Saturday, November 22, 2014

ಗೋಡೆ...!

“ಅಪ್ಪ.. ಗೌಡ್ರು.. ದೊಡ್ಡ ಮನಿ ಕಟ್ಟತಾರಂತೆ. ನಮ್ಮದೂ ಮನಿಗೆ ಬ್ಯಾರೇ ಗೋಡೆ ಬರ್ತದೇನೂ..?" ಎಂದು ಮೂಲೆಯ ಅಗ್ಗಿಷ್ಟಿಗೆ ಮುಂದೆ ಕೂತಿದ್ದ ಕೊನೆಯ ಮಗನ ಮಾತಿಗೆ, ಪತ್ತಾರ ಸುಬ್ಬಿಯ ಬ್ಲೌಸಿನ ನೆರಿಗೆಯಲ್ಲಿ ಗುಬ್ಬಿ ಗೂಡು ಮೇಲಕ್ಕೇಬ್ಬಿಸುತ್ತಿದ್ದ ಆಚಾರ್ರರ ಹಣೆಯಲ್ಲಿ ನೇರಿಗೆ ಮೂಡಿದವು. ವಾರದ ಹಿಂದೇಯೇ ಗೌಡ್ರು ಅಳತೆ ಟೇಪು ಹಿಡಿದು, ತೆಂಗಿನಕಾಯಿ ಒಡೆದು ಯೋಜನೆ ರೂಪಿಸುವಾಗಲೇ ಕೆಲಸದ ಸೂಚನೆ ಸಿಕ್ಕಿತ್ತು. ಆದರೆ ಎಡವಟ್ಟಾದದ್ದು ತಮ್ಮ ತಡಿಕೆ ಗೋಡೆ ಸೇರಿ ಒಂದಡಿ ಪೂರ್ತಿ ಜಾಗ ಕೊಡ್ಬೇಕಾಗಿ ಬರುತ್ತದೆಂದಾಗ.
ಬೋರಗಾಂವಿಯ ಊರಿನ ಓಣಿಗಳೆಂದು ಕರೆಯುವ, ಮಧ್ಯದಲ್ಲೆಲ್ಲೂ ಒಂದಿಂಚೂ ಬಿಡದೆ ಪಕ್ಕ ಪಕ್ಕದಲ್ಲೇ ಕಟ್ಟಿಕೊಂಡಿದ್ದ ಮನೆಗಳ ಸಾಲಿನಲ್ಲಿ ಇದ್ದಿದ್ದು ಆಚಾರ್ಯರ ಮನೆ. ಒಂದೆಡೆ ಕಲ್ಲಪ್ಪ ಗೌಡರದ್ದೂ, ಇನ್ನೊಂದೆಡೆಗೆ ನಾಯಕ ಮಾಸ್ತರರ ಮನೆಯ ಮಧ್ಯದ ಕಷ್ಟಪಟ್ಟು ತುರುಕಿಸಿದಂತಿದ್ದ ಮನೆಯ ಉದ್ದ ಲೆಕ್ಕ ಹಾಕಿದರೆ, ಸಣ್ಣಿ ಒಣಿಯ ಪಟ್ಟಿಯೇ ಸೈ. ಕೋಣೆಯೇ ಇರದ, ಒಂದಾದ ಮೇಲೊಂದರಂತೆ ಬಾಗಿಲು ದಾಟುತ್ತ, ಹಾಗೆ ಪ್ರತಿ ಬಾಗಿಲು ದಾಟಿದ ಮೇಲೆ ಅಡರಿಕೊಳ್ಳುವ ಕತ್ತಲೆಗೆ ಕಣ್ಣು ಹೊಂದಿಸಿಕೊಳ್ಳುವಷ್ಟರಲ್ಲಿ ಹಿತ್ತಿಲ ಬಾಗಿಲು ಬರುತ್ತದೆ.
