Tuesday, September 5, 2017

ನಮ್ಮದಲ್ಲದ ಸಂಕಟಗಳಿಗೆ ಅವಮಾನದ ತೆರಿಗೆ.. 
(ಮೇಲ್ನೋಟಕ್ಕೆ ಗಂಡಸರ ಜೀವನ ಭಾಳ ಆರಾಮ. ಆದರೆ ಬದುಕಿನ ಜಂಜಾಟದಲ್ಲಿ ಸಾಂಸಾರಿಕ ಅವಮಾನ ಅವರಿಗೆ ಹೊಸದೇನಲ್ಲ. ಅಂತಹ ಸಮಕಾಲೀನ ಸಂಕಟ, ತಲ್ಲಣಗಳಿಗೆ ಈಡಾಗಿ ಗಂಡಸರ ಜೀವ ದಡ್ಡಬಿದ್ದು ಹೋಗಿರ್ತದ. ಅಷ್ಟಾಗಿಯೂ ನಮ್ಮ ಮಕ್ಕಳು ನಮ್ಮವರಲ್ಲ ಅನ್ನೋದು ಗೊತ್ತಾಗುವಾಗ ತಡಾ ಆಗಿರ್ತದ.)

ವೆಂಕಟರಮಣ ನಾಯ್ಕ ಅವರ ಪೂರ್ತಿ ಹೆಸರು. ನಾನು ಅವರನ್ನು ಭೇಟಿಯಾಗುವ ವೇಳೆಗಾಗಲೇ ಅವರ ಮುಕ್ಕಾಲು ಜೀವನ ಕಳೆದು ವೆಂಕು ಮಾಸ್ತರರೆಂದೇ ಗುರುತಿಸಲ್ಪಟ್ಟಿದ್ದರು. ಅದ್ಯಾಕೋ ಅವರೊಂದಿಗೆ ತೀರ ಕಡಿಮೆ ಸಮಯದಲ್ಲೇ ಒಂದು ರೀತಿಯ ಬಾಂಧವ್ಯ ಬೆಳೆದು ನನಗೆ ಮಾಸ್ತರಕಾಕಾ ಆಗಿದ್ದರು. ಒಮ್ಮೆ ಶಿರಸಿಯಿಂದ ಬರುತ್ತಿದ್ದವನು ಕುಮ್ಟೆಯ ಗಡಿ ದಾಟುತ್ತಿದ್ದಂತೆ ಹದವಾದ ಉಪ್ಪು ಮಿಶ್ರಿತ ಮೀನು ವಾಸನೆಗೆ ಈಡಾಗುತ್ತಾ, ಗಂಗಾವಳಿಯ ದಡದಲ್ಲಿಂದ ಗೋಕರ್ಣ ಕ್ರಾಸಿನೊಳಕ್ಕೆ ತೂರಿ ಹೋಗಿದ್ದೆ. ಮೊದಲೆ ನಿಕ್ಕಿ ಮಾಡಿಕೊಂಡಿದ್ದಂತೆ ಅವರು `ಮನೆ ಬಿಟ್ಟು ಬೇರೆಡೆಗೆ ಇದ್ದೀನಿ' ಎಂದಿದ್ದ ಗುರುತಿನ ಮೇರೆಗೆ ಗದ್ದೆ ಬದುವಿನ ಮೇಲೆ ನಡೆದುಹೋಗಿದ್ದೆ. ಹರವಾದ ಬಿಸಿಲಿಗೆ ಮೈಯೊಡ್ಡಿ ನಿಂತ ತೀರ ಚಿಕ್ಕ ಜೋಪಡಿಯಂತಹದ್ದು. ಎದುರಿಗೆ ದೊಡ್ಡ ಮರ. ಪಕ್ಕದಲ್ಲಿ ಬಾವಿ ಅದರ ಕೆಳಗೆ ಅರ್ಧ ಕಾಲು ಮುರಿದು ಜೋಡಿಸಿದ್ದ ಮಂಚ. ಅದೆಲ್ಲವೂ ಸೇರಿದರೆ ಅಂಗಳ. ಅದರಲ್ಲೇ ಮರದ ಕೆಳಗೊಂದು ಬೆತ್ತದ ಕುರ್ಚಿ. ಮನೆಗೆ ತಗುಲಿಯೇ ಬಿದಿರು ಬಿಗಿದು ಅರ್ಧ ತಡಿಕೆ ಹಾಕಿದ್ದ ಬಚ್ಚಲು ಮನೆ. ಆಸರೆಗಾಗಿ ಮಾಡಿಕೊಂಡ ಮಾಳ ಎಂದರೂ ಸರಿನೆ.
ಒಂದಿಷ್ಟು ಬಾಳೆ ಹಣ್ಣು, ಸಕ್ಕರೆ, ಒಂದು ಪ್ಲಾಸ್ಕಿನಲ್ಲಿ ಬಿಸಿ ಚಹ. ಸಾಮಾನ್ಯವಾಗಿ ಸಮಯದ ಪರಿಧಿ ಮೀರದ ನಾನು ಆವತ್ತು ಅಧ್ವಾನ್ನದ ರಸ್ತೆಯ ಕಾರಣ ಮುಟ್ಟಿದ್ದು ನಿಗಿನಿಗಿ ಮಧ್ಯಾನ್ಹ ಬಿಸಿಲಿನ ಕಾಲಕ್ಕೆ. `ಮಾಸ್ತರಕಾಕಾ ತಡ ಆಯ್ತು..'ಎನ್ನುತ್ತಿದ್ದಂತೆ, `ಇರ್ಲಿಬಿಡೊ ನಾನೇನು ನೌಕರಿಗ ಹೋಗ್ಬೇಕೇನು..?ನೀ ಅರ್ಜೆಂಟಿಗ್ ಬಿದ್ದ ಕಾರು ಒಡಿಸಬ್ಯಾಡ ಮಾರಾಯ. ಎರಡೆ ತಾಸು ಅಂದ್ರೆ ಜೋರು ಬಂದಿರ್ತಿ.' ಎಂದು ಗದರಿದ್ದರು. ನಾನು ಹುಲ್ಲಿನ ಮಾಡಿನ ನೆರಳು ಹುಡುಕಿಕೊಂಡು ಅಲ್ಲೇ ಇದ್ದ ತಗಡೀನ ಡಬ್ಬದ ಮೇಲೆ ಕೂತೆ. ತುಂಬಾ ಚೆಂದದ ಮನೆ ಮಠ ಇದ್ದ ಮಾಸ್ತರಕಾಕಾ, ಇಳಿ ವಯಸ್ಸಿನಲ್ಲಿ ಊರು ಕೇರಿ ಬಿಟ್ಟು ಗದ್ದೆ ಬದುವಿನ ಜೋಪಡಿಯಲ್ಲಿ ಉಳಿದಿದ್ದರು ಒಂಟಿಯಾಗಿ. ಇತಿಹಾಸ ಭವಿಶ್ಯಕ್ಕಲ್ಲ...
ನಾನು ಹೈಸ್ಕೂಲು ಕೊನೆಯ ವರ್ಷ ಕಳೆಯುವಾಗ ಕುಮ್ಟೆಯಿಂದ ವರ್ಗವಾಗಿ ಊರಿಗೆ ಬಂದಿದ್ದವರು ಮಾಸ್ತರರು. ಸುಮ್ಮನೆ ಒಂದು ಹಂತದಲ್ಲಿ ಪರಿಚಯವಾಗಿದ್ದವರು, ಅಂಕಣಗಾರನಾದಾಗ ಕರೆಮಾಡಿ ಮಾತಾಡಿಸಿದ್ದರು. ನಂತರ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದೇ ಇದ್ದರು. ಅವರೊಂದಿಗಿನ ಒಡನಾಟದಲ್ಲಿ ಕ್ರಮೇಣ ಅವರ ವೈಯಕ್ತಿಕ ವಿಚಾರಗಳು ನುಸುಳತೊಡಗಿ ನಿವೃತ್ತಿ ಮತ್ತು ವೃದ್ದಾಪ್ಯ ಶಾಪವಾ ಎನ್ನಿಸತೊಡಗಿದ್ದು ಹೌದು. ಹಾಗಾಗೇ ಅವರು ನಿವೃತ್ತಿಯ ನಂತರವೂ ಒಮ್ಮೆ ಅವರೂರಿಗೆ ಹೋಗಿದ್ದೆ. 
ಆವತ್ತು ವಯಸ್ಕ ದಂಪತಿಗಳಿಬ್ಬರೂ ಸಂಭ್ರಮಿಸಿದರೂ ನನ್ನನ್ನು ಮನಪೂರ್ವಕ ಬರಮಾಡಿಕೊಳ್ಳುವ ಸ್ವಾತಂತ್ರ ಅವರಿಗಿಲ್ಲದ್ದು ಎದ್ದು ಕಾಣುತ್ತಿತ್ತು. ಮನೆಯಲ್ಲಿದ್ದ ಮಗ, ಸೊಸೆಯ ದರಬಾರಿಗೆ ಅಧಿಕಾರ ಹಸ್ತಾಂತರವಾಗಿದ್ದು ಖಚಿತ. ಮಾಸ್ತರ ಪಿಂಚಣಿ ಇದ್ದುದಕ್ಕೆ ಬಹುಶ: ಮನೆಯಲ್ಲಿ ಉಳಿಯಲು ಅವಕಾಶ ಇತ್ತೇನೋ. ಮಾತಾಡ್ತಾ ಹಾಗೇ ನಗುವಿನಲ್ಲೇ ನನ್ನನ್ನು ಆ ಮುಜುಗರದಿಂದ ಮರೆಮಾಚಲು ಯತ್ನಿಸುತ್ತಿದ್ದುದು ಗೊತ್ತಾಗುತ್ತಲೇ ಇತ್ತು. ಕಾಕಿಗೆ ಎದ್ದು ಓಡಾಡುವಷ್ಟೂ ಸುಲಭದ ಪರಿಸ್ಥಿತಿ ಇರಲಿಲ್ಲ. ಮೊಳಕಾಲು ಕಳಚಿ ಬೀಳುತ್ತಿತ್ತು. ವೈದ್ಯಕೀಯ ಚಿಕಿತ್ಸೆ ದೂರದ ಮಾತಾಗಿತ್ತು. ಒಮ್ಮೊಮ್ಮೆ ಮೊಳಕಾಲು ಕಳಚಿದಾಗಲೂ ವಾರಗಟ್ಟಲೇ ಹಾಸಿಗೆ ಹಿಡಿಯುತ್ತಿದ್ದರು. 
ನನಗೆ ಯಾವ ರೀತಿಯಲ್ಲೂ ಪ್ರತಿಕ್ರಿಯಿಸಲು ಆಗಿರಲಿಲ್ಲ. ತೀರ ವೃದ್ಧ ಜೀವಗಳಿಗೆ ಸಾಂತ್ವನ ಹೇಳುವ ವಯಸ್ಸು, ಧೈರ್ಯ ಎರಡೂ ನನ್ನವಲ್ಲವಾಗಿದ್ದವು. ಆದರೂ ಮಾಸ್ತರ ಸಲಿಗೆಯಿಂದಾಗಿ ಎನೋ ಒಂದಷ್ಟು ಮಾತಾಡಿದ್ದೆ. ಕಾಕು`ಚಾ.. ಚಾ.. ಮಾಡ್ರಿ'ಎನ್ನುತ್ತಿದ್ದರೂ ಮಾಸ್ತರರು ಮುಲಾಜಿಗೆ ಬಿದ್ದಂತೆ ವರ್ತಿಸುತ್ತಿದ್ದು ಕಾಣಿಸುತ್ತಿತ್ತು. ನಾನೇ ಎದ್ದು ಅಂಗಳಕ್ಕಿಳಿದು ಬರುವಾಗ ಮಾಸ್ತರ ಕೈ ಹಿಡಿದು `ಇರ್ಲಿ ಬಿಡ್ರಿ ಇಂಥವೆಲ್ಲಾ ಮಜಬೂರಿಗಳು ಇರ್ತಾವೆ. ನನಗೇನು ನೀವು ಹೊಸಬರಾ. ಚಹ ಕುಡಿದಿದ್ರೇನು. ನಿಮಗಿಂತ ದೊಡ್ಡದು ಯಾವುದದೆ..? ಬೇರೆ ಸಹಾಯ ಬೇಕಿತ್ತೇನು..?' ಎಂದಿದ್ದೆ. 
