ವಿಮರ್ಶೆ ಇರಲಿ, ಹಳೆಯ ಮತ್ತು ಹೊಸ ತಲೆಮಾರಿನ ಸಾಹಿತ್ಯದ ಬೆಳವಣಿಗೆಗಳ ತುಲನಾತ್ಮಕ ಸಾಮೂಹಿಕ ದೃಷ್ಟಿಕೋನ ಎನ್ನುವ ಇಷ್ಟುದ್ದದ ಹೆಸರಿನ, ಹೆಸರಲ್ಲೇ ಗೊಂದಲ ಹುಟ್ಟಿಸುವ ಚರ್ಚೆ ಇರಲಿ, ಹಿರಿಯರೊಬ್ಬರಿಗೆ ಅಭಿನಂದನಾ ಗ್ರಂಥ ಸಮರ್ಪಣೆ, ಅದರ ಚರ್ಚೆ, ಬಿಡುಗಡೆ, ಕೊನೆಯಲ್ಲಿ ಹಿರಿಯ ಸಾಹಿತಿಯೊಬ್ಬರು ತೀರಿಕೊಂಡಾಗಿನ ಅಶ್ರು ತರ್ಪಣ ಕಾರ್ಯಕ್ರಮವಿರಲಿ... ಇತ್ಯಾದಿಗಳ ಯಾವುದೇ ಸಮಾರಂಭವಿರಲಿ. ಅಲ್ಲೆಲ್ಲಾ ಆಯಾ ಭಾಗದಲ್ಲಿ ನಿರ್ದಿಷ್ಟ ಸಂಗಡಿಗರದ್ದೇ ಗುಂಪುಗಳು ಭಾಗವಸಿರುತ್ತವೆ. ಆಯಾ ಗುಂಪಿನ ವ್ಯಕ್ತಿಗಳು ಭಾಗವಹಿಸಿದ್ದರೆ ಅವರ ವಿರೊಧಿ ಗುಂಪು ಅಲ್ಲಿ ತಲೆ ಹಾಕೋದಿಲ್ಲ. ಅವರ ಪಾಡಿಗೆ ಅವರು ಇವರನ್ನು ಬೈಯುತ್ತಾ ಗಂಭೀರ ಚರ್ಚೆಗಿಳಿದಿರುತ್ತಾರೆ. ಇಲ್ಲ ಒಬ್ಬರನ್ನು ಕರೆದರೆ ಇನ್ನೊಬ್ಬರನ್ನು ಶಿಫಾರಸ್ಸು ಮಾಡುವ ವಶೀಲಿಯೂ ಇರುತ್ತದೆ.  
       ಯಾವುದೇ ಇವತ್ತಿನ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದವರ, ಪರಿಷತ್ ಖರ್ಚಿನಲ್ಲಿ ಬಿಡುಗಡೆಯಾದವರ ಪುಸ್ತಕಗಳ ಲೇಖಕರ ಹೆಸರು ಇತರ ವಿವರ ಜಾಲಾಡಿದರೆ ಸಾಹಿತ್ಯಕ್ಕೆ ಅವರ ಕೊಡುಗೆ ಏನು ಎನ್ನುವುದು ನಿಚ್ಚಳ. ಇದರಲ್ಲಿ ನಿಜವಾದ ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿರುವವರು ಬಹಳವೆಂದರೆ ಒಂದ್ಹತ್ತು ಶೇ. ಇದ್ದಾರು ಅಷ್ಟೆ. ಉಳಿದಂತೆ ಪೇಪರು ಮತ್ತು ಪಬ್ಲಿಸಿಟಿ ಹಾಗು ಸಮ್ಮೇಳನದ ಗಾದಿಯೇರಲು ಹವಣಿಸಿದವರಲ್ಲಿ ಎಷ್ಟು ಜನರ ಸಾಹಿತ್ಯ ಇವತ್ತಿನ ಕನ್ನಡದ ದಿಗ್ಗಜ ಪತ್ರಿಕೆಗಲ್ಲಿ ಪ್ರಕಟವಾಗುವ ಅರ್ಹತೆ ಪಡೆದಿವೆ...? ಇದರರ್ಥ ಎಲ್ಲಾ ಪತ್ರಿಕೆಯಲ್ಲೂ ಪ್ರಕಟವಾಗೋದೆಲ್ಲಾ ಅದ್ಭುತ ಸಾಹಿತ್ಯವೆಂದಲ್ಲ. ಆದರೆ ಇವತ್ತಿಗೂ ಪ್ರತಿ ಹೊಸಪತ್ರಕರ್ತನಿಗೆ ಅಲ್ಟಿಮೇಟ್ಲಿ ದಶಕಗಳಿಂದ ಕಾಲೂರಿ ನಿಂತ ಕನ್ನಡ ಪತ್ರಿಕೆಗಳಲ್ಲಿ ಕೆಲಸ ಮಾಡಬೇಕು ಎಂದು ಅನ್ನಿಸುವ ಮಾತು ಎಷ್ಟು ಹಸಿ ಸತ್ಯವೋ... ಇತ್ತೀಚಿನ ಬರಹಗಾರರಿಗೆ ಕನಿಷ್ಟ ಅವರ ಬರಹಗಳು ಪ್ರಜಾವಾಣಿ, ಸುಧಾ, ತರಂಗದ, ಕ.ಪ್ರ. ವಿಜಯವಾಹಿನಿ. ವಿ.ಕ ದ. ಸಖಿಯಲ್ಲಿ -  ಸಾಪ್ತಾಹಿಕದಲ್ಲಿ ಪ್ರಕಟವಾಗಬೇಕೆನ್ನುವ ಒಳಾಭಿಲಾಷೆ ತುಡಿತಗಳಿರುವುದು ಅಷ್ಟೆ ನಿಜ. 
           ಹೀಗಿದ್ದಾಗ ಎಷ್ಟೆ ಇಲ್ಲವೆಂದರೂ ಪ್ರಜಾವಾಣಿ ಬಳಗ ಸೇರಿದಂತೆ  ತರಂಗ,ಸುದಾ, ಸಖಿ ಇತ್ಯಾದಿಗಳಲ್ಲಿ ಮತ್ತು ಇತ್ತೀಚೆಗೆ  ಕ್ವಾಂಟಿಟಿಯಿಂದಾಗಿ ಎಲ್ಲ ಹಿರಿ ಕಿರಿ ಬರಹಗಾರರನ್ನು ಆಪೋಶನವಾಗಿಸಿಕೊಂಡು ಹೆಸರು ಮಾಡಿದ ಕ. ಪ್ರ. ಗುಂಪಿನಲ್ಲಿ ಎಷ್ಟು ಜನ ಈ ಗಾದಿಸಾಹಿತಿಗಳು ಕಾಲಕಾಲಕ್ಕೆ ಕಾಣಿಸಿಕೊಂಡಿದ್ದಾರೆ...? ಒಂದೊಮ್ಮೆ ಹೆಸರು ಮಾಡಿ ಕೇವಲ ಸ್ಟೇಜಿಗೇ ಸೀಮಿತರಾಗಿ ಹೋದ, ಕಳೆದ ತಲೆಮಾರಿನ ಸಾಹಿತಿಗಳು ಕೂಡಾ ಇವತ್ತೂ ಎಷ್ಟು ಜನ ನಿರಂತರತೆಯನ್ನು ಉಳಿಸಿಕೊಂಡಿದ್ದಾರೆ...? ಇನ್ನು ದೊಡ್ಡದೊಂದು ಸನ್ಮಾನ ಮತ್ತು ಪ್ರಶಸ್ತಿ ಬರುತ್ತಿದ್ದಂತೆ ಬರೆಯುವುದನ್ನೇ ನಿಲ್ಲಿಸಿ ಬಿಟ್ಟ ಕಳೆದೆರಡು ದಶಕಗಳಿಂದಲೂ ಬರೆಯದೇ ಸಾಹಿತಿಯಾಗಿ ಚಲಾವಣೆಯಲ್ಲಿರುವವರು ಎಷ್ಟು ಜನ ಬೇಕು ನಿಮಗೆ..? ಇವರೆಲ್ಲರನ್ನೂ ಅವರ ಸಾಹಿತ್ಯಕ್ಕಿಂತಲೂ ಬರೆದದ್ದಕ್ಕಿ೦ತಲೂ ವ್ಯವಸ್ಥಿತವಾಗಿ ಮುಖ್ಯವಾಹಿನಿಯಲ್ಲಿ ಚಲಾವಣೆಯಲ್ಲಿಡಲಾಗಿದೆಯೇ ಹೊರತಾಗಿ ಇವತ್ತಿಗೂ ಅಮುಖ್ಯ ಎನ್ನಿಸುವ ಸರಿಯಾದ ಮೂರ್ತ ರೂಪವೇ ಇಲ್ಲದ ಬರಹಗಳನ್ನು ಕೇವಲ ಪ್ರಚಾರದ ರೂಪದಲ್ಲಿ ಸಾಹಿತ್ಯವನ್ನಾಗಿಸಿ ಅವರನ್ನು ಪ್ರಶಸ್ತಿಯತ್ತಲೂ ಎಳೆದ ಉದಾ. ನಮ್ಮ ಮುಂದಿವೆ. 
          ಒಂದು ಸಾಹಿತ್ಯವನ್ನು ಎಷ್ಟು ಚೆನ್ನಾಗಿ ಮತ್ತು ಅಷ್ಟೆ ಕೆಟ್ಟದಾಗಿ ವಿಮರ್ಶೆ ಮಾಡಲು ಸಾಧ್ಯವೆನ್ನುವುದು ಹೇಗೆ ಸತ್ಯವೋ ಇದನ್ನು ಬಳಸಿಕೊಂಡೇ ಕೆಲವರನ್ನು ತುಳಿದದ್ದೂ, ಕೆಲವರನ್ನೂ ಬೆಳೆಸಿದ್ದು ಇದೇ ಗುಂಪು ಎಂಬುವುದು ಸಾಹಿತ್ಯದ ಇತ್ತೀಚಿನ ವಿಪರ್ಯಾಸ. ಇತ್ತಿಚಿಗೆ ಬರಹಗಳಲ್ಲಿ ಎಷ್ಟು ಜನ ಇವತ್ತಿಗೂ ಸಾಹಿತ್ಯಿಕವಾಗಿ ಜೀವಂತವಾಗಿದ್ದಾರೆ ಎಂದರೆ ಉತ್ತರ ನಿರಾಶೆ ಮೂಡಿಸುತ್ತದೆ. ಹಳೆಯ ದಾಖಲೆಗಳು ಬರೆದ ಬರಹಗಳ ಮೌಲ್ಯವನ್ನು ನಾನು ಕಡಿಮೆ ಮಾಡುತ್ತಿಲ್ಲ ಅಥವಾ ಅವನ್ನು ಗಣಿಸಬಾರದು ಎಂದು ನಾನಿಲ್ಲಿ ಪ್ರತಿಪಾದಿಸುತ್ತಿಲ್ಲ. ಆದರೆ ಇವರೊಂದಿಗೆ ಪ್ರಸ್ತುತದಲ್ಲಿರುವ ಆದರೆ ಇವರ ಸಂಪರ್ಕಕ್ಕೆ ಬಾರದಿರುವ ಆದರೆ ಪ್ರಸ್ತುತ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಅವರನ್ನು ಒಪ್ಪಿಕೊಂಡಿರುವ, ಆದರಿಸುವ ಓದುಗರು ಇರುವವರನ್ನು ಯಾಕೆ ಪರಿಗಣಿಸಲಾಗುತ್ತಿಲ್ಲ..? ಅದಕ್ಕಾಗಿ ಅವರೆಲ್ಲಾ ಇವತ್ತು ಇವುಗಳೆಲ್ಲದಕ್ಕಿಂತಲೂ ವೇಗವಾಗಿ ಮತ್ತು ಉತ್ತಮವಾಗಿ ಟ್ಯಾಬ್ಲಾಯಿಡ್‌ಗಳ ಮುಖಾಂತರ ಓದುಗರನ್ನು ಆವರಿಸಿಕೊಂಡಿದ್ದಾರೆ. ಆಶ್ಚರ್ಯವೆಂದರೆ ಇವತ್ತಿನ ಕೆಲವು ಟ್ಯಾಬ್ಲಾಯಿಡ್‌ಗಳು ಸಮಾಜ ಮುಖಿಯಾಗಿ ಬೆಳೆಯುತ್ತಿದ್ದರೆ ರಾಜ್ಯದ ಪ್ರಮುಖ ಪತ್ರಿಕೆಗಳು ಮಾತ್ರ ಅದೇ ಮಡಿವಂತಿಕೆ ಪ್ರದರ್ಶಿಸುತ್ತಲೇ ಇವೆ. 
