Saturday, June 25, 2016

ಬದಲಾವಣೆಯ ಚಕ್ರದಲ್ಲಿ ಬದುಕು ಸಿಕ್ಕಿಹಾಕಿಕೊ೦ಡಾಗ...
ತು೦ಬ ಚೆ೦ದವಾಗಿ ಬದುಕತೊಡಗಿದ್ದಾಗಲೇ, ಹೀಗೊ೦ದು ತಿರುವು ಬರುತ್ತದಾ ಎನ್ನುವ ಯೋಚನೆಯೂ ಬ೦ದಿರುವುದಿಲ್ಲ. ಏನೇ ಆಗುವುದಾದರೂ ಅದು ನಮ್ಮ ಬದುಕಿಗಾಗಲಿಕ್ಕಿಲ್ಲ ಎ೦ಬ ವಿಶ್ವಾಸದಿ೦ದಿರುತ್ತೇವಲ್ಲ ಅಲ್ಲೇ ತಪ್ಪಾಗಿರುತ್ತದೆ.
‘ಎಲ್ಲಿದ್ದೀಯೋ.. ನೀ ಮಾತಾಡಕ್ಕ ಸಿಗ್ತೀಯೊ ಇಲ್ವೋ ಅಂತಾಬಿಟ್ಟಿದ್ದೆ. ಪೇಪರಿನೋರು ನಂಬರ್ ಕೊಡೊದಿಲ್ಲ ಅಂತಾರೆ. ಅದಕ್ಕೆ ಇ-ಮೇಲ್ ಮಾಡಿದ್ದೆ’ ಎನ್ನುತ್ತಾ ನನ್ನನ್ನು ಮರೆತುಹೋದ ಕಥಾನಕಕ್ಕೆ ಎಳೆದು ತಂದವಳು ಭಾವಿ. ಆಕೆಯ ಪೂರ್ತಿ ಹೆಸರು ಭಾವನಾ ಶಂಕರ್‌ರಾವ್. ಮೊನ್ನೆವರೆಗೂ ಮರೆತೇ ಬಿಟ್ಟಿದ್ದ ಭಾವಿಯನ್ನು ಮತ್ತೆ ಆಕೆ ನೆನಪಿಸಿಕೊಂಡು ಕರೆ ಮಾಡಿದಾಗಲೇ ನಾನು ನೆನಪಿಗೂ, ಆಕೆಯ ಇರುವಿಕೆಗೆ ಸ್ಪಂದಿಸಿದ್ದು. ಕಾರಣ ಸರಿಸುಮಾರು ಮೂನ್ನೂರಕ್ಕೂ ಹೆಚ್ಚು ಸಹಪಾಠಿಗಳನ್ನೂ, ನೂರಾರು ಸ್ನೇಹಿತರನ್ನೂ ಹಾಯ್ದು ಬಂದಾಗ ತೀರಾ ನಮಗೆಲ್ಲೂ ತಾಗದೇ ಉಳಿದು ಬಿಡುವವರೂ, ಆಗೀಗ ಇದ್ದಕ್ಕಿದ್ದಂತೆ ಬದುಕಿನ ಮಧ್ಯೆ ಪ್ರವೇಶಿಸಿ, ಧುತ್ತನೆ ಇನ್ನೆಲ್ಲೋ ಪ್ರತ್ಯಕ್ಷವಾಗಿ ಅಚ್ಚರಿಗೀಡು ಮಾಡುವವರೂ ಇಲ್ಲದಿಲ್ಲ. ಹಾಗಾಗೇ ನಮ್ಮಲ್ಲಿ ಆ ಮಟ್ಟಿಗಿನ ಸಲುಗೆ, ಆ ವಯೋಸಹಜ ವಾಂಛೆಗಳ ಕಾಲದಲ್ಲಿ ಭಾವಿ ಎನ್ನುವ ಹುಡುಗಿ ಹುಡುಗಾಟದ ಕಾಲಾವಽ ಹೊರತು ಪಡಿಸಿದರೆ ಅದ್ಯಾಕೋ ಭಿತ್ತಿಯಿಂದ ಕಣ್ಮರೆಯೇ ಆಗಿ ಹೋಗಿದ್ದು ಹೌದು.
ಬೆಂಗಳೂರಿನ ಗಲ್ಲಿಗಳಲ್ಲಿ ನಮ್ಮೊಂದಿಗೆ ಜಗಳಕ್ಕೆ ಬೀಳುವಾಗ ನಮಗ್ಯಾರಿಗೂ ಈ ಮಟ್ಟಿಗಿನ ಪರಿಸ್ಥಿತಿಯಲ್ಲಿ ಬದಲಾವಣೆಗಳು ಬಂದಾವೆಂಬ ಅಂದಾಜು ಬಿಡಿ, ಭವಿಷ್ಯತ್ತಿನ ಬಗೆಗೆ ಯಾವೊಂದು -ಂಟಸಿಯೂ ಇರಲಿಲ್ಲ. ನಾವಿದ್ದ ಪರಿಸ್ಥಿತಿಗೆ ಕನಸಲ್ಲಿ ಕೂಡಾ ಒಂದೊಳ್ಳೆ ಸೀನು ಬರುತ್ತಿರಲಿಲ್ಲ. ಎಲ್ಲ ಬ್ಲಾಕ್ ಆಂಡ್ ವೈಟ್ ಚಿತ್ರಣಗಳೇ. ಅಂತಹದರಲ್ಲಿ ಒಬ್ಬರು ಹೊರಲಿಕ್ಕಾಗದಷ್ಟು ಗಾತ್ರದ ದೊಡ್ಡ ಟಿ.ವಿ. ಮತ್ತು ಬ್ಯಾಕ್ ಟು ಬ್ಯಾಕ್ ದಾಂಗುಡಿಯಿಟ್ಟ ವಿ.ಸಿ.ಪಿ ಅತಿದೊಡ್ಡ ಆಕರ್ಷಣೆ ಆಗ. ಅದೆಷ್ಟೇ ಮಾಸಿದ ಅರೆಬರೆ ಗೆರೆ ಹಾಯುತ್ತಿದ್ದ ಸಿ.ಡಿ ಸಿಕ್ಕಿದರೂ ಕೂತು ಕಣ್ರೆಪ್ಪೆ ಮುಚ್ಚದೆ ನೋಡುತ್ತಿದ್ದ ಕಾಲ ಅದು.

ಇದನ್ನೆಲ್ಲಾ ನೋಡಲು ನಾವು ವಾರಕ್ಕೊಮ್ಮೆಯಾದರೂ ಸಂಪಾದಿಸುತ್ತಿದ್ದ ಕ್ಯಾಸೆಟ್ಟಿಗೆ ಟಿ.ವಿ. ಎಂಬ ಮಾಯಾಪೆಟ್ಟಿಗೆ ಜೊತೆಗೆ ಅದರ ಪ್ಲೇಯರನ್ನೂ ಒದಗಿಸುತ್ತಿದ್ದುದು ಭಾವಿ. ಸಾಯಂಕಾಲಗಳಿಗೆ ನಮ್ಮೊಂದಿಗೆ ಜಿದ್ದಿಗೆ ಬಿದ್ದಂತೆ ಗಾಡಿ ಓಡಿಸಿಕೊಂಡು ಬರುತ್ತಿದ್ದಳು. ನಮ್ಮದೋ ಯಾರೋ ಕೊಡುತ್ತಿದ್ದ ಎಂ.೮೦ ಅಥವಾ ನಾನು ಆಗೀಗ ಆಫೀಸಿನಿಂದ ರಾತ್ರಿ ಎತ್ತಿಟ್ಟುಕೊಂಡು ಬರುತ್ತಿದ್ದ ಆರ್‌ಟಿಝೆಡ್ಡು. ಆಕೆ ಆ ಕಾಲದ -ಮಸ್ಸು ಯೆಜ್ಡಿಯನ್ನು ಓಡಿಸಿಕೊಂಡು ಬೆಂಗಳೂರಿನ ರಸ್ತೆಗಳಿಗೆ ಬೆಂಕಿ ಇಕ್ಕುತ್ತಿದ್ದಳು. ಆದರೆ ನಿಲ್ಲಿಸುವಾಗ ಮಾತ್ರ ನಾವು ಕೈಯಿಕ್ಕದಿದ್ದರೆ ‘ಕ್ವಾಣ(ಕೋಣ)ದ್ದಂಗಿದೀರಿ. ಹುಡುಗಿ ಅನ್ನೋ ಖಬರ್ ಬ್ಯಾಡ. ಸ್ಟ್ಯಾಂಡ್ ಹಾಕೂದಾಗುದಿಲ್ಲಾ?’ ಎಂದು ನಮ್ಮ ಚಳಿ ಬಿಡಿಸುತ್ತಿದ್ದಳು. ಬದುಕು, ಜೀವನೋತ್ಸಾಹ ಆಕೆಯಿಂದ ಕಲಿಯಬೇಕಿತ್ತು. ನಲ್ವತ್ತು ಕೆ.ಜಿ. ತೂಗುತ್ತಿದ್ದ ಹುಡುಗಿ ಬಾಯಿ ಮಾತ್ರ ಭಯಂಕರ. ನಾವು ನಾಲ್ಕಾರು ಹುಡುಗರು ಬೊಬ್ಬಿರಿದರೂ ಒಬ್ಬಳೇ ಅಡಚಿಬಿಡುತ್ತಿದ್ದಳು ನಮ್ಮನ್ನು. ಅಂಥ ಬಾಯಿ, ಮಾತಿಗೂ ಮುಂಚೆ ಸಿಡಿಸಿಡಿ ಸಿಡಿಯುತ್ತಿದ್ದ ಆಕೆ ಅಚ್ಚುಕಟ್ಟೂ ಹೌದು. ನಾವೇನಾದರೂ ಯಾವುದಾದರು ಕೆಲಸ, ನಾಳೆ ನೋಡೋಣ ಎನ್ನುತ್ತ ಹಗುರವಾಗಿ ತೆಗೆದುಕೊಂಡರೆ ನಮ್ಮ ಸೋಮಾರಿತನಕ್ಕೆ ನೀರಿಳಿಸುತ್ತಿದ್ದ ಹುಡುಗಿಯ ದೇಹದಲ್ಲಿ ಅಂಥ ಕಸುವಿತ್ತೋ ಇಲ್ಲವೋ ಆದರೆ ಆಕೆಯ ಧಾಡಸಿತನಕ್ಕೆ ನಾವು ಅವಳಿಲ್ಲದಾಗ ‘ಜಾಸ್ತಿ ಎಗರಾಡಬ್ಯಾಡ. ಭಾವಿ ಬಂದು ಮನಗಂಡ ಝಾಡಸ್ತಾಳ ನೋಡು’ ಎಂದಾಡಿಕೊಳ್ಳುವಷ್ಟು ಪ್ರಭಾವ ಬೀರಿದ್ದಳು. ಓದುವ ಹುಡುಗರಿಗೆ ನಾವು ಯಾವ ರೀತಿಯ ಭರವಸೆಯನ್ನೂ ಹುಟ್ಟಿಸುವವರಲ್ಲವಾಗಿದ್ದರಿಂದ, ನಮ್ಮ ಜೊತೆ ಸುತ್ತುತ್ತಿದ್ದ ಭಾವಿಯ ಬಗ್ಗೆಯಂತೂ ಕೇಳುವುದೇ ಬೇಡ.
‘ಏಯ್, ಆಕೀ ಓದಿ ಯಾವ ಕಂಪನಿ ಉದ್ಧಾರ ಆಗ್ಬೇಕಾಗ್ಯದ್ ಬಿಡ್ರೋ, ಇನ್ನೊಂದ ನಾಲ್ಕ ವರ್ಷ ಕಳದರ ಮದುವಿ ಆಗ್ತದೆ. ಆಮೇಲೆ ಆಕಿನ್ನ ಕುದರಿ ಜೋಡಿ ಕಳಿಸೋದಷ್ಟ ಬಾಕಿ ನೋಡರಿ’ ಎನ್ನುತ್ತಾ ಶಂಕರ್‌ರಾವ್, ಇನ್ನೇನೂ ಈ ಹುಡುಗಿಯಿಂದ ಆಗಲಾರದು ಎನ್ನುವ ನಿಟ್ಟಿನಲ್ಲಿ ನುಡಿಯುತ್ತಿದ್ದರೆ, ಮೇಲಿಂದ ಕೆಳಗೊಮ್ಮೆ ದಿಟ್ಟಿಸುತ್ತಿದ್ದೆ. ಕಾರಣ ನಾವೆಲ್ಲಾ ಆಗ ಭವಿಷ್ಯದ ಯಾವ ಕಲ್ಪನೆಗೂ ಶ್ರೀಕಾರ ಹಾಕಲೊಲ್ಲದ ದರವೇಶಿತನದ ಪರಮಾವಽಯಂತಿದ್ದೆವು. ಆಗೀಗ ‘ಭಾವಿನ್ನ ಮದುವಿ ಆದರ ಹ್ಯಾಂಗ’ ಎನ್ನುತ್ತಿದ್ದ ರವಿಯನ್ನು ಮಾತ್ರ ನಾನು ಕನಿಕರದಿಂದ ದಿಟ್ಟಿಸುತ್ತಿದ್ದೆ. ಅಂದೇ ಸಂಜೆ ಹೊತ್ತಿಗೆ ಅನಾಹುತ ಆಗಿತ್ತು.
ನಮ್ಮ ರೂಮಿನ ಹತ್ತಿರ ಯೆಜ್ಡಿ ನಿಲ್ಲಿಸಿದ ಶಬ್ದ. ಬಂದಾಗಲೇ ಯಾಕೋ ಆಕೆ ಬಂದುದು ನಾರ್ಮಲ್ ಇದ್ದಂಗಿಲ್ಲ ಎನ್ನಿಸಿ ನಾವು ಮುಖಮುಖ ನೋಡಿಕೊಳ್ಳುತ್ತಿದ್ದರೆ, ದಢಾರನೆ ಬಾಗಿಲು ಒದ್ದು ಒಳಬಂದ ಭಾವಿ ಚಿಟಿಚಿಟಿ ಚೀರುತ್ತಾ ರವಿಯನ್ನು ಹುಡುಕತೊಡಗಿದ್ದಳು. ಮಧ್ಯಾಹ್ನದ ನಿದ್ರೆಯಿಂದಿನ್ನು ಏಳದ ನಾನು ಕಣ್ಣುಜ್ಜಿಕೊಳ್ಳುತ್ತಾ ‘ಏನು ಏನಾತು? ಭಾವಿ ಯಾಕ ಹಿಂಗ’ ಎನ್ನುತ್ತಿದ್ದರೆ ಬುಸುಗುಡುತ್ತಿದ್ದೋಳು, ‘ಅಲ್ಲ ನಿನಗರ ಗೊತ್ತಾಗೋದಿಲ್ಲೇನು? ಕಾಗದಾ ಬರದ್ರ ನನಗ ಬರೀಬೇಕ ಹೌದಿಲ್ಲೋ? ನಮಪ್ಪನ ಕೈಯ್ಯಾಗ ಕೊಟ್ಟಾನಲ್ಲ. ಎಲ್ಲಿದಾನು? ಅಸ್ಥಿಪಂಜರಕ್ಕ ಪ್ಯಾಂಟು ತೂಗ ಹಾಕಿದಂಗಿದಾನು, ಥೇಟ್ ದೆವ್ವಿದ್ದಂಗಿದಾನು. ಮೊದಲು ನನ್ನ ಹತ್ತಿರ ಮಾತಾಡಬೇಕು ಅನ್ನೋ ಖಬರ್ ಬ್ಯಾಡೆನು?’ ಎನ್ನುತ್ತಿದ್ದರೆ ನಡೆದದ್ದೇನು ಎಂದು ಈಗ ಸ್ಪಷ್ಟವಾಗುತ್ತಿತ್ತು. ಮನದೊಳಗೇ ಮಂಡಿಗೆ ಮೇಯುತ್ತಿದ್ದ ರವಿ, ತಾನು ಕೇಳುವ ಮೊದಲೇ ಆಕೆಯನ್ನೆಲ್ಲಾದರೂ ಮದುವೆ ಮಾಡಿಯಾರೆಂಬ ದಿಗಿಲಿಗೆ ಬಿದ್ದು ಭಾವಿಗೊಂದು ಕಾಗದ ಬರೆದುಕೊಂಡಿದ್ದಾನೆ. ಹೋಗಲಿ ಅವಳ ಕೈಗಾದರೂ ಇಟ್ಟಿದ್ದಾನಾ? ಅದೂ ಇಲ್ಲ. ಮಧ್ಯಾಹ್ನದ ರಣರಣ ಬಿಸಿಲಿನಲ್ಲಿ ಕಾಲೇಜು ತಿರುಗಿ ಅಲ್ಲೆಲ್ಲೂ ಕಾಣದಿದ್ದಾಗ ವಿಚಾರಿಸುತ್ತಾ ಮನೆಗೂ ತಲುಪಿದ್ದಾನೆ. ಮನೆಗೆ ಹೋಗುವುದು ಹೊಸದೇನೂ ಆಗಿರಲಿಲ್ಲ. ಮನೆಯಲ್ಲಿ ಆಚೀಚೆ ನೋಡಿದ್ದಾನೆ. ಆಕೆ ಕಂಡಿಲ್ಲ. ಅವರಪ್ಪ ‘ಏನೋ’ ಎಂದು ಪ್ರಶ್ನಿಸಿದ್ದಾರೆ. ನಿಜವಾದ ಕಾರಣ ಹೇಳಲು ಮತ್ತು ತಕ್ಷಣಕ್ಕೆ ಬೇರೆ ನೆಪ ಹೇಳಲು ಆಗದಿದ್ದಾಗ ‘ಏನಿಲ್ಲ ಇದನ್ನು ಭಾವಿಗ ಕೊಡಬೇಕಿತ್ತು’ ಎನ್ನುತ್ತಾ ಹಲ್ಲು ಗಿಂಜಿ ಅವರಪ್ಪನ ಕೈಗೆ ಲಕೋಟೆ ಇಟ್ಟು ಬಂದಿದ್ದಾನೆ.
ಮನೆಯಲ್ಲಿ ಎಲ್ಲರೂ ಭಾವಿಯನ್ನು ತಮಾಷೆ ಮಾಡಿದ್ದೇ ಮಾಡಿದ್ದು. ಅಷ್ಟು ಸಾಕಾಗಿದೆ ಅವಳಿಗೆ. ಅಪ್ಪಟ ಚೆನ್ನಮ್ಮನ ಪೋಸಿನೊಂದಿಗೆ ಗಾಡಿ ಎಳೆದುಕೊಂಡು ಬಂದು ಅವನನ್ನು ಹುಡುಕತೊಡಗಿದ್ದಳು. ಅವರಪ್ಪ ನಗೆಯಾಡಿ ಅಳಿಯಾ ಬಂದಿದ್ದ ಎನ್ನುತ್ತಾ ಹಗುರವಾಗೇ ತೆಗೆದುಕೊಂಡು ಭಾವಿಯನ್ನು ಕಾಡಿಸಿದ್ದಾರೆ. ಆದರೆ, ಅದರ ಅವಮಾನ ತಟ್ಟಿದ್ದು ಭಾವಿಗೆ. ಅದಕ್ಕೆ ಇಲ್ಲಿಗೆ ಬಂದು ಎಗಾದಿಗಾ ಕುಣಿಯತೊಡಗಿದ್ದಳು. ಆವತ್ತು ರವಿ ಆಕೆಯ ಕೈಗೆ ಸಿಕ್ಕಿದ್ದರೆ ಖಂಡಿತಕ್ಕೂ ಒದೆ ಬೀಳುತ್ತಿದ್ದವೇನೋ. ಆದರೆ ಅದರ ಮರುದಿನವೂ ಅವನು ರೂಮಿಗೆ ಕಾಲಿಡುವ ಸಾಹಸ ಮಾಡಲಿಲ್ಲ.
ಇದೇ ನೆಪ ಉಪಯೋಗಿಸಿಕೊಂಡು ಇನ್ನೊಬ್ಬ ಸ್ನೇಹಿತ ಅವನನ್ನು ಅಲ್ಲಿಂದ ಗುಳೆ ಹೋಗುವಂತೆ ಮಾಡಿಬಿಟ್ಟ. ವಾರೊಪ್ಪತ್ತು ಕಳೆಯುವ ಮೊದಲೇ, ರವಿ ನೇತಾಕಿದ್ದ ಎರಡು ಪ್ಯಾಂಟು, ಲುಂಗಿ ಸೆಳೆದುಕೊಂಡು ಮತ್ತಿಕೆರೆಯ ರೂಮಿಗೆ ಹೊರಟುಹೋಗಿದ್ದ. ಆದರೆ, ಕೊನೆಗೂ ಭಾವಿ ಹೋಗಲಿ, ಯಾರನ್ನೂ ಮದುವೆನೇ ಆಗಲಿಲ್ಲ. ಅದ್ಯಾವ ಕಾರಣಕ್ಕೆ ಪಾಂಡಿಗೆ ಹೋದನೋ? ರವಿ ಮತ್ತೆ ಜೀವಂತ ಹಿಂದಿರುಗಲೇ ಇಲ್ಲ. ಭಯಾನಕ ರೋಗಕ್ಕೆ ಸಿಕ್ಕಿ ಮುಗಿದುಹೋಗಿದ್ದ. ನಮ್ಮ ಟೀಮು ಹೋಗುವಷ್ಟರಲ್ಲಿ ನೋಡಲು ಮುಖವೂ ಸಿಕ್ಕಿರಲಿಲ್ಲ. ‘ಹುಡುಗ ಛಲೋ ಇದ್ದ. ಆದರೆ ಧೈರ್ಯ ಇರ್ಲಿಲ್ಲ ಬಿಡು’ ಎಂದು ಭಾವಿ ನೀರುಬಿಟ್ಟಿದ್ದಳು.
ಅದಾಗಿ ನಾವೆಲ್ಲಾ ಚದುರಿಹೋಗುವ ಕಾಲದಲ್ಲಿ ಭವಾನಿ ಚೆಂದ ಚೆಂದ ಎನ್ನುವ ದಪ್ಪ ಗಾಜಿನ ಕನ್ನಡಕದ ಹುಡುಗನೊಬ್ಬನನ್ನು ಮೆಚ್ಚಿ ಮದುವೆ ಆಗಿದ್ದಳು. ಅವನು ಹುಡುಗ ಎನ್ನುವುದಕ್ಕಿಂತಲೂ ಅವಳ ಹಿಂದಿಂದೆ ಸುತ್ತುವ ಪರಿಗೆ ‘ಮದುವಿ ಗಂಡನ ಜೋಡಿ ಮಾಡ್ಕೊಂಡ್ಯೋ, ಇಲ್ಲ ಒಬ್ಬ ಪಿ.ಎ.ಅನ್ನು ಮಾಡ್ಕೊಂಡ್ಯೋ’ ಎಂದು ಆಕೆಯನ್ನು ಆಡಿಕೊಂಡು ಗಡದ್ದಾಗಿ ಜಿಲೇಬಿ ಉಂಡು ಬಂದಿದ್ದೆವು. ಅದಾದ ಮೇಲೆ ಎರಡು ದಶಕದ ಗ್ಯಾಪಲ್ಲಿ ಭಾವಿ ಮಾತಿಗೆ ಸಿಕ್ಕಿದ್ದಳು.
ನಸು ಹಳದಿ ಗೋಡೆಗಳ ಕೆಳಗೆ ಗಾಢವರ್ಣದ ಪಟ್ಟಿಗಳಿದ್ದ ಚಿಕ್ಕ ಹಾಲ್. ತುಂಬಿದ್ದ ಸಾಮಾನುಗಳ ಮಧ್ಯೆ ಆರಾಮು ಕುರ್ಚಿಯಲ್ಲಿ ಶಂಕರ್‌ರಾವ್ ಗುರುತೇ ಸಿಗದಷ್ಟು ಕುಗ್ಗಿ ಕೂತಿದ್ದರೆ, ಟಕ್‌ಟಕ್ ಎನ್ನುತ್ತ ಶಬ್ದಿಸುತ್ತಾ ಓಡಾಡುತ್ತಿದ್ದ ಭಾವಿ ಕಾಲೆಳೆದು ನಡೆಯುತ್ತಿದ್ದಳು. ಸೋ-ದಲ್ಲಿ ಕೂತಿದ್ದ ನನ್ನೆದುರಿಗೆ ಕಾಫಿ ಇಡುತ್ತಾ ನಿಸ್ತೇಜವಾದರೂ ದಣಿವಾಗಿಲ್ಲ ಎನ್ನುವಂತಿದ್ದ ಮುಖದಲ್ಲಿ ಮೊಳಕಾಲ ಬಳಿ ಕೈ ಹಾಕಿ ಹುಕ್ಕು ಕದಲಿಸಿ ಕಾಲು ಎತ್ತಿ ಆಚೆಗಿಡುತ್ತಾ ಸೀಟಿನ ಮೇಲೆ ಕೈಯಿಟ್ಟು, ನನ್ನೆಡೆಗೆ ತಿರುಗಿ ‘ಕಾಫಿ’ ಎಂದು ಎಚ್ಚರಿಸುತ್ತಿದ್ದರೆ ನಾನು ಎತ್ತಿಟ್ಟ ಕಾಲು, ಮಡಚಿ ಹೋದ ಕೈಗಿದ್ದ ಶಾಶ್ವತವಾದ ಖಾಕಿಬಣ್ಣದ ಪಟ್ಟಿ ನೋಡುತ್ತ ಕೂತಿದ್ದೆ. ಉಳಿದದ್ದು ಮುಂದಿನ ವಾರಕ್ಕೆ. ಆದರೆ ಮುಖದಲ್ಲಿ ಮಾತ್ರ ಒಂದಿನಿತೂ ಹಿಂಗಾಯ್ತು ಎನ್ನುವ ತುಮುಲವಿರಲಿಲ್ಲ.
ಕಾರಣ  ಅವಳು ಎಂದರೆ...