`ಏನೂ ಇಲ್ಲಪಾ. ಆದರ ನಿನ್ನ ಕಾಲಂ ಓದಲಿಕ್ಕೆ ಆಗೂದಿಲ್ಲ. ಮನೀಗೆ ಪೇಪರ್ ಬರೂದಿಲ್ಲ. ಇಲ್ಲಿಂದ ರಸ್ತೆ ಕಡೀಗ್ ಹೋಗಿ ಓದೊದು ಅಂದರ ಭಾಳ ದೂರ ಆಗ್ತದ. ಈಕಿಗೇನಾದರೂ ಬೇಕಾದರ ತ್ರಾಸ ನೋಡ. ಅದಕ್ಕ ಯಾವತ್ತರ ಒಮ್ಮೆ ಹೋಗಿ ನೋಡಿಬರ್ತೇನಿ. ಅದಕ್ಕ ಏನೂ ಅಂದ್ಕೊಬ್ಯಾಡ. ಬಾಕಿ ಇನ್ನೇನು ವಯಸ್ಸಾಯ್ತು ನೋಡು..’ ಎಂದಿದ್ದರು. 
`ಕಾಕಾ. ನಾಳೆಯಿಂದ ಒಂದು ಪೇಪರ್ ಮನೀಗೇ ಹಾಕ್ಲಿಕ್ಕೆ ಹೇಳ್ತಿನಿ.' ಎಂದು ಕೈ ಸವರಿ ಕೊಸರಿಕೊಳ್ಳುತ್ತಿದ್ದರೂ ಒಂದಿಷ್ಟು ಪುಡಿಕೆ ನೋಟು ಕೈಗಿಟ್ಟುಬಂದಿದ್ದೆ. ನಂತರದಲ್ಲಿ ಸಂಪರ್ಕಕ್ಕೆತ್ನಿಸಿದಾಗೆಲ್ಲ ಸಿಕ್ಕುತ್ತಿದ್ದರಾದರೂ ಹೆಚ್ಚಾಗಿ, ಅವರ ಮಗನೇ ಫೆÇೀನು ತೆಗೆಯುವುದು, ಮಾಸ್ತರರು ಸಿಗದಿರುವುದೂ ನಡೆದೇ ಇತ್ತು. ಆಮೇಲೆನಾಯಿತೋ ಗೊತ್ತಿಲ್ಲ. ಮಾಸ್ತರರು ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಲಭ್ಯವಾಗಲೇ ಇಲ್ಲ. ನಾನೂ ಎರಡ್ಮೂರು ವರ್ಷ ರಾಜ್ಯದಿಂದ ಹೊರಗಿದ್ದುದೂ ಸೇರಿ ಸಂಪರ್ಕ ಕಳೆದೇ ಹೋಗಿತ್ತು. ಇತ್ತಿಚೆಗೊಮ್ಮೆ ಕರೆ ಮಾಡಿ ನೆನಪಿಸಿದ್ದರಿಂದ, ಗಂಗಾವಳಿ ದಂಡೆಯ ಗದ್ದೆ ಬದುವಿನ ಸಣ್ಣ ಜೋಪಡಿಯಲ್ಲಿದ್ದ ಮಾಸ್ತರೆದುರಿಗೆ ಕೂತಿದ್ದೆ. ಕಾಕು ಹೋಗಿದ್ದು ಪಕ್ಕಾ. ಅದಕ್ಕಿಂತಲೂ ಖೇದವೆಂದರೆ ಅವರ ಅರ್ಧ ಮುರಿದ ಕನ್ನಡಕ ಬದಲಿಸುವವರಿಲ್ಲದೆ, ಅದರಲ್ಲೇ ಓದುವುದಕ್ಕೂ ಒದ್ದಾಡುತ್ತಿದ್ದುದು ಕಾಣಿಸುತ್ತಿತ್ತು.
`ಬಿಸಲಾಗೇ ಬಂದಿದಿ. ಗಡಿಗಿಗೆ ನಿನ್ನೆನ ನೀರು ಹಾಕಿಟ್ಟಿದ್ದೆ. ತಣ್ಣಗಾಗಲಿ ಅಂತ.' ಎನ್ನುತ್ತ ಇದ್ದ ಒಂದೇ ಸ್ಟೀಲಿನ ಚೊಂಬಿನಲ್ಲಿ ನೀರು ಕೊಟ್ಟಿದ್ದರು. ನಾನು ಬಾಯಿ ಬಿಡುವ ಮೊದಲೇ,
`ಅರಾಮಿದಿನಿ ಏನೂ ತಲಿ ಕೆಡಿಸ್ಕೊಬ್ಯಾಡ. ಮಕ್ಕಳೆಲ್ಲ ಎಂತಾ ಮಾಡ್ತವೆ..?' ಎಂದು ವಿಷಯ ತಿರುಗಿಸುವ ಪ್ರಯತ್ನಕ್ಕಿಳಿದರು. ಸುಮ್ಮನೆ ಅವರ ಮುಖವನ್ನೆ ದಿಟ್ಟಿಸುತ್ತ ಕುಳಿತೆ. ಮಾಸ್ತರರು ಮುಖ ಕೆಳಗಿಕ್ಕಿ ಒಮ್ಮೆ ಸೂರು ನೋಡಿ, ನಿಟ್ಟುಸಿರಿಟ್ಟರು. ಪಿಂಚಣಿಯ ಅಧಾರವಿದ್ದುದರಿಂದ ಮಾಸ್ತರರು ಮಗನ ಹಂಗಿನಿಂದ ಹೊರಬಂದಿದಾರೆ.
`ಆಕೀ ಇದ್ದಾಗ ಏನೂ ಮಾಡೊ ಹಂಗಿರಲಿಲ್ಲ. ಹೆಂಗಸರಿಗೆ ಮನೀ ಮಕ್ಕಳು ಅನ್ನೋ ವ್ಯಾಮೋಹನಾ ಬೇರೆ ನೋಡು. ಅಕೀಗೆ ನಾನು ಸರಿ ಬರ್ತಿರಲಿಲ್ಲ ಅನ್ನೋದು ಯಾವತ್ತೋ ಗೊತ್ತಿದ್ರೂ, ಇಷ್ಟ ವರ್ಷ ಸಂಸಾರ ಮಾಡಿದ್ದೇನು ಸುಳ್ಳಾ..? ಕಾಲಿಗೆ ಅಪರೇಶನ್ ಬೇಕಿತ್ತು ಮಾಡಿಸವ್ರು ಯಾರು..? ನಮಗ ಕೆಲವೊಂದು ಸೂಕ್ಷ್ಮ ಗೊತ್ತಾಗೋದಿಲ್ಲ. ಅದಕ್ಕ ಏನೂ ಮಾತಾಡದ ಎಳೆಂಟು ವರ್ಷದಿಂದ, ಮನ್ಯಾಗೆ ಅವಳು ಮಡ್ಬೇಕಾದ ಕೆಲಸಾನೂ ನಾನ ಮಡ್ಕೊಂಡು ಆಕೀ ಹಿಂದ ಸುಮ್ನೆ ಇರ್ತಿದ್ದೆ. ಅರಿಬಿ ಒಣಗಸೋದು, ಮನೀ ಕಸ ಹೊಡೆಯೋದು, ಆದಷ್ಟು ನೀರು ತುಂಬಿಸಿಡೊದು, ಮಕ್ಕಳ ಹರವಿದಾಗ ಮನೀ ನೀಟ ಮಾಡೊದು.. ಇವೆಲ್ಲಾ ಆಗದಿದ್ದರ ಆಕೀ ಮ್ಯಾಲ ಸೊಸಿ ಕೂಗಾಡ್ತಾಳ. ಸೊಸಿ ಮಾತು ಕೇಳಿ ಮಗಾ ನಮಗ ಮನಿಯಿಂದ ಹೊರಗ ಹಾಕಲಿಕ್ಕೆ ಕಾಲ ಮ್ಯಾಲೆ ನಿಂತಿದ್ದ.
ಆದರೆ ಇವಳಿಗೆ ಮನಿ, ಗಂಡ ಮಗಾ, ಮೊಮ್ಮಕ್ಕಳು ಅಂದರೆ ಅವಮಾನದಾಗೂ ಅದೇನೋ ಕಕ್ಕುಲಾತಿ ಮಾರಾಯ. ಕಾಲು ಬ್ಯಾನಿ ಬೇರೆ ಆಗಿತ್ತಲ್ಲ. ಇನ್ನೆಷ್ಟು ವರ್ಷ ಬದುಕೋ ಗೊತ್ತಿಲ್ಲ. ಯಾರ ಮನಸ್ಸಿಗೆ ಯಾಕ ಬೇಜಾರು ಮಾಡೊದು ಅಂತ ನಾನೇ ಸುಮ್ಮನಾಗಿ ಬಿಟ್ಟಿದ್ದೆ. ಹೆಂಗಾರ ಸರಿ ಇರೋ ಅಷ್ಟು ದಿನಾ ಅರಾಮಿರಲಿ. ಮಾಸ್ತರಿಕಿ ನೌಕರಿಯೊಳಗ ಇದಕ್ಕಿಂತ ದೊಡ್ಡದು ಏನೂ ಮಾಡ್ಲಿಕ್ಕೂ ಆಗೋದಿಲ್ಲ ನೋಡು. ಅದಕ್ಕ ಸುಮ್ಮನಾಗಿ ಬಿಟ್ಟಿದ್ನಿ. ಅದರೂ ಏನಾದರೊಂದು ಕಟಿಪಿಟಿ ಆಗತಿತ್ತು. ನೀ ಕಳಿಸ್ತಿದ್ದ ಪೇಪರ್‍ಗೂ ತಕರಾರು. ಏನು ಮಾಡ್ಲಿ. ಕಡಿಕಡಿಗೆ ಎಲ್ಲಾ ಹಾಸಿಗೆ ಮ್ಯಾಲೆ ನಡಿವಾಗ ಮನ್ಯಾಗೆ ಭಾಳ ತ್ರಾಸ ಆತು. ದೇವ್ರ ದೊಡ್ಡಾಂವ. ತಿಂಗಳೊಪ್ಪತಿನ್ಯಾಗ ಆಟ ಮುಗೀತು. ಇಲ್ಲಂದರ ಬರ್ತ ಬರ್ತ ಒಂದ ಗಂಜಿ ಕಾಯಿಸಿಕೊಡವ್ರೂ ಇರಲಿಲ್ಲ. ನಾ ಬಾಜುಗಿಂದ ಎದ್ರ ಆಕಿ ಚಿಟಿಚಿಟಿ ಚೀರತಿದ್ಲು. ಸೊಸಿ ಮಾತು ಮೈಮ್ಯಾಗೆ ಬರೀ ಎಳದಂಗ ಬರತಿದ್ವು. 
ಎನ ಮಾಡೊದಪಾ ಸಂತೋಶಾ.. ಬದುಕಿನ ಜಂಜಾಟದಾಗ ಇಂಥಾ ಅವಮಾನ, ಅವಮರ್ಯಾದಿ ಎಲ್ಲಾ ಅನುಭವಿಸಿ ಗಂಡಸರ ಜೀವ ದಡ್ಡ ಬಿದ್ದು ಹೋಗಿರ್ತದ. ಅದನ್ನ ವಾದಿಸಿಕೋತ ಕೂಡೊದ್ರಾಗ ಅರ್ಥ ಇಲ್ಲ ಅನ್ನಿಸಿ ಅಕೀಗೆ ಎನೂ ಅನ್ಸೋದ ಬ್ಯಾಡ ಅಂತ ಕಡಿಕಡಿಗೆ ಆಕೀಗ ಹೆಂಗ ಬೇಕೋ ಹಂಗ ಇದ್ದ ಬಿಟ್ಟಿದ್ದೆ. ಆಕೀ ಹೋದ ಮ್ಯಾಲೆ ಮನ್ಯಾಗ ಇರಾಕ ಯಾವ ಕಾರಣಾನೂ ಇರ್ಲಿಲ್ಲ. ಆದರೂ ಮೂವತ್ತೈದು ವರ್ಷಗಟ್ಟಲೆ, ಸಾವಿರಾರ ಮಕ್ಕಳಿಗೆ ಅಕ್ಷರ,ಬುದ್ಧಿ ಕಲಿಸಿದ ನಾನು ನಮ್ಮ ಮಕ್ಕಳಿಗೆ ಬುದ್ಧಿ ಕಲಿಸೋದಾಗಲಿಲ್ಲ ಅನ್ಸಿದಾಗ ಆಕಿ ಮುಂದ ನನ್ನ ಮುಖಾ ಸಣ್ಣದಾಗತಿತ್ತೋ ಮಾರಾಯಾ. ಯಾಕ ಹಿಂಗಾತೋ ಗೊತ್ತಿಲ್ಲ. ಹೆಣಮಕ್ಳಿಗೆ ಮನೀ, ಮಕ್ಳು ಅಂದರ ಜೀವಾ. ಆದರ ನಮ್ಮ ಮಕ್ಕಳು ನಾವಂದುಕೊಂಡಂಗ ಇರೋದಿಲ್ಲ ಅನ್ನೊದು ತಿಳಿಯೋ ಹೊತ್ತಿಗೆ ತಡಾ ಅಗಿಬಿಟ್ಟಿತ್ತೋ..'ಮಾತನಾಡಲಾರದೆ ವೃದ್ಧಜೀವ ಸುಮ್ಮನೆ ಬಿಕ್ಕಳಿಸಿದರೆ, ಅವರನ್ನು ಬಳಸಿ ಕೂತಿದ್ದ ನನಗೆ ರಣಬಿಸಿಲಿನಲ್ಲೂ ಆಗಸ ಮಬ್ಬುಮಬ್ಬು. 

