Sunday, November 22, 2015

ಅವಳಿಲ್ಲದೆ ಬದುಕು ಭೂಮಿ ಎರಡೂ ಇಲ್ಲ 

ಬದುಕಿದರೆ ಸಾಕು ಎನ್ನುವ ಪರಿಸ್ಥಿತಿ ಬಂದಾಗ, ತಾಕತ್ತನ್ನೆಲ್ಲ ಸೇರಿಸಿಕೊಂಡು ಎದ್ದು ನಿಲ್ಲುವವಳೇ ಅವಳು. ಆ ಧಿಶಕ್ತಿಗೆ ಇದಿರಿಲ್ಲ. ಎಲ್ಲ ಇದ್ದವರು ಇವತ್ತು ಬದುಕು ಗೆಲ್ಲುವುದು ದೊಡ್ಡದಲ್ಲ. ಆದರೆ ಏನೂ ಇಲ್ಲದ ಸ್ಥಿತಿಯಲ್ಲಿ ಕಾಲೂರಿ ನಿಲ್ಲುವುದಿದೆಯಲ್ಲ ಅದನ್ನು ಅಮ್ಮ... ಮಾತ್ರ ಮಾಡಬಲ್ಲಳು.

ಶ್ರೀಕುಮಾರ್ ಎನ್ನುವ ದೇವರೂಪಿ ಮಲೆಯಾಳಿ ಡಾಕ್ಟ್ರು ಆ ಮಗುವಿನ ಮುಗ್ಧತೆಗೂ ಅದರ ತುಂಟತನಕ್ಕೂ ಯಾವ ಪ್ರಶ್ನೆಯನ್ನೂ ಕೇಳದೆ ಅರ್ಧ ಖರ್ಚನ್ನು ಮಾಫಿ ಮಾಡಿಸಿದ್ದರು. ಇನ್ನರ್ಧದ ವ್ಯವಸ್ಥೆ ಮಾಡಿಕೊಂಡು ಬನ್ನಿ ಎಂದಿದ್ದರು. ಬರುವ ಗುರುವಾರಕ್ಕೆ ದಿನಾಂಕ ನಿಗದಿಯಾಗಿದ್ದನ್ನು ಯಾವ ಕಾರಣಕ್ಕೂ ಮುಂದಕ್ಕೆ ಹಾಕುವಂತಿರಲಿಲ್ಲ. ಪ್ರತಿ ನಿಮಿಷವೂ ಮಗು ಕೈಯಿಂದ ಜಾರುತ್ತಲೇ ಇತ್ತು. ಕಾರಣ ವೈದ್ಯರು ನೇರವಾಗಿ ಮಗು ಆಗಲೇ ಎರಡನೇ ಹಂತ ದಾಟುವ ಸ್ಥಿತಿಯಲ್ಲಿದೆ ಎನ್ನದಿದ್ದರೂ, ಅವರ ಮಾತಿನ ಧಾಟಿಯಲ್ಲೇ ಯಾವುದೋ ಅನಾಹುತದ ಮುನ್ನೆಚ್ಚರಿಕೆ ಉಷಾಳಿಗೆ ಸಿಕ್ಕಿಹೋಗಿತ್ತು. ಆಕೆಯ ಎದುರಿಗೆ ಕೇವಲ ಬದುಕು ಮತ್ತು ಮಗು ಎರಡೇ ಕಾಣಿಸುತ್ತಿತ್ತು. ಅಷ್ಟೆ..
