Sunday, November 8, 2015

ಏರುವ ಮೆಟ್ಟಿಲ ಮರೆತ ಘಳಿಗೆಯಲಿ...

ನಾ ಲ್ಕಾರು ವರ್ಷಗಳ ಹಿಂದೆ, ತೀರಾ ವೈಯಕ್ತಿಕ ಹಂತದ ಚರ್ಚೆಯ ಕೌನ್ಸಿಲಿಂಗ್‌ಗಾಗಿ ತಂಡದ ಹಿರಿಯ ಸದಸ್ಯೆ ವಿಮಲಾ ಅರ್ಗಾ ಆಕೆಯನ್ನು ಕಳಿಸಿದ್ದರು. ‘ನೋಡಪಾ ಸ್ವಲ್ಪ ಪರ್ಸನಲ್ ಪ್ರಾಬ್ಲಂ ಇದ್ದಂಗಿದೆ. ಮಾತಾಡ್ಸು’ ಎಂದಿದ್ದರು. ನೋಡಿದರೆ ಒಂದಿಷ್ಟು ಈ ಮೊದಲೇ ಪರಿಚಯವಿದ್ದ ವನಜಳ ಕೇಸು ಅದು. ಸಂಸಾರ ಅಂತಾ ಒಂದೆರಡು ವರ್ಷ ಅವನ ಜೊತೆಗಿದ್ದೀನಿ, ಹಾಗಂತ ಆಕೆ ಹೇಳಿಕೊಳ್ಳುತ್ತ ಎರಡು ವರ್ಷದಿಂದ ಎಲ್ಲ ಬಿಟ್ಟು ಅಪ್ಪನ ಮನೆಯಲ್ಲೇ ಉಳಿದಿದ್ದು ಈಗ ಕಾನೂನು ಪ್ರಕಾರ ನೋಟಿಸ್ ಬಂದಿದ್ದರಿಂದ ಡಿವೋರ್ಸ್‌ಗಾಗಿ ಓಡಾಡುತ್ತಿದ್ದಾಳೆ.ಅಸಲಿಗೆ ಪ್ರತಿ ಹೆಂಗಸರೂ ಎಲ್ಲೋ ಒಂದು ಕಡೆಯಲ್ಲಿ ಕಿರಿಕ್‌ಗಳಿಗೆ ಈಡಾದವರೆ. ಇದು ಸಾಮಾನ್ಯವಾಗಿ ಎದ್ದು ಕಾಣುವ ಅಂಶ. ಕೊಂಚ ಹೈಪ್ರೊ-ಲ್ ಕೇಸುಗಳಾದರೆ ಆಸ್ತಿಗಾಗಿ ಜೀವಮಾನದ ಸುರಕ್ಷತೆ, ಮಕ್ಕಳ ನಿರ್ವಹಣೆ ಹೆಸರಿನಲ್ಲಿ ಸಿಕ್ಕಷ್ಟು ಗುಂಜಿಕೊಳ್ಳೋಣ ಎನ್ನುವ ಜಟಾಪಟಿ ಸಹಜ. ಆದರಿಲ್ಲಿ ಅಂಥ ಯಾವ ಸಂಗತಿಯೂ ಇರಲಿಲ್ಲ.