Saturday, August 5, 2017

ಅಪನಂಬಿಕೆ ಎಂಬ ಅಪರಿಚಿತ ಅತಿಥಿ...
(ಇರುವ ಎರಡು ದಿನದಲ್ಲಿ ಏನೆ ಆದರೂ ಕಳೆದುಕೊಳ್ಳುವುದು ಎಂದು ಏನೂ ಇಲ್ಲ. ಎಲ್ಲಾ ಆಯಾ ಸಮಯದ ಕರ್ಮವಷ್ಟೆ. ಸಮಯಕ್ಕೆ ತಕ್ಕಂತೆ ಬದಲಾಗದಿದ್ದರೆ ನೀವು ಅಲ್ಲೆ ಇರುತ್ತಿರಿ)

ನಮಗೆ ಬೇಕಿದ್ದೋ ಬೇಡದೆಯೋ ಒಂದು ಘಟನೆ ನಡೆದು ಹೋಗುತ್ತದೆ. ಇದ್ದಕ್ಕಿದ್ದಂತೆ ಇಬ್ಬರ ಮಧ್ಯೆ ಒಂದು ಅಂತರ ಹುಟ್ಟಿಬಿಡುತ್ತದೆ ಅಪರಾತ್ರಿಯಲ್ಲಿ ಸರಕ್ಕನೆ ಹುಟ್ಟಿ ಅಲ್ಲೆ ಸತ್ತು ಹೋಗುವ ಅಪಸವ್ಯದ ಕಾಮದಂತೆ. ಅದಿಬ್ಬರಿಗೂ ಬೇಕಿರಲಿಲ್ಲ ಅದರೆ ಮನಸ್ಸು ಬಹಳ ಸೂಕ್ಷ ಎನ್ನುವ ಸತ್ಯ ನಮಗೆ ಗೊತ್ತಿರಬೇಕು ಮತ್ತು ಗಂಡಸು ಅಂಡು ಒದರಿಕೊಂಡು ಹೋಗುತ್ತಾನೆಂದ ಮಾತ್ರಕ್ಕೆ ಅವನಿಗೆ ಭಾವನೆಗಳಿಲ್ಲ ಅಥವಾ ಹೆಂಗಸರಿಗಾಗುವ ಮತ್ತು ಅವರ ಸೆಂಟಿಮೆಂಟಿಗಾಗುವ ಫೀಲಿಂಗು ಮಾತ್ರವೇ ಕಿಮ್ಮತ್ತಿನದು ಅಂತಲ್ಲ. ಗಂಡಸು ಪ್ರಿಯಾರಿಟಿಗೆ ಮತ್ತು ಪ್ರಾಕ್ಟಿಕಾಲಿಟಿಗೆ ಒತ್ತು ಕೊಡುವುದರಿಂದ ಸ್ವಲ್ಪ ಈಜಿ ಗೋಯಿಂಗ್ ಅಂತನ್ನಿಸಿ ಬಿಡುತ್ತಾನೆ. ಅದಕ್ಕಿಂತಲೂ ಪ್ರತಿಘಳಿಗೆ ಮತ್ತು ಕಾಲದಲ್ಲೂ ಅವನಿಗೆ ಬದುಕು 360 ಕೋನದಿಂದಲೂ ಆವರಿಸಿಕೊಂಡು ಹಣಿಯುತ್ತಿರುತ್ತದೆ ಎನ್ನುವುದು ಸಂಬಂಧದಲ್ಲಿ (ಎಂದರೆ ಬರೀ ಅಫೇರ್ ಅಂತಲ್ಲ. ಅದು ಯಾವುದೇ ರೀತಿಯದ್ದು ಅಣ್ಣ/ತಮ್ಮ ತಂಗಿ ಮಾವ ಹೀಗೆ) ನಂಬಿಕೆ ಇರಿಸಿಕೊಂಡವರ ಅರಿವಿಗೆ ಬರುವವರೆಗೆ ತೀರ ತಡವಾಗಿರುತ್ತದೆ. ಕಾರಣ ಇವತ್ತು ಸ್ವಂತ ಗಂಡ ಹೆಂಡತಿಯರಿಗೇ ಎಷ್ಟೊ ಸರ್ತಿ ದಿನಕೊಮ್ಮೆ ಮುಖ ಕೊಟ್ಟು ಮಾತಾಡುವ ವ್ಯವಧಾನ ಉಳಿದಿಲ್ಲ. ಅಷ್ಟರ ಮಟ್ಟಿಗೆ ಅವರಿಬ್ಬರ ಪ್ರಿಯಾರಿಟಿ ಮತ್ತು ಸಣ್ಣಮಟ್ಟಿಗಿನ ಇಗೋ ಅವರ ಸಮಯ ಮತ್ತು ಬದುಕು ಎರಡನ್ನೂ ತಿಂದುಹಾಕುತ್ತಿರುತ್ತದೆ. ಅಂತಹದರಲ್ಲಿ ಹೆಂಗೋ ಚೆಂದವಾಗಿ ಬದುಕಿ ಬಿಡೋಣ ಎನ್ನುವ ಸಣ್ಣಸಣ್ಣ ಸಂಬಂಧಗಳಲ್ಲಿ ತಲೆ ಮೇಲೆ ಹತ್ತಿ ಕೂರುವಂತಹ ಮನಸ್ಥಿತಿ ಒಕ್ಕರಿಸಿಬಿಟ್ಟರೆ ದೇವರಾಣೆ ಅವರಲ್ಲಿ ಬದುಕು ತೇಪೆ ಹಾಕಿದ ಕೌದಿಯಾಗುತದೆ ಹೊರತಾಗಿ ಯಾವತ್ತೂ ಹರವಾದ ದುಪ್ಪಟಿಯಾಗಿ ಮಚ್ಚಟೆಗೀಡು ಮಾಡುವುದು ಕಷ್ಟಕಷ್ಟ.
ಅದಾಗಿದ್ದು ಹಾಗೆಯೇ ಅವಳಿಗೂ ಅವನಿಗೂ ಅದ್ಯಾಕೋ ಸ್ವಲ್ಪ ಅಪನಂಬಿಕೆ ಹುಟ್ಟಿಬಿಟ್ಟಿದೆ. ಅದಲ್ಲಿಗಲ್ಲಿಗೆ ಸರಿ ಹೋಗುವ ಮೊದಲೇ ಒಬ್ಬರಿಗೊಬ್ಬರು ಶರಂಪರ ಕಿತ್ತುಕೊಂಡಿದ್ದಾರೆ. ಅದರಲೂ ಯಾವಾಗ ಯಾರಿಗೆ ಅವನ/ಳ ಮಾತು ಮತ್ತು ಮೆಸೇಜು ಇನ್ನಾವುದೇ ರೀತಿಯ ಸಂವಹನ ಬೇಕಿರುವುದಿಲ್ಲವೋ ಆಗ ಮೇಲೆ ಬಿದ್ದಷ್ಟೂ ಒಂದು ರೀತಿಯ ಹೇವರಿಕೆ ಹುಟ್ಟುತ್ತದೆಯೇ ಹೊರತಾಗಿ ಅಪ್ತತೆ ಬೆಳೆಯುವುದೇ ಇಲ್ಲ. ಅದು ಮೀರಿ ನಾನು ಮಾತಾಡಿಸಿಕೊಂಡೆ ತೀರುತ್ತೇನೆ, ಅವನನ್ನು/ಳನ್ನು ಮತ್ತೆ ಒಲಿಸಿಕೊಳ್ಳುತ್ತೇನೆ ಎಂದು ದಿನವಿಡೀ ಅದರಲ್ಲೇ ಮುಳುಗೆದ್ದು ಹಿಂಬಾಲಿಸಿ ವರಾತಕ್ಕಿಟ್ಟುಕೊಳ್ಳುವುದಿದೆಯಲ್ಲ ಅದು ಸರಿಪಡಿಸಿಕೊಳ್ಳುವ ಸ್ಥಿತಿಯಲ್ಲ. ಅದೊಂದು ರೀತಿಯಲ್ಲಿ ಇಗೋಗೆ ಸಿಕ್ಕ ಮನಸ್ಸಿನ ಮತ್ತು ಅಯ್ಯೋ ಎಂಬ ಸ್ವಯಂ ಸಹಾನುಭೂತಿಯ, ತಾನು ಅಪ್ಪಟ ಚಿನ್ನದ ಮನಸ್ಥಿತಿಯ ಸುಪಿರಿಯಾರಿಟಿ ಕಾಂಪ್ಲೆಕ್ಸಿನ ಡೆಸ್ಪರೇಷನ್ನು.
ಅಯ್ಯೋ ನನ್ನ ಬದುಕು, ನನ್ನ ಪಾಲಿಸಿ, ನನ್ನ ನೈತಿಕತೆ, ನನ್ನ ಬದುಕಿನ ರೀತಿ, ನಾನು ಯಾವತ್ತು ತಪ್ಪೇ ಮಾಡಿಲ್ಲ, ನನ್ನ ಬದುಕಿನ ಸಂಸ್ಕಾರವೇ ಹಿಂಗಿತ್ತು, ಇನ್ನೆಂಗೆ ನನ್ನ ಗಂಡ/ಹೆಂಡತಿನ್ನ ಎದುರಿಸಲಿ, ನನ್ನ ಪ್ರಿನ್ಸಿಪಲ್ಲೇ ಕಿತ್ತುಹೋಯ್ತು, ಇನ್ನು ನನ್ನ ಬದುಕಿಡೀ ನರಕವೇ ಎಂದು ಅಲವತ್ತುಕೊಳ್ಳುವ ವ್ಯಕ್ತಿತ್ವಕ್ಕೆ ಬೇಕಿರುವುದು ಸಾಂತ್ವನ ಅಥವಾ ಪ್ರೀತಿ ಅಥವಾ ಬೆಂಬಲ ಅಥವಾ ಒತ್ತಾಸೆ ಅಲ್ಲವೇ ಅಲ್ಲ. ಅವರಿಗೆ ಆಗಿದ್ದಿದ್ದು ಮೊದಲೇ ಹೇಳಿದಂತೆ ಡೆಸ್ಪರೇಶನ್ನಿನ ಕಾಂಪ್ಲೆಕ್ಸು. ಅದರಿಂದ ಹೊರಗೆ ಬರಲು ಅವರಿಗೆ ತೋಚುವುದೊಂದೇ ಮಾರ್ಗ ಮೊದಲು ಆಗಿರುವ ಸಂಕಟವನ್ನು ಸರಿಪಡಿಸಿಕೊಂಡು ತನ್ನ ಮನಸ್ಸಿಗೆ ತಾನು ನಂಬಿದ್ದಕ್ಕೆ ಸರಿ ಎನ್ನಿಸುವ ಮನಸ್ಥಿತಿಗೆ ಒಂದು ಶಭಾಶಗಿರಿ ಕೊಟ್ಟುಕೊಂಡು ಅಯ್ಯಪ್ಪಾ ಎಲ್ಲಾ ಸರಿಯಾಗಿಬಿಟ್ಟಿತು ಅದಕ್ಕೆ ತಕ್ಕಂತೆ ನಾನೂ ಸರಿ, ನನ್ನ ಬದುಕು ಸರಿಯಾಯಿತು ಎನ್ನುವ ಮನಸ್ಸಿನ ಕಾಂಪ್ಲೆಕ್ಸಿಗೆ ಹಾಯೆನ್ನಿಸುವ ಅವಶ್ಯಕತೆಯ ತರಾತುರಿಗೆ ಬಿದ್ದಿರುತ್ತಾರೆ ಹೊರತಾಗಿ ಅದರಿಂದ ಯಾವತ್ತೂ ಶಾಶ್ವತ ಪರಿಹಾರವಾಗಿರುವುದೇ ಇಲ್ಲ ಎನ್ನುವುದು ಅವರ ಮೆದುಳಿಗಿಳಿಯುವುದೇ ಇಲ್ಲ. ಕಾರಣ ಅವರಿಗೆ ತತಕ್ಷಣಕ್ಕೆ ಮನಸ್ಸಿನ ಭರವಸೆಗೆ ತಾನು ಸರಿ ಇದ್ದೇನೆ ಎನ್ನುವ ಒಳಗುದಿಗೆ ಅರ್ಜೆಂಟಾಗಿ ಒಂದು ಪ್ರಾಮಿಸ್ಸು ಬೇಕಿರುತ್ತದೆ. ಅದಾಗಿಬಿಟ್ಟರೆ ಅಲ್ಲಿಗೆ ಅಯ್ಯಪ್ಪಾ ಎಂದು ಹೊರಟು ಬಿಡುತ್ತಾರೆ. ಮುಂದೊಮ್ಮೆ ಇನ್ನೇನೋ ತಲೆ ಕೆದರಿಕೊಳ್ಳುವವರೆಗೂ ಯಾವ ಉಸಾಬರಿಯೂ ಇರುವುದಿಲ್ಲ. 