Wednesday, June 22, 2016

ಬಹುಶಃ ಸಂಶಯ ಮತ್ತು ಇನ್‌ಸೆಕ್ಯೂರಿಟಿಗಳು ಗಂಡಸರಿಗಿದ್ದಷ್ಟು ಹೆಂಗಸರಿಗಿಲ್ಲ. ಆದರೆ, ಹೆಣ್ಣು ಪ್ರತಿ ಕ್ರಿಯೆಗೂ ಒಂದು ಉತ್ತರ ಸಿದ್ಧ ಪಡಿಸಬೇಕಾದಲ್ಲಿ ಆಕೆ ಯಾವ ಡಿಕ್ಷನರಿ ಹುಡುಕಿಯಾಳು?

 
ಗಂಡಸರಿಗೆ ಇಂಥದ್ದೊಂದು ಸಂಶಯ ಯಾಕಾದರೂ ಬರುತ್ತದೋ? ಅವರ ಒಳಗೊಳಗಿನ ಇನ್‌ಸೆಕ್ಯೂರಿಟಿಗಳು, ಇನ್‌ಫಿರಿಯಾರಿಟಿಗಳು ಅದೇನು ಇರ್ತಾವೋ ನನಗಿವತ್ತಿಗೂ ತಿಳಿದಿಲ್ಲ. ಆದರೆ, ಯಾವುದೇ ಸಕಾರಣವಿಲ್ಲದೆ ಪ್ರತಿ ದಿನ-‘ಎಲ್ಲೋಗಿದ್ದೆ, ಏನು ಮಾಡ್ತಿದ್ದೆ? ಯಾರು, ಯಾಕೆ ಫೋನ್ ಮಾಡಿದರು? ಯಾರಾದರೂ ಬಂದಿದ್ರಾ? ಏನಾದರೂ ಬೇಕಿದ್ರೆ ನಾನೇ ತರ್ತೀನಿ, ನೀನು ಹೊರಗೆ ಹೋಗೋದು ಬೇಡ, ಇಂತಹದ್ದೇ ಬಟ್ಟೆ ಹಾಕೋ’, ಅಪ್ಪಿತಪ್ಪಿ ಬೇರೆಯದು ಹಾಕಿದರೆ ಹಾಕಿದಷ್ಟೂ ಹೊತ್ತು ಮುಖ ದಪ್ಪ ಮಾಡಿಕೊಂಡು ಸರಿಯಾಗಿ ಮಾತೇ ಆಡದೆ, ಯಾಕಾದರೂ ತನಗಿಷ್ಟದ ಬಟ್ಟೆ ತೆಗೆದುಕೊಂಡೆವೋ ಎಂಬಂತಾಗಿಸಿಬಿಡುತ್ತಾರೆ. ಅಷ್ಟ್ಯಾಕೆ, ಯಾರು ಬಂದರೂ ಹೋದರೂ ‘ಅಬ್ಬಾ’ ಎನ್ನುವಷ್ಟು ಸೂಕ್ಷ್ಮವಾಗಿ ಮತ್ತು ಸಮಾಧಾನವಾಗಿ ಬಂದವರ ಅತಿಥಿಗಳು ಸಂಬಂಧಿಕರ ಎದುರಿಗೆ ಇವನು ನನ್ನ ಗಂಡನೇನಾ ಎನ್ನಿಸುವಷ್ಟು ಆದರ-ಸದರ ಸ್ವಭಾವ.  ಆದರೆ, ಅದ್ಯಾವ ಸಂಶಯ ಅಥವಾ ಕೀಳರಿಮೆ ಕಾಡುತ್ತಿರುತ್ತದೋ ಗೊತ್ತಿಲ್ಲ. ಅದರಲ್ಲೂ ಬೇರೆ ಸ್ನೇಹಿತರು ತಪ್ಪಿಯಾದರೂ-‘ನಿನ್ನ ಹೆಂಡತಿ ಸ್ಮಾರ್ಟು’, ‘ನಿಮ್ಮನೆಯವರು ಭಾರಿ ಸೋಶಿಯಲ್ ಅದಾರು ಎಲ್ಲಾ ಸುಧಾರಸ್ತಾರು’ ಎನ್ನುವಂತಹ ಹೊಗಳಿಕೆಗೆ ಈಡು ಮಾಡಿದರೋ ಮುಗಿದೇ ಹೋಯಿತು. ಹೊಗಳಿಕೆ ಹೊನ್ನ ಶೂಲವಾಗುತ್ತದೆ! ಅಂಥವರೊಂದಿಗೆ ಬದುಕುವ ಹೆಣ್ಣುಮಕ್ಕಳು ಮಾತ್ರ ಉಣ್ಣಲಾಗದ ಉಗಿಯಲಾಗದ ಬಿಸಿ ತುಪ್ಪದಂತೆ ಬದುಕಿಬಿಡುತ್ತಾರೆ.
    ಸರಾಸರಿ ದಶಕಗಳ ಕಾಲಾವಧಿಯಲ್ಲಿ ಆಗೀಗ ಸಂಪರ್ಕದಲ್ಲಿದ್ದ, ಫೇಸ್‌ಬುಕ್ಕು, ವಾಟ್ಸ್‌ಆಪ್ ಬಂದ್ಮೇಲೆ ಸರಾಗವಾಗಿ ಎಟಕುತ್ತಿದ್ದ ಬಿಂದು ‘ಏನೂ ಮಾಡುತ್ತಿಲ್ಲ ಮನೆಯಲ್ಲೇ ಇದೀನಿ’ ಎನ್ನುತ್ತಿದ್ದರೆ ಇದ್ಯಾಕೆ ಹಿಂಗೆ ಎನಿಸದಿರಲಿಲ್ಲ. ಕಾರಣ, ಆಕೆ ಒಂದು ಕಡೆ ಕೂತ ಹುಡುಗಿಯೇ ಅಲ್ಲ. ಪೇಂಟಿಂಗು ಮಾಡ್ದೆ, ಇನ್ಯಾವುದೋ ಮನೆಯ ಗೋಡೆಗೆ ಚಿತ್ರ ಬರೆದು ಗಲೀಜು ಮಾಡಿದೆ, ಇನ್ನೊಬ್ಬರ ನೋಟ್‌ಬುಕ್ ತುಂಬ ಚೆಂದವಾಗಿ ಬೇಕಾದುದನ್ನೆಲ್ಲಾ ಗೀಚಿ ಕೊಟ್ಟೆ, ಅದ್ಯಾವುದೂ ಇಲ್ಲದಿದ್ದಾಗ ಹಳೆಯ ಡ್ರೆಸ್ಸಿನ ಚೆಂದದ ಭಾಗ ತೆಗೆದು ಅದನ್ನೇ ಆಚೀಚೆ ಮಡಚಿ ಹೊಸದರ ಮೇಲೆ ಪ್ಯಾಚ್‌ವರ್ಕ ಮಾಡಿ ಬೋಟಿಕ್ ವರ್ಕ್ ಮಾಡುತ್ತಾ, ಇನ್ನೇನೂ ಇಲ್ಲದಿದ್ದರೆ ಒಂದಷ್ಟು ಚೆಂದಗೆ ಅಡುಗೆ ಮಾಡಿಕೊಂಡು ಒಬ್ಬಳೆ ಕೂತು ಉಂಡೇಳುವ ಜೀವನ ಪ್ರೀತಿಯ ಹುಡುಗಿ ಆಕೆ. ಆಕೆಯ ಮಾತು ಮತ್ತು ಸಂಗ್ರಹದಲ್ಲಿ ವಿಷಯ ವಸ್ತುಗಳು ಹೊರತಾದುದೇ ಇಲ್ಲ. ಅಷ್ಟು ಪ್ರತಿ ಕ್ಷಣವನ್ನೂ ತೆಕ್ಕೆಗೆ ಎಳೆದುಕೊಳ್ಳುತ್ತಿದ್ದವಳು ಬಿಂದು.
   ದೀಪಾವಳಿಯ ದಿನ ಬೆಳ್‌ಬೆಳಗ್ಗೆ ನಮ್ಮನೆಗಳ ಬಾಗಿಲ ಹೊರಗೆ ಪಟಾಕಿ ಡಮ್ಮೆನ್ನಿಸಿ, ಆಕಾಶಬುಟ್ಟಿಯ ದೀಪ ದೊಡ್ಡದಾಗಿ ಉರಿಸಿ, ತಮ್ಮದೇ ಲೈಟು ಜಾಸ್ತಿ ಎನ್ನುತ್ತಾ, ‘ನೀ ಹಿಂಗ ಮಾಡಿದರ ಗಂಡ ಮನೀ ಬಿಟ್ಟು ಓಡಿಸ್ತಾನು ನೋಡಲೇ ಬಿಂದಿ’ ಎಂದು ರೇಗಿಸುತ್ತಿದ್ದರೆ ‘ಹೋಗ್ಲಿ ಬಿಡೋ ಯಾವನಿಗ ಬೇಕು? ಹಿಂಗೇ ಇದ್ದ ಬೀಡ್ತೇನಿ...’ ಎಂದು ಹಲ್ಕಿರಿದು ನಿಸೂರಾಗಿಸುತ್ತಿದ್ದಳು. ಹಾಗಾಗಿ ಧ್ವನಿಯ ಏರಿಳಿತದಲ್ಲೇ ಏನಾಗುತ್ತಿದೆ, ಏನಾಗುತ್ತಿರಬಹುದು ಎನ್ನುವುದನ್ನು ಅರಿವಿಗೆ ತಂದುಕೊಂಡು ಬಿಡುವ ನನಗೆ ಅದರಲ್ಲಿ ವಿಶೇಷ ಏನೂ ಅನ್ನಿಸಿರಲಿಲ್ಲ.
   ಎತ್ತರದ ಮಿನಿ ಬಂಗಲೆಗೆ ಅದಕ್ಕಿಂತಲೂ ಎತ್ತರ ಎನ್ನುವ ಫೀಲಿಂಗ್ ಮೂಡಿಸುವ ಅರೆಬರೆ ಗೀರುಗಳ ಗೇಟು.  ಮನುಷ್ಯ ಬಿಡಿ ಯಾವ ಹಕ್ಕಿಯೂ ಅದನ್ನು ಸರಕ್ಕನೆ ಒಂದೇಟಿಗೆ ಹಾರಲಾಗದ ಎತ್ತರ ಯಾಕಿದ್ದೀತು ಎನ್ನುವುದು ಎಂತಹವನಿಗೂ ಮೊದಲ ನೋಟಕ್ಕೆ ಅನಿಸಿಬಿಡುವಂತಹ ಮನೆಯಲ್ಲಿ ಬಿಂದು ‘ಅಂತೂ ಬಂದ್ಯಲ್ಲ. ಬಾ, ಬಾ. ದೊಡ್ಡ ಮನುಷ್ಯ, ನೀನು ಕೈಗೆ ಸಿಗೋದೆ ಅಪರೂಪ’ ಎನ್ನುತ್ತಿದ್ದರೆ, ‘ಆಯ್ತು ಹಂಗಂತ ಅರ್ಜೆಂಟಿಗ್ ಬಿದ್ದು ನೀನು ಎನಾರೇ ಮಾಡಿ ನನ್ನ ಹೊಟ್ಟಿ ಹಾಳ ಮಾಡಬ್ಯಾಡ. ನಾ ಕಾಮತ್‌ನಲ್ಲೇ ನಾಸ್ಟಾ ಮಾಡಿ ಬಂದೇನಿ’ ಎಂದು ರೇಗಿಸುತ್ತಿದ್ದರೆ ‘ನೀ ಬದಲಾಗಾಂಗಿಲ್ಲ ಬಿಡು’ ಎಂದು ಉಪಚರಿಸಿದ್ದಳು.
    ಮೂರು ಮಜಲಿನ ಮನೆ, ಎಲ್ಲೆಲ್ಲೂ ಸಾಗುವಾನಿ ಪ್ಯಾಕಿಂಗು, ಮ್ಯೂರಲ್ ಆರ್ಟು, ಶಾಂಡೀಲಿಯರ್ರು ನನ್ನಂತವನಿಗೆ ಉಸಿರಾಟ ಕಷ್ಟಕ್ಕೀಡು ಮಾಡುವಂತಹ ವಾತಾವರಣ. ಎಷ್ಟೇ ಆಮೋದವಿದ್ದರೂ ತೀರ ಪ್ಲಾಸ್ಟಿಕ್ಕು ಕುರ್ಚಿಯ ಮೇಲೆ ಕಾಲು ಮಡಚಿ ಕೂತು ಸೊರ್ರನೆ ಟೀ ಕುಡಿಯುವ ನಾನೆಲ್ಲಿ, ಫಿಂಗರು ಪ್ರಿಂಟು ಬೀಳುತ್ತದೆನೊ ಎನ್ನುವಷ್ಟು ಶುದ್ಧ ಬಿಳಿಬಿಳಿ ಪಿಂಗಾಣಿ ಕಪ್ಪಿನಲ್ಲಿ ನೊರೆನೊರೆ ಕಾಫಿಯನ್ನೂ ಲೆಕ್ಕಿಸಿ ಕುಡಿಯುವ ಆ ವಾತಾವರಣ ಎಲ್ಲಿ?
    ಮಸ್ತ ಪಗಾರಿನ ನೌಕರಿ, ಛಲೋ ಮನೆತನ ಎಂದು ಬೆಂಗಳೂರಿಗೆ ಮದುವೆಯಾಗಿ ಬಂದ ಬಿಂದುಗೆ ಎಲ್ಲವೂ ಸ್ವರ್ಗ ಸಮಾನವೇ ಆಗಿತ್ತು. ಆದರೆ ಬಿಂದುಳ ಗಂಡ ಇಪ್ಪತ್ನಾಲ್ಕು ಗಂಟೆನೂ ಆಕೆಯನ್ನು ಕಾಯತೊಡಗಿದ್ದನಲ್ಲ ಆಗ ಉಸಿರುಗಟ್ಟತೊಡಗಿತ್ತು.
   ‘ಎಲ್ಲಿದ್ದಿ? ಏನ್ಮಾಡ್ತಿದ್ದಿ? ಇಷ್ಟೊತ್ತು ಯಾಕೆ ಫೋನ್ ತಗಿಯಾಕೆ? ಹೊರಗೆ ಯಾಕೆ ಹೋಗಿದ್ದೆ, ಎಲ್ಲಿಂದ ಎಲ್ಲಿ ತನಕ ಹೋಗಿ ಬಂದೆ? ಬಾಜು ಮನೀ ಆಂಟಿ ಯಾಕ ಬಂದಿದ್ರು? ಎಷ್ಟು ಸಾಮಾನು ತಂದಿ ಅದಕ್ಕ ಇಷ್ಟ ಹೊತ್ತು ಬೇಕಾ? ಯಾಕೆ ಹೊಸಾ ಡ್ರೆಸ್ಸು ಹಾಕ್ಕೊಂಡಿದಿ? ಯಾವ -ಡ್ಸು ಫೋನ್  ಮಾಡಿದ್ದು? ಇನ್ಮ್ಯಾಲೇ ಸಂಜೀ ಮುಂದನ ಫೋನ್ ಮಾಡಕ ಹೇಳು’. ಒಂದಾ ಎರಡಾ...? ಗಂಡ ಎಂಬುವನಿಗೆ ಬಿಂದುವಿನ ಪ್ರತಿ ನಡೆಯ ಮೇಲೂ ಇನ್ನಿಲ್ಲದ ಸಂಶಯ, ಇನ್ಸ್‌ಕ್ಯೂರಿಟಿ ಮತ್ತು ಕಮೆಂಟು ಮಾಡುವ ಹುಕಿ ಇತ್ತು.
   ಆಕೆ ಏನು ಮಾಡಿದರೂ ಆತನ ಪ್ರಶ್ನೆ ಸಿದ್ಧವಾಗಿರುತ್ತಿತ್ತು. ಇದರಿಂದ ದೊಡ್ಡ ಜಗಳದಂತಹದ್ದು ಆಗುವುದೇ ಇಲ್ಲ. ಆದರೆ, ಅದನ್ನು ಪ್ರತಿ ದಿನ, ಪ್ರತಿ ಸಮಯದಲ್ಲೂ ಎದುರಿಸುವುದಿದೆಯಲ್ಲ, ಅದು ಜೀವನವನ್ನೇ ನರಕವನ್ನಾಗಿಸಿ ಬಿಡುತ್ತದೆ. ಬಿಂದುಳ ಲೆಕ್ಕದಲ್ಲೂ ಆಗಿದ್ದು ಅದೇ. ಗಂಡನಿಗೆ ಮೆತ್ತಿದ ಸಂಶಯ ಪಿಶಾಚಿಯಿಂದ ಆಕೆ ಮನೆಯಿಂದ ಹೊರ ಹೋಗುವುದನ್ನೇ ನಿಲ್ಲಿಸಿದಳು. ಮೊಬೈಲ್ ಎತ್ತಿಟ್ಟಳು. ಪೇಪರ್ ಓದುವುದನ್ನೂ ನಿಲ್ಲಿಸಿದಳು. ಬೆಳಗಿನಿಂದ ಸಂಜೆವರೆಗೂ ಆಕೆಗೆ ಬೇಕಾದಂತೆ ಇರುತ್ತಿದ್ದರೆ ಅದಕ್ಕೂ ಆತ ‘ಕೆಲಸ ಬೊಗಸಿ ಏನೂ ಇಲ್ಲೇನು ನಿನಗೆ?’ ಎನ್ನುವುದಕ್ಕೆ ಶುರು ಮಾಡುತ್ತಿದ್ದ. ‘ಬೆಳಿಗ್ಗಿಂದ ಹಂಗ ಕೂತಿರ್ತಿ, ಮನ್ಯಾಗ ಏನ್ ಮಾಡ್ತಿ?’ ಎನ್ನುತ್ತಿದ್ದ. ಇಂಥ ಮನಸ್ಥಿತಿಯನ್ನು ಎದುರಿಸುವುದಾದರೂ ಹೇಗೆ? ಮಕ್ಕಳು ಎಂತಾದ ಮೇಲೆ ಕೊಂಚ ಆಕೆಗೂ ರೀಲಿಫ್‌ ಎಂತಾದರೂ ಈಗ ಕೆಲ ಸಮಯದ ನಂತರ ಮತ್ತದೇ ಪಂಜರದ ವಾಸ. ಹೆಚ್ಚಿನಂಶ ಮಕ್ಕಳ ಜೊತೆಗೆ ಕಳೆಯುವುದರಿಂದ ದಿನವಿಡಿ ಏನೂ ಅನ್ನಿಸುವುದಿಲ್ಲ. ಸಂಜೆಯ ಪ್ರಶ್ನಾವಳಿಗೆ ಉತ್ತರ ಮತ್ತು ಫೀಲಿಂಗು ಎಲ್ಲಿಂದ ತರುವುದು? ಬದುಕಿದ್ದೇ ಕೊಂದುಕೊಳ್ಳುವುದು ಅಂದರೆ ಇದೇನಾ?
   ‘ಬೇರೆ ಏನು ದಾರಿ ಅದ ಹೇಳು ಇಂತಾ ಬದುಕಿನ್ಯಾಗೇ?’ ಆಕೆ ಹುಬ್ಬೇರಿಸುತ್ತಿದ್ದರೆ ನನ್ನೆಲ್ಲಾ ಅನುಭವಗಳು  ಬಕ್ಕಬಾರಲಾಗಿದ್ದವು. ಡೊಮೆಸ್ಟಿಕ್ ವಯಲೆನ್ಸಿನ ಕಕ್ಷೆಯೊಳಗೂ ಸಿಕ್ಕದ ಇಂಥ ವಿಷಯವನ್ನು ಪ್ರಸ್ತುತ ಪಡಿಸುವುದಾದರೂ ಹೇಗೆ?
   ‘ಹಿಂಗಾದರೆ ಹೆಂಗೆ? ಅದೇನೋ ಸುಡುಗಾಡು, ‘ಕಾರ್ಪಸ್ ಕ್ಯಾಲೋಸಮ್’ ಅಂತಿಯಲ್ಲ ಅದನ್ನಾದರೂ ರಿಪ್ಲೇಸ್ ಮಾಡಿಸ್ಬೋದಾ? ಹೇಳು. ಇದೇನಿದು ಜೀವನಪೂರ್ತಿ ಮನುಷ್ಯ ಬೆಳೆಯೋದೆ ಇಲ್ಲ, ಸುಧಾರಿಸೋದೇ ಇಲ್ಲ ಅನ್ನೋದಾದರೆ ಬದುಕು ಸಾಗಿಸೋದಾದರೂ ಹೆಂಗೆ? ಹೆಣ್ಣುಮಕ್ಕಳು ಬದಲಾದರು, ಬೆಳೆದರು ಸಾಕಷ್ಟು ಹಾಳೂ ಆದರು. ಗಂಡಸರು ಹಾಳಂತೂ ಆಗ್ತಾನೇ ಇರ್ತಾರೆ. ಆದರೆ ಒಂದಿಷ್ಟಾದರೂ ಅವರು ಸುಧಾರಿಸಬೇಕು ನೋಡು ಮಾರಾಯ’ ಬಿಂದು ಮಾತಾಡುತ್ತಿದ್ದರೆ ನಾನು ಹೂಂ ಅಥವಾ ಉಹೂಂ ಎನ್ನದ ಸ್ಥಿತಿಯಲ್ಲಿದ್ದೆ. ಮಾತು ನಿಂತುಹೋಗಿದ್ದವು. ಎಷ್ಟು ಜನರನ್ನಂತ ಅಥವಾ ಗಂಡಸರನ್ನು ಇದರಡಿಗೆ ತರೋದು? ಹೆಚ್ಚಿನಂಶ ಹೊರಗೆಲ್ಲಾ ಸುಬಗರಂತೆ ತೋರಿಸಿಕೊಳ್ಳುವ ಗಂಡಸು ಮತ್ತದೆ ಹಾಡು ಹಾಡುತ್ತಿದ್ದರೆ ಆಕೆ ಎಲ್ಲಿ ಹೋಗಬೇಕು?
ಸುಮ್ಮನೆ ಬಿಂದುಳ ಕೈಯ್ಯದುಮಿ ಹೊರಬಂದು, ಒಮ್ಮೆ ನಿರಾಳವಾಗಿ ಉಸಿರೆಳೆದುಕೊಂಡೆ. ಮನೆಯ ಆ ಗೀರು ಗೇಟಿನ ಸರಳಿನ ಹಿಂದೆ ನಿಂತ ಆಕೆಯನ್ನು ತಿರುಗಿ ನೋಡುವ ಧೈರ್ಯವಾಗಲಿಲ್ಲ. ಸ್ವಯಂಸುಧಾರಣೆ ಅಥವಾ ಬೆಳವಣಿಗೆ ಆಗದೇ ಇದು ಬದಲಾಗೋದಕ್ಕಂತೂ ಸಾಧ್ಯವಿಲ್ಲ. ಅವಳು ಹೇಗೋ ಬದುಕಿ ಬಿಡುತ್ತಾಳೆ. ಆದರೆ ಇಂಥವಕ್ಕೆ ಮುಖಾಮುಖಿಯಾಗೋ ನಾನು?
                                           ಕಾರಣ ಅವಳು ಎಂದರೆ...

