Sunday, August 4, 2013

ಎಲ್ಲದಕ್ಕೂ ಸೌಂದರ್ಯವೇ ಮಾನದಂಡವಾಗುವುದಾದರೆ ...?

( ಯಾವಾಗಲೂ ಸೌಂದರ್ಯವೋ, ಆಪೊಸಿಟ್ ಸೆಕ್ಸ್ ಅಥವಾ ಪ್ರಭಾವಿ ಒತ್ತಡವನ್ನೇ ಮನಸ್ಸು ಬಯಸುತ್ತದಲ್ಲ ಅದು ಅಚ್ಚರಿಗೊಳಿಸುತ್ತದೆ )
( ಪ್ರತಿಯೊಂದು ಕ್ಷೇತ್ರದಲ್ಲೂ ಸೌಂದರ್ಯವೊಂದು ಮಾನದಂಡವಾಗುವುದಾದರೆ ಮಾಮೂಲಿನ, ಸಾಮಾನ್ಯದವರು, ಉಳಿದವರೆಲ್ಲಾ ಎಲ್ಲಿ ಹೋಗಬೇಕು...? ಈ ಪ್ರಶ್ನೆ ಯಾಕೆ ಉಂಟಾಗುತ್ತಿದೆಯೆಂದರೆ ಇವತ್ತು ಅಸಾಮಾನ್ಯ ಅಥವಾ ಮೇಧಾವಿಗಳು ಕೂಡಾ ಕನಿಷ್ಠ ಮಟ್ಟದ ರೂಪ ಸೌಂದರ್ಯದ ಕಡೆಗೆ ಗಮನ ಕೊಡುತ್ತಿರುವುದು ಸಣ್ಣನೆಯ ಜಿಜ್ಞಾಸೆ ಉಂಟು ಮಾಡುತ್ತಿದೆ ).
ಸಾನಿಯಾ ಮಿರ್ಜಾ/ಸೈನಾ ನೆಹ್ವಾಲ್ / ಜ್ವಾಲ  ಅಕಸ್ಮಾತಾಗಿ ನಮ್ಮ ಪಕ್ಕದ ಗಲ್ಲಿಯಲ್ಲಿರೋ ಯಾವುದೋ ಸಾಮಾನ್ಯ ಹೆಣ್ಣು ಮಗಳಂತೆಯೋ ಅಥವಾ ಕೊಂಚ ಕುರೂಪಿ ಎನ್ನಿಸುವ ದೇಹ ಸೌಂದರ್ಯವನ್ನು ಪಡೆದಿದ್ದರೆ ಅವರನ್ನು ಇಷ್ಟೊಂದು ಆದರಿಸಲಾಗುತ್ತಿತ್ತಾ...?
 
...ಇಂಪಾಸಿಬಲ್...
ಪ್ರಶ್ನೆ ಸುಂದರವಾಗಿದ್ದರಿಂದಲೇ ಅವರೆಲ್ಲಾ  ಇಷ್ಟು ಪ್ರಸಿದ್ಧಿ ಪಡೆದಳಾ ಅಥವಾ ಆಟಂದಿಂದಾನಾ ಎಂದಲ್ಲ. ಅಸಲಿಗೆ ಇವತ್ತಿನ ಎಲ್ಲಾ ಕ್ಷೇತ್ರದಲ್ಲೂ ಕಂಡೂ ಕಾಣದಂತೆ ಅದರಲ್ಲೂ ಹೆಣ್ಣು ಮಕ್ಕಳ ಸೌಂದರ್ಯವನ್ನು ಆಧಾರವಾಗಿಸಿಕೊಂಡು ಎಲ್ಲದಕ್ಕೂ ಆಯ್ಕೆಯ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತಿದೆ ಎನ್ನುವುದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಮೇಲ್ಕಾಣಿಸಿದ ಸಾನಿಯಾ/ಸೈನಾ ಒಂದು ಉದಾಹರಣೆ ಅಷ್ಟೆ.
ಯಾಕೆಂದರೆ ಅವರಿಗಿಂತಲೂ ಮಿಗಿಲಾದ ಬೇರೆ ಕ್ರೀಡಾ ರಂಗದಲ್ಲಿ ಸಾಧನೆ ಮಾಡಿದ ಹೆಣ್ಣು ಮಕ್ಕಳು ಇವತ್ತು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದ್ದರೂ ಯಾರನ್ನೂ ಜಾಹಿರಾತು ಕ್ಷೇತ್ರಗಳು ಗಮನಿಸಲೇ ಇಲ್ಲ. ಅಷ್ಟೇಕೆ, ಹಾಕಿಯ ಮಾ೦ತ್ರಿಕ, ಸ್ಥಾನಕ್ಕಾಗಿ ಬಡಿದಾಟದ ಹೋರಾಟ ನಡೆಸಿದ ಧನರಾಜ್ ಪಿಳ್ಳೆಯಾಗಲಿ, ಕನ್ನಡದ ದಾಖಲೆಯ ಬೌಲರ್ ಇದೇ ಅನೀಲ ಕುಂಬ್ಳೆಯಾಗಲಿ ( ಹಾಗೆ ನೋಡಿದರೆ ಕುಂಬ್ಳೆ ಸಾಕಷ್ಟು ಸೊಗಸುಗಾರನೇ ಆದರೆ ಗ್ಲಾಮರ್‌ನ್ನು ಆತ ಪ್ರದರ್ಶಿಸುತ್ತಿರಲಿಲ್ಲ ) ಇವತ್ತು ಅಷ್ಟಕ್ಕಷ್ಟೆ. ಅದೇ ಅವನಿಗಿಂತಲೂ ಕಡಿಮೆ ದಾಖಲೆಯ ಆದರೆ ಗ್ಲಾಮರಸ್ ಯುವಕ ಶ್ರೀಶಾಂತ್ ಇವತ್ತು ಹೆಚ್ಚು ಆಪ್ತ.
ಅಷ್ಟೇಕೆ ಕನಿಷ್ಟ ಸಣ್ಣ ಸಮಾರಂಭಗಳನ್ನು ಗಮನಿಸುವಾಗಲೂ ಒಂದು ವಿಷಯ ಎದ್ದು ಕಂಡುಬರುತ್ತದೆ. ಅದ್ಭುತ ಸೌಂದರ್ಯವತಿಯರು ಸೂಜಿಗಲ್ಲಿನಂತೆ ಸೆಳೆಯುತ್ತಿರುತ್ತಾರೆ. ಅಸಲಿಗೆ ಆಕೆಯಲ್ಲಿನ ಸಾಮರ್ಥ್ಯ ಎಷ್ಟು ಎಂದು ಮಾತ್ರ ಯಾರೂ ಗಮನಿಸಿರುವುದಿಲ್ಲ. ಇದರರ್ಥ ಸುಂದರವಾಗಿರುವ ಎಲ್ಲಾ ಜನರಲ್ಲಿ ಅಥವಾ ಮಹಿಳೆಯರಲ್ಲಿ ಸಾಮರ್ಥ್ಯ ಇರುವುದಿಲ್ಲ ಎಂದಲ್ಲ. ಆದರೆ ಸಾಕಷ್ಟು ಪ್ರತಿಭಾನ್ವಿತರಾಗಿದ್ದೂ ಸೌಂದರ್ಯವಿಲ್ಲದೋರು ಮೂಲೆಗುಂಪಾಗುತ್ತಾರಲ್ಲ ಅದು ಮನಸ್ಸನ್ನು ತಾಕುತ್ತದೆ. ಅವರು ನೋಡಲು ಆಕರ್ಷಣೀಯವಾಗಿಲ್ಲ ಎಂದ ಮಾತ್ರಕ್ಕೆ ನಾವು ಅವರನ್ನು ಮನಸ್ಸಿನಾಚೆಗೆ ಸರಿಸಿ ಬಿಡುವ ಸಂಪ್ರದಾಯವೇಕೆ...?
ಇದೇ ಸಾನಿಯಾ/ಸೈನಾ/ ಇತ್ಯಾದಿಗಳು ಅಕಸ್ಮಾತ ಮಾಮೂಲಿ ರೂಪಿನವಳಾಗಿದ್ದರೆ ಅಷ್ಟಾಗಿ ಮಿಂಚುತ್ತಿದ್ದಳಾ?ಅವಶ್ಯಕತೆ ಇರುವ-ಇಲ್ಲದೆಡೆಯಲ್ಲೆಲ್ಲಾ ಸಭೆ ಸಮಾರಂಭಗಳಲ್ಲಿ ಬಹುಶ: ಆಕೆಯ ಮೂಗುತಿ ಮಿನುಗಿದಷ್ಟು ಇನ್ನಾವುದೂ ಮಿನುಗಿರಲಿಕ್ಕಿಲ್ಲ. ಅಗತ್ಯ ಇದೆಯೋ ಇಲ್ಲವೋ ಆಕೆಯನ್ನು ಆಹ್ವಾನಿಸಲು ಪೈಪೋಟಿಯೇ ನಡೆದು ಹೋದವು. ಅದೆಷ್ಟು ಸಮಾರ೦ಭಗಳಲ್ಲಿ, ಏನು ಚರ್ಚೆ ನಡೆಯುತ್ತಿದೆ, ಇದೆಲ್ಲಾ ಯಾಕೆ ಚರ್ಚಿಸುತ್ತಿದ್ದಾರೆ ಅರ್ಥ ಆಗುತ್ತಿತ್ತೋ ಇಲ್ಲವೊ ಗೊತ್ತಿಲ್ಲ. ಆಕೆ ಮುಗುಮ್ಮಾಗಿ ಮಾತಾಡಿ ಎದ್ದು ಬರಬೇಕಾಗುತ್ತಿತ್ತಾದರೂ ಅನಿವಾರ್ಯವಾಗಿ ಅತಿಥಿಯಾಗಿ, ಗ್ಲಾಮರಸ್ ಅಟ್ರಾಕ್ಷನ್‌ಗಾಗಿ ಆಕೆ ಪಾಲ್ಗೊಂಡಿದ್ದಿದೆ. (ಮೇರಿ ಕೊಂ ಗೆ ಇವರಷ್ಟು ಜಾಹಿರಾತು ಬರದಿರಲು ಆಕೆ ಮದುವೆಯಾಗಿ ಮಕ್ಕಲಾಗಿರುವ ಮತ್ತು ಮಾಡ ಆಗಿಲ್ಲದ)
ಆದರೆ ಚಿನ್ನದ ರಾಣಿ ಎಂದೇ ಖ್ಯಾತಿ ಪಡೆದ, ಓಡುವುದನ್ನು ಬಿಟ್ಟು ಬೇರಾವುದೇ ಗ್ಲಾಮರ್ ಕಡೆಗೆ ಗಮನವನ್ನೇ ನೀಡದ ಪಿ.ಟಿ. ಉಷಾ ಯಾವಾಗ ಟ್ರಾಕ್ ಬಿಟ್ಟಿಳಿದಳೋ, ಯಾವಾಗ ಚಿನ್ನದ ಬೇಟೆ ನಿಂತಿತೋ, ಅದಕ್ಕಿಂತಲೂ ಮೊದಲೇ ಪತ್ರಿಕೆ ಆವೃತ್ತಿಗಳಿಂದ ಆಕೆ ಕಾಣೆಯಾಗಿದ್ದಳು. ಅಷ್ಟೇಕೆ ಆಕೆ ಆಟದಿಂದ ನಿವೃತ್ತಿಯಾದದ್ದೇ ಆದದ್ದು ಆಕೆಯ ಬಗ್ಗೆ ಒಂದೇ ಒಂದು ಸಾಲು ಅಲ್ಲಲ್ಲಿ ಕೂಡಾ ಕಾಣದಂತೆ ಮಾಯವಾಗಿಬಿಟ್ಟಿದ್ದವು. ಆದರೆ ಕ್ರಿಕೆಟ್‌ನ ಕಪಿಲ್ ಇವತ್ತೂ ಮಾಡೆಲಿಂಗ್ ಮಾಡುತ್ತಾನೆ.
          ಆದರೆ ಇದೇ ಸ್ಟಾರ ಆಟಗಾರರು ಅಥವಾ ನಟಿಯರು ಇವತ್ತು ಜಾಗತಿಕ ಎಷ್ಟನೆ ರ‍್ಯಾಂಕಿಂಗ್‌ನಲ್ಲಿದ್ದಾರೆ. ಆಕೆ ಏನು ತಿನ್ನುತ್ತಾಳೆ. ಯಾಕೆ ರ‍್ಯಾಂಕಿಂಗ್‌ನಲ್ಲಿ ಕೆಳಗಿಳಿದಳು, ಆಕೆ ಆಡುತ್ತಾಳೋ ಇಲ್ಲವೋ.. ಆಕೆಗೆ ತಲೆ ನೋವ್ಯಾಕೆ ಬಂತು. ನಿನ್ನೆ ಎಷ್ಟು ನೀರು ಕುಡಿದಳು.. ಆಕೆಯ ಟವಲ್ ಯಾವ ಕಂಪೆನಿಯದು.. ಅದಷ್ಟು ಬೆಳ್ಳಗಿರಲು ಯಾವ ಸೋಪು ಪುಡಿ ಉಪಯೋಗಿಸುತ್ತಾಳೆ... ಆಕೆ ಹಲ್ಲು ತಿಕ್ಕುವಾಗ ಹೇಗೆ ಬ್ರಶ್ ಹಿಡಿಯುತ್ತಾಳೆ...? ಇವೆಲ್ಲಾ ನಮಗೆ ಬೇಕಾ.. ಯಾವೊಬ್ಬ ವ್ಯಕ್ತಿ ಪ್ರಸಿದ್ಧನಾದ ಮಾತ್ರಕ್ಕೆ ಅವನ ಕಂಡೂ ಕಾಣದ ದಿನಚರಿಯಿಂದ ಹಿಡಿದು ಏನೆಲ್ಲಾ ವರದಿ ಮಾಡುವ ನಮಗೆ ಕನಿಷ್ಟ ಉಳಿದವರ ಕಡೆಗೆ ಗಮನ ಹರಿಸಬೇಕು ಎನ್ನುವ ಸಣ್ಣ ಮನಸ್ಸಾದರೂ, ಪರಿಜ್ಞಾನವಾದರೂ ಬೇಡವಾ...? ಕೇವಲ ಸೌಂದರ್ಯವೊಂದನ್ನು ಬಂಡವಾಳ ಮಾಡಿಕೊಂಡು ಕೆಲಸದಿಂದ ಪದವಿಯವರೆಗೆ ಎಲ್ಲವನ್ನು ಗೆಲ್ಲುತ್ತಾ, ಪಡೆದುಕೊಳ್ಳುತ್ತಿರುವ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಗೊತ್ತಾಗುತ್ತದೆ.
      ಅಷ್ಟೇಕೆ ಬಹುಶ: ಚಿತ್ರರಂಗದ ವ್ಯಕ್ತಿತ್ವಗಳು ಇವತ್ತು ನಮ್ಮ ನಿಮ್ಮ ಮನದಲ್ಲಿ ಪ್ರಭಾವಶಾಲಿಯಾಗಿ ಬೇರೂರಿದಷ್ಟು ಬೇರಾವ ಪರ್ಸನಾಲಿಟಿಗಳು ಇವತ್ತು ಅಚ್ಚೊತ್ತುತ್ತಿಲ್ಲ. ಯಾಕೆ, ಅವರೆಲ್ಲಾ ರಂಗು ರಂಗಿನ ಥಳುಕಿನ ಬದುಕಿನ ಪ್ರತಿಬಿಂಬಗಳಾಗಿ ನಮ್ಮ ಕನಸಿನ ಅಮೂರ್ತತೆಗೊಂದು ಮೂರ್ತ ರೂಪವನ್ನು ಕಲ್ಪಿಸುತ್ತಾರೆಂದೇ ...? ಎಷ್ಟು ಆರ್ಡಿನರಿಯಾಗಿರುವ "ಅಂತರಾ ಮಾಲಿ" ಬೀರುವ ಪ್ರಭಾವ, ಆಕೆ ನೀಡುವ ಸಂದೇಶವನ್ನು, ಸುಲಭವಾಗಿ ಸ್ವೀಕರಿಸುವ ಮನಸ್ಸಿನ ಮೇಲೆ, ಪಕ್ಕದ ಮನೆಯ ಆತ್ಮೀಯವಾಗಿ ನಮ್ಮ ಕುಟುಂಬದಲ್ಲಿ ಬೆರೆತು ಹೋದ ಸಾಧಾರಣ ರೂಪಿನ ಹುಡುಗಿ ಪ್ರಭಾವ ಬೀರಲಾರಳು. ಒಬ್ಬಾತ ತಾರೆಯ ಅಥವಾ ನಟಿಯೊಬ್ಬಳ ಆರಾಧನೆಯ ಪರಾಕಾಷ್ಟೆ ಎಷ್ಟೆಂದರೆ ಒಂದೊಮ್ಮೆ ಆಕೆಗೋಸ್ಕರ ಪ್ರಾಣವನ್ನೂ ಕೊಡಲು ಮುಂದಾಗೋದು ಇಂತಹ ಮೂರ್ಖತನದಲ್ಲೊಂದು. ಯಾವುದೇ ಚಿತ್ರ ತಾರೆ ಅಥವಾ ಅವರ ಥಳುಕಿನ ಪ್ರಪಂಚದ ಒಂದು ಮುಖವನ್ನಷ್ಟೆ ಕಂಡಿರುವ ಮನಸ್ಸಿಗೆ, ಅದೇ ವಾಸ್ತವ ಎ೦ದು ನಂಬುವ ಬಣ್ಣದ ಬದುಕಿನ ಚೆಂದವೇ ಇಷ್ಟವಾಗುವ ನಮಗೆ ಅದರಾಚೆಗಿನ ಸತ್ಯತೆಗಳು ಬದುಕಿನ ಕಠೋರತೆಗಳು ಬೆಚ್ಚಿಸುವುದೇ ಇಲ್ಲ.
ಅದನ್ನು ಅಂದರೆ ವಾಸ್ತವವನ್ನು ನೇರವಾಗಿ ಬೆರಳು ಮಾಡಿ ತೋರಿಸುವ ಅದೇ ಗಬ್ಬು ವಾಸನೆಯ ಫ್ರೆಂಡು ನಮಗೆ ಶೀ... ಅನ್ನಿಸುತ್ತಾನೆ. ನಮಗಷ್ಟೂ ಗೊತ್ತಿಲ್ಲವಾ ಅನ್ನಿಸುವಂತೆ ಮಾಡುತ್ತಾನೆ. 