ಗಂಡನೆಂಬ ಜೋಭದ್ರನ ಜೊತೆ ಎರಡು ವರ್ಷಕಾಲ ಮಲಗಿದ್ದು (ಹಾಗಂತ ಆಕೆಯ ನಿಲುವು) ಬಿಟ್ಟರೆ ಇನ್ನೇನೂ ಇರಲಿಲ್ಲ. ತಕ್ಷಣಕ್ಕೆ ಬೋರಲು ಹಿಡಿದು ಮಾಡಿ ಕುಲುಕಿದರೆ ಅವನಿಂದ ಎಂಟಾಣೆ ಉದುರುವುದೂ ಸಾಧ್ಯವಿರಲಿಲ್ಲ. ಅಸ್ತಿಪಾಸ್ತಿಯ ಬಡಿದಾಟ ಎಲ್ಲಿಯದು..? ಸುಲಭವಾಗಿ ಇಬ್ಬರೂ ಸಂಬಂಧ ಕಿತ್ತುಕೊಂಡರು. ಅಂತೂ ಬಿಡುಗಡೆ ಸಿಕ್ಕಿ ಆಕೆ ಹೊರಬಿದ್ದು ಹೋಗಿದ್ದಳು. ಪವಾಡದಂತೆ ಬದುಕಲ್ಲೂ ಕೆಲವೊಮ್ಮೆ ಅನಿರೀಕ್ಷಿತಗಳು ನಡೆದುಬಿಡುತ್ತವೆ. ಡಿವೋರ್ಸಾದ ಹುಡುಗಿಗೆ ಸರ್ಕಾರಿ ನೌಕರಿಯೂ ಸಿಕ್ಕುಬಿಟ್ಟಿದೆ. ಚಿಕ್ಕ ಸಂಬಳದ್ದಾದರೂ ಕಾಯಂ ನೌಕರಿ ಬದುಕಿನ ಬಗ್ಗೆ ಇನ್ನಿಲ್ಲದ ಭರವಸೆ ನೀಡಿದೆ.ಹೆಚ್ಚಿನಂಶ ಎಡವಟ್ಟುಗಳು ನಡೆಯುವುದೇ ಈ ಹಂತದಲ್ಲಿ. ಕಾರಣ ಬದುಕು ಹಸನಾದ ಸಂಭ್ರಮಕ್ಕೆ ಮನಸ್ಸು ಮತ್ತೆ ಚಿಗಿತುಕೊಂಡಿರುತ್ತದೆ. ಹಳೆಯ ಗಾಯ ವಾಸಿಯಾಗುತ್ತಿದ್ದಂತೆ ಹೊಸ ಕೆರೆತಕ್ಕೆ ಹಾತೊರೆದಿದ್ದಳು. ಹುಡುಗಿ ಅನ್ಯಕೋಮಿನವನೊಂದಿಗೆ ಸಾಂಗತ್ಯಕ್ಕೆ ಬಿದ್ದಿದ್ದಳು. ಮತ್ತೆ ಮದುವೆ ಇತ್ಯಾದಿ ರಗಳೆಯೇ ಬೇಡವೆಂದು ಗೌಪ್ಯ ಸಂಸಾರಕ್ಕೆ ಕೈಹೂಡಿದ್ದಳು. ಅದಕ್ಕಾಗಿ ಮನೆಗೆ ಬರುತ್ತಿದ್ದ ಅಪ್ಪ, ಅಮ್ಮನನ್ನೂ ದೂರಮಾಡಿದ್ದಳು.
ಒಂಟಿಯಾಗಿ ಗೂಡು ಮಾಡಿಕೊಂಡು ದಿನವಿಡೀ ಮೈಮರೆತು ಅವನೊಂದಿಗೆ ಸ್ಪೈಸಿ ಬದುಕಿಗೆ ಹಾತೊರೆದು ಸುತ್ತತೊಡಗಿದ್ದಳು. ಆದರೆ ಇಂಥವು ತುಂಬ ದಿನ ಬಾಳುವುದಿಲ್ಲ. ಇಬ್ಬರ ಮಧ್ಯೆ ಮನಸ್ಸು ಮುರಿದು, ಸಂಬಂಧ ಕಡಿದುಕೊಳ್ಳಲು ಸ್ನೇಹಿತರನ್ನು ಕಟ್ಟಿಕೊಂಡು ನನ್ನ ಮೇಲೆ ಒತ್ತಡ ತಂದಿಟ್ಟಿದ್ದಳು. ಏನಾದರೂ ಮಾಡು ಮಾರಾಯಾ ಎಂದು ಉಳಿದವರೂ ಕೋರಸ್ಸಾದಾಗ, ವನಜಾಳ ಕೆಟ್ಟ ಪರಿಸ್ಥಿತಿ ಅರಿವಿಗೆ ಬಂದಿದ್ದು. ಆಗಿದ್ದಿಷ್ಟು...ಹೊಸ ಸಂಗಾತಿ ಯಾವ ಮುಲಾಜು ಇಲ್ಲದೆ ಬಳಸಿಕೊಂಡಿದ್ದಾನೆ. ದಿನವೂ ಅವನ ಬುಲ್ಲೆಟ್ಟು ಹತ್ತಿ ಗಲ್ಲಿಗಳನ್ನೂ ಸುತ್ತಿದ್ದಾಳೆ. ಕೊಂಚ ಸಲುಗೆಯಾದರೂ ಸಾಕು ಸ್ನೇಹಿತರು ಸೊಂಟಕ್ಕೆ ಕೈಹೂಡಿ ಓಡಾಡುವಷ್ಟು ಸಲುಗೆ ಕೊಡುತ್ತಾಳೆ.