           ಸಮ್ಮೇಳನ ಅಥವಾ ಸಾಹಿತ್ಯದ ಚಟುವಟಿಕೆಗಳು ನಡೆಯುವ ಈ ಸಂದರ್ಭದಲ್ಲಿ ಆಯ್ಕೆ ಮಾಡುವಾಗ ಇವರು ಅನುಸರಿಸುವ ಮಾನದ೦ಡ ಯಾವುದು ಹಾಗಿದ್ದರೆ...? ಬರಿ ಅವರೊಂದಿಗಿನ ಒಡನಾಟವೊಂದೇ ಮಾನದಂಡವಾಗುವುದಾದರೆ ನಾನೂ ತುಂಬಾ ಚೆನ್ನಾಗಿ ಸಂಬಂಧವಿರಿಸಿಕೊಳ್ಳಬಲ್ಲೆ ಎನ್ನುತ್ತಾರೆ ಕೆಲವರು. ಇದೇ ಕಾರಣಕ್ಕೆ ಇವತ್ತು ಗಡಿ ಭಾಷೆ ಮೀರಿ ಜನಪ್ರಿಯತೆ ಪಡೆದಿರುವ ಯಂಡಮೂರಿಯವರನ್ನು ವ್ಯವಸ್ಥಿತವಾಗಿ ಪ್ರತ್ಯೇಕಿಸಿದಂತೆ ಆಯಾ ಕಾಲ ಘಟಕ್ಕೆ ಅನುಗುಣವಾಗಿ ಭೈರಪ್ಪನವರು ನೇಪಥ್ಯದತ್ತ ಸರಿದರು ಎನ್ನುವುದನ್ನು ಗುಟ್ಟಾಗಿ ಒಪ್ಪಿಕೊಳ್ಳುತ್ತಾರೆ ಆ ಕಾಲದ ಬರಹಗಾರರು. ಆದರೆ ಹೀಗೆ ಗುಂಪುಗಾರಿಕೆಯನ್ನು ಮೆರೆದ ಜ್ಞಾನಪೀಠಿಗಳ ಮಟ್ಟ ಎಷ್ಟು,..?  ಯಾಕೆಂದರೆ ಇಂತಹ ಗುಂಪುಗಾರಿಕೆ ಹಿಂದಿರಲಿಲ್ಲವೆಂದಲ್ಲ. ಭೈರಪ್ಪನ೦ಥವರು ಅದನ್ನು ಪೋಶಿಸಲಿಲ್ಲ ಅಷ್ಟೆ. 
       ತಮ್ಮ ಪಾಡಿಗೆ ಪತ್ರಿಕೆಗಳಿಗೆ ಬರೆದುಕೊಂಡಿದ್ಡು, ಪ್ರಕಾಶಕರು ಕಾಯ್ದು, ಪ್ರಕಟಿಸಿ ನಿಮ್ಮ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದರೂ ಕೂಡಾ ನೀವು ಅವರ ಕಣ್ಣಿಗೆ ಬೀಳದೆ ಗುಂಪಿನಲ್ಲಿ ಗೋವಿಂದಾ ಆಗಿಬಿಡುತ್ತೀರಿ. ಅಸಲಿಗೆ ಎಲ್ಲಾ ರೀತಿಯ ಪುಸ್ತಕ ಬರಹಗಾರರು ಇದರಲ್ಲಿ ಬರುವುದಿಲ್ಲ ಆ ಪ್ರಶ್ನೆ ಬೇರೆ. ಆದರೆ ಅಪ್ಪಟ ಕಥೆ, ಕಾದಂಬರಿ ಮತ್ತು ವಿಮರ್ಶೆ ಬರೆದುಕೊಂಡು ನಿರಂತರವಾಗಿ ಪ್ರಮುಖ ನಿಯತಕಾಲಿಕೆಗಳಲ್ಲಿ ಸ್ಥಾನ ಉಳಿಸಿಕೊಂಡಿರೋ ಎಷ್ಟೋ ಬರಹಗಾರರು ಇವತ್ತಿಗೂ ಅವರವರ ಸ್ಥಳದಲ್ಲೇ ಅಪರಿಚಿತರು. ಒ೦ದೋ ಅದಕ್ಕೆ ಕಾರಣ ಅವರೊಂದಿಗರು ಅವರನ್ನು ಉದ್ದೇಶಪೂರ್ವಕವಾಗಿ ಬೆಳೆಯಲು ಬಿಡದಿರುವುದು. ಇಲ್ಲ ಅಗತ್ಯ ಸಂದರ್ಭದಲ್ಲಿ ಹೆಸರನ್ನು ಸೂಚಿಸಬೇಕಾದವರು ಜಾಣ ಮೌನ ವಹಿಸಿಬಿಡುವುದರ ಮೂಲಕ ತಳ್ಳಿ ಬಿಡುವುದು. ಇದಕ್ಕೆ ಇನ್ನೊಂದು ಗುಂಪು ಕೂಡಾ ಕೆಲಸ ಮಾಡುತ್ತದೆ. ಇತ್ತೀಚೆಗೆ ಸಾಹಿತ್ಯಕ್ಕೆ ಸಂಗೀತ ಬೆರೆಸಿ ತಮ್ಮ ಹೆಸರು ಅದರಲ್ಲಿ ಸೇರಿಸಿಕೊಂಡು ಸಾಹಿತ್ಯದ ಗಂಧ ಗಾಳಿ ಇಲ್ಲದವರೂ ಅದರಲ್ಲಿ ಕೈಯ್ಯಾಡಿಸಿ ಸುದ್ದಿಗೆ ಬರುವುದು ಈ ಗುಂಪಿನ ಕ್ಷಮತೆ. ಸಂಗೀತದಲ್ಲಿ ಸಾಹಿತ್ಯದಲ್ಲಿ ಎರಡೂ ಇಲ್ಲದಿದ್ದರೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುವುದು. ಗೀತ-ಸಂಗೀತ. ಸಾಹಿತ್ಯ-ಗೀತ ಇತ್ಯಾದಿ ಗೋಷ್ಠಿಗಳು ಈ ಗುಂಪಿನವರ ಬಳುವಳಿಗಳು. 
        ಒಂದಷ್ಟು ತಮಗೆ ಬೇಕಾದ ಕವಿಯಿತ್ರಿಯರನ್ನು ಮೇಲೆ ಕೂಡಿಸಿ ಯಾರೊಬ್ಬ ಸಂಗೀತಗಾರನನ್ನು ಹಿಡಿದು ಅವರ ಕವನವನ್ನೇ ಹಾಡಿಸುವುದರ ಮೂಲಕ ಜನರ ಗಮನ ಸೆಳೆಯುವ ಜಾಯಮಾನ. ಇನ್ನು ಮುಂದೆ ಹೋಗುವವರು ಚಿತ್ರಗಳನ್ನೂ ಬರೆಸುತ್ತಿದ್ದಾರೆ. ಇವೆಲ್ಲ ಗುಂಪುಗಾರಿಕೆ ಹೊರತುಪಡಿಸಿದರೆ ಸೃಜನ ಶೀಲತೆಯನ್ನು ಹೊರ ಹೊಮ್ಮಿಸುವುದಾದರೂ ಹೇಗೆ...? ಕೆಲವರ ಪ್ರಶ್ನೆ. ಏಕೆಂದರೆ ಅಷ್ಟು ಮಾತ್ರದ ಪ್ರಸಿದ್ಧಿ, ಹೆಸರು, ಪಬ್ಲಿಸಿಟಿ ಬಿಟ್ಟು ಈಗಿನ ಬರಹಗಾರರು ಬದುಕುವುದಾದರೂ ಹೇಗೆ...? ಅದೆಲ್ಲಾ ಬೇಕೆಂದರೆ ಮತ್ತೇ ಗುಂಪುಗಾರಿಕೆ ಬೇಕೆ ಬೇಕಲ್ಲ...? ಮತ್ತೆ ಅದ್ಹೇಗೆ ಹಿಂದಿನ ತಲೆ ಮಾರಿನಂತೆ ಸೃಜನ ಶೀಲತೆ ಹೊರಹೊಮ್ಮೀತು...? ನನಗೆ ಅನುಭವಕ್ಕೆ ಮತ್ತು ಇಷ್ಟು ವರ್ಷಗಳ ಸಾಹಿತ್ಯ ಲ್ಕವನ್ನು ಕಂಡಂತೆ ಬರೆದಿದ್ದೇನೆ.. ಅನುಭವಿಗಳು, ಜ್ಞಾನಿಗಳು ನನ್ನನ್ನು ತಿದ್ದಬಹುದು. ಅದಕ್ಕೆ ಧಾರಾಳ ಅವಕಾಶ ಮತ್ತು ಸ್ವಾಗತ ಎರಡೂ ಇದೆ.  
      ಲಾಸ್ಟ್ ಬಿಟ್ : ಈಗಿನ ರೆಬೆಲ್ ಬರಹಗಾರರೆನ್ನಿಸಿಕೊಂಡ ಹೊಸ ಪೀಳಿಗೆಯ ಲೇಖಕರಾದರೂ ಈ ಸಂಪ್ರದಾಯವನ್ನು ಮುರಿದು ಹೊರಗೆ ಬರಲಿ. ಕೇವಲ ಬರಹದ ಮೂಲಕವೇ ಓದುಗರನ್ನು ತಲುಪುವ ಪ್ರಯತ್ನ ಮಾಡೋಣ. ಆ ದಿಶೆಯಲ್ಲಿಯೇ ನನ್ನ ಪ್ರಯತ್ನವಿದೆ ಆದ್ದರಿಂದಲೇ ನಾನಿವತ್ತಿಗೂ ಸಾಹಿತ್ಯಿಕವಾಗಿ ಯಾವ ಗುಂಪಿನೊಂದಿಗೂ ಗುರುತಿಸಿಕೊಂಡಿಲ್ಲ ಓದುಗರನ್ನು ಹೊರತು ಪಡಿಸಿ. ಕನಿಷ್ಟ ಹೀಗೆ ಬಹಿರಂಗ ಲೇಖನವಾಗಿಸಿ ಸಂದೇಶ ನೀಡಿದ ನಂತರವಾದರೂ ಆ ದಿಶೆಯಲ್ಲಿ ಪ್ರಯತ್ನ ಆರಂಭಗೊಂಡಲ್ಲಿ ಅಷ್ಟರ ಮಟ್ಟಿಗೆ ಸಾರಸ್ವತ ಲೋಕ ಬದುಕಿದೆ ಎಂದೇ ಅರ್ಥ.


Monday, August 5, 2013

ಅವಳಿಗಾಗಿ ಯಾರನ್ನು ಕೂಗಲಿ ....?

( ಅಂದಿನಿಂದಲೂ ಸಣ್ಣ ಸಣ್ಣ ಕೆಂಪು ಹೂವಿನ ಅಂಗಿಯ ಪುಟ್ಟ ಹುಡುಗಿ ಬಿಸಿಲಿಗೆ ಮುಂಗುರುಳ ಹಾರಿಸುತ್ತಾ, ಹಸಿವಿನ ಕಂಗಳಿಂದ ಸಂಜೆಯ ಆಸೆಗಳಿಗೆ ಈಡಾಗುತ್ತಾ ಕಟ್ಟಿಗೆಗೆ ಕಾಡು ನುಗ್ಗುವುದು ಕಾಣಿಸುತ್ತಲೇ ಇದೆ. ಕೈಗೆ ಸಿಕ್ಕಷ್ಟು ನೋಟು-ಚಿಲ್ಲರೆಗಳನ್ನು ಅದರ ಕೈಗಿಟ್ಟು ಬಂದಿದ್ದೆ. ಎದೆಯೊಳಗೆನೋ ಅರ್ಥವಾಗದ ಮುಳ್ಳು ಮುರಿದ ಸಂಕಟ )

ಬಾಲ್ಯ ಮತ್ತು ಹಳ್ಳಿಯ ಜೀವನ ಬೆರಗು, ಭಯ, ಅದ್ಭುತ, ಎಂಜಾಯೇಬಲ್ ಅನ್ನಿಸಿದಷ್ಟು ಬೇರಾವುದೂ ನನಗನ್ನಿಸಿಲ್ಲ. ಬಾಲ್ಯದ ಹುಡುಗಾಟಗಳು, ನಾಳಿನ ಯೋಚನೆಗಳಿಲ್ಲದ, ಮುಲಾಜಿಲ್ಲದ, ಮರ್ಜಿ ಕಾಯಬೇಕಿಲ್ಲದ, ಊರ ಹೊರಗಿನ ತೋಪಿನಿಂದ ಹಿಡಿದು, ಸ್ಮಶಾನದ ಗೋರಿಯ ಬೆನ್ನಿನವರೆಗೂ ನಮ್ಮದೇ ಆಟದ ಆಡ್ಡೆಗಳು. ಅದರಲ್ಲೂ ಮಲೆನಾಡಿನ ಮನೆಗಳಲ್ಲಿ ಕಳೆಯುತ್ತಿದ್ದ ದಿನಗಳು ನನ್ನನ್ನು ಹಸಿರಾಗಿಟ್ಟಿವೆ.