     ಆದರೆ ಅಸಲಿಗೆ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದ ನಾವು ಅಲ್ಲೇ ಪಿಗ್ಗಿ ಬೀಳುತ್ತೇವೆ. ಯಾಕೆಂದರೆ ಗಬ್ಬು ವಾಸನೆಯ ಫ್ರೆಂಡು ಹೇಳುವ ವಾಸ್ತವತೆ ನಮ್ಮ ಮನಸ್ಸಿಗೆ ನಾಟುವುದಿಲ್ಲ. ಅದೇ ಜೊತೆಗೆ ಇರುವ ಅಥವಾ ನೋಡಲು ಲಕ್ಷಣವಾಗಿರುವ ಗೆಳತಿ ಹೇಳಲಿ ಮರುದಿನವೇ ನಮ್ಮ ಆಟಿಟ್ಯೂಡು ಬದಲಾಗಿರುತ್ತದೆ. ಯಾಕೆಂದರೆ ಯಾವಾಗಲೂ ಸೌಂದರ್ಯವೋ, ಆಪೊಸಿಟ್ ಸೆಕ್ಸ್ ಅಥವಾ ಪ್ರಭಾವಿ ಒತ್ತಡವನ್ನೇ ಮನಸ್ಸು ಬಯಸುತ್ತದಲ್ಲ ಅದು ಅಚ್ಚರಿಗೊಳಿಸುತ್ತದೆ. 
     ಅಸಲಿಗೆ ಸೌಂದರ್ಯ ಸ್ಪರ್ಧೆಯನ್ನು ನಡೆಸಿದಾಗ ಆಯ್ಕೆಯಾದವಳು ಉದುರಿಸುವ ನುಡಿಮುತ್ತುಗಳಂತೂ ಅಸಹ್ಯದ ಪರಮಾವಧಿ ಯಾಕನ್ನಿಸುತ್ತದೆಂದರೆ, ಆಕೆಯ ವರ್ತನೆಗೂ ಮಾತುಗಳಿಗಿರುವ ವ್ಯತ್ಯಾಸವಲ್ಲದೇ ಬೇರೇನಲ್ಲ. ಸಾಹಿತ್ಯದಿಂದ ಹಿಡಿದು ಯಾವುದೇ ರಂಗದಲ್ಲೂ ಸೌಂದರ್ಯವನ್ನೇ ಮಾನದಂಡವಾಗಿ ಬಳಸುತ್ತಿರುವ ಪರಿ ಯಾವ ರೀತಿಯದ್ದಾಗಿದೆಯೆ೦ದರೆ ಬಹುಶ: ಈ ಲೋಕದಲ್ಲಿ ಕುರೂಪಿಯರಂತೂ ಬಿಡಿ, ಸಾಮಾನ್ಯ ವರ್ಗದವರೂ ಕನಸುಗಳನ್ನೇ ಕಾಣುವುದಿಲ್ಲವಾ ಎನ್ನಿಸುವ ಹತಾಶೆಯ ಭಾವ ಮೂಡುತ್ತಿರುವುದು ವಾಸ್ತವತೆಯ ಎದುರಾ ಎದುರೇ ಭ್ರಮೆಯತ್ತ ಸಾಗುತ್ತಿರುವುದರ ವಿಪರ್ಯಾಸವಲ್ಲದೇ ಇನ್ನೇನು...?
     ನಮ್ಮ ನಮ್ಮ ಇತಿಮಿತಿಗಳು ನಾವು ಏನು ಅನ್ನೋದು ನಮಗೇ ಅರ್ಥವಾಗದಿರುವಾಗಲೇ ಇಂಥವು ಘಟಿಸುತ್ತವೆ. ಮನಸ್ಸು ತುಂಬ ಹಿತ ಎನ್ನಿಸುವಂತಹದನ್ನು ಮಾದರಿಯಾಗಿ ಸ್ವೀಕರಿಸಲು ಆರಂಭಿಸುತ್ತದೆ. ಒಮ್ಮೆ ಅದಕ್ಕೆ ಮನಸ್ಸು ಹೊಂದಿಕೊಂಡು ಬಿಟ್ಟರೆ ಆ ಮಾಡೆಲ್ ಮಾಡುವುದೆಲ್ಲಾ ಮಾದರಿಯಾಗುತ್ತದೆ. ಅದರ ಅನುಕರಣೆಯಲ್ಲೇ ಮನಸ್ಸು ಬದುಕತೊಡಗುತ್ತದೆ. ಅಲ್ಲಿಗೆ ಬದುಕಿನ ಸ್ವಂತಿಕೆ ಸತ್ತು ಹೋಗುತ್ತದೆ. ವಾಸ್ತವದಿಂದ ದೂರ ಓಡಿರುವ ಮನಸ್ಸು ನಂತರದಲ್ಲಿ ಸುಲಭಕ್ಕೆ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಅರ್ಥವಾಗುವ ಹೊತ್ತಿಗೆ ಬದುಕಿನಲ್ಲಿ ಸ್ವಂತಿಕೆಯನ್ನು ರೂಪಿಸಿಕೊಳ್ಳುವ ಅಥ್ವಾ ಸ್ವ೦ತದ ಗುರುತನ್ನು ಮೂಡಿಸುವ ಮನಸ್ಸು ಪಕ್ವವಾಗುವ ಹೊತ್ತಿಗೆ ತುಂಬಾ ತಡವಾಗಿ ಬಿಟ್ಟಿರುತ್ತದೆ. ಯಾಕೆಂದರೆ ಯಾವುದೇ ಇರಲಿ ಅದು ದೈಹಿಕ ಸೌ೦ದರ್ಯವೇ ಇರಲಿ, ಐಹಿಕ ಭೋಗವೇ ಇರಲಿ... ಇನ್ನಾವುದೇ ರಂಗದ ಸಂಬಂಧಿತವಾಗಿರಲಿ, ಮನಸ್ಸು ಎಲ್ಲದರಲ್ಲೂ ಚೆಂದವನ್ನೇ ನಮ್ಮ ಮನಸ್ಸಿಗೆ ಹಿಡಿಸುವಂತಹದ್ದನ್ನೇ ಹುಡುಕೋದಾದರೆ ಉಳಿದ ಜೀವ ವರ್ಗಗಳಿಗೆ ಇಲ್ಲಿ ಬೆಲೆನೇ ಇಲ್ಲವಾ ... ?


Saturday, August 3, 2013

ಮುಕ್ಕಾಲು ಅವಧಿಗೆ ಮುಗಿದು ಹೋದ ಜೀವ..!