ನೆನಪಿರಲಿ ಹೀಗೆ ಮಾಡುವವರ ಬದುಕಿನಲ್ಲಿ ಯಾವತ್ತೂ ಖುಶಿಯೆನ್ನುವುದು ಅಡರುವುದು ಕಷ್ಟ. ಕಾರಣ ಪ್ರತಿ ಬಾರಿಯೂ ಅವರ ಮನಸ್ಸು ಒಳಗೊಳಗೆ ಯುದ್ಧಮಾಡುತ್ತಲೇ ಇರುತ್ತದೆ. ಅವರಿಗೇ ಗೊತ್ತಿಲ್ಲದಂತೆ ತಾನಂದುಕೊಂಡಂತೆ ಬದುಕುತ್ತಿರುವ ಸರಿ ತಪ್ಪಿಗೆ ತಿಕ್ಕಾಟದಲ್ಲೇ ಇರುತ್ತಾರೆ. ಎಲ್ಲರನ್ನೂ ಖುಶಿಯಾಗಿಡುವ ಹ್ಯಾಂವಕ್ಕೆ ಹೆಣಗಾಡುತ್ತಿರುತ್ತಾರೆ. ಆದರೆ ಯಾವತ್ತೂ ಜತೆಗಿರುವವರಾಗಲಿ ಇತರರಾಗಲಿ ಮೇಲೆ ನೀ ಮಾಡಿದ್ದು ಸರಿ ಎನ್ನುವಂತೆ ವರ್ತಿಸಬಹುದಾದರೂ ಮನಸ್ಸು ಪೂರ್ವಕವಾಗಿ ಜತೆಯಾಗಲಾರರು.
ಕಾರಣ ಇಂತಹ ಸಂಬಂಧಗಳಲ್ಲಿ ಅಯ್ಯೋ ಅದೇ ಕಿರಿಕಿರಿ ಹೋಗಲಿ ಹೂಂ..ಅಂದು ಸುಮ್ನಾಗೋಣ ಎಂದಿರುತ್ತದೆಯೇ ಹೊರತಾಗಿ ಯಾವತ್ತೂ ಅವರೊಂದಿಗೆ ಒಂದು ನಂಬಿಗಸ್ಥ ವ್ಯವಸ್ಥೆ ಪುನರ್‍ಸ್ಥಾಪನೆ ಬಲು ಕಷ್ಟ. ಕಾರಣ ಅವರ ಡೆಸ್ಪರೇಶನ್ನು ಮತ್ತು ಸರಿ ಮಾಡಿಕೊಳ್ಳುವ ಅತಿ ಎನ್ನುವ ಕಾಂಪ್ಲೆಕ್ಸು ಎದುರಿನವರಿಗೆ ಹೇವರಿಕೆಯಾಗಿಬಿಟ್ಟಿರುತ್ತದೆ. ಅದಕ್ಕೂ ಮಿಗಿಲು ದಿಗಿಲು ಹುಟ್ಟಿಸುತ್ತದೆ. ಯಾವಾಗ ಯಾವ ಹೊತ್ತಿನಲ್ಲಿ ತಲೆ ಏರುತ್ತಾರೋ ಯಾರಿಗೆ ಗೊತ್ತು..? ಅಂತಹ ಭರವಸೆ ಮತ್ತು ನಂಬಿಕೆಯ ಜೊತೆ ಹುಟ್ಟಿಸುವಲ್ಲಿ ವಿಫಲವಾಗಿರುವ ಮನಸ್ಥಿತಿಯಿಂದಾಗಿ ಇದ್ದಬದ್ದ ಚೆಂದದ ಘಳಿಗೆಗಳನ್ನೂ ಹಾಳುಮಾಡಿಕೊಳ್ಳುತ್ತಿರುತ್ತಾರೆ.
ಬದುಕು ಬಂದಂತೆ ಸ್ವೀಕರಿಸಿ ಚೆಂದವಾಗಿಸಿಕೊಳ್ಳುವ ಹೊಂದಾಣಿಕೆ ಎನ್ನುವ ಸ್ವಭಾವ ಅರ್ಥವೇ ಆಗಿರುವುದಿಲ್ಲ. ಅಕಸ್ಮಾತ ಇದನ್ನು ವಿವರಿಸಲು ಹೋಗಿ ತಾನು ಇದ್ದಬದ್ದವರೊಂದಿಗೆ ಹೇಗೆಲ್ಲಾ ಸಾವರಿಸಿಕೊಂಡು ಹೋಗುತ್ತಿದ್ದೇನೆ ಎನ್ನುವುದಕ್ಕೆ ಅಂಟಿಕೊಳ್ಳುತ್ತಾರೆ ಹೊರತಾಗಿ ವಾಸ್ತವ ಅರಿವಿಗೆ ತಂದುಕೊಳ್ಳುವುದಿಲ್ಲ. ಬರೀ ಹೆಣ್ಣು ಗಂಡಿನ ಮಧ್ಯೆ ಅಂತಲ್ಲ ಇದು ಇಬ್ಬರಲ್ಲೂ ಅಷ್ಟೆ. ಯಾವುದೇ ಸ್ನೇಹ, ಅವಳೊಂದಿಗಿನ ಗೆಳೆತನ, ಚಿಕ್ಕಪ್ಪನೊಂದಿಗಿನ ಮುಯ್ಯಿ, ಸ್ವಂತ ಹೆಂಡತಿಯೊಂದಿಗಿನ ಅರೆಮುನಿಸು, ಕಚೇರಿ ಸಹೋದ್ಯೋಗಿಯೊಂದಿಗೆ ಒಂದು ದಿವ್ಯವಾದ ಮುಖಸಿಂಡರಿಸುವ ಪಢಪೆÇೀಶಿತನ, ಕೆಲಸದಾಳಿನ ಜೊತೆಗಿನ ಒಣಉಸಾಬರಿ, ಪಕ್ಕದ ಮನೆಯಾತನ ಹಲ್ಕಟಗಿರಿ, ನಿಮ್ಮ ಫೇಸ್‍ಬುಕ್ ವಾಲ್ ಮೇಲೆ ಬಂದು ಕ್ಯಾತೆ ತೆಗೆಯುವ ನಿಮ್ಮ ಕಮೆಂಟಿಗೆ ಆಕೆ/ಅವನು ಲೈಕ್ ಒತ್ತಿದ್ದಾನೆ ಎಂದು ನೋಡುವ ಸಣ್ಣತನ, ಎದೆಯುದ್ದ ಮಗನ ಸರಿಬರದ ನಡವಳಿಕೆ, ನಮ್ಮ ನಮ್ಮ ಸ್ನೇಹದವರೊಂದಿಗಿನ ಲೈಕು ಕಮೆಂಟಿಗೆ ಸಂಕಟ ಪಟ್ಟುಕೊಂಡು ಇನ್ನೊಬ್ಬರ ಇನ್‍ಬಾಕ್ಸಿಗೆ ಹೋಗಿ ತಿಪ್ಪೆ ಸಾರಿಸುವವರು, ತಮ್ಮತಮ್ಮ ಬದುಕೇ ಕಿತ್ತು ಹೋಗಿದ್ದರೂ ಅಕೆಯ ಸಂಕಟಕ್ಕೆ ಕೈಯೊಡ್ಡುವ ಸಹಾನುಭೂತಿಗಳಿಸುವ ಹೀಗೆ ಯಾರಿದ್ದಾರೆ ಯಾರಿಲ್ಲ ಇದರಲ್ಲಿ. ಎಲ್ಲರದ್ದೂ ವರಾತ ಒಂದೇ ತಾವು ಸರಿ ಎನ್ನಿಸಿಕೊಳ್ಳುವ ಮತ್ತು ಮೊದಲಿನಂತೆ ಎಲ್ಲಾ ಚೆಂದವಾಗಿ ನಡೆದುಬಿಡಲಿ ಎನ್ನುವ ಧಾವಂತ.
ಅರೇ ಸುಮನೆ ಬಿದ್ದ ನೀರೂ ಆರಲು ಅದರದ್ದೇ ಸಮಯ ತೆಗೆದುಕೊಳ್ಳುವಾಗ ಪ್ರತಿಯೊಂದೂ ಸರಿ ಹೋಗಲು ಅಥವಾ ಹೋದಂತೆ ಅನ್ನಿಸಲು ಅದರದ್ದೇ ಸಮಯಗಳಿರುತ್ತವೆ. ಹಾಗಾದಲ್ಲಿ ಮಾತ್ರ ಅಂತಹದ್ದು ತಣಿದು ಸೂಕ್ತವಾದ ಸಮಯಕ್ಕೆ ಮಾಯ್ದು ಏನೂ ಆಗಿಲ್ಲವೆಂಬಂತೆ ನೆಟ್ಟಗಾಗುವುದು. ಇದು ಪ್ರಕೃತಿಯೇ ಕೊಟ್ಟ ಸುಲಭದ ಸಲೀಸು ವಿಧಾನ. ಇದರಿಂದ ನೀವು ಯಾರನ್ನು ಸಂತೈಸಲು ಸರಿ ಮಾಡಲು ಹೊರಡುತ್ತಿರೋ ಅವಳೆ/ನೇ ಕೊನೆಗೊಮ್ಮೆ ಅಯ್ಯೋ ಸುಖಾ ಸುಮ್ಮನೆ ಸಮಯ ವ್ಯರ್ಥ ಮಾಡಿಕೊಂಡೆ ಎನ್ನುವ ಹಂತಕ್ಕೆ ಬಂದಿರುವ ಉದಾ. ಸಾವಿರ. ನನ್ನ ಕೌನ್ಸೆಲಿಂಗ್ ಹಲವು ವಿಧಾನದಲ್ಲಿ ಸುಮ್ಮನಿರಿಸಿಬಿಡುವುದು ಅತ್ಯಂತ ಉಪಯುಕ್ತ ವಿಧಾನವಾಗಿ ಯಶಸ್ಸಾಗಿದ್ದಿದೆ. ಕಾರಣ ಎದುರಿನವರ ಮೌನ ಕೆಲವೊಮೆ ನಿಮ್ಮ ಅಹಂನ್ನು ಹಣಿದರೆ ಕೆಲವೊಮ್ಮೆ ಅಯ್ಯೋ ಪಾಪ ಎನ್ನುವ ಮನಸ್ಥಿತಿಯನ್ನು ಕ್ರಮೇಣ ತಯಾರು ಮಾಡುತ್ತದೆ. ಇದನ್ನು ಬಿಟ್ಟು ನನಗೆ ಹಿಂಗೇ ನನಗೇ ಹಂಗೇ ಬದುಕು ಎಂದು ನಿಲ್ಲಲು ಹೋದಲ್ಲಿ ಅದು ಬದುಕಾಗುವುದಿಲ್ಲ. ಇದ್ದ ಬದ್ದ ಎಲ್ಲರ ಜೀವ ತಿನ್ನುವ ಸರಕಾಗುತ್ತದೆ. ಕಾರಣ ಇರುವ ಎರಡು ದಿನದಲ್ಲಿ ಏನೆ ಆದರೂ ಕಳೆದುಕೊಳ್ಳುವುದು ಎಂದು ಏನೂ ಇಲ್ಲ. ಎಲ್ಲಾ ಆಯಾ ಸಮಯದ ಕರ್ಮವಷ್ಟೆ. ಸಮಯಕ್ಕೆ ತಕ್ಕಂತೆ ಬದಲಾಗದಿದ್ದರೆ ನೀವು ಅಲ್ಲೆ ಇರುತ್ತಿರಿ. ಕಾಲ
ಅಪಾಯಕಾರಿ ಒಳ್ಳೆಯತನಗಳು
(ಮೆಸೆಂಜರು, ವಾಟ್ಸಾಪುಗಳ ಹಾವಳಿಯಿಂದಾಗಿ ಕುಲ ಗೋತ್ರ ಗೊತ್ತಿಲ್ಲದವರೂ ಅಡ್ವೈಸರುಗಳಾಗಿ ಅವತರಿಸುತ್ತಿರುವ ಸಂದರ್ಭದಲ್ಲಿ ಯಾವಾಗ ಯಾರ ಮುಖವಾಡ ಬಿಚ್ಚಿಕೊಳ್ಳುತ್ತದೆ, ಯಾರೆಲ್ಲಾ ಹರಾಜಾಗುತ್ತಾರೆ ಹೇಳಲಾಗುವುದಿಲ್ಲ. ಆಗ ಇಂಥವರನ್ನು ನಂಬಿ ಕತೆ ಕೊಟ್ಟು ಕೂತವರ ಪರಿಸ್ಥಿತಿ..?)

