Sunday, January 3, 2016

ಎಲ್ಲರ ಮನಸ್ಸುಗಳು ಹೀಗೆ ತುಡಿದರೆ ... 

ಮೇಲ್ನೋಟಕ್ಕೆ ಕಂಡಂತೆ ಒಬ್ಬರ ಬಗ್ಗೆ ಆಡಿಕೊಳ್ಳುವುದು ಸುಲಭ. ಆದರೆ ಬದುಕಿನಲ್ಲಿ ಗಮ್ಯಗಳಿಗೊಂದು ಮಾದರಿಯಾಗುವಂತೆ ಬದುಕುವುದು ತುಂಬ ಕಷ್ಟ ಮತ್ತು ತೀರ ಲಘು ಎನ್ನುವಂತೆ ಕಾಣುವವರೂ ಅಗಾಧ ವ್ಯಕ್ತಿತ್ವದ ಮಾದರಿಯಾಗುತ್ತಾರಲ್ಲ ಅದಕ್ಕೆ ಅಪರೂಪದ ಮನಸ್ಥಿತಿಯ ಗಟ್ಟಿ ಗುಂಡಿಗೆ ಬೇಕಿರುತ್ತದೆ.

ಬದುಕನ್ನು ಹೀಗೂ ಚೆಂದ ಮಾಡಿಕೊಳ್ಳುವವರಿದ್ದಾರಾ ಎನ್ನಿಸಿದ್ದು ಇತ್ತೀಚೆಗೆ ರಾಜಿಯನ್ನು ನೋಡಿದಾಗ. ನಾನು ನೋಡಿದಂತೆ ಬದುಕಿನ ಹಲವು ಮಜಲುಗಳಲ್ಲಿ ಆಕೆ ಯಾವತ್ತೂ ತನ್ನ ಜೀವನಕ್ಕೊಂದು ಶಿಸ್ತು, ಸಂಯಮ ಅಥವಾ ಗಮ್ಯವನ್ನಾಗಲಿ ಒದಗಿಸಿದ್ದವಳೇ ಅಲ್ಲ. ಆವತ್ತಿನ ಮಟ್ಟಿಗೆ ಅದೇ ಜೀವನ ಎನ್ನುತ್ತಿದ್ದ ರಾಜಿ, ನನ್ನಂಥವರಿಂದ ಕೊಂಚ ಅಂತರ ಕಾಯ್ದುಕೊಳ್ಳುವ ಅಸಾಧಾರಣ ಬುದ್ಧಿವಂತೆಯರ ಸಾಲಿನವಳು. ಆದರೆ ನಮ್ಮಿಬ್ಬರಿಗಿದ್ದ ಸಮಾನ ಆಸಕ್ತಿಯಾದ ಕದ್ದು ತಂದು ತಿನ್ನುವುದರಿಂದ ಒಂಥರಾ ಗೆಳೆತನವಿತ್ತು. ಸ್ವತಃ ಅಂಗಡಿಯಿಂದ ನೇರ ಪೊಟ್ಟಣಗಳನ್ನೇ ಎತ್ತಿಕೊಂಡು ಬರುತ್ತಿದ್ದ ತಿಂಡಿಗಳಿಗೆ ಮೋಕ್ಷ ಕಾಣಿಸುವುದೂ, ಉಳಿದಿದ್ದನ್ನು ಸುರಕ್ಷಿತವಾಗಿ ಮತ್ತು ನ್ಯಾಯಯುತವಾಗಿ ಮರುದಿನಕ್ಕೆ ಕಾಯ್ದಿಡುತ್ತಿದ್ದುದರಿಂದ ನಾನು ರಾಜಿಗೆ ಅಗತ್ಯವಾಗುತ್ತಿದ್ದಾ. ಅದಕ್ಕಿಂತಲೂ ಚೆಂದದ ಸಂಗತಿ ಎಂದರೆ ಇದೆಲ್ಲ ಕಂಡೂ ಕಾಣದಂತೆ ಇರುತ್ತಿದ್ದುದು ಅವರವ್ವ. ತೀರ ಜೇಬುಗಟ್ಟಲೇ ತಿಂಡಿ ತುಂಬಿಕೊಂಡು ಓಡಾಡುತ್ತಿದ್ದರೆ ಮಾತ್ರ ‘ಹಂಗ ಕಿಸೆನ್ಯಾಗ ಹಾಕ್ಕೊಂಡು ಓಡ್ಯಾಡಬ್ಯಾಡ್ರಿ. ರಾತ್ರಿ ಇರಬಿ ಬರತಾವ..’ ಎಂದು ನಮ್ಮನ್ನು ಗದರುತ್ತಿದ್ದರು.‘ಇಲ್ಲ ಬಿಡಬೇ ರಾತ್ರಿ ಬ್ಯಾರೆ ಚೆಡ್ಡಿ ಹಾಕ್ಕೊತೇನಿ’ ಎಂದು ನಾನು ಅದಕ್ಕೊಂದು ಸಮಜಾಯಿಸಿ ಕೊಡುವ ಮೊದಲೇ ರಾಜಿ,‘ಇಲ್ಲ ಬಿಡವ್ವ ಹಂಗ ಮಲಗ್ತೇನಿ’ ಎನ್ನುತ್ತ ಕಿಸಕ್ಕೆನ್ನುತ್ತಿದ್ದಳು. ಅವ್ವ ದಬಾರನೆ ಬಾರಿಸುತ್ತಿದ್ದಳು ಬೆನ್ನಿಗೆ.