( ಹಾಗೆ ನನ್ನೊಂದಿಗಿದ್ದೂ ಇಲ್ಲದಂತಿರುವ ಮಿತ್ರ ತೀರ ಇದೇ ನೆಲದಿಂದ ಎದ್ದು ಹೋದವನು. ಕರಾವಳಿಯ ಮೀನಿಗೆ ಬಾಯ್ಬಿಡುತ್ತಿದ್ದವನು. ಅದಕ್ಕಿಂತಲೂ ಮಿಗಿಲಾಗಿ ಈ ನೆಲದ ಬಗ್ಗೆ ಅದೊಂದು ರೀತಿಯಲ್ಲಿ ವ್ಯಾಮೋಹಿಯಾಗಿದ್ದವನು. ಮೊಟ್ಟ ಮೊದಲ ಬಾರಿಗೆ ನನಗೆ ಕರಾವಳಿಯ ಬದುಕು ಪರಿಚಯಿಸಿದವನು. ನನಗಿಂತ ಸಾಕಷ್ಟು ಹಿರಿಯನಾಗಿದ್ದರೂ ಅದೆಂದಿಗೂ ಅರಿವಿಗೆ ಬರದಂತಿದ್ದು ಬಿಟ್ಟಿದ್ದ ಅವನು.
ಮೊಟ್ಟ ಮೊದಲ ಬಾರಿಗೆ ನನ್ನೆದುರಿಗೆ ಆತ ಕುಳಿತು ಅವಳ ಬಗ್ಗೆ ಹೇಳುವಾಗ ಅವನ ಕಣ್ಣುಗಳಲ್ಲಿ ಬಣ್ಣಗಳಿದ್ದವು.)
ತೀರ ಭಾವುಕ ಹುಡುಗನಂತೆ ಆಡದಿದ್ದರೂ ಪ್ರೇಮದ ಸೆಳಕುಗಳು ಅವನ ಮೇಲೆ ಪ್ರಭಾವ ಬಿರಿದ್ದು ಸ್ಪಷ್ಟವಿತ್ತು. ಅಗಿನ್ನೂ ಹದಿನಾರು ತುಂಬದ ನನಗೆ ಇಪ್ಪತ್ತೊಂದರ ಅವನೊಡನೆ ಮೊದಲನೆಯ ದಿನವೇ ಬೆಳೆದ ಸಲುಗೆ ಮುಂದೆ ಜೀವನದುದ್ದಕ್ಕೂ ನೆರಳಿನಂತೆ ನೆನಪಾಗಿ ಉಳಿದು ಬಿಡುತ್ತದೆಂಬ ಕಲ್ಪನೆಯೂ ಇರಲಿಲ್ಲ. ಯಲ್ಲಾಪುರದ ಮೂಲೆಯೊಂದರಿಂದ ಬರುತ್ತಿದ್ದ ಅವಳು ಅವನನ್ನು ಪ್ರೀತಿಸಿಯೂ, ಇದ್ದಕ್ಕಿದ್ದಂತೆ ಇವನ ಕಾಲೇಜು ಮುಗಿವ ಮುಂಚೆ ಅವನನ್ನು ಬಿಟ್ಟು ತಾನು ಮದುವೆಗೆಂದು ಹೊರಟು ನಿಂತಾಗ ಆದ ನಿರಾಶೆಯಲ್ಲಿ ಅವನು ಪ್ರಾಣ ಕಳೆದುಕೊಳ್ಳದಿದ್ದುದೇ ಹೆಚ್ಚು. ಹಾಗಾಗದಂತೆ ತಿಂಗಳೊಪ್ಪತ್ತು ಅವನ ಜೊತೆಗಿದ್ದು ಕಾಯ್ದಿದ್ದೆ. ಕಾಲೇಜು ಪಕ್ಕದ ಏ.ಪಿ.ಏಮ್.ಸಿ. ಗೋಡಾನಿನ ಗೋಡೆಗಳಿಗೆ ಆತು ನಿಂತುಕೊ೦ಡವನ ಹೃದಯದಲ್ಲಿದ್ದುದು ನಿರಾಶೆಯಲ್ಲ... ಆಕೆಯೆಡೆಗಿನ ಕೋಪವಲ್ಲ... ಬಹುಶ ಮನೆಯವರು ಆಕೆಯನ್ನು ಒತ್ತಾಯಿಸಿದ್ದಾರೆ ಅದಕ್ಕೆ ಮದುವೆಯಾಗಿದ್ದಾಳೆ ಇಲ್ಲದಿದ್ದರೆ ನನ್ನ ಮರೆಯುತ್ತಿರಲಿಲ್ಲ ಎನ್ನುವ ಕಕ್ಕುಲಾತಿ. ಅದೇ ಯಾವಾಗಲೂ ಹುಡುಗರು ತೋರುವ ಹುಂಬ ವರಸೆ. ಛೇ ...
ಆಕೆ, ನಾವು ಮುಖ ಮೂತಿಯೂ ಕಾಣದ ಬೆಂಗಳೂರಿಗೆ ಮದುವೆಯಾಗಿ ಇವನನ್ನು ಭಗ್ನ ಪ್ರೇಮಿಯಾಗಿಸಿ ಹೋದರೆ ಮುಂದಿನ ಆರು ತಿ೦ಗಳು ಒಣ.. ಒಣ. ಕಾಲೇಜು ಹುಡುಗಿಯರಿಗೆ ಟಿಂಗಲ್ ಇಲ್ಲ... ಬಸ್ ಸ್ಟ್ಯಾಂಡಿನಲ್ಲಿ.. ಗೌಜಿಯಿಲ್ಲ.. ಪಕ್ಕದ ಅಶೋಕ ಕ್ಯಾಂಟಿನ್ ಖಾಲಿ ಖಾಲಿ.. ನಂತರದ ದಿನದಲ್ಲಿ ನಮ್ಮ ಕಾಲೇಜು ರಿಸಲ್ಟ್ ಬಂದರೆ ಪೂರ್ತಿ ಕಾಲೇಜಿಗೆ ಎರಡೇ ಪಾಸು. ಒಂದು ನಾನು ಡಿಸ್ಟಿಂಕ್ಷನಲ್ಲಿದ್ದರೆ. ನನ್ನ ಹಿಂದೆ ಅವನು. ಅದಕ್ಕಿಂತಲೂ ಅವನಿಗೆ ಖುಷಿ ಕೊಟ್ಟಿದ್ದೆಂದರೆ ಬೆಂಗಳೂರಿನ ಕಂಪೆನಿಯೊಂದು ಅವನನ್ನು ಕೈ ಬೀಸಿ ಕರೆದಿತ್ತು. ಪ್ಯಾದೆ ಸ್ನೇಹಿತ " ಸ೦ಜೀಗೇ ಬೆಂಗಳೂರಿಗೆ ಹೊಂಟ ಬಿಡ್ತೇನಿ " ಎಂದು ಎದ್ದು ನಿಂತ. " ಹೇ ಬೆಂಗಳೂರಾಗ ಎಲ್ಲಿ ಉಳೀತಿ..? ಏನ ಮಾಡ್ತಿ..? ಹುಚ್ಚರಂಗಾಡಬ್ಯಾಡ " ಎಂದರೆ " ... ಆಕಿನ್ನ ಬೆಂಗಳೂರಿಗೆ ಕೊಟ್ಟಾರ... ಇವತ್ತಲ್ಲ ನಾಳೆ ಕಂಡಾಳೇಳು.." ಎಂದವನ ಜೇಬಿನಲ್ಲಿ ಇದ್ದಿದ್ದು ಆಗೀನ ಕಾಲಕ್ಕೆ ಸಮೃದ್ಧ ಎನ್ನಿಸುವ ಐನೂರು ರೂಪಾಯಿ ಮಾತ್ರ.
ನಾನು ಮಾತ್ರ ಎಲ್ಲೂ ಏಗದೇ ಮೂರ್ನಾಲ್ಕು ಕಡೆಯಲ್ಲಿ ಮಣ್ಣು ಹೊತ್ತು ಅವನ ಹಿಂದೆ ಒಂದು ವರ್ಷದ ನಂತರ ಅದೇ ಕಂಪೆನಿಗೆ ಹೊರಟು ನಿಂತಾಗ ನನ್ನ ಹತ್ತಿರ ಅಷ್ಟು ದುಡ್ಡು ಕೂಡಾ ಇರಲಿಲ್ಲ. ಆದರೆ ಹೋಟ್ಲು ಸೇರಿಯಾದರೂ ಬದುಕಿಯೇನು ಹಿಂದಿರುಗಲಾರೆನೆಂಬ ಕ್ರೋಧ ಮನೆ ಮಾಡಿದ್ದು ಸುಳ್ಳಲ್ಲ. (ಮುಂದೆಂದೋ ಬಾರ್ ಬಾಯ್ ಆಗಿ ಕೂಡಾ ದುಡಿದೆ ಅದು ಬೇರೆ ಮಾತು) ತೀರ ಬೆಳ್ಳಂಬೆಳಿಗ್ಗೆ ಮ೦ಜಿನ ತೆರೆಯ ಬೆ೦ಗ್ಳೂರಿಗೆ ಕಾಲಿಕ್ಕಿದಾಗ ಎದುರಿಗೆ ನಿಂತಿದ್ದವ ಅದೇ ಸ್ಮಾರ್ಟಿ ಫೇಲೊ ಸ್ನೇಹಿತ. ಮೊದಲಿಗಿಂತಲೂ ಸುಂದರವಾಗಿ ಕಾಣುತ್ತಿದ್ದ. ಆ ದಿನ ಜುಲೈ ಆರ೦ಭದ ದಿನಗಳು. ಬಿ.ಟಿ.ಎಸ್. ಕಡೆಯಲ್ಲಿ ಹೆಜ್ಜೆ ಇಕ್ಕುವ ಮೊದಲೇ ಬ್ಯಾಗಿಗೆ ಕೈ ಹಾಕಿ ಹೇಗಲಿಗೇರಿಸಿದವನ ಬಾಯಿಂದ ಬಂದ ಮೊದಲ ಮಾತೇ ಅದು
" ಇನ್ನ ನಿ ಬಂದ್ಯಲ್ಲ. ಆಕಿನ್ನ ಹುಡುಕೋದ ದ್ವಾಡದೇನಲ್ಲ ಬಿಡ.." ಎಂದಿದ್ದ. ತತಕ್ಷಣಕ್ಕೆ ನಾನು ಗೊತ್ತಾಗದೇ " ಯಾರನ್ನೋ... ? " ಎಂದವನು ನಾಲಿಗೆ ಕಚ್ಚಿಕೊ೦ಡರೇ ಅವನ ಮುಖದಲ್ಲಿ ನೀನು ಅವಳನ್ನು ಮರೆತಿದೀಯಾ ಎನ್ನುವ ವೈಧವ್ಯದ ಕಳೆ.
" ಏನೋ ಮರತ ಬಿಟ್ಟೇನ.. ಆಕಿನ್ನ ನೋಡೂ ಸಲ್ವಾಗೇ ಬೆ೦ಗ್ಳೂರಿಗ ಬಂದೇನಿ. ಬಿ.ಈ.ಎಲ್ ಬಸ್‌ನ್ಯಾಗ ಬೆ೦ಗ್ಳೂರ ಪೂರ್ತಿ ರೌಂಡ್ ಹೊಡದೇನಿ, ಇನ್ನ ನೀ ಇದೀಯಲ್ಲ ಹುಡಕ್ತೇನಿ ಬಿಡ..." ಎಂದವನ ಹೆಗಲಿಗೆ ಕೈಯಿಕ್ಕಿ ಸಂತೈಸಿದ್ದೆ. ಅದೆಂತಾ ನಂಬಿಕೆನೋ..ಅದೃಷ್ಟಾನೊ.. ನಾ ಹೋದ ಮೂರನೆಯ ತಿಂಗಳಲ್ಲೇ ಸೆಪ್ಟೆಂಬರ್ ಸಂಜೆ ಇಬ್ಬರೂ ೨೭೩ ನಂಬರ ಬಸ್ಸಿನಲ್ಲಿ ಹೋಗುತ್ತಿದ್ದರೆ ಪುಟ್ ಬೋರ್ಡಿನಲ್ಲಿ ಆತು ನಿಂತು ಚಲಿಸಿದವನಿಗೆ ಅದ್ಯಾವ ಮಿಂಚೋ ಅದೆಂಥಾ ದೃಷ್ಟಿನೋ... ಮಲ್ಲೇಶ್ವರದ ಹತ್ತನೆ ಕ್ರಾಸಿನಲ್ಲಿ, ಕಿರುಚಿದ .." ಏ ಆಕಿ ಹೊಂಟಾಳ.. ಇಳ್ದ ಬಿಡ.. " ಎನ್ನುತ್ತಾ ಹೋಗುತ್ತಿದ್ದ ಬಸ್ಸಿನಿಂದ ಇಳಿಯಲು ಹೋಗಿ ಮೂರು ಪಲ್ಟಿ ಹೊಡೆದು ಎದ್ದ. ಬಸ್ಸು ಸ್ಲೋ ಆಗುತ್ತಿದ್ದಂತೆ ನಾನೂ ಇಳಿದು ಬಂದೆ.
ಜನವೆಲ್ಲಾ ಶೋ ನೋಡುತ್ತಿದ್ದರೆ.. ನನ್ನ ಕೈ ಹಿಡಿದು "...ಅಲ್ಲಿ ಆಕಿನ್ನ ನೋಡಿದ್ನಿ..." ಎಂದ. ಅಸಲಿಗೆ ನಾನೆಂದೂ ಆಕೆಯನ್ನು ನೋಡಿರಲೇ ಇಲ್ಲ. ಯಾಕೆಂದರೆ ಅವನ ಪ್ರೇಮ ಕಥೆಗೆ ನಾನು ಸಾಕ್ಷಿಯಾಗಿದ್ದರೂ ಯಾವತ್ತೂ ಆಕೆಯ ದರ್ಶನವಾಗಿರಲೇ ಇಲ್ಲವಲ್ಲ. ಅವನು ಕೂಡಲೇ ಕಿತ್ತು ಹೋದ ತನ್ನ ಕೈ ಕಾಲು ಗಮನಿಸದೆ ನನ್ನ ಕೈ ಹಿಡಿದು ಎಂಟನೇ ಕ್ರಾಸಿನತ್ತ ಚಲಿಸಿದವನು ಆಕೆಯನ್ನು ತೋರಿಸುತ್ತಾ ಅವಳೆ ಅವಳೇ ಎನ್ನುತ್ತಾ ಧಡ ಧಡನೆ ನಡೆದು ಆಕೆಯೆದುರಿಗೆ ನಿಂತುಕೊಂಡು "... ಹಾಯ್ ನಾನು ನಿನ್ನ... ಇಲ್ಲೇ ಬೆಂಗಳೂರಾಗಿ ಇದಿನಿ.. " ಎಂದು ಬಿಟ್ಟ. ಒಂದೇ ಕ್ಷಣ. ಗುರುತಿಸಿದ್ದ ಆಕೆಯ ಮುಖ ಅಪರಿಚಿತವಾಯಿತು. ಹುಬ್ಬೇರಿ ಕೆಳಗಿಳಿದು ಪೋನಿ ಮಾಡಿಸಿದ್ದ ಕೂದಲನ್ನು ಹಿಂತಳ್ಳುತ್ತಾ ಅದೇನು ಹೇಳಿದಳೋ... ಅವನಿಗೆ ಜೀವನಾಘಾತವಾಗಿ ಹೋಗಿತ್ತು. ಅಷ್ಟೆ,
ಜಿಟಿಜಿಟಿ ಬೀಳುತ್ತಿದ್ದ ಮಳೆ... ಎಂಟನೆ ಕ್ರಾಸಿನ ಆ ಕೊಚ್ಚೆ... ಚಿಕ್ಕ ಪುಟ್‌ಪಾತು... ಸರಸರನೆ ಸರಿದಾಡುವ ಜನ.. ಉಹೂ೦.. ಯಾವೆಂದರೆ ಯಾವುದೂ ಅವನ ಕಣ್ಣಿಗೆ ಬೀಳಲಿಲ್ಲ. ಆತ ಕುಸಿದು ಗಟಾರಿನ ಗಲೀಜಿನ ಪಕ್ಕಕ್ಕೆ ಅನಾಮತ್ತು ನೆಲಕ್ಕೆ ಕುಳಿತು ಅತ್ತು ಬಿಟ್ಟಿದ್ದ. ತೀರ ಮಗುವಿನಂತೆ ನನ್ನ ಮಡಿಲಿಗೊರಗಿ. ಅಷ್ಟೆ ಆತ ಮತ್ತೆಂದೂ ಚೇತರಿಸಿಕೊಳ್ಳಲೇ ಇಲ್ಲ. ಅದೇನು ಆಕೆ ಹೇಳಿದ್ದಳೋ, ಅದೇ ಚಿಂತೆ ಅವನನ್ನು ಕ್ರಮೇಣ ಹಣಿದು ಬಿಟ್ಟಿತ್ತು. ಒಂದೆಡೆಯಲ್ಲಿ ಪ್ರೀತಿಸಿದವಳು ಕೈಕೊಟ್ಟ ಆಘಾತ. ಕೈಗೆ ಸಿಕ್ಕೂ ಸಿಗದಂತಾಗುತ್ತಿದ್ದ ನೌಕರಿಗಳು, ಎನೇ ಮಾಡಿದರೂ ಆಗಾಗ ಕೈ ಕೊಡುತ್ತಿದ್ದ ಅದೃಷ್ಟ... ನೋವಾ.. ಹತಾಶೆಯಾ ನಿರಾಶೆಯಾ ೧೯೯೭ರ ಅದೇ ಜುಲೈ ರವಿವಾರ ಮಿತ್ರರೊ೦ದಿಗೆ ಮುತ್ತತ್ತಿ ಕಾಡಿಗೆ ಪಿಕ್ ನಿಕ್‌ಗೆ ಹೋದವನು ಊಟಕ್ಕೆಂದು ಕಣ್ಬಿಡುವಷ್ಟರಲ್ಲಿ ಆತ ಹೊರಟುಹೋಗಿದ್ದ. ಎಲ್ಲಿ ಹುಡುಕಿದರೂ ಇಲ್ಲ.
ಅಂದು ಹೋದವ ಮತ್ತೇ ಬರಲೇ ಇಲ್ಲ. ಹೇಗೆ ಬಂದಾನು...? ಅದಕ್ಕೂ ಎರಡು ದಿನದ ಮೊದಲಷ್ಟೆ ಕೂಡಾ ಆತ ಅವಳ ಬಗ್ಗೆಯೇ ಮಾತಾಡಿದ್ದ. ಯಾಕೋ ಆಕಿನ್ನ ಮರಿಯಾಕ ಆಗೋಲ್ಲ ಸಂತೋಷಾ..." ಎಂದು ಕಣ್ಣಿರಾಗಿದ್ದ. ಆಕೆಯ ಮೇಲಿನ ಪ್ರೇಮ ಅವನನ್ನು ಇನ್ನಿಲ್ಲದಂತೆ ಜೀವವನ್ನೇ ಕೊಡುವಷ್ಟು ಹಿಂಡಿ ಬಿಟ್ಟಿತ್ತಾ, ಕೇಳೋಣವೆಂದರೆ ಮುಕ್ಕಾಲಲ್ಲ ಅರ್ಧ ಜೀವನದ ಹಾದಿಯನ್ನು ಸವೆಸುವ ಮೊದಲೇ, ಇದೇ ಕಾಳಿ ನದಿಲಿ ಮೀನಿಗಿಂತಲೂ ವೇಗವಾಗಿ ನೀರಿಗೆ ಬೀಳುತ್ತಿದ್ದವನು ಮುತ್ತತ್ತಿಯ ಮೊಳಕಾಲವರೆಗಿನ ನೀರಿನಲ್ಲಿ ಐಕ್ಯವಾಗಿ ಬಿಟ್ಟ ಅಂದರೆ ಅದು ಇವತ್ತಿಗೂ ಅಚ್ಚರಿಯೇ. ಅದು ಆತ್ಮ ಹತ್ಯೆಯಾ... ಬೇಕಾಗೇ ತಾನಾಗೇ ಬಲಿಗೊಟ್ಟ ಜೀವವಾ... ಅಥವಾ ಕೊಂಚ ಮಾತ್ರ ಉಸಿರುಕಟ್ಟುವಿಕೆಯಿಂದ ಬಳಲುತ್ತಿದ್ದವನ ಅಕಸ್ಮಿಕವಾ... ಗೊತ್ತಿಲ್ಲ. ಅವನ ಮುಕ್ಕಾಲಿಗಿಂತ ಮೊದಲೇ ಮುಗಿದ ಬದುಕಿನ ಹಾದಿಯಲ್ಲಿ ನಾನು ಇಂದಿಗೂ ಒಂಟಿ... ನೆನಪುಗಳು ಮಾತ್ರ ಅವನ ಪವಿತ್ರ ಪ್ರೇಮದಂತೆ.
ಅಸಲಿಗೆ ಹೀಗೆ ಬದುಕಿನ ಪಯಣದಲ್ಲಿ ರೈಲೇರಿದಂತೆ ಬಂದು ಇಳಿದು ಬಿಡುವ ಆತ್ಮೀಯ ಜೀವಗಳು ಪಯಣದುದ್ದಕ್ಕೂ ತಮ್ಮ ಛಾಪನ್ನು ಬಿಟ್ಟು ಬಿಡುತ್ತವಲ್ಲ ಬಹುಶ: ಬದುಕಿನ ಜೀವಸೆಲೆಗೆ ಅವು ಜೀವಂತಿಕೆಯಾಗುತ್ತವಾ...? ಗೊತ್ತಿಲ್ಲ. ಆದರೆ ಮನದಾಳದಲ್ಲೆಲ್ಲೋ ಆಗೀಗ ಒದ್ದೆಯಾಗುವುದಂತೂ ನಿಜ. ಅಷ್ಟಕ್ಕೂ ನನ್ನ ಅವನ ಮೊದಲ ಭೇಟಿಯಾದದ್ಡೂ ಇಂತಹದ್ದೇ ಫೆಬ್ರುವರಿಯ ಮೊದಲವಾರದಲ್ಲ

ಅವರ ಕೊನೆಯ ಆಸೆಗಳು ನನಗೆ ಗೊತ್ತಾಗಲೇ ಇಲ್ಲ...!

