Monday, June 19, 2017

ಅಸಹಾಯಕತೆಯ ಕವಲುದಾರಿಗಳು...


ಕೆಲವೊಮ್ಮೆ ತೀರ ನಮ್ಮ ನಂಬಿಕೆ ಮತ್ತು ವಿಶ್ವಾಸಕ್ಕೆ ಪಾತ್ರರಾದವರೇ ಕೈ ಎತ್ತಿ ಬದುಕಿಗೆ ಬೀಗವಿಕ್ಕಿ ಬಿಡುತ್ತಾರೆ. ಅದರಲ್ಲೂ ಅಂತಹ ಮಾಹಿತಿ ಮತ್ತು ಘಟನೆಯ ಕೊನೆಯ ಕಂತು ಪೂರೈಸಿದಾಗಲೇ ತಿಳಿಯಬೇಕಾದವರ ಗಮನಕ್ಕೆ ಬರುವ ಹೊತ್ತಿಗೆ ನಿಜಕ್ಕೂ ಸಮಯ ಮೀರಿ ಹೋಗಿರುತ್ತದೆ. ಆಗಿದ್ದನ್ನು ಅರಗಿಸಿಕೊಂಡು ಮುಂದಡಿ ಇಡುವ ಹೊತ್ತಿಗೆ ಸುತ್ತಲಿನ ಜಗತ್ತು ನಮ್ಮ ಕೈಬಿಟ್ಟು ಬಹುದೂರ ನಡೆದುಹೋಗಿರುತ್ತದೆ.
ತೀರ ಮಧ್ಯವಯಸ್ಸಿಗೆ ಬರುವ ಹೊತ್ತಿಗೆ ಬಾಬಣ್ಣ ಮಗಳಿಗಿಷ್ಟು ಮಗನಿಗಿಷ್ಟು ಎಂದು ಎತ್ತಿಟ್ಟು ಬದುಕು ಕಟ್ಟಿಕೊಂಡಿದ್ದನಾದರೂ ಮಗ ಹೆಂಗೂ ಕೈಗೆ ಬರೋದು ತಡ ಅದೆ... ನಡೀತದೆ.. ಎಂದುಕೊಂಡು ಚೆನ್ನಾಗಿ ಓದುತ್ತಿದ್ದ ಮಗಳ ಮೇಲೆ ಅಪೂಟು ಪ್ರೀತಿ ಇಟ್ಟುಕೊಂಡು, ಎಲ್ಲವೂ ಅರಾಮಾಗಿ ನಡೆಯುತ್ತಿದೆ ಎಂದು ನಿಶ್ಚಿಂತೆಯಾಗೂ ಇದ್ದ.
ಚೆನ್ನಾಗೇ ಓದಿಕೊಂಡಿದ್ದ ಮಗಳು ಇಂಜಿನಿಯರ್ ಆದಳು. ಒಂದು ಕೆಲಸವೂ ಸಿಕ್ಕಿತು. "ಮಗಳು ಸೆಟ್ಲ್ ಆದಳು ಇನ್ನೇನು ಮದುವೆ ಮಾಡಿದರಾಯಿತು. ಎಲ್ಲಾರಗೂ ಜೀವನಾ ಹಿಂಗಿದ್ದರ ಭಾಳ ಅರಾಮ ನೋಡು.." ಎಂದು ಇತರರ ಒಳ್ಳೆಯತನಕ್ಕೂ ಮನದುಂಬಿ ಹಾರೈಸುತ್ತಿದ್ದ ಬಾಬಣ್ಣ ಆವತ್ತು ಕರೆ ಮಾಡಿದಾಗ ನನಗೂ ಒಂದಷ್ಟು ಹೊತ್ತು ಮನಸ್ಸು ಅಲ್ಲಾಡಿ ಹೋಗಿತ್ತು. ಕಾರಣ ಆ ದನಿಯಲ್ಲಿ ಜೀವವೇ ಇರಲಿಲ್ಲ. ಶಕ್ತಿಯಂತೂ ಅದಕ್ಕೂ ಮೊದಲೇ ಸತ್ತು ಹೋಗಿತ್ತು. ಚೆಂದವಾಗಿ ಮದುವೆ ಮತ್ತು ಬೀಗರು ಎಂದೆಲ್ಲಾ ಕನಸ್ಸು ಕಾಣುತ್ತಾ ಸಂಜೆಗಳಲ್ಲಿ ವಿಹರಿಸುತ್ತಿದ್ದ ಅವನ ಕನಸಿಗೂ, ಮನಸ್ಸಿಗೂ ಬೆಂಕಿ ಇಟ್ಟ ಮಗಳು ಎಲ್ಲಾ ಇದ್ದೂ ಏನೂ ಇಲ್ಲದವನೊಡನೆ ಓಡಿ ಹೋಗಿದ್ದಳು.