ತಾನೇ ಮೇಲೆ ಬಿದ್ದು ಹುಡುಗರ ಬಗಲಿಗೆ ಕೈಯಿಕ್ಕಿ ಓಡಾಡುವುದು ಆಕೆಯ ಸೋಷಿಯಲ್ ವರಸೆ. ಅದಕ್ಕಾಗೇ ಹುಡುಗರು ಅವಳನ್ನು ಸುತ್ತಿಸುತ್ತಾರೆ. ಅದವನಿಗೆ ಪಚನವಾಗಲಿಲ್ಲವೋ, ಆಕೆಗೆ ಸಾಕೆನ್ನಿಸಿತ್ತೋ ಒಟ್ಟಾರೆ ಕಳಚಿಕೊಳ್ಳಲೆತ್ನಿಸುವಾಗ ಅವನು ಮೂಗುದಾರ ಹಿಡಿದ. ಮೇಜವಾನಿಗಾಗಿ ಮದುವೇನೂ ಆಗುತ್ತೀನಿ ಎಂದು ಭೋಂಗುಬಿಟ್ಟ.ಆಕೆಯೊಂದಿಗಿನ ಅಪ್ಪಟ ತಡರಾತ್ರಿಯ ಚಿತ್ರಗಳನ್ನಿಟ್ಟು ಬೆದರಿಸಿದ್ದಾನೆ. ಇಬ್ಬರೂ ಮೈಮರೆತಾಗಿನ ತೀರಾ ಖಾಸಗಿ ಕ್ಷಣಗಳ ಚಿತ್ರಣ ಇಂಥ ಸಮಯದಲ್ಲಿ ಉಪಯೋಗಿಸಲೆತ್ನಿಸಿದ್ದಾನೆ. ಹೆಂಗಸರ ಮಾಮೂಲಿನ ವರಸೆಯಂತೆ ಆಕೆ ಅಳುಮುಖ ಮಾಡಿ ನಿಂತಿದ್ದಾಳೆ, ಎಲ್ಲ ಮುಗಿಸಿಕೊಂಡು. ನೌಕರಿಯ ಆಸರೆ ಹೊರತುಪಡಿಸಿದರೆ, ಮನೆಯವರನ್ನೂ ಆಗಲೇ ದೂರಮಾಡಿಕೊಂಡಿದ್ದರಿಂದ ಆಕೆಯೊಂದಿಗೆ ನಿಲ್ಲುವರಾರೂ ಇಲ್ಲ. ಅನಧಿಕೃತವಾಗಿ ಕೇಸು ಮುಗಿಸಬೇಕಿತ್ತು. ತಡರಾತ್ರಿ ಅವನನ್ನು ಕರೆತಂದು ಎದುರಿಗೆ ಕುಳ್ಳಿರಿಸಿಕೊಂಡು ‘ಏನಪ್ಪಾ ಏನು ವಿಷಯ’ ಎನ್ನುತ್ತಿದ್ದಂತೆ ನಮಗೆಲ್ಲ ಅಶ್ಚರ್ಯವಾಗುವಂತೆ ಸಿ.ಡಿ.ಗಳನ್ನೂ, ಪೆನ್‌ಡ್ರೈವ್‌ನ್ನು ಎದುರಿಗಿಟ್ಟು ಕೇಸು ನಿಕಾಲಿ ಮಾಡಿಕೊಳ್ಳುವ ಮಾತಿಗಿಳಿದಿದ್ದಾನೆ.