ಅಂಥಾ ಒಂದಿನಿತೂ ಖಾಸಗಿತನವಿಲ್ಲದ ಮನೆಯಲ್ಲೂ ಅಚಾರ್ರರು ವ್ಯವಸ್ಥಿತವಾಗಿ ಗಂಡು ಹೆಣ್ಣು ಎನ್ನುತ್ತಾ ಒಂದಾದ ಮೆಲೋಂದರಂತೆ ಪುತ್ರ ಕಾಮೇಷ್ಠಿ ಯಜ್ಞ ಮುಗಿಸಿದ್ದರು. ಹಾಗಾಗಿ ಪ್ರತಿ ಬಾಗಿಲ ನಂತರವೂ ಇಬ್ಬಿಬ್ಬರು ಮಲಗುವ ಮನೆಯಾಗಿ ಕೊನೆಗೆ ಯಾರಾದರೂ ಬಂದರೆ ಅಲ್ಲೇ ಮುದರಿಕೊಂಡು, ಮೊದಲಿನ ಭಾಗ ಅವರಿಗೆ ಬಿಟ್ಟು ಅಚಾರ್ರರು ಅಡಿಗೆ ಮನೆಯಲ್ಲಿ ಒರಗುತ್ತಿದ್ದರು. ಯಾವತ್ತೂ ಬಾಯಿ ಬಿಡದ, ಥಂಡ ಮನಿಶ್ಯಾ ಆಚಾರ್ಯರಿಗೆ ಸಂಕೋಚವಾಗುತ್ತಿದ್ದರೂ ತಮ್ಮ ಕೈ ನೀಗುವಿಕೆಯ ಹೊರಗಿದ್ದ ದೊಡ್ಡ ಮನೆಯ ಕನಸನ್ನು ದೂರವೇ ಇಟ್ಟಿದ್ದರು. ಆಗೀಗ ಕೈಕಾಲು ಮುರಿದುಕೊಂಡು ಬರುವ ಜನರಿಗೆ ಮನೆಯ ಔಷಧಿ ಮಾಡಿ ಪಟ್ಟಿ ಕಟ್ಟುತ್ತಾ, ಹಣಮಂದೇವರಿಗೆ ಪೂಜೆಗೆ ನಿಲ್ಲುವ, ಅದ್ಯಾವುದೂ ಇಲ್ಲದಿದ್ದಾಗ ಹೊಲಿಗೆ ಹೊಲೆದು ಕುಟುಂಬ ಹೊರೆಯುತ್ತಿದ್ದವರಿಗೆ, ಸಿಕ್ಕ ಪತ್ನಿ ರಮಾಬಾಯಿ ಅಷ್ಟೆ ಜೋರಾಗಿದ್ದುದು ಸಂಸಾರ ಸುರುಳಿತ ನಡೆಯುತ್ತಿತ್ತು.
ಅಚ್ಚು ಕಟ್ಟಾಗಿ ಕುಟುಂಬ ನಡೆಸುವ ರಮಾಬಾಯೋರಿಗೆ ಮಕ್ಕಳನ್ನು ಓದಿಸುವ ಮಹದಾಸೆ ಸಹಜವಾಗಿದ್ದುದು ಈಗ ಗೋಡೆ ಎದ್ದು ಕೂತಿದ್ದು ಕಷ್ಠಕ್ಕೇ ಈಡುಮಾಡಿತ್ತು. ಮನೆ ಅಗಲಕ್ಕೆ ಇದ್ದಿದ್ದೇ ಹತ್ತು ಅಡಿಗೂ ಕಮ್ಮಿ. ಈಗ ಗೌಡರು ಮನೆ ಕಟ್ಟಲು ಶುರು ಮಾಡಿದ್ದು, ಅಳೆತೆಗೆ ಟೇಪು ಹಿಡಿದಾಗ ತಮ್ಮ ಮನೆಯ ಭಾಗದಲ್ಲೂ ನಾಲ್ಕಡಿ ಹೋಗುವ ಬಗ್ಗೆ ಮಾತಾಡಿದ್ದರು. ತಕರಾರು ತೆಗೆದು ಆಚಾರ್ರು ಸಣ್ಣಗೆ ಗೊಣಗಿದಾಗ ಶಾನಭೋಗರು ಪತ್ರ ಹಿಡಿದು ಬಂದಿದ್ದರು.