ಆಕೆಯ ಪೋನಿ ತರಹದ ಜುಟ್ಟು, ಯಾವ ಮುಲಾಜಿಗೂ ಸಿಕ್ಕದ ಬಿರುಸುತನ, ಮಾತಿಗೆ ಸರಕ್ಕನೆ ಎದಿರು ಮಾತಾಡುವ ಅಭ್ಯಾಸಗಳ ಮಧ್ಯೆಯೂ ನೋಡನೋಡುತ್ತಿದ್ದಂತೆ ಒಂದೊಂದೇ ಮೆಟ್ಟಿಲೇರಿದ ರಾಜಿ ನಾವು ಕಣ್ಬಿಡುವ ಹೊತ್ತಿಗೆ ರಾಜದೂತ್ ಬೈಕು ಓಡಿಸುತ್ತಿದ್ದಳು.‘ಕೈಗ ಹತ್ತೊ ಹುಡಿಗಿ ಅಲ್ಲ ಬಿಡ್ರಿ..ಯಾಕೋ ಸ್ವಲ್ಪ ಸುಮಾರ’ ಎನ್ನುವುದು ಸಹಜ ಮಾತಾಗಿತ್ತು ಆಕೆಯ ಮಟ್ಟಿಗೆ. ಆದರೆ ಆಕೆಗೆ ಇದ್ಯಾವುದೂ ತಾಗುತ್ತಿರಲಿಲ್ಲ. ಕ್ರಮೇಣ ನಮ್ಮ ಮಧ್ಯೆ ಸಂಪರ್ಕವೂ ಕಡಿದು ಹೋಗುವುದರೊಂದಿಗೆ ರಾಜಿ ಮರೆಯಾಗಿದ್ದು ಸಹಜವೂ ಆಗಿತ್ತು.ತುಂಬ ಚೆಂದಗೆ ಓದಿಕೊಂಡು ಅದಕ್ಕಿಂತ ಅರಪಾವು ಹೆಚ್ಚಿಗೇ ಗುಂಡಿಗೆಯಿದ್ದ ರಾಜಿಗೆ ನೌಕರಿ ಸುಲಭದ ತುತ್ತಾಗಿತ್ತು. ಆಕೆಯ ಎಲ್ಲ ಲೀಲೆಗಳಿಗೆ ಬೆನ್ನೆಲುಬಾಗಿದ್ದ ಅವಳಪ್ಪ ಇದ್ದಕ್ಕಿದ್ದಂತೆ ಎದೆನೋವಿಗೀಡಾಗಿ ತೀರಿ ಹೋಗಿದ್ದ. ರಾಜಿ ಅವ್ವನನ್ನೂ ಕರೆದೊಯ್ದು ಖುಷಿಯಾಗೊಂದು ಬದುಕು ಕಟ್ಟಿಕೊಳ್ಳುವಾಗಲೇ ಅವನು ಕಾಲಿಟ್ಟಿದ್ದ. ಅವಳಿಗಿಂತ ಎರಡು ವರ್ಷ ಚಿಕ್ಕವ. ಅವ್ವನಿಗೆ ಹುಷಾರು ತಪ್ಪಿ ದವಾಖಾನಿಗೆ ಓಡಾಡುವಾಗ ಪಕ್ಕದ ಬೆಡ್ಡಿಗೆ ಬಂದಿದ್ದವ. ರಾಜಿ ಇಲ್ಲದಾಗಲೆಲ್ಲ ರಾತ್ರಿ ಹಗಲೂ ಅವ್ವನನ್ನು ನೋಡಿಕೊಳ್ಳುತ್ತಲೂ ಇಬ್ಬರಿಗೂ ಹತ್ತಿರವಾಗಿದ್ದಾನೆ. ಅವಳಂತಹ ರೇಸು ಕುದುರೆಗೂ, ಒಪ್ಪ ಓರಣ ಇಲ್ಲದ ಬಸವನ ಹುಳು ನಾಗ್ರಾಜುವಿಗೂ ಅದೆಲ್ಲಿಂದ ಆಕರ್ಷಣೆ ಹುಟ್ಟಿಬಿಟ್ಟಿತ್ತೋ..? ಕೊಂಚ ಪಾಪದವನೂ, ತೀರ ಚೆಂದವಾಗೇನೂ ಓದದ ಹುಡುಗನಿಗೆ ರಾಜಿ ಅದ್ಯಾಕೋ ಒಲಿದಿದ್ದಳೊ ಇವತ್ತಿಗೂ ಗೊತ್ತಿಲ್ಲ.