Saturday, June 11, 2016


ಕಳೆದ ದಶಕಗಳಿಗೆ ಕಾರಣವೆ೦ದರೆ ಅವಳು...
ಎಲ್ಲವನ್ನೂ ಲೆಕ್ಕಕ್ಕಿಟ್ಟು ಬದುಕುವುದಾದರೆ ಅದು ಬದುಕಾಗುವುದಿಲ್ಲ. ಗಣಿತವಾಗಿರುತ್ತದೆ. ಹಾಗಿದ್ದ ಸ೦ಬ೦ಧದಲ್ಲಿ ಪ್ರೀತಿ ಬಿಡಿ ಸಣ್ಣ ನ೦ಬಿಕೆಯೂ ಇರುವುದಿಲ್ಲ. ಇನ್ನು ಅನುಭೂತಿ ಎಲ್ಲಿ೦ದ ಹುಟ್ಟೀತು? ಇನ್ನೂ ಎಷ್ಟು ದಿನಾ ಈ ಬದುಕು ಎ೦ದುಕೊಳ್ಳುತ್ತ, ಸುಮ್ಮನೆ ಹುಟ್ಟಿದ್ದಕ್ಕೆ ಜೀವಿಸಬೇಕೆನ್ನುವ ಹ್ಯಾ೦ವಕ್ಕೆ ಬಿದ್ದು ಜೀವ ಸವೆಸುತ್ತಿರುತ್ತಾರೆ.
ಅವಳಿಗೆ ಜ್ಯೂಸ್ ಬೇಕಿದ್ದರೆ ಅವನು ವಗರು ವಗರು ಬಿಯರ್ ಬೇಕೆನ್ನುತ್ತಾನೆ. ಅವಳಿಗೆ ಬದನೆಕಾಯಿಯಾದರೆ ಇವನಿಗೆ ಹಾಗಲಕಾಯಿ ಪಲ್ಯ ಬೇಕಿರುತ್ತದೆ. ಆಕೆ ಇಡ್ಲಿ ಎ೦ದರೆ ಅವನು ಬನ್ಸ್ ಭಾಜಿ ಬೇಕೆನ್ನುತ್ತಾನೆ. ತು೦ಬು ತೋಳಿನ ಚೂಡಿದಾರ ಧರಿಸಿ ಆಕೆ ಹೊರಬೀಳುತ್ತಿದ್ದರೆ ನೀರೆಯರಿಗೆ ಸೀರೇನೆ ಚೆ೦ದ... ಎ೦ದು ಕಣ್ಣು ಹೊಡೆಯುತ್ತಾನೆ. ಆಕೆ ಮಸಾಲೆ ಪುರಿಗೆ ಇಷ್ಟಿಷ್ಟೇ ಸೇವು ಸೇರಿಸಿ ತಿನ್ನುತ್ತಿದ್ದರೆ, ಪಕ್ಕದವರ ಪರಿವೇ ಇಲ್ಲದ೦ತೆ ಕಚಪಚ ಮಾಡುತ್ತ ಪಾವಭಾಜಿ ತಿನ್ನುತ್ತಾ ಬೆರಳು ಚೀಪುತ್ತಿರುತ್ತಾನೆ. ಅ೦ಗಿ ಮೇಲೆ ಬಿದ್ದ ಪುಡಿಗಳನ್ನು ಕಣ್ಣಲ್ಲೇ ಗದರಿಸಿ ಆಕೆ ಉದುರಿಸುತ್ತಾಳೆ. ಅದ್ಯಾವ ಅವಮಯಾ೯ದೆಗೂ ಈಡಾಗದೆ ಅವನು ಕೊಡವಿಕೊಳ್ಳುತ್ತಾನೆ. ಆಕೆಗೆ ಅಡುಗೆ ಮಾಡುವ ಮನಸ್ಸಿದ್ದರೂ ಭಾನುವಾರದ೦ದು ಅವನನ್ನು ಅಡುಗೆ ಮನೆಗೆ ದಬುತ್ತಾಳೆ. ಅವನು ಚೆಡ್ಡಿಯ ಬುಡಕ್ಕೆ ಕೈ ಒರೆಸುತ್ತಾ ಸೊರೆ್ರನ್ನುವ ಒಗ್ಗರಣೆ ಸೀದುವ ಮುನ್ನವೇ ಅದ್ದಿ ಮೂರು ಮನೆಗೂ ವಾಸನೆ ಪಸರಿಸುತ್ತಾನೆ.
   ಆಕೆ ಮೂಗರಳಿಸುತ್ತಾ "ನಾನು ಹ೦ಗೆ ಮಾಡ್ತೀನಿ, ನೀನು ಹ೦ಗೇ ಮಾಡ್ತೀಯ. ಆದರೆ ನಿನ್ನ ವಾಸನೆ ಯಾಕೆ ಘಮ ಘಮ...' ಎ೦ದು ತುಟಿ ಕಚ್ಚುತ್ತಾ ಇಣುಕುತ್ತಿದ್ದರೆ ಅವನು ಕೈ ಎತ್ತುತ್ತ "ಅದು ನಳಪಾಕ' ಎ೦ದು ಜ೦ಭಕ್ಕೀ ಡಾಗುತ್ತಾನೆ. "ಸರಿ ಸರಿ ನಿಮ್ಮ೦ಗೆ ಮಾಡಿದರೆ ತಿ೦ಗಳ ದಿನಸಿ ವಾರಕ್ಕೆ ಖಾಲಿ ಬಾ ಇತ್ಲಾಗೆ' ಎ೦ದು ಮುಗಿದ ಅಡುಗೆ ಮು೦ದೆ ಐದು ನಿಮಿಷ ನಿ೦ತು "ಕಟ್ಟೆ ಸುತ್ತೆಲ್ಲ ರಾಡಿ' ಎ೦ದು ಕಣಿಡುತ್ತಾ ಅಡುಗೆ ತ೦ದು ಟೇಬಲ್ಲಿಗೆ ಜೋಡಿಸುತ್ತಾ "ನೀವಿಬ್ಬರೂ ಕಿತ್ತಾಡಿದ್ದು ಸಾಕು ಅಡುಗೆ ಬಡಿಸೆ್ರೀ..' ಎ೦ದು ಮಗು ಹುಯಿಲಿಡುತ್ತಿದ್ದರೆ ಹುಸಿ ಕದನ ಮರೆತು ಅತ್ತ ಧಾವಿಸುತ್ತಾರೆ. ಊಟ ಮುಗಿದು ಮನಸ್ಸು ಬದುಕು ಧಾರಾವಾಹಿಯಾಗುವಾಗ ಮಗು ಅವರಿಬ್ಬರಿಗೂ ಮೊದಲೇ "ಮೊಬ್ಯೆಲ್ ತೀಡುತ್ತಾ ಕೂತಿರಿ. ಯಾವಾಗ ಸುಧಾರಿಸ್ತೀೀರೋ...' ಎ೦ದು ತಾನೇ ಬುದ್ಧಿ ಹೇಳುತ್ತ ಎದ್ದು ಹೋಗುತ್ತದೆ.
   ಆಕೆ ಅಡುಗೆಯಲ್ಲಿ, ಬರಹದಲ್ಲಿ, ಕಾಗುಣಿತದಲ್ಲಿ ಕೊನೆಗೆ ಬದುಕಿನ ಎಲ್ಲ ಕೊವೆಗಳಲ್ಲೂ ಅಚ್ಚುಕಟ್ಟು. ನಿಧಾನ ಹಿತಮಿತ. ಮಾತಿನಲ್ಲೂ, ಮೌನದಲ್ಲೂ ಅ೦ಕೆ ತಪ್ಪಿದ ಉದಾಹರಣೆಗಳಿಲ್ಲ. ಅಡುಗೆ ಆಕೆಗೆ ಮಹಾಬೋರು ಕೆಲ ಹೆ೦ಗಸರ೦ತೆ. ಉಮೇದಿಗೆ ಬಿದ್ದರೆ ಮೂರು ಐಟಮ್ಮು. ಇಲ್ಲದಿದ್ದರೆ ಮೆಸ್ಸಿನ ಊಟವೇ ಗತಿ ಕೆಲವೊಮ್ಮೆ. ಕ್ರಾಫಟ, ಬರಹ, ಸ೦ಗೀತ, ಟಿ.ವಿ. ಅದ್ಯಾವತ್ತೂ ಮರೆಯದ ಆಶಾ, ಲತಾ ಜೊತೆಗೆ ಕಿಶೋರ, ಸ೦ಜೆಗೆ ಕೆ.ಎಸ್.ಎನ್. ರಾತ್ರಿಗೆ ಮು೦ಚೆ ರಫಿ. ಜತೆಗೆ ಯೂ-ಟ್ಯೂ ಬ್‍ನ ಸಾವಿರಾರು ಜನರನ್ನು ಎಚ್ಚರಿಸುವ ಅವಳ ಹಾಡಿನ ಫೆಲ್ಡರು ಈ ಜನ್ಮಕ್ಕೆ ಎಣಿಸಲಾಗುವುದಿಲ್ಲ.
   ಮನೆಯಲ್ಲಿ ಕಿತ್ತಾಡುವುದಿಲ್ಲ, ಮ್ಯೆಗಳ್ಳತನ, ಗಲೀಜು ಸಹಿಸುವುದಿಲ್ಲ. ಮಗಳು, ಅವನು ಬೇಕಾಬಿಟ್ಟಿ ಶೂ ಬಿಸಾಡಿದರೆ, ಟಿಪಿಕಲ್ ಗ೦ಡಸರ೦ತೆ ಕೈಒರೆಸುವ ಟವಲ್ಲು ಜಾಗಕ್ಕಿಡದೆ, ಟಿ.ವಿ. ಪಕ್ಕದ ಸ್ಟಾ೦ಡಿಗೆ ನೇತಾಡಿಸುತ್ತಿದ್ದರೆ ಇದು ಬದಲಾಗುವ ದೆವ್ವವಲ್ಲ ಎ೦ದು ಒಮ್ಮೆ ನಿ೦ತು ಜುಟ್ಟು ಮೇಲೆತ್ತಿ ಕಟ್ಟಿ, ಹಲ್ಲು ಕಚ್ಚಿ, ಮಧ್ಯೆ ಮಧ್ಯೆ ಬೇಕೆ೦ದೆ ರೇಗಿಸುವ ಮಗಳಿಗೆ ಮೊಟಕಿ, "ಮು೦ದಿನ ವಷ೯ದಿ೦ದ ನಿನ್ನ ಹಾಸ್ಟೇಲ್‍ಗೆ ಕಳಿಸ್ತೀೀನಿ. ಆವಾಗ ಗೊತ್ತಾಗುತ್ತೆ ನಿ೦ಗೆ' ಎ೦ದು ಒಲ್ಲದ ರೇಜಿಗೆಯೊ೦ದಿಗೆ ರೇಗಿ ಜೊತೆಗಿಷ್ಟು ಮುದ್ದು ಮಾಡಿ, ಅಲ್ಲೇ ನೇತಾಡುವ ಅವನ ದೊಗಳೆ ಬಮು೯ಡಾದ ಲಾಡಿಗೆ ಅಣಕಿಸುತ್ತ, "ಒ೦ದಿನಾನದರೂ ಗ೦ಡನ೦ತಿರೋಕೆ ಅಗಲ್ವಾ, ಯಾವಾಗಲೂ ಫೆ್ರೀ೦ಡೇ ಆಗೀತಿ೯ಯಲ್ಲ ಇದೆ೦ಥಾ ಹುಡುಗನ್ನ ಕಟ್ಟಿಕೊ೦ಡೆನೋ ಬೆಳೆಯೋದೇ ಇಲ್ಲ ಅನ್ನುತ್ತೆ..' ಎ೦ದು ಬೇಕೆ೦ದೇ ರೇಗಿಸುತ್ತ ದಿನಗಳನ್ನು ಸರಸರನೆ ಕಾಲಕ್ಕೂ ಸವಾಲಾಗಿಸಿ ಸವಿಸುತ್ತಿದ್ದರೆ, ಅವನು ಜಗತ್ತಿನ ಅಷ್ಟೂ ಅಮೋದಗಳ ಅನುಭವಕ್ಕೀ ಡಾಗಬೇಕಿದೆ ತಾನು, ಎನ್ನುವ ಹ್ಯಾ೦ವಕ್ಕೆ ಬಿದ್ದು ಗ೦ಭೀರಗೊಳಿಸಿಕೊಳ್ಳುತ್ತಿರುತ್ತಾನೆ. ಆಕೆಗೇನೂ ಗೊತ್ತಿಲ್ಲವೆ೦ದಲ್ಲ.
   ಬದಲಾಯಿಸಿಕೊಳ್ಳಲು ಒಲ್ಲದ ಮನಸ್ಥಿತಿಯವನು ಅವನು. ಅನುಭವ ಮತ್ತು ಜಗತ್ತು ಅವನಿಗೆ ಎಲ್ಲ ಕಲಿಸುತ್ತಿದೆ. ಅ೦ಗೈಯಲ್ಲಿ ಚಿತ್ರ ಬಿಡಿಸಬಲ್ಲ ಅವನು ಸಮುದ್ರ ದ೦ಡೆಗೆ ಕೂತು ಟೀ ಕುಡಿದಷ್ಟೇ ಸಲೀಸಾಗಿ ಕೆ.ಆರ್. ಮಾಕೆ೯ಟ್ಟಿನ ಅಜ್ಜಿಯೊ೦ದಿಗೆ ಫಟ್‍ಪಾತ್ ಮೇಲೆ ನಿ೦ತಲ್ಲೇ ಬಾಡು ಮೆಲ್ಲಬಲ್ಲ. ನಾಡು ಬಿಟ್ಟವರೊ೦ದಿಗೆ ಕತ್ತಲೆಯಲ್ಲಿ ಕಾಡಿಗೆ ನುಗ್ಗಿ ಮಾತಾಡುತ್ತ ಕೂರುವ ಹೊಸತನದ ಖಯಾಲಿಗೆ ಎಣೆ ಇಲ್ಲ.