ತನ್ನಿಂದ ಆಕೆ ಎತ್ತಿಕೊಂಡಿರುವ ಬುಲೆಟ್ಟು, ಜಾಕೆಟ್ಟು, ಹೆಲ್ಮೆಟ್ಟು ವಾಪಸ್ ಕೊಡಿಸಿ ಎನ್ನುವ ಪಂಚಾಯ್ತಿಕೆ ಆರಂಭವಾಗುತ್ತಿದ್ದಂತೆ ಎದ್ದು ಈಚೆಗೆ ಬಂದಿದ್ದೆ. ಕಾರಣ ಜೊತೆಗಿದ್ದಾಗ ಅನುಭವಿಸುವ ಮುದ ಮತ್ತು ಇಳಿದ ಮದ ಎರಡರಲ್ಲೂ ತಮ್ಮದೆನ್ನುವ ಪಾಲುದಾರಿಕೆಗೆ ಇಳಿಯುವ ಹೇಯ ಮನಸ್ಥಿತಿ ಹೊಲಸು ಹೇಸಿಗೆ. ಅದೇನೇನು ಹಣಕಾಸಿನ ವ್ಯವಹಾರಗಳಿದ್ದವೋ ಅದನ್ನೆಲ್ಲ ಒಂದು ಹಂತಕ್ಕೆ ಪೂರೈಸಿಕೊಂಡ ವನಜಾ ನಿರುಮ್ಮಳವಾಗಿ, ‘ನೀನು ಇದ್ದಿ ಅಂತಾ ಎಲ್ಲ ಸೆಟ್ಲಾಯಿತು. ಎಷ್ಟು ಟೆನ್ಷನ್ ಆಗಿತ್ತು. ಅದೆಂಗೆ ನಾನು ಅವನನ್ನ ಮದುವೆ ಆಗ್ತಿನಿ ಅಂತ ಅವ್ನು ಅನ್ಕೊಂಡ..’ ಎನ್ನುವ ಸಮಜಾಯಿಷಿಗಿಳಿದಾಗ‘ನೋಡು, ಮಲಗುವಾಗ ಇರದ ಜಾತಿ, ಧರ್ಮ ಬೇರಾದಾಗ ಪ್ರತಿಯೊಂದರಲ್ಲೂ ಹುಳುಕು ಕಾಣಿಸೋದು ಮನುಷ್ಯನ ನೀಚ ನಡವಳಿಕೆ ವಿನಾ ಬೇರೇನಲ್ಲ. ಅನಧಿಕೃತ ಸಂಬಂಧ ಇರಿಸಿಕೊಂಡೂ, ಇದೇ ಕಾಯಂ ಜೀವನ ಎನ್ನುವಂತೆ ಬೇಕಾದ್ದಕ್ಕೆಲ್ಲ ಪೋಸು ಕೊಟ್ಟಿದ್ದೀಯಲ್ಲ ನಾಲ್ಕಾರು ಜನ ಹುಡುಗರನ್ನು ಕಟ್ಟಿಕೊಂಡು ಅವನು ತಿರುಗಿ ಬಿದ್ದಿದ್ರೆ? ನಿನ್ನ ಪುಣ್ಯ. ಅಷ್ಟಕ್ಕೆ ಮುಗಿಸಿದ. ಏನು ಸುಖಾ ಸುರಕೊಂಡರೂ ಪರವಾಗಿಲ್ಲ, ಈ ರಗಳೆಗಳ್ಯಾಕೆ ಗೊತ್ತಾಗಲ್ಲ. ಕುತೂಹಲ ಮನುಷ್ಯನ ಸಹಜತೆ. ಆದರೆ ಅಲ್ಲಲ್ಲೇ ಸಾಕ್ಷಿಯಾಗುಳಿಸುವ ಹುಂಬತನ ನಿಮ್ಮ ಮುಠ್ಠಾಳತನಕ್ಕೆ ಸಾಕ್ಷಿ.