(ಈ ಓಡಿ ಹೋಗುವ ಹುಡುಗಿಯರ ಲಾಜಿಕ್ಕು ಅಧ್ಬುತವೂ ವಿಚಿತ್ರ ಆಗಿರುತ್ತವೆ. ಅದೆಷ್ಟು ಬಾಲಿಷ ಮತ್ತು ಚೈಲ್ಡಿಷ್ ಆಗಿರುತ್ತಾರೆಂದರೆ ಸ್ವಂತ ದುಡ್ಡು ದುಗ್ಗಾಣಿ ಚೆನ್ನಾಗಿದ್ದರೂ ಗೆಳೆಯನಾದವ ಆಗೀಗ ಗಿಫ್ಟು ಕೊಡುತ್ತಾನೆ ಎಂಬ ಕಾರಣಕ್ಕೆ ಓಡಿ ಹೋಗುವ ಹುಡುಗಿಯರಿದ್ದಾರೆ. ಅದರಲ್ಲೂ ಮೊಬೈಲ್ ಮತ್ತು ಅದರ ಚಾರ್ಜ್‍ಗಾಗಿ ಮುಲಾಜಿಲ್ಲದೆ ಖರ್ಚು ಮಾಡುತ್ತಾರೆ ಎನ್ನುವ ಕಾರಣಕ್ಕೇನೆ ಓಡಿ ಹೋಗುವ, ಸಂಬಂಧ ಹೊಂದಿದ ಹುಡುಗಿಯರ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಅದರ ಬಗ್ಗೆ ಮತ್ತೆ ಬರೆಯುತ್ತೇನೆ)
ಬಾಬಣ್ಣ ಕುಸಿದು ಕುಳಿತುಬಿಟ್ಟಿದ್ದ. ತಲೆ ಮೇಲೆ ಚಪ್ಪಡಿ ಎಳೆದ ಮಗಳು ಸಲೀಸಾಗಿ ಇನ್ಯಾವುದೋ ಜಾತಿಯವನನ್ನು ಮತ್ತು ಸರಿಯಾಗಿ ಕೆಲಸವೂ ಇಲ್ಲದವನೊಡನೆ ರೈಟ್ ಹೇಳಿದ್ದಳು. ಕಾಲ ಎಲ್ಲವನ್ನೂ ಮಾಯಿಸುತ್ತದಲ್ಲ ಹಾಗೆ ಬಾಬಣ್ಣ ಕೂಡಾ ಕ್ರಮೇಣ ಚೇತರಿಸಿಕೊಂಡ. ಇದ್ದೊಬ್ಬ ಮಗನಾದರೂ ಚೆನ್ನಾಗಿದ್ದರೆ ಸಾಕೆಂದು ಮುತುವರ್ಜಿಯಿಂದ ಓದಿಸಿದ. ಮಗಳ್ಯಾವಾಗಲೋ ತಪ್ಪಾಯಿತು ಎಂದು ಕಾಲಿಗೆ ಬೀಳ ಬಂದವಳನ್ನು ತಲೆ ನೇವರಿಸಿ ನಡೀ ಎಂದಿದ್ದ. ಆದರೆ ಮನಸ್ಸಿಗೆ ಅದ ಗಾಯ ಕೆರೆಯುತ್ತಾ ಉಳಿದಿದ್ದು ಮಾಯುವುದಾದರೂ ಹೇಗೆ..? ಒಟ್ಟಾರೆ ಬಾಬಣ್ಣ ಮತ್ತೆ ಎದ್ದು ನಿಂತಿದ್ದ. ನನಗೂ ಕ್ರಮೇಣ ಅವನೊಂದಿಗಿನ ಸಂಪರ್ಕವೂ ಕಡಿಮೆiÀiÁಗಿ ಮೊಬೈಲ್ ಹಾವಳಿಯಲ್ಲಿ ಬದುಕು ದ್ವೀಪದಂತಾಗತೊಡಗಿ ಬಾಬಣ್ಣ ಒಂದು ದಶಕದ ಅವಧಿಯಲ್ಲಿ ಹೆಚ್ಚು ಕಡಿಮೆ ಮರೆಯಾಗೇ ಹೋಗಿದ್ದ.
ಆವತ್ತು ಕಚೇರಿಯೊಂದಕ್ಕೆ ಹೋದವನು ಹೊರ ಬರುವಾಗ ಅಷ್ಟು ದೂರದಲ್ಲಿ ರಿಜಿಸ್ಟರ್ ಮಾಡುತ್ತಾ ಎನೋ ಬರೆಯುತ್ತ ಕುಳಿತಿದ್ದ ವ್ಯಕ್ತಿಯೊಬ್ಬರು ಕಾಣಿಸಿದ್ದರು. ವಯಸ್ಸು, ದೇಹ ಎರಡೂ ನಿವಾಳಿಸಿದಂತಿತ್ತು. ಆದರೂ ಬದುಕಿಗೆ ಅಧಾರವಾಗಿ ಕೆಲಸ ಮಾಡುವ ಅವರ ತನ್ಮತಯಿಂದಲೇ ಶರೀರ ಮತ್ತು ಮನಸ್ಸು ಎರಡೂ ಬಸವಳಿದದ್ದು ಕಾಣಿಸುತ್ತಿತ್ತು. ಹೌದೋ ಅಲ್ಲವೋ ಎನ್ನುತ್ತಲೇ "..ಬಾಬಣ್ಣಾ.." ಎಂದೆ. ಕನ್ನಡಕ ಏರಿಸುತ್ತಾ ನೋಡಿದವರು ಎದ್ದು ನಿಧಾನಕ್ಕೆ ಬಂದು ಸುಮ್ಮನೆ ಹೆಗಲಿಗೆ ಕೈ ಹಾಕಿ ನಿಂತು "..ನಡೀ ಚಾ ಕುಡಿಯೋಣ.." ಎನ್ನುತ್ತಾ ಬಂದರು. ನನಗೆ ಮಾತಾಡಿ ಏನಾಯಿತು ಎನ್ನುವುದೆಲ್ಲಾ ವಿಚಾರಿಸುವ ಅಗತ್ಯ ಇಲ್ಲದಂತೆ ಅವರ ಪರಿಸ್ಥಿತಿ ವಿವರಿಸುತ್ತಿತ್ತು.