ಹಿರಿಯರಾಗಿದ್ದಷ್ಟೂ ನಿರ್ಗಮನದ ಬಾಗಿಲು ತುಂಬ ಹತ್ತಿರಕ್ಕಿರುತ್ತವೆ. ನನಗೆ ಅಂಥ ಆತ್ಮೀಯರ ವಲಯ ದೊಡ್ಡದು. -

ಆ ದಿನಗಳಲ್ಲಿ ನಾನು ವಿಪರೀತ ಕೋಪಕ್ಕೆ ಬೀಳುತ್ತಿದ್ದೆ. ಅದರಲ್ಲೂ ದಿನಾ ರಾತ್ರೆಯಿಡೀ ಕಂಪ್ಯೂಟರ್ ಮುಂದೆ ಕೂತು ಡ್ರಾಯಿಂಗುಗಳನ್ನು ಮಾಡಿ ಅದರದ್ದೇ ಲೈನುಗಳು ತಲೆಯಲ್ಲಿ ಕದಲುತ್ತಿರುವಾಗಲೇ ಎಂ. ಜಿ. ರೋಡ್ ಆಚೆಗೆ ಶಿವಾಜಿನಗರದ ಚೌಕಿನಿಂದ ಆಚೆಗೆ ಸರಿದು ರೂಮಿಗೆ ಬಂದು ಬಿದ್ದರೆ ಎಚ್ಚರವಾಗುತ್ತಿದ್ದುದು ಮಧ್ಯಾನ್ಹದ ಐದು ಗಂಟೆಗೆ ಹಾಸ್ಟೆಲ್ ಆವರಣದಲ್ಲಿ ಟ್ರೇನಿಂಗ್ ಹುಡುಗರು ಬಂದು ಗಿಜಿಗಿಜಿ ಶುರು ಮಾಡಿದಾಗಲೇ. ಅದಕ್ಕೂ ಭಯಂಕರವಾಗಿ ಬೊಬ್ಬಿರಿಯುತ್ತಿದ್ದುದೆಂದರೆ ಯಮ ಹಸಿವು. ಬೆಳ್ಳಿಗೆ ಪಕ್ಕದ ಕಾಕಾನ ಹೊಟೇಲ್ ಭಾರತ ರೆಸ್ಟೋರಾಂಟಿನಲ್ಲಿ ಪರಾಟಾ ತಿಂದು ಮಲಗಿದವನಿಗೆ, ಹಸಿವು ಆ ಹೊತ್ತಿಗೆ ಏನೂ ಆಗಬಹುದೆನ್ನುವಂತಹ ಹಪಾಹಪಿಯನ್ನು ತಂದಿಟ್ಟಿರುತ್ತಿತ್ತು. ಪಕ್ಕದಲ್ಲಿ ನನಗಿಂತಲೂ ಜೋರಾಗಿ ನಿದ್ರೆ ತೆಗೆಯುತ್ತಿದ್ದ ಬಸವನ ಲುಂಗಿ ಒಂದು ಕಡೆ ತಾನೊಂದು ಕಡೆಯಾದರೆ ಅವನ ಪಕ್ಕದಲ್ಲಿ ಮಲಗಿರುತ್ತಿದ್ದ ತಿಪ್ಟೂರು ರವಿಗೆ ಬಾಯಿಯಲ್ಲಿ ಆಗ್ಲೇ ನೊಣವೊಂದು ಸಂಸಾರ ಹೂಡಿ, ಹೊರಡುವ ತಯಾರಿಯಲ್ಲಿದ್ದುದೂ ಗೊತ್ತಾಗದಷ್ಟು ಯಮ ನಿದ್ರೆ. ಅವರಿಬ್ಬರ ಬುಡಕ್ಕೊಂದು ಒದೆ ಒದ್ದು ಬ್ರಶ್ಶು, ನೀರು ಹುಡುಕುವಾಗ ಅಡರುತ್ತಿದ್ದ ಆಗೀನ ಬೆಂಗಳೂರು ಚಳಿ ಹೊರಬೀಳುವ ಮುನ್ನ ಜಾಕೆಟ್ಟು ಹುಡುಕುವಂತೆ ಮಾಡುತ್ತಿತ್ತು. ಹಾಗೆ ಹೊರಟು ಎಂ.ಈ.ಎಸ್. ರೋಡಿನ ಕೊನೆಯ ಬಾರಿನಲ್ಲಿ ಕುಳಿತು ಇಷ್ಟಿಷ್ಟು ಬೀಯರು ಕುಡಿದು, ಮಿಲ್ಟ್ರಿ ಕ್ಯಾಂಟಿನಿನಲ್ಲಿ ಅವರಿಬ್ಬರು ಹೊಂತೆ ತಿಂದರೆ, ನನ್ನದು ಮಾತ್ರ ಅದೇ ಒಣಕಲು ಚಪಾತಿ ಮತ್ತು ಮೊಟ್ಟೆ ಸಾರಿನ ಸುಗ್ಗಿ ಜಾಲಹಳ್ಳಿಯ ರಾಘವೆಂದ್ರ ಭವನದಲ್ಲಿ. ಹಾಗೆ ಕುಳಿತಾಗಲೇ ಅದೊಂದಿನ ಅವರು ಪರಿಚಯವಾಗಿದ್ದು. ಆ ದಿನ ಶನಿವಾರವಾದ್ದರಿಂದ ಕುಡುಕರ ನಿಯಮದಂತೆ ಕೊಂಚ ಹೆಚ್ಚೇ ಕುಡಿದು, ಇನ್ನೇನು ಉಂಡು ಮುಗಿಯಬೇಕು ಮಾಣಿ ಇದ್ದಕ್ಕಿದ್ದಂತೆ "...ಸಾರ್ ಚಪಾತಿ ಖಾಲಿ..." ಅಂದು ಬಿಡಬೇಕೆ. ಸಮಯ ನೋಡಿಕೊಂಡೆ ಆಗಿನ್ನು ಎಳೂ ಮುಕ್ಕಾಲು ಆಗಿಲ್ಲ. ಅಸಲಿಗೆ ಅದು ತುಂಬಾ ಚಿಕ್ಕ ಹೊಟೇಲು. ದಿನಕ್ಕೆ ಇಪ್ಪತ್ತು ಊಟ ಹೋದರೆ ಜಾಸ್ತಿ. ಅದಕ್ಕಾಗಿ ಲಿಮಿಟೆಡ್ಡು ಪ್ರಿಪರೇಶನ್‌ನಲ್ಲಿ ಅವನಿದ್ದರೆ ನನಗೆ ಉರಿ ಉರಿ. ಬಾಯಿಗೆ ಬಂದದ್ದು ಕಕ್ಕಿ ಅವನನ್ನು ಸಿಗಿದು ಬಿಡುವ ಕೋಪದಲ್ಲಿ ಕೂಗಾಡುತ್ತಿದ್ದರೆ ಆಚೆ ಟೇಬಲ್ಲಿಗೆ ಕುಳಿತಿದ್ದ ವೃದ್ಧರೊಬ್ಬರು ತಣ್ಣಗೆ, " ಯಾಕಪ್ಪಾ ಚಪಾತಿ ತಾನೆ ಇದು ತೊಗೊ... " ಎನ್ನುತ್ತಾ ತಮಗೆಂದು ತಂದಿರಿಸಿದ್ದ ತಟ್ಟೆಯನ್ನು ನನ್ನೆದುರಿಗೆ ತಳ್ಳಿ ಕೈ ತೊಳೆದು ನಡೆದುಬಿಟ್ಟಿದ್ದರು. ಕುಳಿತಲ್ಲೇ ನಾನು ನೀರಾಗಿದ್ದೆ. ಮುಂದಿನ ಕೆಲವೇ ದಿನಗಳಲ್ಲಿ ನನ್ನ ಅವರ ಮಧ್ಯೆ ಬೆಳೆದ ಬಾಂಧವ್ಯ, ವಯಸ್ಸು ಹೊರತು ಪಡಿಸಿ ಅವರು ಎಲ್ಲದರಲ್ಲೂ ಅಪ್ಪಟ್ಟ ಹೆಗಲು ತಬ್ಬಿ ನಡೆವ ಸ್ನೇಹಿತನಂತೆ. ವಯಸ್ಸಿನಲ್ಲಿ ಮಾತ್ರ ಬಹುಶ: ಅವರಿಗಾದ ಜೀವನಾನುಭವದ ಅರ್ಧದಷ್ಟು ನನಗಾಗಿರಲಿಲ್ಲ. ಈ ವಿಷಯದಲ್ಲಿ ನಾನು ನಿಜಕ್ಕೂ ಅದೃಷ್ಟ ಶಾಲಿಯೋ ಅಥವಾ ಒಂದು ರೀತಿಯಲ್ಲಿ ವಿಚಿತ್ರ ಪ್ರಾಣಿನೋ ಗೊತ್ತಿಲ್ಲ. ಮೊದಲಿನಿಂದಲೂ ಇವತ್ತಿನವರೆಗೂ ನನ್ನ ಗಾಢ ಗೆಳೆತನ ಎನ್ನುವುದು ಏನಿದ್ದರೂ ತೀರ ವಯಸ್ಸಾದ ಜೀವಗಳೊಂದಿಗೆ ಹೆಜ್ಜೆ ಹಾಕಿ ಬೆಳೆದದ್ದೇ. ಹಾಗೆ ಎಲ್ಲಾ ಹಿರಿಯರೂ ಕೂಡಾ ತೀರ ಪಕ್ಕದ ವಯಸ್ಸಿನ ಹುಡುಗರಂತೆ ನನ್ನ ಪರಿಗಣಿಸಿದರು ಆನ್ನೋದು ಇವತ್ತಿಗೂ ವಿಸ್ಮಯಕಾರಿನೇ. ಮೊದಮೊದಲಿಗೆ ತೀರ ಚಿಕ್ಕವನಾಗಿದ್ದಾಗ ನಾಲ್ಕನೆಯತ್ತೆ ದಾಟದ ನಾನು ಮಧ್ಯಾನ್ಹದ ಉರಿ ಬಿಸಿಲಲ್ಲಿ ಬ್ಯಾಣಕ್ಕೆ ಬೆಂಕಿ ಇಕ್ಕಲು, ಅಗಳದ ಮಧ್ಯೆ ಕಟ್ಟಿಕೊಂಡಿದ್ದ ಹೆಜ್ಜೇನು ಹುಡುಕಲು ಕಂಬಳಿ ಗೊಪ್ಪೆ ಹಾಕಿಕೊಂಡು, ಕೊನೆಗೆ ಏನಿಲ್ಲವೆಂದರೂ ಪೇರು, ಮುಳ್ಳಣ್ಣು, ಹಲಸಿನಣ್ಣು, ಪನ್ನಿರಲ ಕಿತ್ತಲು, ಕೊನೆಗೆ ಕಾನಿನಲ್ಲಿ ಬಿಳಲು ತರಲು, ಗೂಟ ಕಡಿದುಕೊಂಡು ಬರಲೆಂದು ಅಕ್ಷರಶ: ನನ್ನ ಮೂರರಷ್ಟು ಹೆಚ್ಚಿನ ವಯಸ್ಸಿನ ಸೋದರ ಮಾವನೊಂದಿಗೆ, ನನ್ನ ಸಮ ಸಮಕ್ಕೆ ಬರುತ್ತಿದ್ದ ಹಿಡಿಗತ್ತಿಯನ್ನು ಎಳೆಯುತ್ತಾ ಹೊರಟಿರುತ್ತಿದ್ದೆ. ಹಾಗೆ ಸರಿ ಸುಮಾರು ಇಪ್ಪತ್ತೈದು ವರ್ಷ ಕಳೆದರೂ ಹಳೆಯದನ್ನು ನೆನೆಸಿಕೊಳ್ಳುತ್ತಾ ಮಾತಿಗೆ ಕುಳಿತರೆ ಮಾವ ಈಗಲೂ ಅದೇ ಹರೆಯದ ಮಲೆನಾಡಿನ ಹುಲಿಯೇ. ನಂತರದಲ್ಲಿ ನನ್ನೊಂದಿಗೆ ಎರ್ಡ್ಮೂರು ವರ್ಷ ಸೇವೆಯ ಆರಂಭದ ದಿನದಲ್ಲಿ ಹೆಜ್ಜೆ ಹಾಕಿದ ಪವಿತ್ರನ್ ಎಂಬ ಜೀವ ಕೂಡಾ ಕನಿಷ್ಟ ಎರಡು ದಶಕದಷ್ಟು ಹಿರಿತನದ್ದು. ಅಲ್ಲಿಂದ ಮತ್ತೆ ತಿರುಗಣಿ ತಿರುಗಿ ಇದೇ ಉ.ಕ. ಜಿಲ್ಲೆಗೆ ಬಂದು ಕುಳಿತ ಮೊಟ್ಟ ಮೊದಲ ದಿನದಿಂದ ಹಿಡಿದು ಮೊನ್ನೆ ಮೊನ್ನೆ ರಿಟೈರಾಗುವವರೆಗೂ ನನ್ನೊಂದಿಗೆ ಕೆಲಸದಿಂದ ಹಿಡಿದು ಕಾರು-ಬಾರು, ಎಲ್ಲಾ ಹಂಚಿಕೊಂಡು ಹೋದವರೂ ಕೂಡಾ ನಾನು ಹುಟ್ಟುವ ಮೊದಲೇ ನೌಕರಿಗೆ ಸೇರಿದ್ದಷ್ಟು ದೊಡ್ಡ ಹಿರಿಯರು. ಅತ್ತ ಸಾಹಿತ್ಯಿಕ ವಲಯದಲ್ಲಿ ಇವತ್ತೀಗೂ ಗಾಢ್‌ಫಾದರ್‌ಗಳಿಲ್ಲದೇ ಕಾಲೂರುವಾಗ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನಕ್ಕೆಂದು ನಿಂತಿದ್ದವರು ಕೊನೆಕೊನೆಗೆ ನನ್ನೊಂದಿಗೆ ಬಾ ಹೋಗು ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಸ್ನೇಹಿತರ ವಲಯಕ್ಕೆ ಲಗ್ಗೆ ಇಟ್ಟು ಬಿಟ್ಟರು. ಮೊನ್ನೆ ಮೊನ್ನೆ ಆಕಸ್ಮಿಕವಾಗಿ ಹೀಗೆ ಯಾವತ್ತೋ ಬದುಕಿನ ರೈಲಿನಲ್ಲಿ ಸ್ಟೇಶನ್ನು ಬಂದಾಗ ಇಳಿದು ಹೋದ ಪ್ರಯಾಣಿಕರಂತೆ ಮರೆಯಾಗಿದ್ದ ವಯಸ್ಕ ಆತ್ಮೀಯರು ಕರೆ ಮಾಡಿ ಮಾತಾಡಿಸಿದಾಗ ಆಘಾತ. ನಾನು ಅವರು ಬಹುಶ: ತೀರಿಯೇ ಹೋಗಿದ್ದಾರೆಂದು ಭಾವಿಸಿದ್ದೆ. ಅವರಲ್ಲಿ ಹಾಗೆ ಹೇಳಿ ಕ್ಷಮೆ ಕೇಳಿ ಬೈಸಿಕೊಂಡೆ. ಈಗಲೂ ಅವರಲ್ಲಿ ಆಗಿನಿಂದಲೂ ಇದ್ದ ಅದೇ ಹಾಸ್ಯಮಯ ಧಾಟಿ. ಕೊನೆಯಲ್ಲಿ " ಇಷ್ಟು ಬೇಗ ಕಳಿಸ್ಬೇಡವೋ ಇನ್ನೊಂದು ಮದುವೆಯಾಗಿ ಸಂಸಾರ ಮಾಡಬೇಕಿದೆ... " ಎಂದು ಲಂಪಟ ಗಂಡಸಿನಂತೆ ಹಾಸ್ಯ ಮಾಡಿ ಫೋನಿಟ್ಟರು. ಕಳೆದ ವರ್ಷ ಹಿಮಾಲಯದ ಪಾದಕ್ಕೆ, ಅಲ್ಲಿನ ಚಳಿಗೆ ನಮ್ಮ ಸೊಕ್ಕು ಕರಗಿಸಿಕೊಳ್ಳಲೆಂದು ಹೋದಾಗ, ನಮಗಿಂತಲೂ ವೇಗವಾಗಿ ಹಿಮದಲ್ಲಿ ಪರ್ವತಗಳನ್ನು ಏರಿ ನಿಂತು, ಬನ್ನಿ ಬನ್ನಿ ಎಂದು ಕರೆಯುತ್ತಿದ್ದ ದ.ಕ. ವೃದ್ಧ(?)ರೊಬ್ಬರು ಭೇಟಿಯಾದರು. ಕೇವಲ ಮೂರು ತಾಸುಗಳ ಆರಂಭಿಕ ಭೇಟಿ ಅದು. ಚಾರಣದ ಹದಿನೈದು ದಿನದ ನಂತರ ಬೇರ್ಪಡೆಯಾದರೂ ಇವತ್ತಿಗಾಗಲೇ ಅವರು ಕನಿಷ್ಟ ವಾರಕ್ಕೊಮ್ಮೆಯಾದರೂ ಕರೆ ಮಾತಾಡುವಷ್ಟು ಆತ್ಮಿಯರು. ಅಷ್ಟೇಕೆ ಕಳೆದ ರಾಷ್ಟ್ರ ಮಟ್ಟದ ವೈಜ್ಞಾನಿಕ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ, ಅದಕ್ಕೂ ಮೊದಲು ಪಾಂಡಿಯಲ್ಲಿ ನಡೆದಾಗ ಎರಡೂ ಕಡೆಯಲ್ಲೂ ನೆರೆದಿದ್ದ ಗುಂಡು ಕಂಪೆನಿಯಲ್ಲಿ ಕುಳಿತುಕೊಳ್ಳಲು ಅನುಮಾನಿಸುವಷ್ಟು ಹಿರಿಯರು ನನ್ನೊಂದಿಗಿದ್ದರು.  ಆಗ ಬೆಂಗಳೂರಿನಲ್ಲಿ ಹೀಗೆ ಚಪಾತಿಯಿಂದ ಆರಂಭವಾದ ಸ್ನೇಹ ಆಗೀಗ ಕುಳಿತು ಗುಂಡು ಹಾಕುವವರೆಗೂ ಸಲುಗೆ ಬೆಳೆದು, ಉಳಿದಂತೆ ಅದ್ಭುತ ಮಾತುಗಾರರಾದ ಅವರು ರಾಮಕೃಷ್ಣ ಹೆಗಡೆಯಿಂದ ಹಿಡಿದು, ಪೋರೆನ್ಸಿಕ್ ಸೈನ್ಸ್‌ನಿಂದ ತೀರ ಪೋಲಿಸ್ ಟಾರ್ಚರುಗಳು, ಅದರಲ್ಲಿ ವಿವಿಧ ದೇಶದ ವಿಧಾನಗಳನ್ನು ಉಲ್ಲೇಖಿಸುತ್ತಾ, ತಾವು ಉತ್ತರ ಭಾರತದಲ್ಲಿ ಕಳೆದ ದಿನಗಳ ಬಗ್ಗೆ ವಿವರಿಸುತ್ತಿದ್ದರೆ ರಾತ್ರಿಗಳಿಗೆ ಬೆಂಕಿ ಬೀಳಬೇಕು. ಅದೊಂದಿನ ನಾನು ಭಾರತ ರೆಸ್ಟೋರಾಂಟಿಗೆ ಹೋಗುವಾಗ ಅಕಸ್ಮಾತಾಗಿ ಅವರು ರಾಯಚೂರಿನ ರಾಜರಾಂನೊಂದಿಗೆ ನಿ೦ತಿದ್ದು ಕಾಣಿಸಿತ್ತು. ಯಾವತ್ತೂ ಹೀಗೆ ಅದರಲ್ಲೂ ಲಫಂಗರಿಗೆ ಗುರುವಿನಂತಿದ್ದ ರಾಜಾರಾಮನೊ೦ದಿಗೆ ಪರಿಚಯ ಇದ್ದಿರಬಹುದೆನ್ನುವ ಅಂದಾಜಿರದ ನನಗೆ ಅವರು ಅವನ ತಂದೆಯೆಂದೂ, ಇವನ ಕಾಟಾಚಾರಕ್ಕೆ ಬೇಸತ್ತು ಬೆಂಗಳೂರಿಗೆ ಬಂದರೆ ಈ ಪುಣ್ಯಾತ್ಮ ಕೂಡಾ ಬಂದು ಇದೇ ಜಾಲಹಳ್ಳಿಯಲ್ಲಿ ಕಾಲೂರಿರಬೇಕೆ...? ಆ ದಿನ ಅವರು ಕುಸಿದು ಹೋಗಿದ್ದರು. ಆಗ್ಲೇ ಊರು ಬಿಟ್ಟು ನಾಲ್ಕು ವರ್ಷಗಳಾಗಿದ್ದುವಂತೆ. ಅವರಿಗೆ ಪೆನ್ಶನ್ ಇತ್ತು. ಬೊಮ್ಮಸಂದ್ರದ ಮೂಲೆಯಲ್ಲಿ ಚಿಕ್ಕ ರೂಮು ಮಾಡಿಕೊಂಡಿದ್ದರು. ಪೇಪರು ಓದು, ವಾಕಿಂಗ್, ಸಂಜೆ ಮೂಡಿದ್ದರೆ ಗುಂಡು, ಪಾನಿ ಪೂರಿ ಆರಾಮವಾಗಿ ಎಲ್ಲ ಗೋಜಲು ಬಿಟ್ಟು ಸ್ವಂತ್ರತ್ರವಾಗಿ ಕಳೆದವರಿಗೆ ಇದ್ದಕ್ಕಿದ್ದಂತೆ ವಕ್ಕರಿಸಿದ್ದ ರಾಜಾರಾಂ ತಲೆ ನೋವು ತಂದಿಟ್ಟಿದ್ದ. ನಾನು ಅವರ ಪರವಾಗಿ ಮಾತಾಡಿ ಅವನು ಬೊಮ್ಮಸಂದ್ರದ ರೂಮಿಗೆ ಹೋಗಿ ಕಾಡದಂತೆಯೂ, ಕಾಸು ಮತ್ತೊಂದು ಎಂದು ಹಿಂದೆ ಬೀಳದಂತೆ ಮಾಡಿದ್ದೇನಾದರೂ ಅವರಲ್ಲಿ ಮೊದಲಿದ್ದ ಖುಶಿ ಉಳಿದಿರಲಿಲ್ಲ. ಅವರವರ ವೈಯಕ್ತಿಕ ವಿಷಯಗಳೇನೇನಿದ್ದವು...? ವೃದ್ಧ ಜೀವ ಜೀವನದಲ್ಲಿ ಆಸಕ್ತಿ ಕಳೆದುಕೊಂಡಂತಿತ್ತು. ಇದ್ದಕ್ಕಿದ್ದಂತೆ ಒ೦ದಿನ ನಾಪತ್ತೆ ಆಗಿ ಬಿಟ್ಟಿದ್ದರು. ಸುತ್ತ ಮುತ್ತೆಲ್ಲಾ ಹುಡುಕಾಡಿದೆವು. ಬಸು, ರವಿ, ಪ್ರದೀಪ, ಮೈಸೂರಿನ ಮುಕುಂದ ಎಲ್ಲಾ ಜಾಲಹಳ್ಳಿಯಿಂದ ಎಂ.ಎಸ್. ರಾಮಯ್ಯವರೆಗೂ ಗಲ್ಲಿಗಳನ್ನು ತಿರುವ್ಯಾಡಿ ಬಿಟ್ಟಿದ್ದೆವು. ಬಹುಶ: ರಾಜಾರಾಂ ಕಿರಿಕಿರಿ ಮಾಡಿದನೇನೋ ಎಂದು ಎತ್ತಾಕಿಕೊಂಡು ಸಮಾ ರೂಮಿನಲ್ಲಿ ಚಚ್ಚುತ್ತಿದ್ದರೆ ಅವನೋ ಊರೇ ಸೇರುವಂತೆ ಏಟಿಗೂ ಮುಂಚೆ ಕಿರುಚಲಾರಂಭಿಸಿದ್ದ. ಅದಾಗಿ ನಂತರದಲ್ಲಿ ಅವರು ಕಂಡಿರಲೇ ಇಲ್ಲ. ಇದ್ದಕ್ಕಿದ್ದಂತೆ ಒಂದಿನ ನಾಲೈದು ವರ್ಷದ ಹಿಂದೆ ಮೆಜೆಸ್ಟಿಕ್ಕಿನಲ್ಲಿ ಕಂಡವರು ತಾವಾಗೆ ಕೂಗಿ ಮಾತಾಡಿಸಿದ್ದರು. ಕೊಂಚ ಇಳಿದು ಹೋಗಿದ್ದಾರೆ ಅನಿಸಿದ್ದು ಬಿಟ್ಟರೆ ಅದೇ ವಿಶಾಲ ನಗೆ. ಅದೇ ನಿರರ್ಗಳ ಮಾತು. ಮಧ್ಯಾನ್ಹದ ಹೊತ್ತೆ ಬಿಟ್ಟು ಬಿಡದೆ ಕರೆದೊಯ್ದು ಗ್ರಿನ್ ಹೋಟೆಲಿನಲ್ಲಿ ಕೂಡಿಸಿಕೊಂಡಿದ್ದರು. ಬೇಕೆಂದೇ ಜಾಲಹಳ್ಳಿ ಬಿಟ್ಟು ಬೆಂಗಳೂರಿನ ಇನ್ನೊಂದು ದಿಕ್ಕಿನ ಇಂದಿರಾನಗರದ ಕಡೆಗೆ ಸರಿದು ಹೋಗಿ ರೂಮು ಮಾಡಿಕೊಂಡಿದ್ದಾಗಿ ತಿಳಿಸಿದ್ದರು. ನಾನೂ ಹೆಚ್ಚು ಕೆದಕಿರಲಿಲ್ಲ. ಅದಾಗಿ ವರ್ಷಗಳೇ ಸರಿದವು.  ಮೊನ್ನೆ ಇದ್ದಕ್ಕಿದ್ದಂತೆ ಅದೇ ಬಿ.ಇ.ಎಲ್.ನಲ್ಲಿ ಈಗ ಎಂಪ್ಲಾಯಿ ಆಗಿರುವ ಶ್ರೀನಿವಾಸ ಕರೆ ಮಾಡಿದವನು "...ನಿನ್ನ ಒಲ್ಡ್ ಫ್ರೆಂಡ್ ಹೋಗಿ ಬಿಟ್ಟರಂತೆ ಕಣೊ..." ಎಂದರೆ ಒಮ್ಮೆ ಕ್ಷಣಕ್ಕೆ ಅರಿವಾಗಲಿಲ್ಲ " ಯಾರು ಎಂದೆ...?" " ಅದೇ ಬೊಮ್ಮ ಸಂದ್ರದಲ್ಲಿದ್ದರಲ್ಲ ಅವರು..." ಒಹೋ.. ಮುಂದೆ ಮಾತಾಡಲಾಗಲಿಲ್ಲ. ... ನಾಲ್ಕು ದಿನ ಮೊದಲು ಇಲ್ಲಿ ಗಣಪತಿ ದೇವಸ್ಥಾನದ ಹತ್ತಿರ ಸಿಕ್ಕಿದವರು ನನ್ನ ಬಗ್ಗೆ ವಿಚಾರಿಸಿದ್ದರಂತೆ. ಮೊಬೈಲು ನಂಬರು ಕೊಡು ಎಂದಿದ್ಡಾರೆ. ಇವನು ಆಯಿತು ವಿಚಾರಿಸಿ ಕೊಡುತ್ತೇನೆ ಎಂದು ಎರಡ್ಮೂರು ದಿನವಾದರೂ ನನ್ನನ್ನು ಸಂಪರ್ಕಿಸಿಲ್ಲ. ಮರುದಿನ ಕೂಡಾ ಸಿಕ್ಕಿದಾಗ ನಂಬರು ಇನ್ನು ತೆಗೆದುಕೊಳ್ಳಲಾಗಿಲ್ಲ ಅಂದಿದ್ದಕ್ಕೆ ಮುಖ ಸಣ್ಣದು ಮಾಡಿ ಅವನ ಹತ್ತಿರ ಮಾತಾಡಬೇಕಿತ್ತು .. ಛೇ... ಎಂದು ಗೊಣಗಿಕೊಂಡಿದ್ದಾರೆ ಅಷ್ಟೆ. ಮರುದಿನಕ್ಕೆ ಅವರಿಲ್ಲ. ಜಾಲಹಳ್ಳಿಯಲ್ಲಿ ಎಂದಿನಂತೆ ಭೇಏಯಾಗುತ್ತಿದ್ದ ಗಣೇಶ ದೇವಸ್ಥಾನದ ಹತ್ತಿರ ಕಲ್ಲು ಬೆಂಚಿನ ಮೇಲೆ ಕುಳಿತಲ್ಲೇ ಪ್ರಾಣ ಬಿಟ್ಟಿದಾರೆ.." ಮುಂದಿನ ಮಾತು ಕೇಳಿಸಿಕೊಳ್ಳಲಿಲ್ಲ. ಕೊನೆಯ ಕ್ಷಣದಲ್ಲಿ ಮನಸ್ಸು ಖಾಲಿ ಖಾಲಿಯಾದಂತೆನಿಸಿತು. ಯಾಕೆಂದರೆ ಹಿರಿಯರಾಗಿದ್ದಷ್ಟೂ ನಿರ್ಗಮನದ ಬಾಗಿಲು ತುಂಬ ಹತ್ತಿರಕ್ಕಿರುತ್ತವೆ. ನನಗೆ ಅಂಥ ಆತ್ಮೀಯರ ವಲಯ ದೊಡ್ಡದು. ಮತ್ಯಾವ ಕರೆಯೂ ಅಂತಹದ್ದು ಬಾರದಿರಲಿ ಅನ್ನಿಸಿ ಎರಡು ನಿಮಿಷ ಮೌನವಾಗಿದ್ದು ಬಿಟ್ಟೆ. ಆ ದಿನ ಪೂರ್ತಿ ಮೊಬೈಲಿಗೆ ಕಿವಿಗೊಡಲೇ ಕಿರ್ಕಿರಿ. ಪಾಪ ಒಂದು ದಶಕಕ್ಕೂ ಹೆಚ್ಚಿನ ಕಾಲ ಒಬ್ಬಂಟಿಯಾಗಿ ಕಳೆದು ಹೋದ ಆ ಹಿರಿಯ ಜೀವಕ್ಕೆ ಏನು ಹೇಳಿಕೊಳ್ಳುವುದಿತ್ತೋ...? 