   ಅಘೋರಿಗಳಿ೦ದ ಹಿಡಿದು ಹೂ ಮಾರುವ ಹೆ೦ಗಸಿನವರೆಗೂ ಎಲ್ಲರೂ ಅವನ ಗೆಳೆಯ, ಗೆಳತಿಯರ ಸಾಲಿನಲ್ಲಿದ್ದಾರೆ. ಗೆಳೆಯರಷ್ಟೇ ಸಮನಾಗಿ ಹೆಗಲು ನೀಡಬಲ್ಲ ಸ್ನೇಹಿತೆಯರಿದ್ದಾರೆ. ಪ್ರತಿ ಊರುಗಳಲ್ಲೂ ಕಾಯುವ ಅಮ್ಮ೦ದಿರಿದ್ದಾರೆ. ಅನವಶ್ಯಕ ವಿವಾದಕ್ಕೀ ಡಾಗುತ್ತಾನಾ? ತಿಳಿದಿಲ್ಲ. ಆದರೆ ವಿವಾದಗಳು ಅವನಿಗೆ ಹೊಸದಲ್ಲ. ಅವನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕಾರಣ ಬದುಕೇ ಸ೦ಘಷ೯ ಎ೦ದು ಕ೦ಡುಕೊ೦ಡವನಿಗೆ ಬಾಕಿಯೆಲ್ಲ ಚಿಲ್ಲರೆ ಕಾಲ್ಕೆರೆತದ ಕಮೆ೦ಟುಗಳು. ಇದಾಯಿತು ಎನ್ನುವ ಹೊತ್ತಿಗೆ ಇನ್ನೊ೦ದು ಪ್ರಾಜೆಕ್ಟಿಗೆ ಕೈ ಹೂಡುತ್ತಾನೆ ಆಕೆ ಕಣಿºಡುತ್ತಾ "ಆಗುತ್ತಾ..?' ಎ೦ದು ಆತ೦ಕದಿ೦ದ ವಿಚಾರಿಸಿಕೊಳ್ಳುತ್ತಿರುತ್ತಾಳೆ.
   ಆಕೆಗೂ ಅವೆಲ್ಲ ಹೊಸದೇನಲ್ಲ. ಅವನ ವಾ೦ಗಳು, ಆಸೆಗಳು, ಗೆಳತಿಯರು, ಕ೦ಪ್ಯೂಟರು, ಕಿವಿಗೆ ಕಚ್ಚಿಟ್ಟುಕೊಳ್ಳುವ ಮೊಬ್ಯೆಲು, ಜಿಮ್ಮು, ಅದ್ಭುತ ಎನ್ನುವ ಅಡುಗೆ, ಪೇ೦ಟಿ೦ಗು, ನೀರಿನಾಳಕ್ಕೆ ಇಳಿಯುವಷ್ಟೇ ಉಮೇದಿ ಹಿಮಾಲಯಕ್ಕೆ ಹಗ್ಗ ಹಾಕುವುದರಲ್ಲೂ ಇದೆ. ದೇಶದ ಉದ್ದಗಲಕ್ಕೂ ಕಾಲುಹರಿಸುವ ಅವನ ಚಕ್ರದ೦ತೆ ಸುತ್ತುವ ಮನಸ್ಥಿತಿಗೆ ರೇಗಿಸುತ್ತ ನನ್ನನ್ನೂ ಒಮ್ಮೆ ಬ್ಯೆದು ಬಿಡ್ರಿ ಎ೦ದರೂ ಬಯ್ಯಲಾರ. ಅಸಲಿಗೆ ಕೋಪ ಬ೦ದರೆ ಮಾತೇ ಆಡುವುದಿಲ್ಲ. ಇನ್ನು ಜಗಳ ಎಲ್ಲಿ೦ದಾಗಬೇಕು? ಹಾಗಾಗಿ ಮ್ಯೆಚಳಿ ಬಿಟ್ಟು ರಸ್ತೆಗಿಳಿಯುವ ಈ ಪ್ರಾಣಿಯನ್ನು ಬೀಡು ಬೀಸಾಗಿಸುವುದೇ ಮಿಗಿಲು ಎ೦ದಾಕೆ ಅ೦ದುಕೊ೦ಡರೂ ಅವನಿಗಿ೦ತಲೂ ಹೆಚ್ಚಿಗೆ ರಸ್ತೆಯ ಮೇಲೆ ನಿಗಾ ಆಕೆಯದ್ದು. "ಡೆವಿ೦ಗು ನ೦ದಾ ನಿ೦ದಾ' ಎ೦ದು ಅವನು ಸಿಡುಕುತ್ತಾನೆ.
   ಹೀಗೊ೦ದು ಬದುಕು ನಡೆಯುತ್ತಿದ್ದರೆ (ನಡೆಯುವುದಲ್ಲ, ಅಲ್ಲಿ ಯಮವೇಗದಲ್ಲಿ ಚಲಿಸುತ್ತಿರುತ್ತದೆ) ಎಷ್ಟು ವಷ೯ ಕಳೆಯಬಹುದು? ಅ೦ತಹದ್ದೊ೦ದು ದಾ೦ಪತ್ಯಕ್ಕೀ ಗ ಭತಿ೯ ಎರಡು ದಶಕ. ಇನ್ನು ಮೊನ್ನೆ ಮೊನ್ನೆ ಮದುವೆಯಾದ೦ತಿದೆ. ಮಗುವಿನ ಉಚೆ್ಚ ವಾಸನೆ ಇನ್ನೂ ಬೆಡ್‍ರೂಮಿನಿ೦ದಾಚೆಗೆ ಹೋಗೇ ಇಲ್ಲ. ಆದರೆ ಆಕೆ ಅವರಿಬ್ಬರನ್ನೂ ಬಿಟ್ಟು ಭರ್ರೋ ಎ೦ದು ಸ್ಕೂಟಿಗೆ ವೇಗ ಕಲಿಸುತ್ತಾಳೆ. ಅಪ್ಪನಿಗೆ ಫಾಯಷನ್ ಹೇಳುತ್ತಾಳೆ. ಅಮ್ಮನಿಗೆ ಮೊಬ್ಯೆಲ್ ತೀಡುವುದನ್ನು ಕಲಿಸುತ್ತಾಳೆ. ಅವರಿಬ್ಬರೂ ಅದರ ಸಮಕ್ಕೆ ದಾಪುಗಾಲಿಡುತ್ತಿದ್ದಾರೆ. ಇವತ್ತಿಗೂ ಜೊತೆ ಬಿಡದೆ. ಅಷ್ಟಕ್ಕೂ ಒ೦ದು ದಾ೦ಪತ್ಯ ಗಟ್ಟಿಯಾಗೋದೇ ಕನಿಷ್ಠ ಒ೦ದು ದಶಕದ ಅವಧಿಯ ನ೦ತರ. ಅಲ್ಲಿ೦ದಾಚೆಗಿನ ಇನ್ನೊ೦ದು ದಶಕ ಅದು ರೆಪೆ ಮಿಟುಕಿದಷ್ಟೇ ವೇಗವಾಗಿ ಚಲಿಸಿರುತ್ತದೆ. ದಾರಿಯೆ೦ದ ಮೇಲೆ ಗು೦ಡಿಗಳು ಇರದಿರಲು ಸಾಧ್ಯವೇ? ಆದರೆ ಬ೦ಡಿ ಗಟ್ಟಿಯಾಗಿದ್ದರೆ ಅದು ಬದುಕಿಗೆ ತಗಲುವುದಿಲ್ಲ ಎನ್ನುವುದಕ್ಕೆ ಆಕೆ ಉದಾಹರಣೆ.
   ಹಾಗಿದ್ದರೆ ಅಷ್ಟು ಚೆ೦ದವಾಗಿ ಹೇಗೆ ಬದುಕೋಕೆ ಸಾಧ್ಯ? ಅವರಿಬ್ಬರದ್ದೂ ಬೆಸ್ಟ್ ಅ೦ಡರ್‍ಸ್ಟಾ೦ಡಿ೦ಗ್ ಎ೦ದು ಬಿಡುವುದು ಸಹಜ. ಆದರೆ ಅವನಿಗೆ ಮಾತ್ರ ಆಕೆ ಏನೆನ್ನುವುದು ಗೊತ್ತಾಗಿರುತ್ತದೆ. ಆಕೆಗೆ ಗೊತ್ತಾಗಿದ್ದರೂ ಬಾಯಿ ಬಿಟ್ಟಿರುವುದಿಲ್ಲ. ಎಷ್ಟು ಬೇಕೋ ಅಷ್ಟೇ ಮಾತಾಡುತ್ತಾಳೆ. ಅಷ್ಟಕ್ಕೂ ಹೆಣ್ಣು ಯಾವತ್ತೂ ಪುರುಷನ೦ತೆ ತೆರೆದ ಪುಸ್ತಕವಾಗೋದೇ ಇಲ್ವಲ್ಲ. ಏನಿದ್ದರೂ ಮೌನದಲ್ಲೇ ಮಾತುಗಳು ನಡೆಯೋದು ಸಹಜ. ಹಾಗೇ ಎಲ್ಲವನ್ನೂ ಹೀಗೆ ಇರು, ನಾನು ಹೀಗೆ ಮಾಡ್ತೀನಿ, ಎ೦ದೆಲ್ಲ ಪ್ರತಿಯೊ೦ದಕ್ಕೂ ನಿದೇ೯ಶಿಸಿಯೇ ಬದುಕುವುದಾದರೆ ಅದು ಬದುಕಾಗುವುದಿಲ್ಲ, ಒಪ್ಪ೦ದವಾಗಿರುತ್ತದೆ. ಒಪ್ಪ೦ದದ ಬದುಕಿನಲ್ಲಿ ಅನುಬ೦ಧ, ಅನುಭೂತಿ ಎರಡೂ ಇರುವುದಿಲ್ಲ. ಕೇವಲ ದಿನಗಳ ಕಳೆಯುವ ಲೆಕ್ಕಾಚಾರವಿರುತ್ತದೆ. ಹಾಗೆ ಬದುಕಿನ ದಿನಗಳ ಬೆರಳು ಮಡಚಿ ಎಣಿಸುವ ಲೆಕ್ಕಕ್ಕೆ ಬಿದ್ದ ದಿನ ಜೀವನ ಗಣಿತವಾಗಿರುತ್ತದೆ. "ಇನ್ನೆಷ್ಟು ಕಾಲ, ಸಾಕಾಯಿತು ಮಾರಾಯ' ಎನ್ನುವ ಲೆಕ್ಕಾಚಾರಕ್ಕಿಳಿದಾಗ ದಾ೦ಪತ್ಯ ಅರಿವಿಲ್ಲದೆ ಬಿರುಕು ಬಿಟ್ಟ ಗೋಡೆಯಾಗಿರುತ್ತದೆ. ಆಗ ಅ೦ತೂ ಇಪ್ಪತ್ತು ವಷ೯ ಆಯ್ತಲ್ಲ.. ಎ೦ಬ ಉದ್ಗಾರ ಹೊರಬರುತ್ತದೆ.
   ಹಾಗೇ ಮೊನ್ನೆ ಮೊನ್ನೆ ಕಳೆದ ಎರಡು ದಶಕದ ದಾ೦ಪತ್ಯದಲ್ಲಿ ನಾನೆಲ್ಲಿದ್ದೇನೆ ಎಲ್ಲೂ ಇಲ್ಲ. ಎಲ್ಲ ಆಕೆಯದ್ದೇ ಕಾರುಬಾರು. ನನ್ನದೇನಿದ್ದರೂ ಪಿಳಿ ಪಿಳಿ ಮಾಡುತ್ತ "ಒ೦ದೂ ಗೊತ್ತಾಗಲ್ಲ ನಿಮಗೆ' ಎ೦ದು ಹುಸಿಗೋಪದಲ್ಲಿ ಬ್ಯೆಸಿಕೊಳ್ಳುತ್ತ ದಿನಗಳೆದದ್ದೇ ಬ೦ತು. ಇಲ್ಲದಿದ್ದರೆ ಇಷ್ಟು ವಷ೯ಗಳ ಮೇಲೂ ಇಪ್ಪತ್ತ ವಷ೯ ಆಯ್ತಾ ಎನ್ನುತ್ತಿದ್ದರೆ "ಅದು ನಿಮಗೆಲ್ಲಿ ಗೊತ್ತಿರುತ್ತೆ' ಎ೦ದು ಆಕೆ ರೇಗಿಸುತ್ತಿದ್ದರೆ "ಅವನು ಅ೦ತಹದ್ದೇ ಅವಕಾಶವನ್ನು ಕೊಟ್ಟು ಕೊಟ್ಟು ಒಳಗೊಳಗೇ ಖುಷಿ ಪಡುತ್ತಿರುತ್ತಾನೆ'. ಪೆದ್ದನಾಗಿಯೂ ಚೆ೦ದವಾಗಿ ಬದುಕಬಹುದೆನ್ನುವ ಥಿಯರಿ ಕೆಲಸ ಮಾಡುತ್ತಿರುತ್ತದೆ. ಕಾರಣ ಅಷ್ಟು ಕಾಲವೂ ಕೈಹಿಡಿದು ಕರೆದೊಯ್ಯಲು ಆಕೆಯಿ೦ದಲ್ಲದೆ ಇನ್ನಾರಿ೦ದ ಸಾಧ್ಯ? ಕಾರಣ ಅವಳು ಎ೦ದರೆ...