ಮಗಳು ಇದ್ದಕ್ಕಿದ್ದಂತೆ ಬದುಕಿನಿಂದ ಕೈಯೆತ್ತಿದವಳು ಮಗ್ಗುಲನ್ನು ಒಮ್ಮೆ ಮುರಿದಿದ್ದಳು. ಆದರೂ ಅದೆಂಗೊ ಚೇತರಿಸಿಕೊಂಡ ಬಾಬಣ್ಣ ಮಗನ ಬದುಕಾದರೂ ಸುಗಮವಾಗಲಿ ಎಂದು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದ್ದ. ಮಗ ಚೆನ್ನಾಗೂ ಓದಿದ, ವಿದೇಶಿ ರೀತಿನೀತಿ ಎಲ್ಲಾ ಕಟ್ಟಿಕೊಂಡ ಅವನ ಇಚ್ಚೆಯಂತೆ ಬಾಬಣ್ಣ ಮದುವೆನೂ ಮಾಡಿದ. ಇದ್ದಬದ್ದ ಹಣವೆಲ್ಲಾ ತೀರಿ ಹೋದರೂ ಬಾಬಣ್ಣ ಮಗ ಹೆಂಗಿದ್ರೂ ಜೊತೆಗಿರುವವ ಎಂದು ಎಲ್ಲಾ ಕೇಳಿದಂತೆ ಮಾಡಿಬಿಟ್ಟ. ಕೊನೆಗೆ ಬೆಂಗಳೂರಿನಲ್ಲಿ ಪ್ರತ್ಯೇಕ ಮನೆಗಾಗಿ ಇದ್ದ ಸ್ವಂತ ಮನೆಯ ಮೇಲೆ ಸಾಲಕ್ಕೂ ಯೋಚಿಸಲಿಲ್ಲ. ಹೆಂಗಿದ್ದರೂ ಮಗ ಜೊತೆಗಿರುವವ ನನ್ನದಾದರೇನು ಅವನದಾದರೇನು ಎಂದು ಲಕ್ಷಗಟ್ಟಲೇ ಸಾಲಕ್ಕೆ ಮುದ್ರೆ ಒತ್ತಿ ಬಿಟ್ಟಿದ್ದ. ಎಲ್ಲಾ ಮುಗಿದು ಹೊಸ ಮನೆ ಗೃಹಪ್ರವೇಶವಾಗಿ ಮಗ ಮನೆಗೆ ಬಾರದಿದ್ದಾಗಲೇ ಗೊತ್ತಾಗಿತ್ತು ಮಗ ಕೈ ಬಿಟ್ಟ ವಿಷಯ.
ಹೊಸ ಫ್ಲಾಟು ತೆಗೆದುಕೊಂಡು ತನ್ನಿಷ್ಟದಂತೆ ಸಂಸಾರ ಆರಂಭಿಸಿದ್ದ ಮಗ ಬಾಬಣ್ಣ ಇದ್ದಾನಾ ಇಲ್ವಾ ಎಂದು ವಿಚಾರಿಸಲು ಈಗ ಬರುತ್ತಿಲ್ಲ. ಕಟ್ಟಬೇಕಿದ್ದ ಸಾಲದ ಬಾಕಿಯನ್ನೂ ನಿಲ್ಲಿಸಿಬಿಟ್ಟಿದ್ದಾನೆ. ಸಂಪೂರ್ಣ ದಿವಾಳಿ ಎಂದು ಘೋಶಿಸುವುದೊಂದೆ ಬಾಕಿ ಇದ್ದಾಗ ಸ್ನೇಹಿತರೊಬ್ಬರು ಅದೇ ಮನೆಯನ್ನು ಕೊಂಡು ಸಾಲ ತೀರಿಸಿ ಅವನಿಗೆ ಉಳಿಯಲೊಂದು ಚಿಕ್ಕ ರೂಮು ಬಿಟ್ಟುಕೊಟ್ಟಿದ್ದಾರೆ. ಬಾಕಿ ಜಾಗವನ್ನು ಬಾಡಿಗೆಗೆ ಮಾಡಿಕೊಂಡಿದ್ದಾರೆ. ಸ್ವಂತ ಮನೆಯಲ್ಲೇ ಬಾಡಿಗೆಯವನಂತೆ ಬದುಕುತ್ತಿರುವ ಕರ್ಮಕ್ಕೆ ಬಾಬಣ್ಣನ ಕೈ ಮತ್ತು ಮನಸ್ಸು ಪೂರ್ತಿಯಾಗಿ  ಖಾಲಿಯಾಗಿದ್ದವು.