ಯಾವ ಧೈರ್ಯವೋ ಉಷಾ ಆವತ್ತು ನೇರ ಗಂಡನ ಮನೆಗೆ ನುಗ್ಗಿ ಹೋಗಿದ್ದಳು. ಮನೆಯಲ್ಲಿದ್ದವರು ಏನು, ಯಾಕೆ, ಎನ್ನುತ್ತಾ ಎಂದು ಆಕೆಯನ್ನು ತಡೀಬೇಕಾ..ಬೇಡವಾ.. ಎನ್ನುವಷ್ಟರಲ್ಲಿ ತನ್ನ ರೂಮಿಗೆ ನುಗ್ಗಿದವಳೆ ತನ್ನದೆನ್ನುವ ಚೂರುಪಾರು ಬಂಗಾರ, ಒಡವೆ ಇತ್ಯಾದಿಯನ್ನೆಲ್ಲಾ ಗಂಟು ಕಟ್ಟಿಕೊಂಡು ಅದಾಗಲೇ ಅರ್ಧ ಜೀರ್ಣವಾಗಿದ್ದ ಗಾಡಿ ಹತ್ತಿ ಹೊರಬಿದ್ದಿದ್ದಳು. ಆಕೆಯನ್ನು ತಡೆಯುವ ಧೈರ್ಯ ಯಾರಿಗೂ ಇರಲಿಲ್ಲ.
ಆ ಕ್ಷಣಕ್ಕೆ ಅಕೆಗೆ ತೋಚಿದ್ದು ಅದೊಂದೆ. ಮೊದಲು ಮಗುವಿನ ಮೂಗಿನಿಂದ ಆ ಗಲೀಜು ಗೆಡ್ಡೆಯನ್ನು ಕಿತ್ತು ಹಾಕಿಸಬೇಕು. ಆಮೇಲೆ ಏನೇ ಕಷ್ಟವಾಗಲಿ ಮಗುವನ್ನು ಸಾಕುತ್ತೇನೆ. ಹಾಗೆಂದುಕೊಂಡವಳೆ ಇದ್ದಬದ್ದ ಪುಡಿಗಾಸು, ಸ್ನೇಹಿತೆಯರ ಕೈಸಾಲ ವೈದ್ಯರ ಮುಂದೆ ಗುಡ್ಡೆ ಹಾಕಿ ಕೈಮುಗಿದಿದ್ದಳು. ಅವರಿಗೂ ಇದೊಂದು ರೀತಿಯ ಕಷ್ಟದ ಕೆಲಸವಾಗಿಬಿಟ್ಟಿತ್ತು. ಕ್ಯಾನ್ಸರ್‌ನ ಚಿಕಿತ್ಸೆಗೆ ಆಪರೇಷನ್ ಒಂದು ಹಂತವಾದರೆ ಅದರ ನಂತರದ್ದೇ ಒಂದು ಅವಸ್ಥೆ. ಅದರಲ್ಲೂ ಇಂತಹ ತೀರ ಕ್ಲಿಷ್ಟಕರವಾದ ಜಾಗದಲ್ಲಿ ದುರ್ಮಾಂಸ ವ್ಯಾಪಿಸಿದ್ದರೆ ಅದೊಂದು ಅತಿದೊಡ್ಡ ಚಾಲೆಂಜು. ಕತ್ತರಿ ಪ್ರಯೋಗ ನಡೆಯುವಾಗ ದೇಹದ ಇತರ ಸಂಕೀರ್ಣ ಭಾಗಗಳೂ ಅಲ್ಲಿ ಬಲಿಯಾಗಿಬಿಡುವ ಸಾಧ್ಯತೆ ಹೆಚ್ಚು. ಹಾಗಾಗಿ ಇಲ್ಲಿ ಬರೀ ಕ್ಯಾನ್ಸರ್ ಆಗಿದೆ ಎನ್ನುವಂತೆ ಅಲ್ಲದಿದ್ದರೂ ಮೂಗಿನ ಒಳಭಾಗದಿಂದ ಆರಂಭವಾದ ದುರ್ಮಾಂಸದ ಬೆಳೆವಣಿಗೆ ಕಣ್ಣಿನ ಹಿಂಭಾಗಕ್ಕೂ ವ್ಯಾಪಿಸಿ ಅಲ್ಲಿಂದ ಗಂಟಲಿನ ಅನ್ನನಾಳದ ಮೇಲೂ ಬೇರು ಬಿಡಲಾರಂಭಿಸಿತ್ತು (‘ಮೆನಿಂಗ್‌ಝಿಯೋಮಾ’ದ ಮೂರನೆಯ ಹಂತದಿಂದ ವಾಪಸ್ಸು ಬಂದೂ ಚೆಂದವಾಗಿ ಬದುಕುತ್ತಿರುವ ಗೆಳತಿಯದ್ದೊಂದು ಸೂರ್ತಿದಾಯಕ ಕಥೆ. (ಅವಳು ಹೂಂ.. ಅಂದಲ್ಲಿ ಬರೆದೇನು..)