Saturday, June 4, 2016

ಹ೦ನ ಮುಸುಕಿನಲ್ಲಿ ನೆಮ್ಮದಿ ಮರೀಚಿಕೆ

ಜಗತ್ತಿನ ಅಷ್ಟೂ ಸಮಸ್ಯೆಗೆ ಮದ್ದಿದೆ. ಆದರೆ ಗ೦ಡಸಿನ "ನಾನು ಗ೦ಡಸು..' ಎನ್ನುವ ಇಗೋ ಇದೆಯಲ್ಲ ಅದಕ್ಕೆ ಎಲ್ಲಿ೦ದ ಮದ್ದು ತರೋಣ? ತಪ್ಪು ಎನ್ನುವುದಕ್ಕಿ೦ತಲೂ ನೈಸಗಿ೯ಕ ಅವಘಡಗಳ ಕ್ರೆಡಿಟ್ಟೂ ಹೆಣ್ಣುಮಕ್ಕಳ ತಲೆಗೇ ಎನ್ನುವುದಾದರೆ ನಾವು ಯಾವ ಕಾಲದಲ್ಲೂ ಬದಲಾಗುವ ಮನಸ್ಥಿತಿಯಲ್ಲಿ ಇಲ್ಲವೇ ಇಲ್ಲ ಎ೦ದಥ೯. 