ಜಗತ್ತು ಎರಡೂ ಕಡೆಯಿಂದಲೂ ಬಡಿದು ನಿಲ್ಲಿಸಿತ್ತು. ಜೊತೆಗೆ ಇದ್ದ ಹೆಂಡತಿಯೊಂದಿಗೆ ಬದುಕಲೇಬೇಕಲ್ಲ. ಸಾಲವೇನೂ ಇಲ್ಲ. ಆದರೆ ದುಡಿದ ಕೂಡಿಟ್ಟಿದ್ದ ಎಲ್ಲಾ ಸಂಪತ್ತೂ ಮಕ್ಕಳು ಸಲೀಸಾಗಿ ಖಾಲಿ ಮಾಡಿದ್ದರು. ಸೆಟ್ಲ್ ಆಗೋದೆ ಎಂದುಕೊಂಡಿದ್ದ ಬದುಕು ಬೀದಿಗೆ ಬಂದಿತ್ತು. ಯಾವ ರೀತಿಯಲ್ಲೂ ಬದುಕು ಸ್ಥಿರಗೊಳ್ಳುವ ಮೊದಲಿನ ಹಳಿಗೆ ಬರುವ ಲಕ್ಷಣವೇ ಇರಲಿಲ್ಲ. ದಿನವಹಿ ಊಟಕ್ಕೆ, ಖರ್ಚಿಗೆ ಎಲ್ಲಿಂದ ತಂದಾನು. ರಿಟೈರ್ ಆದ ಮೇಲಿನ ದುಡ್ಡು ಕೂಡಾ ಮಗನ ಮನೆಗೂ ಅದಕ್ಕೂ ಮೊದಲೂ ಓದಿಗೂ ಮದುವೆಗೂ ಇವನ ಕೈಯಿಂದಾನೆ ಖರ್ಚಾಗಿ ಹೋಗಿದೆ. ಎಲ್ಲಾ ಮಾಡಿಸಿಕೊಂಡ ಮಗ ಮಗಳು ಇಬ್ಬರೂ ಈಗ ಇದ್ದರೂ ಇಲ್ಲದಂತಾಗಿ, ಅವಮಾನವಾಗಿ ಹಿಂದಿರುಗಿದ್ದಾನೆ. ಕೊನೆಯ ಕಾಲದಲ್ಲಿ ಬದುಕು ದೇಹ ಎರಡರೊಂದಿಗೂ ಬಡಿದಾಡುತ್ತಾ ಮತ್ತೆ ಸಣ್ಣ ಕೆಲಸ ಹುಡುಕಿಕೊಂಡಿದ್ದಾನೆ ಬಾಬಣ್ಣ.