ಇಂಥವರು ಯಾರದೇ ಬದುಕಿನಲ್ಲೂ ತೀರ ಅಪಾಯಕಾರಿ. ಸ್ವಂತದ ಬದುಕಂತೂ ನಿಸ್ಸಂಶಯ ಗಬ್ಬೆಬ್ಬಿಸಿಕೊಂಡಿರುತ್ತಾರೆ ಆದರೆ ಹೊರಗೆ ಬರುತ್ತಿದ್ದಂತೆ ಅದೆಲ್ಲಿರುತ್ತದೋ ಬ್ರಹ್ಮಕಳೆ ಮುಖದಲ್ಲಿಟ್ಟುಕೊಂಡು, ಒಳಗಿನ ವೃಣದ ಮೇಲೆ ಸ್ಪ್ರೇ ಹೊಡೆದುಕೊಂಡೆ ರಸ್ತೆಗಿಳಿದಿರುತ್ತಾರೆ. ನೋಡಿದವರು ಮಾತಾಡಿದವರು ಯಾರೂ ಇವರನ್ನು ನಾಲಾಯಕ್ ಎಂದಾಗಲಿ, ಅಪಾಯಕಾರಿ ಎಂದಾಗಲಿ ಅವಗಾಹನೆಗೆ ತಂದುಕೊಳ್ಳುವುದು ಸಾಧ್ಯವೇ ಇರುವುದಿಲ್ಲ. ಯಾವಾಗ ಬೇಕಾದರೂ ಸಹಾನುಭೂತಿಗೆ ಒಳಗಾಗಲು, ಕೈ ಕಾಲು ಹಿಡಿಯಲು ತನ್ನ ತಪ್ಪೇನು ಇಲ್ಲ ಎಂದು ಚೆಂದವಾಗಿ ವಾದಿಸಲು, ಎದುರಿನವರೂ ಎಲ್ಲೂ ಅನಾವಶ್ಯಕ ತೊಂದರೆಗೀಡಾಗಬಾರದು ಎನ್ನುವ ಕಾಳಜಿಯುತ ಮಾತುಕತೆಯೊಂದಿಗೆ, ಹಾಗೆ ಸೆಂಟಿಮೆಂಟಾಗಿ ಅವರನ್ನು ನಂಬಿಸಿ, ಮಾತುಕತೆಗೆಳೆಯುವುದು ಬೇಡದ ಅವರ ಸಂಸಾರದ ಕತೆ ವಿಚಾರಿಕೊಳ್ಳುತ್ತಾ ಬಳಸಿಕೊಳ್ಳುವುದರಲ್ಲಿ ಇವರದು ಎತ್ತಿದ ಕೈ. ಇಂಥವರು ತೀರ ಮನೆ ಹೊರಗೆ ದೂರದಲ್ಲಿ ಎಲ್ಲೋ ಇರುತ್ತಾರೆಂದಲ್ಲ. ಮನೆಯಲ್ಲೇ, ತೀರ ಸಂಬಂಧಿಗಳಲ್ಲಿ, ಆಪ್ತೇಷ್ಟರಲ್ಲಿ, ಬಂಧುವಾಗಿಯೂ ಇರುತ್ತಾರೆ.
ಅಗತ್ಯ ಬಿದ್ದಾಗ "...ನೋಡು ನಾನು ಆವತ್ತೇ ಹೇಳಿರಲಿಲ್ವಾ.." ಎಂದು ಸಾಧಿಸಿಕೊಂಡು ತನ್ನ ನಂಬುಗೆ ಮತ್ತು ತನಗನ್ನಿಸಿದ್ದೇ ಸರಿ ಎಂಬುವುದನ್ನು ಸಾಧಿಸಲು ಕಾಯುತ್ತಾ ಅದಕ್ಕಾಗಿ ಏನೂ ಮಾಡಲು ಹಿಂದೆ ಮುಂದೆ ನೋಡದ, ಯಾರ ಸಂಸಾರದ ವಿಷಯದಲ್ಲೂ ತಲೆ ಹಾಕಲು ಹೇಸದ, ಇನ್ಯಾರದ್ದೋ ಗಂಡ ಹೆಂಡತಿಯನ್ನು ಸರಿಪಡಿಸುತ್ತೇನೆಂದು ಹೊರಟು ನಿಲ್ಲುವ, ಇಂತಹ ನಿರಪಾಯಕಾರಿಯಂತೆ ಕಾಣಿಸುವ ಸಮೀಪ ಸಂಬಂಧಿಗಳು ನಿಜಕ್ಕೂ ಅಪಾಯಕಾರಿ. ವಿಚಿತ್ರ ಎಂದರೆ ಕಿತ್ತು ಹೋಗುತ್ತಿದ್ದ ಸ್ವತ: ಹೆಂಡತಿಯೊಂದಿಗಿನ ಸಂಬಂಧ ಪುನರ್ ಸ್ಥಾಪಿಸಿಕೊಳ್ಳಲು ಮತ್ತೆ ಇನ್ಯಾರದ್ದೋ ಸಹಾಯ ಇವರಿಗೇ ಬೇಕಿರುತ್ತದೆ. ಸ್ವಂತದ ಮನೆಯಲ್ಲಿ ಅದೆಂಥಾ ಶರಂಪರ ಕಿತ್ತಾಟಗಳಿರುತ್ತವೆಂದರೆ ಗಂಡ/ಹೆಂಡತಿ ಒಬ್ಬರನ್ನೊಬ್ಬರು ತಿರುಗಿಯೂ ನೋಡದೆ ವಾರಗಟ್ಟಲೆ ಬದ್ಧ ದ್ವೇಷಿಗಳಾಗುತ್ತಿರುತ್ತಾರೆ. (ಈಗಿನ ಕಾಲವಾದ್ದರಿಂದ ಫೇಸ್‍ಬುಕ್ಕು/ವಾಟ್ಸಾಪುಗಳಲ್ಲೆಲ್ಲಾ ಬ್ಲಾಕು ಮಾಡಿಕೊಂಡು ರೇಜಿಗೆ ಹುಟ್ಟಿಸುವಂತಹ ದಂಪತಿಗಳಿದ್ದಾರೆ ಎಂದರೆ ನೀವು ನಂಬಲೇಬೇಕು. ಅದರ ಸ್ಕ್ರೀನ್‍ಶಾಟ್‍ಗಳನ್ನೂ ಗ್ಯಾರಂಟಿಗಾಗಿ ಕಳುಹಿಸಿಕೊಳ್ಳುವ ಇವರು ಅದಿನ್ನೆಂಥಾ ನಂಬಿಕೆ ಸ್ವಂತದರಲ್ಲಿ ಉಳಿಸಿಕೊಂಡಿದ್ದಾರು..? ಮೊದಲಾದರೆ ಬರೀ ಮಾತು ನಿಂತುಹೋಗಿ ಅವಕಾಶ ಸಿಕ್ಕಿದಾಗೆಲ್ಲಾ ಅಪರೋಕ್ಷ ಹರಿಹಾಯುವುದು ನಡೆಯುತ್ತಿತ್ತು. ಈಗೀಗ ಇಬ್ಬರೂ ನೌಕರಿಯಲ್ಲೂ ಇರುವುದರಿಂದ ಮುಲಾಜಿಲ್ಲದೆ ಬ್ಲಾಕ್ ಮಾಡಿ ಬಿಸಾಡಿ ಜತೆಗೆ ಇತರರೊಂದಿಗೆ ಚಾಟ್‍ನಲ್ಲಿದ್ದು ಸಮಯ/ಸಂಕಟ ಕಳೆದುಕೊಂಡು ಹಗುರಾಗುವವರಿದ್ದಾರೆ. ಹೊರಗೆ ಕೆಲಸ ಮಾಡುವ ಅಡ್ವಾಂಟೇಜೂ / ಡಿಸ್ ಅಡ್ವಾಂಟೆಜೂ ಎರಡೂ ಇದು ಹೌದಾದರೂ ಒಳಗೊಳಗೆ ಬೇರೆಯವರ ವಿಷಯದಲ್ಲಿ ತಮಾಷೆ ನೋಡುವ ಮೊದಲು ತಮಗೇ ಆದಾಗ ಏನಾಗುತ್ತದೆನ್ನುವ ಅರಿವಿರಬೇಕು. ಅದರೆ ಇಂಥವರಿಗೆ ಇದೆಲ್ಲಾ ತಾಗುವುದೂ ಇಲ್ಲ.)
ಕಾರಣ ಬೇಕಿದೆಯೋ ಬೇಡವೋ ಅವರಿಗೊಂದಿಷ್ಟು ನಮ್ಮ ನಮ್ಮ ಸಂಸಾರದ ರಗಳೆಗಳು ಗೊತ್ತಿರುತ್ತವೆ. ಅದನ್ನೆ ಹಿಡಿದುಕೊಂಡು ಇಂಟರ್‍ಫೀಯರು ಮಾಡುತ್ತಾ, ಇಬ್ಬರಿಗೂ ಆಪ್ತವಾಗಿ ಮಾತಾಡುತ್ತ ಹೇಗೋ ಅವರಿಗೂ ಒಬ್ಬ ಆಪ್ತನ ಮಧ್ಯಸ್ಥಿಕೆ ಬೇಕಾಗುತ್ತಿರುತ್ತದೆ ಅಂತ ಅನ್ನಿಸಿರುತ್ತದೆಯೇ ವಿನ: ಪ್ರಾಕ್ಟಿಕಲೀ ಹಾಗೆ ಬೇಕಿರುವುದೇ ಇಲ್ಲ. ಆದರೂ ಆ ಹೊತ್ತಿಗಿನ ಸಂಕಟಕ್ಕೆ ಹೌದೆಂದು ಬಿಡುತ್ತಾರೆ. ಇಂಥವರು ಬರದಿದ್ದರೂ ಅವರೇನೂ ಮರ್ಡರ್ ಮಾಡಿಕೊಳ್ಳುವುದಿಲ್ಲ. ಅದರೆ ಇಬ್ಬರಲ್ಲೂ ಅವನೇ/ಳೇ ಮೊದಲು ಮಾತಾಡಿಸಲಿ ಸರಿಪಡಿಸಲಿ ಎಂಬೆಲ್ಲ ಪುರಾತನ ಇಗೋಗಳು ಒಂದಿಷ್ಟು ಇರುತ್ತವಲ್ಲ. ಅದಕ್ಕೆ ಸರಿಯಾಗಿ ಇಂಥವನೊಬ್ಬ ಎಟುಕಿ ಸರಿ ಹೋಗಿದ್ದು ಅ ಸಂಸಾರದ ಕತೆ ಸುಖಾಂತ್ಯವಾಗುತ್ತದೆ. ಅದರೆ ಅವನ ಕತೆ ಅಲ್ಲಿಂದ ಶುರುವಾಗುತ್ತದೆ. ಅವಕಾಶ ಇದ್ದಾಗಲೆಲ್ಲ " ಅವರಿಬ್ಬರನ್ನೂ ಸರಿ ಮಾಡಿದ್ದು ನಾನೇಯಾ. ಇಲ್ದಿದ್ರೆ ಇಷ್ಟೊತ್ತಿಗೆ ಡೈವೋರ್ಸೆ.." ಎಂದು ಕತೆ ಶುರುವಿಟ್ಟು ಬಿಟ್ಟಿರುತ್ತಾರೆ. ಅದನ್ನೆ ಕೇಳಿದ ತಲೆಮಾಸಿದ ಇನ್ಯಾವನೋ/ಳೋ " ಅಯ್ಯೋ ನಮ್ಮವಳೂ ಹಂಗೇ ಮಾರಾಯ.." ಎಂದು ಬಾಯ್ ತಪ್ಪಿ ಅಂದು ಬಿಟ್ಟರೆ ಅಷ್ಟೆ ಅಲ್ಲಿ ಅಡರಿಕೊಂಡುಬಿಡುತ್ತಾರೆ.
ಇವತ್ತು ವಾಟ್ಸಾಪಿನ ಒಳಕೋಣೆಗಳಲ್ಲಿ ಬಹಳಷ್ಟು ಗಂಡಸರು ತಂತಮ್ಮ ಸಂಸಾರದ ಗುಟ್ಟುಗಳನ್ನೇ ಬಿಚ್ಚಿಟ್ಟು ಬಿಡುತ್ತಿರುತ್ತಾರೆ ಅದರಲ್ಲೂ ಎದುರಿಗೆ ಹೆಂಗಸಿದ್ದರಂತೂ ಮುಗಿದೇ ಹೋಯಿತು.
" ಅಯ್ಯೋ ಇಲ್ಲ ಮಾರಾಯ್ತಿ ಅವಳು ಸ್ವಲ್ಪ ಹಂಗೇ...ಇತ್ಯಾದಿ.." ಕತೆ ಹೊಡೆಯುತ್ತಾ "..ನೋಡು ನಾನು ಏನು ಬೇಕಿದ್ದರೂ ಹೇಳುತ್ತಿದ್ದೇನೆ ಅಂದರೆ ನಿನ್ನ ಮೇಲೆಷ್ಟು ವಿಶ್ವಾಸ ಇಡುತ್ತಿದ್ದೇನೆ.."ಎಂದೇ ಪ್ರತಿಧ್ವನಿಸುತ್ತಿರುತ್ತಾರೆ. ವಿಪರ್ಯಾಸ ಎಂದರೆ ಮುಖಮೂತಿ ಪರಿಚಯ ಇಲ್ಲದ ಕೇವಲ ಚಾಟು/ಫೇಸ್‍ಬುಕ್ಕಿನ ಪರಿಚಯದವರೆದುರಿಗೆ ಸಂಸಾರದ ವಿಷಯ ಬಿಚ್ಚಿ ಕೂಡುವ ಗಂಡಸು/ಹೆಂಗಸರ ಮೇಲೆ ಅದಿನ್ನೆಂಥಾ ಭರವಸೆ ಹುಟ್ಟೀತು. ಇವತ್ತು ಇದನ್ನೆಲ್ಲಾ ಹೇಳುವ ಆತ/ಆಕೆ ತನ್ನ ವಿಷಯವನೂ ಬೇರೆಡೆ ಬಾಯ್ಬಿಡುವುದಿಲ್ಲ ಎಂದು ಯಾರಿಗೆ ಗೊತ್ತು..?
ಅಸಲಿಗೆ ಇಲ್ಲಿ ತನ್ನ ಹೆಂಡತಿ ಸರಿ ಇಲ್ಲ ಎನ್ನುವುದನ್ನು ಬಾಯಿ ತಪ್ಪಿ ಮಾತಾಡುವ ಗಂಡಸು ಇನ್ನೇನಾದರೂ ಕೂಡಾ ಮಾತಾಡಬಹುದೆನ್ನುವ ಒಂದು ಅವಗಾಹನೆ ಒಳಗೊಳಗೇ ಹುಟ್ಟಬೇಕು. ಇಂಥಾ ಹರಕು ಬಾಯಿಯವರಿಗೆ ಎದುರಿನವರನ್ನು ತಪ್ಪಿತಸ್ಥ ಅಥವಾ ತಾನು ಹೇಳಿದ್ದು ನಂಬಿದ್ದೇ ಸರಿ ಎನ್ನುವ ಹುಕಿಯಿರುತ್ತದಲ್ಲ ಅದಕ್ಕಾಗಿ ಎಂಥಾ ಸನ್ನಿವೇಶ ನಿರ್ಮಾಣಕ್ಕೂ ಅದಕ್ಕಾಗಿ ಭಯಾನಕ ಡೆಡಿಕೇಶನ್ನಿನಲ್ಲಿ ನಿಂತುಬಿಟ್ಟಿರುತ್ತಾರೆ. ಕಾರಣ ಇಂಥವರು ಎಂಥಾ ಮುಖವಾಡದ ಹಿಂದಿರುತ್ತಾರೆಂದರೆ ಭಯಾನಕ ಅಸಂತೃಪ್ತಿಯೊಂದು ಮನಸ್ಸಿನಲ್ಲಿ ಮನೆಮಾಡಿರುತ್ತದೆ. ಬದುಕು ಒಳಗೊಳಗೇ ನಾಲ್ಕು ದಿನ ಚೆಂದವಿದ್ದರೆ ಇನ್ನೂ ನಾಲ್ಕು ತಿಂಗಳು ಕೈಕೊಡುತ್ತಿರುತ್ತದೆ. ತೀರ ಖಾಸಗಿ ಬದುಕು ಯಾವತ್ತೊ ಕೈಬಿಟ್ಟಿರುತ್ತದೆ. ಸೆಕ್ಸು ಎನ್ನುವ ಫ್ಯಾಂಟಸ್ಸಿ ಮನದ ಮೂಲೆಯಲ್ಲಿ ವಿಷವಾಗಿ ಕೂತುಬಿಟ್ಟಿರುತ್ತದೆ. ಎದುರಿಗೆ ಇರುವ ಸ್ನೇಹಿತರು ಸಂಬಂಧಿ ಏನಾದರೂ ಮಾಡುತ್ತಾ ಸಾಧಿಸುತ್ತ ಎದ್ದು ನಿಲ್ಲುತ್ತಿದ್ದರೆ ಅದಕ್ಕೆ ಕಾಂಪಿಟೇಶನ್ನು ಕೊಡಲಾಗದ ತಮ್ಮ ಕೀಳರಿಮೆಯ ಹಿಂಜರಿತನ ಒಳಗೊಳಗೇ ಕಾಡುತ್ತಿರುತ್ತದೆ.
ಇಂಥವರ ವಿರುದ್ಧ ಮಾಡಲು ನಿಮ್ಮಲ್ಲಿ ಯಾವುದೇ ಗಹನವಾದ ಆದರೆ ಹೌದೆನ್ನಿಸುವ ಆರೋಪಗಳು ಸಾಕ್ಷಿ ಸಮೇತ ಲಭ್ಯವಿರುವುದಿಲ್ಲ. ಆದರೆ ಹಿಂದಿನಿಂದ ಆಡಿಸುವ ಕಡ್ಡಿಗೆ ಎದುರಿನವರ ಬದುಕು ಬರಬಾದಾಗುತ್ತಿರುತ್ತದೆ. ಇವರು ಮಾತ್ರ ಯಾರಿಗೋ ಎನೋ ಉಪಕಾರ ಮಾಡಿದ್ದೇನೆ ಅಥವಾ ಮಾಡುತ್ತಿದ್ದೇನೆ ಎನ್ನುವ ಭ್ರಮೆಯಲ್ಲಿ ತಮ್ಮದೆನ್ನುವ ಬದುಕು ಎಕ್ಕುಟ್ಟಿ ಹೋಗುತ್ತಿದ್ದರೂ ಅನಾಯಾಸವಾಗಿರುತ್ತಾರೆ. ಇಂಥವರಿಗೆ ಈಗೀಗ ಸಾಮಾಜಿಕ ಜಾಲತಾಣದಲ್ಲಿ ಸುಲಭಕ್ಕೆ ಪಾಪದ ಮಾತಿಗೆ ಬೀಳುವ ಹೆಣ್ಣುಮಕ್ಕಳೂ ಕಡಿಮೆ ಇಲ್ಲ. ಬಾಕಿ ಏನೂ ಮಾಡಲಾಗದಿದ್ದರೂ ಅವರವರ ಕತೆಗೆ ಪಾಪ ಎನ್ನುತ್ತಾ ಬೆರಳು ಕಚ್ಚುತ್ತಾ ಸರಿ ಪಡಿಸಬೇಕಾದ ಜಾಗದಲ್ಲಿ ನಿಧಾನಕ್ಕೆ ತುಪ್ಪ ಸುರಿಯುತ್ತಿರುತ್ತಾರೆ. ಎಲ್ಲೋ ಎನೋ ನಡೆಯುವ ಅತೃಪ್ತಿ ಇವರನ್ನು ಸಂಕಟಕ್ಕೀಡು ಮಾಡುತ್ತಿರುತ್ತದೆ.
ಒಟ್ಟಾರೆ ಒಳ್ಳೆಯತನದ ಮುಖವಾಡದ ಹಿಂದೆ ತೀರ ಒಂದು ಕುತ್ಸಿತ ಮನಸ್ಥಿತಿ ಇರುವುದು ಗೊತ್ತಾಗುವ ಹೊತ್ತಿಗೆ ತಡವಾಗಿರುತ್ತದೆ. ತೀರ ಅತ್ತು ನಂಬಿಸಲು ಹಿಂದೆ ಮುಂದೇ ನೋಡದ ಇಂಥವರ ಒಳ್ಳೆಯತನದ ಬದಲಿಗೆ ನಮ್ಮ ನಮ್ಮ ಸಂಕಟಗಳನ್ನು ನಾವೇ ಅರಗಿಸಿಕೊಳ್ಳುವುದು ಗೊತ್ತಿರಬೇಕು. ಆದರೆ ಮೆಸೆಂಜರು, ವಾಟ್ಸಾಪುಗಳ ಹಾವಳಿಯಿಂದಾಗಿ ಕುಲ ಗೋತ್ರ ಗೊತ್ತಿಲ್ಲದವರೂ ಅಡ್ವೈಸರುಗಳಾಗಿ ಅವತರಿಸುತ್ತಿರುವ ಸಂದರ್ಭದಲ್ಲಿ ಯಾವಾಗ ಯಾರ ಮುಖವಾಡ ಬಿಚ್ಚಿಕೊಳ್ಳುತ್ತದೆ, ಯಾರೆಲ್ಲಾ ಹರಾಜಾಗುತ್ತಾರೆ ಹೇಳಲಾಗುವುದಿಲ್ಲ. ಆಗ ಇಂಥವರನ್ನು ನಂಬಿ ಕತೆ ಕೊಟ್ಟು ಕೂತವರ ಪರಿಸ್ಥಿತಿ..?