"..ಆಚಾರ್ರ ಪತ್ರದ ಪ್ರಕಾರ ಎಡ ಮಗ್ಗಲಿಂದ ಎಣಿಸಿದರ ಗೌಡ್ರ ಮನಿದು ಅರವತ್ತಡಿ ಜಾಗ ಐತಿ. ಬರೋಬರಿ ಲೆಕ್ಕಕ್ಕ ಬಿದ್ರ ನಿಮ್ಮ ಮನಿದ ಅರ್ಧ ಭಾಗನ ಹೋಗತೈತಿ. ಆದ್ರೂ ಗೌಡರು ದೊಡ್ಡ ಮನಸ್ಸ ಮಾಡಿ ಗ್ವಾಡಿಗೆ ಎಷ್ಟ ಬೇಕೋ ಅಷ್ಟ ಸಾಕು ಅಂದಾರೆ. ಇನ್ನ ಆ ಕಡಿಗಿಂದ ಲೆಕ್ಕ ಹಾಕೋ ಹಂಗಿಲ್ಲ ನೋಡ್ರಿ. ಈ ಕಡೆಗಿ ರಸ್ತೆ ಐತಿ. ಅವರ ಮನಿ ಅಳತಿ ಅರವತ್ತಡಿ ಇರ್ಬೆಕಲ್ಲ. ನಿಮ್ಮದೂ ಮಾಸ್ತರದ್ದೂ ಎನಾರ ವ್ಯವಹಾರ ಇದ್ರ ಅದ ಬ್ಯಾರೆ.." ಎಂದಾಗ,
"...ಅಲ್ರಿ ಶಾನು ಭೋಗ್ರ. ಈಗ ಇರೋ ಜಾಗನ ಭಾಳ ಸಣ್ಣ. ಹೆಂಗಿದ್ರೂ ಗೌಡ್ರಿಗೆ ದೊಡ್ಡ ಜಾಗ ಐತಲ್ಲ. ಇದರಾಗ ಅರ್ಧ ತೊಗೊಂಡರ ನಮ್ಮದು ಮನಿ ಅನ್ನೋದು ಓಣಿ ಆಗಿ ಬಿಡ್ತದಲ್ಲ..." ಅಚಾರ್ರು ಗೊಣಗಿದಂತೆ, ವಿರೋಧ ವ್ಯಕ್ತ ಪಡಿಸಿದರು.
"..ಅಚಾರರ್ರ. ಹಿಂದ ದೊಡ್ಡವರು ಬ್ರಾಹ್ಮಣ ಮನಿಶ್ಯಾನ ಮನಿ ಅಂತಾ ಜಾಗ ಕೊಟ್ಟಿದ್ದ ಇಲ್ಲಿವರಗೂ ನಡೀತು. ನೀವು ಬ್ಯಾರೇ ಎನಾರ ಜಾಗ ಪಾಗ ಮಡ್ಕೊಂಡಿದ್ರ ಹಿಂಗಾಗತಿರಲಿಲ್ಲ. ಆ ಕಡಿಗೆ ಮಾಸ್ತರ ಮನಿ ಕಟ್ಟುವಾಗ ಸುಮನಿದ್ರಿ. ಈಗ ಹಿಂಗಂದ್ರ.." ಎನ್ನುತ್ತಿದ್ದಂತೆ ವಾದಿಸುವ ಅಭ್ಯಾಸ ಇರದ, ಜೋರು ಧ್ವನಿಯ ಮಾತಿಗೆ ತಕ್ಷಣಕ್ಕೆ ಪ್ರತಿಕ್ರಿಯಿಸಲಾರದ ಅಚಾರ್ರು ಬೆ.. ಬೆ.. ಎನ್ನತೊಡಗಿದರು.
"..ಅಚಾರ್ರ.. ಹೆಂಗಿದ್ರೂ ನೀವೇನೂ ಮನಿ ಕಟ್ಟೂದಿಲ್ಲ. ಈ ಕಡಿಗೆ ಒಂದಷ್ಟ ಜಾಗ ಅಂತ ಅವರದು ಬಿಟ್ಟ ಕೊಟ್ರ ನಿಮ್ಮನಿಗೂ ಗ್ವಾಡಿ ಆಗ್ತದಲ್ಲ. ಇನ್ನೆಷ್ಟ ದಿನಾ ಆ ತಟ್ಟಿ ಮನ್ಯಾಗೆ ಇರ್ತೀರಿ...?.."