ಹೊರಡುವ ಮೊದಲು ಬಾಬಣ್ಣನನ್ನು ಬಲವಂತವಾಗಿ ನನ್ನೊಂದಿಗೆ ಕರೆದೊಯ್ದೆ. ಅವನ ಮೊಗೆ ಮೊಗೆ ಬಿಯರ್‍ನ ಋಣ ನಾನು ಮರೆಯಲಾದರೂ ಹೇಗೆ ಸಾಧ್ಯ...? ಸಣ್ಣ ಸಂಕೋಚ ಮತ್ತು ಹಳೆಯ ಅನುಭವದ ಚಳಕುಗಳೊಂದಿಗೆ ಮುದುರಿ ಎದುರಿಗೆ ಕುಳಿತಿದ್ದ ಬಾಬಣ್ಣನ ಕೈಯ್ಯಲ್ಲಿ ಈಗ ತುಂಬು ಮೊಗೆ ಎತ್ತಿಕೊಳ್ಳಲೂ ಶಕ್ತಿ ಇಲ್ಲದಂತಿದ್ದ. ಶರೀರ ನಿಧಾನಕ್ಕೆ ನಡಗುತ್ತಿತ್ತು. ದಶಕಗಳ ಹಿಂದೆ ಇದೇ ಖುರ್ಚಿಯಲ್ಲಿ ಮರ್ಯಾದೆಯುತವಾಗಿ ತಲೆ ಎತ್ತಿ ಕೂಡುತ್ತಿದ್ದ ದೇಹ ಇವತ್ತು ಹಿಡಿಯಾಗಿಸಿ ಕೂತುಕೊಂಡಿತ್ತು. ಕಣ್ಣಿನಲ್ಲಿ ಆತ್ಮವಿಶ್ವಾಸ ಸಾಯಲಿ ಬದುಕು ಯಾವಾಗ ಮುಗಿದೀತು ಎನ್ನುವ ನಿರೀಕ್ಷೆಯ ತಪನೆಯಲ್ಲಿತ್ತು. ಏನಾಗಿ ಹೋಯಿತು ಎನ್ನುವ ದುಗುಡದೊದಿಗೆ ಹೇಗೊ ಒಂದಷ್ಟು ಹೊತ್ತು ಕೂತಿದ್ದ ಬಾಬಣ್ಣ ಊಟ ಮಾತ್ರ ಬಿಲ್ ಕುಲ್ ಒಲ್ಲೆ ಎಂದ.
" ಬೇಜಾರಾಗಬೇಡ. ನಾನು ಇಲ್ಲಿ ಊಟ ಮಾಡ್ತಾ ಇದ್ರ ಮನೆಯಲ್ಲಿ ಅವಳು ಒಬ್ಳೆ ಕಾಯ್ತಿರ್ತಾಳೆ. ಸರಿಯಾಗೋದಿಲ್ಲ. .." ಎನ್ನುತ್ತಿದ್ದರೆ ಸುಮ್ಮನೆ ಅವರ ಭುಜ ಬಳಸಿ ಎಬ್ಬಿಸಿಕೊಂಡು ಬಂದೆ. ಎರಡೂ ಊಟದ ಪಾರ್ಸೆಲ್ ಕೈಗಿತ್ತು ಒಮ್ಮೆ ಮೌನವಾಗಿ ನಿಂತು ತಬ್ಬಿಕೊಂಡು ನಡೆದುಬಿಟ್ಟೆ. ನಿಂತಿದ್ದರೆ ಇಬ್ಬರನ್ನೂ ಸುಧಾರಿಸಲು ಇನ್ನೊಬ್ಬರು ಬೇಕಾಗುತ್ತಿದ್ದರಾ ಗೊತ್ತಿಲ್ಲ. ಆದರೆ ವಾಸ್ತವದ ಭೀಕರತೆಯ ಎದುರು ನಾನೂ ಅಕ್ಷರಶ: ನಡುಗಿದ್ದೆ. ಬಾಬಣ್ಣನ ಮಾತು ಕಿವಿಯಲ್ಲೇ ಗುಂಯ್ ಗುಡುತ್ತಿತ್ತು..
" ಹಿಂಗಾಗುತ್ತೆ ಅನ್ನೋದಾದರೆ ಮಕ್ಕಳ ಸುಖಾನೂ ಬೇಡ. ಈ ವೃದ್ಯಾಪ್ಯ ಅನ್ನೋದು ಮೊದಲೇ ಬೇಡ ನೋಡು..ಉಫ್.." ಉಳಿದದ್ದೇನೆ ಇರಲಿ, ಹೀಗಾಗುವುದಾದರೆ ನನ್ನ ಆಯುಸ್ಸು ಅದಕ್ಕೂ ಮೊದಲೇ ಮುಗಿದು ಹೋಗಲಿ.." ಎನ್ನಿಸಿದ್ದೂ ಸುಳ್ಳಲ್ಲ.

No comments:

Post a Comment