ಆ ಸೆಳೆತವೇ ಈಗಲೂ ನನ್ನನ್ನು ಪದೇ ಪದೇ ಹಳ್ಳಿಗೆ, ಅಲ್ಲಿನ ಮಣ್ಣಿನ ವಾಸನೆಗೆ ತೆರಳುವಂತೆ ಮಾಡುತ್ತಲೇ ಇವೆ. ಎಂದಿಗೂ ಮುಗಿದ ನೆನಪುಗಳ ಸರಮಾಲೆ ಎನ್ನುವುದಕ್ಕಿಂತಲೂ ಅನುಭವಿಸಿದ ಹಸಿರಿನ ಕ್ಷಣ ಉಸಿರು ಕೂಡಾ ಇವತ್ತಿಗೂ ನನ್ನನ್ನು ಹಳ್ಳಿಗಳ ಮೋಹಿಯನ್ನಾಗಿಸಿದ್ದು ಸುಳ್ಳಲ್ಲ. ತೀರ ಸ್ಟಾರ್ ಹೋಟೇಲ್ ಒಂದರ ಸುವಾಸನೆಯ ಕೋಣೆಯಲ್ಲಿ ಹಿತವಾದ ಏ.ಸಿ. ಹೊಟ್ಟೆ ಬೀರಿಯುವಂತೆ ಊಟ, ಡ್ರಿಂಕ್ಸು.. ಏಲ್ಲವೂ ಇದ್ದರೂ ಅಂತಹ ಅನುಭವಗಳಿಗೆ ಐಚ್ಛಿಕ್ಕವೋ, ಅನೈಚ್ಛಿಕ್ಕವೋ ಹಲವು ಬಾರಿ ಈಡಾಗಿದ್ದರೂ ರಾತ್ರಿ ತಲೆ ಕೊಟ್ಟೊಡನೆ ಬೆಳಿಗ್ಗೆವರೆಗೂ ನಿದ್ರೆ ಎನ್ನುವುದನ್ನು ಸುಖವಾಗಿ ಅಂತಲ್ಲಿ ಅನುಭವಿಸಿದ್ದೇ ಇಲ್ಲ.
ಅದೇನಿದ್ದರೂ ಒಂದೋ ನನ್ನ ಮನೆಯಲ್ಲಿ, ಇಲ್ಲ ತೀರಾ ಕಟ್ಟಾನು ಕಾನಿನ ಮೂಲೆಯ ನನ್ನ ಬೈಕು ಮಾತ್ರ ತೂರಿ ಹೋಗುವ ಕಾಲ್ದಾರಿಯ ಕೊಟ್ಟಕೊನೆಯ ಹಳ್ಳಿಗಳಲ್ಲಿ, ಅದರ ಹುಲ್ಲು ಗೊಣಬೆಯ ಮಾಳದ ಮೇಲಾದರೂ ಸರಿನೇ, ಕೊನೆಗೆ ಹಿನ್ನೀರ ಮಧ್ಯದ ಕಡಲ ದಂಡೆಯಾದರೂ ಸರಿನೇ, ಅಲ್ಲಿ ಇರುವ ಸಣ್ಣ ಹೊರಸು, ಗುಡಿಸಲಿನಂತಹ ಮನೆ, ನಾಲ್ಕಾರು ಆತ್ಮಿಯರು, ಅದರಲ್ಲೊಬ್ಬರು ಹಿರಿಯರು, ಬೇಕೆಂದಾಗ ಎಳೆನೀರು, ಪಕ್ಕ ಸಮುದ್ರ ಕುತ್ತಿಗೆಯ ಕೆಂಪು ಬಾಯಿ ಮೀನುಗಳು, ತಪ್ಪಲೆಯಲ್ಲಿ ಗಂಜಿ.
ಉಳಿದ ಕಡೆಯಲ್ಲಾದರೆ ಅವರ ಮನೆಗಳಲ್ಲಿ ಮಾಡಿನ ಮೇಲೆ ಒಂದೇ ಸಮನೇ ಇಲಿ ಕರ ಕರನೆ ಕೊರೆಯುವ ಸದ್ದಿನ ನಡುವೆಯೂ, ಆಗೀಗ ಕಡಿದು ಹಾಕುವ ಕಾಡು ಹುಳಗಳ ನಡುವೆಯೂ ನಿದ್ರೆ ಮತ್ತು ಅಲ್ಲಿ ಅವರ ಮನೆಗಳಲಿ ಸಿಗುವ ಸೀದಾ ಸಾದಾ, ಆದರೆ ಮನೆ ಮಂದಿಯೆಲ್ಲ ಕುಳಿತು ಉಣ್ಣುವ ಲೋಕಾಭಿರಾಮ ಕಪಟವಿಲ್ಲದ ಮಾತಿನ ನಗು, ಹರಟೆಯ ನಡುವೆ ಒಂಡೆದ್ದು ಕಣ್ತುಂಬಾ ನಿದ್ರೆ ಮಾಡುವ ಹಳ್ಳಿಗಳ ಜೀವನವನ್ನು ಹುಡುಕಿಕೊಂಡು ಹೋಗಿ ದಿನಗಟ್ಟಲೇ ಇದ್ದು ಬರುವುದೂ ಸುಳ್ಳಲ್ಲ. ಹಾಗಾಗೇ ನನ್ನ ಬರಹ ಮತ್ತು ಬದುಕಿನ ಹಲವು ಮಜಲುಗಳಿಗೆ ಪ್ರೇರಣೆ ಆ ಜೀವನಾನುಭವವೇ ಹೊರತು ಬೇರೇನಲ್ಲ. ಆಗೀನ ಬಾಲ್ಯದ ಶ್ರೀಮಂತಿಕೆ, ಕಳೆದ ದಿನಗಳ ನಾಸ್ಜಾಲಿಯಾಗಳೆಡೆಗೆ ಕಣ್ಣು ಹೊರಳುವಂತೆ ಮಾಡಿದ್ದು ಮೊನ್ನಿನ ಸಣ್ಣ ಘಟನೆ.
ಯಾವುದೋ ಕೆಲಸದ ನಿಮಿತ್ತ ನಾಲ್ಕಾರು ವರ್ಷಗಳಿಂದ ಅಣಿಶಿಯ ಕಾಡಿನಲ್ಲಿ ಕಾಲಿಡದವನು ಅನಿವಾರ್ಯವಾಗಿ ನನ್ನ ಕಾರನ್ನು ಹೊರಗೆಳೆದು ಹೂಳು ದಾರಿಯಲ್ಲಿ ಹತ್ತಿಸಬೇಕಾಗಿತ್ತು. ಅವಡುಗಚ್ಚಿ ಚಕ್ರ ತಿರುವಬೇಕಾದ ರೀತಿಯಲ್ಲಿ ಹೊಂಡಗಳಿಂದ ಗಬ್ಬೆದ್ದು ಹೋಗಿರುವ ಆ ರಸ್ತೆ, ಅಧ್ವಾನ್ನಗಳ ಮಧ್ಯೆಯೂ ನನ್ನನ್ನು ಆಗೀಗ ಉಲ್ಲಸಿತನನ್ನಾಗಿಸುವುದೆಂದರೆ ಪ್ರವಾಸ ಮತ್ತು ಬೆಳ್ಳಂಬೆಳಿಗ್ಗೆ ಕಾಡು ದಾರಿಯಲ್ಲಿ ಸಾಗುವ ಡ್ರೈವಿಂಗು ಮಾತ್ರವೇ.
ಮೊನ್ನೆ ಹಾಗು ಹೀಗೂ ಅನಾಹುತಕಾರಿ ಹೊಂಡಗಳ ಅಣಶಿಯ ಮುಖ್ಯ ರಸ್ತೆಯ ಬದಲಾಗಿ ಉಳವಿಯ ಕಾಡಿನಲ್ಲಿ ಕಾರು ತಿರುಗಿಸಿ ಹಳಿಯಾಳದ ಕಡೆಗೆ ಸರಿದು ಹೋಗಿದ್ದೆ. ಜೋಯಿಡಾ, ಡಿಗ್ಗಿ, ಕರನ್‌ಜೋಯಿಡಾ, ಆ ಕಡೆಯ ಸಾಂಬ್ರಾಣಿ, ಭಗವತಿ, ದಾಂಡೇಲಿಯ ಆಸು ಪಾಸಿನ ಕಾಡುಗಳು ನನಗೆ ಮುಂಚಿನಿಂದಲೂ ಅಪ್ಯಾಯಮಾನ ಸ್ಥಳಗಳೆ. ಹಾಗಾಗಿ ಸಣ್ಣನೆ ಸಿಳ್ಳು ಹೊಡೆದುಕೊಂಡು, ಅಲ್ಲೇ ರಸ್ತೆ ಬದಿಯಲ್ಲೊಮ್ಮೆ ಅರ್ಧ ಕಪ್ಪು ಬಿಸಿ ಬಿಸಿ ಟೀ ಕುಡಿದು ಇನ್ನು ದಾಂಡೇಲಿ ಕಣ್ಣು ಬಿಡುವ ಮುಂಚೆ ಕಾಳಿ ನದಿಯ ಮಗ್ಗುಲಲ್ಲಿ ನಿಂತುಕೊಡಿದ್ದೆ ಸುಮ್ಮನೆ ಅದರ ಶಬ್ದ ಕೇಳುತ್ತಾ.
ನಂತರದ್ದು ಎಂದಿನಂತೆ ದಿನವಹಿ ಕಾರ್ಯಗಳು, ವಾಹನಗಳ ಧೂಳು, ಪೇಪರ್ ಮಿಲ್ ವಾಸನೆ, ಆತ್ಮೀಯ ಸ್ನೇಹಿತರ ಹಿಂಡು, ಎದುರಿಗೆ ಜನ, ದನ, ವಾಹನ, ಬೈಸೈಕಲ್ಲು ಭರಾಟೆ ಎಲ್ಲದ ಮಧ್ಯೆ ಅಲ್ಲಲ್ಲಿ ನಿಂತುಕೊಂಡು ನನ್ನ ಕೆಲಸ ಮುಗಿಸಿ ಮಿತ್ರ ಹಿಂಡಿನೊಂದಿಗೆ ಸಟ್ಟ ಸರಹೊತ್ತಿನ ರಣ ಬಿಸಿಲಿನ ಝಳಕ್ಕೆ ಈಡಾಗುತ್ತಾ ತಂಪಾಗಲು ಬೀಯರು, ಹಿಂದಿರುಗಿ ಕಾಡು ರಸ್ತೆಗೆ ಕಾಲಿಟ್ಟು ಇನ್ನೇನು ಅಣಶಿಯ ತೆಕ್ಕೆ ಸೇರಿಕೊಳ್ಳಬೇಕು. ಉಳವಿ ರಸ್ತೆ ತಿರುವಿನ ನಂತರ ನಾಲ್ಕಾರು ಕೀ.ಮಿ. ದಾಟಿ ಖಾಮ್ಸೆತಡಿಗಿಂತಲೂ ಮುಂಚೆ ಕಟ್ಟಾನು ಕಾಡಿನ ಪಕ್ಕದಲ್ಲಿ ನಿಲ್ಲಿಸಿದೆ. ನೀರು ಕುಡಿದು ಇನ್ನೇನು ತಿರುಗ ಬೇಕು, ಕಾಡಿನ ಅಂಚಿನಿಂದ ಚರ ಪರ ಸದ್ದು. ತಿರುಗಿದೆ.
ತೀರ ಪುಟ್ಟ ಪುಟ್ಟ ಕೈಗಳ ಪಿಳಿ ಪಿಳಿ ಕಣ್ಣಿನ ಪುಟ್ಟ ಹುಡುಗಿ, ಕೈಗಳಲ್ಲಿ ಸಣ್ಣ ಸಣ್ಣ ಕಟ್ಟಿಗೆ ತುಂಡುಗಳನ್ನು ಹಿಡಿದು ಬರಿಗಾಲಲ್ಲಿ ಈಚೆಗೆ ಬಂದು ಅಷ್ಟು ದೂರದಲ್ಲಿದ್ದ ಆಗಲೇ ಸೇರಿದ್ದ ರಾಶಿಗೆ ಸೇರಿಸುತ್ತಿತ್ತು. ಮತ್ತೊಮ್ಮೆ ಕಾಡಿನೊಳಗೆ ಹೋಗಿ ಮತ್ತೆ ಹದಿನೈದು ನಿಮೀಷದಲ್ಲಿ ಹಿಂದಿರುಗಿದ್ದಳು ಆ ಹುಡುಗಿ. ಸಟ್ಟ ಸರಹೊತ್ತಿನ ಮಧ್ಯಾನ್ಹ, ಕಾಡೆಂದರೆ ಕಾಡು, ಬಿರು ಬಿಸಿಲಿನ ಮೂರೂವರೆ, ಶಾಲೆಯೋ ಮನೆಯಲ್ಲಿ ಅಮ್ಮನೊಂದಿಗೆ ಇರಬೇಕಿದ್ದ ಮಗು ಕಟ್ಟಿಗೆ ಆಯುತ್ತಿತ್ತು.