"..ಮೊದಲ.. ಅದರ ಅಗಲ ಕಮ್ಮಿ ಅದ ಶಾನಭೋಗರ. ಈಗ ಇದರಾಗೂ ಗ್ವಾಡಿ ಹಾಕಿದರ ನಾವು ಮನ್ಯಾಗೆ ಅಡ್ಡಡ್ಡ ಮಲಗ ಬೇಕಾಗತ್ರಿ. ಮೂರ್ನಾಲ್ಕು ಮಕ್ಕಳೊಂದಿಗ ಏನಾರ ಮಾಡ್ರಿ.." ಎನ್ನುವಷ್ಟರಲ್ಲಿ ಅಳು ಬಂದಂತಾಗಿ, ಅದೂ ತೋರಿಸಲಾಗದೆ ಗಂಟಲು ಕೆರೆದಂತೆ ಮಾಡಿದರು. ಇದು ಹೀಗೆ ಬಿಟ್ಟಾರೆ ಅಚಾರ್ರು ಅಳುತ್ತಲೇ ಊರ ಜನರನ್ನು ಸೇರಿಸುತ್ತಾರೆ ಎಂದು ಗೌಡ್ರ ಮಗ ರಾಜಪ್ಪ,
"...ನೋಡ್ರಿ ಅಚಾರ್ರ. ನಾನೇನು ನಿಮ್ಮ ಮನಿ ಪೂರ್ತಿ ಗ್ವಾಡಿ ಹಾಕ್ತಿಲ್ಲ. ಹೆಂಗೂ ತಟ್ಟಿ ಹೋಗಿ ಛೋಲೊ ಗ್ವಾಡಿ ಆಗ್ತದ ಅಂತಾ. ನೀವಂತೂ ಮನಿ ಕಟ್ಟೂದಿಲ್ಲ. ಕಾಯ್ದ ಪ್ರಕಾರ ನಾಲ್ಕಡಿ ಜಾಗನ ಬಿಡ್ಬೇಕಾಗತದ. ಮುಂದಿನ ವಾರ ಎಲ್ಲಾ ಸಾಮಾನು ಆ ಕಡಿಗೆ ಇಟ್ಕೊಳ್ಳಾಕ ಸಜ್ಜ ಮಾಡರಿ. ಸೋಮವಾರ ಪೂಜಿ. ಅಮೇಲೆ ಗೌಡರು ಬ್ರಾಹ್ಮಣ ಮನಿಶ್ಯಾನ ರಸ್ತಾದಾಗ ಹಾಕಿದ್ರು ಅನಬ್ಯಾಡಾರೀ.. ಗ್ವಾಡಿ ಏಳೋದು ಪಕ್ಕ..." ಎಂದಾಗ ಮಾತು ಮುಗಿದಿತ್ತು. ಅಲ್ಲಿಗೆ ಅಚಾರ್ರ ಗೊಣಗುವಿಕೆ ನಿಂತುಹೋಗಿ ತಲೆ ಬಗ್ಗಿಸಿಕೊಂಡು ಮನೆಗೆ ಬಂದಿದ್ರು.
ಇತ್ತ ಮನೆಯಲ್ಲಿ ಮೊದಲನೆ ಮಕ್ಕಳಿಬ್ರೂ ಟೇಪು ಹಿಡೀದು ಎಲ್ಲಿವರೆಗೆ ಗೋಡೆ ಬರುತ್ತೆ, ಎಲ್ಲಿವರೆಗೆ ಜಾಗ ಹೋಗುತ್ತೆ. ತಾವಿಬ್ರೂ ಹೆಂಗೆ ಮಲಗ್ಬೇಕು, ಎರಡನೆಯ ಭಾಗದಲ್ಲಿ ಸಣ್ಣತಮ್ಮ ಮತ್ತು ಅಮ್ಮ ಮಲಗುತ್ತಾರೆ. ಅಲ್ಲಿ ಜಾಗ ಚಿಕ್ಕದಾದರೂ ತೊಂದರೆಯಾಗುವುದಿಲ್ಲ ಎಂದೆಲ್ಲಾ ಲೆಕ್ಕ ಹಾಕುತ್ತಿದ್ದರೆ ರಮಾಬಾಯೋರು ಮಾತ್ರ ಢಿಡೀರನೆ ಗೌಡರ ಮನಿಗೆ ನುಗ್ಗಿದ್ದರು.