ಅವನಿಗೇನೋ ಕಾರಣಗಳಿದ್ದವು. ನನಗ್ಯಾವ ಕೀಳರಿಮೆ ಕಾಡಿತ್ತು ... ?


SANTOSHKUMAR MEHANDALE's picture
ಬಾಲ್ಯ ಕಾಲದ ಕಥನ 
ಮೌನದ ಮಾತುಗಳು..
 ( ಹತ್ತಾರು ವರ್ಷಗಳ ಹಿಂದೆ ಆತ " ಬೇರೆದಾವ್ರ ಕಡಿಂದ ಹೇಳಿಸಿಕೊಂಡ ನಗೋದಕ್ಕಿಂತ ನಾವ ಹೇಳಿಕೊಂಡ್ರ ಏನೂ ಅನಸಾಂಗಿಲ್ಲ ನೋಡಲೇ..." ಎಂದಿದ್ದ..) ಮೊನ್ನೆ ಮೈಸೂರಿನಲ್ಲೊಂದು ರಾಷ್ಟ್ರಮಟ್ಟದ ಕಾನ್ಫ್‌ರೆನ್ಸಿನಲ್ಲಿ ಪಾಲ್ಗೊಳ್ಳುವ, ತನ್ಮೂಲಕ ಮರಾಠಿಯ ಜನಪ್ರಿಯ ದಿನಪತ್ರಿಕೆ " ಲೋಕಸತ್ತಾ" ದ ಸಂಪಾದಕರಾದ ಶ್ರೀಯುತ ಕುಮಾರ್ ಕೇತ್ಕರ್ ಅವರ ಜೊತೆಯಲ್ಲಿ ವಿಡಿಯೋ ಕಾನ್ಫರೆನ್ಸಿನಲ್ಲಿ ನಮ್ಮವರ ಪರವಾಗಿ ಸಂವಾದ ನಡೆಸುವ ಅಪರೂಪದ ಅವಕಾಶ ದೊರಕಿತ್ತು. ಈ ಸಂವಾದ ಮುಂಬೈನ ಮುಖ್ಯ ವಾಹಿನಿಯಲ್ಲಿ ಪ್ರಸಾರವಾಯಿತು ಕೂಡಾ. ಬಹುಶ: ನನಗಾದ ಒಟ್ಟು ವಯಸ್ಸಿನಷ್ಟು ಅವರ ಪತ್ರಿಕೋದ್ಯಮ ಸೇರಿದಂತೆ ಅನುಭವಕ್ಕೇನೆ ಅಷ್ಟು ವಯಸ್ಸಾಗಿದ್ದಿರಬೇಕು.
ಅದರಲ್ಲಿ ದೇಶದ ಸೈನ್ಸ್‌ಫಿಕ್ಷನ್ ಸಾಹಿತ್ಯ ಜಗತ್ತಿನ ಗಣ್ಯಾತಿಗಣ್ಯರೆಲ್ಲಾ ಪಾಲ್ಗೊಂಡಿದ್ದರು. ಚೆನೈನ ಶ್ರೀ ಪನ್ನೀರ್ ಸೆಲ್ವಂ ಎಂಬ ವಿದೇಶದಲ್ಲೆಲ್ಲಾ ಇನ್ನಿಲ್ಲದಂತೆ ಸೈನ್ ಫಿಕ್ಷನ್ ಬಗ್ಗೆ ಪಾಂಗಿತವಾಗಿ ಮಾತಾಡಿ ಹೆಸರು ಗಳಿಸಿದ ಬುದ್ಧಿಜೀವಿಯೂ ಅಲ್ಲಿದ್ದರು. ದಿನಕರ ಚರಕ ಎಂಬ ತುಂಬು ಮುಖದ ಕಾಶ್ಮೀರಿ ಸುಂದರಾಂಗ ಜಾಗತಿಕವಾಗಿ ಹೆಸರು ಮಾಡಿರುವ ಛಿಜಿezಥಿಛಿ.ಜಣಡಿ ಎಂಬ ವೆಬ್ ಮಾಲೀಕ ಹಾಗು ಸಂಪಾದಕ ಅಮೇರಿಕೆಯಿಂದ ಬಂದು ಅದರಲ್ಲಿ ಪಾಲ್ಗೊಂಡಿದ್ದ. ಹಾಗೆ ತುಂಬ ಅಕಸ್ಮಿಕವಾಗಿ ನನಗೆ ಅವಕಾಶ ಲಭ್ಯವಾಗಿದ್ದ ಆ ಸಮಾರಂಭದಲ್ಲಿ ತುಂಬು ವಯಸ್ಸಿನ ಹಿರಿಯರಾದ ಜಿ.ಟಿ.ನಾರಾಯಣರಾವ್ ಕೂಡಾ ಸೇರಿದ್ದರಲ್ಲದೇ ಕೊನೆಯಲ್ಲಿ ಹೋಗುವಾಗ ಕಾಲಿಗೆ ನಮಸ್ಕರಿಸಲೆಂದು ಹೋದರೆ, ಕೆಳಕ್ಕೆ ಬಿಡದೆ ತಬ್ಬಿಕೊಂಡು "...ಇನ್ನು ತುಂಬಾ ಬೆಳೀಬೇಕಪ್ಪಾ ಚೆನ್ನಾಗಿ ಬರೀತಿ... ಹೀಗೇ ಬರೀತಿರು..." ಎಂದು ಹರಸಿದ್ದರು. ಮಾತಾಡದೆ ಸುಮ್ಮನೆ ಅವರಿಗೆ ತಲೆ ಬಾಗಿದ್ದೆ.
ಅದೇ ದಿನ ಸಂಜೆ ಒಂದು ಕರೆ ನನ್ನ ಅಂಕಣವನ್ನು ಹೊಗಳಿಕೊಂಡು ಬಂದಿತ್ತು. ಅಸಲಿಗೆ ಕರೆ ನೀಡಿರುವ ವ್ಯಕ್ತಿಯನ್ನು ನಾನು ಯಾವುದೇ ಕಾರಣಕ್ಕೂ ನೆನಪಿಸಿಕೊಳ್ಳುವ ಸಂಪಕ೯ವಿರಲೇ ಇಲ್ಲ. ಅಸಲಿಗೆ ಆತ ನಾನಿದ್ದ ಊರಿನವನೂ ಅಲ್ಲ. ಹಿಂದೊಮ್ಮೆ ನಾನಿದ್ದ ಪಕ್ಕದ ಅರ್ಲವಾಡಾದಿಂದ ಕರೆ ನೀಡಿದ್ದ. ತುಂಬು ಧನ್ಯವಾದಗಳೊಂದಿಗೆ ಸಂಪರ್ಕ ಕಡಿಯುವಾಗ ನಮ್ಮೂರಿನ ಹುಡುಗನೊಬ್ಬನ ನೆನಪು ತೂರಿ ಬಂದಿತ್ತು. ಅಲ್ಲಿಯವರೆಗೂ ಆತ ನನ್ನ ನೆನಪಿನಾಳದಲ್ಲಿ ಕದಲಿರಲೇ ಇಲ್ಲ. ಅಸಲಿಗೆ ಅವನ ಹೆಸರೂ ಕೂಡಾ ನನಗೆ ನೆನಪಿಲ್ಲ. ನಾನಿದ್ದ ಊರಿನಲ್ಲಿ ಹಿಂದಿನ ಓಣಿಯಲ್ಲಿ ಅವನು ವಾಸಿಸುತ್ತಿದ್ದ. ಅವನು ಬಹುಶ: ನನಗಿಂತಲೂ ಎರಡ್ಮೂರು ವರ್ಷಕ್ಕೆ ದೊಡ್ಡವನಿದ್ದ. ಒಂದು ಕಾಲು ಕೊಂಚ ಊನವಿತ್ತಾ ಈಗ ಖಚಿತವಾಗಿ ನೆನಪಾಗುತ್ತಿಲ್ಲ. ನಾನು ಬಹುಶ: ಏಳನೆಯ ತರಗತಿಯಲ್ಲಿದ್ದೆ. ಆತ ಆಗಲೇ ಹೊಲದ ಕೆಲಸಕ್ಕೆ ಹೋಗುತ್ತಿದ್ದ. ಕೊಂಚ ವಿಚಿತ್ರವಾಗಿ ಆಡುತ್ತಿದ್ದ ಅವನು. ಆ ಬಗ್ಗೆ ಯಾರೂ ಅಷ್ಟಾಗಿ ಗಮನ ನೀಡಿರದಿದ್ದರೂ ಕೂಡಾ ಅವನಲ್ಲಿ ಒಂದು ಇನ್ಫೀರಿಯಾರಿಟಿ ಬೆಳೆದುಬಿಟ್ಟಿತ್ತಾ ಈಗಲೂ ಖಚಿತವಾಗುತ್ತಿಲ್ಲ.
ಆದರೆ ಇದ್ದಕ್ಕಿದ್ದಂತೆ ಒಂದಿನ ಸಂಜೆಯ ಹೊತ್ತು ಊರ ಹೊರಗಿನ ಬಯಲಲ್ಲಿ ಇತರ ಹುಡುಗರು ಆಟವಾಡುತ್ತಾ ಆನಂದಿಸುತ್ತಿದ್ದ ವಾಲಿ ಬಾಲ್ ಸಂಭ್ರಮದಲ್ಲಿ ಭಾಗಿಯಾಗಿ ತಾನೂ ಇನ್ನಿಲ್ಲದಂತೆ ಕುಣಿಯುತ್ತಿದ್ದವನು ಅಷ್ಟು ದೂರದಲ್ಲಿ ಚಪ್ಪಾಳೆ ತಟ್ಟುತ್ತಾ ಕಾಲು ಕುಣಿಸುತ್ತಾ ನಿಂತಿದ್ದ ನನ್ನ ಬಳಿಗೆ ಸಾಗಿದ್ದ.
ಮೊದ ಮೊದಲು ಮಾಮೂಲಿನ ಮಾತುಕತೆ ಸಾಗಿದವಾದರೂ ಬರುಬರುತ್ತಾ ಆತ ಆಡುತ್ತಿದ್ದ ಮಾತುಗಳಲ್ಲಿ ಹುದುಗಿದ್ದ ಅರ್ಥ ಈಗೀಗ ತುಂಬಾ ಸ್ಪಷ್ಟವಾಗಿ ಆಗುತ್ತಿದೆ. ಬಹುಶ: ಮೊದಲೇ ಹೇಳಿದಂತೆ ಓದಿನಲ್ಲೂ ಅಷ್ಟಕ್ಕಷ್ಟೆ ಎನ್ನಿಸುವಂತಿದ್ದ ಅವನ ಆವರೇಜುತನ ಹಾಗು ಅವನಿಗಿದ್ದ ನೂನ್ಯತೆಗಳು ಅವನನ್ನು ಹಾಗೆ ಆಡಿಸಿತ್ತಾ ಗೊತ್ತಿಲ್ಲ.
" ನಿನಗೇನ್ ಬಿಡೊ ನಿಮ್ಮಕ್ಕ... ಅಣ್ಣ ಹೇಳಿಕೊಡ್ತಾರು. ಭಟ್ಟರ ಹುಡುಗ್ರ ಇದೀರಿ.. ಶಾಣ್ಯಾ ಇರ್ತೇರಿ.. ಓದ್ತೇರಿ... " ಎಂದವನು ನಿಲ್ಲಿಸಿ " ... ನೋಡಲೇ, ನನಗ ಗಣಿತ ತಲ್ಯಾಗ ಹೋಗಾಂಗಿಲ್ಲ... ಮತ್ತ ಹುಡುಗೋರು ಹ೦ಗ.. ಮಾಡ್ತಾರ ನೋಡ... ಸುಮ್ಮ ಸುಮ್ಮನ ಮಶ್ಕೀರಿ ಮಾಡ್ತಾರ. ಅದಕ್ಕ ನನ್ನ ನೋಡಿ ಯಾವನಾರ ನಗೋ ಬದಲಿಗೆ ನಾನ ಜೋಕ್ ಮಾಡಿ ಬಿಡ್ತೇನಿ " ಎಂದಿದ್ದ. ಯಾಕೆ ಅವನಿಗೆ ಆ ವಯಸ್ಸಿನಲ್ಲಾಗಲೇ ಅಂಥದ್ದೊಂದು ಕೀಳರಿಮೆ ಮೂಡಿ ಬಿಟ್ಟಿತ್ತಾ..?ಆಗ ಇದನ್ನೆಲ್ಲ ಅರ್ಥಮಾಡಿಕೊಂಡು ಸಮಾಧಾನಿಸುವ ವಯಸ್ಸೂ ಅಲ್ಲ. ಅದಕ್ಕಿಂತಲೂ ಮಿಗಿಲಾಗಿ ಗಣಿತ ಪಿರಿಯಡ್ ಬಂದಕೂಡಲೇ ನಾನೇ ಎಷ್ಟೋ ಬಾರಿ ಪಿಳಿ ಪಿಳಿ ಕಣ್ಬಿಟ್ಟುಕೊಳ್ಳುತ್ತಿದ್ದವನು. ನಾನೇ ಓದಿನಲ್ಲಿ ತೋರಿಸದ ಶ್ರದ್ಧೆ... ಎಲ್ಲರನ್ನೂ ಪ್ರಶ್ನಿಸುವ... ಮಾತು ಮಾತಿಗೂ ರೇಗುವ ಶಾರ್ಟ್ ಟೆಂಪರ್‌ಮೆಂಟಿನಿಂದಾಗಿ ಕಿಲಾಡಿತನ ಮಾಡಿಕೊಂಡು ಅಲ್ಲಲ್ಲಿ "... ಭಟ್ಟರ ಹುಡುಗ, ಕಡೆದಾಂವ ಸಲ್ಪ ಬರೊಬ್ಬರ ಇಲ್ಲ... ಸುಮಾರ " ಎಂದು ಆಡಿಕೊಳ್ಳುವಷ್ಟು ಆವರೇಜಿಗೆ ಸರಿದು ನಿಂತಿದ್ದವನು. ಹಾಗಾಗಿ ಇನ್ನು ಅವನು ನನ್ನ ಬಗ್ಗೆ ಇವ್ರ ಶಾಣ್ಯಾರ ಮನಿಯಂವ ಅಂತ ಅಂದ್ಕೊಂಡಿದ್ದಕ್ಕೆ ಕೊಂಚ ಒಳಗೊಳಗೇ ಬೀಗಿದ್ದೆನಾ...?
ಯಾಕೆಂದರೆ ನನಗೂ ಓದಿಗೂ ಆವತ್ತಿನ ಮಟ್ಟಿಗೆ ಅಷ್ಟಕ್ಕಷ್ಟೆ. ಆರಂಭದಲ್ಲಿ ಹುಶಾರಿನ ಹುಡುಗ ಅನ್ನಿಸಿಕೊಂಡವ ತೀರ ಎಸ್ಸೆಸ್ಸೆಲ್ಸಿ ಬರುವ ಹೊತ್ತಿಗೆ ಸೆಕೆ೦ಡ್ ಕ್ಲಾಸಿನಲ್ಲಿ ಉಸಿರು ಕಟ್ಟಿ ಪಾಸಾಗಿದ್ದೆ. ನಂತರದ ದಿನದಲ್ಲಿ ಅದ್ಯಾವ ಜಿದ್ದಿಗೆ ಬಿದ್ದೆನೋ ಗೊತ್ತಿಲ್ಲ. ಸಾಕೆನ್ನಿಸುವಷ್ಟು ತೆಕ್ಕೆ ತುಂಬಾ ಡಿಗ್ರಿಗಳನ್ನು ಮಾಡಿಕೊಂಡೆ ಆ ಪ್ರಶ್ನೆ ಬೇರೆ. ಆದರೆ ಹಾಗೆ ಹೇಳಿದ್ದ ಅವನು ನಂತರದಲ್ಲಿ ಎರಡ್ಮೂರು ಸಲ ನಾನು ಗಮನಿಸಿದಂತೆ ತನ್ನಲ್ಲಿ ಕೀಳರಿಮೆಯನ್ನೂ, ಊರಿನಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಒಮ್ಮೆಯಲ್ಲ ಒಮ್ಮೆ ಕಾಡಿಯೇ ಕಾಡಿದ್ದ ಕೊಂಚ ಬಡತನ.. ಇತ್ಯಾದಿಗಳ ಜೊತೆಯಲ್ಲಿ ಓದಿನಲ್ಲೇನೂ ಇಲ್ಲದ ಅವನಿಗೆ ಅದು ಮನದಲ್ಲೆಲ್ಲೋ ತುಂಬಾ ಗಾಯದಂತೆ ತಾಗಿ ಬಿಟ್ಟಿತ್ತಾ. ಆದ್ರೆ ನಂತರದ ಹಲವು ಬಾರಿಯ ಮಾತಿನಲ್ಲಿ ಅವನು ಸಹಜವಾಗಿ ಎಂಬಂತೆ ತನ್ನ ಕೊಂಚ ವಿಶಿಷ್ಟ ಮ್ಯಾನರಿಸಮ್ಮಿನ ಆಂಗಿಕ ಅಭಿನಯದ ಮೂಲಕ ತನಗೇನು ಆಗಿಲ್ಲ ತಾನು ಎಲ್ಲರಂತೆ ಎನ್ನುವ ವಿಷಯವನ್ನು ತೋರಿದ್ದ. ಅದು ಸಹಜವೂ ಆಗಿತ್ತು. ಅವನಾಗಿ ಮಾಡುತ್ತಿದ್ದ ಗುಣ ಲಕ್ಷಣವಲ್ಲ ಅದು. ಮನಸ್ಸು ತನಗೇ ಅರಿವಿಲ್ಲದೇ ಕೀಳರಿಮೆಯನ್ನು ಮುಚ್ಚಿಟ್ಟುಕೊಳ್ಳಲು ಅನುಸರಿಸುವ ಒಂದು ರೀತಿಯ ನಾಟಕ ಅದು.
ಆಗಲೂ ನನಗೆ ಅಂಥಾ ವ್ಯತ್ಯಾಸವೇನೂ ಈ ವಿಷಯದಲ್ಲಿ ಗೋಚರಿಸಿರಲ್ಲಿಲ್ಲ. ಆದರೆ ನಂತರದ ಒಂದು ಸಂಜೆ ಇದ್ದಕ್ಕಿದ್ದಂತೆ ಅವನು ತೀರಿಕೊಂಡ ಸುದ್ದಿ ಬಂದಿತ್ತು. ಕೊನೆ ಕೊನೆಗೆ ನಮ್ಮದೇ ಊರಿನ ಟ್ರಕ್ಕೊಂದರಲ್ಲಿ ಕೆಲಸ ಮಾಡುವಾಗ ಮೇಲಿಂದ ಬಿದ್ದು ತೀರಿಕೊಂಡಿದ್ದ ಎಂಬ ಸುದ್ದಿ ಬಂದಿತ್ತು. ಅದು ಅವನು ಮೇಲಿಂದ ಬಿದ್ದಿದ್ದನೋ ಅಥವಾ ಅವನ ಮೇಲೆ ಅವನು ಲಾರಿಗೆ ತುಂಬಿಸುತ್ತಿದ್ದ ಹತ್ತಿಯ ಅಂಡಿಗೆಗಳು ಬಿದ್ದಿದ್ದವೋ ಒಟ್ಟಾರೆ ಒಂದು ಆಕಸ್ಮಿಕದಲ್ಲಿ ಅವನು ತೀರಿಕೊಂಡಿದ್ದ. ಆ ಹೊತ್ತಿಗೆ ನನಗೂ ಎಲ್ಲರಂತೆ ಛೇ ಪಾಪ ಎನ್ನಿಸಿ ಸುಮ್ಮನಾಗಿಸಿದ್ದ ಆ ಸುದ್ದಿ ಮೊನ್ನೆ ಮೊನ್ನೆಯವರೆಗೂ ಏನೂ ಅನ್ನಿಸಿರಲೇ ಇಲ್ಲ. ಆದರೆ ಇದ್ದಕ್ಕಿದ್ದಂತೆ ಊರ ಕಡೆಯಿಂದ ಚಿಮ್ಮಿ ಬಂದ ಒಂದು ಕರೆ ಅದ್ಯಾಕೋ ತನ್ನ ಪರಿಚಯವನ್ನು ಹೇಳಿಕೊಂಡು ಮಾತಾಡುತ್ತಿದ್ದರೆ ಹತ್ತು ನಿಮಿಷದಲ್ಲಿ ಇನ್ನಿಲ್ಲದಂತೆ ಅವನ ನೆನಪನ್ನು ತಂದಿಟ್ಟು ಬಿಟ್ಟಿತ್ತು. ಹಾಗೆ ತನ್ನನ್ನು ಪರಿಚಯಿಸಿಕೊಂಡು " ನೀವು ಆಗ ಭಾಳ ಸಣ್ಣಗ ಇದ್ರಿ... ಈಗ ಫೋಟೊದಾಗ್ ನೋಡಿದ್ರ ಗುರ್ತ ಸಿಗಧಂಗಾ ಆಗಿದಿರಿ..." ಇತ್ಯಾದಿ ಮಾತಾಡುತ್ತಿದ್ದರೆ ಯಾಕೋ ಅದ್ಯಾರೆಂದು ಎಷ್ಟು ತಲೆ ಕೊಡಹಿದರೂ ನೆನಪಾಗದ ವ್ಯಕ್ತಿಯ ಬದಲಿಗೆ ಇವನ ನೆನಪಾಗಬೇಕೆ.
ವಿಚಿತ್ರವೆಂದರೆ ಹತ್ತಾರು ವರ್ಷಗಳ ಹಿಂದೆ ಆತ " ಬೇರೆದಾವ್ರ ಕಡಿಂದ ಹೇಳಿಸಿಕೊಂಡ ನಗೋದಕ್ಕಿಂತ ನಾವ ಹೇಳಿಕೊಂಡ್ರ ಏನೂ ಅನಸಾಂಗಿಲ್ಲ ನೋಡಲೇ..." ಎಂದಿದ್ದ, ತನ್ನನ್ನು ತಾನೇ ಗೇಲಿಗೊಳಪಡಿಸಿಕೊಳ್ಳುವ ಅಂಥಾ ಬುದ್ಧಿಜೀವಿಯೇನೂ ಅಲ್ಲದ ಅವನ ಆ ಮಾತು ಇವತ್ತು ಇನ್ನಿಲ್ಲದಂತೆ ತಿವಿದದ್ದು ಸುಳ್ಳಲ್ಲ. ಅಸಲಿಗೆ ನನ್ನ ವೃತ್ತಿಗೂ ಓದಿಗೂ ಏನೊಂದು ಸಂಬಂಧವಿಲ್ಲದೆಯೂ, ಅಷ್ಟಕ್ಕೂ ತೀರ ಸೆಕೆಂಡ್ ಕ್ಲಾಸಿನಲ್ಲಿ ಎಸ್ಸೆಲ್ಸಿ ಪಾಸಾದ ನಾನು ಯಾವ ಕೀಳರಿಮೆಯನ್ನು ಮೆಟ್ಟಿ ಹಾಕಲು ಹಾಗೆ ತೆಕ್ಕೆ ತುಂಬಾ ವರ್ಷಕ್ಕೆರಡು ಡಿಪ್ಲೋಮಾಗಳನ್ನು... ಮಾಸ್ಟರ್ ಡಿಗ್ರಿಯನ್ನು ಓದಿಕೊಂಡೆ...?.
ನಾನ್ಯಾವ ಕೀಳರಿಮೆಯನ್ನು ಮೆಟ್ಟಲು ಪ್ರಯತ್ನಿಸಿದೆ. ಗೊತ್ತಾಗುತ್ತಿಲ್ಲ. ಆದರೆ ಹೀಗೆ ತೀರ ಸಂಜೆಯ ಹೊತ್ತಿನಲ್ಲಿ ಕರೆದು ಒಂದು ಯೋಚನೆಯನ್ನು ನನ್ನಲ್ಲಿ ಸ್ಫುರಿಸುವಂತೆ ಮಾಡಿದ ಊರ ಹತ್ತಿರದ ಮಿತ್ರನಿಗೆ ಹೃದಯ ಪೂರ್ವಕ ನಮಸ್ಕಾರಗಳಿದ್ದೆ ಇದೆ.