" ಏನಮ್ಮ ಒಬ್ಬಳೆ ಕೆಲಸ ಮಾಡುತ್ತಿದೀಯಾ. ನಿನ್ನ ಹೆಸರೇನು ..? " ಎಂದೆ. ಆಗಿದ್ದಿಷ್ಟು. ಮಗು ಎರಡನೆಯ ತರಗತಿ ಓದುತ್ತಿದೆ. ಆದರೆ ಅನಿವಾರ್ಯದ ಕೆಲಸಗಳ ನಿಮಿತ್ತ ಹೆಚ್ಚಿನ ದಿನಗಳನ್ನು ಅಮ್ಮನೊಂದಿಗೆ ಕಾಡಿನಲ್ಲೇ ಬಿರು ಬಿಸಿಲಿನಲ್ಲಿ ಕಳೆಯುತ್ತಿದೆ. ಅಮ್ಮ ದಿನಗೂಲಿಯ ಲೆಕ್ಕದಲ್ಲಿ ಕಾಡಿನ ದರಗಲನ್ನು ಆರಿಸಿ ಒಟ್ಟು ಮಾಡಿ ತಂದು ತುಂಬಿಸಿ ದಿನಕ್ಕೆ ನಲ್ವತೈವತ್ತು ರೂಪಾಯಿ ದುಡಿಯುತ್ತಾಳೆ. ಆ ಹೊತ್ತಿನಲ್ಲಿ ಮಗು ಸಣ್ಣ ಪುಟ್ಟ ಕಟ್ಟಿಗೆ ಆರಿಸಿ ಆರಿಸಿ ತಂದು ರಸ್ತೆ ಪಕ್ಕದಲ್ಲಿ ಗುಡ್ಡೆ ಹಾಕಿ ಇಡುತ್ತೆ. ನಾಲ್ಕು ಗಂಟೆಯ ಹೊತ್ತಿಗೆ ಅಮ್ಮ ಬಂದು ದರಗಲು ಮುಟ್ಟಿಸಿ, ಕಟ್ಟಿಗೆ ಗಂಟಿಗೆ ಕೈಯಿಡುತ್ತಾಳೆ. ತಾಯಿ ಮಗಳಿಬ್ಬರು ನಡೆದು ಹೋಗುತ್ತಾರೆ.
" ದಿನಕ್ಕೆ ಅಮ್ಮಂಗೆ ಕೂಲಿ ಸಿಗ್ತದೆ. ಆದ್ರೆ ಕಟ್ಟಿಗೆ ಒಳ್ಳೆಯದಿಲ್ಲಾಂದ್ರೆ ರಾತ್ರಿ ಬ್ಯಾಗ್ನೇ ಅಡಿಗೆ ಆಗೋದಿಲ್ಲ. ನ೦ಗೆ ಹಸಿವಾಗಿರ್ತದೆ. ಅದ್ಕೆ ನಾನು ಅಮ್ಮ ಬರೋ ಹೊತ್ತಿಗೆ ಒಣ ಕಟ್ಟಿಗೆ ಆರಿಸಿ ಇಡ್ತಿನಿ. ಅಮ್ಮ ಕೆಲ್ಸ ಮುಗ್ಸಿ ಸಂಜೆ ಬೇಗ ಹೋಗಿ ಬೆಂಕಿ ಹಾಕಿದ್ರೆ ಬೇಗ ಅಡ್ಗೆ ಆದ್ರೆ ನಂಗೆ ಊಟಾ ಬೇಗ ಸಿಗ್ತದೆ.." ಮನಸ್ಸಿನಾಳದಲ್ಲೆಲ್ಲೋ ಒಮ್ಮೆ ಛುಳ್ ಎಂದು ಬಿಟ್ಟಿತು. ಇವತ್ತೀಗೂ ನನ್ನನ್ನು ಕಲಕುತ್ತಿರುವ ಧ್ವನಿ ಅದು. ಬೆಳಗಿನಿಂದ ಸಂಜೆಯವರೆಗೂ ಹೀಗೆ ಕೆಲಸ, ಮನೆಯೆಡೆಗಿನ ಕಕ್ಕುಲಾತಿ, ಅದರ ಮೇಲೆ ಹಸಿವು ಅದೂ ಗಂಜಿಯಾದರೂ ಒಂಚೂರು ಬೇಗ ಸಿಗುವುದಾದರೆ ಸಿಗಲಿ ಅದಕ್ಕೆ ಒಣ ಕಟ್ಟಿಗೆ ಆರಿಸಿ ಗುಡ್ಡೆ ಹಾಕುತ್ತಿದೆ ಮಗು. ಮಗುವನ್ನೊಮ್ಮೆ ನೋಡಿದೆ ಛೆ ಎನ್ನಿಸಿತು. ಶಾಲೆ ಎಂದೆ..?.
" ನಾನು ವಾರಕ್ಕೆರಡೆ ಸರ್ತಿ ಹೋಗ್ತೇ. ಬಾಕಿ ಸರ್ತಿ ಒಂದೆರಡು ದಿನಾ ನಾಯ್ಕ ಮಾಸ್ತರು ಮನೆಗೇ ಬಂದು ಹೇಳಿಕೊಡ್ತಾರೆ.." ನಿಜಕ್ಕೂ ಧನ್ಯ ಆ ಮಾಸ್ತರ ಜೀವನ. ಅಂದಿನಿಂದಲೂ ಸಣ್ಣ ಸಣ್ಣ ಕೆಂಪು ಹೂವಿನ ಪುಟ್ಟ ಹುಡುಗಿ ಬಿಸಿಲಿಗೆ ಮುಂಗುರುಳ ಹಾರಿಸುತ್ತಾ, ಸಣ್ಣ ಹಸಿವಿನ ಕಂಗಳಿಂದ ಸಂಜೆಯ ಆಸೆಗಳಿಗೆ ಈಡಾಗುತ್ತಾ ಕಟ್ಟಿಗೆಗೆ ಕಾಡು ನುಗ್ಗುವುದು ಕಾಣಿಸುತ್ತಲೇ ಇದೆ. ಕೈಗೆ ಸಿಕ್ಕಷ್ಟು ನೋಟು-ಚಿಲ್ಲರೆಗಳನ್ನು ಅದರ ಕೈಗಿಟ್ಟು ಬಂದಿದ್ದೆ. ಎದೆಯೊಳಗೆನೋ ಅರ್ಥವಾಗದ ಮುಳ್ಳು ಮುರಿದ ಸಂಕಟ. ಊಟದಿಂದ ಹಿಡಿದು ನೀರು ಕುಡಿಯುವಾಗಲೂ ಮಗುವಿನ ಮುಖ ನೆನಪಾದರೆ ಗಂಟಲು ಕಟ್ಟದೇ ಇನ್ನೇನು ಮಾಡೀತು. ಎಲ್ಲಿದ್ದೇವೆ ನಾವು..? ಬೆಚ್ಚನೆ ಗೂಡು, ಮಧ್ಯಾನ್ಹ ಶಾಲೆ ಊಟ, ಪುಕ್ಕಟೆ ಸೈಕಲ್ಲು ಯಾವಾಗ ಆ ಮಗುವಿಗೆ ತಲುಪೋದು...? ಯಾರಿಗೆ ಕೂಗಲಿ.

ಅವರ ಕೊನೆಯ ಆಸೆಗಳು ನನಗೆ ಗೊತ್ತಾಗಲೇ ಇಲ್ಲ...!

ಪಾಪ ಒಂದು ದಶಕಕ್ಕೂ ಹೆಚ್ಚಿನ ಕಾಲ ಒಬ್ಬಂಟಿಯಾಗಿ ಕಳೆದು ಹೋದ ಆ ಹಿರಿಯ ಜೀವಕ್ಕೆ ಏನು ಹೇಳಿಕೊಳ್ಳುವುದಿತ್ತೋ...? 

ಆ ದಿನಗಳಲ್ಲಿ ನಾನು ವಿಪರೀತ ಕೋಪಕ್ಕೆ ಬೀಳುತ್ತಿದ್ದೆ. ಅದರಲ್ಲೂ ದಿನಾ ರಾತ್ರೆಯಿಡೀ ಕಂಪ್ಯೂಟರ್ ಮುಂದೆ ಕೂತು ಡ್ರಾಯಿಂಗುಗಳನ್ನು ಮಾಡಿ ಅದರದ್ದೇ ಲೈನುಗಳು ತಲೆಯಲ್ಲಿ ಕದಲುತ್ತಿರುವಾಗಲೇ ಎಂ. ಜಿ. ರೋಡ್ ಆಚೆಗೆ ಶಿವಾಜಿನಗರದ ಚೌಕಿನಿಂದ ಆಚೆಗೆ ಸರಿದು ರೂಮಿಗೆ ಬಂದು ಬಿದ್ದರೆ ಎಚ್ಚರವಾಗುತ್ತಿದ್ದುದು ಮಧ್ಯಾನ್ಹದ ಐದು ಗಂಟೆಗೆ ಹಾಸ್ಟೆಲ್ ಆವರಣದಲ್ಲಿ ಟ್ರೇನಿಂಗ್ ಹುಡುಗರು ಬಂದು ಗಿಜಿಗಿಜಿ ಶುರು ಮಾಡಿದಾಗಲೇ. ಅದಕ್ಕೂ ಭಯಂಕರವಾಗಿ ಬೊಬ್ಬಿರಿಯುತ್ತಿದ್ದುದೆಂದರೆ ಯಮ ಹಸಿವು. ಬೆಳ್ಳಿಗೆ ಪಕ್ಕದ ಕಾಕಾನ ಹೊಟೇಲ್ ಭಾರತ ರೆಸ್ಟೋರಾಂಟಿನಲ್ಲಿ ಪರಾಟಾ ತಿಂದು ಮಲಗಿದವನಿಗೆ, ಹಸಿವು ಆ ಹೊತ್ತಿಗೆ ಏನೂ ಆಗಬಹುದೆನ್ನುವಂತಹ ಹಪಾಹಪಿಯನ್ನು ತಂದಿಟ್ಟಿರುತ್ತಿತ್ತು. ಪಕ್ಕದಲ್ಲಿ ನನಗಿಂತಲೂ ಜೋರಾಗಿ ನಿದ್ರೆ ತೆಗೆಯುತ್ತಿದ್ದ ಬಸವನ ಲುಂಗಿ ಒಂದು ಕಡೆ ತಾನೊಂದು ಕಡೆಯಾದರೆ ಅವನ ಪಕ್ಕದಲ್ಲಿ ಮಲಗಿರುತ್ತಿದ್ದ ತಿಪ್ಟೂರು ರವಿಗೆ ಬಾಯಿಯಲ್ಲಿ ಆಗ್ಲೇ ನೊಣವೊಂದು ಸಂಸಾರ ಹೂಡಿ, ಹೊರಡುವ ತಯಾರಿಯಲ್ಲಿದ್ದುದೂ ಗೊತ್ತಾಗದಷ್ಟು ಯಮ ನಿದ್ರೆ. ಅವರಿಬ್ಬರ ಬುಡಕ್ಕೊಂದು ಒದೆ ಒದ್ದು ಬ್ರಶ್ಶು, ನೀರು ಹುಡುಕುವಾಗ ಅಡರುತ್ತಿದ್ದ ಆಗೀನ ಬೆಂಗಳೂರು ಚಳಿ ಹೊರಬೀಳುವ ಮುನ್ನ ಜಾಕೆಟ್ಟು ಹುಡುಕುವಂತೆ ಮಾಡುತ್ತಿತ್ತು. 