"...ಅಲ್ರಿ ಗೌಡರ. ಕಾಗದದ ಪ್ರಕಾರ ಜಾಗನೇ ಇರಬಹುದು. ಮನುಷತ್ವಾನೂ ಬ್ಯಾಡೇನು. ನಿಮಗ ಹೆಂಗಿದ್ರೂ ಅಷ್ಟ ದೊಡ್ಡ ಜಾಗದಾಗೇ ಒಂದ ಫೂಟ್ ಕಮ್ಮಿ ಆದ್ರೂ ಫರಕ್ ಬೀಳೊದಿಲ್ಲ. ನಾವ್ ಅಡ್ಡಡ್ಡ ಮಲಕೋಬೇಕಾಗ್ತದ. ಆಚಾರ್ರು ಮಾತಾಡಂಗಿಲ್ಲ, ನಿಮ್ಮಂಗ ಒದರಾಡಿ ಜಗಳಕ್ಕ ನಿಲ್ಲೂ ಪೈಕಿ ಅಲ್ಲಂತ ಹಿಂಗ ಮಾಡೂದ.. ಯಾಕ ಹಿಂಗ ಮಾಡ್ತೀರಿ.." ಎಂದು ಕೈಬಾಯಿ ಜಾಡಿಸುತ್ತ ಕೂಗತೊಡಗಿದರು.
"...ಅಲ್ರಿ ಬಾಯೋರ. ಆವಾಗ ಮಗ್ಗಲದಾಗೆ ಮಾಸ್ತರ ಮನಿ ಕಟ್ಟುವಾಗ ಜಾಗ ಕೊಟ್ಟಿಲ್ಲೇನು. ಈಗ ಹಿಂಗಂದ್ರ ಎನ ಮಾಡೊದು..?ಮನಿ ಮುಂದ ಬಂದ ಗೌಜಿ ಮಾಡಬ್ಯಾಡರಿ. ಹಿಂಗ ಮಾಡ್ತೀರಿ ಅಂತಾದರ ನಾಳೆ ಪೆÇೀಲಿಸ್ ನಿಲ್ಲಿಸ್ಕೊಂಡು ಗ್ವಾಡಿ ಕಟ್ಟಬೇಕಾದೀತು.." ಎನ್ನುತ್ತ ಗೌಡರ ಮಗ ಅವಾಜು ಹಾಕುತ್ತಿದ್ದರೆ, ಓಣಿ ಜನವೆಲ್ಲ ನಿಂತು ತಮಾಷೆಯ ಜೊತೆಗೆ, ಅವರನ್ನು ಎಳೆಯುತ್ತ,
"..ಸುಮ್ನಿರ. ಅವರದ ಜಾಗ ಅಂದ ಮ್ಯಾಲ ಏನಾರ ಆಗ್ಲಿ ಬಿಡು.."ಎನ್ನುವ ಅಚಾರ್ರರನ್ನು ಕಣ್ಣಲ್ಲೇ ಅವಮಾನಕ್ಕೀಡು ಮಾಡುತ್ತಿದ್ದರು. ಇರುವ ಅಗಲದಲ್ಲಿ ಒಂದು ಮಂಚನೂ ಸರಿಯಾಗಿ ಇಟ್ಟುಕೊಳ್ಳಲಾಗದ ಅವಸ್ಥೆಗೆ ಬೇರೆ ಜಾಗದಲ್ಲಿ ಕಟ್ಕೊಳ್ಳೊ ಯೋಚನೆ ಬಂದಿಲ್ಲಂತಲ್ಲ. ಬೆಳಿಗೆದ್ದು ಗುಡಿಗೆ ಹೋಗ್ಲಿಕ್ಕೆ, ಮಕ್ಕಳ ಶಾಲಿಗೆ, ದಿನಸಿ ಅಂಗಡಿಗೆ, ಪಂಚಾಯ್ತಿ ನಳಕ್ಕೆ ಹತ್ತು ಹಲವು ಕಾರಣಕ್ಕೆ ಊರ ಮಧ್ಯೆದ ಜಾಗವನ್ನು ಬಿಟ್ಟು ಹೋಗೋದಾದರೂ ಎಲ್ಲಿಗೆ..? ಅದೂ ತಲಾಂತರದಿಂದ ಅಲ್ಲೇ ಬೆಳೆದ್ದಿದ್ದು ಬೇರೆ.
ಹಿಂದೆ ಮಾಸ್ತರು ಕಟ್ಟುವಾಗ ತಮ್ಮ ಜಾಗದಲ್ಲಿ ಅರ್ಧ ಅಡಿ ಕೇಳಿ ತೊಗೊಂಡಿದ್ದು ಹೌದು. ಕಾರಣ ಆ ಕಡೆಗೂ ತಟ್ಟೀದೆ ಗ್ಯಾಡಿ ಇದ್ದ ಮನೆಗೆ ಭದ್ರತೆ ಜೊತೆಗೆ ತಾವು ಬೇರೆ ಕಟ್ಟಬೇಕಿಲ್ಲ ಎನ್ನುವ ಅರ್ಥಿಕ ಲೆಕ್ಕಾಚಾರ ಉತ್ತಮವಾಗೇ ಕಂಡಿತ್ತು. ಇನ್ನು ಗೌಡರ ಆಸ್ತಿಯ ಅಳತೆಯ ಲೆಕ್ಕಾಚಾರವೂ ಗೊತ್ತಿರಲಿಲ್ಲ. ಹೋಗಲಿ ಆ ಕಡಿಗೇ ಸರೀರಿ ಗೌಡ್ರೆ ಅನ್ನೊಣ ಎಂದರೆ ಅತ್ತ ಪಂಚಾಯ್ತಿ ರಸ್ತೆ ಬಂದಿದ್ದು ಸರಿಯುವ ಮಾತೇ ಇಲ್ಲ. ಹಾಗಂತ ಒಂದು ಅಡಿ ಕೊಟ್ಟರೂ ಆಗುವ ಅನಾಹುತ ಕಮ್ಮಿ ಏನಲ್ಲ ಮನೆಯ ಬದಲಿಗೆ ಓಣಿಯಲ್ಲಿ ವಾಸಿಸಿದಂತಾಗುತ್ತದೆ.
ತಮ್ಮ ಮನೆ ಕಾಗದ ಪತ್ರದಲ್ಲಿ ಎಡಗಡೆಯಿಂದಾನೋ ಬಲಗಡೆಯಿಂದ ಎನ್ನುವ ಲೆಕ್ಕಾಚಾರವೇ ಬರೆದಿಲ್ಲ. ಚಕ್ಕುಬಂದಿ ಇದೆಯಾದರೂ ಹತ್ತಡಿ ಅಗಲ ಎಂದಿದೆ. ಯಾವ ಕಡೆಯಿಂದ ಹತ್ತಡಿ..? ಎರಡೆರಡು ಬಾರಿ ತಮ್ಮ ಪಹಣಿ, ಉತಾರ ಕಾಗದ ನೋಡಿದರು ಆಚಾರ್ರು. ಊರಿನ ವಕೀಲರ ಮುಂದಿಟ್ಟರು.
"...ಹೌದ್ರಿ ಅಚಾರ್ರ. ನಿಮ್ಮದು ಹತ್ತಡಿ ಇರ್ಬೆಕು. ಆದರೆ ಗೌಡರು ರಸ್ತೆ ಕಡೆಯಿಂದ ಲೆಕ್ಕ ಹಾಕಿ ಅಷ್ಟ ಕೊಡ್ರಿ ಅಂದರ ಕಷ್ಟ. ನಿಮ್ಮ ಕಡಿಗೆ ಗೋಡೆನೆ ಇಲ್ಲ. ಅದರೂ ಮನೀ ಪರಿಸ್ಥಿತಿ ತಿಳಿಸಿ ಕೋರ್ಟಿಗೆ ಹೋಗಿ ಒಂದ ಸ್ಟೇ ತರೋಣು. ಆದರೆ ಸಾವಿರಗಟ್ಟಲೆ ಖರ್ಚದ ನೋಡ್ರಿ.."ಎನ್ನುತ್ತಿದ್ದರೆ ಸುಮ್ಮನೆ ಜೋಲು ಮೋರೆ ಹೊತ್ತು ಈಚೆ ಬಂದರು.