ತಲೆಯನ್ನು ಅಡುಗೆಮನೆ ಕಟ್ಟೆಗೆ ಘಟ್ಟಿಸಿದ್ದಾಗ ಆದ ಗಾಯಗಳು, ಚೆಕ್ಕು ಚೆದುರುವ೦ತೆ ಬಡಿದಾಗ ಅದುರಿದ್ದ ಕೆನ್ನೆಯ ಬದಲಾದ ಶೇಪು, ಕುತ್ತಿಗೆ ಹಿಡಿದಿಡಿದು ಹಿ೦ಸಿಸಿದ್ದ ಗುರುತುಗಳು, ಮುಖದಲ್ಲಿ ಏಗಲಾಗದೆ ತಡೆದೂ ತಡೆದೂ ಸುಸ್ತಾಗಿ ಹೋದ ಬಿದ್ದು ಹೋದ ನಿಸ್ತೆೀಜ ಕಳೆ, ಕಣ್ಣ ಕೆಳಗಿನ ಆಘಾತಕಾರಿ ಕಪ್ಪು ವತು೯ಲಗಳು... ಅದೆಷ್ಟು ಬಾರಿ ತುಟಿಗಳು ಒಡೆದು ಹೋಗಿದ್ದವೋ.. ಆ ಹಲವು ಕವಲಿನ ಗೆರೆಗಳ ಕತೆಯನ್ನು ಸ್ಪಷ್ಟವಾಗಿ ಆಕೆಯ ಮುಖ ನೋಡುತ್ತಲೇ ನಾನು ಓದಿಬಿಟ್ಟಿದ್ದೆ. ಆಕೆ ಯಾವುದನ್ನೂ ಹೊಸದಾಗಿ ನನಗೆ ವಿವರಿಸುವುದೇ ಬೇಕಿರಲಿಲ್ಲ. ಹೆಣ್ಣುಮಕ್ಕಳನ್ನು ಅರಿಯಲು ತು೦ಬಾ ಪ೦ಡಿತರಾಗಬೇಕಿಲ್ಲ. ಒ೦ದಿಷ್ಟು ಪ್ರಾಮಾಣಿಕತೆ, ಮಾತಿನಲ್ಲಿ ನಿಜಾಯಿತಿ ನಿಮ್ಮನ್ನು ನೀಟಾರಾಗಿ ನಿಲ್ಲಿಸಿಬಿಡುತ್ತದೆ. ಅದರಲ್ಲೂ ಕೌಟು೦ಬಿಕ ದೌಜ೯ನ್ಯ ಮತ್ತು ಲ್ಯೆ೦ಗಿಕ ಅಭೀವ್ಯಕ್ತಿಯ ಕತೆಗಳಲ್ಲಿ ಹೆ೦ಗಸರು ಅನುಭವಿಸುವ ನರಕದ ಬಾಗಿಲು ನಮ್ಮ ಅಕ್ಕಪಕ್ಕದಲ್ಲೇ ಇದೆಯೇನೋ ಎನ್ನಿಸುವಷ್ಟು ಸ್ಪಷ್ಟವಾಗುತ್ತಿರುತ್ತದೆ. ಅರಿಯುವ ಮನಸ್ಸು ನಮಗಿರಬೇಕಷ್ಟೆ. ಒಳಬಾಗಿಲು ತಾನಾಗೇ ತೆರೆಯುತ್ತದೆ.
   ಇ೦ದ್ರಿ.. ಯಾವತ್ತೂ ಆಕೆಯನ್ನು ಚೆ೦ದವಾಗಿ ಇ೦ದಿರೆ ಎ೦ದು ಕರೆದದ್ದು ನಾನು ಕ೦ಡಿಲ್ಲ. ತೀರಾ ನಮ್ಮನೆಯ ಹುಡುಗಿಯ೦ತೆ ಸುತ್ತಮುತ್ತಲಿನ ಅಷ್ಟೂ ಕುಟು೦ಬದ ಮನೆಗಳ ಅ೦ಗಳ ಹೊಕ್ಕು ಹಿ೦ಬಾಗಿಲಿ೦ದ ಗಲಗಲ ಎನ್ನುತ್ತಾ ಹೊರಟು ಅಲ್ಲಿ೦ದಲೇ ಇನ್ನೊಬ್ಬರ ಮನೆಯ ದಣಪೆ ದಾಟುತ್ತಿದ್ದ ಹುಡುಗಿ ಆಕೆ. ಓದಿನಲ್ಲಿ ಅಪಾರ ಆಸಕ್ತಿ ಮತ್ತು ಒಳ್ಳೆಯ ಹುಡುಗಿ ಎನ್ನಿಸಿಕೊಳ್ಳುವ ಯಾವ ಹ೦ಗಿಗೂ ಬೀಳದೆ ಬದುಕಿಬಿಟ್ಟವಳು. ಇದ್ದಷ್ಟು ಹೊತ್ತು ಅವಳ ಜೊತೆ ಇರೋಣ ಎನ್ನಿಸುವ ಚೆ೦ದದ ಗಲಗಲ ಮಾತಾಡುವ ಸ್ನೇಹಿತೆ. 
    ಹುಡುಗಾಟದ ಕಾಲಾವ- ಧಿಯಲ್ಲೂ, ಓದಿನಲ್ಲೂ ಕೊನೆಗೆ ಇನ್ನಾವುದೇ ರೀತಿಯ ವ್ಯವಹಾರದಲ್ಲೂ ಎಲ್ಲೂ ಐಡೆ೦ಟಿಟಿಗಾಗಿ ಬಡಿದಾಡದ ಹುಡುಗಿ ಮದುವೆ ಸಮಯದಲ್ಲೂ ಅಷ್ಟೆ. ಅಪ್ಪ ಅಮ್ಮ ನೋಡಿದ ಹುಡುಗನನ್ನು ಒಪ್ಪಿಕೊ೦ಡು ಹೊಸ ಬದುಕಿನ ಚೆ೦ದದ ಕನಸುಗಳಿಗೆ ಕಾಮನಬಿಲ್ಲಿನ ಹೆದೆಯೇರಿಸಿ ನಡೆದು ಹೋದ ಸಾಮಾನ್ಯ ಹುಡುಗಿ. ಎಲ್ಲರ೦ತೆ ಬದುಕು ಸಹಜವಾಗೇ ಮದುವೆ, ಮಕ್ಕಳು, ಗ೦ಡ, ಸ೦ಸಾರ, ಆಗೀಗ ಹಬ್ಬ ಹರಿದಿನ, ಸ೦ಜೆಯ ಹೊತ್ತಿಗೆ ಒ೦ದೆರಡು ಸೀರಿಯಲ್ಲು, ಮಧ್ಯದಲ್ಲೊಮ್ಮೆ ಪ್ರವಾಸ, ಮನೆಗೆ ಆಗಾಗ ಹೊಸ ಖರೀದಿ ಹೀಗೆ ನಡೆದು ಹೋಗುವ ದಿನವಹಿಗಳ ಮಧ್ಯೆ ಬದುಕು ಭರ್ರೋ ಎ೦ದು ಓಡುತ್ತಿರುತ್ತದಲ್ಲ ಅದರ ಮಧ್ಯೆ ಒ೦ದೆರಡರ ತಾಳ ತಪ್ಪಿದರೂ ಏನೋ ಕಸರು ಶುರುವಾಗುತ್ತದೆ. ಇತರ ವಸ್ತುಗಳ ವ್ಯತ್ಯಾಸ ಅಷ್ಟಾಗಿ ಆಗಲಿಕ್ಕಿಲ್ಲ. ಆದರೆ ಮಕ್ಕಳು, ಸೆಕ್ಸು, ಮಯಾ೯ದೆ ಇತ್ಯಾದಿ ವಿಷಯ ಬ೦ದಾಗ ಎಲ್ಲದರ ಸ್ಥಾನವೂ ಪಲ್ಲಟಗೊಳ್ಳುತ್ತದೆ. 
    ಇ೦ದಿರಾ ಬದುಕಿನಲ್ಲಿ ಆದದ್ದೂ ಅದೇ. ಚೆ೦ದವಾಗೇ ನಡೆಯುತ್ತಿದ್ದ ಸ೦ಸಾರ, ನಡುಮನೆಯ ವಿಷಯವಾಗಿ ಬದಲಾಗಿದ್ದು ಎರಡ್ಮೂರು ವಷ೯ವಾದರೂ ಆಕೆ ಬಸಿರಾಗದಿದ್ದಾಗ. ಏನು ಹೇಳಿಯಾಳು..? ಪ್ರತಿ ಬಾರಿ ಏನಾದರೂ ಆಗಿ ದಿನ ತಪ್ಪಿತಾ ಎ೦ದು ನಿರೀಕ್ಷಿಸುವುದೇ ಆಗಿತ್ತು. ಉಹೂ೦.. ನಾಲ್ಕನೆಯ ವಷ೯ ಕಳೆಯುವ ಹೊತ್ತಿಗೆ ಇ೦ದಿರೆ ಚಚೆ೯ಯ ಹಿ೦ಸೆ, ಮಾತುಗಳನ್ನು ತಡೆಯಲಾರದೆ ಬಾಯಿ ಬಿಟ್ಟಿದ್ದಳು. ಗ೦ಡನಿಗೆ ಆಗುವುದಿಲ್ಲ. ಅದೊ೦ದು ಸಣ್ಣ ಆದರೆ ಸರಿಪಡಿಸಿಕೊಳ್ಳಬಹುದಾದ ಸಮಸ್ಯೆ. ಅಲಿ೯ ಇಜ್ಯಾಕುಲೇಶನ್ ಅ೦ತಾರೆ. ಅಷ್ಟೆ. ಮೊದಲ ಬಾರಿಗೆ ಇ೦ದಿರೆ ಆವತ್ತು ಹೊಡೆತ ತಿ೦ದಿದ್ದಳು. ಬಹುಶಃ ಈ ವಿಷಯದಲ್ಲಿ ಹೆಚ್ಚಿನ ಗ೦ಡಸರಿಗೆ ಇರಬಹುದಾದ ಅತಿ ದೊಡ್ಡ ಫ್ಯಾ೦ಟಸಿ ಎ೦ದರೆ ಅದೇನೆ. ತಾನು ಕಾಮದಲ್ಲಿ ವಿಜೃ೦ಭೀಸಬಲ್ಲೆ ಎನ್ನುವುದು. ಆದರೆ ನೋಟ್ ಮಾಡ್ಕೊಳ್ಳಿ. ಎಷೆ್ಟೂೀ ಸ೦ಸಾರದಲ್ಲಿ ಹೆಣ್ಣುಮಕ್ಕಳು ಆಗ್ಯಾ೯ಸ೦ ಎ೦ಬ ಅನುಭವಕ್ಕೇನೆ ಈಡಾಗುವುದಿಲ್ಲ ಕೊನೆಯವರೆಗೂ. ಒ೦ದು ಸಮೀಕ್ಷೆ ಪ್ರಕಾರ ಭಾರತೀಯ ನಾರಿಯರ ಆಗ್ಯಾ೯ಸ೦ ಪ್ರಮಾಣ ಕೇವಲ ಶೇ. 9. ಹ೦ಗ೦ದ್ರೇನು ಎ೦ದು ಆಧುನಿಕ(?)ಮಹಿಳೆಯೊಬ್ಬರು ನನ್ನನ್ನು ಪ್ರಶ್ನಿಸಿದ್ದರು! ಅವರನ್ನು ನಾನು ಪಿಳಿಪಿಳಿ ನೋಡಿದ್ದೆ. ಅಲ್ಲಿಗೆ ಸುತ್ತಲಿನ ಖಾಸಗಿ ಬದುಕಿನ ದುರ೦ತಗಳು ಅನಾವರಣಗೊ೦ಡರೆ ಹೇಗಿರಬಹುದು..? ಅ೦ದರೆ ಎಲ್ಲಿ, ಯಾರು, ಯಾವ, ರೀತಿಯ ವಿಶ್ಲೇಷಣೆ ಮಾಡಿಕೊಳ್ಳಬೇಕಿದೆ ನಿಮಗೆ ಬಿಟ್ಟದ್ದು. 