ಸಮಜಾಯಿಷಿ ಬೇಡ. ಗಂಡಸರು ಎಷ್ಟು ಜನ ಬೇಕಾದರೂ ಸಿಕ್ಕಿಯಾರು. ಆದರೆ ಒಮ್ಮೆ ಅಮ್ಮ ಕಳೆದುಹೋದರೆ ಮತ್ಯಾವತ್ತೂ ಬರಲ್ಲ. ಅಷ್ಟಕ್ಕೂ ಅಮ್ಮನ ಮಹತ್ವ ಗೊತ್ತಾಗೋದೆ ಕಳಕೊಂಡ ಮೇಲೆ. ನನಗಿಂತ ಬೇರೆ ಅನುಭವ ಅದಕ್ಕೆ ಬೇಕಿಲ್ಲ. ಅಮ್ಮನ್ನ ಕರಕೊಂಡು ಬಂದು ನನಗೆ ಕಾಲ್ ಮಾಡು’ ಎಂದು ಗದರಿಸಿದೆ. ಎಷ್ಟು ಆಕೆಗೆ ಪಥ್ಯವಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಮತ್ತೆ ಇಂಥದನ್ನು ಮೈಗೆ ಅಂಟಿಸಿಕೊಳ್ಳದಂತೆ ಹುಡುಗರನ್ನೂ ಗದರಿದ್ದೆ. ಇದಾಗಿ ವರ್ಷವೊಂದು ಕಳೆದಿರಬೇಕು. ‘ಸರ್ ಫ್ರೀ ಇದ್ರೆ ಭೇಟಿಯಾಗ್ಬೇಕು..’ ದನಿ ಗುರುತಿಗೆ ನಿಲುಕಲಿಲ್ಲ. ಅವನೇ ವನಜಾಳೊಟ್ಟಿಗೆ ವರ್ಷಗಟ್ಟಲೆ ಓಡಾಡಿದ್ದವ. ಸದ್ಯಕ್ಕಿಲ್ಲ ಎಂದೇನಾದರೂ ಬಂದು ಎದುರಿಗೆ ಕೂತಾಗ ಎದ್ದುನಡಿ ಅನ್ನಲಾಗಲಿಲ್ಲ. ‘ಸಾರ್.. ನಿಮಗೂ ಗೊತ್ತಿರುತ್ತೆ. ಆವತ್ತು ವನಜಂದು ಸಿ.ಡಿ.ಕೊಟ್ನಲ್ಲ ಅದರ ಕಾಪಿ ನನ್ನ ಹತ್ತಿರ ಇಟ್ಕೊಂಡಿರಲ್ಲ ಅಂತಹೆಂಗೆ ಭಾವಿಸಿದ್ರಿ.?’ ಎಂದ. ‘ಇಲ್ಲ ನೀನು ಪೂರ್ತಿ ಡಿಲೀಟ್ ಮಾಡಿರಲ್ಲ ಅಂತ ಗೊತ್ತಿತ್ತು. ಆದರೆ ಅನವಶ್ಯಕ ತಡವಿಕೊಳ್ಳಲಿಕ್ಕಿಲ್ಲ ಅಂತಾ ಕಾನಿಡೆನ್ಸು.