ಅದಾದ ವರ್ಷದೊಳಗೆ ಲಿವ್ ಇನ್ ರಿಲೇಷನ್ನಿನ ಹೆಸರು ಹುಟ್ಟಿರದ ಕಾಲದ ಅವನ ಹಳ್ಳಿಯಿಂದ ಮನೆಗೇ ತಂದಿಟ್ಟುಕೊಂಡು ಬಿಟ್ಟಿದ್ದಳು. ದೊಡ್ಡ ಸಾಹಸ ಅದು. ಇಳಿಸಂಜೆ ಹೊತ್ತಲ್ಲಿ ಕೂತು ಮ್ಯಾಥ್ಸ್, ಸೈನ್ಸು ಬಟ್ಟು ಮಡಚಿ ಕಲಿಸುತ್ತಿದ್ದರೆ ಅವಳವ್ವ ತೀರ ಇಷ್ಟಪಡದಿದ್ದರೂ ರಾಜಿಯ ಬದುಕು ಹಸನಾತು ಬಿಡು ಎಂದುಕೊಂಡಿದ್ದರು. ಆದರೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಂಡ ನಾಗ್ರಾಜು ಎದ್ದು ನಿಂತಿದ್ದ. ವೇಗವಾಗಿ ಕಂಪ್ಯೂಟರಿಗೆ ತಗುಲಿಕೊಂಡು ಸರ್ವೀಸು ಸೆಕ್ಟರ್ ಹಿಡಿದುಕೊಂಡು ಬೆಳೆದ. ಈಗವನ ಓಡಾಟ ಬಿರುಸಾಗಿತ್ತು. ವರ್ಷಗಳು ಉರುಳುತ್ತಿದ್ದರೆ ರಾಜಿ ಗಂಭೀರವಾಗಿ ಮದುವೆ ಎನ್ನುವ ಶಾಸ ಮಾಡಿಕೊಂಡುಬಿಡುವ ಹಂಬಲದಲ್ಲಿದ್ದಳು.ಎಲ್ಲ ಸರಿಹೋಗಿ ಬದುಕಿನ ಬಣ್ಣಗಳು ಬೆರಗೊಡೆಯುತ್ತಿದ್ದಂತೆ, ಹತ್ತಿದ ಏಣಿ ಒದೆಯುವ ಪರಮ ದರಿದ್ರ ಅನುಭವ ರಾಜಿಗೂ ಆಯಿತು. ಬರಗೆಟ್ಟ ಬದುಕಿಗೆ ದಾರಿ ತೋರಿಸಿದವರನ್ನು ಸರಿಸಿ ನಡೆಯೊ ಒರಸೆತನಕ್ಕೆ ರಾಜಿ ಬಲಿಯಾಗಿದ್ದಳು. ಆಕೆಯಿಂದ ಪಡೆದ ಸಹಾಯ, ಲಕ್ಷಾಂತರ ದುಡ್ಡು, ಅಪೂಟು ಗಣಿತ ಟೀಚರಂತೆ ಆಕೆ ಕೂತು ಹೇಳಿದ ಸಂಜೆಯ ಕ್ಲಾಸುಗಳು, ತೀರ ಅವನ ಅಬ್ಬೇಪಾರಿ ಬದುಕನ್ನು ಸರಿ ಮಾಡಿದ್ದಾಲ್ಲವನ್ನೂ ಮರೆತು ಮನೆಗೆ ಬರುವುದನ್ನೇ ತಪ್ಪಿಸುತ್ತ ಬದುಕಿನ ಪಥ ಬದಲಿಸತೊಡಗಿದ್ದ. ಅಸಲಿಗೆ ರಾಜಿಯ ಬದುಕಿನ ಹರಿತ ಎಡೆಗಳೊಂದಿಗೆ ಸೇರಿ ಜಯಿಸುವ ಬದಲಿಗೆ ಕಣ್ಣು