    ಇ೦ದಿರೆ ವಿಷಯವನ್ನು ಬಾಯಿಬಿಟ್ಟು ಮನೆಯವರ ನೆಮ್ಮದಿ ಕೆಡಿಸಿದ್ದಳು. ತನ್ನಿ೦ದ ಆಗುತ್ತಿಲ್ಲ ಎನ್ನುವುದನ್ನು ಹೆಚ್ಚಿನವರು ಒಪ್ಪಿಕೊಳ್ಳದಿರುವ ಸ೦ಗತಿಗೆ ಆಕೆ ನೇರ ಕೈಹಾಕಿದ್ದಳು. ಪರಿಣಾಮ ದೈಹಿಕ ಹಿ೦ಸೆ ಮತ್ತು ಮಾನಸಿಕ ಕಿರಿಕಿರಿ ಅದ್ಯಾವ ಮಟ್ಟಕ್ಕೆ ಹೋಗಿತ್ತೆ೦ದರೆ ಆಕೆಯ ದೇಹ ಜಝ೯ರಿತವಾಗಿ ಹೋಗಿತ್ತು. ಮನೆಯವರಿಗೆ ವಿಷಯ ಗೊತ್ತಾಗುವ ಹೊತ್ತಿಗೆ ತಡವಾಗಿತ್ತು. ಆ ದಿನ ಇ೦ದಿರೆ ಅದ್ಯಾವ ಮೂಡಿನಲ್ಲಿದ್ದಳೋ. "ಗ೦ಡಸ್ತನ ತೋಸೊ೯ದೇ ಆದರೆ ಮಕ್ಕಳ ಮಾಡಿ ತೋಸು೯. ಹೆ೦ಡತಿ ಮೇಲೆ ಕೈ ಮಾಡಿ ಅಲ್ಲ..' ಎ೦ದು ನಾಲ್ಕಾರು ಮನೆಗೂ ಕೇಳುವ೦ತೆ ಅಬ್ಬರಿಸಿ ಎದ್ದುಬ೦ದಿದ್ದಳು. ಮನೆಗೆ ಬ೦ದು ಒ೦ದು ವಷ೯ದಲ್ಲಿ ಚೇತರಿಸಿಕೊ೦ಡಿದ್ದಾಳೆ. ಏನೇ ಹೇಳಿ ಹೆಣ್ಣುಮಕ್ಕಳ ಪಾಲಿಗೆ ಕೊನೆಗೂ ಅಮ್ಮ೦ದಿರೇ ದೇವರು. ಅತಿ ಹೆಚ್ಚಿನ ಹರೆಯದ ಹುಡುಗಿಯರಿಗೂ ಅಮ್ಮ೦ದಿರೇ ವಿಲ್ಲನ್ನು.(ಇದಿನ್ನೊ೦ದು ದಿನಕ್ಕಿರಲಿ) ಇ೦ದಿರೆಯನ್ನು ಮತ್ತೊಮ್ಮೆ ರೂಪಿಸಿ ಬದುಕಿನ ಹಳಿಗೆ ಹಚ್ಚುವ ಅಮ್ಮನ ಕಾಯ೯ ಪೂತಿ೯ಯಾಗಿತ್ತು. ಹಳೆಯ ಗಾಯದ ಗುರುತುಗಳು ಕಾಣಿಸುತ್ತಿದ್ದವು ದೇಹದ ಮೇಲೆ. ಆದರೆ ಮನಸ್ಸಿನದು..? ಉಹೂ೦... ಅದನ್ನಾಕೆಯೇ ಹೇಳಬೇಕಿತ್ತು. ಇ೦ದಿರೆ ಎ೦ಬ ಸಾಮಾನ್ಯ ಹೆಣ್ಣುಮಗಳು ನಮ್ಮ ಸಮಾಜದ ಹಲವು ಮುಖಗಳ ಅನಾವರಣವಾಗಿ ನಿ೦ತಿದ್ದಳು. ಹೆಚ್ಚು ಕಡಿಮೆ ಎರಡು ದಶಕಗಳ ನ೦ತರದ ಭೇಟಿ ಅದು. ಅದಕ್ಕೂ ಮೊದಲು ಕರೆ ಮಾಡಿ ಮಾತಾಡಿದ್ದೆ. ಇದ್ದಕ್ಕಿದ್ದ೦ತೆ, "ನಿ೦ಗೆ ಗೊತ್ತಾ.. ಐ ಆ್ಯಮ್ ಸ್ಟಿಲ್ ವಜಿ೯ನ್..!'. ಎ೦ದಿದ್ದಳು. ಅತ್ತಲಿ೦ದ ಮಾತು ಬಾಣಕ್ಕಿ೦ತಲೂ ಬಿರುಸಾಗಿ ತೂರಿಬ೦ದಾಗ ಉದ್ಗಾರವನ್ನೂ ತೆಗೆಯದಷ್ಟು ನಿಶ್ಯಬ್ದವಾಗಿ ಬಿಟ್ಟಿದ್ದೆ ನಾನು. ಇ೦ದಿರಾಳ ಮಾತುಗಳಿಗೀಗ ವೇಗ ಬೇಕಿರಲಿಲ್ಲ. ನನಗೂ. ನಿನ್ನೆಯಷ್ಟೆ ಆಕೆಯನ್ನು ನೋಡುತ್ತಲೇ ಆದ ಅನಾಹುತದ ಅರಿವು ಒ೦ದಿಷ್ಟಾಗಿತ್ತಾದರೂ ನಿಜವಾದುದೇನು ಆಕೆಯೇ ವಿವರಿಸಬೇಕಿತ್ತು. 
    ಆಕೆಯ ಬದುಕೂ ದಿವಿನಾಗಬಹುದಿತ್ತು. ಒ೦ದು ಸಣ್ಣ ಹೆಜ್ಜೆ ಅವನಿ೦ದ ಬ೦ದಿದ್ದರೆ ಆಗಿಹೋಗುತ್ತಿತ್ತು. ಆದರೆ ಗ೦ಡನ ದೌಬ೯ಲ್ಯಕ್ಕೆ ಹುಡುಗಿ ವಿನಾಕಾರಣವಾಗಿ ಬಲಿಯಾಗಿದ್ದಳು. ಜಾಹೀರು ಮಾಡಲಾಗದ ವಿಷಯ ಎ೦ದೇ ಇವತ್ತಿಗೂ ಪರಿಗಣಿಸಲ್ಪಡುವ ಗ೦ಡಸಿನ ಲ್ಯೆ೦ಗಿಕ ಅಸಾಮಥ್ಯ೯ವನ್ನು ಹೆಣ್ಣಿನ ಬ೦ಜೆತನಕ್ಕೆ ಸುಲಭವಾಗಿ ಬಲಿಗೊಡುತ್ತಿರುವುದರ ಹಿ೦ದಿನ ಮಾಮಿ೯ಕತೆ, ದದು೯ ನನಗಿವತ್ತಿಗೂ ಅಥ೯ವಾಗಿಲ್ಲ. ಇದನ್ನು ಮನೆಯ ಹೆಣ್ಣುಮಕ್ಕಳೂ ಬೆ೦ಬಲಿಸುತ್ತಾರಲ್ಲ ಏನು ಮಾಡೋಣ..? 
   ಇದೊ೦ದು ಗೊತ್ತಿರಲಿ. ತು೦ಬ ಪುರುಷರು ಇವತ್ತಿಗೂ ಅಲಿ೯ ಇಜ್ಯಾಕುಲೇಶನ್, ಎರಕ್ಟೈಲ್ ಡಿಸ್‍ಫ೦ಕ್ಷನ್ ಎ೦ಬೆಲ್ಲ ಸಾಮಾನ್ಯ ಕಾರಣಗಳಿಗೆ, ಅವಮಾನದ ಮುಸುಗಿನಲ್ಲಿಟ್ಟು ಬದುಕು ದುಭ೯ರಗೊಳಿಸಿಕೊ೦ಡಿದ್ದಾರೆಯೇ ವಿನಾ ಅದನ್ನು ವೈದ್ಯಕೀಯ ಸಲಹೆ, ಚಿಕಿತ್ಸೆಯಿ೦ದ ಸರಿಪಡಿಸಿಕೊಳ್ಳುವ ಗೋಜಿಗೇ ಹೋಗಿಲ್ಲ. ಕಾರಣ ತಮ್ಮ ಲ್ಯೆ೦ಗಿಕ ಅಸಾಮಥ್ಯ೯ವನ್ನು ವೈದ್ಯರ ಎದುರಾದರೂ ಹೌದೆನ್ನಬೇಕಾಗುತ್ತಲ್ಲ. ಆ ಸ೦ಕಟ ಮತ್ತು ಅವಮಾನಕ್ಕಿ೦ತ (ಹಾಗೇಕೆ೦ದುಕೊಳ್ಳುತ್ತಾರೋ ನನಗೆ ತಿಳಿದಿಲ್ಲ) ತೆಪ್ಪಗೆ ಉಳಿದುಬಿಡೋದು. ಹೆ೦ಡತಿ ತಿರುಗಿ ಬಿದ್ದರೆ ಸುಲಭ ಉಪಾಯ ಬಡಿದು ಬಾಯಿ ಮುಚ್ಚಿಸುವುದು. ಹೆ೦ಡತಿಯನ್ನು ಬಡಿಯುವುದು ಬಹುಶಃ ಗ೦ಡಸಿನ ಕೊನೆಯ ಹರಾಮಿತನವೇ...? ಉತ್ತರ ನನಗೂ ಸಿಕ್ಕಿಲ್ಲ. ಇ೦ದಿರೆಯ ವಿಷಯದಲ್ಲಿ ಆದದ್ದೂ ಅದೇ. ಆದರೆ ಅವನು ಅದನ್ನು ತನ್ನ ಅಸಾಮಥ್ಯ೯ ಎನ್ನುವುದಕ್ಕಿ೦ತ ಸ್ವಾಭಾವಿಕ ನ್ಯೂನತೆ ಎನ್ನುವುದನ್ನು ಒಪ್ಪಿಕೊಳ್ಳದೆ ಇಗೋವಾಗಿ ಪರಿವತಿ೯ಸಿಕೊ೦ಡು ಸೋತಿದ್ದ. ಬದುಕಿನಲ್ಲೂ, ಸುಖದಲ್ಲೂ ಕೊನೆಗೆ ಎಲ್ಲದರಲ್ಲೂ. ಸೋತು ಗೆಲ್ಲುವ ಕಲೆಯ ಮೊದಲ ಮೆಟ್ಟಿಲಲ್ಲೇ ಮುಗ್ಗರಿಸಿದ್ದ. ಬದಲಾದ ವೈದ್ಯಕೀಯ ವ್ಯವಸ್ಥೆಯಲ್ಲಿ ಇವತ್ತು ಪುರುಷರ ದೈಹಿಕ ಅಸಾಮಥ್ಯ೯ದ ಹೊರತಾಗಿಯೂ ಅವನದ್ದೇ ಅ೦ಶದಿ೦ದ ಸ್ವ೦ತದ ಮಕ್ಕಳನ್ನು ಪಡೆಯುವ ಸುಲಭ ಉಪಾಯ (ಅಐಏ) ಕೈಗೆಟುಕುವ ದರದಲ್ಲಿವೆ. ಆದರೆ ಅವಮಾನ ಮತ್ತು ಇಗೋ ಎಲ್ಲವನ್ನೂ ಆಚೆಗಿಡುತ್ತಿದೆ. 
    "ಏನು ಮಾಡಲಿ. ಎರಡು ವಷ೯ ಹಗಲು ಮನೆ ಮ೦ದಿ ಎದುರಿಗೆ ವನವಾಸ. ರಾತ್ರಿ ಆದರೆ ಕೈಲಾಗದ ಸ೦ಕಟಕ್ಕೆ ನನ್ನನ್ನು ಗುರಿಪಡಿಸುತ್ತಾ, ಪ್ರಯತ್ನ ಎನ್ನುವ ನರಕ.. ಬದುಕು ಹ್ಯೆರಾಣಾಗಿ ಹೋಗಿತ್ತು. ಅವನ ಸಮಸ್ಯೆಗೆ ಮದ್ದು ಇತ್ತು ಮಾರಾಯ. ಆದರೆ "ತಾನು ಗ೦ಡಸು..' ಅನ್ನೋದೊ೦ದಿದೆ ನೋಡು.. ಅದಕ್ಕೆ ಮದ್ದಿಲ್ಲ. ಮಕ್ಕಳಾಗಲಿಲ್ಲ ಅದಕ್ಕೆ ಆಕೆಯನ್ನು ಡಿವೋಸ್‍೯ ಮಾಡಿದ ಎ೦ದು ಈಗ ಸಮಾಜದಲ್ಲಿ ನನ್ನನ್ನು ಬರಗೆಟ್ಟ ಭೂಮಿ ಅನ್ನೋ ತರಹ ಬಿ೦ಬಿಸ್ತಾ ಇದ್ದಾರಲ್ಲ, ನಾನು ಹೆ೦ಗೋ ಎಲ್ಲರೆದುರಿಗೆ ನನ್ನ ಗ೦ಡನಿಗೆ ಆಗಲ್ಲ ಅ೦ತಾ ಹೇಳಲಿ..? ಯಾವ ಹೆಣ್ಣು ಹೇಳಿಯಾಳು..? ಅಸಲಿಗೆ ಅ೦ಥಾ ಸುಖಾನಾದರೂ ಯಾವನಿಗೆ ಬೇಕಿತ್ತು..? ಮಕ್ಕಳಿಲ್ಲದಿದ್ರೂ ಪರವಾಗಿಲ್ಲ ಚೆನ್ನಾಗಿದ್ರೆ ಸಾಕು ಅ೦ತಾಳೆಯೇ ಹೊರತಾಗಿ ಯಾವ ಹೆಣ್ಣೂ, ತನ್ನ ಗ೦ಡ ಏನೂ ಮಾಡಲಾಗದವ ಅದಕ್ಕೆ ಬಿಟ್ಟು ಬ೦ದೆ ಎ೦ದು ಎಲ್ಲಾದರೂ ಇತಿಹಾಸದಲ್ಲಿ ಹೇಳಿದ್ದಿದೆಯಾ..?'. ಇ೦ದಿರೆ ಜಗತ್ತಿನ ಅಷ್ಟೂ ಗ೦ಡಸರನ್ನು ಭರಭರನೆ ಬೆತ್ತಲೆ ಮಾಡುತ್ತಿದ್ದರೆ ನಾನೂ ತಲೆ ತಗ್ಗಿಸಿ ಕೂತುಬಿಟ್ಟಿದ್ದೆ. 
ಕಾರಣ ಅವಳು ಎ೦ದರೆ...

Friday, June 3, 2016

ಅವಳ ಪ್ರೀತಿ ಮಾತ್ರ ಯಾಕೆ ಅನೈತಿಕ ಅನ್ನಿಸಿಕೊಳ್ಳುತ್ತೆ...?

ಪುರುಷನೊಬ್ಬ ಮಾಡಿದರೆ ಅವನು ಗಂಡಸು ಎನ್ನುವ ಎಲ್ಲರಿಗೂ ಹೆಣ್ಣುಮಕ್ಕಳ ಪ್ರೀತಿ ಅನೈತಿಕ ಎಂದು ಯಾಕಾದರೂ ಅನಿಸುತ್ತದೆ.ಅಸಲಿಗೆ ಹಾಗೊಂದು ಸಂಬಂಧ ಕುದುರುವಿಕೆಯಲ್ಲಿ ಅವನೂ ಪಾಲುದಾರನೇ ಅಲ್ಲವೆ? ಯಾರೂ ಉತ್ತರಿಸುತ್ತಿಲ್ಲ!

ಒಂದಿಷ್ಟು ಅನುಭೂತಿ, ಕಾಳಜಿ ಮತ್ತು ಕಾಲಕಾಲದ ಸಹಾಯಕ್ಕೆ ಎಂದು ಆಪ್ತವಾಗುವ ಪುರುಷನನ್ನು ಹೆಣ್ಣು ಸುಲಭಕ್ಕೆ ನಂಬುತ್ತಾಳೆ, ನಂಬಬೇಕಾಗುತ್ತದೆ ಕೂಡಾ. ಕಾರಣ ತೀರಾ ಬೆಳಗ್ಗೆ ಬಸ್ ತಪ್ಪಿದೆ. ಒಂಚೂರು ಡ್ರಾಪ್, ಮಕ್ಕಳನ್ನು ರೆಡಿ ಮಾಡೋಕಾಗ್ತಿಲ್ಲ ಎಂದು ಲೇಟಾದರೂ ಕರೆದೊಯ್ಯುದ, ಮನೆಯಲ್ಲಿ ಎಲ್ಲವನ್ನೂ ತನ್ನ ಮೇಲೆ ಬಿಟ್ಟಾಕಿ ತನ್ನ ಕಂಫರ್ಟ್ಸ್
ಮಾತ್ರ ನೋಡುವ, ಹೆಂಡತಿಯ ಯಾವ ಅಗತ್ಯದ ಪ್ರಕ್ರಿಯೆಗಳಿಗೆ ದಿನವಹಿ ಒಡನಾಟದಲ್ಲಿ ಸಹಸ್ಪಂದನೆ ತೋರದ ವರ್ತನೆಗಳ ಜತೆಯಲ್ಲಿ ಏಗುವ ಹೆಣ್ಣುಮಕ್ಕಳಿಗೆ, ಇತರರು ತೋರಿಸಿ ಬೀಡಬಹುದಾದ ಅತಿ ಚಿಕ್ಕ ಕನ್ಸರ್ನೂ ಕೂಡಾ ಒಂದು ವಿಶ್ವಾಸ ಬೆಳೆಯಲು ಅನುವು ಮಾಡಿಕೊಡುತ್ತದೆ.
ಜತೆಗೆ ಕಾಲಕಾಲಕ್ಕೆ ಅವಳಿಗಾಗಿ ಸಮಯ ಮೀಸಲಿಡುವ ಅವನು, ಮನೆಯವರೂ ಆಗದಿದ್ದ ಸಹಾಯಕ್ಕೆ ಬಂದು ನಿಲ್ಲುತ್ತಿದ್ದಾನೆ ಎನ್ನುವ ಕಾರಣಕ್ಕೆ ಸಹಜವಾಗಿ ಮನಸ್ಸು ಕೊಂಚ ಮೃದುವಾಗಿ ಬಿಡುತ್ತದೆ. ನಿರಂತರವಾಗಿ ಅವಳೊಂದಿಗೆ ಸಂಪರ್ಕದಲ್ಲಿದ್ದು, ಆಕೆಯ ಮನಸ್ಸನ್ನು ಹೆಣೆದು ಬಿಡುವ ಗಂಡಸು ಅಂತಿಮವಾಗಿ ಆಕೆಯನ್ನು ತಿಂದು ಮುಗಿಸಿರುತ್ತಾನೆ. ಅದಾಕೆಗೆ ಗೊತ್ತಾಗಿ ತಾನು ಅವನ ಕುಕೃತ್ಯಕ್ಕೆ ಬಲಿಯಾದೆ ಎಂದರಿವಾಗುವ ಹೊತ್ತಿಗೆ ಕಾಲ ಮೀರಿರುತ್ತೆ. ಆದರೆ, ಅದರಿಂದ ಹೊರಬರುವ ಸಮಯಕ್ಕೆ ಜನರೆದುರಿಗೆ ಆಕೆಯ ವರ್ತನೆ ಅನೈತಿಕ ಎಂದಾಗಿರುತ್ತದೆಯೇ ಹೊರತಾಗಿ ಇಂತಹದ್ದೆಲ್ಲ ಅನಿವಾರ್ಯತೆಗಳ, ಸಣ್ಣಸಣ್ಣ ಹಿಂಸೆಗಳ ಮಧ್ಯದಲ್ಲಿ ಬದುಕು ಕಟ್ಟಿಕೊಳ್ಳುವ ಹಂತದಲ್ಲಿಯೂ ಪ್ರೀತಿ ಮೊಳೆದಿತ್ತು ಮತ್ತು ಅದನ್ನವನು ದೂರಾಲೋಚನೆಯಿಂದ ಟ್ಯೂನ್ ಮಾಡುತ್ತ ಆಕೆಯನ್ನು ಬಳಸಿಕೊಂಡಿದ್ದರೆ, ಆಕೆ ಅವನಿಂದ ಮೋಸಕ್ಕೊಳಗಾಗಿದ್ದಳು ಎಂದು ವಿಶ್ಲೇಷಿಸುವ ಬದಲಿಗೆ ಅನೈತಿಕ ಎಂದಾಗಿಬಿಡುತ್ತದೆ. ಹಾಗೆಯೇ ಹೆಣ್ಣುಮಕ್ಕಳೂ ಗಂಡಸರನ್ನು ಬಳಸಿ ಬಿಸಾಡುವುದಿಲ್ಲವೆಂದಲ್ಲ, ಅಗತ್ಯಕ್ಕೆ, ನೌಕರಿಗೆ, ದುಡ್ಡಿಗೆ, ಸಾಂಗತ್ಯಕ್ಕೆ ಹೀಗೆ ಹಲವು ರೂಪದಲ್ಲಿ ಬಳಸಿಕೊಳ್ಳುತ್ತಾರೆ. ಅದು ಬೇರೆ ಇರಲಿ. ಹಾಗಾಗಿ ಆಕೆಯದ್ದು ಅನೈತಿಕ ಎಂದೇ ವ್ಯಾಖ್ಯಾನಿಸುವುದಾದರೆ ಅವನ ಪ್ರೀತಿಯ ನಾಟಕ ಅಥವಾ ವ್ಯವಸ್ಥಿತ ಹುನ್ನಾರವನ್ನು ಏನೆನ್ನೋಣ?
ವಿಜಿ ಅವನನ್ನು ನಂಬಿಕೊಂಡು ಮುಂಬೈ ಸೇರಿದ್ದಳಲ್ಲ. ಆರಂಭದಲ್ಲಿ ಎಲ್ಲ ಚೆನ್ನಾಗೇ ಇತ್ತು. ಬೆಂಗಳೂರಿಗೆ ಬಂದವನು ವಾಪಸ್ ಹೋಗುವಾಗ ಈಕೆಯನ್ನೂ ಕರೆದೊಯ್ದಿದ್ದಾನೆ. ಇಬ್ಬರೂ ಪ್ರೀತಿಸಿದ್ದಾರೆ. ಮದುವೆ ಎಂದು ಅದೇನು ಮಾಡಿಕೊಂಡಿದ್ದರೋ, ವರ್ಷದ ಕೊನೆಗೆ ಯಾಕೋ ವಿಜಿಗೆ ಅನುಮಾನ ಶುರುವಾಗಿದೆ. ಒಮ್ಮೆ ಹೊರಗೆ ಹೋದರೆ ಗಂಡನಾದವ ಬರುತ್ತಲೇ ಇಲ್ಲ. ಏನಿದ್ದರೂ ಬಂದರೆ ಎರರ್ಡ್ಮೂರು ದಿನ ಇತ್ತ, ಹೋದರೆ ಅತ್ತ. ಕೆಲವೊಮ್ಮೆ ಟೂರ್ ಎಂದು ಹದಿನೈದು ದಿನವಾದರೂ ಪತ್ತೆ ಇಲ್ಲವಾಗತೊಡಗಿದ ಮೇಲೆ ವಿಜಿ ಎಚ್ಚರಕ್ಕೆ ಬಂದಿದ್ದಾಳೆ. ಬದುಕನ್ನು ಹದಗೆಡಿಸಿಕೊಳ್ಳುವ ಬದಲಿಗೆ ನಿಧಾನವಾಗಿ ಎಲ್ಲವನ್ನೂ ಸಮೀಕರಿಸಿದ್ದಾಳೆ.
ವಿಜಿ ಮೋಸಕ್ಕೀಡಾಗಿದ್ದಳು. ಅವನಿಗೆ ಆಗಲೇ ಮದುವೆ, ಮಕ್ಕಳೂ ಆಗಿ ಎಂಟ್ಹತ್ತು ವರ್ಷವಾಗಿದೆ. ಎರಡೂ ಕಡೆ ಸಂಸಾರ ನಿಭಾಯಿಸುತ್ತಿದ್ದಾನೆ. ಅಸಲಿಗೆ ವಿಜಿಗೂ ಹೋದ ಹೊಸದರಲ್ಲಿ ಕೆಲಸ ಮತ್ತು ಮುಂಬೈ ಮಹಾನಗರ ಪರಿಚಯವಾಗುವ ಹೊತ್ತಿಗೆ ಆರೆಂಟು ತಿಂಗಳು ಕಳೆದಿತ್ತಲ್ಲ. ಅವನೇ -ಟ್ ಕೊಡಿಸಿದ್ದ. ಆದರದು ತಾತ್ಪೂರ್ತಿಕ ಯೋಜನೆ. ಅವನು ಕೈಎತ್ತಿದ್ದ. ಬದುಕು ಬೀದಿಗೆ ಬಿದ್ದಿತ್ತು. ಎರಡು ವರ್ಷದಲ್ಲಿ ಅವನ ವಾಂಛೆ ಮುಗಿದು ಹೋಗಿತ್ತು, ಪ್ರೀತಿ ಎಲ್ಲಿಂದ ಹುಟ್ಟುತ್ತದೆ? ವಾಂಛೆಗೆ ಪ್ರೀತಿ ಬೇಕಿಲ್ಲ. ಅವನ ವಿಳಾಸ ಏನೂ ಗೊತ್ತಿರಲಿಲ್ಲ. ಅಕ್ಷರಶಃ ರಸ್ತೆಗೆ ಬಂದಿದ್ದ ವಿಜಿ ಎರಡನೇ ಯೋಚನೆ ಮಾಡದೆ ಬೆಂಗಳೂರು ಹಾದಿ ಹಿಡಿದಿದ್ದಳು. ಎಲ್ಲೋ ಕೆಲಸ, ಇನ್ನೇಲ್ಲೋ ಪಿ.ಜಿ., ಇನ್ಯಾವಾಗಲೋ ಬದುಕು ಎನ್ನುತ್ತ ಹೊಸದಾಗಿ ಕಟ್ಟುತ್ತ ಎದ್ದು ನಿಂತವಳಿಗೆ ಇನ್ನೊಬ್ಬ ಜತೆಯಾಗಿದ್ದಾನೆ. ಬದುಕಿನಲ್ಲಿ ಕಾಮನಬಿಲ್ಲು ಅರಳತೊಡಗಿತ್ತು. ವಿಜಿ ಗಂಭೀರವಾಗಿ ಬದುಕಿನಲ್ಲಿ ತೊಡಗಿಕೊಂಡಿದ್ದಳು. ಹಳೆಯ ಸ್ನೇಹಿತೆಯರು ಒಟ್ಟಾಗಿದ್ದಾರೆ. ಮಗಳೊಬ್ಬಳು ಕೈಗೆ ಬಂದು ಒಂದು ದಶಕದ ಕಾಲಾವಧಿಯಲ್ಲಿ ಗಂಡನಾದವನ ಮಾಮೂಲಿನ ಕಿರಿಕಿರಿಗಳ ಮಧ್ಯೆಯೂ ಬದುಕು ನಡೆಯುತ್ತಿದೆ. ಹೆಚ್ಚಿನ ಗಂಡಸರಿಗೆ ಒಂದೋ ಹೆಂಡತಿಯರ ಬಗ್ಗೆ ಅನಾದರವಿರುತ್ತದೆ, ಇಲ್ಲ ಅಕೆಯ ಮೇಲೆ ವಿನಾಕಾರಣ ಸಂಶಯವಿರುತ್ತದೆ. ಎಲ್ಲಿ ಹೋದರೂ, ಬಂದರೂ, ಸಮಯ, ಹಣದ ಲೆಕ್ಕಾಚಾರ, ಆಕೆಯ ಮೊಬೈಲನ್ನು ಕದ್ದು ಪರೀಕ್ಷಿಸುವುದು, ಎಲ್ಲಿ ಏನು ಮಾತಾಡುತ್ತಾಳೆ ಹೀಗೆ ಸಂಶಯಗಳಿಗೆ ಯಾವುದೇ ನೆಲೆ ಇಲ್ಲದ ಪಕ್ಕಾಗಿಬಿಟ್ಟಿರುತ್ತಾರೆ.
ಇದಕ್ಕೆ ಸರಿಯಾಗಿ ವಿಜಿಯ ಅದ್ಯಾವ ಸ್ನೇಹಿತೆ ಬಾಯಿಬಿಟ್ಟಳೋ ಅದೇನಾಯಿತೋ ಮೊದಲೇ ಅಲ್ಪಸ್ವಲ್ಪ ಗೊತ್ತಿದ್ದ ಆಕೆಯ ಮುಂಬೈ ವೃತ್ತಾಂತ ಇದ್ದಕ್ಕಿದ್ದಂತೆ ಭೂತಾಕಾರವಾಗಿ ಬೆಳೆದು ನಿಂತುಬಿಟ್ಟಿದೆ. ಮಧ್ಯವಯಸ್ಸು ದಾಟಿದ ನಂತರ ಹುಟ್ಟುವ ಗಂಡಸೊಬ್ಬನ ವಿಪ್ಲವಗಳ ಫಲಿತಾಂಶ ಅದು. ತೀವ್ರ ಆಸಕ್ತಿದಾಯಕ ಕಾಮ ಇದ್ದಕ್ಕಿದ್ದಂತೆ ಮೈಕೊಡುವಿರುತ್ತದೆ. ಬದುಕು ಮಗ್ಗುಲು ಬದಲಿಸಿದಂತೆ ಪರಿಣಾಮ ಬೀರುವ ವಯಸ್ಸು ಅವನ ಅಹಂನ್ನು ತಡೆದು ಅಳುವಾಗಿಸುವ ದಯನೀಯ ಸ್ಥಿತಿಗೆ ತಂದಿರುತ್ತದೆ. ಹೆಂಡತಿ ಇನ್ನೂ ನಿಗಿನಿಗಿ. ಮೊದಮೊದಲಿಗೆ ಹೆಂಗೋ ಸರಿ ಹೋಗಬಹುದು ಎನ್ನುವ ಒಳಗಿನ ಆಸೆಗೆ, ಏಣಿ ಒದ್ದಂತೆ ಐವತ್ತು ದಾಟುವ ಗಂಡಸರ ಕಾಮನ್ ಪ್ರಾಬ್ಲಮ್ಮು ಪ್ರಾಸ್ಟೆಟ್ ಊದಿಕೊಂಡು ಎದ್ದು ನಿಂತುಬಿಡುತ್ತದೆ. ಅತ್ತಲಿಂದ ಶುಗರ್ ಹಣಿಯುತ್ತಿರುತ್ತದೆ. ಶಕ್ತಿ ಸಾಕಾಗುತ್ತಿರುವುದಿಲ್ಲ. ಇದ್ದಕ್ಕಿದ್ದಂತೆ ಶಾಶ್ವತ ಎನ್ನಿಸುವ ಅಂಶಗಳೆಲ್ಲ ಕೈಕೊಡತೊಡಗಿದ್ದರ -ಸ್ಟ್ರೇಷನ್ನು ಹೆಂಡತಿಯ ಮೇಲಾಗುತ್ತದೆ. ಅದರಲ್ಲೂ ಇಂತಹದ್ದೊಂದು ಬೇಡದ ಇತಿಹಾಸ ಎದ್ದು ಕೂತುಬಿಟ್ಟರೆ ಆಗುವ ಅಪಸವ್ಯಗಳು ಅನಾಹುತಕಾರಿ. ಮನೆ ರಣ ರಂಪವಾಗತೊಡಗಿದೆ. ಇತಿಹಾಸ ವಿಜಿಯ ಬದುಕನ್ನು ಮತ್ತೊಮ್ಮೆ ತಿಂದುಹಾಕಿತ್ತು. ಅಲ್ಲೇ ಉಳಿದಿದ್ದರೆ ಮಗಳ ಬದುಕೂ ಬರಗೆಟ್ಟೀತು ಎಂದು ಇಳಿವಯಸ್ಸಿನ ಹೊಸ್ತಿಲಲ್ಲಿ ವಿಜಿ ಮೈಕೊಡವಿ ಎದ್ದು ನಿಂತಿದ್ದಾಳೆ.
ಇಂಥಾ ಹೊತ್ತಿನಲ್ಲಿ ಮಕ್ಕಳ ಓದು, ಭವಿಷ್ಯದ ಕಾಳಜಿಯ ಜೊತೆಯಲ್ಲಿ ಬದುಕಿನ ಬಂಡಿ ತುಂಬ ಬೇಗ ಹಳಿಗೆ ತರಬೇಕಾದ ಅನಿವಾರ್ಯತೆಗಳು ಹೆಣ್ಣುಮಕ್ಕಳನ್ನು ತರಹೇವಾರಿ ಕೆಲಸಕ್ಕೂ, ಯೋಜನೆಗೂ, ಹೂಂ ಅಂದುಬಿಡುವುದಕ್ಕೂ ಪ್ರೇರೇಪಿಸುತ್ತವೆ. ಏನಾದರೂ ಮಾಡಿ ಕೂಡಲೇ ಎದ್ದು ನಿಲ್ಲಬೇಕಿರುತ್ತದೆ. ಹೇಗೋ ಆದೀತು ಬಿಡು ಅನ್ನುವಂತೆಯೂ ಇರುವುದಿಲ್ಲ. ಹೋದಲ್ಲಿ ಬಂದಲ್ಲಿ ‘ಮನೆಯವರು ಏನು ಮಾಡ್ತಾರೆ ’ ಎಂದು ಆಪ್ತರಂತೆ ಅನಗತ್ಯವಾಗಿ ಕುಟುಂಬದ ಮಾಹಿತಿಯನ್ನು ಹೊರಗೆಳೆಯುವವರ ಮಧ್ಯೆ ಕಾಲೂರಿ ನಿಲ್ಲಬೇಕಿರುತ್ತದೆ. ‘ಅದರಲ್ಲೂ ಇಷ್ಟು ದಿನ ಎಲ್ಲಿದ್ರಿ? ಈಗ ಯಾಕೆ ಹೊಸ ಕೆಲ್ಸ ಶುರು ಮಾಡಿದ್ರಿ? ಯಾಕೆ -ಮಿಲಿ ಪ್ರಾಬ್ಲಂ ಆ..?’ ಎನ್ನುತ್ತಲೇ ಈಕೆ ಒಬ್ಬಂಟಿ. ಎಲ್ಲಿಯಾದರೂ ದಕ್ಕಿಯಾಳಾ, ಸಹಾಯದ ನೆಪದಲ್ಲಿ ಪಟಾಯಿಸಬಹುದಾ ಎನ್ನುವ ಆಯಕಟ್ಟಿನವರ ಮಾತು, ನಗೆಯಲ್ಲಿನ ಕಂಡೂ ಕಾಣದ, ನೀವು ಹೂಂ.. ಅಂದರೆ ಏನು ಸಹಾಯ ಮಾಡಬಹುದು ಎನ್ನುವ ಬೆರಳು ಮಾಡಿ ತೋರಿಸಲಾಗದ ಅಪಸವ್ಯಗಳ ಮಧ್ಯೆ ಅನಿವಾರ್ಯತೆಯ ಬದುಕಿಗೆ ಕೋಲು ಕೊಟ್ಟು ನಿಲ್ಲಿಸಬೇಕಿರುತ್ತದಲ್ಲ. ಇಂಥ ಹೊತ್ತಿನಲ್ಲೇ ಬೇಳೆ ಬೇಯಿಸಿಕೊಳ್ಳುವ ಗಂಡಸಿನ ಕೈಗೆ ಸಿಕ್ಕು ಪಾಪದ ಹೆಣ್ಣು ಖಾಲಿಯಾಗುತ್ತಿರುತ್ತಾಳೆ. ವಿಜಿ ಈಗ ಪಾಲಿಸಿ ಮಾಡಿಸುತ್ತ, ಇತರೆ ಬ್ಯಾಂಕಿಂಗ್ ಸರ್ವೀಸಿಗೆ ಕೈಯಿಕ್ಕಿ ಓಡಾಡುತ್ತಿದ್ದಾಳೆ.
‘ನನಗೇನೂ ಮೊದಲನೆ ಸಲ ಹಿಂಗಾತು ಅಥವಾ ಎರಡನೆ ಸಲಾನೂ ಬದುಕು ಕೈಕೊಡ್ತು ಎಂದು ಅಳ್ತಾ ಕೂರ್ಬೇಕಾಗಿರಲಿಲ್ಲ. ಆದರೆ ಪ್ರತಿ ಕಡೆನೂ ವಯಸ್ಸು, ಇಲ್ಲದಿರೋ ಆಕರ್ಷಣೆ, ನನ್ನ ಪರಿಸ್ಥಿತಿ ಎಲ್ಲ ಗೊತ್ತಿದ್ದೂ ಟ್ರೈ ಮಾಡ್ತರಲ್ಲ ಜನ, ಜೊತಿಗೆ ಅವರ ಕೆಲಸ ಆಗಲಿಲ್ಲಂದರ ಗೊತ್ತಿರೋ ಅಷ್ಟೆ ವಿಷಯಕ್ಕೆ ಕತೆ ಸೇರಿಸಿ ಎಲ್ಲ ಬದುಕು ಪೂರ್ತಿ ನಾನು ಅನೈತಿಕವಾಗೇ ಬದುಕಿದೆ ಅಂತಾರಲ್ಲ. ನನ್ನ ಟ್ರೈ ಮಾಡ್ತಿದ್ದ ಮಾಡ್ತಿರೋ ಗಂಡಸರ ಬದುಕು ಏನು ಹಂಗಾದರೆ? ಮುಂಬೈನಲ್ಲಿ ಹೀಗೆ ವಿಷಯ ಅಂತಾ ಗೊತ್ತಾಗ್ತಿದ್ದಂತೆ ಇನ್ನೊಬ್ಬಳ ಬದುಕಿಗೆ ನಾನು ಮುಳ್ಳಾಗಬಾರದು. ಆಕೆನೂ ನನ್ನಂಗೆ ಹೆಣ್ಣು ಅಂತ ಎದ್ದು ಬಂದೆ. ಹಂಗಂತ ನಾನು ತೀಟೆಗೆ ಹೋಗಿರ್ಲಿಲ್ಲ ಮಾರಾಯ. ಎರಡನೇ ಸರ್ತಿನೂ ಹಿಂಗಾಗುತ್ತೆ ಅಂತ ಯಾರಿಗೆ ಗೊತ್ತಿರುತ್ತೆ. ಬದುಕಿಗೊಂದು ದಿಕ್ಕು ಬೇಕಲ್ವಾ ? ಅದರೆ ಹೆಣ್ಣು ಬದುಕೋ ರೀತಿ ಮಾತ್ರ ಅನೈತಿಕವಂತೆ ಯಾಕೆ? ಅವಳ ಪ್ರೀತಿ ಲೆಕ್ಕಕ್ಕಿಲ್ಲ. ಇದಕ್ಕ ಉತ್ತರ ಯಾವನೂ ಕೊಡಲ್ಲ ಬಿಡು. ನೀನು ಸುಮ್ಮನೆ ಬರ್ದು ಬರ್ದು ಗುಡ್ಡೆ ಹಾಕೋದೆ ಆಗ್ತದೆ. ಇನ್ನೇನೂ ಆಗಲ್ಲ’ ವಿಜಿ ಅನಾಹುತಕಾರಿ ಕಹಿ ಸತ್ಯವನ್ನು ಅನಾವರಣಗೊಳಿಸುತ್ತಿದ್ದರೆ ನಾನು ಎರಡು ದಿನ ಮೌನವಾಗಿದ್ದೆ. ಆಕೆಯ ಯಾವ ಮಾತು ಸುಳ್ಳಿರಲಿಲ್ಲ.
ಕಾರಣ
ಅವಳು ಎಂದರೆ..