ಮ್ಯಾಲಿನ ಓಣಿ ಕುಲ್ಕರ್ಣಿಗೆ ಔಷಧಿ ಕೊಟ್ಟು, ಹದಿನೈದು ದಿನದ ಹಿಂದಿನ ಪಟ್ಟಿ ಬಿಚ್ಚಿ ಅಲ್ಲೇ ಮೊಸರವಲಕ್ಕಿ ತಿಂದಾಗುವ ಹೊತ್ತಿಗೆ ಮಧ್ಯಾನ್ಹ ಕಳೆಯತೊಡಗಿತ್ತು. ಅಷ್ಟರಲಾಗಲೇ ಅಚಾರ್ರು ಕೋರ್ಟಿಗೆ ಹೋಗತಾರಂತೆ ಎಂದು ಸುದ್ದಿಬಿದ್ದು, ದಾರಿ ಮ್ಯಾಲೆ ಸಿಕ್ಕ ಗೌಡರ ಮಗ,
"..ಅಚಾರ್ರ. ಏನೋ ಕೋರ್ಟಿಗೆ ಹೋಗ್ತೀರಂತೆ. ಆಯ್ತು ಇರೋ ಜಾಗದಾಗ ಮಲಗಲಿಕ್ಕಾದರೂ ಆಗ್ತಿತ್ತು. ಇನ್ನು ಕುಂಡ್ರುದೇ ಸೈ. ನಾಳಿಗ್ ತಯರಾಗ್ರಿ. ನಾನೇ ನೋಟಿಸ್ ಕಳಿಸ್ತೇನಿ..."ಎನ್ನುತ್ತ ಹೂಂಕರಿಸಿದ.
"..ಇಲ್ಲಪಾ ಕೋರ್ಟು ಗೀರ್ಟು ಅಂದಿಲ್ಲ. ಸುಮ್ಮನ ವೆಂಕಣ್ಣಗೊಮ್ಮೆ ವಿಚಾರಿಸಿದೆ.." ಎಂದರಾದರೂ ಪರಿಸ್ಥಿತಿ ಬಿರುಸಾಗಿದ್ದು ಅಚಾರ್ರು ಬೆವರುವಂತಾಯಿತು. ಆವತ್ತಿಡೀ ಕಣ್ಣ ಮುಂದೆ ಕಪ್ಪು ಕೋಟಿನ ಲಾಯರುಗಳು, ಅವರಿಗಿಂತ ದೊಡ್ಡ ಕೋಟಿನ ಜಡ್ಜಿ ಸಾಹೇಬ್ವರು.. ಎನೇನೋ ಪ್ರಶ್ನೆ ಕೇಳಿದಂತೆಯೂ, ಅವರ ಹಿಂದೆ ಬಂದ ಪೆÇೀಲಿಸರು ಇವರ ಮನೆಯ ಪಾತ್ರೆ ಪಗಡೆ ಎಲ್ಲಾ ಹೊರಗೆ ಹಾಕಿದಂತೆಯೂ, ಕೊನೆಗೆ ಗೌಡರು ಜಡ್ಜಿಗಳೂ ...ಈಗ ಹೆಂಗೆ..? ಎನ್ನುತ್ತಿರುವಂತೆ ಕನಸಿಸಿ ಬೆವರಿ ಧಪ್ಪನೆ ಎದ್ದು ಕೂತರು.