ಈವಾಗೇನು?’ ಎಂದೆ. ‘ಸರ್ ಜಗಳಕ್ಕೇನೂ ಬಂದಿಲ್ಲ. ಆವತ್ತು ನೀವು ವನಜಾಂಗೆ ಸಪೋರ್ಟ್ ಮಾಡಿದ್ರಿ. ಈಗ ಎಲ್ಲಿದಾಳೆ ಗೊತ್ತೆ?’ ಎಂದ. ಮತ್ಯಾಕೆ ಕೇಸು ಕೆದರುತ್ತಿದ್ದಾನೆ ಎನ್ನಿಸುತ್ತಿದ್ದಂತೆ,‘ನೀವೇನೋ ಆವತ್ತಿಗೆ ನನ್ನನ್ನು ಕೂರಿಸಿಕೊಂಡು ತಾಕೀತು ಮಾಡಿದ್ರಿ. ಅಸಲಿಗೆ ನನಗೂ ಒತ್ತಾಯದ ಸಂಬಂಧ ಬೇಕಿರಲಿಲ್ಲ. ಸಂಬಂಧದಲ್ಲಿ ಚೆನ್ನಾಗಿರು, ಮೋಸ ಮಾಡ್ಬೇಡ ಅಂತಾ ಹೇಳ್ತಿದ್ದೆ. ಹಾದರತನವಾದ್ರೂ ಕನಿಷ್ಠ ನಿಯತ್ತಿರಬೇಕು ಸರ್. ಅದಾಕೆಗೆ ಇರ್ಲಿಲ್ಲ. ವರ್ಷಕ್ಕೊಬ್ಬೊಬ್ಬ ಗಂಡಸರನ್ನು ಬದಲಾಯಿಸ್ತಾಳೆ. ಅದನ್ನು ಬಯಲಿಗೆಳೆಯೋಕೆ ಅಂತಾನೆ ಮದುವೇನೂ ಆಗ್ತೀನಿ ಅಂದೆ. ದಿನಾ ಸಂಜೆ ಬುಲೆಟ್ ಮೇಲೆ ಕರ್ಕೊಂಡು ಕಂಡಲ್ಲೆಲ್ಲ ಸ್ಪೈಸಿ ತಿನ್ನಿಸೋಕೆ, ಖರ್ಚಿಗೆ ಸಾಮಾನು ಕೊಡಿಸೋಕೆ, ಪಬ್ಲಿಕ್ನಲ್ಲಿ ಕೈಹಿಡ್ಕೊಂಡಿರೋಕೆ ಒಬ್ಬಾತನ್ನ ಇಟ್ಕೊಳ್ಳೊ ಖಯಾಲಿ ಹೆಂಗಸು ಆಕೆ. ಸುಖ, ಚಟ ಎರಡಕ್ಕೂ ಆಯ್ತು. ನಂದು ತಪ್ಪಿದ್ರೆ ಮೆಟ್ಟಲ್ಲಿ ಹೊಡಿರಿ. ಆದರೆ ಅವಳೇನೂಂತ ನೀವೆ ಕೇಳಿ ನೋಡಿ’ ಅಂದ. ಅವನ ಕಣ್ಣಲ್ಲಿನ ನಿಜಾಯಿತಿಗೆ ಒಂದರೆಕ್ಷಣ ಹಿಮ್ಮೆಟ್ಟಿದೆ. ತಕ್ಷಣ ವನಜಗೆ ರಿಂಗಿಸಿದೆ.‘ಎಲ್ಲಿದ್ದೀಯಾ? ಯಾರಿದ್ದಾರೆ ಜೊತೆಗೆ?’ ಎನ್ನುತ್ತಿದ್ದಂತೆ ತಡವರಿಸುತ್ತಿದ್ದವಳಿಗೆ, ‘...ನ ಜೊತೆಲಿರೋದು ನಿಜಾನಾ?’ ಅಂದೆ. ಅಷ್ಟೆ, ಸಂಪರ್ಕ ಕಡಿದು ಬಿತ್ತು. ಮತ್ತೆರಡು ದಿನದಲ್ಲಿ ಆಕೆಯ ಹೊಸ ಸಂಸಾರದ ಕತೆ.