ಅಷ್ಟಕ್ಕೂ ವೈದ್ಯರೇನು ದೇವರಲ್ಲವಲ್ಲ. ಪೂರ್ತಿ ಸ್ವಚ್ಛ ಮಾಡುವ ಭರದಲ್ಲಿ ಯಾವ ಭಾಗ ಹಾನಿಗೊಳಗಾದರೂ ಆಯಾ ಅಂಗಾಂಗಗಳು ಕೈಕೊಡುತ್ತವೆ. ಅದರಲ್ಲೂ ಮೂಗಿನ ಒಳಭಾಗದಿಂದ ಆರಂಭವಾಗಿ, ಪ್ರಮುಖ ಅಂಗವಾಗಿರುವ ಕಣ್ಣಿನ ಹಿಂಭಾಗಕ್ಕೆ ಲಗ್ಗೆ ಇಟ್ಟಿರುವ ಮಾಂಸವನ್ನು ಕತ್ತರಿಸುವುದರೊಂದಿಗೆ ಮತ್ತೆ ಬೆಳೆಯದಂತೆ ನೋಡಿಕೊಳ್ಳಬೇಕು. ಇದೆಲ್ಲವೂ ಒಂದು ಹಂತವಾದರೆ, ಮುಖ ಮೂತಿ ಕತ್ತರಿಸದೆ ಎಲ್ಲವನ್ನೂ ನಳಿಕೆಯ ಮೂಲಕ ಮಾಡಲು ನಿರ್ಧರಿಸಿದ್ದರಿಂದ ಆಗುವ ತೊಡಕಿನ ಕಾರ್ಯಾಚರಣೆ ಎನ್ನುವುದಿನ್ನೂ ದೊಡ್ಡ ತೊಡಕು. ಪ್ರತಿ ಹಂತದಲ್ಲೂ ದೇಹ ಸವಾಲೊಡ್ಡುತ್ತಿರುತ್ತದೆ.
ಇವತ್ತಿಗೂ ಜನಸಾಮಾನ್ಯರಿಗೆ ವಿಸ್ಮಯಕಾರಿ ಕ್ಷೇತ್ರವಾಗಿರುವ ವೈದ್ಯಕೀಯದ ತಜ್ಞರು ಮಗುವನ್ನು ಕರೆದೊಯ್ಯುವಾಗ ಕೈಯದುಮಿ ಸಾಂತ್ವನ ಹೇಳಿದ್ದಲ್ಲದೇ, ಸತತವಾಗಿ ಮೂರೂವರೆ ತಾಸುಗಳ ಗುದ್ದಾಟದ ನಂತರ ಅಂಗೈ ಹಿಡಿ ತುಂಬುವಷ್ಟಿದ್ದ ದುರ್ಮಾಂಸವನ್ನು ತೆಗೆದು ಈಚೆ ತಂದು ಹಾಕಿದ್ದರು. ನಿರಿಕ್ಷೆಗೂ ಮೀರಿದ ಯಶಸ್ಸು ಅವರ ಕೈಗೂಡಿತ್ತು. ಮಗು ಸರಿಯಾಗಿ ಮರುದಿನ ಮಧ್ಯಾಹ್ನ ಕಣ್ಣು ಬಿಟ್ಟಿತ್ತು. ಆದರೆ ಅದರ ಅತಿ ದೊಡ್ಡ ಸಂಪತ್ತಾಗಿದ್ದ ಧ್ವನಿ ಸತ್ತುಹೋಗಿತ್ತು. ಆತುರಕ್ಕೆ ಬಿದ್ದು ಮಗು ಬಾಯಿ ಬಿಟ್ಟೀತು ಎಂದು ಅದರ ತುದಿಗಳನ್ನು ಸೇರಿಸಿಟ್ಟಿದ್ದರು. ಇನ್ನೇನಿದ್ದರೂ ಅದು ಪೂರ್ತಿ ಹಂತಕ್ಕೆ ಬರುವವರೆಗೆ ಕಣ್ಣಲ್ಲೇ ಮಾತಾಡಬೇಕಿತ್ತು.