ತಪ್ಪಿಸತೊಡಗಿದ್ದ. ಮೊದಲೇ ಬದುಕಿಗೆ ಸಡ್ಡುಹೊಡೆದು ಸೋವಿಯಾದವಳಿಗೆ ಇಂಥವರ ದಗಲುಬಾಜಿತನ ಯಾವ ಲೆಕ್ಕ. ಮುಲಾಜೇ ಇಲ್ಲದೆ ಅವನಿಗಾಗಿ ಹಾಕಿದ್ದ ದುಡ್ಡು ವಸೂಲಿ ಮಾಡಿ ಹೊರಹಾಕಿದ್ದಳು. ಮುಖ ತೋರಿಸಲೂ ಆಗದ ಮಖೇಡಿಯಂತೆ ನಾಗ್ರಾಜ ಹೊರಟು ಹೋಗಿದ್ದ. ಕೆಲಸ, ಜವಾಬ್ದಾರಿ ಮತ್ತು ಬದುಕಿನುದ್ದಕ್ಕೂ ಬಿರುಸಾಗಿ ಬದುಕುತ್ತಿದ್ದವಳು, ಅದೇ ರಾವಿನೊಂದಿಗೆ ಎದ್ದು ನಿಂತು ಹಿಂದಿನಿಂದ ಮಾತಾಡುವವರಿಗೆ ‘ಈಗ ಹೆಂಗೆ..?’ ಎಂದಿದ್ದಳು.‘ಬರ್ತಾ ಹಂಗ ಬಂದಿಯಲ್ಲ. ತಿನ್ನಾಕ ಏನೂ ತಂದಿನು..?’ಎಂದಿನಂತೆ ರಾಜಿ ಕಾಲೆಳೆಯುತ್ತಿದ್ದರೆ ಒಯ್ದಿದ್ದ ಸ್ವೀಟು ಆಕೆಯೆದುರಿಗಿಡುತ್ತಾ ‘ಅವ್ವ ಎದಾಳು..? ನಿನ್ನ ಈ ಉಪರಾಟಿ ಬದುಕು ಅಕಿಗಂತೂ ಭೇಷಾಗಿರೋಲ್ಲ ಬಿಡು’ ಎಂದೆ. ಆಕೆ ನಗುತ್ತಾ ‘ಹೌದೊ ಮಾರಾಯ ನಮ್ಮವ್ವ ಅಂತಲ್ಲ. ಯಾರವ್ವ ಅದರೂ ಸುದೆಕ ಹಿಂಗನ.. ಅದರಾಗೇನದ. ಇನ್ನೇನರ ಭಾನಗಡಿ ಮಾಡ್ಕೊತಿನೇನೋ ಅಂತ ಒಂದಿಟು ಟೆನ್ಸ್ ಆಗಿದ್ಲು ಆವಾಗ. ನಿಂದೇನು ಕತೀ..?ಎಲ್ಲ್ಯದಿ..?’ ಎನ್ನುತ್ತಿದ್ದರೆ ‘ನಡೀ ಮನಿಗ ಹೋಗೋಣು’ ಎಂದು ದಬ್ಬಿಕೊಂಡು ಹೊರಟಿದ್ದಾ. ಕಾರು ಹರಿದಷ್ಟೂ ಹೊತ್ತೂ, ಬದುಕಿನ ಸೆಳಕುಗಳ ಬಗ್ಗೆ ಹೇಳುತ್ತ, ‘ಅಲ್ಲ ಸಂತೂ.. ಆ ನಾಗ್ರಾಜಂಗ ಅದೇನು ಬ್ಯಾನಿ ಆಗಿತ್ತ ನೋಡು. ಏನೂ ಇಲ್ದಿರೋ ದರವೇಶಿಗೆ, ಎಲ್ಲ ಮಾಡಿಕೊಟ್ಟು ಇಷ್ಟ ಚೆಂದದ ಹುಡುಗಿ ಪುಕ್ಕಟ ಇರ್ತೀನಂದರೂ ಬ್ಯಾಡ ಅಂತ ಹೋದನಲ್ಲ ಭಾಡ್ಯಾ.. ಮೈಯೆಲ್ಲ ಉರಿತದ ನೋಡ. ಗಂಡಸರಿಗೆ ಸುಖಾ ಪಡೋದೂ ಗೊತ್ತಿಲ್ಲ ಅನ್ನೋದಕ್ಕಿಂತ ದಕ್ಕಿಸಿಕೊಳ್ಳೊ ದಮ್ಮನೂ ಬೇಕ ನೋಡ’ ಎಂದು ಯಾವ ಸಂಕೋಚ ಮತ್ತು ಪಶ್ಚಾತಾಪ ಎರಡೂ ಇಲ್ಲದೆ ಆಡಿಕೊಳ್ಳುತ್ತ ರಾಜಿ ಹರಟುತ್ತಿದ್ದರೆ ಆಕೆಯ ಚೇತರಿಕೆಗೆ ಖುಷಿಯಾಗಿತ್ತು. ಮತ್ತಾವ ಸಂಕಟಕ್ಕೂ ಸಿಗದೆ ಮದುವೆ, ಮಕ್ಕಳು ಮಾಡಿಕೊಂಡು ಅವ್ವನೊಂದಿಗಿದ್ದಾಳೆ.‘ಅವ್ವಂದಿರಿಗೆ ಹೆಣ್ಮಕ್ಕಳ ಮದುವ್ಯಾಗಿ ಮಕ್ಕಳಾದವು, ಬದುಕು ಬೇಷಾತು ಅನ್ನೋದ ಬಿಟ್ಟರ ಬ್ಯಾರೆ ಬೇಕಿಲ್ಲ ಹೌದಿ’ಎನ್ನುತ್ತಿದ್ದರೆ, ನಾನು ನಗುತ್ತ ನುಡಿದಿದ್ದಾ ‘ರಾಜಿ ನೀ ಬದಲಾಗಿಲ್ಲ ಬಿಡ. ಪುಕ್ಕಟ ಅಂದರ ಯಾವತ್ತೂ ಸೋವಿನ. ನಿನ್ನಂಥಾಕಿ ಜೋಡಿ ಸಂಸಾರ ಮಾಡೋದು ಅವಂಗೆಲ್ಲಿ ಬರ್ಬೇಕು..?ಈಗ ಆರಾಮ ಅದಿ ಹೌದಿ..’ಎನ್ನುತ್ತಲೇ ಆಕೆಯ ಮನೆ ತಲುಪಿದ್ದಾವು. ಸರಿಸುಮಾರು ಎರಡು ದಶಕಗಳ ನಂತರದಲ್ಲಿ ಈಗ ಹೇಗಾಗಿದ್ದಾಳೊ ಎನ್ನುವ ಶಂಕೆ ಸುಳ್ಳು ಮಾಡುತ್ತಾ ಬಾಗಿಲು ತೆಗೆದವಳು ಅವ್ವ. ಯಾರು ಎಂಬ ಪ್ರಶ್ನಾರ್ಥಕ ಚಿನ್ಹೆಗೆ ನಾನೇ ಪರಿಚಯಿಸಿಕೊಂಡಿದ್ದಾ. ‘ಭೇಷಾತು. ಊರ ಕಡಿಂದ ಯಾರರ ಬಂದರ ಚಲೋ ಅನ್ನಸ್ತದ’ ಎನ್ನುತ್ತಿದ್ದಂತೆ ಕಿಂಯ್.. ಕಿಂಯ್.. ಎನ್ನುವ ಗಾಲಿಗಳ ಶಬ್ದಕ್ಕೆ ಅತ್ತ ತಿರುಗಿದೆ.ಗಾಲಿ ಕುರ್ಚಿ ಅದರ ಮೇಲೊಬ್ಬ ನಡುಹರೆಯದ ವ್ಯಕ್ತಿ. ಕಿವಿಗೆ ಇಯರ್ ಫೋನು.. ಕಾಲ ಮೇಲೆ ಲ್ಯಾಪ್‌ಟಾಪು. ಹಿಂದೆಯೇ ನಡೆದು ಬಂದ ಚೆಂದದ ಹೊಸ ಹರೆಯದ ಹುಡುಗಿ. ನನಗೆ ಬೇರೆ ವಿವರ ಬೇಕಾಗಲಿಲ್ಲ. ಚಹದ ಕಪ್ಪು ಹಿಡಿದು ಹೊರಬಂದ ರಾಜಿ ಅದೇ ಹುಡುಗಾಟದ ಧ್ವನಿಯಲ್ಲಿ, ‘ನಾಗ್ರಾಜಂದು