ರಮಾಬಾಯೋರು ಎದ್ದು ಕೂತು, ನೀರು ಕುಡಿಸಿ,
"...ಅಯ್ಯೋ ಅರ್ಧ ಮನಿ ಹೋದರ ಹೋಗಲಿ. ಜೀವಕ್ಕ ಸಂಚಕಾರ ತಂದುಕೋಬ್ಯಾಡ್ರಿ.." ಎನ್ನುತ್ತಾ ಮಲಗಿಸಿದರು. ಬೆಳಿಗ್ಗೆ ಯಾವಾಗ ಆಯಿತೋ. ಇನ್ನು ನಸುಗತ್ತಲಿರುವಾಗಲೇ ಬಾಗಿಲು ಬಡಿದದ್ದು ಕೇಳಿ ಮನೆ ಮಂದಿ ಎಲ್ಲ ಎದ್ದು ಕೂತರು. ಬಾಗಿಲು ತೆರೆದರೆ ಯಾರನ್ನೊ ಹೊತ್ತು ತಂದಿದಾರೆ. ಮೈ ಮೇಲೆಲ್ಲಾ ಧೂಳು. ಕಾಲು ಮುರಿದು ಮೂಳೆ ಈಚೆಗೆ ಬಂದಿತ್ತು. ಎಲ್ಲಾ ಮರೆತ ಅಚಾರ್ರು ಕೂಡಲೇ ಆರೈಕೆ ಮಾಡಿ ಕಾಲು ಕಟ್ಟಿದರು. ಬಟ್ಟೆ ಬಿಗಿದು ಕಾಲು ನೆರ್ಪುಗೊಳಿಸಿದರು. ಅಲ್ಲಿವರೆಗೂ ಒದ್ದಾಡುತ್ತಿದ್ದವ ಎದ್ದು ಕೂಡುವಂತಾದ. ಬಾಯಿಗೆ ಔಷಧಿ ಹಾಕಲು,
"...ಮುಖ ತೊಳಸ್ರಿ. ಬಿದ್ದ ಹೊಡತಕ್ಕ ಮೈಯೆಲ್ಲ ಮಣ್ಣಾಗೆದ..."ಎಂದರು. ಟವಲ ನೆನೆಸಿ ಮುಖ ತೊಳೆಸಿ ನೋಡಿದರೆ ಗೌಡರ ಮಗ. ಬೆಳಿಗೆದ್ದು ಭಟ್ಟಿ ಕಡೆ ಹೋದವನ ಮೇಲೆ ಇಟ್ಟಂಗಿ ಕುಸಿದು ಕೈಕಾಲು ಮುರ್ಕೊಂಡು ಬಂದಿದಾನೆ. ಆಚಾರ್ರು ಮಾತಾಡದೆ ಬಾಯಿಗೆ ಹಸಿರು ದ್ರವ ಸುರಿದು,
"...ಮೂರ ದಿನ ಪಥ್ಯಾ ಮಾಡಪಾ. ಹೆದರಬ್ಯಾಡ ಕಾಲು ಚಿಗರತದ. ಅಮ್ಯಾಲೆ ಬಂದು ಪಟ್ಟಿ ಕಟ್ಟತೀನಿ. ಹುಶಾರಾಗಿ ಹೋಗ್ಲಿಕ್ಕ ಆಗೂದಿಲ್ಲೇನು. ಅಷ್ಟ ಬೆಳಿಗ್ಗೆನೆ ಯಾಕ ಹೋದಿ..? ನಿಮ್ಮ ಇಟ್ಟಂಗಿ ಯಾರರೇ ಕದಿತಾರೇನು ದಡ್ಡ ಮುಂಡೆಗಂಡ. ನಿಮ್ಮಪ್ಪನಂಗೆ ನೀನು ಧಡಾಪಡಿ ನೋಡು..." ಎನ್ನುತ್ತಾ ಮೈದಡುವಿ ಏಳಲಿಕ್ಕೆ ಹೋದರು. ಕಾಲು ಸಹಕರಿಸಲಿಲ್ಲ. ಕೈ ಹೂಡಿದ್ದ ಗೌಡರ ಮಗ,
"...ಆಚಾರ್ರ.. ಹನ್ನೆರಡ ಫೂಟ್ ಆದ್ರ ನಿಮ್ಮ ಮಂಚ ಹಾಕ್ಲಿಕ್ಕೆ ಸಾಕೇನು.." ಎನ್ನುತ್ತಿದ್ದರೆ...
ಗೋಡೆ ಕುಸಿದು ಬಿದ್ದಿತ್ತು.

No comments:

Post a Comment