     ಹಾಗೆ ಹೊರಟು ಎಂ.ಈ.ಎಸ್. ರೋಡಿನ ಕೊನೆಯ ಬಾರಿನಲ್ಲಿ ಕುಳಿತು ಇಷ್ಟಿಷ್ಟು ಬೀಯರು ಕುಡಿದು, ಮಿಲ್ಟ್ರಿ ಕ್ಯಾಂಟಿನಿನಲ್ಲಿ ಅವರಿಬ್ಬರು ಹೊಂತೆ ತಿಂದರೆ, ನನ್ನದು ಮಾತ್ರ ಅದೇ ಒಣಕಲು ಚಪಾತಿ ಮತ್ತು ಮೊಟ್ಟೆ ಸಾರಿನ ಸುಗ್ಗಿ ಜಾಲಹಳ್ಳಿಯ ರಾಘವೆಂದ್ರ ಭವನದಲ್ಲಿ. ಹಾಗೆ ಕುಳಿತಾಗಲೇ ಅದೊಂದಿನ ಅವರು ಪರಿಚಯವಾಗಿದ್ದು. ಆ ದಿನ ಶನಿವಾರವಾದ್ದರಿಂದ ಕುಡುಕರ ನಿಯಮದಂತೆ ಕೊಂಚ ಹೆಚ್ಚೇ ಕುಡಿದು, ಇನ್ನೇನು ಉಂಡು ಮುಗಿಯಬೇಕು ಮಾಣಿ ಇದ್ದಕ್ಕಿದ್ದಂತೆ "...ಸಾರ್ ಚಪಾತಿ ಖಾಲಿ..." ಅಂದು ಬಿಡಬೇಕೆ. ಸಮಯ ನೋಡಿಕೊಂಡೆ ಆಗಿನ್ನು ಎಳೂ ಮುಕ್ಕಾಲು ಆಗಿಲ್ಲ. ಅಸಲಿಗೆ ಅದು ತುಂಬಾ ಚಿಕ್ಕ ಹೊಟೇಲು. ದಿನಕ್ಕೆ ಇಪ್ಪತ್ತು ಊಟ ಹೋದರೆ ಜಾಸ್ತಿ. ಅದಕ್ಕಾಗಿ ಲಿಮಿಟೆಡ್ಡು ಪ್ರಿಪರೇಶನ್‌ನಲ್ಲಿ ಅವನಿದ್ದರೆ ನನಗೆ ಉರಿ ಉರಿ. ಬಾಯಿಗೆ ಬಂದದ್ದು ಕಕ್ಕಿ ಅವನನ್ನು ಸಿಗಿದು ಬಿಡುವ ಕೋಪದಲ್ಲಿ ಕೂಗಾಡುತ್ತಿದ್ದರೆ ಆಚೆ ಟೇಬಲ್ಲಿಗೆ ಕುಳಿತಿದ್ದ ವೃದ್ಧರೊಬ್ಬರು ತಣ್ಣಗೆ, " ಯಾಕಪ್ಪಾ ಚಪಾತಿ ತಾನೆ ಇದು ತೊಗೊ... " ಎನ್ನುತ್ತಾ ತಮಗೆಂದು ತಂದಿರಿಸಿದ್ದ ತಟ್ಟೆಯನ್ನು ನನ್ನೆದುರಿಗೆ ತಳ್ಳಿ ಕೈ ತೊಳೆದು ನಡೆದುಬಿಟ್ಟಿದ್ದರು. ಕುಳಿತಲ್ಲೇ ನಾನು ನೀರಾಗಿದ್ದೆ.
       ಮುಂದಿನ ಕೆಲವೇ ದಿನಗಳಲ್ಲಿ ನನ್ನ ಅವರ ಮಧ್ಯೆ ಬೆಳೆದ ಬಾಂಧವ್ಯ, ವಯಸ್ಸು ಹೊರತು ಪಡಿಸಿ ಅವರು ಎಲ್ಲದರಲ್ಲೂ ಅಪ್ಪಟ್ಟ ಹೆಗಲು ತಬ್ಬಿ ನಡೆವ ಸ್ನೇಹಿತನಂತೆ. ವಯಸ್ಸಿನಲ್ಲಿ ಮಾತ್ರ ಬಹುಶ: ಅವರಿಗಾದ ಜೀವನಾನುಭವದ ಅರ್ಧದಷ್ಟು ನನಗಾಗಿರಲಿಲ್ಲ. ಈ ವಿಷಯದಲ್ಲಿ ನಾನು ನಿಜಕ್ಕೂ ಅದೃಷ್ಟ ಶಾಲಿಯೋ ಅಥವಾ ಒಂದು ರೀತಿಯಲ್ಲಿ ವಿಚಿತ್ರ ಪ್ರಾಣಿನೋ ಗೊತ್ತಿಲ್ಲ. ಮೊದಲಿನಿಂದಲೂ ಇವತ್ತಿನವರೆಗೂ ನನ್ನ ಗಾಢ ಗೆಳೆತನ ಎನ್ನುವುದು ಏನಿದ್ದರೂ ತೀರ ವಯಸ್ಸಾದ ಜೀವಗಳೊಂದಿಗೆ ಹೆಜ್ಜೆ ಹಾಕಿ ಬೆಳೆದದ್ದೇ. ಹಾಗೆ ಎಲ್ಲಾ ಹಿರಿಯರೂ ಕೂಡಾ ತೀರ ಪಕ್ಕದ ವಯಸ್ಸಿನ ಹುಡುಗರಂತೆ ನನ್ನ ಪರಿಗಣಿಸಿದರು ಆನ್ನೋದು ಇವತ್ತಿಗೂ ವಿಸ್ಮಯಕಾರಿನೇ.
        ಮೊದಮೊದಲಿಗೆ ತೀರ ಚಿಕ್ಕವನಾಗಿದ್ದಾಗ ನಾಲ್ಕನೆಯತ್ತೆ ದಾಟದ ನಾನು ಮಧ್ಯಾನ್ಹದ ಉರಿ ಬಿಸಿಲಲ್ಲಿ ಬ್ಯಾಣಕ್ಕೆ ಬೆಂಕಿ ಇಕ್ಕಲು, ಅಗಳದ ಮಧ್ಯೆ ಕಟ್ಟಿಕೊಂಡಿದ್ದ ಹೆಜ್ಜೇನು ಹುಡುಕಲು ಕಂಬಳಿ ಗೊಪ್ಪೆ ಹಾಕಿಕೊಂಡು, ಕೊನೆಗೆ ಏನಿಲ್ಲವೆಂದರೂ ಪೇರು, ಮುಳ್ಳಣ್ಣು, ಹಲಸಿನಣ್ಣು, ಪನ್ನಿರಲ ಕಿತ್ತಲು, ಕೊನೆಗೆ ಕಾನಿನಲ್ಲಿ ಬಿಳಲು ತರಲು, ಗೂಟ ಕಡಿದುಕೊಂಡು ಬರಲೆಂದು ಅಕ್ಷರಶ: ನನ್ನ ಮೂರರಷ್ಟು ಹೆಚ್ಚಿನ ವಯಸ್ಸಿನ ಸೋದರ ಮಾವನೊಂದಿಗೆ, ನನ್ನ ಸಮ ಸಮಕ್ಕೆ ಬರುತ್ತಿದ್ದ ಹಿಡಿಗತ್ತಿಯನ್ನು ಎಳೆಯುತ್ತಾ ಹೊರಟಿರುತ್ತಿದ್ದೆ. ಹಾಗೆ ಸರಿ ಸುಮಾರು ಇಪ್ಪತ್ತೈದು ವರ್ಷ ಕಳೆದರೂ ಹಳೆಯದನ್ನು ನೆನೆಸಿಕೊಳ್ಳುತ್ತಾ ಮಾತಿಗೆ ಕುಳಿತರೆ ಮಾವ ಈಗಲೂ ಅದೇ ಹರೆಯದ ಮಲೆನಾಡಿನ ಹುಲಿಯೇ. ನಂತರದಲ್ಲಿ ನನ್ನೊಂದಿಗೆ ಎರ್ಡ್ಮೂರು ವರ್ಷ ಸೇವೆಯ ಆರಂಭದ ದಿನದಲ್ಲಿ ಹೆಜ್ಜೆ ಹಾಕಿದ ಪವಿತ್ರನ್ ಎಂಬ ಜೀವ ಕೂಡಾ ಕನಿಷ್ಟ ಎರಡು ದಶಕದಷ್ಟು ಹಿರಿತನದ್ದು. ಅಲ್ಲಿಂದ ಮತ್ತೆ ತಿರುಗಣಿ ತಿರುಗಿ ಇದೇ ಉ.ಕ. ಜಿಲ್ಲೆಗೆ ಬಂದು ಕುಳಿತ ಮೊಟ್ಟ ಮೊದಲ ದಿನದಿಂದ ಹಿಡಿದು ಮೊನ್ನೆ ಮೊನ್ನೆ ರಿಟೈರಾಗುವವರೆಗೂ ನನ್ನೊಂದಿಗೆ ಕೆಲಸದಿಂದ ಹಿಡಿದು ಕಾರು-ಬಾರು, ಎಲ್ಲಾ ಹಂಚಿಕೊಂಡು ಹೋದವರೂ ಕೂಡಾ ನಾನು ಹುಟ್ಟುವ ಮೊದಲೇ ನೌಕರಿಗೆ ಸೇರಿದ್ದಷ್ಟು ದೊಡ್ಡ ಹಿರಿಯರು.
     ಅತ್ತ ಸಾಹಿತ್ಯಿಕ ವಲಯದಲ್ಲಿ ಇವತ್ತೀಗೂ ಗಾಢ್‌ಫಾದರ್‌ಗಳಿಲ್ಲದೇ ಕಾಲೂರುವಾಗ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನಕ್ಕೆಂದು ನಿಂತಿದ್ದವರು ಕೊನೆಕೊನೆಗೆ ನನ್ನೊಂದಿಗೆ ಬಾ ಹೋಗು ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಸ್ನೇಹಿತರ ವಲಯಕ್ಕೆ ಲಗ್ಗೆ ಇಟ್ಟು ಬಿಟ್ಟರು. ಮೊನ್ನೆ ಮೊನ್ನೆ ಆಕಸ್ಮಿಕವಾಗಿ ಹೀಗೆ ಯಾವತ್ತೋ ಬದುಕಿನ ರೈಲಿನಲ್ಲಿ ಸ್ಟೇಶನ್ನು ಬಂದಾಗ ಇಳಿದು ಹೋದ ಪ್ರಯಾಣಿಕರಂತೆ ಮರೆಯಾಗಿದ್ದ ವಯಸ್ಕ ಆತ್ಮೀಯರು ಕರೆ ಮಾಡಿ ಮಾತಾಡಿಸಿದಾಗ ಆಘಾತ. ನಾನು ಅವರು ಬಹುಶ: ತೀರಿಯೇ ಹೋಗಿದ್ದಾರೆಂದು ಭಾವಿಸಿದ್ದೆ. ಅವರಲ್ಲಿ ಹಾಗೆ ಹೇಳಿ ಕ್ಷಮೆ ಕೇಳಿ ಬೈಸಿಕೊಂಡೆ. ಈಗಲೂ ಅವರಲ್ಲಿ ಆಗಿನಿಂದಲೂ ಇದ್ದ ಅದೇ ಹಾಸ್ಯಮಯ ಧಾಟಿ. ಕೊನೆಯಲ್ಲಿ " ಇಷ್ಟು ಬೇಗ ಕಳಿಸ್ಬೇಡವೋ ಇನ್ನೊಂದು ಮದುವೆಯಾಗಿ ಸಂಸಾರ ಮಾಡಬೇಕಿದೆ... " ಎಂದು ಲಂಪಟ ಗಂಡಸಿನಂತೆ ಹಾಸ್ಯ ಮಾಡಿ ಫೋನಿಟ್ಟರು. ಕಳೆದ ವರ್ಷ ಹಿಮಾಲಯದ ಪಾದಕ್ಕೆ, ಅಲ್ಲಿನ ಚಳಿಗೆ ನಮ್ಮ ಸೊಕ್ಕು ಕರಗಿಸಿಕೊಳ್ಳಲೆಂದು ಹೋದಾಗ, ನಮಗಿಂತಲೂ ವೇಗವಾಗಿ ಹಿಮದಲ್ಲಿ ಪರ್ವತಗಳನ್ನು ಏರಿ ನಿಂತು, ಬನ್ನಿ ಬನ್ನಿ ಎಂದು ಕರೆಯುತ್ತಿದ್ದ ದ.ಕ. ವೃದ್ಧ(?)ರೊಬ್ಬರು ಭೇಟಿಯಾದರು. ಕೇವಲ ಮೂರು ತಾಸುಗಳ ಆರಂಭಿಕ ಭೇಟಿ ಅದು. ಚಾರಣದ ಹದಿನೈದು ದಿನದ ನಂತರ ಬೇರ್ಪಡೆಯಾದರೂ ಇವತ್ತಿಗಾಗಲೇ ಅವರು ಕನಿಷ್ಟ ವಾರಕ್ಕೊಮ್ಮೆಯಾದರೂ ಕರೆ ಮಾತಾಡುವಷ್ಟು ಆತ್ಮಿಯರು. 