Saturday, July 29, 2017


ಉತ್ಸಾಹವನ್ನೆಲ್ಲಿಂದ ಆಕೆ ಕಡ ತರುತ್ತಾಳೆ...?

ಸರಹೊತ್ತಿನಲ್ಲಿ ಹೆಂಡತಿ ಸತ್ತು ಹೋಗುವ ಗಂಡಸಿನ ಕತೆ ಮತ್ತೆರಡ್ಮೂರು ವರ್ಷದಲ್ಲೇ ಮುಗಿದು ಹೋಗುತ್ತದೆ. ಅದರಲ್ಲೂ ವಯಸ್ಸು ಮಾಗುತ್ತಿದ್ದರಂತೂ ಮಾರ್ಜಿನಲ್ ಬದುಕು ಅವನದು. ಅದೇ ಗಂಡ ನೆಗೆದು ಬಿದ್ದಾಗ ಸ್ವರ್ಗ ಕಿತ್ತು ಹೋಗುವಂತೆ ಭೋರಾಡುವ ಹೆಣ್ಣು ಅದರ ನಂತರವೂ ದಶಕಗಳ ಕಾಲ ಅದೇ ಸ್ವಾಸ್ಥ್ಯದಿಂದ ಬದುಕು ಕಟ್ಟಲು ಎದ್ದು ನಿಲ್ಲುತ್ತಾಳೆ. ಅದಕ್ಕೆ ವಯಸ್ಸಿನ ಹಂಗೇ ಇರುವುದಿಲ್ಲ. ಮತ್ತೂ ದಶಕಗಳ ಕಾಲ ಓಟ ಸಾಗುತ್ತಿರುತ್ತದೆ...ಅದ್ಯಾಕೆ ಗಂಡಸಿಗೆ ಬದುಕುವ ಛಲ ಅಥವಾ ಸ್ವಾಸ್ಥ್ಯ ಸತ್ತೇ ಹೋಗುತ್ತದೆ..? ಆಕೆ ಅದೆಲ್ಲಿಂದ ಬದುಕುವ ಉತ್ಸಾಹ ಕಡ ತರುತ್ತಾಳೆ..? ಗೊತ್ತಿಲ್ಲ. ಅದನ್ನಾಕೇಯೆ ಉತ್ತರಿಸಿಬೇಕು.. ಆದರೆ ಅದರ ನಂತರವೂ ಬದುಕಿಗೆ ಆಗತ್ಯದ ಅಹಾರ, ಮೈಥುನ ನಿದ್ರೆ ಎಂದು ಬೇಸಿಕ್ಕುಗಳನ್ನು ಪಾಂಗಿತವಾಗಿ ಪೂರೈಸಿಕೊಳ್ಳುವುದಿದೆಯಲ್ಲ ಅದು ಮಾತ್ರ ನಿಜಕ್ಕೂ ಜೀವವನ್ನು ಬದುಕಿಸಿಕೊಳ್ಳುವ ಪರಿಯಾ...? ನನಗೆ ಗೊತ್ತಿಲ್ಲ. ಅದರೆ ತೀರ ತಾನು ಹೆಣ್ಣು ಎಂದು ಬಯಸುವ ರಿಸರ್ವೇಶನ್ನಿಗೂ, ಅಗತ್ಯ ಬಿದ್ದಾಗ ಆ ಬೌಂಡರಿಯಾಚೆ ಬದುಕುವ ಹೆಣ್ಣಿಗೂ ಮಧ್ಯೆ ಒಂದು ಢಾಳಾದ ವ್ಯತ್ಯಾಸ ಇದ್ದೆ ಇದೆ ಮತ್ತು ಆ ಮುಖವಾಡದ ಅಗತ್ಯ ಇವತ್ತಿನ ದಿನಗಳಿಗಿಲ್ಲ ಎನ್ನುವುದೇ ಒಳಗೊಳಗೇ ಒಪ್ಪಿಕೊಳ್ಳುತ್ತಿರುವ ಪರಮ ಸತ್ಯವೂ ಹೌದಾ ಎನ್ನಿಸಿತ್ತು ಆಕೆಯ ಮಾತು ಕೇಳುತ್ತಿದ್ದರೆ.
ಕಾರಣ ನೈತಿಕತೆ ಎನ್ನುವುದನ್ನು ಕೇವಲ ಏಕಪಕ್ಷೀಯವಾಗಿಸುವ ಪುರುಷ, ಸಮಾಜ ಮತ್ತು ಅಗತ್ಯ ಬಿದ್ದಾಗ ಅದಕ್ಕೆ ತನ್ನ ಪರಮಶೀಲತೆಯನ್ನು ಢಾಳಾಗಿಸುವ ಆಕೆ ಇಬ್ಬರೂ ಪುರಸ್ಕರಿಸಿದಾಗಲೇ ಒಂದು ಸಮಾಗಮ ನಡೆದು ಹೋಗುತ್ತದೆ ಎನ್ನುವುದನ್ನು ಏಕೆ ಮರೆತುಬಿಡುತ್ತಾರೋ...? ನೆನಪಿರಲೇಬೇಕಲ್ಲವಾ ಎರಡೂ ಕೈ ಸೇರಿದಾಗಲೇ ಚಪ್ಪಾಳೆ ಎಂದು. ಅಗುವುದೆಲ್ಲಾ ಆದ ನಂತರ ನನ್ನ ಶೀಲ ಹೋಯಿತು, ನಾನು ಕಳೆದುಕೊಂಡದ್ದು ಯಾರು ಕೊಡುತ್ತಾರೆ..? ಅಯ್ಯೋ.. ಹುಂಯ್ಯೋ.. ನಾನು ನಂಬಿದ್ದು ಮೋಸವಾಗ್ತಿದೆ ಎಂದು ರಣಾರಂಪ ಮಾಡುತ್ತಿದ್ದರೆ, ಸಿಕ್ಕಿದಾಗೆಲ್ಲಾ ಅಲವತ್ತುಕೊಳ್ಳುತ್ತಿದ್ದರೆ ಅದಕ್ಕಿಂತ ದೊಡ್ಡ ಅಪಹಾಸ್ಯ ಇನ್ನೊಂದಿಲ್ಲ. ಅಂತಹದ್ದೊಂದು ಸಂಬಂಧ ಬೆಳೆದಿತಾದರೂ ಹೇಗೆ..? ಹಾಗೆ ನೋಡಿದರೆ ಅದು ಪುರುಷರಿಗೂ ಅಷ್ಟೆ ಅಪ್ಲಿಕೇಬಲ್ ಆಗುತ್ತೆ ಆದರೆ ಜನ್ಮತ: ತನಗೇನೂ ಆಗಿಲ್ಲ ಎಂಬಂತೆ ಬದುಕುವುದೇ ಪುರುಷತ್ವ ಎಂಬಂತಿರುವ ಗಂಡು ಪ್ರಾಣಿ(ಅನಿವಾರ್ಯ ಮತ್ತು ಅವಿಷ್ಕಾರ ರೂಪಿಯಾ.?)ಅದರಿಂದ ಸುಲಭಕ್ಕೆ ಹೊರಬಂದಿದ್ದಾನೆ ಎನ್ನಿಸಿದರೂ ಯಾವೊಂದು ಸೂತ್ರ ಇಬ್ಬರಿಗೂ ಅಪ್ಲಿಕೇಬಲ್ಲೇ ಅಲ್ವಾ..?
ನಾನು ಮಾತಾಡಲಿಲ್ಲ ಮಧ್ಯದಲ್ಲಿ. ಕಾರಣ ಇರುವುದನ್ನು ಇರುವಂತೆ ಅದರಲ್ಲೂ ಮರುತ್ತರಕ್ಕೆ ಅವಕಾಶ ಇಲ್ಲದಂತೆ ಸ್ಪಷ್ಟೀಕರಿಸುವ ಸ್ತ್ರೀಯರ ಎದುರಿಗೆ ವಿತಂಡವಾದಕ್ಕೆ ಇಳಿಯುವ ಅಗತ್ಯತೆ ಅವಶ್ಯಕತೆ ಎರಡೂ ಇರಿಸಿಕೊಳ್ಳಬಾರದು.
ಕಾರಣ ಮದುವೆ ಎನ್ನುವ ಸಂಭ್ರಮವೇ ಇವತ್ತು ಮೊದಲ ಮೂರು ವರ್ಷದಲ್ಲೇ ತನ್ನ ನಂಬಿಕೆ ಮತ್ತು ತಾನು ಅನ್ನಿಸಿಕೊಂಡ ಕನಸಿನ ಪ್ರಪಂಪಚವಲ್ಲ ಅಥವಾ ಮದುವೆಯ ನಂತರದ ಬದುಕು ಹೀಗೀಗಿರುತ್ತೆ ಎಂದುಕೊಂಡಂತಿಲ್ಲ ಎನ್ನುವ ನಗ್ನಸತ್ಯ ಅರಿವಾಗುತ್ತಿದ್ದರೆ ಅಯ್ಯೋ ನನಗೆ ಮೋಸ ಆಯಿತು ಎನ್ನುವ ಅವಕಾಶ ಅಥವಾ ಅಲ್ಲೂ ನನ್ನ ಶೀಲ ಹಾಳಾಯಿತು ಎಂದು ಬೊಬ್ಬೆ ಹೊಡೆವ, ಹೊಡೆದ ಹೆಂಗಸರಿದ್ದಾರಾ..? (ಹೆಚ್ಚಿನವು ಆರ್ಥಿಕ,ಕೌಟುಂಬಿಕ ಬೆಂಬಲ ಇರುವಲ್ಲಿ ಡೈವರ್ಸಿಗೆ ಹೋಗುತ್ತವೆ. ಅಲ್ಲೆಲ್ಲಾ ನನ್ನ ಶೀಲ ವಾಪಸ್ಸು ಕೊಡು ಎಂದು ಕಾಲುಚಾಚಿ ಕೂತ್ತಿದ್ದಿದೆಯಾ..?) ಬಾಯಿ ಮುಚ್ಚಿಕೊಂಡೊ, ಜಗಳ ಮಾಡಿಕೊಂಡೋ ಕೊನೆಗೆ ಯಾವುದೋ ಒಂದು ಪಾಯಿಂಟ್‍ನಲ್ಲಿ ಕಾಂಪ್ರಮೈಸಿಗೆ ಬದುಕು ಬಂದು ನಿಲ್ಲೋದಿಲ್ವಾ..? ಹಾಗಿದ್ದಾಗ ಹೀಗೊಂದು ನಂಬಿಕೆ ಮೂಡಿ ಒಂದು ಸಂಬಂಧ ಬೆಳೆದು ಇಬ್ಬರಲ್ಲೂ ಇಂಟಿಮಸಿ ಎನ್ನುವ ಬೌಂಡರಿ ಸಿPಕ್ಸರಿಗೇರಿದಾಗ ನಿಜಕ್ಕೂ ಆತ್ಮಸಾಂಗತ್ಯ ಒಡಮೂಡತೊಡಗುತ್ತಿರುತ್ತದೆ. ಹೇಗೆ ಇದ್ದರೂ ಎಲ್ಲೇ ಇದ್ದರೂ ಒಬ್ರಿಗೊಬ್ಬರು ಹತ್ತಾರು ದಿನದ ನಂತರವೂ ಸಂಪರ್ಕ ಇಟ್ಟುಕೊಂಡೆ ಬದುಕುವ ಹುಮ್ಮಸ್ಸು ಗುಪ್ತವಾಗಿ ಹನಿಯುತ್ತಿರುತ್ತದೆ. ಆದರೆ ಹೀಗೊಂದು ಸಂಬಂಧದಲ್ಲೆ ಚೆಂದವಾಗಿ ಬದುಕುತ್ತೇನೆ ಎಂದು ಹೊರಟುನಿಲ್ಲುವ, ಒಬ್ಬರ ತಲೆಯ ಮೇಲೊಬ್ಬರು ಹತ್ತಿ ಕೂರುವ ಸಂದರ್ಭ ಉಂಟಾಗಿಬಿಟ್ಟರೆ ದೇವರಾಣೆ ಮತ್ತಲ್ಲಿ ಚಿಗುರು ಕೊನರುವುದು ಕಡಿಮೆಯೇ. ಕಾರಣ ಸಂಬಂಧ ಎನ್ನೋದು ಇಂತಹ ನಂಬಿಕೆಯಲ್ಲಿ ಒಳಗೊಳಗೇ ಹನಿಸುವ ಚಿಗುರಾಗುತ್ತದೆಯೇ ವಿನ: ಅದಕ್ಕೊಂದು ಅಧಿಕೃತ ಅಥವಾ ತನಗೆ ಬೇಕಾದಂತೆ ಬದುಕುವ ಹೊರಾಂಗಣ ಲಭ್ಯವಿರುವುದೇ ಇಲ್ಲ. ಅದೇನಿದ್ದರೂ ಅವರವರ ಮಟ್ಟಿಗೆ ತುಂಬ ಪ್ರಿಯ ಸಂಗತಿ. ಆದರೆ ಎಷ್ಟೆ ಆತ್ಮೀಯರಿಗೆ ಅದೊಂದು ಸರಿಯಲ್ಲ ಎನ್ನುವ ವಿಷಯವೇ ಆಗುತ್ತದೆ ಹೊರತಾಗಿ ಅದರಿಂದ ಇನ್ನಾವ ಉತ್ಪನ್ನಗಳೂ ಹುಟ್ಟುವುದೇ ಇಲ್ಲ.
ಅಂತಹದರಲ್ಲಿ ನೀನು ಅದನ್ನು ಸಂಬಂಧ ಎನ್ನುತ್ತಿಯೋ, ಪ್ರೀತಿನೋ ಏನೋ ಒಂದಿರಲಿ. ಆದರೆ ಮದುವೆ ಅಂತಾಗಿ ಏನೆಲ್ಲಾ ಕನಸಿಸುವ ಮೊದಲೇ ಪ್ರತಿ ಪೈಸೆಗೂ, ಕೊನೆಗೆ ಪೇಪರ್ ಓದುವುದಕ್ಕೂ, ಎಲ್ಲಿಯಾದರೂ ಹೋಗುವುದಕ್ಕೂ, ಸ್ನೇಹಿತೆಯೊಂದಿಗೆ ಮಾತಾಡುವುದಕ್ಕೂ, ಯಾರದ್ದೋ ಮಿಸ್‍ಕಾಲ್ ಅಂದರೆ ಯಾರದ್ದು ಎನ್ನುವದಕ್ಕೆ ಜವಾಬು ಕೊಡುವ ಹೊತ್ತಿನಲ್ಲಾಗುವ ಸಣ್ಣ ಎಂಬ್ರಾಸಿಂಗು, ನನ್ನದೇ ಸ್ವಾತಂತ್ರ್ಯ ಇರಿಸಿಕೊಳ್ಳಲಾಗದ ದಾಂಪತ್ಯಗಳು, ಇಷ್ಟೆಲ್ಲಾ ಓದಿನ, ಜಗತ್ತು ಉದ್ಧಾರ ಮಾಡುತ್ತಿರುವ ಹೊಸ ಆಧುನಿಕ ಬದುಕಿನಲ್ಲೂ ನಡೆಯುತ್ತಿರುವಾಗ ನಾನು ಮತ್ತೊಮ್ಮೆ ಮದುವೆ ಎನ್ನುವ ಬಾಣಲೆಗೆ ಬೀಳಬೇಕಿತ್ತಾ..? ಇದ್ದಾರು ಅಂತಹ ಸೆಂಟಿಮೆಂಟುಗಳು. ಆದರೆ ಗೊತ್ತಿದ್ದೂ ಗೊತ್ತಿದ್ದೂ ಮತ್ತೆ ಅದನ್ನೇ ಮಾಡಿಕೊಳ್ಳುವವಳು ನಾನಲ್ಲ. ಇನ್ನು ಪುರುಷರು ಏನು ಬೇಕಾದರೂ ಮಾಡಿಕೊಂಡಿರುವಾಗ, ಅಂತಹದ್ದೊಂದಕ್ಕೆ ಯಾವ ಅಬ್ಜಕ್ಷನ್ನೂ ಇಲ್ಲದಿರುವಾಗ ನನ್ನ ವೈಯಕ್ತಿಕ ಸುಖ ದುಖ:ಗಳ ಪರಿಚಾರಿಕೆಯ ಉಸಾಬರಿ ಬೇಕಾ..? ಹೌದು ಅವನೊಂದಿಗೆ ನನಗೆ ಸ್ನೇಹವಿದೆ ವಿಶ್ವಾಸ ಇದೆ. ಆದರೆ ನನ್ನನ್ನು ಮಾತ್ರ ಕುಲಟೆ ಎಂಬಂತೆ ನೋಡುವ ಜನರಿಗೆ ಸಿಕ್ಕಿದರೆ ಒಂದು ಕೈ ನನಗೂ ಎನ್ನುವವರಿಗೇನೂ ಬರವಿಲ್ಲ ಮಾರಾಯ. ಅಲ್ಟಿಮೇಟ್ಲಿ ಹೆಚ್ಚಿನ ಮಾತಾಡುವ ಗಂಡಸು/ಹೆಂಗಸರ ಇಬ್ಬರದೂ ಅಂತರಾಳದ ವರ್ಷನ್ನು ಒಂದೇ. ಏನೆಂದರೆ ತಾವು ಬದುಕಲಾಗದ ಸ್ವಂತಂತ್ರ ಬದುಕಿನ ಫ್ಯಾಂಟಸ್ಸಿ ಬದುಕು ಆಕೆ ಕಟ್ಟಿಕೊಳ್ಳುತ್ತಿದ್ದಾಳೆ, ಬದುಕುತ್ತಿದ್ದಾಳೆ ಎನ್ನುವುದೆ ಇವರೆಲ್ಲರಿಗೆ ಪರಮಘಾತಕ ಅಷ್ಟೆ ಹೊರತಾಗಿ ಯಾರಿಗೂ ಮನಸ್ಸಿನಲ್ಲಿ ಆಸೆ ಗೂಡು ಕಟ್ಟಿಕೊಂಡಿಲ್ಲವೆಂದಲ್ಲ. ಅಷ್ಟೆ.."
ಆಕೆಯ ಬದುಕಿಗೆ ಆಕೆಯೇ ಜವಾಬುದಾರಳು. ತೀರ ಸ್ಪಷ್ಟ ನಡೆಯ ಶೋಭಳ ಸ್ಥಿತಿಗೆ ಡಿಬೇಟ್ ಮಾಡುವಂತಹದ್ದೇನೂ ಇರಲಿಲ್ಲ. ಆಕೆ ಮಾನಸಿಕವಾಗಿ ಅನುಭವಿಸಿರಬಹುದಾದ ಹಿಂಸೆ ಆಕೆಯ ಹೊರತು ಇನ್ನಾರಿಗೂ ಗೊತ್ತಾಗಲಿಕ್ಕೆ ಸಾಧ್ಯವಿಲ್ಲ. ಅವಕಾಶ ಸಿಕ್ಕಿದಾಗ ಸ್ವತಂತ್ರವಾಗಿ ಚೆಂದದ ಬದುಕು ಕಟ್ಟಿಕೊಳ್ಳುತ್ತಿರುವಾಗ ಅದನ್ನು ಆಡಿಕೊಳ್ಳುವ, ಕಮೆಂಟು ಮಾಡುವ ಹಕ್ಕಾದರೂ ನಮಗೆ ಎಲ್ಲಿರುತ್ತದೆ..? ಬೀದಿಗೆ ಬಂದ ಬದುಕಿಗೊ ಈಗ ಆಕೆ ಕಾಲೂರಿ ನಿಂತಿರುವ ಬದುಕಿಗೆ ಸ್ವತ: ರಿಸ್ಕು ತೆಗೆದುಕೊಂಡವಳನ್ನು ನಾವು ಯಾಕಾದರೂ ಆಡಿಕೊಳ್ಳಬೇಕು.
ಕಾರಣ ಶೋಭಾ ಅಂತಹದ್ದೊಂದು ಗಂಡನ ಮರಣದ ಆಕಸ್ಮಿಕದ ಪ್ರಪಾತದಿಂದೆದ್ದು ನಿಂತ ಪರಿಯಿದೆಯಲ್ಲ ಅದರ ಕತೆಯೇ ಬೇರೆ. ಸರಹೊತ್ತಿಗೆ ನೆಗೆದುಬಿದ್ದ ಗಂಡ, ಪೂರ್ತಿ ಸಾಲ ಮತ್ತು ಎದುರಿಗೆ ಮೈ ಚೆಲ್ಲಿಕೊಂಡು ಮಲಗಿದ್ದ ಖಾಲಿ ಬದುಕು ಎರಡನ್ನೂ ಪುಷ್ಕಳವಾಗಿಯೇ ಬಿಟ್ಟು ಹೋಗಿದ್ದ. ಆದರೆ ಅದಾವುದಕ್ಕೂ ಜಗ್ಗದೆ ಗೃಹಕೈಗಾರಿಯ ಅಂಗವಾಗಿ ಹಪ್ಪಳ ಸಂಡಿಗೆ ಪೂರೈಸುವುದಕ್ಕೆ ಕೈ ಹಾಕಿ ಗೆದ್ದಿದ್ದಳು. ಕೆಲಸಕ್ಕೂ ಪ್ರೀತಿಗೂ ಬಿದ್ದರೆ ಹೆಣ್ಣನ್ನು ಸಂಭಾಳಿಸುವುದು ಕಷ್ಟ ಎನ್ನುವುದಕ್ಕೆ ಆಕೆ ಉದಾ.ಯಾಗಿದ್ದಳು. ಬದುಕನ್ನು ನೋಡುನೋಡುವಷ್ಟರಲ್ಲಿ ಕಟ್ಟಿಕೊಂಡಿದ್ದ ಆಕೆ ಈಗ ಯಾರೊಂದಿಗೋ ಇದ್ದಾಳೆನ್ನುವುದನ್ನು ಆಕೆಯ ಸ್ಥಿತಿಗೆ ಜೊತೆಯಾಗದ ನಾವು ಆಡಿಕೊಳ್ಳಲು ಯೋಗ್ಯರಾ..?
ಅಸಲಿಗೆ ಇವತ್ತು ಅಫೇರು ಎನ್ನುವುದೋ ಅಥವಾ ಒಂದು ಸಾಂಗತ್ಯ ಎನ್ನುವುದನ್ನು ಹೆಚ್ಚಿನಂಶ ಪ್ರತಿಯೊಬ್ಬರು ಒಳಗೊಳಗೇ ಅಂಗಿಕರಿಸುವ ಆದರೆ ಎದುರಾ ಎದುರು ಬಂದಾಗ ಮಾತ್ರ ಮುಖವಾಡ ತೊಟ್ಟು ತಾವು ಸಭ್ಯಸ್ಥರಂತೆ ನಿಲ್ಲುವ ಮನಸ್ಥಿತಿಯವರಾಗಿರುವುದೇ ಪ್ರಸ್ತುತ ಸಮಾಜದ ಅತಿ ದೊಡ್ಡ ಹಾದರತನ. ಕಾರಣ ಬದಲಾಗುವ ಮತ್ತು ಬದಲಾಗಿದ್ದ ಪರಿಸ್ಥಿತ್ಯಲಿ ಆಕೆಯ ಜಾಗದಲ್ಲಿ ಇನ್ಯಾರಾದರೂ ಗಂಡಸಿದ್ದಿದ್ದರೆ ಇದ್ದ ಸಂಸಾರ ಆಚೆಗಿಟ್ಟು ಮೊದಲು ಇನ್ನೊಬ್ಬಳನ್ನು ಮದುವೆ ಅಗುವುದೋ ಇನ್ನೊಂದೊ ಮಾಡಿಕೊಳ್ಳುತ್ತಿದ್ದ ಮತ್ತು ಯಾರು ಹೇಗೆಲ್ಲಾ ಸಂಸಾರ ಸುಧಾರಿಸುತ್ತಾರೆ ಎನ್ನುವುದು ನಮ್ಮ ಕಣ್ಣುಗಳೆದುರಿಗೆ ಸಾವಿರ ಇದ್ದರೂ ತನಗೆ ತನ್ನ ಬದುಕಿಗೆ ಏನು ಬೇಕೋ ಅದನ್ನು ಮಾಡಿಕೊಂಡು ಮಕ್ಕಳನ್ನು, ಪರಿಸ್ಥಿಯನ್ನು ಸುಧಾರಿಸಿದ ಆಕೆಗೆ ಕಮೆಂಟು ಮಾಡಲು ನಾವ್ಯಾರು...? ಎಲ್ಲಾ ಅವರವರಿಗೆ ಹಾಸಿ ಹೊದೆಯುವಷ್ಟಿದ್ದರೂ ಪರರ ಚಾದರಿನೊಳಾಗೆ ಇಣುಕುವುದನ್ನು ಬಿಡದ ಕಾರಣವೆ ಬದುಕು ಕಾಲೊರೆಸುವ ಬಟ್ಟೆಯಾಗುತ್ತಿರುವುದು. ಇಲ್ಲದಿದ್ದರೆ ಇದನ್ನೆಲಾ ನಾನು ಪಿಸುನುಡಿಯುವ ಅಗತ್ಯವಾದರೂ ಏನಿರುತ್ತೆ..?