ಒಂದೇ ವರ್ಷದಲ್ಲಿ ಮೂರನೆಯವನ ಜೊತೆ.‘ಸರ್.. ಗಂಡಸರು ಯಾಮಾರಿಸಿದರೆ ಎಲ್ಲರೂ ತಿರುಗಿ ಬೀಳೊರೇ. ಆದರೆ ಹೆಚ್ಚಿನಂಶ ಹೆಂಗಸರೆ ಕಿರಿಕ್ ಮಾಡ್ಕೊಂಡಿರ್ತಾರೆ. ಇವತ್ತಿಗೂ ಪಾಪ ಅಂತಾ ಹಿಂದೆ ಬೀಳೋರು ಗಂಡಸರೇ ಗಮನಿಸಿ ಸರ್. ಹೆಂಗ್ಸು ಒಂದೇ ದಿವಸದಲ್ಲಿ ಬೇಕಿದ್ರೂ ಪಲ್ಟಿ.. ಆದರೆ ಗಂಡಸರು ಹಂಗೆ ತಿರುಗಿ ಬಿದ್ದಿದ್ದು ಇದ್ಯಾ? ಒದೆ ಬೀಳ್ತಾವೆ ಅಷ್ಟೆ. ಇನ್ನೊಮ್ಮೆ ಯಾರನ್ನಾದರೂ ಎತ್ತಾಕ್ಕೊಂಡು ಬರೋ ಮೊದ್ಲು ಯೋಚನೆ ಮಾಡಿ ಸರ್. ನಾನು ಈ ಚಿತ್ರ ಎಲ್ಲ ಅಪ್‌ಲೋಡ್ ಮಾಡಿದ್ದಿದ್ರೆ..?’ ಎಂದವನ ಮುಖ ಎದುರಿಸಲಾಗಲಿಲ್ಲ. ಪೇಲವವಾಗಿ ಕಾಫಿ ಎಂದೆ. ಸುಮ್ಮನೆ ಪ್ಯಾಕೆಟ್ ಕೊಟ್ಟು ಎದ್ದುಹೋದ. ಇವಳಿತ್ತ ಬೆಂಗಳೂರಿನ ಸಂಜೆಗಳಿಗೆ ವರ್ಷಕ್ಕೊಬ್ಬ ಗಂಡಸಿನೊಡನೆ ರಂಗೇರುತ್ತಿದ್ದಾಳೆ. ಅತ್ತ ಇದೇನೂ ಗೊತ್ತಿಲ್ಲದೆ, ‘ಮಗಳು ತುಂಬ ಕಷ್ಟಪಡುತ್ತಿದ್ದಾಳೆ, ಪಾಪ ಒಬ್ಬಳೇ ಏನು ಮಾಡಿಕೊಂಡಿದ್ದಾಳೊ..’ ಎಂದು ಕನವರಿಸುತ್ತ ಮೈಸೂರು ಹೆದ್ದಾರಿಯ ಪುಟ್ಟ ಕೋಣೆಯಲ್ಲಿ, ಇವತ್ತಲ್ಲ ನಾಳೆ ಕರೆದೊಯ್ದಾಳು ಎಂದು ಕಾಯುತ್ತಿರುವ ಅಮ್ಮ ಕೂತೆ ಇದ್ದಾಳೆ. ಅವಳಿಗೆ ತಿಳಿಸಿದರೂ ಈ ವಯಸ್ಸಿನಲ್ಲಿ ಆ ಜೀವ ಇನ್ನಷ್ಟು ನೊಂದುಕೊಳ್ಳುತ್ತದೆ ಹೊರತಾಗಿ ಮಗಳು ಕೆಟ್ಟಿದ್ದಾಳೆ ಎನ್ನಲಾರಳು. ಹೆಂಗೋ ಒಂದು ಮಗಳು ಸುಖವಾಗಿದ್ದರೆ ಸಾಕು ಎನ್ನುತ್ತದೆ ಆ ಜೀವ. ಯಾವ ಅಮ್ಮನೂ ಮಗಳ ಸುಖಕ್ಕೆ ಅಡ್ಡ ಬಂದ ಉದಾಹರಣೆಗಳಿಲ್ಲ. ಆದರೆ ಮಗಳು ಅಮ್ಮ ಆದಾಳೆಯೇ...?ಕಾರಣಅವಳು ಎಂದರೆ...

No comments:

Post a Comment