ಆವತ್ತಿನ ಸ್ಥಿತಿಯನ್ನು ನೋಡಿ ನಾನಂದುಕೊಂಡಿದ್ದೆ. ಸ್ವತಃ ದೇವರಿಗೂ ಮಗುವಿನ ಚೆಂದಕ್ಕೆ ಒಳಗೊಳಗೇ ಉರಿದಿರಬೇಕು. ಇಲ್ಲದಿದ್ದರೆ ಇಂಥಾ ಮಗುವಿಗೆ ಇಂಥದ್ದೊಂದು ನೋವನ್ನು ಯಾಕಾದರೂ ಕೊಡಬೇಕಿತ್ತು? ಆದರೆ ಅದರಮ್ಮನಿಗೆ ಆದರ ಕಡೆಗೂ ಲಕ್ಷ್ಯವಿರಲಿಲ್ಲ. ಸದ್ಯಕ್ಕೆ ಮೊದಲು ಮಗು ನೆಟ್ಟಗಾಗಬೇಕು. ಆಕೆ ಈಗ ಅರ್ಧ ನಿಟ್ಟುಸಿರು ಬಿಟ್ಟಿದ್ದಳು. ಕಾರಣ ಆಪರೇಷನ್ ನಂತರದ ಎರಡು ವರ್ಷ ಕಾಲ ಸತತ ಉಳಿದ ಅಂಶವನ್ನು ಕಿಮೋ ಮೂಲಕ ಸುಡುವ ಕಾರ್ಯವಿತ್ತಲ್ಲ. ಅದು ಪೂರ್ತಿ ಅವಳ ಬದುಕನ್ನೇ ನುಂಗುವಂತೆ ಮಾಡಲಿತ್ತು. ಇವತ್ತು ಇದ್ದುದರಲ್ಲಿ ಬೆಂಗಳೂರಿನಲ್ಲಿ ಕೈಗೆಟುಕುವ ದರದಲ್ಲಿ ಕಿಮೋ ಮಾಡುತ್ತಿರುವುದು ಕಿದ್ವಾಯಿಯೇ ಎಂದರೂ ಸರಿನೇ. ಉಳಿದೆಡೆ ಇಂಥಾ ಒಂದು ಸಾವಿನ ಬಾಯಿಯಿಂದ ಜೀವವನ್ನು ಬದುಕಿಸಿಕೊಳ್ಳೋದಿದೆಯಲ್ಲ ಅದು ಕನಿಷ್ಠ ಐದೂ ಚಿಲ್ರೆ ಲಕ್ಷ ರೂಪಾಯಿಗಳ ಬಾಬತ್ತು. ಉಷಾದಿನ್ನೆಂಗೆ ಭರಿಸಿದಳೊ..? ಅಂತೂ ಮಗುವಿನ ಉಳಿವಿಗೆ ಆಕೆ ದೇವರಿಗೂ ಸವಾಲೊಡ್ಡಿದ್ದು ಸ್ಪಷ್ಟವಿತ್ತು.