Sunday, July 16, 2017

ಸಾಂಗತ್ಯವಿಲ್ಲದ ಬದುಕಿಗೆ ಬಣ್ಣಗಳೆಲ್ಲಿಂದ ಬರಬೇಕು...?


 ಸರಿಯಾಗಿ ಮೂರೇ ವರ್ಷದ ಹಿಂದೆ ಗಂಡನೆಂಬ ಬಾಟಲಿಬಾಯ್‍ನನ್ನು ಕಳೆದುಕೊಂಡು ಕುರ್ಚಿ ತುದಿಗೆ ಪಿಳಿಪಿಳಿ ಮಾಡುತ್ತಾ ಕೂತಿದ್ದವಳು ಇವಳೇನಾ ಎನ್ನುವಂತೆ ಮಾತಾಡುತ್ತಿದ್ದಾಳೆ ಶೋಭಾ. ಆವತ್ತು ಗಂಡನೆಂಬ ಮನುಷ್ಯಾಕೃತಿಯಲ್ಲಿದ್ದ ಜೀವಂತ ಕೃತಿ ನೆಗೆದು ಬಿದ್ದಾಗ ಜಗತ್ತೇ ಆಕೆಯ ತಲೆ ಮೇಲೆ ಬಿದ್ದಿತ್ತು. ಇವತ್ತು ಆಕೆ ಒಂದು ಕಾಲು ಮೇಲೆತ್ತಿ ಯಾರ ತಲೆ ಮೇಲಿಡಲಿ ಎನ್ನುವಷ್ಟು ಗಟ್ಟಿಯಾಗಿದ್ದಾಳೆ. ಹೌದು ಇವತ್ತಿಗೂ ಮದುವೆ ಅಂತಾಗಿಬಿಟ್ಟರೆ ಆ ಗಂಡನೆಂಬುವನು ಹೇಗಿದ್ದರೂ ಅವನಿಗೆ ಗಂಡ ಎಂಬ ಪಟ್ಟದೊಂದಿಗೆ ಸಾವರಿಸಿಕೊಂಡು ಹೋಗುವ ಸಂಸಾರಗಳು ನಮ್ಮಲ್ಲಿ ಲೆಕ್ಕದ ಹೊರಗಿವೆ.

ಅದೇನೆ ಇರಲಿ ಮದುವೆ ಆಗಿದೆ ಮಕ್ಕಳೂ ಆಗಿವೆ ಅಂತಾದ ಮೇಲೆ ಸುಮ್ನೆ ತಿಂದಾದರೂ ಬಿದ್ದಿರಲಿ ಬಿಡು ಎನ್ನುವದಿದ್ದರೂ ಕೈಲಾಗದಂತೆ ಎನೇ ಮಾಡದೆ ಸುಮ್ಮನಿದ್ದರೂ, ಅಪೂಟು ಸೋಮಾರಿ ಎಲ್ಲವನ್ನೂ ಕೈಗೆ ಹಿಡಿಸಿಯೂ ಬುಡ ಮಾತ್ರ ಸ್ವಂತ ತೊಳೆದುಕೊಳ್ಳುವ ಕ್ಷಮತೆಯ, ಆಗೀಗ ಕುಡಿದು ಗಲಾಟೆ ಮಾಡುವವನಿದ್ದರೂ, ಸುಖಾಸುಮ್ಮನೆ ಬಡಿದೆದ್ದು ಹೋಗುವವನಿದ್ದರೂ, ಕೆಲವೊಮ್ಮೆ ನಾಪತ್ತೆ ಆಗಿ ಇನ್ಯಾವಾಗಲೋ ಪ್ರತ್ಯಕ್ಷನಾಗುವವನಿದ್ದರೂ, ಏಷ್ಟೊ ಸರಿ ಮನೆಯದೆ ದುಡ್ಡು ಕದ್ದು ಕೆಲವೊಮ್ಮೆ ಹೆಂಡತಿಯ ಹೆಸರು ಹೇಳಿ ಇದ್ದಬದ್ದವರಿಂದ ದುಡ್ಡು ದುಗ್ಗಾಣಿ ಎತ್ತಿಕೊಂಡು, ಸಂಬಂಧಿಕರ ಸ್ನೇಹಿತರ ಹತ್ತಿರ ಸಾಲ ಸೋಲ ಮಾಡಿಕೊಂಡು, ಯಾವ ದಂಧೆಯೂ ಬರಕತ್ತಾಗದೆ, ಮಾತೆತ್ತಿದ್ದರೆ ಅಟೋದವನು ಇವತ್ತು ಐದು ರೂಪಾಯ್ ಕಡಿಮೆ ಅಂದರೆ ಬರಲ್ಲ, ನಾನು ಯಾವ ಲೆಕ್ಕದಲ್ಲಿ ಕಮ್ಮಿ ಎಂಬ ಧಿಮಾಕಿಗೇನೂ ಕಮ್ಮಿ ಇರದ, ಅದರೆ ಎಂಟಾಣಿ ದುಡಿಯಲೊಲ್ಲದ ಅಪೂಟು ಸೋಮಾರಿ ಅದರೆ ಊರಿಗೆಲ್ಲಾ ಹಂಚುವಷ್ಟು ಸೊಕ್ಕಿನ ಮಾತುಗಳ ಮತ್ತು ಜಂಭದ ಹೀಗೆ ಹಲವು ತಗಾದೆಗಳ ಅಪಕ್ವ ಗಂಡಸು, ಗಂಡ ಅಂತಾದ ಮೇಲೆ ಇರಬಹುದಾದ ಎಲ್ಲಾ ರೂಪದಾಚೆಗೊ ಅವನು ಗಂಡನಾಗೆ ಇರುತ್ತಾನೆ.