Thursday, August 1, 2013

ಮೌನದ ಮಾತುಗಳು : ಸಾವಿನ ಹಕ್ಕಿಯ ರೆಕ್ಕೆಯ ಕೆಳಗೆ.

( ಅಷ್ಟು ಸತತ ಪ್ರಯತ್ನಗಳ ಹೊರತಾಗಿಯೂ ಜೀವ ಎನ್ನುವ ಅಮೂಲ್ಯ ಶಕ್ತಿ ಅದ್ಹೇಗೆ ಕೈಯಿಂದ ತಪ್ಪಿಸಿಕೊಳ್ಳುತ್ತಿತ್ತು ಗೊತ್ತಾಗಲೇ ಇಲ್ಲ. ಬಹುಶ: ಅದಕ್ಕಾಗೇ ಸಾವು ಈಗಲೂ ಯಾವಾಗಲೂ ನಿಗೂಢಾ... ವಿವರಿಸಲು ಅದೊಂದಕ್ಕೆ ಮಾತ್ರ ಅನುಭವಿಗಳಿಲ್ಲ... )

ಹೀಗೆ ಸತತವಾಗಿ ಹಲವು ಸಾವುಗಳಿಗೆ ನಾನು ಜೀವಂತ ಸಾಕ್ಷಿಯಾಗಿದ್ದುದು ಬಹುಶ: ಇದೇ ಮೊದಲ ಬಾರಿಯಾ..? ಇರಬೇಕು. ಯಾಕೆಂದರೆ ಕಳೆದ ಮೂರ್ನಾಲ್ಕು ದಿನದಲ್ಲಿ ನಾನು ಕುಳಿತಿದ್ಡ ಜಾಗವೇ ಹಾಗಿತ್ತು. ಹೆಚ್ಚೆ೦ದರೆ ಎಡದಿಂದ ಬಲಕ್ಕೆ ನಾನು ಕುಳಿತ ಸ್ಟೂಲಿನ ದಿಕ್ಕು ಬದಲಾಗುತ್ತಿತ್ತೇ ವಿನಹ ಉಳಿದದ್ದೆಲ್ಲವೂ ಎಂದಿನಂತೆ ಆಚೀಚೆ ಯಾವಾಗ ಪ್ರಾಣ ಹೋದಿತೋ ಎಂದು ಭಯಬೀಳುವ, ಗುಳಿ ಬಿದ್ದ ಕಣ್ಣುಗಳ, ಬಾಯಿಯಲ್ಲಿ, ಕೈಯ್ಯಲ್ಲಿ, ಕೊನೆಗೆ ಅವರ ಸ್ರಾವ ಮತ್ತು ಬಾಹ್ಯ ವಿಸರ್ಜನೆಗಳಿಗೂ ನಳಿಕೆ ಹಾಕಿಕೊಂಡ, ಕೆಲವೊಂದು ದೇಹಗಳು ಊಟಕ್ಕೂ ನಳಿಕೆ ಏರಿಸಿಕೊಂಡು ಮಲಗಿರುವ ಕರುಣಾಜನಕ ಹೃದಯ ವಿದ್ರಾವಕ ದೃಶ್ಯ ಮಾಮೂಲು.
ಅಸಲಿಗೆ ಹಾಗೆ ನಾನು ಮೊದಲ ದಿನ ಹೋಗಿ ಅಲ್ಲಿಗೆ ಕುಳಿತುಕೊಳ್ಳುತ್ತಲೇ ವಾತಾವರಣ ಸಹಜ ಇಲ್ಲ ಎನ್ನಿಸಿತ್ತು. ಯಾಕೆಂದರೆ ನಾನಿದ್ದ ಆ ಕೋಣೆಗೆ ಆಲ್ಲಿದ್ದ ಇತರೆ ಜನರೂ, ಸಿಬ್ಬಂದಿಗಳೇ ಕಾಲಿಡಲು ಯಾಕೋ ಅನುಮಾನಿಸುತ್ತಾ ನಿಂತಿರುತ್ತಿದ್ದುದು ಅದರಲ್ಲೂ ರಾತ್ರಿ ಸರಹೊತ್ತು ಕಳೆಯತೊಡಗುತ್ತಿದ್ದಂತೆ ಎಲ್ಲೆಂದರಲ್ಲಿ ಆಚೀಚೆ ಹರಡಿಕೊ೦ಡಿರುತ್ತಿದ್ದ ಸಿಬ್ಬಂದಿಗಳು ಕಾಫೀಯ ನೆವದಲ್ಲಿ ಒಂದೇ ಟೇಬಲ್ಲಿನ ಬಳಿಗೆ, ಗಾಢ ದೀಪದ ಬುಡದಲ್ಲಿ ಸೇರಿಕೊಂಡು ಯಾವಾಗ ರಾತ್ರಿ ಎರಡರಿಂದ ಬೆಳಗಿನ ಐದರವರೆಗೆ ಹೊತ್ತು ಕಳೆದು ಬೆಳಕು ಮೂಡಿತೋ ಎಂದು ಕಾಯುತ್ತಾ, ಸಮಯ ಸವೆಸಿ ಆಗೀಗ ಮಧ್ಯದ ಹಾಲ್‌ನಿಂದಲೇ ಉಳಿದೆಲ್ಲಾ ಕೋಣೆಗಳಿಗೂ, ಅಲ್ಲಿದ್ದ ಜೀವಚ್ಛವಗಳ ಮೇಲೂ ಅವುಗಳ ಮಧ್ಯದಲ್ಲೇ ಮುಚ್ಚಿರುತ್ತಿದ್ದ ಬೆಳ್ಳಗಿನ ಬಟ್ಟೆಗಳ ಉದ್ದಾನುಉದ್ದ ಮ೦ಚಗಳ ಕಡೆಗೂ ಬೆರಗು ಕಣ್ಣು ಬೀರುತ್ತಾ, ಹೋದ ವೇಗದಲ್ಲೆ ಹಿಂತಿರುಗಿ ಹಾಲ್ ಮಧ್ಯೆ ಸೇರಿಕೊಂಡು ಬಿಡುತ್ತಿದ್ದರು.
ಹೀಗೆ ಸರಿ ರಾತ್ರಿ ಎರಡೂವರೆ ಹೊತ್ತಿಗೆ ಪಿಳಿ ಪಿಳಿ ಕಣ್ಣು ಬಿಟ್ಟು ಕೂತಿರುತ್ತಿದ್ದ ನನ್ನನ್ನು ಒಂದು ಪ್ರೇತವೆಂಬಂತೆ ಕಣ್ಣು ಬಿಟ್ಬಿಟ್ಟು ನೋಡುತ್ತಾ ಇದ್ದಾಗಲೇ ನಾನು ಅದನ್ನು ಗಮನಿಸಿದ್ದು. ಅದಕ್ಕೆ ಕಾರಣ ನನ್ನ ಬೆನ್ನ ಹಿಂದೆ ಒಂದೇ ಒಂದು ಅಡಿಗೂ ಕಮ್ಮಿ ದೂರದಲ್ಲಿ ಪ್ರಯಾಸ ಪಡದೆಯೂ ಕೈಚಾಚಿದರೆ ನಿಲುಕುವಷ್ಟು ಪಕ್ಕದಲ್ಲೇ ಒಂದು ಶವವಿತ್ತು. ನಾನು ಅಂದೇ ಸಂಜೆ ಕೆಲವೇ ಗಂಟೆಯ ಮೊದಲು ಅವರು ಉಸಿರಿಗಾಗಿ ಚಡಪಡಿಸುವುದನ್ನೂ ನೋಡಿದ್ದೆ. ಈಗ ಇದ್ದಕ್ಕಿದ್ದಂತೆ ವ್ಯಕ್ತಿ "ಬಾಡಿ"ಯಾಗಿ ಬದಲಾಗಿದ್ದ. ಭಯ ಹುಟ್ಟಿಸಿದ್ದ. ಅದನ್ನು ಗಮನಿಸುವ ಮೊದಲು ಎಷ್ಟೋ ಬಾರಿ ನಿದ್ರೆಯ ಜೊಂಪು ತಡೆಯುವ ಭರದಲ್ಲಿ ನಾನು ಕೂಡಾ ಅದೇ ಮ೦ಚಕ್ಕೆ ಒರಗಿ ಸಣ್ಣಗೆ ರೆಸ್ಟು ಮಾಡಿದ್ದೆ. ಈಗ ನೋಡಿದರೆ ಸರಿ ರಾತ್ರಿಯಲ್ಲಿ ಹಾಲ್ ಮಧ್ಯದಿಂದ ನನ್ನನ್ನು, ಪಕ್ಕದ ಶವವನ್ನು ಒಂದೇ ಥರಹ ನೋಡುತ್ತಿದ್ದಾರೆ.
ಅಂಗಾತ ಮಲಗಿ, ತೆರೆದ ಬಾಯಿ ಹಾಗೇ ಬಿಟ್ಟುಕೊಂಡಿದ್ದ ಶವ, ಆಗಾಗ ಹಾರಿ ಬರುತ್ತಿದ್ದ ಸಣ್ಣ ಸೊಳ್ಳೆಯ ಗುಂಯ್ ಬಿಟ್ಟರೆ ಈ ಹಾಲ್ ಮಧ್ಯೆ ಸೇರಿಕೊಂಡಿದ್ದ ಹುಡುಗಿಯರ ಪಿಸ ಪಿಸ, ಆಗೀಗೊಮ್ಮೆ ಬದುಕುಳಿದಿದ್ದವರು ಮೈ ಮುರಿಯುತ್ತಿದ್ಡ, ಹೊರಳಿ ಮಗ್ಗಲು ಬದಲಿಸುವ ಸಶಬ್ದಕ್ಕೆ ಸಾಕ್ಷಿಯಾಗುತ್ತಾ ಅವರ ಕಣ್ಣಿಗೆ ಆಹಾರವಾಗಿ ಕುಳಿತೇ ಇದ್ದೆ. ಇದಾದ ಮರುದಿನ ಸಂಜೆ ಎಂದಿನಂತೆ ಅದೇ ರೂಮಿನೊಳಕ್ಕೆ ಕಾಲಿಟ್ಟಾಗ ಪರಿಸ್ಥಿತಿ ಇನ್ನೂ ಗಂಭೀರವಾಗಿತ್ತು. ಯಾಕೆಂದರೆ ನಿನ್ನೆಯ ಹಿಂದಿನ ಮ೦ಚ ಖಾಲಿಯಾಗಿತ್ತು. ಅದರ ಪಕ್ಕದಲ್ಲಿ ಇದ್ದ ವ್ಯಕ್ತಿಗೆ ಕೃತಕವಾಗಿ ಹೃದಯ ಅದುಮಿ ಉಸಿರು ಹೊರಳಿಸುವ ಪ್ರಯತ್ನ ನಡೆದಿತ್ತು. ಬೆಳ್ಳಂಬೆಳಿಗ್ಗೆಯಷ್ಟೆ ಬಂದಿದ್ದ ವ್ಯಕ್ತಿಯತ್ತ ಸಣ್ಣಗೆ ಸಾಂತ್ವನದ ನಗೆ ಬೀರಿ ಎದ್ದು ಹೋಗಿದ್ದೆ. ಈಗ ನೋಡಿದರೆ ಅವನೂ ಶವವಾಗುತ್ತಾನಾ..? ನನ್ನ ಸಂಶಯ ಸುಳ್ಳಾಗಿರಲಿಲ್ಲ.
ರಾತ್ರಿಯ ಭಯಾನಕ ಅವಧಿ ಇನ್ನು ಒಂದು ಗಂಟೆ ಇರುವಂತೆ ಅಷ್ಟು ದೂರದಲ್ಲಿ ಆ ದಿನ ರಾತ್ರೆಯ ಕಂಪೆನಿಗೆಂಬಂತೆ ಮತ್ತೊಂದು ಶವ ತಯಾರಾಗಿತ್ತು. ಇದೇನು ದಿನವೂ ಶವಗಳ ಜೊತೆ ಕುಳಿತುಕೊಳ್ಳುತ್ತಿದ್ದೇನೆ ಎಂದು ದಿಕ್ಕು ತಿರುಗಿಸಿದೆ. ಎಂದಿನಂತೆ ಆ ರಾತ್ರಿಯೂ ನಟ್ಟಿರುಳ ಹೊತ್ತಿನಲ್ಲಿ ಎದುರಿಗಿನ ಹಾಲ್‌ನಲ್ಲಿದ್ದ ಸಿಬ್ಬಂದಿ ನರ್ಸ್ ಹುಡುಗಿಯರ ಕಣ್ಣಿಗೆ ಆಸಕ್ತಿಯ ಪ್ರಾಣಿಯಾಗಿ ಕುಳಿತಿದ್ದೆ. ಯಾಕೆಂದರೆ ನನ್ನಂತೆ ಆ ರೂಮಿನಲ್ಲಿ ಇದ್ದವರಾರೂ ಸರಿರಾತ್ರಿಯ ಹೊತ್ತಿನಲ್ಲಿ ಹೀಗೆ ಅಬ್ಬೆ ಪಾರಿಗಳಂತೆ ಕಣ್ಬಿಟ್ಟು ಕೂರುತ್ತಿರಲಿಲ್ಲ. ಹೇಗೋ ಒಂದು ಜಾಗ ಅಡ್ಜಸ್ಟ್ ಮಾಡಿಕೊಂಡು ಆಯಾ ಮ೦ಚದ ಪಕ್ಕದಲ್ಲಿ ಮಲಗಿರುತ್ತಿದ್ದರು. ನಿದ್ರೆಗೂ ಮೊದಲೇ ಅಥವಾ ತಮ್ಮ ಪಕ್ಕದ ಮ೦ಚದಲ್ಲೊಮ್ಮೆ ಶವವಿದೆ ಎನ್ನುವುದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದೆ ನಿದ್ರಿಸಿರುತ್ತಿದ್ದರು. ಹೀಗಾಗಿ ನನ್ನ ಮೇಲಿನ ಅನುಕಂಪವೋ, ಆಸಕ್ತಿಯೋ ರಾತ್ರಿಯ ಎರಡೂವರೆಗೆ ಹಾಲ್ ಮಧ್ಯದಿಂದ ಕಾಫಿಗೆ ಕರೆ ಬಂತು.