          ಅಷ್ಟೇಕೆ ಕಳೆದ ರಾಷ್ಟ್ರ ಮಟ್ಟದ ವೈಜ್ಞಾನಿಕ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ, ಅದಕ್ಕೂ ಮೊದಲು ಪಾಂಡಿಯಲ್ಲಿ ನಡೆದಾಗ ಎರಡೂ ಕಡೆಯಲ್ಲೂ ನೆರೆದಿದ್ದ ಗುಂಡು ಕಂಪೆನಿಯಲ್ಲಿ ಕುಳಿತುಕೊಳ್ಳಲು ಅನುಮಾನಿಸುವಷ್ಟು ಹಿರಿಯರು ನನ್ನೊಂದಿಗಿದ್ದರು.  ಆಗ ಬೆಂಗಳೂರಿನಲ್ಲಿ ಹೀಗೆ ಚಪಾತಿಯಿಂದ ಆರಂಭವಾದ ಸ್ನೇಹ ಆಗೀಗ ಕುಳಿತು ಗುಂಡು ಹಾಕುವವರೆಗೂ ಸಲುಗೆ ಬೆಳೆದು, ಉಳಿದಂತೆ ಅದ್ಭುತ ಮಾತುಗಾರರಾದ ಅವರು ರಾಮಕೃಷ್ಣ ಹೆಗಡೆಯಿಂದ ಹಿಡಿದು, ಪೋರೆನ್ಸಿಕ್ ಸೈನ್ಸ್‌ನಿಂದ ತೀರ ಪೋಲಿಸ್ ಟಾರ್ಚರುಗಳು, ಅದರಲ್ಲಿ ವಿವಿಧ ದೇಶದ ವಿಧಾನಗಳನ್ನು ಉಲ್ಲೇಖಿಸುತ್ತಾ, ತಾವು ಉತ್ತರ ಭಾರತದಲ್ಲಿ ಕಳೆದ ದಿನಗಳ ಬಗ್ಗೆ ವಿವರಿಸುತ್ತಿದ್ದರೆ ರಾತ್ರಿಗಳಿಗೆ ಬೆಂಕಿ ಬೀಳಬೇಕು.
           ಅದೊಂದಿನ ನಾನು ಭಾರತ ರೆಸ್ಟೋರಾಂಟಿಗೆ ಹೋಗುವಾಗ ಅಕಸ್ಮಾತಾಗಿ ಅವರು ರಾಯಚೂರಿನ ರಾಜರಾಂನೊಂದಿಗೆ ನಿ೦ತಿದ್ದು ಕಾಣಿಸಿತ್ತು. ಯಾವತ್ತೂ ಹೀಗೆ ಅದರಲ್ಲೂ ಲಫಂಗರಿಗೆ ಗುರುವಿನಂತಿದ್ದ ರಾಜಾರಾಮನೊ೦ದಿಗೆ ಪರಿಚಯ ಇದ್ದಿರಬಹುದೆನ್ನುವ ಅಂದಾಜಿರದ ನನಗೆ ಅವರು ಅವನ ತಂದೆಯೆಂದೂ, ಇವನ ಕಾಟಾಚಾರಕ್ಕೆ ಬೇಸತ್ತು ಬೆಂಗಳೂರಿಗೆ ಬಂದರೆ ಈ ಪುಣ್ಯಾತ್ಮ ಕೂಡಾ ಬಂದು ಇದೇ ಜಾಲಹಳ್ಳಿಯಲ್ಲಿ ಕಾಲೂರಿರಬೇಕೆ...? ಆ ದಿನ ಅವರು ಕುಸಿದು ಹೋಗಿದ್ದರು. ಆಗ್ಲೇ ಊರು ಬಿಟ್ಟು ನಾಲ್ಕು ವರ್ಷಗಳಾಗಿದ್ದುವಂತೆ. ಅವರಿಗೆ ಪೆನ್ಶನ್ ಇತ್ತು. ಬೊಮ್ಮಸಂದ್ರದ ಮೂಲೆಯಲ್ಲಿ ಚಿಕ್ಕ ರೂಮು ಮಾಡಿಕೊಂಡಿದ್ದರು. ಪೇಪರು ಓದು, ವಾಕಿಂಗ್, ಸಂಜೆ ಮೂಡಿದ್ದರೆ ಗುಂಡು, ಪಾನಿ ಪೂರಿ ಆರಾಮವಾಗಿ ಎಲ್ಲ ಗೋಜಲು ಬಿಟ್ಟು ಸ್ವಂತ್ರತ್ರವಾಗಿ ಕಳೆದವರಿಗೆ ಇದ್ದಕ್ಕಿದ್ದಂತೆ ವಕ್ಕರಿಸಿದ್ದ ರಾಜಾರಾಂ ತಲೆ ನೋವು ತಂದಿಟ್ಟಿದ್ದ. ನಾನು ಅವರ ಪರವಾಗಿ ಮಾತಾಡಿ ಅವನು ಬೊಮ್ಮಸಂದ್ರದ ರೂಮಿಗೆ ಹೋಗಿ ಕಾಡದಂತೆಯೂ, ಕಾಸು ಮತ್ತೊಂದು ಎಂದು ಹಿಂದೆ ಬೀಳದಂತೆ ಮಾಡಿದ್ದೇನಾದರೂ ಅವರಲ್ಲಿ ಮೊದಲಿದ್ದ ಖುಶಿ ಉಳಿದಿರಲಿಲ್ಲ. ಅವರವರ ವೈಯಕ್ತಿಕ ವಿಷಯಗಳೇನೇನಿದ್ದವು...? ವೃದ್ಧ ಜೀವ ಜೀವನದಲ್ಲಿ ಆಸಕ್ತಿ ಕಳೆದುಕೊಂಡಂತಿತ್ತು. 
           ಇದ್ದಕ್ಕಿದ್ದಂತೆ ಒ೦ದಿನ ನಾಪತ್ತೆ ಆಗಿ ಬಿಟ್ಟಿದ್ದರು. ಸುತ್ತ ಮುತ್ತೆಲ್ಲಾ ಹುಡುಕಾಡಿದೆವು. ಬಸು, ರವಿ, ಪ್ರದೀಪ, ಮೈಸೂರಿನ ಮುಕುಂದ ಎಲ್ಲಾ ಜಾಲಹಳ್ಳಿಯಿಂದ ಎಂ.ಎಸ್. ರಾಮಯ್ಯವರೆಗೂ ಗಲ್ಲಿಗಳನ್ನು ತಿರುವ್ಯಾಡಿ ಬಿಟ್ಟಿದ್ದೆವು. ಬಹುಶ: ರಾಜಾರಾಂ ಕಿರಿಕಿರಿ ಮಾಡಿದನೇನೋ ಎಂದು ಎತ್ತಾಕಿಕೊಂಡು ಸಮಾ ರೂಮಿನಲ್ಲಿ ಚಚ್ಚುತ್ತಿದ್ದರೆ ಅವನೋ ಊರೇ ಸೇರುವಂತೆ ಏಟಿಗೂ ಮುಂಚೆ ಕಿರುಚಲಾರಂಭಿಸಿದ್ದ. ಅದಾಗಿ ನಂತರದಲ್ಲಿ ಅವರು ಕಂಡಿರಲೇ ಇಲ್ಲ. ಇದ್ದಕ್ಕಿದ್ದಂತೆ ಒಂದಿನ ನಾಲೈದು ವರ್ಷದ ಹಿಂದೆ ಮೆಜೆಸ್ಟಿಕ್ಕಿನಲ್ಲಿ ಕಂಡವರು ತಾವಾಗೆ ಕೂಗಿ ಮಾತಾಡಿಸಿದ್ದರು. ಕೊಂಚ ಇಳಿದು ಹೋಗಿದ್ದಾರೆ ಅನಿಸಿದ್ದು ಬಿಟ್ಟರೆ ಅದೇ ವಿಶಾಲ ನಗೆ. ಅದೇ ನಿರರ್ಗಳ ಮಾತು. ಮಧ್ಯಾನ್ಹದ ಹೊತ್ತೆ ಬಿಟ್ಟು ಬಿಡದೆ ಕರೆದೊಯ್ದು ಗ್ರಿನ್ ಹೋಟೆಲಿನಲ್ಲಿ ಕೂಡಿಸಿಕೊಂಡಿದ್ದರು. ಬೇಕೆಂದೇ ಜಾಲಹಳ್ಳಿ ಬಿಟ್ಟು ಬೆಂಗಳೂರಿನ ಇನ್ನೊಂದು ದಿಕ್ಕಿನ ಇಂದಿರಾನಗರದ ಕಡೆಗೆ ಸರಿದು ಹೋಗಿ ರೂಮು ಮಾಡಿಕೊಂಡಿದ್ದಾಗಿ ತಿಳಿಸಿದ್ದರು.
            ನಾನೂ ಹೆಚ್ಚು ಕೆದಕಿರಲಿಲ್ಲ. ಅದಾಗಿ ವರ್ಷಗಳೇ ಸರಿದವು.  ಮೊನ್ನೆ ಇದ್ದಕ್ಕಿದ್ದಂತೆ ಅದೇ ಬಿ.ಇ.ಎಲ್.ನಲ್ಲಿ ಈಗ ಎಂಪ್ಲಾಯಿ ಆಗಿರುವ ಶ್ರೀನಿವಾಸ ಕರೆ ಮಾಡಿದವನು "...ನಿನ್ನ ಒಲ್ಡ್ ಫ್ರೆಂಡ್ ಹೋಗಿ ಬಿಟ್ಟರಂತೆ ಕಣೊ..." ಎಂದರೆ ಒಮ್ಮೆ ಕ್ಷಣಕ್ಕೆ ಅರಿವಾಗಲಿಲ್ಲ " ಯಾರು ಎಂದೆ...?" " ಅದೇ ಬೊಮ್ಮ ಸಂದ್ರದಲ್ಲಿದ್ದರಲ್ಲ ಅವರು..." ಒಹೋ.. ಮುಂದೆ ಮಾತಾಡಲಾಗಲಿಲ್ಲ. ... ನಾಲ್ಕು ದಿನ ಮೊದಲು ಇಲ್ಲಿ ಗಣಪತಿ ದೇವಸ್ಥಾನದ ಹತ್ತಿರ ಸಿಕ್ಕಿದವರು ನನ್ನ ಬಗ್ಗೆ ವಿಚಾರಿಸಿದ್ದರಂತೆ. ಮೊಬೈಲು ನಂಬರು ಕೊಡು ಎಂದಿದ್ಡಾರೆ. ಇವನು ಆಯಿತು ವಿಚಾರಿಸಿ ಕೊಡುತ್ತೇನೆ ಎಂದು ಎರಡ್ಮೂರು ದಿನವಾದರೂ ನನ್ನನ್ನು ಸಂಪರ್ಕಿಸಿಲ್ಲ. ಮರುದಿನ ಕೂಡಾ ಸಿಕ್ಕಿದಾಗ ನಂಬರು ಇನ್ನು ತೆಗೆದುಕೊಳ್ಳಲಾಗಿಲ್ಲ ಅಂದಿದ್ದಕ್ಕೆ ಮುಖ ಸಣ್ಣದು ಮಾಡಿ ಅವನ ಹತ್ತಿರ ಮಾತಾಡಬೇಕಿತ್ತು .. ಛೇ... ಎಂದು ಗೊಣಗಿಕೊಂಡಿದ್ದಾರೆ ಅಷ್ಟೆ. ಮರುದಿನಕ್ಕೆ ಅವರಿಲ್ಲ. ಜಾಲಹಳ್ಳಿಯಲ್ಲಿ ಎಂದಿನಂತೆ ಭೇಏಯಾಗುತ್ತಿದ್ದ ಗಣೇಶ ದೇವಸ್ಥಾನದ ಹತ್ತಿರ ಕಲ್ಲು ಬೆಂಚಿನ ಮೇಲೆ ಕುಳಿತಲ್ಲೇ ಪ್ರಾಣ ಬಿಟ್ಟಿದಾರೆ.." ಮುಂದಿನ ಮಾತು ಕೇಳಿಸಿಕೊಳ್ಳಲಿಲ್ಲ. ಕೊನೆಯ ಕ್ಷಣದಲ್ಲಿ ಮನಸ್ಸು ಖಾಲಿ ಖಾಲಿಯಾದಂತೆನಿಸಿತು. ಯಾಕೆಂದರೆ ಹಿರಿಯರಾಗಿದ್ದಷ್ಟೂ ನಿರ್ಗಮನದ ಬಾಗಿಲು ತುಂಬ ಹತ್ತಿರಕ್ಕಿರುತ್ತವೆ. ನನಗೆ ಅಂಥ ಆತ್ಮೀಯರ ವಲಯ ದೊಡ್ಡದು. ಮತ್ಯಾವ ಕರೆಯೂ ಅಂತಹದ್ದು ಬಾರದಿರಲಿ ಅನ್ನಿಸಿ ಎರಡು ನಿಮಿಷ ಮೌನವಾಗಿದ್ದು ಬಿಟ್ಟೆ. ಆ ದಿನ ಪೂರ್ತಿ ಮೊಬೈಲಿಗೆ ಕಿವಿಗೊಡಲೇ ಕಿರ್ಕಿರಿ. ಪಾಪ ಒಂದು ದಶಕಕ್ಕೂ ಹೆಚ್ಚಿನ ಕಾಲ ಒಬ್ಬಂಟಿಯಾಗಿ ಕಳೆದು ಹೋದ ಆ ಹಿರಿಯ ಜೀವಕ್ಕೆ ಏನು ಹೇಳಿಕೊಳ್ಳುವುದಿತ್ತೋ...?