ಮೊದಲು ಮಗು ಚೇತರಿಸಿಕೊಂಡಿತೇನೋ ಸರಿ. ಆದರೆ ಮೊದಲ ಕಿಮೋ ಆಗುತ್ತಿದ್ದಂತೆ ಮತ್ತು ಅದರ ಸೈಡ್ ಎಫೆಕ್ಟುಗಳಿಂದ ಚಿಟಿಚಿಟಿ ಮಗು ಚೀರುತ್ತಿದ್ದರೆ ಎಂತಹವರ ಎದೆಯೂ ಒಡೆದು ಹೋಗುತ್ತಿತ್ತು. ಕೈಯಿಂದ ಮುಖವನ್ನು ಅದುಮಿಕೊಳ್ಳುತ್ತಾ, ಆಗುತ್ತಿದ್ದ ನೋವನ್ನು ಭರಿಸದೆ ಚೆಂದದ ಕೆಂಪು ಕೆನ್ನೆಯ ಮಗು ಹೊರಳಾಡುತ್ತಾ ಕಿರುಚುತ್ತಿದ್ದರೆ ಮೊದಲ ಆಪತ್ತು ಬಂದಿದ್ದು ಮನೆಯ ಮಾಲೀಕನಿಂದ. ಗಂಡನ ಮನೆಯಿಂದ ಹೊರಬಿದ್ದು ಚಿಕ್ಕ ಆಸರೆ ಮಾಡಿಕೊಂಡಿದ್ದಳಲ್ಲ. ಆತ ತನ್ನ ಬಾಡಿಗೆಗೆ ಸಂಚಕಾರ ಬಂದೀತೆಂದು ನಿರ್ದಾಕ್ಷಿಣ್ಯವಾಗಿ ಹೊರ ಹೋಗಲು ಬಲವಂತ ಮಾಡಿದ್ದ. ಇದಾಗುತ್ತಿದ್ದಂತೆ ಆಕೆಯ ಗಂಡ ಕಳ್ಳತನದ ಕೇಸನ್ನು ದಾಖಲಿಸಿದ್ದ. ಪುಣ್ಯಕ್ಕೆ ಖಾಸಾ ಪರಿಚಯದ ಡಿಸಿಪಿಯೊಬ್ಬರು ಮಧ್ಯೆ ಪ್ರವೇಶಿಸಿ ಅಲ್ಲೇ ಸರಿಮಾಡಿದ್ದರು. ಉಷಾ ಯಾವ ಮುಲಾಜೂ ಉಳಿಸಿಕೊಳ್ಳದೆ, ಸ್ನೇಹಿತೆಯೊಬ್ಬಳ ಮನೆಯ ಚಿಕ್ಕ ಹೊರಕೋಣೆಯಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದ್ದಳು. ಸಣ್ಣ ಕೆಲಸಕ್ಕೆ ಹೊರಟಾಗ ಅವಳಮ್ಮ ಬಂದು ಬೆನ್ನಿಗೆ ನಿಲ್ಲುತ್ತಿದ್ದಳು.
ಅದಕ್ಕಿಂತಲೂ ಸಮಸ್ಯೆ ಶುಚಿತ್ವದ್ದು. ತೀವ್ರ ಶುಚಿತ್ವ ಮತ್ತು ಜಾಗೃತೆಯನ್ನು ಬೇಡುವ ಹಂತದಲ್ಲಿದ್ದಾಗ, ಇಂಥಾ ಮನೆಯೆನ್ನುವ ಕಿಷ್ಕಿಂಧೆಯಲ್ಲಿ ಅದನ್ನೆಲ್ಲಾ ಪಾಲಿಸಲು ಪೂರೈಸಲು ಸಾಧ್ಯವೇ ಇರಲಿಲ್ಲ. ಯಾವ ಕಾರಣಕ್ಕೂ ಮಗುವಿಗೆ ಕಾಯಿಸಿ ಆರಿಸಿದ ನೀರಿನ ಹೊರತು ಬೇರೆ ನೀರು ಪಾನೀಯ ಕುಡಿಸುವಂತಿರಲಿಲ್ಲ. ಕಾಯಿಸಿದ ನೀರಿನ ರುಚಿಗೆ ಮಗು ರೋಸಿ ಹೋಗುತ್ತಿತ್ತು. ಪಥ್ಯ ಆಹಾರ ಮತ್ತು ಕಟ್ಟು ನಿಟ್ಟಿನ ಔಷಧವನ್ನೂ ತಿನ್ನುವುದಕ್ಕೂ ತಕರಾರು ತೆಗೆಯುತ್ತಿತ್ತು. ಅದಕ್ಕಿಂತಲೂ ಮಗುವಿಗೆ ಮೈಯ್ಯೆಲ್ಲಾ ಯಾತನೆಯಾಗಿ ಚೀರುತ್ತಿತ್ತಲ್ಲ. ಆಗ ಎಂತಹವರ ಎದೆಯೂ ಒಡೆದು ಹೋಗುತ್ತಿತ್ತು. ಎರಡ್ಮೂರು ವಾರ ಕಳೆಯುವಷ್ಟರಲ್ಲಿ ಮೈಯೆಲ್ಲಾ ಕಪ್ಪಾಗಿ ಅಲ್ಲಲ್ಲಿ ಬಿಳಿಯ ಪಳೆಯುಳಿಕೆ ಉಳಿದು ತಲೆಕೂದಲೆಲ್ಲ ಉದುರಿ ಉಗುರುಗಳು ಕಪ್ಪುಗಟ್ಟಿದಂತಾಗಿ ಅದರಲ್ಲೂ ಅದಕ್ಕೆ ಗಂಟುಗಳೆಲ್ಲಾ ಹಿಂಡಿದಂತಾಗಿ, ಒಂದಾ ಎರಡಾ.. ದೇವರೇ .. ಅದರ ಎರಡೂ ಸ್ಥಿತಿಯನ್ನು ನೋಡಿದವರು ಇಂಥಾ ಪರಿಸ್ಥಿತಿಗಿಂತ ಮಗು ಹೋಗಿದ್ದರೆ ಚೆನ್ನಾಗಿತ್ತಾ ಎನ್ನಿಸದಿರುತ್ತಿರಲಿಲ್ಲ. ಪ್ರತಿ ನಿಮಿಷವೂ ಮಗುವಿನ ಬಗ್ಗೆ ಎಣಿಸುವಂತಾಗಿ ಹೋಗಿತ್ತು ಬದುಕು.
ಇದೆಲ್ಲಾ ಒಂದು ಹಂತವಾದರೆ ಪ್ರತಿ ಬಾರಿ ಆಸ್ಪತ್ರೆಗೆ ಹೋಗುವಾಗಲೂ ದುಡ್ಡು, ಸಂಬಂಧಿಸಿದ ಇತರೆ ಖರ್ಚಿಗಾಗಿ ಉಷಾಳಿಗೆ ಇನ್ನೇನು ಸ್ವತಃ ರಕ್ತ ಮಾರಿಕೊಳ್ಳುವುದೊಂದು ಬಾಕಿ ಉಳಿದಿತ್ತು. ಅವಳಮ್ಮ ಎಲ್ಲೆಲ್ಲಿಂದಲೋ ಹೊಂಚುತ್ತಿದ್ದರಾದರೂ ಅದು ದುಬಾರಿಯ ದಿನದಲ್ಲಿ ಹಿಡಿಯ ಮರಳಿನಂತೆ ಸರಿದು ಹೋಗುತ್ತಿತ್ತು. ಉಷಾ ತೀರ ನಡುಬೀದಿಗೆ ಬಂದಿದ್ದಳು. ಈ ಹಂತದಲ್ಲಿ ನನ್ನ ತಂಡ ಮತ್ತು ಸ್ನೇಹಿತರು, ಎಡಗೈದು ಬಲಗೈಗೆ ಗೊತ್ತಾಗದಂತೆ ಸಹಾಯ ಮಾಡುವ ಒಂದಿಷ್ಟು ಪುಣ್ಯಾತ್ಮರು ಜೊತೆಗೆ ನಿಂತರು. ಕೆಲವರು ವೈದ್ಯರ ಮೇಲೆ ಶಿಫಾರಸ್ಸು ತಂದು ಚಿಕಿತ್ಸೆಯ ವೆಚ್ಚ ತಗ್ಗಿಸಿದರು. ಇನ್ಯಾರೋ ಇನ್ಯಾವುದೋ ರೂಪದಲ್ಲಿ ಒಂದಿಷ್ಟು ಸಹಾಯ ಸಲ್ಲಿಸಿದರು. ಸತತ ಮೂರು ವರ್ಷದ ಹೋರಾಟದಲ್ಲಿ ಉಷಾ ಕಾಲೂರಿ ನಿಂತು ನಡೆಸಿದ ಹಣಾಹಣಿಗೆ ದೇವರೂ ಸೋತುಹೋಗಿದ್ದ. ಮಗು ಬಾಯ್ದೆರೆದು ಸ್ಪಷ್ಟವಾಗಿ ‘ಅಮ್ಮ’ ಎಂದುಬಿಟ್ಟಿತ್ತು. ಅಷ್ಟೆ ಸ್ವರ್ಗ ಎದುರಿಗಿತ್ತು. ಮಗುವಿನ ಐದನೆಯ ವರ್ಷದಿಂದ ಆರಂಭವಾಗಿದ್ದ ಕುರುಕ್ಷೇತ್ರ ಎಂಟನೇ ವರ್ಷದ ಹುಟ್ಟುಹಬ್ಬದ ಹೊತ್ತಿಗೆ ನಮ್ಮ ಟೀಮು ಅದನ್ನೆತ್ತಿ ನೆಲಕ್ಕಿಳಿಯಲು ಬಿಡದೆ ಸೆಲಿ ತೆಗೆಸಿಕೊಳ್ಳುತ್ತಿದ್ದರೆ, ಉಷ ಸುಮ್ಮನೆ ನಿಂತು ಒಮ್ಮೆ ಕಣ್ಣೊರೆಸಿಕೊಂಡಿದ್ದಳು. ಹುಟ್ಟಿಸಲಿಕ್ಕೆ ಮಾತ್ರ ಕಾರಣವಾಗಿದ್ದ ಅಪ್ಪ ಇತ್ತ ಸುಳಿದಿರಲಿಲ್ಲ.
‘ಅಲ್ಲ..ಹೆಣ್ಣು ಮಗು ಹುಟ್ಟಿದರೆ ಯಾಕೆ ಹಿಂಗಾಡ್ತಾರೆ..? ಹೆಣ್ಣೆ ಹುಟ್ಟದಿದ್ರೆ ಇವರ ತೆವಲಿಗೆ ಯಾರು ಸಿಗ್ತಿದ್ರು..? ಹೆಂಡತಿ ಅಂದರೆ ಬರೀ ಸೆಕ್ಸ್‌ಗೆ, ಗಂಡು ಮಕ್ಕಳು ಹುಟ್ಟಿಸಲಿಕ್ಕೆ ಅಂತಾ ಯಾವನು ಇವರ ತಲೆಗೆ ತುಂಬಿದನೋ ಮಾರಾಯ ಅವನನ್ನು ಹಡೆದವಳೂ ಹೆಂಗಸೇ ಅಲ್ವಾ..? ಹೀಗಾಗೋದೇ ಆದರೆ ಮದುವೆ ಅಂತಾ ಮಾಡ್ಕೊಂಡು ಯಾಕೆ ಹೆಣ್ಮಕ್ಕಳ ಬದುಕು ಹಾಳು ಮಾಡ್ಬೇಕು..? ಇಂಥಾ ಹಗರಣಕ್ಕಿಂತ ಸುಮ್ಮನೆ ಇರೋದೆ ಸುಖ..’ ಉಷಾ ಪಡಬಾರದ ಕಷ್ಟಕ್ಕೀಡಾಗಿ ಹೊರಬಂದು ಅಲವತ್ತುಕೊಳ್ಳುತ್ತಿದ್ದರೆ ಪಕ್ಕ ನಿಂತಿದ್ದವನು ಸುಮ್ಮನೆ ಬೆನ್ನು ತಡುವಿ ಸಮಾಧಾನಿಸಿದ್ದೆ. ಹೆಚ್ಚಿಗೆ ಹೇಳಲು ದೇವರು ಪದಗಳನ್ನೂ ಉಳಿಸಿರಲಿಲ್ಲ.ಕಾರಣಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)


No comments:

Post a Comment