ಇಷ್ಟಗಲ ಕಣ್ಬಿಡುತ್ತಿದ್ದ ನರ್ಸ್ ಟ್ರೈನಿಂಗ್ ಹುಡುಗಿಯ ಕಣ್ಣಲ್ಲಿ ಸಣ್ಣ ಅನುಮಾನದ ಸೆಳಕು ನನ್ನ ಮೇಲಿತ್ತು "..ಯಾಕೆ ನೀವು ಹೊರಕ್ಕೆ ಬಂದು ಮಲಗೋಲ್ಲ ಅಥ್ವಾ ಆ ಮ೦ಚಗಳಿಂದ ಇತ್ತ ಸರಿಯಲ್ಲ.. ಅಲ್ಲಿ ಪಕ್ಕದಲ್ಲಿ ಬಾಡಿಯಿದೆ..!.." ಏನಂದು ಉತ್ತರಿಸಲಿ. ಜೀವವಿದ್ದಾಗ ಹೆದರಿಸದ ಮನುಶ್ಯ ಶವವಾದ ತಕ್ಷಣ ಅದ್ಯಾಕೆ ಹೆದರಿಸುತ್ತಾನೆ...? ಒ೦ದು ಕಾಲದಲ್ಲಿ ನಾನು ಹೀಗೇ ಶವಗಳನ್ನು ಹೂಳಿದ್ದ/ಸುಟ್ಟಿದ್ದ ಸ್ಮಶಾನದಲ್ಲಿ ಸರಹೊತ್ತಿನವರೆಗೂ ಕಾಲು ಚಾಚಿ ಕುಳಿತಿರುತ್ತಿದ್ದುದು, ಸದ್ದಿಲ್ಲದೇ ಎಡೆ ಎತ್ತಿಕೊಂಡು ಬಿಡುತ್ತಿದ್ದುದು ಈಗಲೂ ಆಡಿಕೊಳ್ಳುವ ವಿಷಯ. ಉತ್ತರ ಬಹುಶ: ಮರುದಿನ ಸಿಗಲಿತ್ತಾ ಗೊತ್ತಿಲ್ಲ. ಮೂರನೆಯ ದಿನದ ರಾತ್ರಿ ಮತ್ತೆ ಶವಗಳ ಜೊತೆ ನನ್ನ ರಾತ್ರಿ ಸಂಸಾರ ಆರ೦ಭವಾಗಿತ್ತು. ಇವತ್ತು ಎದುರಿಗಿದ್ದ ಮ೦ಚ ಬಿಟ್ಟು ಉಳಿದವರು ಜೀವ೦ತ ಇದ್ದಾರಾ..? ಸಂಶಯ.
ಅದರಲ್ಲಿ ಸಂಜೆ ಬೇಗ ಆಗಮಿಸಿದಾಗ ಮೊದಲನೆಯ ಮ೦ಚದಲ್ಲಿದ್ದ ವ್ಯಕ್ತಿ ಸರಿಯಾಗಿ ಕುಡಿದು ಕರಳು ಬಕ್ಕಬಾರಲಾಗುವಂತೆ ಸುಟ್ಟಿದ್ದ. ಕುಡಿದದ್ದು ಅರಗಿಸುವ ತಾಕತ್ತಿರಲಿಲ್ಲ. ಸರಿ ಪ್ರಾಯದ ಹೆಂಡತಿ ಮಗುವನ್ನು ಅನಾಥನನ್ನಾಗಿಸಲು ಸಿದ್ಧನಿದ್ದಂತೆ ತನ್ನ ದೇಹವನ್ನು ಸಿಬ್ಬಂದಿ ಕೈಗೊಪ್ಪಿಸಿ ಆಗೀಗೊಮ್ಮೆ ಉಸಿರೆಳೆಯುತ್ತಾ ಮಲಗಿದ್ದ. ಬಾಯಿ, ಮೂಗು ಎಲ್ಲೆಡೆಯಲ್ಲೂ ಕೊಳವೆ ಹಾಕಿ ನಾಲ್ಕಾರು ಜನ ಜೀವ ಹಿಡಿದಿಡುವ ಪ್ರಯತ್ನಕ್ಕಿದ್ದರು. ಕುತೂಹಲಕ್ಕೆ ಪ್ರಾಣ ಹೋಗುತ್ತದಾದರೆ ಹೇಗೆ ಹೋಗುತ್ತದೆ ಎಂದು ಗಮನಿಸುತ್ತಾ ಅವರ ಹಿಂದೇ ನಿ೦ತಿದ್ದೆ. ಉಹೂ೦ ಅಲ್ಲೇನಿದೆ ಗೊತ್ತಾಗಲು. ತಾಜಾ ವೈದ್ಯನೊಬ್ಬ ಹೃದಯ ಅಮುಕಿ ಪ್ರಾಣವಾಯು ಒಳಕ್ಕೆ ಸೆಳೆಯಲು ಪ್ರಯತ್ನಿಸುತ್ತಾ, ಎದೆ ಗೂಡು ಅಮುಕಿ ಅಮುಕಿ ಸುಸ್ತಾಗುತ್ತಿದ್ದ.
ಉಹೂ೦.. ನೋಡ ನೋಡುತ್ತಿದ್ದಂತೆ ಬಾಯಿಗಿಟ್ಟ ಕೊಳವೆಗಳಲ್ಲಿ ಚಲಿಸುತ್ತಿದ ಜೀವದ್ರವ ಅಲ್ಲೆ ನಿಂತು ಹೊರಕ್ಕೆ ಹರಿಯಿತು. ಯುವ ವೈದ್ಯ ಕೈಚಲ್ಲಿದ್ದ. ಸಣ್ಣ ಹತಾಶೆ ಅವನ ಮುಖದಲ್ಲಿತ್ತು. ವಿಚಿತ್ರವೆಂದರೆ ಅವರು ಅದನ್ನಾರಿಗೂ ನೇರವಾಗಿ ಘೋಷಿಸದೇ ಆಪ್ತರಲ್ಲೊಬ್ಬರಿಗೆ ಮಾತ್ರವೇ ವಿವರಿಸಿ ಆಚೆ ನಡೆದಾಗ, ಅದನ್ನು ಅರಿಯದ ಹೆಂಗರಳು ಬಾಯಿಯಲ್ಲಿದ್ದ, ಕೈಗಿದ್ದ ಕೊಳವೆ ನೋಡುತ್ತಾ, ಆಗೀಗ ಮೈದಡುವುತ್ತಾ ".. ಕಾಫಿ ಕುಡಿತಿಯೇನಪ್ಪಾ..? ಗಂಜಿ ಕಾಯ್ಸ್ಕಂಬರಾಕೆ ಅವ್ಳಿಗೆ ಹೇಳಿದಿನಿ ಇನ್ನೇನು ಬಂದಿಬಿಡ್ತಾಳೆ.." ಎನ್ನುವ ಕಕ್ಕುಲಾತಿಗಳ ಮಧ್ಯೆ, ಎದುರಿಗಿದ್ದುದು ಶವ ಎಂದರಿವಾಗುತ್ತಿದ್ದಂತೆ, ಹಿಂದೆ ಸರಿದು ಸುತ್ತೆಲ್ಲಾ ನೋಡಿದಳು. ಅಲ್ಲಿಯವರೆಗೂ ಕಾಫಿ, ಊಟಕ್ಕೆ ಈಡಾಗುತ್ತಿದ್ದ ಉಪಚಾರದ ಜಾಗದಲ್ಲಿ ಭಯ.. ಭಯ.. ಭಯ... ಅದ್ಹೇಗೆ ಇಮ್ಮಿಡಿಯೇಟ್ ವ್ಯತ್ಯಾಸ...? ನನ್ನರಿವಿಗೆ ಬರಲಿಲ್ಲ. ಆಕೆಯ ಕಂಗಳಲ್ಲಿ ಅಲ್ಲಿಯವರೆಗಿದ್ದ ಕಕ್ಕುಲಾತಿಯ ಬದಲಿಗೆ ಸಾವಿನ ನೆರಳು.
ನಾನು ಎದ್ದು ಹೋಗಿ ಒಮ್ಮೆ ನೋಡಿದೆ. ಅಂಗಾತ ಬಿದ್ದಿದ್ದ ಕುಡುಕನ ಎದೆ ಕೆಂಪಗಿತ್ತು. ಅದುಮಿಸಿಕೊಂಡಿದ್ದಕ್ಕಾ ಅಥವಾ ಎದೆಯಿಂದ ಪ್ರಾಣ ಹಾರಿದ್ದಕ್ಕಾ...? ನೋವಿನ ವಿಕಾರ ಗೆರೆಗಳು ಮುಖದ ಮೇಲೆ ಹಾಗೆ ಇದ್ದವು. ಅಂಗಿ ಸರಿಪಡಿಸಿ, ವಿರುದ್ಧ ದಿಕ್ಕಿಗೆ ತಿರುಗಿಕೊಂಡಿದ್ದ ಕೈಗಳನ್ನು ಸ್ವಸ್ಥಾನಕ್ಕೆಸರಿಸಿ.. ಉಹೂ೦ ಅಷ್ಟು ಸುಲಭಕ್ಕೆ ಸಾಧ್ಯವಾಗಲಿಲ್ಲ. ಯಾಕೆಂದರೆ ಆಗಲೇ ಗಂಟೆಗೂ ಮೇಲ್ಪಟ್ಟ ಅವಧಿಯಲ್ಲಿ ದೇಹ ಸೆಟೆದುಕೊಳ್ಳಲಾರಂಭಿಸಿತ್ತು. ಸುಮ್ಮನೇ ಇದ್ದ ಹಳೆಯ ಬೆಡಶಿಟ್ ತಲೆಗೆ ಎಳೆದು ಬಂದು ಕುಳಿತಾಗಲೇ ಗೊತ್ತಾಗಿದ್ದು ಆ ದಿನ ನನ್ನ ಸುತ್ತಲೂ ಮೂರು ಶವಗಳಿದ್ದವು. ಅವುಗಳತ್ತ ಲಕ್ಷ್ಯಕೊಡದೆ ಹಾಗೆ ನಾನು ಬೆಡ್ ಶೀಟ್ ಎಳೆಯುತ್ತಿದ್ದಾಗಲೇ ಹಾಲ್ ಮಧ್ಯದ ಹೊಸ ನರ್ಸ್ ಟ್ರೈನಿಂಗ್ ಹುಡುಗಿ ಇಷ್ಟಗಲ ಕಣ್ಬಿಟ್ಟು ನನ್ನನ್ನು ಒಂದೇ ತರಹ ಗಮನಿಸುತ್ತಿದ್ದುದು.
ತಲೆ ಕೊಡವಿ ಅಲ್ಲೇ ಇದ್ದ ಡಾಕ್ಟರ್ಸ್‌ಗಳ ಟಬ್ಬಿನೊಳಕ್ಕೆ ಕೈಮುಳುಗಿಸಿ ಸಿಂಕಿನಲ್ಲಿ ತೊಳೆದು ಹೊರಕ್ಕೆಬಂದೆ. ಮಧ್ಯಭಾಗದಲ್ಲಿ ಎಂದಿನಂತೆ ಮಧ್ಯರಾತ್ರಿಯ ಕಾಫ್ಹಿ ಸರಬರಾಜು. ಈ ಬಾರಿ ಸಂಕೋಚವಿಲ್ಲದೇ ಹೋಗಿ ಸ್ಟೂಲೆಳೆದುಕೊಂಡು ಕುಳಿತು ಕಪ್ಪನ್ನೆತ್ತಿಕೊಂಡಿದ್ದೆ. ಹಿಂದೆ ನೋಡಿದೆ ಶವಗಳು ಹಿಂಬಾಲಿಸಿರಲಿಲ್ಲ. ಉಳಿದವರು ನೆಮ್ಮದಿಯಾಗಿ ಕುಳಿತರು. ಆದರೆ ಇನ್ನೊಂದು ಸಾವಿನ ಹಕ್ಕಿ ರೆಕ್ಕೆಯಗಲಿಸುತ್ತಾ ಆಗೀಗ ಅದೇ ಹಾಲ್‌ನ ಮಧ್ಯದಿಂದ ರೂಮಿನೊಳಕ್ಕೆ ಎಷ್ಟೊತ್ತಿಗೂ ಕಾಲಿಡಲಿದೆ ಎಂದು ಅವರಾರಿಗೂ ಗೊತ್ತಿರಲಿಲ್ಲ. ನನ್ನೊಬ್ಬನನ್ನು ಬಿಟ್ಟು. ಕಾಯುತ್ತಲೇ ಕುಳಿತ್ತಿದ್ದೆ. ಯಾಕೋ ಕೊಂಚ ತಡವಾಗಿತ್ತು. ಬಹುಶ: ಅದಕ್ಕೂ ಗೊತ್ತಾಗಿತ್ತೇನೋ ನನ್ನ ಕಾವಲು. ನಾನು ಸತತ ನಾಲ್ಕು ದಿನಗಳ ಶವಾಗಾರದಂತಿದ್ದ ಆ ಆಸ್ಪತ್ರೆಯ ಎಮರ್‌ಜೆನ್ಸಿ ಹಾಲ್‌ನಿಂದ ಈಚೆ ಬಂದಿದ್ದೆ. ಬೆಳಕು ಹರಿಯುವವರೆಗೂ ಯಾವ ಶವಗಳೂ ಹುಲು ಮಾನವರಂತೆ ಕದಲದೇ ಜೀವ ಇದ್ದವರಿಗಿಂತಲೂ ಸಾಧುವಾಗಿ ಸುಮ್ಮನಿದ್ದವು. ಕ್ಷಣ ಕಾಲವೂ ನನ್ನ ಕಾಡಿರಲಿಲ್ಲ. ಜೀವಂತ ಮನುಶ್ಯರಿಗಿಂತ ನಿಜಕ್ಕೂ ಮೇಲೆನಿಸಿದ್ದವು. ಭಯ ಬೀಳಲು ಕಾರಣವೇನಿರಲಿಲ್ಲ. ಆದರೆ ಕಾಯ್ದು ಕೂತಿದ್ದ ಇನ್ನೊಂದು ಸಾವು ತನ್ನ ಕರಿ ನೆರಳ ರೆಕ್ಕೆಯಗಲಿಸಿ ಫಡಫಡಿಸುತ್ತಲೇ ಇತ್ತು. ಅಂತೆಯೇ ನನ್ನ ಕಾವಲು ಕೂಡಾ...!