Sunday, August 4, 2013

ಎಲ್ಲದಕ್ಕೂ ಸೌಂದರ್ಯವೇ ಮಾನದಂಡವಾಗುವುದಾದರೆ ...?

( ಯಾವಾಗಲೂ ಸೌಂದರ್ಯವೋ, ಆಪೊಸಿಟ್ ಸೆಕ್ಸ್ ಅಥವಾ ಪ್ರಭಾವಿ ಒತ್ತಡವನ್ನೇ ಮನಸ್ಸು ಬಯಸುತ್ತದಲ್ಲ ಅದು ಅಚ್ಚರಿಗೊಳಿಸುತ್ತದೆ )
( ಪ್ರತಿಯೊಂದು ಕ್ಷೇತ್ರದಲ್ಲೂ ಸೌಂದರ್ಯವೊಂದು ಮಾನದಂಡವಾಗುವುದಾದರೆ ಮಾಮೂಲಿನ, ಸಾಮಾನ್ಯದವರು, ಉಳಿದವರೆಲ್ಲಾ ಎಲ್ಲಿ ಹೋಗಬೇಕು...? ಈ ಪ್ರಶ್ನೆ ಯಾಕೆ ಉಂಟಾಗುತ್ತಿದೆಯೆಂದರೆ ಇವತ್ತು ಅಸಾಮಾನ್ಯ ಅಥವಾ ಮೇಧಾವಿಗಳು ಕೂಡಾ ಕನಿಷ್ಠ ಮಟ್ಟದ ರೂಪ ಸೌಂದರ್ಯದ ಕಡೆಗೆ ಗಮನ ಕೊಡುತ್ತಿರುವುದು ಸಣ್ಣನೆಯ ಜಿಜ್ಞಾಸೆ ಉಂಟು ಮಾಡುತ್ತಿದೆ ).
ಸಾನಿಯಾ ಮಿರ್ಜಾ/ಸೈನಾ ನೆಹ್ವಾಲ್ / ಜ್ವಾಲ  ಅಕಸ್ಮಾತಾಗಿ ನಮ್ಮ ಪಕ್ಕದ ಗಲ್ಲಿಯಲ್ಲಿರೋ ಯಾವುದೋ ಸಾಮಾನ್ಯ ಹೆಣ್ಣು ಮಗಳಂತೆಯೋ ಅಥವಾ ಕೊಂಚ ಕುರೂಪಿ ಎನ್ನಿಸುವ ದೇಹ ಸೌಂದರ್ಯವನ್ನು ಪಡೆದಿದ್ದರೆ ಅವರನ್ನು ಇಷ್ಟೊಂದು ಆದರಿಸಲಾಗುತ್ತಿತ್ತಾ...?
 
...ಇಂಪಾಸಿಬಲ್...
ಪ್ರಶ್ನೆ ಸುಂದರವಾಗಿದ್ದರಿಂದಲೇ ಅವರೆಲ್ಲಾ  ಇಷ್ಟು ಪ್ರಸಿದ್ಧಿ ಪಡೆದಳಾ ಅಥವಾ ಆಟಂದಿಂದಾನಾ ಎಂದಲ್ಲ. ಅಸಲಿಗೆ ಇವತ್ತಿನ ಎಲ್ಲಾ ಕ್ಷೇತ್ರದಲ್ಲೂ ಕಂಡೂ ಕಾಣದಂತೆ ಅದರಲ್ಲೂ ಹೆಣ್ಣು ಮಕ್ಕಳ ಸೌಂದರ್ಯವನ್ನು ಆಧಾರವಾಗಿಸಿಕೊಂಡು ಎಲ್ಲದಕ್ಕೂ ಆಯ್ಕೆಯ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತಿದೆ ಎನ್ನುವುದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಮೇಲ್ಕಾಣಿಸಿದ ಸಾನಿಯಾ/ಸೈನಾ ಒಂದು ಉದಾಹರಣೆ ಅಷ್ಟೆ.
ಯಾಕೆಂದರೆ ಅವರಿಗಿಂತಲೂ ಮಿಗಿಲಾದ ಬೇರೆ ಕ್ರೀಡಾ ರಂಗದಲ್ಲಿ ಸಾಧನೆ ಮಾಡಿದ ಹೆಣ್ಣು ಮಕ್ಕಳು ಇವತ್ತು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದ್ದರೂ ಯಾರನ್ನೂ ಜಾಹಿರಾತು ಕ್ಷೇತ್ರಗಳು ಗಮನಿಸಲೇ ಇಲ್ಲ. ಅಷ್ಟೇಕೆ, ಹಾಕಿಯ ಮಾ೦ತ್ರಿಕ, ಸ್ಥಾನಕ್ಕಾಗಿ ಬಡಿದಾಟದ ಹೋರಾಟ ನಡೆಸಿದ ಧನರಾಜ್ ಪಿಳ್ಳೆಯಾಗಲಿ, ಕನ್ನಡದ ದಾಖಲೆಯ ಬೌಲರ್ ಇದೇ ಅನೀಲ ಕುಂಬ್ಳೆಯಾಗಲಿ ( ಹಾಗೆ ನೋಡಿದರೆ ಕುಂಬ್ಳೆ ಸಾಕಷ್ಟು ಸೊಗಸುಗಾರನೇ ಆದರೆ ಗ್ಲಾಮರ್‌ನ್ನು ಆತ ಪ್ರದರ್ಶಿಸುತ್ತಿರಲಿಲ್ಲ ) ಇವತ್ತು ಅಷ್ಟಕ್ಕಷ್ಟೆ. ಅದೇ ಅವನಿಗಿಂತಲೂ ಕಡಿಮೆ ದಾಖಲೆಯ ಆದರೆ ಗ್ಲಾಮರಸ್ ಯುವಕ ಶ್ರೀಶಾಂತ್ ಇವತ್ತು ಹೆಚ್ಚು ಆಪ್ತ.
ಅಷ್ಟೇಕೆ ಕನಿಷ್ಟ ಸಣ್ಣ ಸಮಾರಂಭಗಳನ್ನು ಗಮನಿಸುವಾಗಲೂ ಒಂದು ವಿಷಯ ಎದ್ದು ಕಂಡುಬರುತ್ತದೆ. ಅದ್ಭುತ ಸೌಂದರ್ಯವತಿಯರು ಸೂಜಿಗಲ್ಲಿನಂತೆ ಸೆಳೆಯುತ್ತಿರುತ್ತಾರೆ. ಅಸಲಿಗೆ ಆಕೆಯಲ್ಲಿನ ಸಾಮರ್ಥ್ಯ ಎಷ್ಟು ಎಂದು ಮಾತ್ರ ಯಾರೂ ಗಮನಿಸಿರುವುದಿಲ್ಲ. ಇದರರ್ಥ ಸುಂದರವಾಗಿರುವ ಎಲ್ಲಾ ಜನರಲ್ಲಿ ಅಥವಾ ಮಹಿಳೆಯರಲ್ಲಿ ಸಾಮರ್ಥ್ಯ ಇರುವುದಿಲ್ಲ ಎಂದಲ್ಲ. ಆದರೆ ಸಾಕಷ್ಟು ಪ್ರತಿಭಾನ್ವಿತರಾಗಿದ್ದೂ ಸೌಂದರ್ಯವಿಲ್ಲದೋರು ಮೂಲೆಗುಂಪಾಗುತ್ತಾರಲ್ಲ ಅದು ಮನಸ್ಸನ್ನು ತಾಕುತ್ತದೆ. ಅವರು ನೋಡಲು ಆಕರ್ಷಣೀಯವಾಗಿಲ್ಲ ಎಂದ ಮಾತ್ರಕ್ಕೆ ನಾವು ಅವರನ್ನು ಮನಸ್ಸಿನಾಚೆಗೆ ಸರಿಸಿ ಬಿಡುವ ಸಂಪ್ರದಾಯವೇಕೆ...?
ಇದೇ ಸಾನಿಯಾ/ಸೈನಾ/ ಇತ್ಯಾದಿಗಳು ಅಕಸ್ಮಾತ ಮಾಮೂಲಿ ರೂಪಿನವಳಾಗಿದ್ದರೆ ಅಷ್ಟಾಗಿ ಮಿಂಚುತ್ತಿದ್ದಳಾ?ಅವಶ್ಯಕತೆ ಇರುವ-ಇಲ್ಲದೆಡೆಯಲ್ಲೆಲ್ಲಾ ಸಭೆ ಸಮಾರಂಭಗಳಲ್ಲಿ ಬಹುಶ: ಆಕೆಯ ಮೂಗುತಿ ಮಿನುಗಿದಷ್ಟು ಇನ್ನಾವುದೂ ಮಿನುಗಿರಲಿಕ್ಕಿಲ್ಲ. ಅಗತ್ಯ ಇದೆಯೋ ಇಲ್ಲವೋ ಆಕೆಯನ್ನು ಆಹ್ವಾನಿಸಲು ಪೈಪೋಟಿಯೇ ನಡೆದು ಹೋದವು. ಅದೆಷ್ಟು ಸಮಾರ೦ಭಗಳಲ್ಲಿ, ಏನು ಚರ್ಚೆ ನಡೆಯುತ್ತಿದೆ, ಇದೆಲ್ಲಾ ಯಾಕೆ ಚರ್ಚಿಸುತ್ತಿದ್ದಾರೆ ಅರ್ಥ ಆಗುತ್ತಿತ್ತೋ ಇಲ್ಲವೊ ಗೊತ್ತಿಲ್ಲ. ಆಕೆ ಮುಗುಮ್ಮಾಗಿ ಮಾತಾಡಿ ಎದ್ದು ಬರಬೇಕಾಗುತ್ತಿತ್ತಾದರೂ ಅನಿವಾರ್ಯವಾಗಿ ಅತಿಥಿಯಾಗಿ, ಗ್ಲಾಮರಸ್ ಅಟ್ರಾಕ್ಷನ್‌ಗಾಗಿ ಆಕೆ ಪಾಲ್ಗೊಂಡಿದ್ದಿದೆ. (ಮೇರಿ ಕೊಂ ಗೆ ಇವರಷ್ಟು ಜಾಹಿರಾತು ಬರದಿರಲು ಆಕೆ ಮದುವೆಯಾಗಿ ಮಕ್ಕಲಾಗಿರುವ ಮತ್ತು ಮಾಡ ಆಗಿಲ್ಲದ)
ಆದರೆ ಚಿನ್ನದ ರಾಣಿ ಎಂದೇ ಖ್ಯಾತಿ ಪಡೆದ, ಓಡುವುದನ್ನು ಬಿಟ್ಟು ಬೇರಾವುದೇ ಗ್ಲಾಮರ್ ಕಡೆಗೆ ಗಮನವನ್ನೇ ನೀಡದ ಪಿ.ಟಿ. ಉಷಾ ಯಾವಾಗ ಟ್ರಾಕ್ ಬಿಟ್ಟಿಳಿದಳೋ, ಯಾವಾಗ ಚಿನ್ನದ ಬೇಟೆ ನಿಂತಿತೋ, ಅದಕ್ಕಿಂತಲೂ ಮೊದಲೇ ಪತ್ರಿಕೆ ಆವೃತ್ತಿಗಳಿಂದ ಆಕೆ ಕಾಣೆಯಾಗಿದ್ದಳು. ಅಷ್ಟೇಕೆ ಆಕೆ ಆಟದಿಂದ ನಿವೃತ್ತಿಯಾದದ್ದೇ ಆದದ್ದು ಆಕೆಯ ಬಗ್ಗೆ ಒಂದೇ ಒಂದು ಸಾಲು ಅಲ್ಲಲ್ಲಿ ಕೂಡಾ ಕಾಣದಂತೆ ಮಾಯವಾಗಿಬಿಟ್ಟಿದ್ದವು. ಆದರೆ ಕ್ರಿಕೆಟ್‌ನ ಕಪಿಲ್ ಇವತ್ತೂ ಮಾಡೆಲಿಂಗ್ ಮಾಡುತ್ತಾನೆ.