ಅದರೆ ಅದೆಲ್ಲಾ ಉಸಾಬರಿ, ಜಗಳ, ಮುನಿಸು, ಕೋಪ, ಸರಸ, ಕುಡಿತ, ಬಡಿತ, ಇವಳದ್ದೂ ಇದ್ದೇ ಇರುವ ಕಿರಿಕ್ರಿರಿತನದ ಮಾತುಗಳು, ಅದಕ್ಕವನ ಮತ್ತೆ ಪಿಸಣಾರಿತನ, ಊರಿಗಿಲ್ಲದ ಬಿಂಕಕ್ಕೇನೂ ಕಡಿಮೆ ಇಲ್ಲದ, ಏನೂ ಮಾಡಲೊಲ್ಲನಾದರೂ ಯಾರಾದರೂ ಬಂದಾಗ ಅತ್ಯಂತ ಸುಭಗನಂತೆ ಮಾತಾಡಿ ಅಯ್ಯೋ ಇವರ ಯಜಮಾನ ಎಷ್ಟು ಆದರ ಸದರ ಮಾಡುತ್ತಾರೆ ಎನ್ನಿಸಿಕೊಳ್ಳುವ, ಮನೇಲಿ ಕಾಫಿ ಪುಡಿ ಇದಿಯಾ ಇಲ್ವಾ ನೋಡದೆ " ಏಯ್ ಇವಳೆ ನೆಸ್ ಕಫೆ ಮಾಡೆ " ಎಂದು ಕೂಗಿಕೊಂಡು ಆರ್ಡರ್ ಮಾಡುವ, ಅವರೊಂದಿಗೆ ತಾನೂ ಲಯಬದ್ಧವಾಗಿ ಕೂತು ವರಚ್ಚಾಗಿ ಕಾಫಿ ಹೀರುವ ಬಂದ ಅಭ್ಯಾಗತರು ಅದೇನು ಒಳ್ಳೆಯವರು ಎನ್ನಬೇಕು ಹಾಗೆ ನಾಜೂಕಿನ ಮಾತಾಡುವ, (ಈ ಯಜಮಾನ ಎನ್ನುವ ಪದ ಬಳಕೆಗೆ ನನ್ನ ವಿರೋಧವಿದೆ. ಗಂಡ ಗಂಡ ಅಷ್ಟೇ.. ಹೆಂಡತಿ ಕೂಡಾ ಹೆಂಡತಿ ಅಷ್ಟೆ. ಅದ್ಯಾಕೆ ಯಜಮಾನ ಯಜಮಾನತಿ ಆಗುತ್ತಾರೋ ಅದೇನು ಒಬ್ಬರಿಗೊಬ್ಬರು ದುಡ್ಡು ದುಗ್ಗಾಣಿ ಪೇಮೆಂಟು ಮಾಡುತ್ತಾರಾ..? ಇದು ನನ್ನ ವೈಯಕ್ತಿಕ ಮತ್ತು ನನಗೀಗಲೂ ಅರ್ಥವಾಗದ ವಿಷಯ) ಎಷ್ಟೂ ದುಡಿದರೂ ಒಯ್ದು ಗಡಂಗಿಗೂ ತನ್ನ ಸಿನೇಮಾಕ್ಕೂ ಖರ್ಚು ಮಾಡಿಕೊಂಡು ಉಳಿದದ್ದು ಮಾತ್ರ ದಾಕ್ಷಿಣ್ಯಕ್ಕೆ ಮನೆಗೆ ಖರ್ಚು ಮಾಡುವ ಹೀಗೆ ತರಹೇವಾರಿ ಗಂಡಸರು ಗಂಡ ಅಂತಾದ ಮೇಲೆ ಗಂಡನೇ ಆಗಿ ಹೋಗಿರುತ್ತಾನೆ ಹೊರತಾಗಿ ಬೇರಾವ ರೀತಿಯಲ್ಲೂ ಬದುಕಿನ ಅಂಗಳದಲ್ಲಿ ಬದಲಾಗುವುದೇ ಇಲ್ಲ. ಅದು ನಮ್ಮ ಅನುಭವದ ಜೀವನ ರೀತಿಯೋ ಇನ್ನೇನೋ ಒಟ್ಟಾರೆ ಹೆಣ್ಣು ಮಕ್ಕಳೂ ಅದನ್ನೂ ಹೆಚ್ಚು ಕಡಿಮೆ ಹಾಗೆಯೇ ಸ್ವೀಕರಿಸಿ ಬಿಟ್ಟಿರುತ್ತಾರೆ.

ಈಗಿನ ಹುಡುಗಿಯರನ್ನು ಈ ಕೆಟಗರಿಗೆ ನಾನು ಸೇರಿಸಿಲ್ಲ. ಕಾರಣ ಮದುವೆ ಆದ ಮೂರೇ ತಿಂಗಳಿಗೆ ಕಡ್ಡಿಹಿಡಿ ಎತ್ತಿಕೊಂಡು ನಿಲ್ಲುವ ಹುಡುಗಿಯರೂ ಈಗ ಸಹಜವಾಗಿದ್ದಾರೆ ಮತ್ತು ಬದುಕಿಗೆ ಅನುಭವಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವವರೂ ಇದ್ದಾರೆ. ಅದರೆ ಕೆಲವರು ಮಾತ್ರ ಈಗಲೂ ಮನಸ್ಸಿನ ಕೈಗೆ ವಾಸ್ತವವನ್ನು ಕೊಟ್ಟು, ಬಂದಂತೆ ಸ್ವೀಕರಿಸದೆ ಬದುಕು ತಾವಾಗೇ ಹಾಳು ಮಾಡಿಕೊಳ್ಳುವುದೂ ಇದೆ. ಹಾಗಾಗಿ ಶೋಭಾಳ ಎನ್ನುವ ಮಿಡ್ಲಕ್ಲಾಸ್ ಬದುಕಿನ ಗಂಡ ಗಂಡನಾಗಿದ್ದೂ ಹೊಸದೇನಿರಲಿಲ್ಲ. ಅದರೆ ಏನೆಲ್ಲಾ ಅಗದಿದ್ದವನು ಸತ್ತಾಗ ಮಾತ್ರ ಅಯ್ಯಯ್ಯೋ ಎನ್ನುವುದಿದೆಯಲ್ಲ ಅದು ಆ ಬಾಂಧವ್ಯವನ್ನು ತೋರಿಸುತ್ತಿತ್ತೇನೋ. ಆದರೆ ಆಕೆ ಅಷ್ಟೇ ಬೇಗ ಚೇತರಿಸಿಕೊಂಡು ಬದುಕು ಕಟ್ಟಿಕೊಂಡಿದ್ದಳು. ಜೊತೆಗೆ ಮಗಳು ಅಮ್ಮನ ಬಾಲಂಗೋಚಿ ಅಧ್ಬುತವಾಗಿ ಓದುತ್ತಾ, ದಿನದ ಉಳಿದ ಹೊತ್ತಲ್ಲಿ ಹಪ್ಪಳ ಒತ್ತುತ್ತಾಳೆ ಸಾಲುಸಾಲಾಗಿ. (ಅಂದಹಾಗೆ ಕೆಲವರು ನನ್ನೊಂದಿಗೆ ಇಂತಹ ಮನೆಯ ಕೆಲಸಗಳು ಈಗಲೂ ನಡೆಯುತ್ತವಾ ಎಂದು ಕೇಳಿದ್ದಿದೆ. ನಿಜ ಹೇಳ ಬೇಕೆಂದರೆ ಹೀಗೆ ಮನೆಯ ಹಪ್ಪಳ,ಉಪ್ಪಿನಕಾಯಿ, ಚಟ್ನಿಪುಡಿ ಮಾಡಲು ಎಷ್ಟು ಜನರಿದ್ದರೂ ಇವತ್ತು ಕಮ್ಮಿ ಎನ್ನುವ ಕನಿಷ್ಟ ಆರೆಂಟು ಸಂಸ್ಥೆಗಳು ನನಗೇ ಗೊತ್ತು. ಆದರೆ ಜನರಿಗೆ ಸುಲಭದ ದುಡ್ಡು ಮಾಡಬೇಕಿರುವುದರಿಂದ ಮತ್ತು ಸರಕಾರದ ಪುಕ್ಸಟ್ಟೆ ಅಕ್ಕಿ, ಎಣ್ಣೆ ಎಂದು ಸೋಮಾರಿಗಳಾಗಿಸಿದ ಫಲವಾಗಿ ಯಾವುದಕ್ಕೂ ಮೈಮುರಿಯಲು ಜನರಿವತ್ತು ತಯಾರಿಲ್ಲ. ಹೊರತಾಗಿ ಇಂತಹ ಹೋಮ್‍ಮೇಡ್‍ಗಳಿಗೆ ಅದ್ಯಾವ ಪರಿಯಲ್ಲಿ ಬೇಡಿಕೆ ಇದೆಯೆಂದರೆ ಸರಾಸರಿ ಸಾವಿರ ಕೂಲಿಗಳು ಪ್ರತಿ ದಿನದ ಉತ್ಪನ್ನಕ್ಕೆ ಇದ್ದರೂ ಸಾಕಾಗಲಿಕ್ಕಿಲ್ಲ)

ತೀವ್ರವಾಗಿ ಸಾಮಾಜಿಕ ಬದುಕಿನ ಶ್ರೀಮಂತಿಕೆ ಮತ್ತು ಬಡತನ ರೇಖೆ ದಪ್ಪವಾಗುತ್ತಲೆ ಸುಲಭಕ್ಕೆ ಜೀವನದಲ್ಲಿ ದುಡ್ಡು ಕೈಗೆ ಹತ್ತುವುದಿಲ್ಲ. ಅದೇನಿದ್ದರೂ ಇದ್ದಲ್ಲೇ ಬೆಳೆಯುವ ಸಂಭ್ರಮವೇ ಜಾಸ್ತಿ. ಹೀಗಿದ್ದಾಗ ಬಂದಿದ್ದರಲ್ಲಿ ಅರ್ಧ ಕುಡಿದೇ ಹಾಳು ಮಾಡುತ್ತೇನೆ ಎಂದು ನಿಂತ ಮನೆಯ ಯಜಮಾನನನ್ನು ನಂಬಿ ಉದ್ಧಾರವಾದ ಕುಟುಂಬಗಳಿಲ್ಲವೇ ಇಲ್ಲ ಎಂದರೂ ಸರಿನೇ. ಆವತ್ತು ಆಗಿದ್ದು ಕೂಡಾ ಹಾಗೇನೆ. ಕರೆಂಟು ಕಂಪೆನಿಯಲ್ಲಿ ಕೆಲಸಕ್ಕಿದ್ದಾನೆ ಎಂದು ಬಂದ ಸಂಬಂಧಕ್ಕೆ ಹುಡುಗಿಯನ್ನು ಕೊಡದಿರಲು ಯಾವ ಕಾರಣವೂ ಇರಲಿಲ್ಲ. ದುಡ್ಡು ಬರುತ್ತದಂತಾದರೆ ಕೋತಿಯೊಂದಿಗೂ ಮದುವೆ ಆಗೋಕೆ ರೆಡಿ ಇರುವ ಹುಡುಗಿಯರೂ, ದುಡ್ಡಿದ್ದರೆ ಸಾಕು ಸಂಸಾರ ಸಂಭ್ರಮದಲ್ಲಿರುತ್ತದೆ ಎಂದುಕೊಳ್ಳುವ ಪಾಲಕರದ್ದು ಈಗಲೂ ಕಮ್ಮಿ ಇಲ್ಲ. ಆಗಲೂ ಇರಲಿಲ್ಲ. ಹಾಗಾಗಿ ಶೋಭಾ ಏನೆಲ್ಲಾ ಘಟಿಸುವ ಹೊತ್ತಿಗೆ ಒಮ್ಮೆ ಕುಸಿದುಹೋಗಿದ್ದಳಾದರೂ ಗಂಡನೆನ್ನುವ ಪ್ರಾಣಿ ನೆಗೆದು ಬಿದ್ದ ಮೂರ್ನಾಲ್ಕು ವರ್ಷದಲ್ಲೇ ಎಲ್ಲಾ ವ್ಯವಸ್ಥಿತ ಮಾಡಿಕೊಳ್ಳುವ ಹೊತ್ತಿಗೆ ಹೊಸತೊಂದು ಸಂಬಂಧಕ್ಕೂ ಈಡಾಗಿದ್ದಳು. ಬದುಕು ಹೊಸ ದಾರಿ ಹೊಸ ತಿರುವು ತೆಗೆದುಕೊಂಡಿತ್ತು.

"...ಅಯ್ಯೋ ಹೀಗಾಯ್ತಲ್ಲ ಎನ್ನುವುದಕ್ಕಿಂತ ಬದುಕು ಒಂಥರಾ ಬದಲಾಗಿದೆ, ನಾನೂ ಹೊಸದಾಗಿ ಎಲ್ಲವನ್ನೂ ಅರಂಭಿಸಿದರೂ ಚಾಲೆಂಜಿಂಗ್ ಆಗಿ ಎದುರಿಸಿದ್ದೇನೆ.. ಹಾಗೆ ಅವನೊಂದಿಗೇ ಇದ್ದರೆ ಯಾವತ್ತೂ ಯಾವ ಬದುಕಿಗೂ ಹೊಸ ಧಡಾಪಡಿಗೂ ತೆರೆದುಕೊಳ್ತಾನೆ ಇರಲಿಲ್ವೇನೋ. ಅದೊಂಥರಾ ಗೊತ್ತಿದ್ದೂ ಉಸಿರು ಗಟ್ಟಿದಂಗಿರ್ತದೆ. ಜನ  ಎನಂದುಕೊಳ್ತಾರೆ ಬಿಟ್ಟಾಕು. ಆದರೆ ನಾನು ಯಾರ ಜೊತೆಗೋ ರಿಲೇಶನ್‍ನಲ್ಲಿದ್ದೇನೆ ಅನ್ನೋದು ಉಳಿದವರಿಗೆ ಏನೋ ಅನ್ನಿಸಬಹುದು ಅದರೆ.." ಎಂದು ಮಾತು ನಿಲ್ಲಿಸಿದವಳ ಕತೆ ಮುಂದಿನ ವಾರಕ್ಕಿರಲಿ. ಶೋಭಾ ಹೇಳಿದುದರಲ್ಲಿ ಎರಡು ಮಾತಿರಲಿಲ್ಲ. ಅಷ್ಟಕ್ಕೂ ಸಾಂಗತ್ಯವಿಲ್ಲದ ಬದುಕಿನಲ್ಲಿ ಬಣ್ಣಗಳ ವಿಜೃಂಭಣೆಯಾದರೂ ಎಲ್ಲಿಂದ ಬಂದೀತು..? ಬದುಕಿಗೆ ಒಲವಿಲ್ಲದೆ, ಪ್ರೇಮ, ಕಾಮವಿಲ್ಲದೆರಂಗಿನ ಹರವು ರೂಪ ಪಡೆಯುವುದಾದರೂ ಹೇಗೆ..? ಉಳಿದದ್ದು ಮುಂದಿನ ವಾರಕ್ಕೆ..