ಮುಗದ ಕಥೀ. ಅದಾಗಿ ಎರ್ಡ್ಮೂರು ವರ್ಷ ನಾನು ಅವ್ವ ಅರಾಮ ಇದ್ವಿ. ಮದುವಿ ಮಕ್ಕಳು ಎಲ್ಲ ಯಾಕೋ ನನಗಲ್ಲ ಅನ್ನಿಸಿಬಿಟ್ಟಿತ್ತು. ಗಂಡ ಮಕ್ಕಳು ಇವೆಲ್ಲ ಇದ್ದರನ ಸಂಸಾರ ಅಂತಿಯೇನು..? ಅದನ್ನ ಬಿಟ್ಟೂ ಬದುಕಿನ ಸಂಕಟಕ್ಕ ಜೊತಿ ಆಗೋ ಸುಖಾನ ಬ್ಯಾರೆ ಮಾರಾಯ. ಮೂರ್ತಿನ್ನ ಮದುವಿ ಆಗ್ತೇನಿ ಅಂದಾಗ ತಲಿಗೊಂದ ಮಾತಾಡಿದ್ರು. ಕೈ, ಕಾಲು ಬರೋಬರ್ ಇಲ್ಲದಿದ್ರೂ ಮನಸ್ಸು ಪಸಂದಾಗಿರೋ ಮೂರ್ತಿ ಯಾಕೋ ಭಾಳ ಹಿಡಿಸಿದ್ರು. ಏ ಕುಂತು ಎನ್‌ಜಿಒದ ಕೆಲ್ಸ ಮಾಡಿ ತನಗ.. ಏಳಾಕ ಬರದಿದ್ರೂ ಬ್ಯಾರೇದಾವ್ರ ಬದುಕು ಕಟ್ಟೋದು ನೋಡ್ತಾ ನನ್ನ ಜೊತಿನ ಬರ್ರಿ ಅಂದೆ. ಬರೀ ಮಾರಿ ನೋಡಿ ಏನು ಮಾಡೋದದ. ಅರ್ಧ ಬದುಕು ಕಳಕೊಂಡಿದ್ದ ಮೂರ್ತಿ, ಅವ್ರ ಮಗಳು ಪುಟ್ಟಿ ಖರೆನ ಚೆಂದ ಅದಾರ ನೋಡು. ಇದೆಲ್ಲ ನೋಡಿ ರಾಜಿ ಮತ್ತ ಲಫಡಾ ಮಾಡ್ಕೊಂಡ್ಲು ಅಂತಿಯೇನು..?’ ಚೆಂದದ ಗೇಲಿಯೊಂದಿಗೆ ಪಕ್ಕೆಗೆ ಗುದ್ದುತ್ತ ನುಡಿಯುತ್ತಿದ್ದರೆ, ಮಾರುತ್ತರಕ್ಕೇನೂ ಇರಲಿಲ್ಲ.ಅವಕಾಶ, ಸಹಾಯ, ಸಾಂಗತ್ಯ ಎಲ್ಲ ಪಡೆದೂ ಕೈಯೆತ್ತಿ ಹೋಗುವವರ ಮಧ್ಯೆ ಎಲ್ಲವನ್ನೂ ಪೂರೈಸಿಯೂ, ಇನ್ನೊಬ್ಬರಿಗೆ ಜೀವನ ಕೊಟ್ಟು ಚೆಂದಗೆ ಬದುಕುತ್ತಿರುವ ರಾಜಿ ಖುಷಿಗೂ ಹನಿಗಳುದುರುವುದಕ್ಕೆ ಸಾಕ್ಷಿಯಾಗಿದ್ದಳು. ಎದುರಿಗಿನದ್ದೇನೂ ಕಾಣಿಸುತ್ತಿರಲಿಲ್ಲ. ಅಸಲಿಗೆ ಎತ್ತರ ಕಾಣಿಸದಷ್ಟು ಆಕೆ ಯಾವಾಗಲೋ ಬೆಳೆದಾಗಿತ್ತು.ಕಾರಣ ಅವಳು ಎಂದರೆ...(ಲೇಖಕರು ಕಥೆ-ಕಾದಂಬರಿಕಾರರು)

No comments:

Post a Comment