          ಆದರೆ ಇದೇ ಸ್ಟಾರ ಆಟಗಾರರು ಅಥವಾ ನಟಿಯರು ಇವತ್ತು ಜಾಗತಿಕ ಎಷ್ಟನೆ ರ‍್ಯಾಂಕಿಂಗ್‌ನಲ್ಲಿದ್ದಾರೆ. ಆಕೆ ಏನು ತಿನ್ನುತ್ತಾಳೆ. ಯಾಕೆ ರ‍್ಯಾಂಕಿಂಗ್‌ನಲ್ಲಿ ಕೆಳಗಿಳಿದಳು, ಆಕೆ ಆಡುತ್ತಾಳೋ ಇಲ್ಲವೋ.. ಆಕೆಗೆ ತಲೆ ನೋವ್ಯಾಕೆ ಬಂತು. ನಿನ್ನೆ ಎಷ್ಟು ನೀರು ಕುಡಿದಳು.. ಆಕೆಯ ಟವಲ್ ಯಾವ ಕಂಪೆನಿಯದು.. ಅದಷ್ಟು ಬೆಳ್ಳಗಿರಲು ಯಾವ ಸೋಪು ಪುಡಿ ಉಪಯೋಗಿಸುತ್ತಾಳೆ... ಆಕೆ ಹಲ್ಲು ತಿಕ್ಕುವಾಗ ಹೇಗೆ ಬ್ರಶ್ ಹಿಡಿಯುತ್ತಾಳೆ...? ಇವೆಲ್ಲಾ ನಮಗೆ ಬೇಕಾ.. ಯಾವೊಬ್ಬ ವ್ಯಕ್ತಿ ಪ್ರಸಿದ್ಧನಾದ ಮಾತ್ರಕ್ಕೆ ಅವನ ಕಂಡೂ ಕಾಣದ ದಿನಚರಿಯಿಂದ ಹಿಡಿದು ಏನೆಲ್ಲಾ ವರದಿ ಮಾಡುವ ನಮಗೆ ಕನಿಷ್ಟ ಉಳಿದವರ ಕಡೆಗೆ ಗಮನ ಹರಿಸಬೇಕು ಎನ್ನುವ ಸಣ್ಣ ಮನಸ್ಸಾದರೂ, ಪರಿಜ್ಞಾನವಾದರೂ ಬೇಡವಾ...? ಕೇವಲ ಸೌಂದರ್ಯವೊಂದನ್ನು ಬಂಡವಾಳ ಮಾಡಿಕೊಂಡು ಕೆಲಸದಿಂದ ಪದವಿಯವರೆಗೆ ಎಲ್ಲವನ್ನು ಗೆಲ್ಲುತ್ತಾ, ಪಡೆದುಕೊಳ್ಳುತ್ತಿರುವ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಗೊತ್ತಾಗುತ್ತದೆ.
      ಅಷ್ಟೇಕೆ ಬಹುಶ: ಚಿತ್ರರಂಗದ ವ್ಯಕ್ತಿತ್ವಗಳು ಇವತ್ತು ನಮ್ಮ ನಿಮ್ಮ ಮನದಲ್ಲಿ ಪ್ರಭಾವಶಾಲಿಯಾಗಿ ಬೇರೂರಿದಷ್ಟು ಬೇರಾವ ಪರ್ಸನಾಲಿಟಿಗಳು ಇವತ್ತು ಅಚ್ಚೊತ್ತುತ್ತಿಲ್ಲ. ಯಾಕೆ, ಅವರೆಲ್ಲಾ ರಂಗು ರಂಗಿನ ಥಳುಕಿನ ಬದುಕಿನ ಪ್ರತಿಬಿಂಬಗಳಾಗಿ ನಮ್ಮ ಕನಸಿನ ಅಮೂರ್ತತೆಗೊಂದು ಮೂರ್ತ ರೂಪವನ್ನು ಕಲ್ಪಿಸುತ್ತಾರೆಂದೇ ...? ಎಷ್ಟು ಆರ್ಡಿನರಿಯಾಗಿರುವ "ಅಂತರಾ ಮಾಲಿ" ಬೀರುವ ಪ್ರಭಾವ, ಆಕೆ ನೀಡುವ ಸಂದೇಶವನ್ನು, ಸುಲಭವಾಗಿ ಸ್ವೀಕರಿಸುವ ಮನಸ್ಸಿನ ಮೇಲೆ, ಪಕ್ಕದ ಮನೆಯ ಆತ್ಮೀಯವಾಗಿ ನಮ್ಮ ಕುಟುಂಬದಲ್ಲಿ ಬೆರೆತು ಹೋದ ಸಾಧಾರಣ ರೂಪಿನ ಹುಡುಗಿ ಪ್ರಭಾವ ಬೀರಲಾರಳು. ಒಬ್ಬಾತ ತಾರೆಯ ಅಥವಾ ನಟಿಯೊಬ್ಬಳ ಆರಾಧನೆಯ ಪರಾಕಾಷ್ಟೆ ಎಷ್ಟೆಂದರೆ ಒಂದೊಮ್ಮೆ ಆಕೆಗೋಸ್ಕರ ಪ್ರಾಣವನ್ನೂ ಕೊಡಲು ಮುಂದಾಗೋದು ಇಂತಹ ಮೂರ್ಖತನದಲ್ಲೊಂದು. ಯಾವುದೇ ಚಿತ್ರ ತಾರೆ ಅಥವಾ ಅವರ ಥಳುಕಿನ ಪ್ರಪಂಚದ ಒಂದು ಮುಖವನ್ನಷ್ಟೆ ಕಂಡಿರುವ ಮನಸ್ಸಿಗೆ, ಅದೇ ವಾಸ್ತವ ಎ೦ದು ನಂಬುವ ಬಣ್ಣದ ಬದುಕಿನ ಚೆಂದವೇ ಇಷ್ಟವಾಗುವ ನಮಗೆ ಅದರಾಚೆಗಿನ ಸತ್ಯತೆಗಳು ಬದುಕಿನ ಕಠೋರತೆಗಳು ಬೆಚ್ಚಿಸುವುದೇ ಇಲ್ಲ.
ಅದನ್ನು ಅಂದರೆ ವಾಸ್ತವವನ್ನು ನೇರವಾಗಿ ಬೆರಳು ಮಾಡಿ ತೋರಿಸುವ ಅದೇ ಗಬ್ಬು ವಾಸನೆಯ ಫ್ರೆಂಡು ನಮಗೆ ಶೀ... ಅನ್ನಿಸುತ್ತಾನೆ. ನಮಗಷ್ಟೂ ಗೊತ್ತಿಲ್ಲವಾ ಅನ್ನಿಸುವಂತೆ ಮಾಡುತ್ತಾನೆ. 

     ಆದರೆ ಅಸಲಿಗೆ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದ ನಾವು ಅಲ್ಲೇ ಪಿಗ್ಗಿ ಬೀಳುತ್ತೇವೆ. ಯಾಕೆಂದರೆ ಗಬ್ಬು ವಾಸನೆಯ ಫ್ರೆಂಡು ಹೇಳುವ ವಾಸ್ತವತೆ ನಮ್ಮ ಮನಸ್ಸಿಗೆ ನಾಟುವುದಿಲ್ಲ. ಅದೇ ಜೊತೆಗೆ ಇರುವ ಅಥವಾ ನೋಡಲು ಲಕ್ಷಣವಾಗಿರುವ ಗೆಳತಿ ಹೇಳಲಿ ಮರುದಿನವೇ ನಮ್ಮ ಆಟಿಟ್ಯೂಡು ಬದಲಾಗಿರುತ್ತದೆ. ಯಾಕೆಂದರೆ ಯಾವಾಗಲೂ ಸೌಂದರ್ಯವೋ, ಆಪೊಸಿಟ್ ಸೆಕ್ಸ್ ಅಥವಾ ಪ್ರಭಾವಿ ಒತ್ತಡವನ್ನೇ ಮನಸ್ಸು ಬಯಸುತ್ತದಲ್ಲ ಅದು ಅಚ್ಚರಿಗೊಳಿಸುತ್ತದೆ. 
     ಅಸಲಿಗೆ ಸೌಂದರ್ಯ ಸ್ಪರ್ಧೆಯನ್ನು ನಡೆಸಿದಾಗ ಆಯ್ಕೆಯಾದವಳು ಉದುರಿಸುವ ನುಡಿಮುತ್ತುಗಳಂತೂ ಅಸಹ್ಯದ ಪರಮಾವಧಿ ಯಾಕನ್ನಿಸುತ್ತದೆಂದರೆ, ಆಕೆಯ ವರ್ತನೆಗೂ ಮಾತುಗಳಿಗಿರುವ ವ್ಯತ್ಯಾಸವಲ್ಲದೇ ಬೇರೇನಲ್ಲ. ಸಾಹಿತ್ಯದಿಂದ ಹಿಡಿದು ಯಾವುದೇ ರಂಗದಲ್ಲೂ ಸೌಂದರ್ಯವನ್ನೇ ಮಾನದಂಡವಾಗಿ ಬಳಸುತ್ತಿರುವ ಪರಿ ಯಾವ ರೀತಿಯದ್ದಾಗಿದೆಯೆ೦ದರೆ ಬಹುಶ: ಈ ಲೋಕದಲ್ಲಿ ಕುರೂಪಿಯರಂತೂ ಬಿಡಿ, ಸಾಮಾನ್ಯ ವರ್ಗದವರೂ ಕನಸುಗಳನ್ನೇ ಕಾಣುವುದಿಲ್ಲವಾ ಎನ್ನಿಸುವ ಹತಾಶೆಯ ಭಾವ ಮೂಡುತ್ತಿರುವುದು ವಾಸ್ತವತೆಯ ಎದುರಾ ಎದುರೇ ಭ್ರಮೆಯತ್ತ ಸಾಗುತ್ತಿರುವುದರ ವಿಪರ್ಯಾಸವಲ್ಲದೇ ಇನ್ನೇನು...?
     ನಮ್ಮ ನಮ್ಮ ಇತಿಮಿತಿಗಳು ನಾವು ಏನು ಅನ್ನೋದು ನಮಗೇ ಅರ್ಥವಾಗದಿರುವಾಗಲೇ ಇಂಥವು ಘಟಿಸುತ್ತವೆ. ಮನಸ್ಸು ತುಂಬ ಹಿತ ಎನ್ನಿಸುವಂತಹದನ್ನು ಮಾದರಿಯಾಗಿ ಸ್ವೀಕರಿಸಲು ಆರಂಭಿಸುತ್ತದೆ. ಒಮ್ಮೆ ಅದಕ್ಕೆ ಮನಸ್ಸು ಹೊಂದಿಕೊಂಡು ಬಿಟ್ಟರೆ ಆ ಮಾಡೆಲ್ ಮಾಡುವುದೆಲ್ಲಾ ಮಾದರಿಯಾಗುತ್ತದೆ. ಅದರ ಅನುಕರಣೆಯಲ್ಲೇ ಮನಸ್ಸು ಬದುಕತೊಡಗುತ್ತದೆ. ಅಲ್ಲಿಗೆ ಬದುಕಿನ ಸ್ವಂತಿಕೆ ಸತ್ತು ಹೋಗುತ್ತದೆ. ವಾಸ್ತವದಿಂದ ದೂರ ಓಡಿರುವ ಮನಸ್ಸು ನಂತರದಲ್ಲಿ ಸುಲಭಕ್ಕೆ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಅರ್ಥವಾಗುವ ಹೊತ್ತಿಗೆ ಬದುಕಿನಲ್ಲಿ ಸ್ವಂತಿಕೆಯನ್ನು ರೂಪಿಸಿಕೊಳ್ಳುವ ಅಥ್ವಾ ಸ್ವ೦ತದ ಗುರುತನ್ನು ಮೂಡಿಸುವ ಮನಸ್ಸು ಪಕ್ವವಾಗುವ ಹೊತ್ತಿಗೆ ತುಂಬಾ ತಡವಾಗಿ ಬಿಟ್ಟಿರುತ್ತದೆ. ಯಾಕೆಂದರೆ ಯಾವುದೇ ಇರಲಿ ಅದು ದೈಹಿಕ ಸೌ೦ದರ್ಯವೇ ಇರಲಿ, ಐಹಿಕ ಭೋಗವೇ ಇರಲಿ... ಇನ್ನಾವುದೇ ರಂಗದ ಸಂಬಂಧಿತವಾಗಿರಲಿ, ಮನಸ್ಸು ಎಲ್ಲದರಲ್ಲೂ ಚೆಂದವನ್ನೇ ನಮ್ಮ ಮನಸ್ಸಿಗೆ ಹಿಡಿಸುವಂತಹದ್ದನ್ನೇ ಹುಡುಕೋದಾದರೆ ಉಳಿದ ಜೀವ ವರ್ಗಗಳಿಗೆ ಇಲ್ಲಿ ಬೆಲೆನೇ ಇಲ್ಲವಾ ... ?